PHPWord

 

 

حِرَاسَةُ التَّوحِيدِ

 

ಊರ್ವದ ರಕ್ಷಣಾ

 

 

 

 

 

 

 

لِسَمَاحَةِ الشَّيْخِ العَلَّامَةِ

عَبْدِ العَزِيزِ بْنِ عَبْدِ اللهِ بْنِ بَازٍ

رَحِمَهُ اللهُ

 

ಲೇಖಕರು: ಗೌರವಾನ್ವಿತ ಶೈಖ್

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್

 

 


بِسْمِ اللهِ الرَّحمَنِ الرَّحِيمِ

ಮೊದಲನೆಯ ಸಂದೇಶ

ಸರಿಯಾದ ವಿಶ್ವಾಸ (ಅಕೀದ) ಮತ್ತು ಅದಕ್ಕೆ ವಿರುದ್ಧವಾದದ್ದು

ಅಲ್ಲಾಹನೊಬ್ಬನಿಗೇ ಸರ್ವಸ್ತುತಿಗಳು. ಯಾರ ನಂತರ ಬೇರೆ ಯಾವುದೇ ಪ್ರವಾದಿ ಇಲ್ಲವೋ ಅವರ (ಪ್ರವಾದಿ ಮುಹಮ್ಮದ್) ಮೇಲೆ, ಅವರ ಕುಟುಂಬ ಮತ್ತು ಸಹಚರರ ಮೇಲೆ ಶಾಂತಿ ಹಾಗೂ ಶುಭಾಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಸರಿಯಾದ ವಿಶ್ವಾಸವು (ಅಕೀದ) ಇಸ್ಲಾಂ ಧರ್ಮದ ಮೂಲ ಹಾಗೂ ಅದರ ಅಡಿಪಾಯವಾಗಿರುವುದರಿಂದ, ಈ ವಿಷಯದ ಬಗ್ಗೆ ಮಾತನಾಡುವುದು, ಅದರ ವಿವರಣೆ ಮತ್ತು ಸ್ಪಷ್ಟನೆಯ ಬಗ್ಗೆ ಬರೆಯುವುದು ಮತ್ತು (ಕೃತಿಗಳನ್ನು) ರಚಿಸುವುದು ಬಹಳ ಮುಖ್ಯವೆಂದು ನನಗೆ ಅನಿಸಿದೆ.

ಕುರ್‌ಆನ್ ಮತ್ತು ಸುನ್ನತ್ತಿನಿಂದ ಪಡೆದ ಧಾರ್ಮಿಕ ಪುರಾವೆಗಳಿಂದ ತಿಳಿದುಬರುವ ವಿಷಯವೇನೆಂದರೆ, ಕರ್ಮಗಳು ಮತ್ತು ಮಾತುಗಳು ಸರಿಯಾದ ವಿಶ್ವಾಸದಿಂದ (ಅಕೀದದಿಂದ) ಹೊರಹೊಮ್ಮಿದರೆ ಮಾತ್ರ ಅವು ಸಿಂಧುವಾಗುತ್ತವೆ ಮತ್ತು ಸ್ವೀಕರಿಸಲ್ಪಡುತ್ತವೆ. ಒಂದು ವೇಳೆ ವಿಶ್ವಾಸವು (ಅಕೀದ) ಸರಿಯಾಗಿಲ್ಲದಿದ್ದರೆ, ಅದರಿಂದ ಉಂಟಾಗುವ ಕರ್ಮಗಳು ಮತ್ತು ಮಾತುಗಳು ಅಸಿಂಧುವಾಗುತ್ತವೆ. ಅಲ್ಲಾಹು ಹೇಳುತ್ತಾನೆ:

﴿...وَمَن يَكۡفُرۡ بِٱلۡإِيمَٰنِ فَقَدۡ حَبِطَ عَمَلُهُۥ وَهُوَ فِي ٱلۡأٓخِرَةِ مِنَ ٱلۡخَٰسِرِينَ﴾

“ಯಾರು ಸತ್ಯವಿಶ್ವಾಸವನ್ನು (ಈಮಾನ್) ನಿಷೇಧಿಸುತ್ತಾರೋ ಅವರ ಕರ್ಮಗಳು ವ್ಯರ್ಥವಾಗುತ್ತವೆ, ಮತ್ತು ಅವರು ಪರಲೋಕದಲ್ಲಿ ನಷ್ಟ ಅನುಭವಿಸುವವರಲ್ಲಿ ಸೇರುತ್ತಾರೆ.” [ಅಲ್-ಮಾಇದ: 5]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَلَقَدۡ أُوحِيَ إِلَيۡكَ وَإِلَى ٱلَّذِينَ مِن قَبۡلِكَ لَئِنۡ أَشۡرَكۡتَ لَيَحۡبَطَنَّ عَمَلُكَ وَلَتَكُونَنَّ مِنَ ٱلۡخَٰسِرِينَ 65﴾

“ಮತ್ತು (ಓ ಪ್ರವಾದಿಯವರೇ,) ನಿಮ್ಮೆಡೆಗೆ ಮತ್ತು ನಿಮಗಿಂತ ಹಿಂದಿನವರ (ಪ್ರವಾದಿಗಳ) ಕಡೆಗೆ ಈಗಾಗಲೇ ವಹೀ (ದೇವವಾಣಿ) ಕಳುಹಿಸಲಾಗಿರುವುದು ಏನೆಂದರೆ, ‘ನೀವು ಒಂದು ವೇಳೆ ಶಿರ್ಕ್ ಮಾಡಿದರೆ, ನಿಮ್ಮ ಕರ್ಮಗಳು ಖಂಡಿತವಾಗಿಯೂ ವ್ಯರ್ಥವಾಗುತ್ತವೆ ಮತ್ತು ನೀವು ನಷ್ಟ ಅನುಭವಿಸುವವರಲ್ಲಿ ಸೇರುವಿರಿ. [ಅಝ್ಝುಮರ್: 65]

ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ. ಅಲ್ಲಾಹನ ಸುಸ್ಪಷ್ಟ ಗ್ರಂಥ (ಕುರ್‌ಆನ್) ಮತ್ತು ಅವನ ಸಂದೇಶವಾಹಕರ (ಸ) ಸುನ್ನತ್ ಸೂಚಿಸಿರುವಂತೆ, ಸರಿಯಾದ ವಿಶ್ವಾಸವು ಆರು ವಿಷಯಗಳಲ್ಲಿ ಅಡಕವಾಗಿದೆ. ಅವು ಯಾವುವೆಂದರೆ: ಅಲ್ಲಾಹನಲ್ಲಿ ವಿಶ್ವಾಸವಿಡುವುದು, ಅವನ ದೇವದೂತರುಗಳಲ್ಲಿ ವಿಶ್ವಾಸವಿಡುವುದು, ಅವನ ಗ್ರಂಥಗಳಲ್ಲಿ ವಿಶ್ವಾಸವಿಡುವುದು, ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು, ಅಂತ್ಯದಿನದಲ್ಲಿ ವಿಶ್ವಾಸವಿಡುವುದು, ಮತ್ತು ವಿಧಿಯ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿಡುವುದು. ಈ ಆರು ವಿಷಯಗಳು ಸರಿಯಾದ ವಿಶ್ವಾಸದ ಮೂಲತತ್ವಗಳಾಗಿದ್ದು, ಇವುಗಳೊಂದಿಗೆ ಅಲ್ಲಾಹು ತನ್ನ ಪವಿತ್ರ ಗ್ರಂಥವನ್ನು ಅವತೀರ್ಣಗೊಳಿಸಿದನು ಮತ್ತು ಇವುಗಳೊಂದಿಗೆ ಅಲ್ಲಾಹು ತನ್ನ ಸಂದೇಶವಾಹಕರಾದ ಮುಹಮ್ಮದ್ (ಸ) ರನ್ನು ಕಳುಹಿಸಿದನು.

ಈ ಆರು ಮೂಲತತ್ವಗಳ ಬಗ್ಗೆ ಪವಿತ್ರ ಕುರ್‌ಆನ್ ಮತ್ತು ಸಹೀಹ್ (ದೃಢೀಕೃತ) ಸುನ್ನತ್‌ನಲ್ಲಿ ಹಲವಾರು ಪುರಾವೆಗಳು ಬಂದಿವೆ. ಉದಾಹರಣೆಗೆ ಈ ಕೆಳಗಿನ ಪುರಾವೆಗಳು:

ಮೊದಲನೆಯದಾಗಿ: ಕುರ್‌ಆನ್‌ನಲ್ಲಿ ಬಂದ ಪುರಾವೆಗಳು; ಅವುಗಳಲ್ಲಿ ಕೆಲವು ಹೀಗಿವೆ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿لَّيۡسَ ٱلۡبِرَّ أَن تُوَلُّواْ وُجُوهَكُمۡ قِبَلَ ٱلۡمَشۡرِقِ وَٱلۡمَغۡرِبِ وَلَٰكِنَّ ٱلۡبِرَّ مَنۡ ءَامَنَ بِٱللَّهِ وَٱلۡيَوۡمِ ٱلۡأٓخِرِ وَٱلۡمَلَٰٓئِكَةِ وَٱلۡكِتَٰبِ وَٱلنَّبِيِّـۧنَ...﴾

“ನೀವು ನಿಮ್ಮ ಮುಖಗಳನ್ನು ಪೂರ್ವಕ್ಕಾಗಲೀ ಪಶ್ಚಿಮಕ್ಕಾಗಲೀ ತಿರುಗಿಸುವುದರಲ್ಲಿ ಯಾವುದೇ ಪುಣ್ಯವಿಲ್ಲ. ಆದರೆ ಪುಣ್ಯವಂತರು ಯಾರೆಂದರೆ, ಅಲ್ಲಾಹನಲ್ಲಿ, ಅಂತ್ಯದಿನದಲ್ಲಿ, ದೇವದೂತರುಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಟ್ಟವರು.”

[ಅಲ್-ಬಕರ: 177].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿ءَامَنَ ٱلرَّسُولُ بِمَآ أُنزِلَ إِلَيۡهِ مِن رَّبِّهِۦ وَٱلۡمُؤۡمِنُونَۚ كُلٌّ ءَامَنَ بِٱللَّهِ وَمَلَٰٓئِكَتِهِۦ وَكُتُبِهِۦ وَرُسُلِهِۦ لَا نُفَرِّقُ بَيۡنَ أَحَدٖ مِّن رُّسُلِهِ...﴾

“ಸಂದೇಶವಾಹಕರು ತಮ್ಮ ಪರಿಪಾಲಕನಿಂದ ತಮಗೆ ಅವತೀರ್ಣವಾದುದರಲ್ಲಿ ವಿಶ್ವಾಸವಿಟ್ಟಿದ್ದಾರೆ ಮತ್ತು ಸತ್ಯವಿಶ್ವಾಸಿಗಳೂ ಸಹ (ವಿಶ್ವಾಸವಿಟ್ಟಿದ್ದಾರೆ). ಅವರೆಲ್ಲರೂ ಅಲ್ಲಾಹನಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ನಾವು ಅವನ ಸಂದೇಶವಾಹಕರುಗಳಲ್ಲಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ (ಎಂದು ಅವರು ಹೇಳುತ್ತಾರೆ).” [ಅಲ್-ಬಕರ: 285].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلَّذِينَ ءَامَنُوٓاْ ءَامِنُواْ بِٱللَّهِ وَرَسُولِهِۦ وَٱلۡكِتَٰبِ ٱلَّذِي نَزَّلَ عَلَىٰ رَسُولِهِۦ وَٱلۡكِتَٰبِ ٱلَّذِيٓ أَنزَلَ مِن قَبۡلُۚ وَمَن يَكۡفُرۡ بِٱللَّهِ وَمَلَٰٓئِكَتِهِۦ وَكُتُبِهِۦ وَرُسُلِهِۦ وَٱلۡيَوۡمِ ٱلۡأٓخِرِ فَقَدۡ ضَلَّ ضَلَٰلَۢا بَعِيدًا 136﴾

“ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ, ಅವನ ಸಂದೇಶವಾಹಕರ ಮೇಲೆ ಅವನು ಅವತೀರ್ಣಗೊಳಿಸಿದ ಗ್ರಂಥದಲ್ಲಿ ಮತ್ತು ಅವನು ಹಿಂದೆ (ಇತರ ಪ್ರವಾದಿಗಳಿಗೆ) ಅವತೀರ್ಣಗೊಳಿಸಿದ ಗ್ರಂಥದಲ್ಲಿ ವಿಶ್ವಾಸವಿಡಿ. ಮತ್ತು ಯಾರು ಅಲ್ಲಾಹನನ್ನು, ಅವನ ದೇವದೂತರುಗಳನ್ನು, ಅವನ ಗ್ರಂಥಗಳನ್ನು, ಅವನ ಸಂದೇಶವಾಹಕರುಗಳನ್ನು ಮತ್ತು ಅಂತ್ಯದಿನವನ್ನು ನಿಷೇಧಿಸುತ್ತಾರೋ, ಅವರು ಖಂಡಿತವಾಗಿಯೂ ಬಹಳ ದೂರದ ದುರ್ಮಾರ್ಗದಲ್ಲಿ ದಾರಿತಪ್ಪಿದ್ದಾರೆ.” [ಅನ್ನಿಸಾ: 136].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿أَلَمۡ تَعۡلَمۡ أَنَّ ٱللَّهَ يَعۡلَمُ مَا فِي ٱلسَّمَآءِ وَٱلۡأَرۡضِۚ إِنَّ ذَٰلِكَ فِي كِتَٰبٍۚ إِنَّ ذَٰلِكَ عَلَى ٱللَّهِ يَسِيرٞ 70﴾

“ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದನ್ನೆಲ್ಲಾ ಅಲ್ಲಾಹನು ತಿಳಿದಿದ್ದಾನೆಂದು ನಿಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದು ಒಂದು ಗ್ರಂಥದಲ್ಲಿದೆ. ಖಂಡಿತವಾಗಿಯೂ ಅದು ಅಲ್ಲಾಹನಿಗೆ ಸುಲಭವಾಗಿದೆ.” [ಅಲ್-ಹಜ್ಜ್: 70].

ಎರಡನೆಯದಾಗಿ: ಸುನ್ನತ್‌ನಲ್ಲಿ ಬಂದ ಪುರಾವೆಗಳು; ಅವುಗಳಲ್ಲಿ ಕೆಲವು ಹೀಗಿವೆ: ಇಮಾಮ್ ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ಅಮೀರುಲ್ ಮುಅ್‌ಮಿನೀನ್ ಉಮರ್ ಬಿನ್ ಖತ್ತಾಬ್ (ರ) ರಿಂದ ವರದಿ ಮಾಡಿದ ಪ್ರಸಿದ್ಧ ಸಹೀಹ್ ಹದೀಸ್‌ನಲ್ಲಿರುವಂತೆ ಜಿಬ್ರೀಲ್ (ಅ) ರವರು ಪ್ರವಾದಿ (ಸ) ರಲ್ಲಿ ಈಮಾನ್ (ಸತ್ಯವಿಶ್ವಾಸ) ಬಗ್ಗೆ ಕೇಳಿದರು. ಆಗ ಅವರು ಉತ್ತರಿಸಿದರು:

«الإِيمَانُ أَنْ تُؤْمِنَ بِاللَّهِ، وَمَلَائِكَتِهِ، وَكُتُبِهِ، وَرُسُلِهِ، وَاليَوْمِ الآخِرِ، وَتُؤْمِنَ بِالقَدَرِ خَيْرِهِ وَشَرِّهِ».

“ಈಮಾನ್ ಎಂದರೆ ನೀವು ಅಲ್ಲಾಹನಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ವಿಶ್ವಾಸವಿಡುವುದು ಮತ್ತು ವಿಧಿಯ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿಡುವುದು.”1 ಹದೀಸ್, ಇದನ್ನು ಬುಖಾರಿ ಮತ್ತು ಮುಸ್ಲಿಂ ರವರು ಅಬೂ ಹುರೈರಾ (ರ) ರಿಂದ ಸ್ವಲ್ಪ ವ್ಯತ್ಯಾಸದೊಂದಿಗೆ ವರದಿ ಮಾಡಿದ್ದಾರೆ.

ಮುಸಲ್ಮಾನನು ಅಲ್ಲಾಹನಿಗೆ ಸಂಬಂಧಿಸಿದ ವಿಷಯಗಳಲ್ಲಿ, ಪರಲೋಕದ ವಿಷಯದಲ್ಲಿ ಮತ್ತು ಅಲ್ಲಾಹನು ಮತ್ತು ಅವನ ಸಂದೇಶವಾಹಕರು (ಸ) ತಿಳಿಸಿದ ಇತರೆ ಅದೃಶ್ಯ ವಿಷಯಗಳಲ್ಲಿ ನಂಬಬೇಕಾದ ಮತ್ತು ವಿಶ್ವಾಸವಿಡಬೇಕಾದ ಎಲ್ಲವೂ ಈ ಆರು ಮೂಲತತ್ವಗಳಿಂದ ಕವಲೊಡೆಯುತ್ತವೆ.

ಈ ಆರು ಮೂಲತತ್ವಗಳ ವಿವರಣೆ ಈ ಕೆಳಗಿನಂತಿದೆ:

ಮೊದಲನೆಯ ಮೂಲತತ್ವ: ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುವುದು

ಇದು ಹಲವಾರು ವಿಷಯಗಳನ್ನು ಒಳಗೊಂಡಿದೆ, ಅವುಗಳಲ್ಲಿ ಕೆಲವು ಹೀಗಿವೆ: ಅವನೊಬ್ಬನೇ ಸತ್ಯ ದೇವನು ಮತ್ತು ಇತರ ಎಲ್ಲರ ಹೊರತಾಗಿ ಅವನು ಮಾತ್ರ ಆರಾಧನೆಗೆ ಅರ್ಹನು ಎಂದು ವಿಶ್ವಾಸವಿಡುವುದು. ಏಕೆಂದರೆ ಅವನು ಮನುಷ್ಯರ ಸೃಷ್ಟಿಕರ್ತನು, ಅವರಿಗೆ ಉಪಕಾರ ಮಾಡುವವನು, ಅವರ ಪಾಲನೆ-ಪೋಷಣೆಯನ್ನು ನಿರ್ವಹಿಸುವವನು, ಅವರ ರಹಸ್ಯ ಮತ್ತು ಬಹಿರಂಗವನ್ನು ತಿಳಿದಿರುವವನು, ಮತ್ತು ಅವರಲ್ಲಿ ವಿಧೇಯರಾದವರಿಗೆ ಪ್ರತಿಫಲ ನೀಡಲು ಹಾಗೂ ಅವಿಧೇಯರಾದವರನ್ನು ಶಿಕ್ಷಿಸಲು ಶಕ್ತನಾಗಿರುವವನು ಆಗಿದ್ದಾನೆ.

ಈ ಆರಾಧನೆಗಾಗಿಯೇ ಅಲ್ಲಾಹು ಜಿನ್ನ್ ಮತ್ತು ಮಾನವರನ್ನು ಸೃಷ್ಟಿಸಿದನು ಮತ್ತು ಅದನ್ನೇ ಅವರಿಗೆ ಆಜ್ಞಾಪಿಸಿದನು. ಅಲ್ಲಾಹು ಹೇಳುತ್ತಾನೆ:

﴿وَمَا خَلَقۡتُ ٱلۡجِنَّ وَٱلۡإِنسَ إِلَّا لِيَعۡبُدُونِ 56 مَآ أُرِيدُ مِنۡهُم مِّن رِّزۡقٖ وَمَآ أُرِيدُ أَن يُطۡعِمُونِ 57 إِنَّ ٱللَّهَ هُوَ ٱلرَّزَّاقُ ذُو ٱلۡقُوَّةِ ٱلۡمَتِينُ 58﴾

“ಮತ್ತು ನಾನು ಜಿನ್ನ್‌ಗಳನ್ನೂ ಮಾನವರನ್ನೂ ನನ್ನನ್ನು ಆರಾಧಿಸುವುದಕ್ಕಲ್ಲದೆ ಸೃಷ್ಟಿಸಿಲ್ಲ.

ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಆಹಾರ ನೀಡಬೇಕೆಂದೂ ನಾನು ಬಯಸುವುದಿಲ್ಲ.

ನಿಶ್ಚಯವಾಗಿಯೂ ಅಲ್ಲಾಹನೇ ಆಹಾರ ನೀಡುವವನು, ಮಹಾಶಕ್ತಿವಂತನು, ಬಲಿಷ್ಠನು.” [ಅದ್ದಾರಿಯಾತ್: 56-58].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلنَّاسُ ٱعۡبُدُواْ رَبَّكُمُ ٱلَّذِي خَلَقَكُمۡ وَٱلَّذِينَ مِن قَبۡلِكُمۡ لَعَلَّكُمۡ تَتَّقُونَ 21 ٱلَّذِي جَعَلَ لَكُمُ ٱلۡأَرۡضَ فِرَٰشٗا وَٱلسَّمَآءَ بِنَآءٗ وَأَنزَلَ مِنَ ٱلسَّمَآءِ مَآءٗ فَأَخۡرَجَ بِهِۦ مِنَ ٱلثَّمَرَٰتِ رِزۡقٗا لَّكُمۡۖ فَلَا تَجۡعَلُواْ لِلَّهِ أَندَادٗا وَأَنتُمۡ تَعۡلَمُونَ 22﴾

“ಓ ಮಾನವರೇ, ನಿಮ್ಮನ್ನು ಮತ್ತು ನಿಮಗಿಂತ ಹಿಂದಿನವರನ್ನು ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ, ಇದರಿಂದ ನೀವು ದೇವಭಯವುಳ್ಳವರಾಗಬಹುದು.

ಅವನೇ ನಿಮಗಾಗಿ ಭೂಮಿಯನ್ನು ಹಾಸಿಗೆಯನ್ನಾಗಿಯೂ ಮತ್ತು ಆಕಾಶವನ್ನು ಛಾವಣಿಯನ್ನಾಗಿಯೂ ಮಾಡಿದನು, ಮತ್ತು ಆಕಾಶದಿಂದ ನೀರನ್ನು ಸುರಿಸಿ ಅದರ ಮೂಲಕ ನಿಮಗಾಗಿ ಹಣ್ಣುಗಳನ್ನು ಆಹಾರವಾಗಿ ಹೊರತಂದನು; ಆದ್ದರಿಂದ ನೀವು ತಿಳಿದಿರುವವರಾಗಿಯೂ ಅಲ್ಲಾಹನಿಗೆ ಸರಿಸಾಟಿಗಳನ್ನು ಕಲ್ಪಿಸಬೇಡಿ.”

[ಅಲ್-ಬಕರ: 21-22].

ಈ ಸತ್ಯವನ್ನು ಸ್ಪಷ್ಟಪಡಿಸಲು, ಅದರ ಕಡೆಗೆ (ಜನರನ್ನು) ಆಹ್ವಾನಿಸಲು ಮತ್ತು ಅದಕ್ಕೆ ವಿರುದ್ಧವಾದುದರ ಬಗ್ಗೆ (ಜನರಿಗೆ) ಎಚ್ಚರಿಸಲು ಅಲ್ಲಾಹು ಸಂದೇಶವಾಹಕರನ್ನು ಕಳುಹಿಸಿದನು ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَلَقَدۡ بَعَثۡنَا فِي كُلِّ أُمَّةٖ رَّسُولًا أَنِ ٱعۡبُدُواْ ٱللَّهَ وَٱجۡتَنِبُواْ ٱلطَّٰغُوتَ...﴾

“ಮತ್ತು ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯದಲ್ಲೂ ಒಬ್ಬ ಸಂದೇಶವಾಹಕನನ್ನು ಕಳುಹಿಸಿದ್ದೇವೆ (ಈ ಆದೇಶದೊಂದಿಗೆ): ‘ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತ್‌ನಿಂದ (ಮಿಥ್ಯದೇವರುಗಳಿಂದ) ದೂರವಿರಿ’.” [ಅನ್ನಹ್ಲ್: 36].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَآ أَرۡسَلۡنَا مِن قَبۡلِكَ مِن رَّسُولٍ إِلَّا نُوحِيٓ إِلَيۡهِ أَنَّهُۥ لَآ إِلَٰهَ إِلَّآ أَنَا۠ فَٱعۡبُدُونِ25﴾

“ಮತ್ತು (ಓ ಪ್ರವಾದಿಯೇವರೇ) ನಿಮಗಿಂತ ಮೊದಲು ನಾವು ಯಾವುದೇ ಸಂದೇಶವಾಹಕನನ್ನು ‘ನನ್ನ ಹೊರತು ಬೇರೆ ದೇವರಿಲ್ಲ, ಆದ್ದರಿಂದ ನನ್ನನ್ನೇ ಆರಾಧಿಸಿರಿ’ ಎಂಬ ವಹೀ (ದೇವವಾಣಿ)ಯನ್ನು ನೀಡದೆ ಕಳುಹಿಸಿಲ್ಲ.” [ಅಲ್-ಅಂಬಿಯಾ: 25]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿الر كِتَابٌ أُحْكِمَتْ آيَاتُهُ ثُمَّ فُصِّلَتْ مِنْ لَدُنْ حَكِيمٍ خَبِيرٍ1 أَلَّا تَعْبُدُوا إِلَّا اللَّهَ إِنَّنِي لَكُمْ مِنْهُ نَذِيرٌ وَبَشِيرٌ2﴾

“ಅಲಿಫ್-ಲಾಮ್-ರಾ. ಇದೊಂದು ಗ್ರಂಥ, ಇದರ ವಚನಗಳನ್ನು ದೃಢಪಡಿಸಲಾಗಿದೆ, ನಂತರ ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಿಂದ (ಅಲ್ಲಾಹನಿಂದ) ವಿವರಿಸಲಾಗಿದೆ.

ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬೇಡಿ ಎಂದು. ನಿಶ್ಚಯವಾಗಿಯೂ ನಾನು ಅವನ ಕಡೆಯಿಂದ ನಿಮಗೆ ಎಚ್ಚರಿಕೆ ನೀಡುವವನು ಮತ್ತು ಶುಭವಾರ್ತೆ ನೀಡುವವನಾಗಿದ್ದೇನೆ.”

[ಹೂದ್: 1-2].

ಈ ಆರಾಧನೆಯ ವಾಸ್ತವಿಕತೆಯೇನೆಂದರೆ: ಪ್ರಾರ್ಥನೆ (ದುಆ), ಭಯ, ನಿರೀಕ್ಷೆ, ನಮಾಝ್, ಉಪವಾಸ, ಬಲಿ, ಹರಕೆ ಮತ್ತು ಇತರ ಎಲ್ಲಾ ರೀತಿಯ ಆರಾಧನೆಗಳನ್ನು, ಅಲ್ಲಾಹನಿಗೆ ವಿನಮ್ರರಾಗಿ, ಅವನ ಪ್ರತಿಫಲವನ್ನು ಆಶಿಸುತ್ತಾ, ಅವನ ಶಿಕ್ಷೆಗೆ ಹೆದರುತ್ತಾ, ಅವನಿಗೆ ಪರಿಪೂರ್ಣ ಪ್ರೀತಿಯನ್ನು ಹಾಗೂ ಅವನ ಮಹಿಮೆಗೆ ಸಂಪೂರ್ಣ ಅಧೀನತೆಯನ್ನು ಪ್ರಕಟಿಸುತ್ತಾ, ಸರ್ವಶಕ್ತನಾದ ಅವನಿಗೆ ಮಾತ್ರ ಸಂಪೂರ್ಣವಾಗಿ ಸಮರ್ಪಿಸುವುದು.

ಪವಿತ್ರ ಕುರ್‌ಆನ್ ಅನ್ನು ಆಳವಾಗಿ ಅಧ್ಯಯನ ಮಾಡುವವರು, ಅದರ ಹೆಚ್ಚಿನ ಭಾಗವು ಈ ಮಹಾನ್ ಮೂಲತತ್ವದ ಬಗ್ಗೆಯೇ ಅವತೀರ್ಣಗೊಂಡಿದೆ ಎಂದು ಕಂಡುಕೊಳ್ಳುತ್ತಾರೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ فَاعْبُدِ اللَّهَ مُخْلِصًا لَهُ الدِّينَ 2 أَلَا لِلَّهِ الدِّينُ الْخَالِصُ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ3﴾

“ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ಸತ್ಯದೊಂದಿಗೆ ನಿಮಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ಅಲ್ಲಾಹನಿಗೆ ಧರ್ಮವನ್ನು ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಿರಿ.

ನಿಷ್ಕಳಂಕವಾದ ಧರ್ಮವು ಅಲ್ಲಾಹನಿಗೇ ಸೇರಿದೆ. ಮತ್ತು ಯಾರು ಅವನನ್ನು ಬಿಟ್ಟು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡಿದ್ದಾರೋ (ಅವರು ಹೇಳುತ್ತಾರೆ): ‘ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರವಾಗಿಸಲು ಮಾತ್ರ ನಾವು ಅವರನ್ನು ಆರಾಧಿಸುತ್ತೇವೆ.’ ನಿಶ್ಚಯವಾಗಿಯೂ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಅಲ್ಲಾಹು ಅವರ ನಡುವೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಸುಳ್ಳುಗಾರ ಮತ್ತು ಕೃತಘ್ನನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ.” [ಅಝ್ಝುಮರ್: 2-3].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَقَضَىٰ رَبُّكَ أَلَّا تَعۡبُدُوٓاْ إِلَّآ إِيَّاهُ...﴾

“ಮತ್ತು ನಿಮ್ಮ ಪರಿಪಾಲಕನು (ಅಲ್ಲಾಹು) ವಿಧಿಸಿದ್ದಾನೆ, ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಎಂದು.” [ಅಲ್-ಇಸ್ರಾಅ್: 23]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿فَٱدۡعُواْ ٱللَّهَ مُخۡلِصِينَ لَهُ ٱلدِّينَ وَلَوۡ كَرِهَ ٱلۡكَٰفِرُونَ14﴾

“ಆದ್ದರಿಂದ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ದ್ವೇಷಿಸಿದರೂ ಸಹ.” [ಅಲ್-ಗಾಫಿರ್: 14].

ಅದೇ ರೀತಿ, ಪ್ರವಾದಿ (ಸ) ರವರ ಸುನ್ನತ್ತನ್ನು ಆಳವಾಗಿ ಅಧ್ಯಯನ ಮಾಡುವವರು, ಅವರು ಈ ಮಹಾನ್ ಮೂಲತತ್ವಕ್ಕೆ ಅದರಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ಕಾಣುವರು. ಅವುಗಳಲ್ಲಿ ಒಂದು ಹೀಗಿದೆ: ಬುಖಾರಿ ಮತ್ತು ಮುಸ್ಲಿಂ ರವರು ಮುಆದ್ (ರ) ರಿಂದ ವರದಿ ಮಾಡಿದ ಹದೀಸಿನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«حَقُّ اللهِ عَلَى العِبَادِ أَن يَعْبُدُوهُ وَلَا يُشْرِكُوا بِهِ شَيْئًا».

“ದಾಸರ ಮೇಲೆ ಅಲ್ಲಾಹನಿಗಿರುವ ಹಕ್ಕು ಏನೆಂದರೆ ಅವರು ಅವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಯಾವುದನ್ನೂ ಸಹಭಾಗಿಯನ್ನಾಗಿ ಮಾಡಬಾರದು.”2.

ಅಲ್ಲಾಹನಲ್ಲಿರುವ ವಿಶ್ವಾಸವು, ಅವನು ತನ್ನ ದಾಸರ ಮೇಲೆ ಕಡ್ಡಾಯಗೊಳಿಸಿದ ಎಲ್ಲಾ ವಿಷಯಗಳಲ್ಲಿ ವಿಶ್ವಾಸವಿಡುವುದನ್ನು ಒಳಗೊಂಡಿದೆ; ಇಸ್ಲಾಮಿನ ಐದು ಬಾಹ್ಯ ಆಧಾರಸ್ತಂಭಗಳು ಇದರಲ್ಲಿ ಸೇರಿವೆ.

ಅವು ಯಾವುವೆಂದರೆ: ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ನುಡಿಯುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ಮತ್ತು ಸಾಧ್ಯವಾದರೆ ಅಲ್ಲಾಹನ ಪವಿತ್ರ ಭವನಕ್ಕೆ (ಕಅಬಾ) ಹಜ್ ಯಾತ್ರೆ ಮಾಡುವುದು, ಹಾಗೂ ಪರಿಶುದ್ಧ ಶರೀಅತ್ (ಇಸ್ಲಾಮೀ ಕಾನೂನು) ತಂದಿರುವ ಇತರ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸುವುದು.

ಈ ಆಧಾರಸ್ತಂಭಗಳಲ್ಲಿ ಅತ್ಯಂತ ಪ್ರಮುಖವಾದುದು ಮತ್ತು ಮಹತ್ವಪೂರ್ಣವಾದುದು ಯಾವುದೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯವಚನ. ಅಲ್ಲಾಹನೊಬ್ಬನಿಗೇ ಆರಾಧನೆಯನ್ನು ನಿಷ್ಕಳಂಕವಾಗಿ ಅರ್ಪಿಸಬೇಕು ಮತ್ತು ಅವನಲ್ಲದ ಇತರರಿಗೆ ಅದನ್ನು ನಿಷೇಧಿಸಬೇಕು ಎಂಬುದು ಈ ಸಾಕ್ಷ್ಯವಚನದ ಬೇಡಿಕೆಯಾಗಿದೆ. ಇದೇ "ಲಾ ಇಲಾಹ ಇಲ್ಲಲ್ಲಾಹ್" ಎಂಬುದರ ಅರ್ಥ. ವಿದ್ವಾಂಸರು (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳಿದಂತೆ, "ಸತ್ಯವಾಗಿ ಆರಾಧನೆಗೆ ಅರ್ಹನಾದವನು ಅಲ್ಲಾಹನ ಹೊರತು ಬೇರೆ ಯಾರೂ ಇಲ್ಲ" ಎಂಬುದು ಈ ವಚನದ ಅರ್ಥವಾಗಿದೆ. ಇದರ ಆಧಾರದಲ್ಲಿ ಮನುಷ್ಯರು, ದೇವದೂತರುಗಳು, ಜಿನ್ನ್‌ಗಳು ಅಥವಾ ಇನ್ನಾವುದೇ ಆಗಲಿ, ಅಲ್ಲಾಹನ ಹೊರತು ಆರಾಧಿಸಲ್ಪಡುವ ಎಲ್ಲವೂ ಸುಳ್ಳು ದೇವರುಗಳಾಗಿದ್ದಾರೆ. ಸತ್ಯವಾಗಿ ಆರಾಧನೆಗೆ ಅರ್ಹನಾದವನು ಅಲ್ಲಾಹು ಮಾತ್ರ. ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿ذَٰلِكَ بِأَنَّ ٱللَّهَ هُوَ ٱلۡحَقُّ وَأَنَّ مَا يَدۡعُونَ مِن دُونِهِۦ هُوَ ٱلۡبَٰطِلُ...﴾

“ಅದು ಏಕೆಂದರೆ ಅಲ್ಲಾಹು ಮಾತ್ರ ಸತ್ಯ, ಮತ್ತು ಅವನನ್ನು ಬಿಟ್ಟು ಅವರು ಕರೆದು ಪ್ರಾರ್ಥಿಸುವುದೆಲ್ಲವೂ ಸುಳ್ಳು.” [ಅಲ್-ಹಜ್ಜ್: 62].

ಈಗಾಗಲೇ ವಿವರಿಸಿದಂತೆ, ಸರ್ವಶಕ್ತನಾದ ಅಲ್ಲಾಹು ಈ ಮೂಲಭೂತ ತತ್ವಕ್ಕಾಗಿ ಜಿನ್ನ್ ಮತ್ತು ಮಾನವರನ್ನು ಸೃಷ್ಟಿಸಿದನು, ಅದನ್ನೇ ಅವರಿಗೆ ಆಜ್ಞಾಪಿಸಿದನು, ಅದಕ್ಕಾಗಿಯೇ ತನ್ನ ಸಂದೇಶವಾಹಕರನ್ನು ಕಳುಹಿಸಿದನು ಮತ್ತು ಅದಕ್ಕಾಗಿಯೇ ತನ್ನ ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಆದ್ದರಿಂದ, ದಾಸನು ಇದರ ಬಗ್ಗೆ ಚೆನ್ನಾಗಿ ಯೋಚಿಸಬೇಕು ಮತ್ತು ಆಳವಾಗಿ ಚಿಂತಿಸಬೇಕು; ಇದರಿಂದ ಹೆಚ್ಚಿನ ಮುಸಲ್ಮಾನರು ಈ ಮೂಲತತ್ವದ ಬಗ್ಗೆ ಹೊಂದಿರುವ ಅಗಾಧ ಅಜ್ಞಾನವು ಅವರಿಗೆ ಸ್ಪಷ್ಟವಾಗಬಹುದು; ಎಷ್ಟರಮಟ್ಟಿಗೆಂದರೆ ಅವರು (ಮುಸಲ್ಮಾನರಲ್ಲಿ ಕೆಲವರು) ಅಲ್ಲಾಹನೊಂದಿಗೆ ಇತರರನ್ನು ಆರಾಧಿಸಿದರು ಮತ್ತು ಅವನಿಗೆ ಸಲ್ಲಬೇಕಾದ ನಿಷ್ಕಳಂಕ ಹಕ್ಕನ್ನು ಇತರರಿಗೆ ಅರ್ಪಿಸಿದರು. ಅಲ್ಲಾಹನೇ ಸಹಾಯ ಮಾಡುವವನು.

ಸರ್ವಶಕ್ತನಾದ ಅಲ್ಲಾಹನಲ್ಲಿರುವ ವಿಶ್ವಾಸವು, ಅವನು ಜಗತ್ತಿನ ಸೃಷ್ಟಿಕರ್ತನು, ಅವರ ವ್ಯವಹಾರಗಳನ್ನು ನಿರ್ವಹಿಸುವವನು, ತನ್ನ ಜ್ಞಾನ ಮತ್ತು ಶಕ್ತಿಯಿಂದ ತಾನು ಬಯಸಿದಂತೆ ಅವರಲ್ಲಿ ಹಸ್ತಕ್ಷೇಪ ನಡೆಸುವವನು, ಮತ್ತು ಅವನು ಇಹಲೋಕ ಮತ್ತು ಪರಲೋಕದ ಮಾಲೀಕನು ಹಾಗೂ ಸರ್ವಲೋಕಗಳ ಪರಿಪಾಲಕನು, ಅವನ ಹೊರತು ಬೇರೆ ಸೃಷ್ಟಿಕರ್ತನಿಲ್ಲ, ಅವನ ಹೊರತು ಬೇರೆ ಪರಿಪಾಲಕನಿಲ್ಲ ಎಂದು ವಿಶ್ವಾಸವಿಡುವುದನ್ನೂ ಒಳಗೊಂಡಿದೆ. ಹಾಗೆಯೇ, ಅವನು ದಾಸರನ್ನು ಸುಧಾರಣೆಗೊಳಿಸಲು ಮತ್ತು ಇಹಲೋಕ ಹಾಗೂ ಪರಲೋಕದಲ್ಲಿ ಅವರಿಗೆ ಮೋಕ್ಷ ಮತ್ತು ಒಳಿತನ್ನು ತರುವ ವಿಷಯಗಳಿಗೆ ಅವರನ್ನು ಆಹ್ವಾನಿಸಲು ಸಂದೇಶವಾಹಕರನ್ನು ಕಳುಹಿಸಿದನು ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಿದನು. ಸರ್ವಶಕ್ತನಾದ ಅಲ್ಲಾಹನಿಗೆ ಈ ಮೇಲೆ ಹೇಳಿದ ಯಾವುದರಲ್ಲೂ ಯಾವುದೇ ಸಹಭಾಗಿಗಳಿಲ್ಲ. ಅಲ್ಲಾಹು ಹೇಳುತ್ತಾನೆ:

﴿ٱللَّهُ خَٰلِقُ كُلِّ شَيۡءٖۖ وَهُوَ عَلَىٰ كُلِّ شَيۡءٖ وَكِيلٞ 62﴾

“ಅಲ್ಲಾಹು ಪ್ರತಿಯೊಂದರ ಸೃಷ್ಟಿಕರ್ತನು; ಮತ್ತು ಅವನು ಪ್ರತಿಯೊಂದರ ಮೇಲ್ವಿಚಾರಕನು.” [ಅಝ್ಝುಮರ್: 62]

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّ رَبَّكُمُ ٱللَّهُ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٖ ثُمَّ ٱسۡتَوَىٰ عَلَى ٱلۡعَرۡشِۖ يُغۡشِي ٱلَّيۡلَ ٱلنَّهَارَ يَطۡلُبُهُۥ حَثِيثٗا وَٱلشَّمۡسَ وَٱلۡقَمَرَ وَٱلنُّجُومَ مُسَخَّرَٰتِۭ بِأَمۡرِهِۦٓۗ أَلَا لَهُ ٱلۡخَلۡقُ وَٱلۡأَمۡرُۗ تَبَارَكَ ٱللَّهُ رَبُّ ٱلۡعَٰلَمِينَ54﴾

“ನಿಶ್ಚಯವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ನಂತರ ಅವನು ಅರ್ಶಿನ ಮೇಲೆ ಆರೂಢನಾದನು. ಅವನು ರಾತ್ರಿಯಿಂದ ಹಗಲನ್ನು ಮುಚ್ಚುತ್ತಾನೆ, ಅದು ಅದನ್ನು ವೇಗವಾಗಿ ಹಿಂಬಾಲಿಸುತ್ತದೆ. ಮತ್ತು ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಅವನ ಆಜ್ಞೆಗೆ ಅಧೀನವಾಗಿವೆ. ತಿಳಿಯಿರಿ, ಸೃಷ್ಟಿ ಮತ್ತು ಆಜ್ಞೆ ಅವನಿಗೇ ಸೇರಿದೆ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಅತ್ಯಂತ ಅನುಗ್ರಹಪೂರ್ಣನಾಗಿದ್ದಾನೆ.” [ಅಲ್-ಅಅ್‌ರಾಫ್: 54].

ಸರ್ವಶಕ್ತನಾದ ಅಲ್ಲಾಹನಲ್ಲಿರುವ ವಿಶ್ವಾಸವು, ಅವನ ಪವಿತ್ರ ಗ್ರಂಥದಲ್ಲಿ (ಕುರ್‌ಆನ್) ಉಲ್ಲೇಖಿಸಲಾದ ಮತ್ತು ಅವನ ವಿಶ್ವಾಸಾರ್ಹ ಸಂದೇಶವಾಹಕರಿಂದ (ಪ್ರವಾದಿ ಮುಹಮ್ಮದ್(ಸ) ದೃಢೀಕರಿಸಲ್ಪಟ್ಟ ಅವನ ಸುಂದರವಾದ ನಾಮಗಳು ಮತ್ತು ಉನ್ನತ ಗುಣಲಕ್ಷಣಗಳನ್ನು ಯಾವುದೇ ರೀತಿಯ ತಿರುಚುವಿಕೆ, ನಿಷ್ಕ್ರಿಯತೆ, ವಿಧಾನ ಕೊಡದೇ ಅಥವಾ ಹೋಲಿಕೆ ಮಾಡದೆ ವಿಶ್ವಾಸವಿಡುವುದನ್ನೂ ಒಳಗೊಂಡಿದೆ.

﴿...لَيۡسَ كَمِثۡلِهِۦ شَيۡءٞۖ وَهُوَ ٱلسَّمِيعُ ٱلۡبَصِيرُ﴾

“ಅವನಂತೆ ಯಾವುದೂ ಇಲ್ಲ; ಮತ್ತು ಅವನು ಎಲ್ಲವನ್ನೂ ಕೇಳುವವನು ಹಾಗೂ ಎಲ್ಲವನ್ನೂ ನೋಡುವವನಾಗಿದ್ದಾನೆ.” [ಅಶ್ಶೂರಾ:11].

ಆದ್ದರಿಂದ, ಅವು ಸರ್ವಶಕ್ತನಾದ ಅಲ್ಲಾಹನನ್ನು ವರ್ಣಿಸುವ ಮಹಾನ್ ಅರ್ಥಗಳನ್ನು ಒಳಗೊಂಡಿವೆ ಎಂಬ ವಿಶ್ವಾಸದೊಂದಿಗೆ, ಅವು (ಕುರ್‌ಆನ್ ಮತ್ತು ಸುನ್ನತ್‌ನಲ್ಲಿ) ಬಂದಿರುವಂತೆಯೇ, ‘ಹೇಗೆ’ ಎಂದು ಪ್ರಶ್ನಿಸದೆ ಅಂಗೀಕರಿಸುವುದು, ಮತ್ತು ಅವನ ಗುಣಲಕ್ಷಣಗಳಲ್ಲಿ ಯಾವುದನ್ನೂ ಅವನ ಸೃಷ್ಟಿಗಳಿಗೆ ಹೋಲಿಸದೆ, ಅವನಿಗೆ ಯೋಗ್ಯವಾದ ರೀತಿಯಲ್ಲಿಯೇ ಅವನನ್ನು ವರ್ಣಿಸುವುದು ಕಡ್ಡಾಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿فَلَا تَضۡرِبُواْ لِلَّهِ ٱلۡأَمۡثَالَۚ إِنَّ ٱللَّهَ يَعۡلَمُ وَأَنتُمۡ لَا تَعۡلَمُونَ74﴾

“ಆದ್ದರಿಂದ ನೀವು ಅಲ್ಲಾಹನಿಗೆ ಉದಾಹರಣೆಗಳನ್ನು ನೀಡಬೇಡಿ. ನಿಶ್ಚಯವಾಗಿಯೂ ಅಲ್ಲಾಹು ತಿಳಿದಿದ್ದಾನೆ ಮತ್ತು ನೀವು ತಿಳಿದಿಲ್ಲ.” [ಅನ್ನಹ್ಲ್: 74].

ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಅಲ್ಲಾಹನ ಸಂದೇಶವಾಹಕರ (ಸ) ಸಹಚರರು (ಸಹಾಬಿಗಳು) ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸಿದವರಾದ 'ಅಹ್ಲು ಸ್ಸುನ್ನ ವಲ್-ಜಮಾಅ'ದವರ ವಿಶ್ವಾಸವು (ಅಕೀದ) ಇದೇ ಆಗಿದೆ. ಇದನ್ನು ಇಮಾಮ್ ಅಬುಲ್-ಹಸನ್ ಅಶ್ಅರಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಯವರು "ಅಲ್-ಮಕಾಲಾತ್" ಎಂಬ ಗ್ರಂಥದಲ್ಲಿ ಹದೀಸ್ ವಿದ್ವಾಂಸರು ಮತ್ತು ಅಹ್ಲುಸ್ಸುನ್ನದವರಿಂದ ಉಲ್ಲೇಖಿಸಿದ್ದಾರೆ. ಇತರ ವಿದ್ವಾಂಸರು ಮತ್ತು ಸತ್ಯವಿಶ್ವಾಸಿಗಳು ಸಹ ಇದನ್ನು ಉಲ್ಲೇಖಿಸಿದ್ದಾರೆ.

ಅಲ್-ಔಝಾಈ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ಝುಹ್ರಿ ಮತ್ತು ಮಕ್ಹೂಲ್ ರಲ್ಲಿ ಅಲ್ಲಾಹನ ಗುಣಲಕ್ಷಣಗಳನ್ನು ಹೊಂದಿರುವ ವಚನಗಳ ಬಗ್ಗೆ ಕೇಳಲಾಯಿತು. ಆಗ ಅವರಿಬ್ಬರೂ ಹೇಳಿದರು: 'ಅವುಗಳು ಬಂದಂತೆಯೇ ಅವುಗಳನ್ನು ಹೋಗಲು ಬಿಡಿ'."3

ಅಲ್-ಔಝಾಈ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ನಾವು ಮತ್ತು ತಾಬಈನ್‌ಗಳು ಹೇರಳ ಸಂಖ್ಯೆಯಲ್ಲಿದ್ದಾಗ, ಸರ್ವಶಕ್ತನಾದ ಅಲ್ಲಾಹು ತನ್ನ ಅರ್ಶಿನ ಮೇಲಿದ್ದಾನೆ ಎಂದು ನಾವು ಹೇಳುತ್ತಿದ್ದೆವು ಮತ್ತು ಸುನ್ನತ್‌ನಲ್ಲಿ ಬಂದಿರುವ ಗುಣಲಕ್ಷಣಗಳಲ್ಲಿ ವಿಶ್ವಾಸವಿಡುತ್ತಿದ್ದೆವು."4

ವಲೀದ್ ಬಿನ್ ಮುಸ್ಲಿಮ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ಇಮಾಮ್ ಮಾಲಿಕ್, ಔಝಾಈ, ಲೈಸ್ ಬಿನ್ ಸಅದ್, ಮತ್ತು ಸುಫ್ಯಾನ್ ಸೌರಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಯವರಲ್ಲಿ ಅಲ್ಲಾಹನ ಗುಣಲಕ್ಷಣಗಳ ಬಗ್ಗೆ ಬಂದಿರುವ ವರದಿಗಳ ಕುರಿತು ಕೇಳಲಾಯಿತು. ಆಗ ಅವರೆಲ್ಲರೂ ಹೇಳಿದರು: 'ಅವುಗಳು ಬಂದಂತೆಯೇ, ಹೇಗೆ ಎಂದು ಕೇಳದೆ ಅವುಗಳನ್ನು ಹೋಗಲು ಬಿಡಿ'."5

ರಬೀಅ ಬಿನ್ ಅಬೂ ಅಬ್ದುರ್‍ರಹ್ಮಾನ್ - ಇಮಾಂ ಮಾಲಿಕರ ಗುರುವರ್ಯ (ಅಲ್ಲಾಹು ಅವರಿಬ್ಬರ ಮೇಲೂ ಕರುಣೆ ತೋರಲಿ) - ರಲ್ಲಿ 'ಇಸ್ತಿವಾ' (ಅಲ್ಲಾಹು ಅರ್ಶಿನ ಮೇಲೆ ಆರೂಢನಾಗುವುದು) ಬಗ್ಗೆ ಕೇಳಿದಾಗ, ಅವರು ಹೇಳಿದರು: "ಇಸ್ತಿವಾ ಎಂಬುದು ತಿಳಿದಿರುವ ವಿಷಯವಾಗಿದೆ. ಅದು 'ಹೇಗೆ' ಎಂಬುದು ಗ್ರಹಿಕೆಗೆ ಮೀರಿದ್ದಾಗಿದೆ. ಸಂದೇಶವು ಅಲ್ಲಾಹನ ಕಡೆಯಿಂದ ಬರುತ್ತದೆ. ಅದನ್ನು ಸ್ಪಷ್ಟವಾಗಿ ತಲುಪಿಸುವ ಜವಾಬ್ದಾರಿ ಸಂದೇಶವಾಹಕರದ್ದು, ಮತ್ತು ಅದನ್ನು ದೃಢೀಕರಿಸುವ ಜವಾಬ್ದಾರಿ ನಮ್ಮದು."6 ಇಮಾಮ್ ಮಾಲಿಕ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರಲ್ಲಿ ಇದರ ಬಗ್ಗೆ ಪ್ರಶ್ನಿಸಲಾದಾಗ, ಅವರು ಹೇಳಿದರು: "ಇಸ್ತಿವಾ ಎಂಬುದು ತಿಳಿದಿರುವ ವಿಷಯವಾಗಿದೆ. ಅದು 'ಹೇಗೆ' ಎಂಬುದು ಅಜ್ಞಾತವಾಗಿದೆ. ಅದರ ಮೇಲೆ ವಿಶ್ವಾಸವಿಡುವುದು ಕಡ್ಡಾಯವಾಗಿದೆ. ಅದರ ಬಗ್ಗೆ ಪ್ರಶ್ನಿಸುವುದು ಬಿದ್ಅತ್ (ಧರ್ಮದಲ್ಲಿ ಹೊಸ ಆವಿಷ್ಕಾರ) ಆಗಿದೆ." ನಂತರ ಅವರು ಪ್ರಶ್ನಿಸಿದವನಿಗೆ ಹೇಳಿದರು: "ನನಗೆ ನೀನು ಕೆಟ್ಟ ಮನುಷ್ಯನಂತೆ ಕಾಣುತ್ತಿರುವೆ!" ನಂತರ ಅವನನ್ನು ಹೊರಗೆ ಕಳುಹಿಸಲು ಆದೇಶಿಸಿದರು.7 ಈ ಅರ್ಥವು ಉಮ್ಮುಲ್ ಮುಅ್‌ಮಿನೀನ್ ಉಮ್ಮು ಸಲಮಾ (ರ) ರಿಂದಲೂ ವರದಿಯಾಗಿದೆ.8

ಇಮಾಮ್ ಅಬೂ ಅಬ್ದುರ್‍ರಹ್ಮಾನ್ ಇಬ್ನುಲ್-ಮುಬಾರಕ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ನಮ್ಮ ರಬ್ಬ್ ತನ್ನ ಸೃಷ್ಟಿಗಳಿಂದ ಬೇರ್ಪಟ್ಟು ಆಕಾಶಗಳ ಮೇಲೆ, ತನ್ನ ಅರ್ಶಿನ ಮೇಲಿದ್ದಾನೆ ಎಂದು ನಾವು ಅರಿಯುತ್ತೇವೆ."9

ಈ ವಿಷಯದಲ್ಲಿ ಇಮಾಮ್‌ಗಳ ಹೇಳಿಕೆಗಳು ಬಹಳಷ್ಟಿದ್ದು, ಅವೆಲ್ಲವನ್ನೂ ಈ ಉಪನ್ಯಾಸದಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುವವರು ಈ ವಿಷಯದಲ್ಲಿ ಅಹ್ಲುಸುನ್ನತ್‌ನ ವಿದ್ವಾಂಸರು ಬರೆದ ಕೃತಿಗಳನ್ನು ಪರಿಶೀಲಿಸಲಿ. ಉದಾಹರಣೆಗೆ ಇಮಾಮ್ ಅಹ್ಮದ್ ರವರ ಪುತ್ರ ಅಬ್ದುಲ್ಲಾ ರವರ "ಅಸ್ಸುನ್ನ", ಮಹಾನ್ ಇಮಾಮ್ ಮುಹಮ್ಮದ್ ಬಿನ್ ಖುಝೈಮಾ ರವರ "ಅತ್ತೌಹೀದ್", ಅಬುಲ್-ಕಾಸಿಮ್ ಅಲ್ಲಾಲಕಾಈ ಅತ್ತಬರಿ ರವರ "ಅಸ್ಸುನ್ನ", ಅಬೂ ಬಕರ್ ಬಿನ್ ಅಬೂ ಆಸಿಮ್ ರವರ "ಅಸ್ಸುನ್ನ", ಮತ್ತು ಶೈಖುಲ್-ಇಸ್ಲಾಂ ಇಬ್ನ್ ತೈಮಿಯ್ಯ ರವರು ಹಮಾ ನಿವಾಸಿಗಳಿಗೆ ನೀಡಿದ ಉತ್ತರ — ಇದು ಒಂದು ಮಹಾನ್ ಮತ್ತು ಅತ್ಯಂತ ಪ್ರಯೋಜನಕಾರಿ ಉತ್ತರವಾಗಿದ್ದು, ಇದರಲ್ಲಿ ಅವರು (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಅಹ್ಲುಸ್ಸುನ್ನದವರ ವಿಶ್ವಾಸವನ್ನು ಸ್ಪಷ್ಟಪಡಿಸಿದ್ದಾರೆ, ಮತ್ತು ಅವರ ಅನೇಕ ಮಾತುಗಳನ್ನು, ಹಾಗೂ ಅಹ್ಲುಸ್ಸುನ್ನದವರು ಹೇಳಿದ್ದು ಸತ್ಯವೆಂಬುದಕ್ಕೆ ಧಾರ್ಮಿಕ ಮತ್ತು ಬೌದ್ಧಿಕ ಪುರಾವೆಗಳನ್ನು ಉಲ್ಲೇಖಿಸಿದ್ದಾರೆ ಹಾಗೂ ಅವರ ವಿರೋಧಿಗಳು ಹೇಳಿದ್ದು ಸುಳ್ಳೆಂಬುದನ್ನು ಬಿಡಿಸಿ ತೋರಿಸಿದ್ದಾರೆ.

ಅದೇ ರೀತಿ, "ಅತ್ತದ್ಮುರಿಯ್ಯ" ಎಂದು ಹೆಸರಿಸಲಾದ ಅವರ ಕಿರುಕೃತಿ. ಅದರಲ್ಲಿ ಅವರು ಸದುದ್ದೇಶದಿಂದ ಮತ್ತು ಸತ್ಯವನ್ನು ತಿಳಿದುಕೊಳ್ಳುವ ಬಯಕೆಯಿಂದ ಈ ವಿಷಯವನ್ನು ನೋಡುವ ಪ್ರತಿಯೊಬ್ಬ ಜ್ಞಾನಿಗೂ ಈ ವಿಷಯವನ್ನು ವಿಸ್ತಾರವಾಗಿ ವಿವರಿಸಿದ್ದಾರೆ, ಅಹ್ಲುಸ್ಸುನ್ನದವರ ವಿಶ್ವಾಸವನ್ನು ಅದರ ಪಾರಂಪರಿಕ ಮತ್ತು ಬೌದ್ಧಿಕ ಪುರಾವೆಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ, ಮತ್ತು ವಿರೋಧಿಗಳಿಗೆ ಸತ್ಯವನ್ನು ಪ್ರಕಟಗೊಳಿಸುವ ಮತ್ತು ಸುಳ್ಳನ್ನು ಚಚ್ಚಿ ಹಾಕುವ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ, ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಅಹ್ಲುಸ್ಸುನ್ನ ವಲ್-ಜಮಾಅ ದವರ ವಿಶ್ವಾಸವೇನೆಂದರೆ; ಅವರು ಸರ್ವಶಕ್ತನಾದ ಅಲ್ಲಾಹನಿಗೆ, ಅವನು ತನ್ನ ಗ್ರಂಥದಲ್ಲಿ ತನಗಾಗಿ ದೃಢೀಕರಿಸಿದ್ದನ್ನು, ಅಥವಾ ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರು ತಮ್ಮ ಸುನ್ನತ್‌ನಲ್ಲಿ ಅವನಿಗಾಗಿ ದೃಢೀಕರಿಸಿದ್ದನ್ನು, ಯಾವುದೇ ಹೋಲಿಕೆಯಿಲ್ಲದೆ ದೃಢೀಕರಿಸುತ್ತಾರೆ, ಮತ್ತು ಸರ್ವಶಕ್ತನಾದ ಅವನನ್ನು, ಅವನ ಸೃಷ್ಟಿಗಳಿಗೆ ಹೋಲಿಕೆಯಾಗದಂತೆ, ನಿಷೇಧದಿಂದ ಮುಕ್ತಗೊಳಿಸುವ ರೀತಿಯಲ್ಲಿ ಪರಿಶುದ್ಧಗೊಳಿಸುತ್ತಾರೆ. ಆದ್ದರಿಂದ, ಅವರು ವಿರೋಧಾಭಾಸಕ್ಕೆ ಒಳಗಾಗದೆ ಸುರಕ್ಷಿತರಾಗಿದ್ದಾರೆ. ಮತ್ತು ಅವರು—ಅಲ್ಲಾಹನ ಸಹಾಯದಿಂದ—ಎಲ್ಲಾ ಪುರಾವೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹನ ನಡವಳಿಕೆಯೇನೆಂದರೆ, ಯಾರು ಅವನು ತನ್ನ ಸಂದೇಶವಾಹಕರ ಮೂಲಕ ಕಳುಹಿಸಿದ ಸತ್ಯವನ್ನು ದೃಢವಾಗಿ ಹಿಡಿದುಕೊಳ್ಳುತ್ತಾರೋ, ಅದಕ್ಕಾಗಿ ತಮ್ಮ ಸಾಮರ್ಥ್ಯವನ್ನು ವ್ಯಯಿಸುತ್ತಾರೋ, ಮತ್ತು ಅದನ್ನು ಹುಡುಕುವಲ್ಲಿ ಅಲ್ಲಾಹನಿಗಾಗಿ ನಿಷ್ಕಳಂಕರಾಗಿರುತ್ತಾರೋ, ಅವರಿಗೆ ಅವನು ಸತ್ಯದ ಕಡೆಗೆ ಮಾರ್ಗದರ್ಶನ ನೀಡುತ್ತಾನೆ ಮತ್ತು ಅವರ ಪುರಾವೆಯನ್ನು ಪ್ರಕಟಗೊಳಿಸುತ್ತಾನೆ. ಸರ್ವಶಕ್ತನಾದ ಅಲ್ಲಾಹು ಹೇಳಿದಂತೆ:

﴿بَلۡ نَقۡذِفُ بِٱلۡحَقِّ عَلَى ٱلۡبَٰطِلِ فَيَدۡمَغُهُۥ فَإِذَا هُوَ زَاهِقٞ...﴾

“ಬದಲಿಗೆ, ನಾವು ಸತ್ಯವನ್ನು ಅಸತ್ಯದ ಮೇಲೆ ಎಸೆಯುತ್ತೇವೆ. ಆಗ ಅದು ಅದನ್ನು ನಾಶಪಡಿಸುತ್ತದೆ, ಮತ್ತು ಆಗೋ ಅದು ಕಣ್ಮರೆಯಾಗಿ ಬಿಡುತ್ತದೆ.” [ಅಲ್-ಅಂಬಿಯಾ: 18].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَلَا يَأۡتُونَكَ بِمَثَلٍ إِلَّا جِئۡنَٰكَ بِٱلۡحَقِّ وَأَحۡسَنَ تَفۡسِيرًا33﴾

“ಮತ್ತು ಅವರು ನಿಮ್ಮ ಬಳಿಗೆ ಯಾವುದೇ ಉದಾಹರಣೆಯನ್ನು ತಂದರೂ, ನಾವು ನಿಮಗೆ ಸತ್ಯವನ್ನು ಮತ್ತು ಉತ್ತಮವಾದ ವಿವರಣೆಯನ್ನು ತರದೆ ಇರಲಾರೆವು.” [ಅಲ್-ಫುರ್ಕಾನ್: 33].

ಇನ್ನು ಯಾರು ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಅಹ್ಲುಸ್ಸುನ್ನದವರ ವಿಶ್ವಾಸಕ್ಕೆ ವಿರುದ್ಧವಾಗಿರುತ್ತಾರೋ, ಅವರು ಖಂಡಿತವಾಗಿಯೂ ಪಾರಂಪರಿಕ ಮತ್ತು ಬೌದ್ಧಿಕ ಪುರಾವೆಗಳಿಗೆ ವಿರುದ್ಧವಾಗಿ ಸಾಗುತ್ತಾರೆ; ಜೊತೆಗೆ ಅವರು ದೃಢೀಕರಿಸುವ ಮತ್ತು ನಿರಾಕರಿಸುವ ಪ್ರತಿಯೊಂದು ವಿಷಯದಲ್ಲೂ ಸ್ಪಷ್ಟವಾದ ವಿರೋಧಾಭಾಸವಿರುತ್ತದೆ. ಪ್ರಸಿದ್ಧ ಕುರ್‌ಆನ್ ವ್ಯಾಖ್ಯಾನಕಾರರಾದ ಹಾಫಿಝ್ ಇಬ್ನ್ ಕಸೀರ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ತಮ್ಮ ಪ್ರಸಿದ್ಧ ತಫ್ಸೀರ್‌ನಲ್ಲಿ ಈ ವಿಷಯದ ಬಗ್ಗೆ ಉತ್ತಮವಾದ ಮಾತುಗಳನ್ನು ಹೇಳಿದ್ದಾರೆ. ಅದು ಅವರು ಸರ್ವಶಕ್ತನಾದ ಅಲ್ಲಾಹನ ಈ ಕೆಳಗಿನ ವಚನದ ಬಗ್ಗೆ ಮಾತನಾಡುವಾಗ:

﴿إِنَّ رَبَّكُمُ ٱللَّهُ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٖ ثُمَّ ٱسۡتَوَىٰ عَلَى ٱلۡعَرۡشِ...﴾

“ನಿಶ್ಚಯವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ನಂತರ ಅವನು ಅರ್ಶಿನ ಮೇಲೆ ಆರೂಢನಾದನು.”

[ಅಲ್-ಅಅ್‌ರಾಫ್: 54].

ಅವರ ಮಾತಿನಲ್ಲಿರುವ ಮಹಾನ್ ಪ್ರಯೋಜನದಿಂದಾಗಿ ಅದನ್ನು ಇಲ್ಲಿ ಉಲ್ಲೇಖಿಸುವುದು ಉತ್ತಮವೆಂದು ತೋರುತ್ತದೆ. ಅವರು (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳಿದ ಮಾತುಗಳು ಹೀಗಿವೆ:

"ಈ ವಿಷಯದಲ್ಲಿ ಜನರಿಗೆ ಬಹಳಷ್ಟು ಅಭಿಪ್ರಾಯಗಳಿವೆ. ಇದು ಅವುಗಳನ್ನು ವಿವರಿಸುವ ಸ್ಥಳವಲ್ಲ. ನಾವು ಈ ವಿಷಯದಲ್ಲಿ ಸಜ್ಜನರಾದ ಪೂರ್ವಜರ ಮಾರ್ಗವನ್ನು, ಅಂದರೆ ಇಮಾಮ್ ಮಾಲಿಕ್, ಅಲ್-ಔಝಾಈ, ಅಸ್ಸೌರಿ, ಲೈಸ್ ಬಿನ್ ಸಅದ್, ಶಾಫಿಈ, ಅಹ್ಮದ್ ಬಿನ್ ಹಂಬಲ್, ಇಸ್ಹಾಕ್ ಬಿನ್ ರಾಹವೈಹ್, ಮತ್ತು ಮುಸ್ಲಿಂ ಇಮಾಮ್‌ಗಳಲ್ಲಿ ಹಿಂದಿನ ಮತ್ತು ಇಂದಿನವರ ಮಾರ್ಗವನ್ನು ಅನುಸರಿಸುತ್ತೇವೆ. ಅದು ಯಾವುದೆಂದರೆ, ಅವುಗಳನ್ನು (ಅಲ್ಲಾಹನ ಗುಣಲಕ್ಷಣಗಳನ್ನು) 'ಹೇಗೆ' ಎಂದು ಕೇಳದೆ, ಹೋಲಿಕೆ ಮಾಡದೆ, ಮತ್ತು ನಿರಾಕರಿಸದೆ ಅವು ಬಂದಂತೆಯೇ ಹೋಗಲು ಬಿಡುವುದು. ಹೋಲಿಕೆ ಮಾಡುವವರ ಮನಸ್ಸಿನಲ್ಲಿ ಮೂಡುವ ಬಾಹ್ಯಾರ್ಥವು ಅಲ್ಲಾಹನಿಗೆ ಸಂಬಂಧಿಸಿದಂತೆ ನಿಷೇಧಿಸಲಾದ ವಿಷಯವಾಗಿದೆ. ಏಕೆಂದರೆ ಅಲ್ಲಾಹು ತನ್ನ ಸೃಷ್ಟಿಗಳಲ್ಲಿ ಯಾವುದನ್ನೂ ಹೋಲುವುದಿಲ್ಲ ಮತ್ತು

﴿...لَيۡسَ كَمِثۡلِهِۦ شَيۡءٞۖ وَهُوَ ٱلسَّمِيعُ ٱلۡبَصِيرُ﴾

“ಅವನಂತೆ ಯಾವುದೂ ಇಲ್ಲ; ಮತ್ತು ಅವನು ಎಲ್ಲವನ್ನೂ ಕೇಳುವವನು ಹಾಗೂ ಎಲ್ಲವನ್ನೂ ನೋಡುವವನಾಗಿದ್ದಾನೆ.” [ಅಶ್ಶೂರಾ:11]. ಬದಲಿಗೆ, ವಿಷಯವು ಇಮಾಮ್‌ಗಳು ಹೇಳಿದಂತೆ ಆಗಿರುತ್ತದೆ - ಅವರಲ್ಲಿ ಬುಖಾರಿಯ ಗುರುಗಳಾದ ನುಐಮ್ ಬಿನ್ ಹಮ್ಮಾದ್ ಅಲ್-ಖುಝಾಈ ಕೂಡ ಸೇರುತ್ತಾರೆ. ಅವರೆಲ್ಲರೂ ಹೇಳಿದ್ದೇನೆಂದರೆ: ಯಾರು ಅಲ್ಲಾಹನನ್ನು ಅವನ ಸೃಷ್ಟಿಗಳಿಗೆ ಹೋಲಿಸುತ್ತಾರೋ ಅವರು ಕುಫ್ರ್ (ಸತ್ಯನಿಷೇಧ) ಮಾಡಿದರು, ಮತ್ತು ಯಾರು ಅಲ್ಲಾಹು ತನ್ನನ್ನು ತಾನು ವರ್ಣಿಸಿಕೊಂಡಿರುವುದನ್ನು ನಿಷೇಧಿಸುತ್ತಾರೋ ಅವರು ಕೂಡ ಕುಫ್ರ್ ಮಾಡಿದರು.10 ಅಲ್ಲಾಹು ತನ್ನನ್ನು ತಾನು ವರ್ಣಿಸಿಕೊಂಡಿರುವುದರಲ್ಲಾಗಲೀ ಅಥವಾ ಅವನ ಸಂದೇಶವಾಹಕರು ಅವನನ್ನು ವರ್ಣಿಸಿರುವುದರಲ್ಲಾಗಲೀ ಯಾವುದೇ ಹೋಲಿಕೆಯಿಲ್ಲ. ಆದ್ದರಿಂದ, ಯಾರು ಸ್ಪಷ್ಟವಾದ ಕುರ್‌ಆನ್ ವಚನಗಳು ಮತ್ತು ದೃಢವಾದ ಹದೀಸ್ ವರದಿಗಳಲ್ಲಿ ಬಂದಿರುವುದನ್ನು, ಅಲ್ಲಾಹನ ಮಹಿಮೆಗೆ ಹೊಂದಿಕೆಯಾಗುವ ರೀತಿಯಲ್ಲಿ ಅಲ್ಲಾಹನಿಗೆ ದೃಢಪಡಿಸುತ್ತಾರೋ ಮತ್ತು ಸರ್ವಶಕ್ತನಾದ ಅಲ್ಲಾಹನಿಗೆ ನ್ಯೂನತೆಗಳನ್ನು ನಿರಾಕರಿಸುತ್ತಾರೋ, ಅವರು ಸನ್ಮಾರ್ಗವನ್ನು ಅನುಸರಿಸಿದರು."11 ಇಬ್ನ್ ಕಸೀರ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರ ಮಾತುಗಳು ಇಲ್ಲಿಗೆ ಮುಕ್ತಾಯವಾಗುತ್ತವೆ.

ಅಲ್ಲಾಹನಲ್ಲಿರುವ ವಿಶ್ವಾಸವು ಈ ಕೆಳಗಿನವುಗಳನ್ನು ಸಹ ಒಳಗೊಂಡಿದೆ: ಈಮಾನ್ (ವಿಶ್ವಾಸ) ಎಂದರೆ ಮಾತು ಮತ್ತು ಕ್ರಿಯೆಯಾಗಿದೆ, ಅದು ವಿಧೇಯತೆಯಿಂದ ಹೆಚ್ಚಾಗುತ್ತದೆ ಮತ್ತು ಅವಿಧೇಯತೆಯಿಂದ ಕಡಿಮೆಯಾಗುತ್ತದೆ ಎಂದು ವಿಶ್ವಾಸವಿಡುವುದು. ಹಾಗೆಯೇ, ಶಿರ್ಕ್ ಮತ್ತು ಕುಫ್ರ್ ಗಿಂತ ಕೆಳಗಿನ ದರ್ಜೆಯ ಪಾಪಗಳಾದ ವ್ಯಭಿಚಾರ, ಕಳ್ಳತನ, ಬಡ್ಡಿ ತಿನ್ನುವುದು, ಮಾದಕ ದ್ರವ್ಯ ಸೇವನೆ, ಹೆತ್ತವರಿಗೆ ಅವಿಧೇಯತೆ ತೋರುವುದು, ಮತ್ತು ಇತರ ಮಹಾಪಾಪಗಳನ್ನು ಮುಸಲ್ಮಾನರಲ್ಲಿ ಯಾರಾದರೂ ಮಾಡಿದರೆ, ಅವರು ಅದನ್ನು ಧರ್ಮಸಮ್ಮತವೆಂದು ಪರಿಗಣಿಸುವ ತನಕ, ಅವರನ್ನು ಕಾಫಿರ್ (ಸತ್ಯನಿಷೇಧಿ) ಎಂದು ಘೋಷಿಸಲು ಅನುಮತಿಯಿಲ್ಲ ಎಂದು ವಿಶ್ವಾಸವಿಡುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّ ٱللَّهَ لَا يَغۡفِرُ أَن يُشۡرَكَ بِهِۦ وَيَغۡفِرُ مَا دُونَ ذَٰلِكَ لِمَن يَشَآءُ...﴾

“ನಿಶ್ಚಯವಾಗಿಯೂ ಅಲ್ಲಾಹು ತನ್ನೊಂದಿಗೆ ಸಹಭಾಗಿತ್ವ ಮಾಡಲಾಗುವುದನ್ನು ಕ್ಷಮಿಸುವುದಿಲ್ಲ, ಆದರೆ ಅದಕ್ಕಿಂತ ಕೆಳಗಿನ (ಪಾಪಗಳನ್ನು) ತಾನು ಇಚ್ಛಿಸಿದವರಿಗೆ ಕ್ಷಮಿಸುತ್ತಾನೆ.” [ಅನ್ನಿಸಾ: 48]. ಇದು ಅಲ್ಲಾಹನ ಸಂದೇಶವಾಹಕರಿಂದ (ಸ) ಮುತವಾತಿರ್ (ಅಸಂಖ್ಯಾತ ಮಾರ್ಗಗಳಿಂದ ವರದಿಯಾದ) ಹದೀಸ್‌ಗಳಲ್ಲೂ ದೃಢಪಟ್ಟಿದೆ. ಅವುಗಳಲ್ಲಿ ಒಂದು ಹೀಗಿದೆ:

«إِنَّ اللهَ يُخْرِجُ مِنَ النَّارِ مَنْ كَانَ فِي قَلْبِهِ مِثْقَالُ حَبَّةٍ مِنْ خَرْدَلٍ مِنْ إِيْمَانٍ».

ನಿಶ್ಚಯವಾಗಿಯೂ ಯಾರ ಹೃದಯದಲ್ಲಿ ಸಾಸಿವೆ ಕಾಳಿನಷ್ಟು ಈಮಾನ್ ಇದೆಯೋ ಅವರನ್ನು ಅಲ್ಲಾಹು ನರಕದಿಂದ ಹೊರತೆಗೆಯುತ್ತಾನೆ."12

ಎರಡನೆಯ ಮೂಲತತ್ವ: ದೇವದೂತರುಗಳಲ್ಲಿ ವಿಶ್ವಾಸವಿಡುವುದು,

ಇದು ಎರಡು ವಿಷಯಗಳನ್ನು ಒಳಗೊಂಡಿದೆ: ಮೊದಲನೆಯ ವಿಷಯ: ದೇವದೂತರುಗಳಲ್ಲಿ ಒಟ್ಟಾರೆಯಾಗಿ ವಿಶ್ವಾಸವಿಡುವುದು; ಅಂದರೆ, ಅಲ್ಲಾಹು ತನ್ನ ಆಜ್ಞಾಪಾಲನೆಗಾಗಿ ದೇವದೂತರುಗಳನ್ನು ಸೃಷ್ಟಿಸಿದ್ದಾನೆ ಮತ್ತು ಅವರನ್ನು ಈ ಕೆಳಗಿನಂತೆ ವರ್ಣಿಸಿದ್ದಾನೆ ಎಂದು ವಿಶ್ವಾಸವಿಡುವುದು:

﴿وَقَالُواْ ٱتَّخَذَ ٱلرَّحۡمَٰنُ وَلَدٗاۗ سُبۡحَٰنَهُۥۚ بَلۡ عِبَادٞ مُّكۡرَمُونَ 26 لَا يَسۡبِقُونَهُۥ بِٱلۡقَوۡلِ وَهُم بِأَمۡرِهِۦ يَعۡمَلُونَ27 يَعۡلَمُ مَا بَيۡنَ أَيۡدِيهِمۡ وَمَا خَلۡفَهُمۡ وَلَا يَشۡفَعُونَ إِلَّا لِمَنِ ٱرۡتَضَىٰ وَهُم مِّنۡ خَشۡيَتِهِۦ مُشۡفِقُونَ28﴾

“ಮತ್ತು ಅವರು ಹೇಳಿದರು: ‘ಪರಮ ದಯಾಮಯನು (ಅಲ್ಲಾಹು) ಪುತ್ರನನ್ನು ಸ್ವೀಕರಿಸಿದ್ದಾನೆ.’ ಅವನು ಪರಿಶುದ್ಧನು! ಬದಲಿಗೆ, ಅವರು (ದೇವದೂತರುಗಳು) ಗೌರವಾನ್ವಿತ ದಾಸರಾಗಿದ್ದಾರೆ.

ಅವರು ಅವನ ಮಾತನ್ನು ಮೀರಿ ಮಾತನಾಡುವುದಿಲ್ಲ, ಮತ್ತು ಅವರು ಅವನ ಆಜ್ಞೆಯಂತೆಯೇ ಕಾರ್ಯನಿರ್ವಹಿಸುತ್ತಾರೆ.

ಅವರ ಮುಂದಿರುವುದನ್ನೂ ಮತ್ತು ಅವರ ಹಿಂದಿರುವುದನ್ನೂ ಅವನು ತಿಳಿದಿದ್ದಾನೆ. ಮತ್ತು ಅವನು ಯಾರ ಬಗ್ಗೆ ಸಂಪ್ರೀತನಾಗಿದ್ದಾನೋ ಅವರ ಹೊರತು ಬೇರೆ ಯಾರಿಗೂ ಅವರು ಶಿಫಾರಸ್ಸು ಮಾಡುವುದಿಲ್ಲ. ಮತ್ತು ಅವರು ಅವನ ಭಯದಿಂದ ನಡುಗುತ್ತಾರೆ.” [ಅಲ್-ಅಂಬಿಯಾ: 26-28].

ಅವರು ಅನೇಕ ವರ್ಗಗಳನ್ನು ಹೊಂದಿದ್ದಾರೆ. ಅವರಲ್ಲಿ ಅರ್ಶನ್ನು ಹೊರುವವರು, ಸ್ವರ್ಗ ಮತ್ತು ನರಕದ ಕಾವಲುಗಾರರು, ಮತ್ತು ದಾಸರ ಕೆಲಸ-ಕಾರ್ಯಗಳನ್ನು ದಾಖಲಿಸುವವರು ಸೇರಿದ್ದಾರೆ. ಎರಡನೆಯ ವಿಷಯ: ದೇವದೂತರಲ್ಲಿ ವಿವರಣಾತ್ಮಕವಾಗಿ ವಿಶ್ವಾಸವಿಡುವುದು. ಅಂದರೆ, ಅವರ ಪೈಕಿ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಹೆಸರು ಹೇಳಿದವರಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ ವಹೀ (ದೇವವಾಣಿ) ಯನ್ನು ತರುವ ಜಿಬ್ರೀಲ್, ಮಳೆಯ ಜವಾಬ್ದಾರಿ ಹೊತ್ತ ಮಿಕಾಈಲ್, ನರಕದ ಕಾವಲುಗಾರರಾದ ಮಾಲಿಕ್, ಮತ್ತು ಸೂರ್ (ಕಹಳೆ) ಊದುವ ಜವಾಬ್ದಾರಿ ಹೊತ್ತ ಇಸ್ರಾಫೀಲ್. ಸಹೀಹ್ ಹದೀಸ್‌ಗಳಲ್ಲಿ ಅವರ ಪ್ರಸ್ತಾಪ ಬಂದಿದೆ. ಅವುಗಳಲ್ಲಿ ಒಂದು ಹದೀಸ್ ಆಯಿಷಾ (ರ) ರಿಂದ ಸಹೀಹ್ ಗ್ರಂಥದಲ್ಲಿ ದೃಢಪಟ್ಟಿದೆ. ಪ್ರವಾದಿ (ಸ) ರವರು ಹೇಳಿದರು:

«خُلِقَتِ الـمَلَائِكَةُ مِن نُورٍ، وَخُلِقَ الجَانُّ مِنْ مَارِجٍ مِنْ نَارٍ، وَخُلِقَ آدَمُ مِمَّا وُصِفَ لَكُم».

"ದೇವದೂತರುಗಳನ್ನು ಬೆಳಕಿನಿಂದ ಸೃಷ್ಟಿಸಲಾಗಿದೆ, ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಲಾಗಿದೆ, ಮತ್ತು ಆದಮರನ್ನು ನಿಮಗೆ ವರ್ಣಿಸಲಾದುದರಿಂದ ಸೃಷ್ಟಿಸಲಾಗಿದೆ."13 ಇದನ್ನು ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ವರದಿ ಮಾಡಿದ್ದಾರೆ.

ಮೂರನೆಯ ಮೂಲತತ್ವ: ಗ್ರಂಥಗಳಲ್ಲಿ ವಿಶ್ವಾಸವಿಡುವುದು. ಇದು ಸಹ ಎರಡು ವಿಷಯಗಳನ್ನು ಒಳಗೊಂಡಿದೆ:

ಮೊದಲನೆಯ ವಿಷಯ: ಗ್ರಂಥಗಳಲ್ಲಿ ಒಟ್ಟಾರೆಯಾಗಿ ವಿಶ್ವಾಸವಿಡುವುದು. ಅಂದರೆ, ಅಲ್ಲಾಹು ತನ್ನ ಹಕ್ಕುಗಳನ್ನು ವಿವರಿಸಲು ಮತ್ತು ಅದರ ಕಡೆಗೆ ಆಹ್ವಾನಿಸಲು ತನ್ನ ಪ್ರವಾದಿಗಳು ಮತ್ತು ಸಂದೇಶವಾಹಕರಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಾನೆ ಎಂದು ವಿಶ್ವಾಸವಿಡುವುದು. ಅಲ್ಲಾಹು ಹೇಳುತ್ತಾನೆ:

﴿لَقَدۡ أَرۡسَلۡنَا رُسُلَنَا بِٱلۡبَيِّنَٰتِ وَأَنزَلۡنَا مَعَهُمُ ٱلۡكِتَٰبَ وَٱلۡمِيزَانَ لِيَقُومَ ٱلنَّاسُ بِٱلۡقِسۡطِ...﴾

“ಖಂಡಿತವಾಗಿಯೂ ನಾವು ನಮ್ಮ ಸಂದೇಶವಾಹಕರನ್ನು ಸ್ಪಷ್ಟ ಪುರಾವೆಗಳೊಂದಿಗೆ ಕಳುಹಿಸಿದ್ದೇವೆ ಮತ್ತು ಅವರೊಂದಿಗೆ ಗ್ರಂಥ ಮತ್ತು ತಕ್ಕಡಿಯನ್ನು ಅವತೀರ್ಣಗೊಳಿಸಿದ್ದೇವೆ. ಜನರು ನ್ಯಾಯವನ್ನು ಎತ್ತಿಹಿಡಿಯುವುದಕ್ಕಾಗಿ.” [ಅಲ್-ಹದೀದ್: 25]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿كَانَ ٱلنَّاسُ أُمَّةٗ وَٰحِدَةٗ فَبَعَثَ ٱللَّهُ ٱلنَّبِيِّـۧنَ مُبَشِّرِينَ وَمُنذِرِينَ وَأَنزَلَ مَعَهُمُ ٱلۡكِتَٰبَ بِٱلۡحَقِّ لِيَحۡكُمَ بَيۡنَ ٱلنَّاسِ فِيمَا ٱخۡتَلَفُواْ فِيهِ...﴾

“ಮಾನವರು ಒಂದೇ ಸಮುದಾಯವಾಗಿದ್ದರು. ನಂತರ ಅಲ್ಲಾಹು ಪ್ರವಾದಿಗಳನ್ನು ಶುಭವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಕಳುಹಿಸಿದನು. ಮತ್ತು ಅವರೊಂದಿಗೆ ಸತ್ಯಸಹಿತವಾದ ಗ್ರಂಥವನ್ನು ಅವತೀರ್ಣಗೊಳಿಸಿದನು. ಜನರು ಭಿನ್ನಾಭಿಪ್ರಾಯ ಹೊಂದಿದ್ದ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡುವುದಕ್ಕಾಗಿ.” [ಅಲ್-ಬಕರ: 213].

ಎರಡನೆಯ ವಿಷಯ: ಗ್ರಂಥಗಳಲ್ಲಿ ವಿವರಣಾತ್ಮಕವಾಗಿ ವಿಶ್ವಾಸವಿಡುವುದು. ಅಂದರೆ, ಅಲ್ಲಾಹು ವಿವರಿಸಿ ಹೇಳಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ ತೌರಾತ್, ಇಂಜೀಲ್, ಝಬೂರ್ ಮತ್ತು ಕುರ್‌ಆನ್. ಕುರ್‌ಆನ್ ಅವುಗಳ ಪೈಕಿ ಶ್ರೇಷ್ಠವೂ, ಅಂತಿಮವೂ ಆಗಿದೆ. ಅದು ಅವುಗಳ ಮೇಲ್ವಿಚಾರಣೆ ಮಾಡುತ್ತದೆ, ಮತ್ತು ಅವುಗಳನ್ನು ದೃಢೀಕರಿಸುತ್ತದೆ ಎಂದು ವಿಶ್ವಾಸವಿಡುವುದು. ಅದನ್ನು ಮತ್ತು ಅದರ ಜೊತೆಗೆ ಅಲ್ಲಾಹನ ಸಂದೇಶವಾಹಕರಿಂದ (ಸ) ಬಂದಿರುವ ಸಹೀಹಾದ ಸುನ್ನತ್ತನ್ನು ಅನುಸರಿಸುವುದು ಮತ್ತು ಅದರ ತೀರ್ಪಿಗೆ ಬದ್ಧರಾಗಿರುವುದು ಸಂಪೂರ್ಣ ಮನುಕುಲದ ಮೇಲೆ ಕಡ್ಡಾಯವಾಗಿದೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ತನ್ನ ಸಂದೇಶವಾಹಕರಾದ ಮುಹಮ್ಮದ್ (ಸ) ರನ್ನು ಸಂಪೂರ್ಣ ಜಿನ್ನ್ ಮತ್ತು ಮಾನವರಿಗೆ ಸಂದೇಶವಾಹಕರಾಗಿ ಕಳುಹಿಸಿದನು, ಮತ್ತು ಅವರ ನಡುವೆ ಇದರ ಮೂಲಕ ಅವರು ತೀರ್ಪು ನೀಡುವುದಕ್ಕಾಗಿ ಅವರಿಗೆ ಈ ಕುರ್‌ಆನ್ ಅನ್ನು ಅವತೀರ್ಣಗೊಳಿಸಿದನು. ಅವನು ಇದನ್ನು (ಕುರ್‌ಆನನ್ನು) ಹೃದಯಗಳಲ್ಲಿರುವುದಕ್ಕೆ ಚಿಕಿತ್ಸೆಯಾಗಿ, ಪ್ರತಿಯೊಂದು ವಿಷಯಕ್ಕೂ ವಿವರಣೆಯಾಗಿ, ಮತ್ತು ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶನ ಹಾಗೂ ಕರುಣೆಯಾಗಿ ಮಾಡಿದನು. ಅಲ್ಲಾಹು ಹೇಳುತ್ತಾನೆ:

﴿وَهَٰذَا كِتَٰبٌ أَنزَلۡنَٰهُ مُبَارَكٞ فَٱتَّبِعُوهُ وَٱتَّقُواْ لَعَلَّكُمۡ تُرۡحَمُونَ155﴾

“ಮತ್ತು ಇದು ನಾವು ಅವತೀರ್ಣಗೊಳಿಸಿದ ಅನುಗ್ರಹೀತವಾದ ಗ್ರಂಥ. ಆದ್ದರಿಂದ ಇದನ್ನು ಅನುಸರಿಸಿರಿ ಮತ್ತು (ಅಲ್ಲಾಹನನ್ನು) ಭಯಪಡಿರಿ. ನಿಮ್ಮ ಮೇಲೆ ಕರುಣೆ ತೋರಲ್ಪಡಬಹುದು.” [ಅಲ್-ಅನ್‌ಆಮ್: 155]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَنَزَّلۡنَا عَلَيۡكَ ٱلۡكِتَٰبَ تِبۡيَٰنٗا لِّكُلِّ شَيۡءٖ وَهُدٗى وَرَحۡمَةٗ وَبُشۡرَىٰ لِلۡمُسۡلِمِينَ﴾

“ಮತ್ತು ನಾವು ನಿಮ್ಮ ಮೇಲೆ ಈ ಗ್ರಂಥವನ್ನು ಪ್ರತಿಯೊಂದಕ್ಕೂ ವಿವರಣೆಯಾಗಿ, ಮಾರ್ಗದರ್ಶನವಾಗಿ, ಕರುಣೆಯಾಗಿ ಮತ್ತು ಮುಸಲ್ಮಾನರಿಗೆ ಶುಭವಾರ್ತೆಯಾಗಿ ಅವತೀರ್ಣಗೊಳಿಸಿದ್ದೇವೆ.” [ಅನ್ನಹ್ಲ್: 89]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قُلۡ يَٰٓأَيُّهَا ٱلنَّاسُ إِنِّي رَسُولُ ٱللَّهِ إِلَيۡكُمۡ جَمِيعًا ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۖ لَآ إِلَٰهَ إِلَّا هُوَ يُحۡيِۦ وَيُمِيتُۖ فَـَٔامِنُواْ بِٱللَّهِ وَرَسُولِهِ ٱلنَّبِيِّ ٱلۡأُمِّيِّ ٱلَّذِي يُؤۡمِنُ بِٱللَّهِ وَكَلِمَٰتِهِۦ وَٱتَّبِعُوهُ لَعَلَّكُمۡ تَهۡتَدُونَ158﴾

“ಹೇಳಿರಿ: ‘ಓ ಮಾನವರೇ, ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಕಡೆಗೆ ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. (ಅಂದರೆ) ಆಕಾಶಗಳ ಮತ್ತು ಭೂಮಿಯ ಸಾರ್ವಭೌಮತ್ವವು ಯಾರಿಗೆ ಸೇರಿದೆಯೋ ಅವನ (ಸಂದೇಶವಾಹಕ). ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವ ನೀಡುತ್ತಾನೆ ಮತ್ತು ಮರಣ ನೀಡುತ್ತಾನೆ. ಆದ್ದರಿಂದ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಾದ—ಅಲ್ಲಾಹನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ನಿರಕ್ಷರಿ ಪ್ರವಾದಿಯಲ್ಲಿ ವಿಶ್ವಾಸವಿಡಿರಿ, ಮತ್ತು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗವನ್ನು ಪಡೆಯಬಹುದು’.” [ಅಲ್-ಅಅ್‌ರಾಫ್: 158]. ಇದೇ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ನಾಲ್ಕನೆಯ ಮೂಲತತ್ವ: ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು

ಇದು ಸಹ ಎರಡು ವಿಷಯಗಳನ್ನು ಒಳಗೊಂಡಿದೆ: ಮೊದಲನೆಯ ವಿಷಯ: ಸಂದೇಶವಾಹಕರಲ್ಲಿ ಒಟ್ಟಾರೆಯಾಗಿ ವಿಶ್ವಾಸವಿಡುವುದು. ಅಂದರೆ, ಸರ್ವಶಕ್ತನಾದ ಅಲ್ಲಾಹು ತನ್ನ ದಾಸರ ಬಳಿಗೆ ಅವರಲ್ಲೇ ಕೆಲವರನ್ನು ಶುಭವಾರ್ತೆ ನೀಡುವವರಾಗಿ, ಮುನ್ನೆಚ್ಚರಿಕೆ ನೀಡುವವರಾಗಿ ಮತ್ತು ಸತ್ಯದ ಕಡೆಗೆ ಆಹ್ವಾನಿಸುವವರಾಗಿ ಸಂದೇಶವಾಹಕರನ್ನು ಕಳುಹಿಸಿದ್ದಾನೆ ಎಂದು ವಿಶ್ವಾಸವಿಡುವುದು. ಯಾರು ಅವರ ಕರೆಗೆ ಉತ್ತರಿಸುತ್ತಾರೋ ಅವರು ಸೌಭಾಗ್ಯವನ್ನು ಪಡೆಯುತ್ತಾರೆ, ಮತ್ತು ಯಾರು ಅವರನ್ನು ವಿರೋಧಿಸುತ್ತಾರೋ ಅವರು ನಷ್ಟ ಮತ್ತು ವಿಷಾದವನ್ನು ಅನುಭವಿಸುತ್ತಾರೆ. ಅವರಲ್ಲಿ ಕಟ್ಟಕಡೆಯವರು ಮತ್ತು ಅತಿಶ್ರೇಷ್ಠರು ನಮ್ಮ ಪ್ರವಾದಿಯಾದ ಮುಹಮ್ಮದ್ ಬಿನ್ ಅಬ್ದುಲ್ಲಾ (ಸ) ರವರಾಗಿದ್ದಾರೆ. ಅಲ್ಲಾಹು ಹೇಳುತ್ತಾನೆ:

﴿وَلَقَدۡ بَعَثۡنَا فِي كُلِّ أُمَّةٖ رَّسُولًا أَنِ ٱعۡبُدُواْ ٱللَّهَ وَٱجۡتَنِبُواْ ٱلطَّٰغُوتَ...﴾

“ಮತ್ತು ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯದಲ್ಲೂ ಒಬ್ಬ ಸಂದೇಶವಾಹಕನನ್ನು ಕಳುಹಿಸಿದ್ದೇವೆ (ಈ ಆದೇಶದೊಂದಿಗೆ): ‘ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತ್‌ನಿಂದ (ಮಿಥ್ಯದೇವರುಗಳಿಂದ) ದೂರವಿರಿ’.” [ಅನ್ನಹ್ಲ್: 36]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿رُّسُلٗا مُّبَشِّرِينَ وَمُنذِرِينَ لِئَلَّا يَكُونَ لِلنَّاسِ عَلَى ٱللَّهِ حُجَّةُۢ بَعۡدَ ٱلرُّسُلِ...﴾

“ಶುಭವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ (ಕಳುಹಿಸಲಾದ) ಸಂದೇಶವಾಹಕರು. ಸಂದೇಶವಾಹಕರ ನಂತರ ಜನರಿಗೆ ಅಲ್ಲಾಹನ ವಿರುದ್ಧ ಯಾವುದೇ ಪುರಾವೆ ಇಲ್ಲದಿರುವುದಕ್ಕಾಗಿ.” [ಅನ್ನಿಸಾ: 165]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿مَّا كَانَ مُحَمَّدٌ أَبَآ أَحَدٖ مِّن رِّجَالِكُمۡ وَلَٰكِن رَّسُولَ ٱللَّهِ وَخَاتَمَ ٱلنَّبِيِّـۧنَ...﴾

“ಮುಹಮ್ಮದ್ ನಿಮ್ಮ ಪುರುಷರಲ್ಲಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳ ಮುದ್ರೆ (ಅಂತಿಮ ಪ್ರವಾದಿ) ಆಗಿರುವರು.” [ಅಲ್-ಅಹ್‌ಝಾಬ್:40]

ಎರಡನೆಯ ವಿಷಯ: ಸಂದೇಶವಾಹಕರಲ್ಲಿ ವಿವರಣಾತ್ಮಕವಾಗಿ ವಿಶ್ವಾಸವಿಡುವುದು. ಅಂದರೆ, ಅಲ್ಲಾಹು ಹೆಸರು ಹೇಳಿದ ಅಥವಾ ಅಲ್ಲಾಹನ ಸಂದೇಶವಾಹಕರಿಂದ (ಸ) ಹೆಸರು ದೃಢಪಟ್ಟಿರುವ ಸಂದೇಶವಾಹಕರಲ್ಲಿ ನಾವು ವಿವರಣಾತ್ಮಕವಾಗಿ ಮತ್ತು ನಿರ್ದಿಷ್ಟವಾಗಿ ವಿಶ್ವಾಸವಿಡುವುದು. ಉದಾಹರಣೆಗೆ ನೂಹ್, ಹೂದ್, ಸಾಲಿಹ್, ಇಬ್ರಾಹೀಮ್ ಮುಂತಾದವರು (ಅವರ ಮೇಲೆ, ಅವರ ಕುಟುಂಬ ಮತ್ತು ಅನುಯಾಯಿಗಳ ಮೇಲೆ ಅಲ್ಲಾಹನ ಶಾಂತಿಯಿರಲಿ).

ಐದನೆಯ ಮೂಲತತ್ವ: ಅಂತ್ಯದಿನದಲ್ಲಿ ವಿಶ್ವಾಸವಿಡುವುದು

ಇದು (ಈ ವಿಷಯಗಳನ್ನು) ಒಳಗೊಂಡಿದೆ:

ಮರಣದ ನಂತರ ಸಂಭವಿಸುವ, ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಸ) ತಿಳಿಸಿದ ಪ್ರತಿಯೊಂದು ವಿಷಯದಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ ಸಮಾಧಿಯ ಪರೀಕ್ಷೆ, ಅದರ ಶಿಕ್ಷೆ ಮತ್ತು ಸುಖ, ಕಿಯಾಮತ್ (ಪುನರುತ್ಥಾನ) ದಿನದ ಭಯಾನಕತೆಗಳು, ಕಷ್ಟಗಳು, ಸಿರಾತ್ (ಸೇತುವೆ), ಮೀಝಾನ್ (ತಕ್ಕಡಿ), ಹಿಸಾಬ್ (ವಿಚಾರಣೆ), ಜಝಾಅ್ (ಪ್ರತಿಫಲ), ಮತ್ತು ಜನರ ನಡುವೆ ಕರ್ಮಪತ್ರಗಳನ್ನು ಹಂಚುವುದು—ಕೆಲವರು ತಮ್ಮ ಕರ್ಮಪತ್ರವನ್ನು ತಮ್ಮ ಬಲಗೈಯಲ್ಲಿ ಪಡೆಯುತ್ತಾರೆ, ಕೆಲವರು ತಮ್ಮ ಎಡಗೈಯಲ್ಲಿ ಅಥವಾ ತಮ್ಮ ಬೆನ್ನಿನ ಹಿಂದಿನಿಂದ ಪಡೆಯುತ್ತಾರೆ.

ಇದರಲ್ಲಿ ಸೇರುವ ಇತರ ವಿಷಯಗಳೆಂದರೆ, ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಹೌಝ್ (ನೀರಿನ ಕೊಳ)ದಲ್ಲಿ ವಿಶ್ವಾಸವಿಡುವುದು, ಸ್ವರ್ಗ ಮತ್ತು ನರಕದಲ್ಲಿ ವಿಶ್ವಾಸವಿಡುವುದು, ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನಾದ ಅಲ್ಲಾಹನನ್ನು ನೋಡುತ್ತಾರೆ, ಅವನು ಅವರೊಂದಿಗೆ ಮಾತನಾಡುತ್ತಾನೆ ಮುಂತಾದ ಪವಿತ್ರ ಕುರ್‌ಆನ್ ಹಾಗೂ ಅಲ್ಲಾಹನ ಸಂದೇಶವಾಹಕರಿಂದ (ಸ) ಬಂದಿರುವ ಸಹೀಹಾದ ಸುನ್ನತ್‌ನಲ್ಲಿ ವರದಿಯಾಗಿರುವ ಇತರ ವಿಷಯಗಳಲ್ಲಿ ವಿಶ್ವಾಸವಿಡುವುದು. ದಾಸನು ಇವೆಲ್ಲವನ್ನೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಸ) ವಿವರಿಸಿದ ರೀತಿಯಲ್ಲಿ ವಿಶ್ವಾಸವಿಡುವುದು ಮತ್ತು ದೃಢೀಕರಿಸುವುದು ಕಡ್ಡಾಯವಾಗಿದೆ.

 

ಆರನೆಯ ಮೂಲತತ್ವ: ಕದ್ರ್ (ವಿಧಿ) ಯಲ್ಲಿ ವಿಶ್ವಾಸವಿಡುವುದು

ಇದು ನಾಲ್ಕು ವಿಷಯಗಳಲ್ಲಿ ವಿಶ್ವಾಸವಿಡುವುದನ್ನು ಒಳಗೊಂಡಿದೆ:

ಮೊದಲನೆಯ ವಿಷಯ: ಸರ್ವಶಕ್ತನಾದ ಅಲ್ಲಾಹು ಏನಾಗಿತ್ತು ಮತ್ತು ಏನಾಗುತ್ತದೆ (ಭೂತ ಮತ್ತು ಭವಿಷ್ಯ) ಎಂಬುದನ್ನು ತಿಳಿದಿದ್ದಾನೆ, ಮತ್ತು ತನ್ನ ದಾಸರ ಸ್ಥಿತಿಗತಿಗಳು, ಅವರ ಜೀವನೋಪಾಯ, ಅವರ ಆಯುಷ್ಯ, ಅವರ ಕರ್ಮಗಳು ಮತ್ತು ಅವರ ಇತರ ಎಲ್ಲಾ ವಿಷಯಗಳನ್ನು ತಿಳಿದಿದ್ದಾನೆ ಎಂದು ವಿಶ್ವಾಸವಿಡುವುದು. ಇವುಗಳಲ್ಲಿ ಯಾವುದೂ ಸರ್ವಶಕ್ತನಾದ ಅಲ್ಲಾಹನಿಗೆ ಮರೆಯಾಗಿಲ್ಲ. ಅಲ್ಲಾಹು ಹೇಳುತ್ತಾನೆ:

﴿...وَٱعۡلَمُوٓاْ أَنَّ ٱللَّهَ بِكُلِّ شَيۡءٍ عَلِيمٞ﴾

“ಮತ್ತು ಅಲ್ಲಾಹು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದಾನೆಂದು ಅರಿತುಕೊಳ್ಳಿ.” [ಅಲ್-ಬಕರ: 231]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...لِتَعۡلَمُوٓاْ أَنَّ ٱللَّهَ عَلَىٰ كُلِّ شَيۡءٖ قَدِيرٞ وَأَنَّ ٱللَّهَ قَدۡ أَحَاطَ بِكُلِّ شَيۡءٍ عِلۡمَۢا﴾

“ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಸಾಮರ್ಥ್ಯವುಳ್ಳವನು ಮತ್ತು ಅಲ್ಲಾಹು ಪ್ರತಿಯೊಂದು ವಿಷಯವನ್ನೂ ತನ್ನ ಜ್ಞಾನದಿಂದ ಆವರಿಸಿಕೊಂಡಿದ್ದಾನೆಂದು ನೀವು ತಿಳಿಯುವುದಕ್ಕಾಗಿ.” [ಅತ್ತಲಾಕ್: 12]

ಎರಡನೆಯ ವಿಷಯ: ಅಲ್ಲಾಹು ತಾನು ನಿರ್ಣಯಿಸಿದ ಮತ್ತು ವಿಧಿಸಿದ ಪ್ರತಿಯೊಂದನ್ನೂ ಬರೆದಿಟ್ಟಿದ್ದಾನೆ ಎಂದು ವಿಶ್ವಾಸವಿಡುವುದು. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قَدۡ عَلِمۡنَا مَا تَنقُصُ ٱلۡأَرۡضُ مِنۡهُمۡۖ وَعِندَنَا كِتَٰبٌ حَفِيظُۢ 4﴾

“ಭೂಮಿಯು ಅವರಿಂದ ಏನು ಕಡಿಮೆ ಮಾಡುತ್ತದೆ ಎಂಬುದು ನಮಗೆ ತಿಳಿದಿದೆ. ಮತ್ತು ನಮ್ಮ ಬಳಿ ಸುರಕ್ಷಿತವಾದ ಗ್ರಂಥವಿದೆ.” [ಕ್ವಾಫ್: 4]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَكُلَّ شَيۡءٍ أَحۡصَيۡنَٰهُ فِيٓ إِمَامٖ مُّبِينٖ﴾

“ಮತ್ತು ನಾವು ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾದ ಇಮಾಮ್ (ಗ್ರಂಥ) ನಲ್ಲಿ ದಾಖಲಿಸಿದ್ದೇವೆ.” [ಯಾಸೀನ್: 12]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿أَلَمۡ تَعۡلَمۡ أَنَّ ٱللَّهَ يَعۡلَمُ مَا فِي ٱلسَّمَآءِ وَٱلۡأَرۡضِۚ إِنَّ ذَٰلِكَ فِي كِتَٰبٍۚ إِنَّ ذَٰلِكَ عَلَى ٱللَّهِ يَسِيرٞ70﴾

“ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದನ್ನೆಲ್ಲಾ ಅಲ್ಲಾಹನು ತಿಳಿದಿದ್ದಾನೆಂದು ನಿಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದು ಒಂದು ಗ್ರಂಥದಲ್ಲಿದೆ. ಖಂಡಿತವಾಗಿಯೂ ಅದು ಅಲ್ಲಾಹನಿಗೆ ಸುಲಭವಾಗಿದೆ.” [ಅಲ್-ಹಜ್ಜ್: 70].

ಮೂರನೆಯ ವಿಷಯ: ಸರ್ವಶಕ್ತನಾದ ಅಲ್ಲಾಹನ ಜಾರಿಗೆ ಬರುವ (ಚಾಲ್ತಿಗೆ ಬರುವ) ಇಚ್ಛೆಯಲ್ಲಿ ವಿಶ್ವಾಸವಿಡುವುದು. ಅವನು ಇಚ್ಛಿಸಿದ್ದು ಸಂಭವಿಸುತ್ತದೆ, ಮತ್ತು ಅವನು ಇಚ್ಛಿಸದೇ ಇರುವುದು ಸಂಭವಿಸುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...إِنَّ ٱللَّهَ يَفۡعَلُ مَا يَشَآءُ﴾

“ನಿಶ್ಚಯವಾಗಿಯೂ ಅಲ್ಲಾಹು ತಾನು ಇಚ್ಛಿಸಿದ್ದನ್ನು ಮಾಡುತ್ತಾನೆ.” [ಅಲ್-ಹಜ್ಜ್: 18]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّمَآ أَمۡرُهُۥٓ إِذَآ أَرَادَ شَيۡـًٔا أَن يَقُولَ لَهُۥ كُن فَيَكُونُ82﴾

“ನಿಶ್ಚಯವಾಗಿಯೂ ಅವನ ಆಜ್ಞೆಯು, ಅವನು ಯಾವುದೇ ವಿಷಯವನ್ನು ಬಯಸಿದಾಗ, ಅದಕ್ಕೆ ‘ಆಗು’ ಎಂದು ಹೇಳುವುದು ಮಾತ್ರವಾಗಿದೆ. ಆಗ ಅದು ಆಗಿಬಿಡುತ್ತದೆ.” [ಯಾಸೀನ್: 82]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلۡعَٰلَمِينَ29﴾

“ಮತ್ತು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದ ಹೊರತು ನೀವು ಇಚ್ಛಿಸಲಾರಿರಿ.” [ಅತ್ತಕ್ವೀರ್: 29].

ನಾಲ್ಕನೆಯ ವಿಷಯ: ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳನ್ನು ಅಲ್ಲಾಹನೇ ಸೃಷ್ಟಿಸಿದ್ದಾನೆ ಎಂದು ವಿಶ್ವಾಸವಿಡುವುದು. ಅವನ ಹೊರತು ಬೇರೆ ಸೃಷ್ಟಿಕರ್ತನಿಲ್ಲ, ಮತ್ತು ಅವನ ಹೊರತು ಬೇರೆ ಪರಿಪಾಲಕನಿಲ್ಲ. ಸರ್ವಶಕ್ತನು ಹೇಳುತ್ತಾನೆ:

﴿ٱللَّهُ خَٰلِقُ كُلِّ شَيۡءٖۖ وَهُوَ عَلَىٰ كُلِّ شَيۡءٖ وَكِيلٞ62﴾

“ಅಲ್ಲಾಹು ಪ್ರತಿಯೊಂದರ ಸೃಷ್ಟಿಕರ್ತನು; ಮತ್ತು ಅವನು ಪ್ರತಿಯೊಂದರ ಮೇಲ್ವಿಚಾರಕನು.” [ಅಝ್ಝುಮರ್:62]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلنَّاسُ ٱذۡكُرُواْ نِعۡمَتَ ٱللَّهِ عَلَيۡكُمۡۚ هَلۡ مِنۡ خَٰلِقٍ غَيۡرُ ٱللَّهِ يَرۡزُقُكُم مِّنَ ٱلسَّمَآءِ وَٱلۡأَرۡضِۚ لَآ إِلَٰهَ إِلَّا هُوَۖ فَأَنَّىٰ تُؤۡفَكُونَ3﴾

“ಓ ಮಾನವರೇ, ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹವನ್ನು ಸ್ಮರಿಸಿರಿ. ಅಲ್ಲಾಹನ ಹೊರತು ನಿಮಗೆ ಆಕಾಶದಿಂದ ಮತ್ತು ಭೂಮಿಯಿಂದ ಆಹಾರವನ್ನು ನೀಡುವ ಬೇರೆ ಸೃಷ್ಟಿಕರ್ತನು ಇದ್ದಾನೆಯೇ? ಅವನ ಹೊರತು ಬೇರೆ ಯಾವ ಆರಾಧ್ಯನೂ ಇಲ್ಲ. ಹಾಗಿದ್ದೂ ನೀವು ಎಲ್ಲಿ ದಾರಿತಪ್ಪಿಸಲ್ಪಡುತ್ತಿದ್ದೀರಿ?” [ಫಾತಿರ್: 3].

ಆದ್ದರಿಂದ, ಕದ್ರ್ (ವಿಧಿ) ನಲ್ಲಿರುವ ವಿಶ್ವಾಸವು ಈ ಎಲ್ಲಾ ನಾಲ್ಕು ವಿಷಯಗಳಲ್ಲಿರುವ ವಿಶ್ವಾಸವನ್ನು ಒಳಗೊಂಡಿದೆ. ಇದು ಅಹ್ಲುಸ್ಸುನ್ನ ವಲ್-ಜಮಾಅ ದವರ ವಿಶ್ವಾಸವಾಗಿದೆ. ಇದಕ್ಕೆ ವಿರುದ್ಧವಾಗಿ ಕೆಲವನ್ನು ನಿರಾಕರಿಸುವ ಬಿದ್ಅತ್ (ಧರ್ಮದಲ್ಲಿ ಹೊಸ ಆವಿಷ್ಕಾರ ಮಾಡುವವರು) ನವರಿದ್ದಾರೆ.

ಅಹ್ಲುಸ್ಸುನ್ನ ದವರು ವಿಶ್ವಾಸವಿಡುವ ಸರಿಯಾದ ವಿಶ್ವಾಸದ (ಅಕೀದದ) ಪ್ರಮುಖ ವಿಷಯಗಳಲ್ಲಿ ಒಳಪಡುವ ಇತರ ವಿಷಯಗಳೆಂದರೆ: ಅಲ್ಲಾಹನಿಗಾಗಿ ಪ್ರೀತಿಸುವುದು ಮತ್ತು ಅಲ್ಲಾಹನಿಗಾಗಿ ದ್ವೇಷಿಸುವುದು, ಹಾಗೂ ಅಲ್ಲಾಹನಿಗಾಗಿ ಸ್ನೇಹ ಬೆಳೆಸುವುದು ಮತ್ತು ಅಲ್ಲಾಹನಿಗಾಗಿ ವೈರತ್ವ ಸಾಧಿಸುವುದು. ಇದುವೇ 'ಅಲ್-ವಲಾ ವಲ್-ಬರಾ' (ನಿಷ್ಠೆ ಮತ್ತು ವಿಮುಕ್ತತೆ) ಯ ವಿಶ್ವಾಸವಾಗಿದೆ. ಇದು ಸರ್ವಶಕ್ತನಾದ ಅಲ್ಲಾಹನಲ್ಲಿರುವ ವಿಶ್ವಾಸದ ಒಂದು ಭಾಗವಾಗಿದೆ.

ಆದ್ದರಿಂದ, ಸತ್ಯವಿಶ್ವಾಸಿಯು ಸತ್ಯವಿಶ್ವಾಸಿಗಳನ್ನು ಪ್ರೀತಿಸುತ್ತಾನೆ ಮತ್ತು ಅವರೊಂದಿಗೆ ಸ್ನೇಹ ಬೆಳೆಸುತ್ತಾನೆ. ಸತ್ಯನಿಷೇಧಿಗಳನ್ನು ದ್ವೇಷಿಸುತ್ತಾನೆ ಮತ್ತು ಅವರೊಂದಿಗೆ ವೈರತ್ವ ಸಾಧಿಸುತ್ತಾನೆ. ಈ ಉಮ್ಮತ್‌ನ (ಸಮುದಾಯದ) ಸತ್ಯವಿಶ್ವಾಸಿಗಳಲ್ಲಿ ಅಗ್ರಗಣ್ಯರು ಅಲ್ಲಾಹನ ಸಂದೇಶವಾಹಕರ (ಸ) ಸಹಚರರು (ಸಹಾಬಿಗಳು) ಆಗಿದ್ದಾರೆ. ಇದು ಅಹ್ಲುಸ್ಸುನ್ನ ವಲ್-ಜಮಾಅ ದವರಲ್ಲಿ ದೃಢೀಕರಣಗೊಂಡ ವಿಷಯವಾಗಿದೆ. ಅವರು ಅವರನ್ನು (ಸಹಾಬಿಗಳನ್ನು) ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಸ್ನೇಹ ಬೆಳೆಸುತ್ತಾರೆ. ಪ್ರವಾದಿಗಳ ನಂತರ ಅವರೇ ಅತಿಶ್ರೇಷ್ಠ ಜನರು ಎಂದು ವಿಶ್ವಾಸವಿಡುತ್ತಾರೆ. ಪ್ರವಾದಿ (ಸ) ರವರು ಹೇಳಿದರು:

«خَيْرُ القُرُونِ قَرْنِي ثُمَّ الَّذِينَ يَلُونَهُمْ ثُمَّ الَّذِينَ يَلُونَهُم».

"ಶತಮಾನಗಳಲ್ಲಿ ಅತ್ಯುತ್ತಮವಾದುದು ನನ್ನ ಶತಮಾನ, ನಂತರ ಅವರನ್ನು ಅನುಸರಿಸುವವರು, ನಂತರ ಅವರನ್ನು ಅನುಸರಿಸುವವರು."14 [ಬುಖಾರಿ ಮತ್ತು ಮುಸ್ಲಿಂ]،.

ಮತ್ತು ಅವರಲ್ಲಿ (ಸಹಾಬಿಗಳಲ್ಲಿ) ಅತಿಶ್ರೇಷ್ಠರು ಅಬೂ ಬಕರ್ ಸಿದ್ದೀಕ್, ನಂತರ ಉಮರ್ ಅಲ್-ಫಾರೂಕ್, ನಂತರ ಉಸ್ಮಾನ್ ಝುನ್ನೂರೈನ್, ನಂತರ ಅಲಿ ಅಲ್-ಮುರ್ತಝಾ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ), ನಂತರ (ಸ್ವರ್ಗದ ಶುಭವಾರ್ತೆ ಪಡೆದ) ಹತ್ತು ಜನರಲ್ಲಿ ಉಳಿದವರು, ನಂತರ ಇತರ ಸಹಾಬಿಗಳು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಎಂದು ಅವರು ವಿಶ್ವಾಸವಿಡುತ್ತಾರೆ. ಅವರ (ಸಹಾಬಿಗಳ) ನಡುವೆ ಸಂಭವಿಸಿದ ಭಿನ್ನಾಭಿಪ್ರಾಯಗಳ ಬಗ್ಗೆ ಅವರು ಮೌನವಹಿಸುತ್ತಾರೆ, ಮತ್ತು ಆ ವಿಷಯದಲ್ಲಿ ಅವರು (ಸಹಾಬಿಗಳು) 'ಮುಜ್ತಹಿದ್' ಗಳಾಗಿದ್ದು, ಅವರ ಪೈಕಿ ಸರಿಯಾದ ತೀರ್ಮಾನ ಕೈಗೊಂಡವರಿಗೆ ಎರಡು ಪ್ರತಿಫಲಗಳು ಮತ್ತು ತಪ್ಪಾದ ತೀರ್ಮಾನ ಕೈಗೊಂಡವರಿಗೆ ಒಂದು ಪ್ರತಿಫಲ ಇರುವುದು ಎಂದು ಅವರು ವಿಶ್ವಾಸವಿಡುತ್ತಾರೆ.

ಅವರು ಅಲ್ಲಾಹನ ಸಂದೇಶವಾಹಕರ (ಸ) ಕುಟುಂಬದವರಲ್ಲಿ ಸೇರಿದ ಸತ್ಯವಿಶ್ವಾಸಿಗಳನ್ನು ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಸ್ನೇಹ ಬೆಳೆಸುತ್ತಾರೆ. ಹಾಗೆಯೇ, ಅಲ್ಲಾಹನ ಸಂದೇಶವಾಹಕರ (ಸ) ಪತ್ನಿಯರಾದ ಸತ್ಯವಿಶ್ವಾಸಿಗಳ ಮಾತೆಯರೊಂದಿಗೆ ಸ್ನೇಹ ಬೆಳೆಸುತ್ತಾರೆ ಮತ್ತು ಅವರೆಲ್ಲರ ಮೇಲೂ ಅಲ್ಲಾಹನ ಸಂಪ್ರೀತಿ ಇರಲೆಂದು ಪ್ರಾರ್ಥಿಸುತ್ತಾರೆ. ಅಲ್ಲಾಹನ ಸಂದೇಶವಾಹಕರ (ಸ) ಸಹಚರರನ್ನು (ಸಹಾಬಿಗಳನ್ನು) ದ್ವೇಷಿಸುವ ಮತ್ತು ನಿಂದಿಸುವ, ಹಾಗೂ ಅಹ್ಲುಲ್-ಬೈತ್ (ಪ್ರವಾದಿ ಕುಟುಂಬ) ಬಗ್ಗೆ ಅತಿರೇಕವಾಗಿ ವರ್ತಿಸಿ, ಸರ್ವಶಕ್ತನಾದ ಅಲ್ಲಾಹು ಅವರಿಗೆ ನೀಡಿದ ಸ್ಥಾನಮಾನಕ್ಕಿಂತ ಅವರನ್ನು ಉನ್ನತೀಕರಿಸುವ ರವಾಫಿದ್ (ಶಿಯಾ) ಪಂಗಡದ ಮಾರ್ಗದಿಂದ ಅವರು ದೂರವಿರುತ್ತಾರೆ. ಹಾಗೆಯೇ, ಮಾತು ಅಥವಾ ಕ್ರಿಯೆಯ ಮೂಲಕ ಅಹ್ಲುಲ್-ಬೈತ್‌ಗೆ ನೋವುಂಟುಮಾಡುವ ನವಾಸಿಬ್ ಪಂಗಡದ ಮಾರ್ಗದಿಂದಲೂ ಅವರು ದೂರವಿರುತ್ತಾರೆ.

ನಾವು ಇಲ್ಲಿಯವರೆಗೆ ಉಲ್ಲೇಖಿಸಿದ್ದೆಲ್ಲವೂ, ಅಲ್ಲಾಹು ತನ್ನ ಸಂದೇಶವಾಹಕರಾದ ಮುಹಮ್ಮದ್ (ಸ) ರೊಂದಿಗೆ ಕಳುಹಿಸಿದ ಸರಿಯಾದ ವಿಶ್ವಾಸದಲ್ಲಿ ಒಳಪಡುತ್ತವೆ. ಇದುವೇ ನಾವು ವಿಶ್ವಾಸವಿಡಬೇಕಾದ, ದೃಢವಾಗಿ ಹಿಡಿದುಕೊಳ್ಳಬೇಕಾದ, ಅದರ ಮೇಲೆ ಸ್ಥಿರವಾಗಿರಬೇಕಾದ ಮತ್ತು ಅದಕ್ಕೆ ವಿರುದ್ಧವಾದುದರ ಬಗ್ಗೆ ಎಚ್ಚರವಾಗಿರಬೇಕಾದ ವಿಶ್ವಾಸವಾಗಿದೆ. ಇದುವೇ ವಿಜಯಶಾಲಿ ಪಂಗಡವಾದ ಅಹ್ಲುಸ್ಸುನ್ನ ವಲ್-ಜಮಾಅ ದವರ ವಿಶ್ವಾಸವಾಗಿದೆ. ಆ ಪಂಗಡದ ಬಗ್ಗೆ ಪ್ರವಾದಿ (ಸ) ರವರು ಹೇಳಿದರು:

«لَا تَـزَالُ طَائِفَةٌ مِنْ أُمَّتِي ‌ظَاهِرِينَ ‌عَلَى ‌الحَقِّ، لَا يَضُرُّهُمْ مَنْ خَذَلَهُمْ، حَتَّى يَأْتِيَ أَمْرُ اللهِ وَهُمْ كَذَلِكَ».

ನನ್ನ ಉಮ್ಮತ್‌ನ (ಸಮುದಾಯದ) ಒಂದು ಗುಂಪು ಸತ್ಯದ ಮೇಲೆ ಯಾವಾಗಲೂ ಪ್ರಕಟವಾಗುತ್ತಲೇ ಇರುತ್ತಾರೆ. ಅವರನ್ನು ಕೈಬಿಡುವವರಿಂದ ಅವರಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲಾಹನ ಆದೇಶ ಬರುವವರೆಗೂ ಅವರು ಹಾಗೆಯೇ ಇರುತ್ತಾರೆ."15 ಇನ್ನೊಂದು ವರದಿಯಲ್ಲಿ:

«لَا تَزَالُ طَائِفَةٌ مِنْ أُمَّتِي عَلَى الحَقِّ مَنْصُورَةٌ».

"ನನ್ನ ಉಮ್ಮತ್‌ನ (ಸಮುದಾಯದ) ಒಂದು ಗುಂಪು ಸತ್ಯದ ಮೇಲೆ ಯಾವಾಗಲೂ ಸಹಾಯ ಪಡೆಯುತ್ತಲೇ ಇರುತ್ತಾರೆ."16 ಪ್ರವಾದಿ (ಸ) ರವರು ಹೇಳಿದರು:

«افْتَرَقَتِ اليَهُودُ عَلَى إِحْدَى وَسَبْعِينَ فِرْقَةً، وَافْتَرَقَتِ النَّصَارَى عَلَى اثْنَتَيْنِ وَسَبْعِينَ فِرْقَةً، وَسَتَفْتَرِقُ هَذِهِ الأُمَّةُ عَلَى ثَلَاثِ وَسَبْعِينَ فِرْقَةً كُلُّهَا فِي النَّارِ إِلَّا وَاحِدَةً فَقَالَ الصَّحَابَةُ: مَنْ هِيَ يَا رَسُولَ اللهِ؟ قَالَ: مَنْ كَانَ عَلَى مِثْلِ مَا أَنَا عَلَيْهِ وَأَصْحَابِي».

"ಯಹೂದಿಗಳು ಎಪ್ಪತ್ತೊಂದು ಪಂಗಡಗಳಾಗಿ ಒಡೆದುಹೋದರು. ಕ್ರೈಸ್ತರು ಎಪ್ಪತ್ತೆರಡು ಪಂಗಡಗಳಾಗಿ ಒಡೆದುಹೋದರು. ಈ ಉಮ್ಮತ್ (ಮುಸ್ಲಿಮ್ ಸಮುದಾಯ) ಎಪ್ಪತ್ಮೂರು ಪಂಗಡಗಳಾಗಿ ಒಡೆದುಹೋಗುವರು. ಒಂದನ್ನು ಹೊರತುಪಡಿಸಿ ಉಳಿದುದೆಲ್ಲವೂ ನರಕದಲ್ಲಿರುತ್ತವೆ." ಸಹಾಬಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅದು ಯಾರು?" ಅವರು ಹೇಳಿದರು: "ನಾನು ಮತ್ತು ನನ್ನ ಸಹಚರರು ಇರುವ ಮಾರ್ಗದಲ್ಲಿ ಇರುವವರು."17

ಸರಿಯಾದ ವಿಶ್ವಾಸಕ್ಕೆ (ಅಕೀದಕ್ಕೆ) ವಿರುದ್ಧವಾದ ವಿಶ್ವಾಸಗಳು

ಈ ವಿಶ್ವಾಸದಿಂದ ತಪ್ಪಿದವರು ಮತ್ತು ಅದಕ್ಕೆ ವಿರುದ್ಧವಾಗಿ ಸಾಗುವವರಲ್ಲಿ ಅನೇಕ ವರ್ಗಗಳಿವೆ. ಅವರಲ್ಲಿ ವಿಗ್ರಹಗಳು, ಮೂರ್ತಿಗಳು, ದೇವದೂತರು, ಔಲಿಯಾಗಳು (ಸಂತರು), ಜಿನ್ನ್‌ಗಳು, ಮರಗಳು, ಕಲ್ಲುಗಳು ಮತ್ತು ಇತರ ವಸ್ತುಗಳನ್ನು ಪೂಜಿಸುವವರಿದ್ದಾರೆ. ಇವರು ಸಂದೇಶವಾಹಕರುಗಳ ಆಹ್ವಾನಕ್ಕೆ ಸ್ಪಂದಿಸಲಿಲ್ಲ. ಬದಲಿಗೆ ಅವರನ್ನು ವಿರೋಧಿಸಿದರು ಮತ್ತು ಹಠಮಾರಿತನ ತೋರಿದರು. ನಮ್ಮ ಪ್ರವಾದಿ ಮುಹಮ್ಮದ್ (ಸ) ರೊಂದಿಗೆ ಖುರೈಷರು ಮತ್ತು ಅರಬರ ವಿವಿಧ ಪಂಗಡಗಳು ಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಅವರು ಬಯಕೆಗಳನ್ನು ಪೂರೈಸಲು, ರೋಗಿಗಳನ್ನು ಗುಣಪಡಿಸಲು ಮತ್ತು ಶತ್ರುಗಳ ವಿರುದ್ಧ ಸಹಾಯ ಮಾಡಲು ತಮ್ಮ ಆರಾಧ್ಯ ದೇವರುಗಳೊಂದಿಗೆ ಬೇಡಿಕೊಳ್ಳುತ್ತಿದ್ದರು, ಅವರಿಗಾಗಿ ಬಲಿ ಅರ್ಪಿಸುತ್ತಿದ್ದರು ಮತ್ತು ಹರಕೆ ಹೊರುತ್ತಿದ್ದರು. ಅಲ್ಲಾಹನ ಸಂದೇಶವಾಹಕರು (ಸ) ಇದನ್ನು ಖಂಡಿಸಿದಾಗ ಮತ್ತು ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸಲು ಅವರಿಗೆ ಆದೇಶಿಸಿದಾಗ, ಅವರು ಆಶ್ಚರ್ಯಚಕಿತರಾದರು ಮತ್ತು ಅದನ್ನು ನಿರಾಕರಿಸಿದರು. ಅವರು ಹೇಳಿದರು:

﴿أَجَعَلَ ٱلۡأٓلِهَةَ إِلَٰهٗا وَٰحِدًاۖ إِنَّ هَٰذَا لَشَيۡءٌ عُجَابٞ5﴾

“ಅವರು (ಮುಹಮ್ಮದ್) ಎಲ್ಲಾ ದೇವರುಗಳನ್ನು ಒಂದೇ ದೇವರನ್ನಾಗಿ ಮಾಡಿದ್ದಾರೆಯೇ? ನಿಶ್ಚಯವಾಗಿಯೂ ಇದು ಆಶ್ಚರ್ಯಕರ ವಿಷಯವಾಗಿದೆ!” [ಸ್ವಾದ್: 5].

ಅಲ್ಲಾಹನ ಸಂದೇಶವಾಹಕರು (ಸ) ಅವರನ್ನು ಅಲ್ಲಾಹನ ಕಡೆಗೆ ಆಹ್ವಾನಿಸುತ್ತಲೇ ಇದ್ದರು, ಶಿರ್ಕ್‌ನ ಬಗ್ಗೆ ಅವರನ್ನು ಎಚ್ಚರಿಸುತ್ತಿದ್ದರು, ಮತ್ತು ಅವರನ್ನು ಯಾವುದಕ್ಕೆ ಆಹ್ವಾನಿಸುತ್ತಿದ್ದರೋ ಅದರ ವಾಸ್ತವಿಕತೆಯನ್ನು ಅವರಿಗೆ ವಿವರಿಸಿಕೊಡುತ್ತಿದ್ದರು. ಕೊನೆಗೆ, ಅಲ್ಲಾಹು ಅವರಲ್ಲಿ ಕೆಲವರಿಗೆ ಮಾರ್ಗದರ್ಶನ ನೀಡಿದನು, ನಂತರ ಅವರು ಗುಂಪು ಗುಂಪಾಗಿ ಅಲ್ಲಾಹನ ಧರ್ಮವನ್ನು ಪ್ರವೇಶಿಸಿದರು. ಹೀಗೆ, ಅಲ್ಲಾಹನ ಸಂದೇಶವಾಹಕರು (ಸ) ಮತ್ತು ಅವರ ಸಹಚರರು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸಿದವರ ನಿರಂತರ ಆಹ್ವಾನ ಮತ್ತು ದೀರ್ಘಕಾಲದ ಹೋರಾಟದ ಬಳಿಕ ಅಲ್ಲಾಹನ ಧರ್ಮವು ಇತರ ಎಲ್ಲಾ ಧರ್ಮಗಳ ಮೇಲೆ ಪ್ರಾಬಲ್ಯ ಸಾಧಿಸಿತು. ನಂತರ ಪರಿಸ್ಥಿತಿಗಳು ಬದಲಾದವು, ಮತ್ತು ಬಹುಸಂಖ್ಯಾತ ಜನರ ಮೇಲೆ ಅಜ್ಞಾನವು ಹತೋಟಿಯನ್ನು ಸಾಧಿಸಿತು. ಹೀಗೆ ಹೆಚ್ಚಿನವರು ಪ್ರವಾದಿಗಳು ಮತ್ತು ಔಲಿಯಾಗಳ ಬಗ್ಗೆ ಅತಿರೇಕದಿಂದ ವರ್ತಿಸುವುದು, ಅವರನ್ನು ಪ್ರಾರ್ಥಿಸುವುದು, ಅವರಿಂದ ಸಹಾಯ ಯಾಚಿಸುವುದು ಮತ್ತು ಇತರ ಶಿರ್ಕ್‌ನ ಪ್ರಬೇಧಗಳನ್ನು ಮಾಡುವ ಮೂಲಕ ಜಾಹಿಲಿಯ್ಯದ (ಅಜ್ಞಾನದ ಕಾಲದ) ಧರ್ಮಕ್ಕೆ ಮರಳಿದರು. "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂಬುದರ ಅರ್ಥವನ್ನು ಅರಬ್ ಸತ್ಯನಿಷೇಧಿಗಳು ಅರ್ಥಮಾಡಿಕೊಂಡಂತೆ ಇವರು ಅರ್ಥಮಾಡಿಕೊಳ್ಳಲಿಲ್ಲ. ಅಲ್ಲಾಹನೇ ಸಹಾಯ ಮಾಡುವವನು.

ಪ್ರವಾದಿತ್ವದ ಯುಗದಿಂದ ದೂರವಾದ ಕಾರಣ ಮತ್ತು ಅಜ್ಞಾನವು ಹೆಚ್ಚಾದ ಕಾರಣ ಈ ಶಿರ್ಕ್ ನಮ್ಮ ಕಾಲದವರೆಗೂ ಜನರಲ್ಲಿ ಹರಡುತ್ತಲೇ ಇದೆ.

ಇಂದಿನವರ ಸಂದೇಹವು ಹಿಂದಿನವರ ಸಂದೇಹವೇ ಆಗಿದೆ. ಅದು ಅವರು ಹೇಳುವ ಈ ಮಾತು:

﴿...هَٰٓؤُلَآءِ شُفَعَٰٓؤُنَا عِندَ ٱللَّهِ...﴾

“ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸುಗಾರರಾಗಿದ್ದಾರೆ.” [ಯೂನುಸ್: 18]. ಮತ್ತು ಅವರ ಈ ಮಾತು:

﴿...مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ...﴾

“ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರವಾಗಿಸಲು ಮಾತ್ರ ನಾವು ಅವರನ್ನು ಆರಾಧಿಸುತ್ತೇವೆ.” [ಅಝ್ಝುಮರ್: 3] ಅಲ್ಲಾಹು ಈ ಸಂದೇಹವನ್ನು ನಿರರ್ಥಕಗೊಳಿಸಿದ್ದಾನೆ ಮತ್ತು ಯಾರು ತನ್ನನ್ನು ಬಿಟ್ಟು ಬೇರೆಯವರನ್ನು ಆರಾಧಿಸುತ್ತಾರೋ, ಅವರು ಯಾರೇ ಆಗಿರಲಿ, ಅವರು ತನ್ನೊಂದಿಗೆ ಶಿರ್ಕ್ ಮಾಡಿದ್ದಾರೆ ಮತ್ತು ಕುಫ್ರ್ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾನೆ. ಅಲ್ಲಾಹು ಹೇಳುತ್ತಾನೆ:

﴿وَيَعۡبُدُونَ مِن دُونِ ٱللَّهِ مَا لَا يَضُرُّهُمۡ وَلَا يَنفَعُهُمۡ وَيَقُولُونَ هَٰٓؤُلَآءِ شُفَعَٰٓؤُنَا عِندَ ٱللَّهِ...﴾

“ಮತ್ತು ಅವರು ಅಲ್ಲಾಹನ ಹೊರತು, ತಮಗೆ ಹಾನಿ ಮತ್ತು ಲಾಭ ಮಾಡಲಾರದ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ‘ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸ್ಸುಗಾರರು’ ಎಂದು ಹೇಳುತ್ತಾರೆ.” [ಯೂನುಸ್: 18]. ಆಗ ಅಲ್ಲಾಹು ಅವರಿಗೆ ಹೀಗೆ ಉತ್ತರಿಸಿದನು:

﴿قُلۡ أَتُنَبِّـُٔونَ ٱللَّهَ بِمَا لَا يَعۡلَمُ فِي ٱلسَّمَٰوَٰتِ وَلَا فِي ٱلۡأَرۡضِۚ سُبۡحَٰنَهُۥ وَتَعَٰلَىٰ عَمَّا يُشۡرِكُونَ18﴾

“ಹೇಳಿರಿ: ‘ಆಕಾಶಗಳಲ್ಲಿ ಅಥವಾ ಭೂಮಿಯಲ್ಲಿ ಅಲ್ಲಾಹನಿಗೆ ತಿಳಿದಿಲ್ಲದ ವಿಷಯವನ್ನು ನೀವು ಅವನಿಗೆ ತಿಳಿಸುತ್ತಿದ್ದೀರಾ?’ ಅವನು ಪರಿಶುದ್ಧನು ಮತ್ತು ಅವರು ಸಹಭಾಗಿಯನ್ನಾಗಿ ಮಾಡುವುದರಿಂದ ಅವನು ಅತ್ಯುನ್ನತನಾಗಿದ್ದಾನೆ.” [ಯೂನುಸ್: 18].

ಈ ವಚನದಲ್ಲಿ ಅಲ್ಲಾಹು ಸ್ಪಷ್ಟಪಡಿಸುವುದೇನೆಂದರೆ, ಅಲ್ಲಾಹನ ಹೊರತಾದ ಪ್ರವಾದಿಗಳು, ಔಲಿಯಾಗಳು ಅಥವಾ ಇತರರನ್ನು ಆರಾಧಿಸುವುದು ದೊಡ್ಡ ಶಿರ್ಕ್ ಆಗಿದೆ. ಅದನ್ನು ಮಾಡುವವರು ಅದಕ್ಕೆ ಬೇರೆ ಹೆಸರಿಟ್ಟರೂ ಸಹ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ...﴾

ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಮಾಡಿಕೊಂಡವರು ಹೇಳುತ್ತಾರೆ: “ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆಂಬ ಕಾರಣದಿಂದಾಗಿದೆ.” [ಅಝ್ಝುಮರ್: 3] ನಂತರ ಸರ್ವಶಕ್ತನಾದ ಅಲ್ಲಾಹು ಅವರ ಮಾತಿಗೆ ಹೀಗೆ ಉತ್ತರಿಸಿದನು:

﴿...إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ﴾

"ನಿಶ್ಚಯವಾಗಿಯೂ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಅಲ್ಲಾಹು ಅವರ ನಡುವೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಸುಳ್ಳುಗಾರ ಮತ್ತು ಕೃತಘ್ನನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ.” [ಅಝ್ಝುಮರ್: 3]

ಇದರಿಂದ ಸರ್ವಶಕ್ತನಾದ ಅಲ್ಲಾಹು ಸ್ಪಷ್ಟಪಡಿಸಿಕೊಡುವುದೇನೆಂದರೆ, ಪ್ರಾರ್ಥನೆ, ಭಯ, ನಿರೀಕ್ಷೆ, ಮತ್ತು ಇತರ ರೂಪಗಳಲ್ಲಿ ಅವನ ಹೊರತಾಗಿ ಇತರರನ್ನು ಆರಾಧಿಸುವುದು ಅವನನ್ನು ನಿಷೇಧಿಸುವುದಾಗಿದೆ. ತಮ್ಮ ಆರಾಧ್ಯ ದೇವರುಗಳು ತಮ್ಮನ್ನು ಅಲ್ಲಾಹನಿಗೆ ಹತ್ತಿರವಾಗಿಸುತ್ತಾರೆ ಎಂದು ಅವರು ಹೇಳುವ ಮಾತು ಸುಳ್ಳೆಂದು ಕೂಡ ಅವನು ಸ್ಪಷ್ಟಪಡಿಸಿದ್ದಾನೆ.

ಸರಿಯಾದ ವಿಶ್ವಾಸಕ್ಕೆ (ಅಕೀದಕ್ಕೆ) ವಿರುದ್ಧವಾದ ಮತ್ತು ಪ್ರವಾದಿಗಳು (ಅವರ ಮೇಲೆ ಶಾಂತಿಯಿರಲಿ) ತಂದಿರುವ ಬೋಧನೆಗಳಿಗೆ ವಿರುದ್ಧವಾದ ಸತ್ಯನಿಷೇಧದ ವಿಶ್ವಾಸಗಳಲ್ಲಿ ಸತ್ಯನಿಷೇಧದ ಪ್ರಚಾರಕರಾದ ಮಾರ್ಕ್ಸ್, ಲೆನಿನ್, ಮತ್ತು ಇತರ ನಾಸ್ತಿಕ ಮುಖಂಡರ ಅನುಯಾಯಿಗಳು ವಿಶ್ವಾಸವಿಡುವವುಗಳು ಕೂಡ ಒಳಪಡುತ್ತವೆ. ಅವರು ಅದನ್ನು ಸಮಾಜವಾದ, ಕಮ್ಯುನಿಸಂ, ಬಾಥಿಸಂ ಅಥವಾ ಇತರ ಯಾವುದೇ ಹೆಸರಿನಿಂದ ಕರೆದರೂ ಸಹ. ಈ ನಾಸ್ತಿಕರ ಪ್ರಮುಖ ಮೂಲತತ್ವವು: "ದೇವರಿಲ್ಲ ಮತ್ತು ಜೀವನವೇ ಎಲ್ಲ" ಎಂಬುದಾಗಿದೆ.

ಅವರ ಮೂಲತತ್ವಗಳಲ್ಲಿ, ಪರಲೋಕವನ್ನು ನಿರಾಕರಿಸುವುದು, ಸ್ವರ್ಗ ಮತ್ತು ನರಕವನ್ನು ನಿರಾಕರಿಸುವುದು, ಮತ್ತು ಎಲ್ಲಾ ಧರ್ಮಗಳನ್ನು ನಿರಾಕರಿಸುವುದು ಒಳಪಡುತ್ತವೆ. ಅವರ ಪುಸ್ತಕಗಳನ್ನು ಓದುವವರು ಮತ್ತು ಅವರು ಇರುವ ಸ್ಥಿತಿಯನ್ನು ಅಧ್ಯಯನ ಮಾಡುವವರು ಇದನ್ನು ಖಚಿತವಾಗಿ ತಿಳಿದುಕೊಳ್ಳುತ್ತಾರೆ. ಈ ವಿಶ್ವಾಸವು ಎಲ್ಲಾ ದೈವಿಕ ಧರ್ಮಗಳಿಗೆ ವಿರುದ್ಧವಾಗಿದೆ ಮತ್ತು ಅದರ ಅನುಯಾಯಿಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಅತ್ಯಂತ ಕೆಟ್ಟ ಪರಿಣಾಮಗಳಿಗೆ ಕೊಂಡೊಯ್ಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಸತ್ಯಕ್ಕೆ ವಿರುದ್ಧವಾದ ಆ ವಿಶ್ವಾಸಗಳಲ್ಲಿ ಇನ್ನೊಂದು ಏನೆಂದರೆ ಕೆಲವು ಸೂಫಿಗಳು ಹೊಂದಿರುವ ವಿಶ್ವಾಸ. ಅವರು (ಸೂಫಿಗಳು) 'ಔಲಿಯಾ' ಎಂದು ಕರೆಯುವ ಕೆಲವರು ಜಗತ್ತಿನ ನಿಯಂತ್ರಣದಲ್ಲಿ ಅಲ್ಲಾಹನೊಂದಿಗೆ ಪಾಲುದಾರರಾಗಿದ್ದಾರೆ ಮತ್ತು ಅವರು ಜಗತ್ತಿನ ಆಗು-ಹೋಗುಗಳನ್ನು ನಿಯಂತ್ರಿಸುತ್ತಾರೆ ಎಂದು ಅವರು ನಂಬುತ್ತಾರೆ. ಅವರು ಅವರನ್ನು 'ಅಕ್ತಾಬ್', 'ಔತಾದ್', 'ಅಗ್‌ವಾಸ್' ಮತ್ತು ತಮ್ಮ ಆರಾಧ್ಯ ದೇವರುಗಳಿಗಾಗಿ ಅವರು ಸೃಷ್ಟಿಸಿದ ಇತರ ಹೆಸರುಗಳಿಂದ ಕರೆಯುತ್ತಾರೆ. ಇದು ರುಬೂಬಿಯ್ಯತ್‌ನಲ್ಲಿ (ಪ್ರಭುತ್ವದಲ್ಲಿ) ಮಾಡುವ ಶಿರ್ಕ್ ಆಗಿದ್ದು, ಇದು ಸರ್ವಶಕ್ತನಾದ ಅಲ್ಲಾಹನೊಂದಿಗೆ ಮಾಡುವ ಶಿರ್ಕ್‌ನ ಅತ್ಯಂತ ಕೆಟ್ಟ ಪ್ರಕಾರಗಳಲ್ಲಿ ಒಂದಾಗಿದೆ.

ಹಿಂದಿನ ಜಾಹಿಲಿಯ್ಯ ಕಾಲದವರ ಶಿರ್ಕ್ ಅನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ಇಂದಿನವರಲ್ಲಿ ಹರಡಿರುವ ಶಿರ್ಕ್‌ನೊಂದಿಗೆ ಹೋಲಿಸಿ ನೋಡಿದರೆ, ಇಂದಿನವರ ಶಿರ್ಕ್ ಹೆಚ್ಚು ಗಂಭೀರ ಮತ್ತು ವ್ಯಾಪಕವಾಗಿದೆ ಎಂದು ಕಂಡುಕೊಳ್ಳಬಹುದು. ಇದರ ವಿವರಣೆ ಈ ಕೆಳಗಿನಂತಿದೆ: ಜಾಹಿಲಿಯ್ಯ ಕಾಲದ (ಅಜ್ಞಾನದ ಕಾಲ) ಅರಬ್ಬರಲ್ಲಿದ್ದ ಸತ್ಯನಿಷೇಧಿಗಳು ಎರಡು ವಿಷಯಗಳಲ್ಲಿ ಬೇರ್ಪಟ್ಟು ನಿಲ್ಲುತ್ತಾರೆ: ಮೊದಲನೆಯ ವಿಷಯ: ಅವರು ರುಬೂಬಿಯ್ಯತ್‌ನಲ್ಲಿ (ಅಲ್ಲಾಹನ ಪ್ರಭುತ್ವದಲ್ಲಿ) ಶಿರ್ಕ್ ಮಾಡುತ್ತಿರಲಿಲ್ಲ. ಬದಲಿಗೆ ಅವರು ಶಿರ್ಕ್ ಮಾಡುತ್ತಿದ್ದದ್ದು ಇಬಾದತ್‌ನಲ್ಲಿ (ಆರಾಧನೆಯಲ್ಲಿ) ಮಾತ್ರ. ಅವರು ಸರ್ವಶಕ್ತನಾದ ಅಲ್ಲಾಹನೊಬ್ಬನೇ ಜಗತ್ತಿನ ಪರಿಪಾಲಕ (ರಬ್ಬ್) ಎಂದು ಒಪ್ಪಿಕೊಂಡಿದ್ದರು. ಅಲ್ಲಾಹು ಹೇಳುತ್ತಾನೆ:

﴿وَلَئِن سَأَلۡتَهُم مَّنۡ خَلَقَهُمۡ لَيَقُولُنَّ ٱللَّهُ...﴾

“ಮತ್ತು ನೀವು ಅವರೊಡನೆ, ‘ನಿಮ್ಮನ್ನು ಸೃಷ್ಟಿಸಿದ್ದು ಯಾರು?’ ಎಂದು ಕೇಳಿದರೆ, ಅವರು ಖಂಡಿತವಾಗಿಯೂ ‘ಅಲ್ಲಾಹು’ ಎಂದು ಹೇಳುತ್ತಾರೆ.” [ಅಝ್ಝುಖ್ರುಫ್: 87]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قُلۡ مَن يَرۡزُقُكُم مِّنَ ٱلسَّمَآءِ وَٱلۡأَرۡضِ أَمَّن يَمۡلِكُ ٱلسَّمۡعَ وَٱلۡأَبۡصَٰرَ وَمَن يُخۡرِجُ ٱلۡحَيَّ مِنَ ٱلۡمَيِّتِ وَيُخۡرِجُ ٱلۡمَيِّتَ مِنَ ٱلۡحَيِّ وَمَن يُدَبِّرُ ٱلۡأَمۡرَۚ فَسَيَقُولُونَ ٱللَّهُۚ فَقُلۡ أَفَلَا تَتَّقُونَ31﴾

“ಹೇಳಿರಿ: ‘ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಆಹಾರವನ್ನು ನೀಡುವವರು ಯಾರು? ಅಥವಾ ಶ್ರವಣ ಮತ್ತು ದೃಷ್ಟಿಯನ್ನು ಒಡೆತನದಲ್ಲಿಟ್ಟುಕೊಂಡವರು ಯಾರು? ಮತ್ತು ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವರು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತೆಗೆಯುವವರು ಯಾರು? ಮತ್ತು ವಿಷಯಗಳನ್ನು ನಿಯಂತ್ರಿಸುವವರು ಯಾರು?’ ಆಗ ಅವರು ‘ಅಲ್ಲಾಹು’ ಎಂದು ಹೇಳುತ್ತಾರೆ. ಆಗ ಹೇಳಿರಿ: ‘ಹಾಗಾದರೆ ನೀವು ದೇವಭಯವುಳ್ಳವರಾಗುವುದಿಲ್ಲವೇ?’” [ಯೂನುಸ್: 31]. ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ಎರಡನೆಯ ವಿಷಯ: ಅವರು ಆರಾಧನೆಯಲ್ಲಿ ಯಾವಾಗಲೂ ಶಿರ್ಕ್ ಮಾಡುತ್ತಿರಲಿಲ್ಲ. ಬದಲಿಗೆ ಅದು ಸುಖ-ಸಂತೋಷದ ಸಮಯದಲ್ಲಿ ಮಾತ್ರ ಸಂಭವಿಸುತ್ತಿತ್ತು. ಆದರೆ ಕಷ್ಟದ ಸಮಯದಲ್ಲಿ ಅವರು ಅಲ್ಲಾಹನಿಗೆ ನಿಷ್ಕಳಂಕವಾಗಿ ಆರಾಧನೆ ಸಲ್ಲಿಸುತ್ತಿದ್ದರು. ಅಲ್ಲಾಹು ಹೇಳುತ್ತಾನೆ:

﴿فَإِذَا رَكِبُواْ فِي ٱلۡفُلۡكِ دَعَوُاْ ٱللَّهَ مُخۡلِصِينَ لَهُ ٱلدِّينَ فَلَمَّا نَجَّىٰهُمۡ إِلَى ٱلۡبَرِّ إِذَا هُمۡ يُشۡرِكُونَ65﴾

“ಅವರು ಹಡಗಿನಲ್ಲಿ ಸವಾರಿ ಮಾಡಿದರೆ, ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ಆದರೆ ಅವನು ಅವರನ್ನು ದಡಕ್ಕೆ ಸುರಕ್ಷಿತವಾಗಿ ತಲುಪಿಸಿದರೆ, ಆಗ ಅವರು ಶಿರ್ಕ್ ಮಾಡಲು ಪ್ರಾರಂಭಿಸುತ್ತಾರೆ.” [ಅಲ್-ಅಂಕಬೂತ್: 65].

ಆದರೆ ಇಂದಿನ ಮುಶ್ರಿಕರು (ಶಿರ್ಕ್ ಮಾಡುವವರು) ಎರಡು ವಿಷಯಗಳಲ್ಲಿ ಹಿಂದಿನವರಿಗಿಂತ ಮೇಲಿದ್ದಾರೆ: ಮೊದಲನೆಯ ವಿಷಯ: ಅವರಲ್ಲಿ ಕೆಲವರು ರುಬೂಬಿಯ್ಯತ್‌ನಲ್ಲಿಯೂ ಶಿರ್ಕ್ ಮಾಡುತ್ತಾರೆ. ಎರಡನೆಯ ವಿಷಯ: ಅವರು ಕಷ್ಟ-ಸುಖಗಳ ಎರಡು ಸ್ಥಿತಿಗಳಲ್ಲೂ ಶಿರ್ಕ್ ಮಾಡುತ್ತಾರೆ. ಅವರೊಂದಿಗೆ ಬೆರೆಯುವವರಿಗೆ ಮತ್ತು ಅವರ ಸ್ಥಿತಿಗತಿಗಳನ್ನು ಪರಿಶೀಲಿಸಿದವರಿಗೆ ಇದು ತಿಳಿದಿದೆ. ಹಾಗೆಯೇ. ಈಜಿಪ್ಟ್‌ನಲ್ಲಿ ಹುಸೈನ್ ಮತ್ತು ಬದವಿಯವರ ಸಮಾಧಿಗಳ ಬಳಿ, ಏಡನ್‌ನಲ್ಲಿ ಐದ್ರೂಸ್ ರವರ ಸಮಾಧಿಯ ಬಳಿ, ಯಮನ್‌ನಲ್ಲಿ ಹಾದಿ ಯವರ ಸಮಾಧಿಯ ಬಳಿ, ಶಾಮ್‌ನಲ್ಲಿ ಇಬ್ನ್ ಅರಬಿ ಯವರ ಸಮಾಧಿಯ ಬಳಿ, ಇರಾಕ್‌ನಲ್ಲಿ ಶೈಖ್ ಅಬ್ದುಲ್ ಖಾದಿರ್ ಜೀಲಾನಿ ಯವರ ಸಮಾಧಿಯ ಬಳಿ, ಮತ್ತು ಇತರ ಪ್ರಸಿದ್ಧ ಸಮಾಧಿಗಳ ಬಳಿ ಅವರು ಏನು ಮಾಡುತ್ತಾರೆಂದು ನೋಡಿದವರಿಗೆ ತಿಳಿದಿದೆ. ಈ ಸಮಾಧಿಗಳ ವಿಷಯದಲ್ಲಿ ಸಾಮಾನ್ಯ ಜನರು ಅತಿರೇಕವಾಗಿ ವರ್ತಿಸುತ್ತಾರೆ ಮತ್ತು ಅಲ್ಲಾಹನಿಗೆ ಸಲ್ಲಬೇಕಾದ ಹೆಚ್ಚಿನ ಹಕ್ಕುಗಳನ್ನು ಅವುಗಳಿಗೆ ಅರ್ಪಿಸುತ್ತಾರೆ. ಇದನ್ನು ಖಂಡಿಸುವವರು ಮತ್ತು ಅಲ್ಲಾಹು ತನ್ನ ಪ್ರವಾದಿ ಮುಹಮ್ಮದ್ (ಸ) ರನ್ನು ಹಾಗೂ ಅವರಿಗಿಂತ ಹಿಂದಿನ ಸಂದೇಶವಾಹಕರನ್ನು (ಅವರ ಮೇಲೆ ಶಾಂತಿಯಿರಲಿ) ಕಳುಹಿಸಿದ ತೌಹೀದ್‌ನ ನಿಜಸ್ಥಿತಿಯನ್ನು ಅವರಿಗೆ ವಿವರಿಸಿಕೊಡುವವರು ಬಹಳ ಕಡಿಮೆ. ಇನ್ನಾ ಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್ (ನಿಶ್ಚಯವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ಅವನ ಬಳಿಗೆ ಮರಳುವವರು).

ಅಲ್ಲಾಹನ ನಾಮಗಳು ಮತ್ತು ಗುಣಲಕ್ಷಣಗಳ ವಿಷಯದಲ್ಲಿ ಸರಿಯಾದ ವಿಶ್ವಾಸಕ್ಕೆ ವಿರುದ್ಧವಾದ ವಿಶ್ವಾಸಗಳಲ್ಲಿ ಇನ್ನೊಂದು ಏನೆಂದರೆ: ಜಹ್ಮಿಯ್ಯ, ಮುಅ್‌ತಝಿಲ, ಮತ್ತು ಅಲ್ಲಾಹನ ಗುಣಲಕ್ಷಣಗಳನ್ನು ನಿರಾಕರಿಸುವ, ಅಲ್ಲಾಹನ ಬಗ್ಗೆ ಹೇಳಲಾದ ಪರಿಪೂರ್ಣತೆಯ ಗುಣಲಕ್ಷಣಗಳನ್ನು ನಿಷ್ಕ್ರಿಯಗೊಳಿಸುವ, ಮತ್ತು ಅವನನ್ನು ಇಲ್ಲದಿರುವ, ನಿರ್ಜೀವ ಮತ್ತು ಅಸಾಧ್ಯವಾದವುಗಳ ಗುಣಲಕ್ಷಣಗಳಿಂದ ವರ್ಣಿಸುವವರ ಮಾರ್ಗವನ್ನು ಅನುಸರಿಸಿದ ಬಿದ್ಅತ್ತಿನ ಜನರ ವಿಶ್ವಾಸಗಳು ಸೇರಿವೆ. ಅಲ್ಲಾಹು ಅವರ ಮಾತುಗಳಿಂದೆಲ್ಲಾ ಅತ್ಯಂತ ಉನ್ನತನಾಗಿದ್ದಾನೆ.

ಕೆಲವು ಗುಣಲಕ್ಷಣಗಳನ್ನು ನಿರಾಕರಿಸಿ ಇತರ ಕೆಲವು ಗುಣಲಕ್ಷಣಗಳನ್ನು ದೃಢೀಕರಿಸುವವರೂ ಇದರಲ್ಲಿ ಒಳಪಡುತ್ತಾರೆ. ಇದು ಅಶ್ಅರಿಗಳ ವಿಶ್ವಾಸವಾಗಿದೆ. ಇವರು ಯಾವ ಹೋಲಿಕೆಯನ್ನು ಭಯಪಟ್ಟು ಪಲಾಯನ ಮಾಡುವುದಕ್ಕಾಗಿ ಕೆಲವು ಗುಣಲಕ್ಷಣಗಳನ್ನು ನಿರಾಕರಿಸಿದರೋ ಮತ್ತು ಕೆಲವು ಗುಣಲಕ್ಷಣಗಳ ಪುರಾವೆಗಳನ್ನು ದುರ್ವ್ಯಾಖ್ಯಾನ ಮಾಡಿದರೋ, ಅದೇ ಹೋಲಿಕೆಗೆ ತಾವು ದೃಢೀಕರಿಸಿದ ಗುಣಲಕ್ಷಣಗಳ ವಿಷಯದಲ್ಲಿಯೂ ಬದ್ಧರಾಗಬೇಕಾದ ಅನಿವಾರ್ಯತೆಗೆ ತಲುಪಿದ್ದಾರೆ. ಹೀಗಾಗಿ ಅವರು ಶ್ರವಣ (ಪಾರಂಪರಿಕ) ಮತ್ತು ಬೌದ್ಧಿಕ ಪುರಾವೆಗಳಿಗೆ ವಿರುದ್ಧವಾದರು ಮತ್ತು ಈ ವಿಷಯದಲ್ಲಿ ಸ್ಪಷ್ಟವಾದ ವಿರೋಧಾಭಾಸದಲ್ಲಿ ಸಿಲುಕಿದರು.

ಆದರೆ, ಈಗಾಗಲೇ ವಿವರಿಸಿದಂತೆ, ಅಹ್ಲುಸ್ಸುನ್ನ ವಲ್-ಜಮಾಅದವರು ಸರ್ವಶಕ್ತನಾದ ಅಲ್ಲಾಹನಿಗೆ, ಅವನು ತನಗಾಗಿ ದೃಢೀಕರಿಸಿದ, ಅಥವಾ ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರು ಅವನಿಗಾಗಿ ದೃಢೀಕರಿಸಿದ ನಾಮಗಳು ಮತ್ತು ಗುಣಲಕ್ಷಣಗಳನ್ನು ಪರಿಪೂರ್ಣವಾದ ರೀತಿಯಲ್ಲಿ ದೃಢೀಕರಿಸಿದರು, ಮತ್ತು ಅವನನ್ನು ನಿಷ್ಕ್ರಿಯತೆಯ ಕಳಂಕದಿಂದ ಮುಕ್ತಗೊಳಿಸುವ ರೀತಿಯಲ್ಲಿ ಸೃಷ್ಟಿಗಳ ಹೋಲಿಕೆಯಿಂದ ಪರಿಶುದ್ಧಗೊಳಿಸಿದರು. ಹೀಗೆ ಅವರು ಎಲ್ಲಾ ಪುರಾವೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿದರು ಮತ್ತು ಯಾವುದನ್ನೂ ದುರ್ವ್ಯಾಖ್ಯಾನ ಮಾಡದೆ ಅಥವಾ ನಿಷ್ಕ್ರಿಯಗೊಳಿಸದೆ, ಇತರರು ಸಿಲುಕಿದ ಎಲ್ಲಾ ವಿರೋಧಾಭಾಸಗಳಿಂದ ಸುರಕ್ಷಿತರಾದರು.

ಇದುವೇ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿರುವ ಮೋಕ್ಷ ಮತ್ತು ಸೌಭಾಗ್ಯದ ಮಾರ್ಗ. ಇದುವೇ ಈ ಉಮ್ಮತ್‌ನ (ಸಮುದಾಯದ) ಸಜ್ಜನ ಪೂರ್ವಜರು ಮತ್ತು ಇಮಾಮ್‌ಗಳು ಅನುಸರಿಸಿದ ನೇರವಾದ ಮಾರ್ಗ. ಈ ಸಮುದಾಯದ ಮೊದಲಿನವರು ಯಾವುದರಿಂದ ಸುಧಾರಿಸಲ್ಪಟ್ಟರೋ ಅದರಿಂದಲ್ಲದೆ ಈ ಸಮುದಾಯದ ನಂತರದವರು ಸುಧಾರಿಸಲಾರರು. ಅದು ಕುರ್‌ಆನ್ ಮತ್ತು ಸುನ್ನತ್ ಅನ್ನು ಅನುಸರಿಸುವುದು ಮತ್ತು ಅವೆರಡಕ್ಕೂ ವಿರುದ್ಧವಾದುದನ್ನು ತ್ಯಜಿಸುವುದು ಮಾತ್ರವಾಗಿದೆ. ಅವನು ಈ ಸಮುದಾಯವನ್ನು ಅದರ ಸರಿಯಾದ ಮಾರ್ಗದತ್ತ ಮರಳಿಸಲಿ, ಅದರಲ್ಲಿ ಸನ್ಮಾರ್ಗಕ್ಕೆ ಕರೆಯುವ ದಾಯಿಗಳನ್ನು ಹೆಚ್ಚಿಸಲಿ, ಮತ್ತು ಅದರ ಮುಖಂಡರು ಹಾಗೂ ವಿದ್ವಾಂಸರಿಗೆ ಶಿರ್ಕ್‌ನೊಂದಿಗೆ ಹೋರಾಡಲು, ಅದನ್ನು ನಿರ್ಮೂಲನೆ ಮಾಡಲು ಮತ್ತು ಅದರ ಕಡೆಗೆ ಒಯ್ಯುವ ಮಾಧ್ಯಮಗಳ ಬಗ್ಗೆ ಜನರನ್ನು ಎಚ್ಚರಿಸಲು ಅನುಗ್ರಹಿಸಲಿ ಎಂದು ನಾವು ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ... ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ಅತ್ಯಂತ ಹತ್ತಿರವಿರುವವನು ಆಗಿದ್ದಾನೆ. ಅಲ್ಲಾಹನೇ ಯಶಸ್ಸನ್ನು ನೀಡುವವನು. ಅವನೇ ನಮಗೆ ಸಾಕು. ಅವನು ಅತ್ಯಂತ ಶ್ರೇಷ್ಠ ಕಾರ್ಯನಿರ್ವಾಹಕನಾಗಿದ್ದಾನೆ. ಅವನ ಹೊರತು ಬೇರೆ ಯಾವುದೇ ಶಕ್ತಿ ಅಥವಾ ಸಾಮರ್ಥ್ಯವಿಲ್ಲ. ಅಲ್ಲಾಹನ ಶಾಂತಿ ಮತ್ತು ಶುಭಾಶೀರ್ವಾದಗಳು ಅವನ ದಾಸರು ಮತ್ತು ಸಂದೇಶವಾಹಕರಾದ, ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಕುಟುಂಬ ಮತ್ತು ಸಹಚರರ ಮೇಲೆ ಇರಲಿ.

 

 

***

 


بِسْمِ اللهِ الرَّحمَنِ الرَّحِيمِ

ಎರಡನೆಯ ಸಂದೇಶ:

ಪ್ರವಾದಿ (ಸ) ರವರಲ್ಲಿ ಸಹಾಯ ಯಾಚಿಸುವ ವಿಧಿ

ಸರ್ವ ಸ್ತುತಿಗಳು ಅಲ್ಲಾಹನಿಗೆ. ಅಲ್ಲಾಹನ ಸಂದೇಶವಾಹಕರ (ಸ) ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸಿದವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ, ಕುವೈತ್‌ನ 'ಅಲ್-ಮುಜ್ತಮಅ' ಪತ್ರಿಕೆಯು 15ನೇ ಸಂಚಿಕೆಯಲ್ಲಿ, ಹಿಜರಿ ದಿನಾಂಕ 19/4/1390 ರಂದು, "ಪ್ರವಾದಿ ಜನ್ಮದಿನದ ನೆನಪಿನಲ್ಲಿ" ಎಂಬ ಶೀರ್ಷಿಕೆಯಡಿಯಲ್ಲಿ ಕೆಲವು ಕವನಗಳನ್ನು ಪ್ರಕಟಿಸಿತ್ತು. ಈ ಕವನಗಳು ಪ್ರವಾದಿ (ಸ) ರವರಲ್ಲಿ ಸಹಾಯ ಯಾಚಿಸುವುದು, ಮತ್ತು ಸಮುದಾಯವು ಎದುರಿಸುತ್ತಿರುವ ಒಡಕು ಮತ್ತು ಭಿನ್ನಾಭಿಪ್ರಾಯಗಳಿಂದ ಅದನ್ನು ಪಾರುಮಾಡಲು, ಮತ್ತು ಅದಕ್ಕೆ ಜಯವನ್ನು ನೀಡಲು ಅವರಿಂದ ಸಹಾಯ ಕೋರುವುದನ್ನು ಒಳಗೊಂಡಿದ್ದವು. ಇದನ್ನು "ಆಮಿನಾ" ಎಂಬ ಹೆಸರಿನ ಮಹಿಳೆ ರಚಿಸಿದ್ದಳು. ಆ ಕವನಗಳ ಕೆಲವು ಭಾಗಗಳು ಇಲ್ಲಿವೆ:

"ಓ ಅಲ್ಲಾಹನ ಸಂದೇಶವಾಹಕರೇ! ಯುದ್ಧವನ್ನು ಹೊತ್ತಿಸುತ್ತಿರುವ ಮತ್ತು ಅದರ ಜ್ವಾಲೆಯಿಂದ ಸುಡುತ್ತಿರುವ ಜಗತ್ತನ್ನು ನೋಡಿರಿ."

"ಓ ಅಲ್ಲಾಹನ ಸಂದೇಶವಾಹಕರೇ! ಅನುಮಾನದ ಕತ್ತಲೆಯಲ್ಲಿ ದೀರ್ಘಕಾಲದಿಂದ ಅಲೆದಾಡುತ್ತಿರುವ ಸಮುದಾಯವನ್ನು ನೋಡಿರಿ."

ಓ ಅಲ್ಲಾಹನ ಸಂದೇಶವಾಹಕರೇ! ದುಃಖದ ಚಕ್ರವ್ಯೂಹಗಳಲ್ಲಿ ತನ್ನ ದೃಷ್ಟಿಯನ್ನು ಕಳೆದುಕೊಂಡಿರುವ ಸಮುದಾಯವನ್ನು ನೋಡಿರಿ."

ಹೀಗೆ ಮುಂದುವರಿಯುತ್ತಾ ಆಕೆ ಹೇಳುತ್ತಾಳೆ:

"ಬದ್ರ್ ದಿನದಂದು ನೀವು ದೇವರನ್ನು ಕರೆದಾಗ, ವಿಜಯವನ್ನು ತ್ವರೆಗೊಳಿಸಿದಂತೆ ತ್ವರೆಗೊಳಿಸಿರಿ."

"ಆಗ ಅವಮಾನವು ಅದ್ಭುತ ವಿಜಯವಾಗಿ ಮಾರ್ಪಟ್ಟಿತು... ನಿಶ್ಚಯವಾಗಿಯೂ ಅಲ್ಲಾಹನಿಗೆ ನೀವು ಕಾಣದ ಕೆಲವು ಸೈನಿಕರಿದ್ದಾರೆ."

ಹೀಗೆ ಈ ಲೇಖಕಿ ತನ್ನ ಕರೆಯನ್ನು ಮತ್ತು ಸಹಾಯ ಯಾಚನೆಯನ್ನು ಪ್ರವಾದಿ (ಸ) ರವರ ಕಡೆಗೆ ತಿರುಗಿಸುತ್ತಾಳೆ. ವಿಜಯವನ್ನು ತ್ವರೆಗೊಳಿಸುವ ಮೂಲಕ ಸಮುದಾಯವನ್ನು ತಲುಪಲು ಅವರಲ್ಲಿ ಬೇಡಿಕೆಯಿಡುತ್ತಾಳೆ. ಆದರೆ, ವಿಜಯವು ಅಲ್ಲಾಹನ ಕೈಯಲ್ಲಿದೆಯೇ ಹೊರತು ಪ್ರವಾದಿ (ಸ) ರವರ ಅಥವಾ ಇತರ ಸೃಷ್ಟಿಗಳ ಕೈಯಲ್ಲಿಲ್ಲ ಎಂಬ ಸತ್ಯವನ್ನು ಆಕೆ ಮರೆತಿದ್ದಾಳೆ ಅಥವಾ ಅದರ ಬಗ್ಗೆ ಅಜ್ಞಾನಿಯಾಗಿದ್ದಾಳೆ. ಸರ್ವಶಕ್ತನಾದ ಅಲ್ಲಾಹು ತನ್ನ ಸ್ಪಷ್ಟವಾದ ಗ್ರಂಥದಲ್ಲಿ ಹೇಳುತ್ತಾನೆ:

﴿...وَمَا النَّصْرُ إِلَّا مِنْ عِنْدِ اللَّهِ الْعَزِيزِ الْحَكِيمِ﴾

"ಮತ್ತು ವಿಜಯವು ಸರ್ವಶಕ್ತನೂ, ಯುಕ್ತಿವಂತನೂ ಆದ ಅಲ್ಲಾಹನಿಂದಲ್ಲದೆ ಬೇರೆ ಯಾರಿಂದಲೂ ಇಲ್ಲ." [ಆಲು ಇಮ್ರಾನ್: 126] ಅವನು (ಅಲ್ಲಾಹು) ಹೇಳುತ್ತಾನೆ:

﴿إِنْ يَنْصُرْكُمُ اللَّهُ فَلَا غَالِبَ لَكُمْ وَإِنْ يَخْذُلْكُمْ فَمَنْ ذَا الَّذِي يَنْصُرُكُمْ مِنْ بَعْدِهِ...﴾

"ಅಲ್ಲಾಹು ನಿಮಗೆ ಸಹಾಯ ಮಾಡಿದರೆ, ನಿಮ್ಮನ್ನು ಯಾರೂ ಸೋಲಿಸಲಾರರು; ಆದರೆ, ಅವನು ನಿಮ್ಮನ್ನು ಕೈಬಿಟ್ಟರೆ, ಅವನ ನಂತರ ನಿಮಗೆ ಸಹಾಯ ಮಾಡುವವರು ಯಾರಿದ್ದಾರೆ?"

[ಆಲು ಇಮ್ರಾನ್: 160]

ಪ್ರಾರ್ಥನೆ ಮತ್ತು ಸಹಾಯ ಯಾಚನೆ ಮಾಡುವ ಈ ಕರ್ಮವು ಆರಾಧನೆಯ ಒಂದು ವಿಧವನ್ನು ಅಲ್ಲಾಹನಲ್ಲದವರಿಗೆ ಅರ್ಪಿಸುವುದಾಗಿದೆ; ಸ್ಪಷ್ಟ ವಚನಗಳು ಮತ್ತು ವಿದ್ವಾಂಸರ ಒಮ್ಮತಾಭಿಪ್ರಾಯದಿಂದ ತಿಳಿದುಬರುವಂತೆ, ಇದಕ್ಕೆ ಅನುಮತಿಯಿಲ್ಲ. ಸರ್ವಶಕ್ತನಾದ ಅಲ್ಲಾಹು ಸೃಷ್ಟಿಗಳನ್ನು ಸೃಷ್ಟಿಸಿರುವುದು ತನ್ನನ್ನು ಆರಾಧಿಸಲೆಂದಾಗಿದೆ. ಆ ಆರಾಧನೆಯನ್ನು ವಿವರಿಸಿಕೊಡಲು ಮತ್ತು ಅದರ ಕಡೆಗೆ ಆಹ್ವಾನಿಸಲು ಅವನು ಸಂದೇಶವಾಹಕರನ್ನು ಕಳುಹಿಸಿದ್ದಾನೆ ಮತ್ತು ಗ್ರಂಥಗಳನ್ನು ಇಳಿಸಿದ್ದಾನೆ. ಅವನು (ಅಲ್ಲಾಹು) ಹೇಳುತ್ತಾನೆ:

﴿وَمَا خَلَقْتُ الْجِنَّ وَالْإِنْسَ إِلَّا لِيَعْبُدُونِ56﴾

"ಮತ್ತು ನಾನು ಜಿನ್ನ್‌ಗಳನ್ನು ಹಾಗೂ ಮನುಷ್ಯರನ್ನು ನನ್ನನ್ನು ಆರಾಧಿಸಲಿಕ್ಕಾಗಿಯೇ ಹೊರತು ಬೇರೆ ಯಾವುದಕ್ಕೂ ಸೃಷ್ಟಿಸಿಲ್ಲ." [ಅದ್ದಾರಿಯಾತ್:56] ಅವನು (ಅಲ್ಲಾಹು) ಹೇಳುತ್ತಾನೆ:

﴿وَلَقَدْ بَعَثْنَا فِي كُلِّ أُمَّةٍ رَسُولًا أَنِ اعْبُدُوا اللَّهَ وَاجْتَنِبُوا الطَّاغُوتَ...﴾

"ಮತ್ತು ನಾವು ಪ್ರತಿಯೊಂದು ಸಮುದಾಯದಲ್ಲೂ 'ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತ್ (ಮಿಥ್ಯ ದೇವರುಗಳು) ಅನ್ನು ತ್ಯಜಿಸಿರಿ' ಎಂದು (ಕರೆ ನೀಡುವ) ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದೇವೆ." [ಅನ್ನಹ್ಲ್: 36] ಅವನು (ಅಲ್ಲಾಹು) ಹೇಳುತ್ತಾನೆ:

﴿وَمَا أَرْسَلْنَا مِنْ قَبْلِكَ مِنْ رَسُولٍ إِلَّا نُوحِي إِلَيْهِ أَنَّهُ لَا إِلَهَ إِلَّا أَنَا فَاعْبُدُونِ25﴾

"ನನ್ನ ಹೊರತು ಬೇರೆ ದೇವರಿಲ್ಲ, ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ ಎಂಬ ದಿವ್ಯಸಂದೇಶವನ್ನು ನೀಡದೆ ನಾವು ನಿಮಗಿಂತ ಮೊದಲು ಯಾವುದೇ ಸಂದೇಶವಾಹಕರನ್ನು ಕಳುಹಿಸಿಲ್ಲ." [ಅಲ್-ಅಂಬಿಯಾ: 25] ಅವನು (ಅಲ್ಲಾಹು) ಹೇಳುತ್ತಾನೆ:

﴿الر كِتَابٌ أُحْكِمَتْ آيَاتُهُ ثُمَّ فُصِّلَتْ مِنْ لَدُنْ حَكِيمٍ خَبِيرٍ1 أَلَّا تَعْبُدُوا إِلَّا اللَّهَ إِنَّنِي لَكُمْ مِنْهُ نَذِيرٌ وَبَشِيرٌ2﴾

"ಅಲಿಫ್-ಲಾಮ್-ರಾ. ಇದು ಗ್ರಂಥ, ಇದರ ವಚನಗಳನ್ನು ದೃಢಗೊಳಿಸಲಾಗಿದೆ. ನಂತರ ಯುಕ್ತಿವಂತನೂ, ಸರ್ವಜ್ಞನೂ ಆದವನಿಂದ ವಿವರಿಸಿಕೊಡಲಾಗಿದೆ.

ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬೇಡಿ ಎಂದು (ತಿಳಿಸಲು). ನಿಶ್ಚಯವಾಗಿಯೂ ನಾನು ನಿಮಗೆ ಅವನ (ಅಲ್ಲಾಹನ) ಕಡೆಯಿಂದ ಮುನ್ನೆಚ್ಚರಿಕೆ ನೀಡುವವನು ಮತ್ತು ಶುಭವಾರ್ತೆ ತಿಳಿಸುವವನಾಗಿದ್ದೇನೆ." [ಹೂದ್: 1, 2]

ಆದ್ದರಿಂದ ಅಲ್ಲಾಹು ಈ ಸ್ಪಷ್ಟವಾದ ವಚನಗಳಲ್ಲಿ ಸ್ಪಷ್ಟಪಡಿಸುವುದೇನೆಂದರೆ, ಅವನು ಎರಡು ಭಾರವಾದ ಸೃಷ್ಟಿಗಳನ್ನು (ಜಿನ್ನ್ ಮತ್ತು ಮನುಷ್ಯರು) ಏಕೈಕನೂ ಸಹಭಾಗಿಗಳಿಲ್ಲದವನೂ ಆದ ಅವನನ್ನು ಮಾತ್ರ ಆರಾಧಿಸಲು ಸೃಷ್ಟಿಸಿದ್ದಾನೆ. ಹಾಗೆಯೇ, ಅವನು ಸಂದೇಶವಾಹಕರುಗಳನ್ನು – ಅವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳಿರಲಿ – ಈ ಆರಾಧನೆಯನ್ನು ನಿರ್ವಹಿಸುವಂತೆ ಆದೇಶಿಸಲು ಮತ್ತು ಅದಕ್ಕೆ ವಿರುದ್ಧವಾದುದನ್ನು (ಅಲ್ಲಾಹೇತರರ ಆರಾಧನೆಯನ್ನು) ನಿಷೇಧಿಸಲು ಕಳುಹಿಸಿದ್ದಾನೆ ಎಂದು ವಿವರಿಸಿದ್ದಾನೆ. ಅದೇ ರೀತಿ, ಅವನಲ್ಲದೆ ಬೇರೆ ಯಾರನ್ನೂ ಆರಾಧಿಸಬಾರದು ಎಂಬುದಕ್ಕಾಗಿ ಅವನು ತನ್ನ ಗ್ರಂಥದ ವಚನಗಳನ್ನು ದೃಢಗೊಳಿಸಿದ್ದಾನೆ ಮತ್ತು ವಿವರಿಸಿದ್ದಾನೆ ಎಂದು ಕೂಡ ತಿಳಿಸಿದ್ದಾನೆ.

ನಮಗೆಲ್ಲರಿಗೂ ತಿಳಿದಿರುವಂತೆ ಆರಾಧನೆ ಎಂದರೆ: ಅಲ್ಲಾಹನನ್ನು ಏಕೈಕಗೊಳಿಸುವುದು ಮತ್ತು ಅವನ ಆಜ್ಞೆಗಳನ್ನು ಪಾಲಿಸುವ ಮೂಲಕ ಹಾಗೂ ಅವನು ನಿಷೇಧಿಸಿದ ವಿಷಯಗಳಿಂದ ದೂರವಿರುವ ಮೂಲಕ ಅವನಿಗೆ ವಿಧೇಯವಾಗುವುದು. ಅಲ್ಲಾಹು ಅನೇಕ ವಚನಗಳಲ್ಲಿ ಇದನ್ನು ಆದೇಶಿಸಿದ್ದಾನೆ ಮತ್ತು ತಿಳಿಸಿಕೊಟ್ಟಿದ್ದಾನೆ. ಅವನು ಹೇಳುತ್ತಾನೆ:

﴿وَمَا أُمِرُوا إِلَّا لِيَعْبُدُوا اللَّهَ مُخْلِصِينَ لَهُ الدِّينَ حُنَفَاءَ...﴾

"ಮತ್ತು ಏಕನಿಷ್ಠೆಯಿಂದ, ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ, ಅವನನ್ನು ಆರಾಧಿಸಲು ಹೊರತು ಇನ್ನೇನೂ ಅವರಿಗೆ ಆದೇಶಿಸಲಾಗಿರಲಿಲ್ಲ." [ಅಲ್-ಬಯ್ಯಿನ: 5] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَقَضَى رَبُّكَ أَلَّا تَعْبُدُوا إِلَّا إِيَّاهُ...﴾

"ಮತ್ತು ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ವಿಧಿಸಿದ್ದಾನೆ." [ಅಲ್-ಇಸ್ರಾಅ್: 23] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ2 أَلَا لِلَّهِ ٱلدِّينُ ٱلۡخَالِصُۚ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ3﴾

"ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ಸತ್ಯದೊಂದಿಗೆ ನಿಮಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ನೀವು ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಿರಿ.

ತಿಳಿಯಿರಿ! ನಿಷ್ಕಳಂಕವಾದ ಧರ್ಮವು ಅಲ್ಲಾಹನಿಗೆ ಮಾತ್ರ ಸೇರಿದ್ದು. ಮತ್ತು ಅವನ ಹೊರತು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡವರು (ಹೇಳುತ್ತಾರೆ): 'ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುವುದಕ್ಕಾಗಿ ಮಾತ್ರವಾಗಿದೆ.' ನಿಶ್ಚಯವಾಗಿಯೂ ಅಲ್ಲಾಹು ಅವರ ನಡುವೆ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ತೀರ್ಪು ನೀಡುತ್ತಾನೆ. ನಿಶ್ಚಯವಾಗಿಯೂ ಸುಳ್ಳುಗಾರನೂ, ಕೃತಘ್ನನೂ ಆದವನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ." [ಅಝ್ಝುಮರ್: 2-3]

ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ. ಅವೆಲ್ಲವೂ ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕು ಮತ್ತು ಪ್ರವಾದಿಗಳು ಮತ್ತು ಇತರರನ್ನು ಆರಾಧಿಸಬಾರದು ಎಂದು ಸೂಚಿಸುತ್ತವೆ.

ಪ್ರಾರ್ಥನೆಯು ಆರಾಧನೆಯ ಪ್ರಮುಖ ಮತ್ತು ಅತ್ಯಂತ ಸಮಗ್ರ ವಿಧಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಅದನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸುವುದು ಕಡ್ಡಾಯವಾಗಿದೆ. ಅವನು (ಅಲ್ಲಾಹು) ಹೇಳುತ್ತಾನೆ:

﴿فَادْعُوا اللَّهَ مُخْلِصِينَ لَهُ الدِّينَ وَلَوْ كَرِهَ الْكَافِرُونَ14﴾

"ಆದ್ದರಿಂದ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ದ್ವೇಷಿಸಿದರೂ ಸಹ." [ಗಾಫಿರ್: 14] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَأَنَّ الْمَسَاجِدَ لِلَّهِ فَلَا تَدْعُوا مَعَ اللَّهِ أَحَدًا18﴾

“ಮತ್ತು ಖಂಡಿತವಾಗಿಯೂ ಮಸೀದಿಗಳು ಅಲ್ಲಾಹನಿಗಾಗಿವೆ. ಆದ್ದರಿಂದ ಅಲ್ಲಾಹನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ.” [ಅಲ್-ಜಿನ್ನ್: 18] ಪ್ರಾರ್ಥನೆಯಲ್ಲಿ ಅಲ್ಲಾಹನನ್ನು ಏಕೈಕಗೊಳಿಸಬೇಕೆಂಬ ಈ ನಿರ್ದೇಶನವು ಪ್ರವಾದಿಗಳು ಸೇರಿದಂತೆ ಎಲ್ಲಾ ಸೃಷ್ಟಿಗಳನ್ನೂ ಒಳಗೊಳ್ಳುತ್ತದೆ. ಅಲ್ಲಾಹು ಹೇಳುತ್ತಾನೆ:

﴿وَلَا تَدْعُ مِنْ دُونِ اللَّهِ مَا لَا يَنْفَعُكَ وَلَا يَضُرُّكَ فَإِن فَعَلۡتَ فَإِنَّكَ إِذٗا مِّنَ ٱلظَّٰلِمِينَ106﴾

"ಮತ್ತು ಅಲ್ಲಾಹನ ಹೊರತು ನಿಮಗೆ ಲಾಭ ಅಥವಾ ಹಾನಿ ಮಾಡದ ಯಾವುದನ್ನೂ ಕರೆದು ಪ್ರಾರ್ಥಿಸಬೇಡಿ. ನೀವು ಹಾಗೆ ಮಾಡಿದರೆ, ಖಂಡಿತವಾಗಿಯೂ ನೀವು ಅಕ್ರಮಿಗಳಲ್ಲಿ ಸೇರಿದವರಾಗುವಿರಿ." [ಯೂನುಸ್: 106] ಇದು ಪ್ರವಾದಿ (ಸ) ರವರನ್ನು ಸಂಬೋಧಿಸಿ ಹೇಳಿದ್ದಾಗಿದೆ. ಅಲ್ಲಾಹು ಅವರನ್ನು ಶಿರ್ಕ್‌ನಿಂದ ರಕ್ಷಿಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅಲ್ಲಾಹು ಇದನ್ನು ಹೇಳಿದ ಉದ್ದೇಶವು ಇತರರನ್ನು ಎಚ್ಚರಿಸುವುದಾಗಿದೆ. ನಂತರ ಅವನು ಹೇಳುತ್ತಾನೆ:

﴿وَلَا تَدۡعُ مِن دُونِ ٱللَّهِ مَا لَا يَنفَعُكَ وَلَا يَضُرُّكَ فَإِنْ فَعَلْتَ فَإِنَّكَ إِذًا مِنَ الظَّالِمِينَ106﴾

"ಮತ್ತು ಅಲ್ಲಾಹನ ಹೊರತು ನಿಮಗೆ ಲಾಭ ಅಥವಾ ಹಾನಿ ಮಾಡದ ಯಾವುದನ್ನೂ ಕರೆದು ಪ್ರಾರ್ಥಿಸಬೇಡಿ. ನೀವು ಹಾಗೆ ಮಾಡಿದರೆ, ಖಂಡಿತವಾಗಿಯೂ ನೀವು ಅಕ್ರಮಿಗಳಲ್ಲಿ ಸೇರಿದವರಾಗುವಿರಿ." [ಯೂನುಸ್: 106] ಇದು ಪ್ರವಾದಿ (ಸ) ರವರನ್ನು ಸಂಬೋಧಿಸಿ ಹೇಳಿದ್ದಾಗಿದೆ. ಅಲ್ಲಾಹು ಇದನ್ನು ಹೇಳಿದ ಉದ್ದೇಶವು ಇತರರನ್ನು ಎಚ್ಚರಿಸುವುದಾಗಿದೆ. ಏಕೆಂದರೆ, ಅಲ್ಲಾಹು ತನ್ನ ಸಂದೇಶವಾಹಕರನ್ನು (ಸ) ಶಿರ್ಕ್‌ನಿಂದ ರಕ್ಷಿಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ನಂತರ ಅಲ್ಲಾಹು ಕಠಿಣವಾದ ನಿಷೇಧ ಮತ್ತು ಎಚ್ಚರಿಕೆ ನೀಡುತ್ತಾ ಹೇಳುತ್ತಾನೆ:

﴿...فَإِنْ فَعَلْتَ فَإِنَّكَ إِذًا مِنَ الظَّالِمِينَ﴾

"ನೀವು ಹಾಗೆ ಮಾಡಿದರೆ, ಖಂಡಿತವಾಗಿಯೂ ನೀವು ಅಕ್ರಮಿಗಳಲ್ಲಿ ಸೇರಿದವರಾಗುವಿರಿ." 'ಝುಲ್ಮ್' (ಅಕ್ರಮ) ಎಂಬ ಪದವನ್ನು ಅನಿರ್ದಿಷ್ಟವಾಗಿ ಬಳಸಿದರೆ ಅದರ ಅರ್ಥವು ದೊಡ್ಡ ಶಿರ್ಕ್ ಆಗಿದೆ. ಅಲ್ಲಾಹು ಹೇಳುತ್ತಾನೆ:

﴿...وَالْكَافِرُونَ هُمُ الظَّالِمُونَ﴾

"ಮತ್ತು ಸತ್ಯನಿಷೇಧಿಗಳೇ ಅಕ್ರಮಿಗಳು." [ಅಲ್-ಬಕರ: 254]. ಅವನು (ಅಲ್ಲಾಹು) ಹೇಳುತ್ತಾನೆ:

﴿...إِنَّ الشِّرْكَ لَظُلْمٌ عَظِيمٌ﴾

"ನಿಶ್ಚಯವಾಗಿಯೂ ಶಿರ್ಕ್ ಅತಿದೊಡ್ಡ ಅಕ್ರಮವಾಗಿದೆ." [ಲುಕ್ಮಾನ್: 13] ಆದಮ್ (ಅ) ರವರ ಮಕ್ಕಳ ಸರದಾರರು (ಪ್ರವಾದಿಯವರು (ಸ)) ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸಿದರೆ ಅವರು ಅಕ್ರಮಿಗಳಲ್ಲಿ ಸೇರುತ್ತಾರೆ ಎಂದಾದರೆ, ಇತರರ ಗತಿ ಏನು?

ಆದ್ದರಿಂದ ಇವು ಮತ್ತು ಇತರ ವಚನಗಳಿಂದ ತಿಳಿದುಬರುವುದೇನೆಂದರೆ, ಅಲ್ಲಾಹನ ಹೊರತಾಗಿ ಮೃತರು, ಮರಗಳು, ವಿಗ್ರಹಗಳು ಮುಂತಾದವುಗಳನ್ನು ಕರೆದು ಪ್ರಾರ್ಥಿಸುವುದು ಅಲ್ಲಾಹನಿಗೆ ಮಾಡುವ ಶಿರ್ಕ್ ಆಗಿದೆ, ಮತ್ತು ಎರಡು ಭಾರವಾದ ಸೃಷ್ಟಿಗಳನ್ನು (ಮನುಷ್ಯರು ಮತ್ತು ಜಿನ್ನ್‌ಗಳು) ಸೃಷ್ಟಿಸಲು, ಸಂದೇಶವಾಹಕರನ್ನು ಕಳುಹಿಸಲು, ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸಲು ಕಾರಣವಾದ ಆರಾಧನೆಗಳಲ್ಲಿ ಅಲ್ಲಾಹನನ್ನು ಏಕೈಕಗೊಳಿಸಬೇಕೆಂಬ ಉದ್ದೇಶಕ್ಕೆ ವಿರುದ್ಧವಾಗಿದೆ. ಹಾಗೆಯೇ, ಅದು ಅಲ್ಲಾಹು ಅಲ್ಲದವರಿಗೆ ಆರಾಧನೆಯನ್ನು ನಿರಾಕರಿಸಬೇಕು ಮತ್ತು ಅದನ್ನು ಅಲ್ಲಾಹನಿಗೆ ಮಾತ್ರ ದೃಢೀಕರಿಸಬೇಕು ಎಂಬ 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನದ ಅರ್ಥಕ್ಕೂ ವಿರುದ್ಧವಾಗಿದೆ. ಅಲ್ಲಾಹು ಹೇಳುತ್ತಾನೆ:

﴿ذَٰلِكَ بِأَنَّ ٱللَّهَ هُوَ ٱلۡحَقُّ وَأَنَّ مَا يَدۡعُونَ مِن دُونِهِۦ هُوَ ٱلۡبَٰطِلُ وَأَنَّ ٱللَّهَ هُوَ ٱلۡعَلِيُّ ٱلۡكَبِيرُ62﴾

"ಅದು ಏಕೆಂದರೆ ಅಲ್ಲಾಹು ಮಾತ್ರ ಸತ್ಯ, ಮತ್ತು ಅವನನ್ನು ಬಿಟ್ಟು ಅವರು ಕರೆದು ಪ್ರಾರ್ಥಿಸುವುದೆಲ್ಲವೂ ಸುಳ್ಳು. ಮತ್ತು ಅಲ್ಲಾಹು ಅತ್ಯುನ್ನತನೂ ಮಹಾನನೂ ಆಗಿದ್ದಾನೆ ಎಂಬುದರಿಂದಾಗಿದೆ." [ಅಲ್-ಹಜ್ಜ್: 62]

ಇದೇ ಧರ್ಮದ ಮೂಲತತ್ವ ಮತ್ತು ಧಾರ್ಮಿಕ ಮಾರ್ಗದ ಅಡಿಪಾಯವಾಗಿದೆ. ಈ ಮೂಲತತ್ವವು ಸರಿಯಾದ ನಂತರವೇ ಆರಾಧನೆಗಳು ಸರಿಯಾಗುತ್ತವೆ. ಅಲ್ಲಾಹು ಹೇಳುತ್ತಾನೆ:

﴿وَلَقَدْ أُوحِيَ إِلَيْكَ وَإِلَى الَّذِينَ مِنْ قَبْلِكَ لَئِنْ أَشْرَكْتَ لَيَحْبَطَنَّ عَمَلُكَ وَلَتَكُونَنَّ مِنَ الْخَاسِرِينَ65﴾

"ಮತ್ತು ನೀವು ಶಿರ್ಕ್ ಮಾಡಿದರೆ, ನಿಮ್ಮ ಕರ್ಮಗಳೆಲ್ಲವೂ ವ್ಯರ್ಥವಾಗುತ್ತವೆ ಮತ್ತು ನೀವು ಖಂಡಿತವಾಗಿಯೂ ನಷ್ಟಹೊಂದುವವರಲ್ಲಿ ಸೇರುವಿರಿ ಎಂದು ನಿಮಗೆ ಮತ್ತು ನಿಮ್ಮ ಹಿಂದಿನ (ಪ್ರವಾದಿಗಳಿಗೆ) ದಿವ್ಯಸಂದೇಶ ನೀಡಲಾಗಿದೆ." [ಅಝ್ಝುಮರ್: 65] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَلَوْ أَشْرَكُوا لَحَبِطَ عَنْهُمْ مَا كَانُوا يَعْمَلُونَ﴾

"ಮತ್ತು ಅವರೇನಾದರೂ ಶಿರ್ಕ್ ಮಾಡಿದ್ದರೆ, ಅವರು ಮಾಡುತ್ತಿದ್ದ ಕರ್ಮಗಳೆಲ್ಲವೂ ನಿಷ್ಫಲವಾಗುತ್ತಿದ್ದವು." [ಅಲ್-ಅನ್ಆಮ್: 88]

ಇವುಗಳಿಂದ ಸ್ಪಷ್ಟವಾಗುವುದೇನೆಂದರೆ, ಇಸ್ಲಾಂ ಧರ್ಮಕ್ಕೆ ಮತ್ತು 'ಲಾ ಇಲಾಹ ಇಲ್ಲಲ್ಲಾಹ್' ಎಂಬ ಸಾಕ್ಷ್ಯ ವಚನಕ್ಕೆ ಎರಡು ಮಹಾ ಅಡಿಪಾಯಗಳಿವೆ:

ಒಂದು: ಏಕೈಕನು ಮತ್ತು ಸಹಭಾಗಿಯಿಲ್ಲದವನಾದ ಅಲ್ಲಾಹನನ್ನು ಮಾತ್ರ ಆರಾಧಿಸಬೇಕು. ಆದ್ದರಿಂದ ಯಾರು ಪ್ರವಾದಿಗಳು ಮತ್ತು ಇತರ ಮೃತರನ್ನು ಕರೆದು ಪ್ರಾರ್ಥಿಸುತ್ತಾರೋ, ಅಥವಾ ವಿಗ್ರಹಗಳು, ಮರಗಳು, ಕಲ್ಲುಗಳು, ಅಥವಾ ಇತರ ಸೃಷ್ಟಿಗಳನ್ನು ಕರೆದು ಪ್ರಾರ್ಥಿಸುತ್ತಾರೋ, ಅಥವಾ ಅವರಿಂದ ಸಹಾಯ ಯಾಚಿಸುತ್ತಾರೋ, ಅಥವಾ ಬಲಿ ಮತ್ತು ಹರಕೆಗಳ ಮೂಲಕ ಅವರಿಗೆ ಹತ್ತಿರವಾಗುತ್ತಾರೋ, ಅಥವಾ ಅವರಿಗೆ ನಮಾಝ್ ಮಾಡುತ್ತಾರೋ, ಅಥವಾ ಅವರಿಗೆ ಸಾಷ್ಟಾಂಗ (ಸುಜೂದ್) ಮಾಡುತ್ತಾರೋ; ಅವರು ಅಲ್ಲಾಹನ ಹೊರತಾಗಿ ಅವರನ್ನು ರಬ್ಬ್‌ಗಳಾಗಿ ಮಾಡಿಕೊಂಡಿದ್ದಾರೆ, ಮತ್ತು ಅವರನ್ನು ಅಲ್ಲಾಹನಿಗೆ ಸರಿಸಾಟಿಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗೆಯೇ, ಅವರು 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನದ ಅರ್ಥಕ್ಕೆ ವಿರುದ್ಧವಾಗಿ ಸಾಗಿದ್ದಾರೆ.

ಎರಡು: ಅಲ್ಲಾಹನನ್ನು ಅವನ ಪ್ರವಾದಿ ಮತ್ತು ಸಂದೇಶವಾಹಕರು (ಸ) ತಂದ ಶರೀಅತ್ (ಧಾರ್ಮಿಕ ನಿಯಮ) ನಂತೆಯೇ ಆರಾಧಿಸಬೇಕು. ಆದ್ದರಿಂದ ಯಾರು ಅಲ್ಲಾಹು ಅನುಮತಿಸದ ವಿಷಯವನ್ನು ಧರ್ಮದಲ್ಲಿ ಹೊಸದಾಗಿ ಸೇರಿಸುತ್ತಾರೋ; ಅವರು ಮುಹಮ್ಮದ್ (ಸ) ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷ್ಯ ವಚನದ ಅರ್ಥವನ್ನು ನಿಜಗೊಳಿಸಲಿಲ್ಲ. ಅವರ ಕರ್ಮಗಳು ಅವರಿಗೆ ಪ್ರಯೋಜನ ನೀಡುವುದಿಲ್ಲ ಅಥವಾ ಅವರಿಂದ ಅವುಗಳನ್ನು ಸ್ವೀಕರಿಸಲಾಗುವುದಿಲ್ಲ. ಅಲ್ಲಾಹು ಹೇಳುತ್ತಾನೆ:

﴿وَقَدِمْنَا إِلَى مَا عَمِلُوا مِنْ عَمَلٍ فَجَعَلْنَاهُ هَبَاءً مَنْثُورًا23﴾

"ಮತ್ತು ನಾವು ಅವರು ಮಾಡಿದ ಕರ್ಮಗಳ ಕಡೆಗೆ ತಿರುಗುವೆವು, ಮತ್ತು ಅವುಗಳನ್ನು ಚದುರಿದ ಧೂಳಿನಂತೆ ಮಾಡುವೆವು." [ಅಲ್-ಫುರ್ಕಾನ್: 23] ಈ ವಚನದಲ್ಲಿ ಹೇಳಿರುವ ಕರ್ಮಗಳು ಎಂದರೆ, ಅಲ್ಲಾಹನೊಂದಿಗೆ ಶಿರ್ಕ್ ಮಾಡಿದ ಸ್ಥಿತಿಯಲ್ಲಿ ಮರಣ ಹೊಂದಿದವರ ಕರ್ಮಗಳು.

ಹಾಗೆಯೇ, ಇದರಲ್ಲಿ ಅಲ್ಲಾಹು ಅನುಮತಿಸದ ಹೊಸದಾಗಿ ಸೇರಿಸಲಾದ ಕರ್ಮಗಳೂ ಸೇರುತ್ತವೆ. ಅವು ಪುನರುತ್ಥಾನ ದಿನದಂದು ಚದುರಿದ ಧೂಳಿನಂತೆ ಆಗುತ್ತವೆ. ಏಕೆಂದರೆ ಅವು ಅಲ್ಲಾಹನ ಪರಿಶುದ್ಧ ಶರೀಅತ್‌ಗೆ ಹೊಂದಿಕೆಯಾಗಿಲ್ಲ. ಪ್ರವಾದಿ (ಸ) ರವರು ಹೇಳುತ್ತಾರೆ:

«مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ».

"ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸುತ್ತಾರೋ, ಅದು ತಿರಸ್ಕೃತವಾಗಿದೆ." [ಬುಖಾರಿ ಮತ್ತು ಮುಸ್ಲಿಂ].

ಒಟ್ಟಿನಲ್ಲಿ, ಈ ಲೇಖಕಿ ಸಹಾಯ ಯಾಚಿಸುವುದು ಮತ್ತು ಪ್ರಾರ್ಥಿಸುವುದನ್ನು ಪ್ರವಾದಿ (ಸ) ರವರ ಕಡೆಗೆ ತಿರುಗಿಸಿದ್ದಾಳೆ, ಮತ್ತು ಯಾರ ಕೈಯಲ್ಲಿ ವಿಜಯ, ಹಾನಿ ಮತ್ತು ಲಾಭವಿದೆಯೋ, ಹಾಗೂ ಯಾರ ಹೊರತು ಬೇರೆ ಯಾರ ಕೈಯಲ್ಲೂ ಇವು ಇಲ್ಲವೋ ಆ ಜಗತ್ತಿನ ಪರಿಪಾಲಕನಿಂದ (ಅಲ್ಲಾಹನಿಂದ) ವಿಮುಖಳಾಗಿದ್ದಾಳೆ.

ಇದು ಅತ್ಯಂತ ದೊಡ್ಡ ಮತ್ತು ಗಂಭೀರ ಅಕ್ರಮವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.ಅಲ್ಲಾಹು ತನ್ನನ್ನು ಕರೆದು ಪ್ರಾರ್ಥಿಸಲು ಆದೇಶಿಸಿದ್ದಾನೆ, ಮತ್ತು ತನ್ನನ್ನು ಕರೆದು ಪ್ರಾರ್ಥಿಸುವವರಿಗೆ ಉತ್ತರಿಸುವುದಾಗಿ ವಾಗ್ದಾನ ಮಾಡಿದ್ದಾನೆ. ಹಾಗೆಯೇ, ತನ್ನನ್ನು ಕರೆದು ಪ್ರಾರ್ಥಿಸಲು ಅಹಂಕಾರ ಪಡುವವರನ್ನು ನರಕಕ್ಕೆ ಕಳುಹಿಸುವುದಾಗಿ ಎಚ್ಚರಿಸಿದ್ದಾನೆ. ಅವನು ಹೇಳುತ್ತಾನೆ:

﴿وَقَالَ رَبُّكُمُ ادْعُونِي أَسْتَجِبْ لَكُمْ إِنَّ الَّذِينَ يَسْتَكْبِرُونَ عَنْ عِبَادَتِي سَيَدْخُلُونَ جَهَنَّمَ دَاخِرِينَ 60

"ಮತ್ತು ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ: 'ನನ್ನನ್ನು ಕರೆದು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ಯಾರು ನನ್ನ ಆರಾಧನೆ ಮಾಡುವುದರಿಂದ ಅಹಂಕಾರ ಪಡುತ್ತಾರೋ, ಅವರು ಶೀಘ್ರದಲ್ಲೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು." [ಗಾಫಿರ್: 60] ಅವಮಾನಿತರಾಗಿ ಎಂದರೆ: ತುಚ್ಛರಾಗಿ, ನಿಕೃಷ್ಟರಾಗಿ. ಆದ್ದರಿಂದ ಈ ಪವಿತ್ರ ವಚನವು ಸೂಚಿಸುವುದೇನೆಂದರೆ, ಪ್ರಾರ್ಥನೆಯು ಆರಾಧನೆಯಾಗಿದೆ, ಮತ್ತು ಯಾರು ಅದರ ವಿಷಯದಲ್ಲಿ ಅಹಂಕಾರ ಪಡುತ್ತಾನೋ ಅವನ ವಾಸಸ್ಥಾನವು ನರಕವಾಗಿದೆ. ಅಲ್ಲಾಹನನ್ನು ಕರೆದು ಪ್ರಾರ್ಥಿಸುವ ವಿಷಯದಲ್ಲಿ ಅಹಂಕಾರ ಪಡುವವನ ಸ್ಥಿತಿ ಇದಾಗಿದ್ದರೆ, ಅವನ ಹೊರತಾಗಿ ಬೇರೆಯವರನ್ನು ಕರೆದು ಪ್ರಾರ್ಥಿಸುವವನ, ಮತ್ತು ಅತ್ಯಂತ ಹತ್ತಿರದವನಾದ, ಎಲ್ಲ ವಸ್ತುಗಳ ಒಡೆಯನಾದ, ಮತ್ತು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾದ ಅಲ್ಲಾಹನಿಂದ ವಿಮುಖನಾಗುವವನ ಸ್ಥಿತಿ ಹೇಗಿರಬಹುದು? ಅಲ್ಲಾಹು ಹೇಳುತ್ತಾನೆ:

﴿وَإِذَا سَأَلَكَ عِبَادِي عَنِّي فَإِنِّي قَرِيبٌ أُجِيبُ دَعْوَةَ الدَّاعِ إِذَا دَعَانِ فَلْيَسْتَجِيبُوا لِي وَلْيُؤْمِنُوا بِي لَعَلَّهُمْ يَرْشُدُونَ 186﴾

"ಮತ್ತು ನನ್ನ ದಾಸರು ನನ್ನ ಬಗ್ಗೆ ನಿಮ್ಮಲ್ಲಿ ಕೇಳಿದರೆ, (ಹೇಳಿರಿ) ನಿಶ್ಚಯವಾಗಿಯೂ ನಾನು ಹತ್ತಿರದಲ್ಲೇ ಇದ್ದೇನೆ. ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ, ನಾನು ಅವನ ಪ್ರಾರ್ಥನೆಗೆ ಉತ್ತರಿಸುತ್ತೇನೆ. ಆದ್ದರಿಂದ ಅವರು ನನ್ನ ಕರೆಗೆ ಉತ್ತರಿಸಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಇದರಿಂದ ಅವರು ಸನ್ಮಾರ್ಗವನ್ನು ಪಡೆಯಬಹುದು." [ಅಲ್-ಬಕರ: 186] ಪ್ರಾರ್ಥನೆಯೇ ಆರಾಧನೆ ಎಂದು ಪ್ರವಾದಿ (ಸ) ರವರು ಸಹೀಹ್ ಹದೀಸ್‌ನಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಚಿಕ್ಕಪ್ಪನ ಮಗ ಅಬ್ದುಲ್ಲಾ ಬಿನ್ ಅಬ್ಬಾಸ್ (ರ) ರಿಗೆ ಹೇಳುತ್ತಾರೆ:

«احْفَظِ اللهَ يَحْفَظْكَ، احْفَظِ اللهَ تَجِدْهُ تُجَاهَكَ، إِذَا سَأَلْتَ فَاسْأَلِ اللهَ، وَإِذَا اسْتَعْنَتَ فَاسْتَعِنْ بِاللهِ».

"ಅಲ್ಲಾಹನ (ಆಜ್ಞಾದೇಶಗಳ) ಸಂರಕ್ಷಣೆ ಮಾಡು, ಅವನು ನಿನ್ನ ಸಂರಕ್ಷಣೆ ಮಾಡುವನು. ಅಲ್ಲಾಹನ ಸಂರಕ್ಷಣೆ ಮಾಡು, ಆಗ ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣಬಹುದು. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಬೇಡು. ನೀನು ಸಹಾಯ ಯಾಚಿಸುವುದಾದರೆ, ಅಲ್ಲಾಹನಲ್ಲಿ ಸಹಾಯ ಯಾಚಿಸು." ಇದನ್ನು ತಿರ್ಮಿದಿ ಮತ್ತು ಇತರರು ವರದಿ ಮಾಡಿದ್ದಾರೆ.

ಪ್ರವಾದಿ(ಸ)ರು ಹೇಳಿದರು:

«مَنْ مَاتَ وَهُوَ يَدْعُو لِلَّهِ نِدًّا؛ دَخَلَ النَّارَ».

"ಯಾರು ಅಲ್ಲಾಹನಿಗೆ ಸರಿಸಾಟಿಯನ್ನು ಕಲ್ಪಿಸಿ ಪ್ರಾರ್ಥಿಸುತ್ತಾ ಮರಣ ಹೊಂದುತ್ತಾನೋ; ಅವನು ನರಕವನ್ನು ಪ್ರವೇಶಿಸುತ್ತಾನೆ." [ಬುಖಾರಿ]. ಬುಖಾರಿ ಮತ್ತು ಮುಸ್ಲಿಂನಲ್ಲಿರುವ ಒಂದು ಹದೀಸಿನಲ್ಲಿರುವಂತೆ, ಪ್ರವಾದಿ (ಸ) ರವರಲ್ಲಿ ಕೇಳಲಾಯಿತು: "ಅತ್ಯಂತ ಘೋರ ಪಾಪ ಯಾವುದು?" ಅವರು ಉತ್ತರಿಸಿದರು:

«أَنْ تَجْعَلَ لِلَّهِ نِدًّا وَهُوَ خَلَقَكَ».

"ಅಲ್ಲಾಹು ನಿನ್ನನ್ನು ಸೃಷ್ಟಿಸಿದವನಾಗಿರುವಾಗ, ನೀನು ಅವನಿಗೆ ಸರಿಸಾಟಿಯನ್ನು ಕಲ್ಪಿಸುವುದು." 'ನಿದ್ದ್' ಎಂದರೆ ಸರಿಸಾಟಿ ಮತ್ತು ಸಮಾನನು. ಆದ್ದರಿಂದ ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಕರೆದು ಪ್ರಾರ್ಥಿಸುತ್ತಾರೋ, ಅಥವಾ ಅವರಿಂದ ಸಹಾಯ ಯಾಚಿಸುತ್ತಾರೋ, ಅಥವಾ ಅವರಿಗೆ ಹರಕೆ ಹೊರುತ್ತಾರೋ, ಅಥವಾ ಅವರಿಗೆ ಬಲಿ ನೀಡುತ್ತಾರೋ, ಅಥವಾ ಹಿಂದೆ ಹೇಳಿದಂತೆ ಆರಾಧನೆಯ ಯಾವುದೇ ಭಾಗವನ್ನು ಅವರಿಗೆ ಅರ್ಪಿಸುತ್ತಾರೋ; ಅವರು ಅವರನ್ನು ಸರಿಸಾಟಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರು ಪ್ರವಾದಿಯಾಗಿರಲಿ, ಅಥವಾ ಮಹಾಪುರುಷರಾಗಿರಲಿ, ಅಥವಾ ದೇವದೂತರಾಗಿರಲಿ, ಅಥವಾ ಜಿನ್ನ್ ಆಗಿರಲಿ, ಅಥವಾ ವಿಗ್ರಹವಾಗಿರಲಿ, ಅಥವಾ ಇತರ ಯಾವುದೇ ಸೃಷ್ಟಿಗಳಾಗಿರಲಿ (ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ).

ಇಲ್ಲಿ ಯಾರಾದರೂ ಕೇಳಬಹುದು: ಹಾಗಾದರೆ, ಜೀವಂತವಿರುವ, ಉಪಸ್ಥಿತನಿರುವ ವ್ಯಕ್ತಿಯಿಂದ ಅವನ ಸಾಮರ್ಥ್ಯದಲ್ಲಿ ಒಳಪಟ್ಟದ್ದನ್ನು ಕೇಳುವುದು, ಮತ್ತು ಅವನಿಗೆ ಸಾಮರ್ಥ್ಯವಿರುವ ಇಂದ್ರಿಯಗೋಚರ ವಿಷಯಗಳಲ್ಲಿ ಅವನಿಂದ ಸಹಾಯ ಪಡೆಯುವುದರ ವಿಧಿ ಏನು? ಉತ್ತರ: ಇದು ಶಿರ್ಕ್‌ ಅಲ್ಲ. ಬದಲಿಗೆ, ಇದು ಮುಸ್ಲಿಮರ ನಡುವೆ ಅನುಮತಿಸಲಾದ ಸಾಮಾನ್ಯ ರೂಢಿಗಳಲ್ಲಿ ಸೇರಿದ್ದಾಗಿದೆ. ಮೂಸಾ (ಅ) ರವರ ಕಥೆಯಲ್ಲಿ ಅಲ್ಲಾಹು ಹೇಳುತ್ತಾನೆ:

﴿...فَاسْتَغَاثَهُ الَّذِي مِنْ شِيعَتِهِ عَلَى الَّذِي مِنْ عَدُوِّهِ...﴾

"ಆಗ ಅವರ (ಮೂಸಾರ) ಪಂಗಡದವನು ತನ್ನ ಶತ್ರುವಿನ ವಿರುದ್ಧ ಅವರೊಡನೆ ಸಹಾಯ ಯಾಚಿಸಿದನು." [ಅಲ್-ಕಸಸ್: 15] ಹಾಗೆಯೇ, ಅಲ್ಲಾಹು ಮೂಸಾ (ಅ) ರವರ ಕಥೆಯಲ್ಲಿ ಹೇಳುತ್ತಾನೆ:

﴿فَخَرَجَ مِنْهَا خَائِفًا يَتَرَقَّبُ...﴾

"ಆಗ ಅವರು (ಮೂಸಾ) ಭಯದಿಂದ, ಹಾಗೂ ಎಚ್ಚರಿಕೆಯಿಂದ ಹೊರಟರು." [ಅಲ್-ಕಸಸ್: 21] ಹಾಗೆಯೇ, ಯುದ್ಧದಲ್ಲಿ ಮತ್ತು ಜನರಿಗೆ ಎದುರಾಗುವ ಇತರ ಸಂದರ್ಭಗಳಲ್ಲಿ ಮನುಷ್ಯನು ತನ್ನ ಗೆಳೆಯರಿಂದ ಸಹಾಯ ಯಾಚಿಸುವುದು ಮತ್ತು ಪರಸ್ಪರರ ಆವಶ್ಯಕತೆಗಳನ್ನು ಮುಂದಿಡುವುದು ಇದರಲ್ಲಿ ಸೇರುತ್ತದೆ.

ತನ್ನ ಸಮುದಾಯದಲ್ಲಿ ಸೇರಿದ ಯಾರಿಗೂ ತಾನು ಲಾಭ ಅಥವಾ ಹಾನಿ ಮಾಡುವ ಶಕ್ತಿಯನ್ನು ಹೊಂದಿಲ್ಲ ಎಂದು ತಿಳಿಸಲು ಅಲ್ಲಾಹು ತನ್ನ ಪ್ರವಾದಿ (ಸ) ರವರಿಗೆ ಆದೇಶಿಸಿದ್ದಾನೆ. ಅವನು ಹೇಳುತ್ತಾನೆ:

﴿قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا21 قُلْ إِنِّي لَا أَمْلِكُ لَكُمْ ضَرًّا وَلَا رَشَدًا22﴾

ಹೇಳಿರಿ: “ನಾನು ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಾತ್ರ ಕರೆದು ಪ್ರಾರ್ಥಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.”

ಹೇಳಿರಿ: “ನಿಮಗೆ ಯಾವುದೇ ತೊಂದರೆ ಅಥವಾ ಉಪಕಾರ ಮಾಡುವುದು ನನ್ನ ಅಧೀನದಲ್ಲಿಲ್ಲ.” [ಅಲ್-ಜಿನ್ನ್: 21, 22] ಅವನು (ಅಲ್ಲಾಹು) ಹೇಳುತ್ತಾನೆ:

﴿قُلْ لَا أَمْلِكُ لِنَفْسِي نَفْعًا وَلَا ضَرًّا إِلَّا مَا شَاءَ اللَّهُ وَلَوْ كُنْتُ أَعْلَمُ الْغَيْبَ لَاسْتَكْثَرْتُ مِنَ الْخَيْرِ وَمَا مَسَّنِيَ السُّوءُ إِنْ أَنَا إِلَّا نَذِيرٌ وَبَشِيرٌ لِقَوْمٍ يُؤْمِنُونَ188﴾

"ಹೇಳಿರಿ: ನಾನು ಸ್ವತಃ ನನಗೆ ಲಾಭ ಅಥವಾ ಹಾನಿ ಮಾಡುವ ಶಕ್ತಿಯನ್ನು ಹೊಂದಿಲ್ಲ. ಅಲ್ಲಾಹು ಇಚ್ಛಿಸಿದ್ದರ ಹೊರತು. ನಾನು ಅದೃಶ್ಯವನ್ನು ತಿಳಿದಿದ್ದರೆ, ನಾನು ಒಳಿತುಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದೆ ಮತ್ತು ಕೆಡುಕು ನನ್ನನ್ನು ಸ್ಪರ್ಶಿಸುತ್ತಿರಲಿಲ್ಲ. ನಾನು ವಿಶ್ವಾಸವಿಡುವ ಜನರಿಗೆ ಮುನ್ನೆಚ್ಚರಿಕೆ ನೀಡುವವನು ಮತ್ತು ಶುಭವಾರ್ತೆ ತಿಳಿಸುವವನು ಮಾತ್ರವಾಗಿದ್ದೇನೆ."

[ಅಲ್-ಅಅ್‌ರಾಫ್: 188].

ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ಎಲ್ಲರಿಗೂ ತಿಳಿದಿರುವಂತೆ ಪ್ರವಾದಿ (ಸ) ರವರು ತಮ್ಮ ಪರಿಪಾಲಕನ (ಅಲ್ಲಾಹನ) ಹೊರತು ಬೇರೆ ಯಾರನ್ನೂ ಕರೆದು ಪ್ರಾರ್ಥಿಸುವುದಿಲ್ಲ. ಅವರಿಂದ ವರದಿಯಾಗಿರುವಂತೆ ಅವರು ಬದ್ರ್ ದಿನದಂದು ಅಲ್ಲಾಹನಲ್ಲಿ ಸಹಾಯ ಯಾಚಿಸಿದ್ದರು, ಮತ್ತು ತಮ್ಮ ಶತ್ರುವಿನ ವಿರುದ್ಧ ಅಲ್ಲಾಹನಲ್ಲಿ ಸಹಾಯ ಬೇಡಿದ್ದರು. ಅವರು ಅದಕ್ಕಾಗಿ ಹಠ ಹಿಡಿದು ಪ್ರಾರ್ಥಿಸಿದ್ದರು: "ಓ ನನ್ನ ಪರಿಪಾಲಕನೇ! ನೀನು ನನಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸು." ಎಲ್ಲಿಯವರೆಗೆಂದರೆ, ಅಬೂಬಕರ್ ಸಿದ್ದೀಕ್ (ರ) ಹೇಳುತ್ತಿದ್ದರು: "ಓ ಅಲ್ಲಾಹನ ಸಂದೇಶವಾಹಕರೇ! ಸಾಕು. ಖಂಡಿತವಾಗಿಯೂ ಅಲ್ಲಾಹು ನಿಮಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸುತ್ತಾನೆ." ಆಗ ಅಲ್ಲಾಹು ಅದರ ಬಗ್ಗೆ ಈ ವಚನವನ್ನು ಅವತೀರ್ಣಗೊಳಿಸಿದನು:

﴿إِذۡ تَسۡتَغِيثُونَ رَبَّكُمۡ فَٱسۡتَجَابَ لَكُمۡ أَنِّي مُمِدُّكُم بِأَلۡفٖ مِّنَ ٱلۡمَلَٰٓئِكَةِ مُرۡدِفِينَ9﴾

"ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಸಹಾಯ ಯಾಚಿಸಿದಾಗ, 'ನಾನು ನಿಮಗೆ ಒಬ್ಬರ ಹಿಂದೆ ಒಬ್ಬರಂತೆ ಬರುವ ಸಾವಿರ ದೇವದೂತರ ಮೂಲಕ ಸಹಾಯ ಮಾಡುತ್ತೇನೆ' ಎಂದು ಅವನು ನಿಮಗೆ ಉತ್ತರ ನೀಡಿದನು." [ಅಲ್-ಅನ್ಫಾಲ್: 9] ಅಲ್ಲಾಹು ಈ ವಚನಗಳಲ್ಲಿ ಅವರ ಸಹಾಯ ಯಾಚನೆಯ ಬಗ್ಗೆ ಉಲ್ಲೇಖಿಸಿದ್ದಾನೆ, ಮತ್ತು ಅವನು ಅವರಿಗೆ ಉತ್ತರಿಸಿ, ಅವರಿಗೆ ವಿಜಯದ ಶುಭವಾರ್ತೆಯಾಗಿ ಮತ್ತು ಮನಶಾಂತಿಯಾಗಿ, ದೇವದೂತರ ಮೂಲಕ ಸಹಾಯ ಮಾಡಿದನೆಂದು ತಿಳಿಸಿದ್ದಾನೆ. ವಿಜಯವು ದೇವದೂತರಿಂದಲ್ಲ, ಬದಲಿಗೆ ವಿಜಯವು ಕೇವಲ ಅವನಿಂದಲೇ ಬರುತ್ತದೆ ಎಂದು ಸ್ಪಷ್ಟಪಡಿಸಿದನು. ಅವನು ಹೇಳುತ್ತಾನೆ:

﴿وَمَا النَّصْرُ إِلَّا مِنْ عِنْدِ اللَّهِ...﴾

"ಮತ್ತು ವಿಜಯವು ಅಲ್ಲಾಹನಿಂದಲ್ಲದೆ ಬೇರೆ ಯಾರಿಂದಲೂ ಇಲ್ಲ." [ಆಲು ಇಮ್ರಾನ್: 126] ಅವನು (ಅಲ್ಲಾಹು) ಹೇಳುತ್ತಾನೆ:

﴿وَلَقَدْ نَصَرَكُمُ اللَّهُ بِبَدْرٍ وَأَنْتُمْ أَذِلَّةٌ فَاتَّقُوا اللَّهَ لَعَلَّكُمْ تَشْكُرُونَ123﴾

ಬದ್ರ್‌ನಲ್ಲಿ ನೀವು ಅತ್ಯಂತ ದುರ್ಬಲರಾಗಿದ್ದಾಗ, ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ. ನೀವು ಕೃತಜ್ಞರಾಗುವುದಕ್ಕಾಗಿ. [ಆಲು ಇಮ್ರಾನ್:123] ಬದ್ರ್ ದಿನದಂದು ತಾನೇ ಅವರಿಗೆ ಸಹಾಯ ಮಾಡಿದವನೆಂದು ಅವನು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ. ಇದರಿಂದ ತಿಳಿದುಬರುವುದೇನೆಂದರೆ, ಅವನು ಅವರಿಗೆ ನೀಡಿದ ಆಯುಧ ಮತ್ತು ಶಕ್ತಿ, ಮತ್ತು ಅವನು ಅವರ ಬಳಿಗೆ ಕಳುಹಿಸಿದ ದೇವದೂತರು, ಇವೆಲ್ಲವೂ ವಿಜಯ, ಶುಭವಾರ್ತೆ ಮತ್ತು ಮನಶಾಂತಿಯ ಕಾರಣಗಳಾಗಿವೆ. ವಿಜಯವು ಅವುಗಳಿಂದಲ್ಲ, ಬದಲಿಗೆ ಅದು ಅಲ್ಲಾಹನಿಂದ ಮಾತ್ರವಾಗಿದೆ. ಹಾಗಿರುವಾಗ, ಈ ಲೇಖಕಿಯಂಥವರು ಸಹಾಯ ಯಾಚಿಸುವುದನ್ನು ಮತ್ತು ವಿಜಯವನ್ನು ಬೇಡುವುದನ್ನು ಪ್ರವಾದಿ (ಸ) ರವರ ಕಡೆಗೆ ತಿರುಗಿಸಲು ಹೇಗೆ ಎದೆಗಾರಿಕೆ ತೋರುತ್ತಾರೆ? ಮತ್ತು ಎಲ್ಲಾ ವಸ್ತುಗಳ ಒಡೆಯನಾದ, ಮತ್ತು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾದ ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಹೇಗೆ ವಿಮುಖರಾಗುತ್ತಾರೆ?

ಇದು ಅತ್ಯಂತ ಕೆಟ್ಟ ಅಜ್ಞಾನವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟೇ ಅಲ್ಲ, ಇದು ಅತ್ಯಂತ ದೊಡ್ಡ ಶಿರ್ಕ್ ಆಗಿದೆ. ಆದ್ದರಿಂದ ಲೇಖಕಿಯು ಅಲ್ಲಾಹನ ಕಡೆಗೆ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುವುದು ಕಡ್ಡಾಯವಾಗಿದೆ. ಪ್ರಾಮಾಣಿಕ ಪಶ್ಚಾತ್ತಾಪವು ಹಲವಾರು ವಿಷಯಗಳನ್ನು ಒಳಗೊಂಡಿದೆ. ಅವುಗಳು: ಒಂದು: ತನ್ನಿಂದ ಸಂಭವಿಸಿದ ತಪ್ಪಿಗಾಗಿ ವಿಷಾದಪಡುವುದು. ಎರಡು: ತನ್ನಿಂದ ಸಂಭವಿಸಿದ ತಪ್ಪಿನಿಂದ ಸಂಪೂರ್ಣ ದೂರವಾಗುವುದು. ಮೂರು: ಅಲ್ಲಾಹನ ಮೇಲಿರುವ ಗೌರವದಿಂದ, ಅವನಲ್ಲಿರುವ ನಿಷ್ಕಳಂಕತೆಯಿಂದ, ಅವನ ಆಜ್ಞೆಯನ್ನು ಪಾಲಿಸುವುದಕ್ಕಾಗಿ, ಮತ್ತು ಅವನು ನಿಷೇಧಿಸಿದ್ದರಿಂದ ದೂರವಿರುವುದಕ್ಕಾಗಿ ಆ ತಪ್ಪನ್ನು ಪುನರಾವರ್ತಿಸುವುದಿಲ್ಲವೆಂದು ದೃಢ ನಿಶ್ಚಯ ಮಾಡಿಕೊಳ್ಳುವುದು. ಇದೇ ಪ್ರಾಮಾಣಿಕ ಪಶ್ಚಾತ್ತಾಪ. ತಪ್ಪು ಸೃಷ್ಟಿಗಳ ಹಕ್ಕಿಗೆ ಸಂಬಂಧಿಸಿದ್ದಾಗಿದ್ದರೆ, ಅದಕ್ಕೆ ನಾಲ್ಕನೆಯ ನಿಯಮವಿದೆ. ಅದೇನೆಂದರೆ, ಆ ಹಕ್ಕನ್ನು ಅದರ ಹಕ್ಕುದಾರನಿಗೆ ಹಿಂದಿರುಗಿಸುವುದು, ಅಥವಾ ಅವನಲ್ಲಿ ಕ್ಷಮೆ ಕೇಳುವುದು.

ಅಲ್ಲಾಹು ತನ್ನ ದಾಸರಿಗೆ ಪಶ್ಚಾತ್ತಾಪ ಪಡಲು ಆದೇಶಿಸಿದ್ದಾನೆ, ಮತ್ತು ಅದನ್ನು ಸ್ವೀಕರಿಸುವುದಾಗಿ ವಾಗ್ದಾನ ಮಾಡಿದ್ದಾನೆ. ಅವನು ಹೇಳುತ್ತಾನೆ:

﴿...وَتُوبُوا إِلَى اللَّهِ جَمِيعًا أَيُّهَ الْمُؤْمِنُونَ لَعَلَّكُمْ تُفْلِحُونَ﴾

"ಮತ್ತು ಓ ಸತ್ಯವಿಶ್ವಾಸಿಗಳೇ, ನೀವೆಲ್ಲರೂ ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡಿರಿ. ನೀವು ಯಶಸ್ವಿಯಾಗಬಹುದು." [ಅನ್ನೂರ್: 31] ಕ್ರಿಶ್ಚಿಯನ್ನರ ವಿಷಯದಲ್ಲಿ ಅಲ್ಲಾಹು ಹೇಳುತ್ತಾನೆ:

﴿أَفَلَا يَتُوبُونَ إِلَى اللَّهِ وَيَسْتَغْفِرُونَهُ وَاللَّهُ غَفُورٌ رَحِيمٌ74﴾

"ಅವರು ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡುವುದಿಲ್ಲವೇ ಮತ್ತು ಅವನಲ್ಲಿ ಕ್ಷಮೆ ಯಾಚಿಸುವುದಿಲ್ಲವೇ? ಮತ್ತು ಅಲ್ಲಾಹು ಎಲ್ಲವನ್ನೂ ಕ್ಷಮಿಸುವವನು ಹಾಗೂ ಅತ್ಯಧಿಕ ಕರುಣೆ ತೋರುವವನಾಗಿದ್ದಾನೆ." [ಅಲ್-ಮಾಇದ: 74] ಅವನು (ಅಲ್ಲಾಹು) ಹೇಳುತ್ತಾನೆ:

﴿وَالَّذِينَ لَا يَدْعُونَ مَعَ اللَّهِ إِلَهًا آخَرَ وَلَا يَقْتُلُونَ النَّفْسَ الَّتِي حَرَّمَ اللَّهُ إِلَّا بِالْحَقِّ وَلَا يَزْنُونَ وَمَنْ يَفْعَلْ ذَلِكَ يَلْقَ أَثَامًا68 يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا69 إِلَّا مَنْ تَابَ وَآمَنَ وَعَمِلَ عَمَلًا صَالِحًا فَأُولَئِكَ يُبَدِّلُ اللَّهُ سَيِّئَاتِهِمْ حَسَنَاتٍ وَكَانَ اللَّهُ غَفُورًا رَحِيمًا70﴾

"ಮತ್ತು ಅಲ್ಲಾಹನೊಂದಿಗೆ ಬೇರೆ ದೇವರನ್ನು ಕರೆದು ಪ್ರಾರ್ಥಿಸದವರು, ಮತ್ತು ಅಲ್ಲಾಹು ನಿಷೇಧಿಸಿದ ಜೀವವನ್ನು ನ್ಯಾಯವಾಗಿಯೇ ಹೊರತು ಕೊಲ್ಲದವರು, ಮತ್ತು ವ್ಯಭಿಚಾರ ಮಾಡದವರು. ಮತ್ತು ಯಾರು ಅದನ್ನು ಮಾಡುತ್ತಾರೋ, ಅವರು ಪಾಪವನ್ನು ಎದುರಿಸುತ್ತಾರೆ.

ಪುನರುತ್ಥಾನ ದಿನದಂದು ಅವರಿಗೆ ಶಿಕ್ಷೆಯು ದ್ವಿಗುಣಗೊಳ್ಳುತ್ತದೆ ಮತ್ತು ಅವರು ಅದರಲ್ಲಿ ಅವಮಾನಿತರಾಗಿರುವ ಸ್ಥಿತಿಯಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ.

ಆದರೆ ಯಾರು ಪಶ್ಚಾತ್ತಾಪ ಪಟ್ಟು, ವಿಶ್ವಾಸವಿಟ್ಟು, ಸತ್ಕರ್ಮಗಳನ್ನು ಮಾಡುತ್ತಾರೋ, ಅಂತಹವರ ಕೆಟ್ಟ ಕಾರ್ಯಗಳನ್ನು ಅಲ್ಲಾಹು ಒಳಿತುಗಳಾಗಿ ಬದಲಾಯಿಸುತ್ತಾನೆ. ಮತ್ತು ಅಲ್ಲಾಹು ಅತ್ಯಧಿಕ ಕ್ಷಮಿಸುವವನು ಮತ್ತು ಅಪಾರ ಕರುಣೆಯುಳ್ಳವನಾಗಿದ್ದಾನೆ." [ಅಲ್-ಫುರ್ಕಾನ್: 68-70] ಅವನು (ಅಲ್ಲಾಹು) ಹೇಳುತ್ತಾನೆ:

﴿وَهُوَ الَّذِي يَقْبَلُ التَّوْبَةَ عَنْ عِبَادِهِ وَيَعْفُو عَنِ السَّيِّئَاتِ وَيَعْلَمُ مَا تَفْعَلُونَ25﴾

"ಮತ್ತು ಅವನೇ ತನ್ನ ದಾಸರಿಂದ ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ಕೆಟ್ಟ ಕಾರ್ಯಗಳನ್ನು ಕ್ಷಮಿಸುವವನು. ಮತ್ತು ನೀವು ಮಾಡುವುದನ್ನು ಅವನು ಬಹಳ ಚೆನ್ನಾಗಿ ತಿಳಿಯುತ್ತಾನೆ." [ಅಶ್ಶೂರಾ: 25]

ಮತ್ತು ಅಲ್ಲಾಹನ ಸಂದೇಶವಾಹಕರು ﷺ ಹೀಗೆ ಹೇಳಿದರೆಂದು ದೃಢಪಟ್ಟಿದೆ:

«الإِسْلَامُ يَهْدِمُ مَا كَانَ قَبْلَهُ، وَالتَّوْبَةُ تَجُبُّ مَا كَانَ قَبْلَهَا».

"ಇಸ್ಲಾಂ ಅದರ ಹಿಂದಿನದನ್ನು ನಾಶಪಡಿಸುತ್ತದೆ, ಮತ್ತು ಪಶ್ಚಾತ್ತಾಪವು ಅದರ ಹಿಂದಿನದನ್ನು ಅಳಿಸಿಹಾಕುತ್ತದೆ."

ಶಿರ್ಕ್‌ನ ಅಪಾಯದ ಗಂಭೀರತೆಯಿಂದ, ಅದು ಪಾಪಗಳಲ್ಲಿ ಅತಿ ಭಯಾನಕವಾಗಿರುವುದರಿಂದ, ಈ ಲೇಖಕಿಯ ಮಾತಿನಿಂದ ಜನರು ಮೋಸಹೋಗುವ ಭಯವಿರುವುದರಿಂದ, ಮತ್ತು ಅಲ್ಲಾಹನ ಹಾಗೂ ಅವನ ದಾಸರ ಹಿತಚಿಂತಕನಾಗಿರುವುದು ಕಡ್ಡಾಯವಾಗಿರುವುದರಿಂದ ನಾನು ಈ ಸಂಕ್ಷಿಪ್ತ ಮಾತುಗಳನ್ನು ಹೇಳಿದ್ದೇನೆ. ಇದರಿಂದ ಜನರಿಗೆ ಪ್ರಯೋಜನವನ್ನು ನೀಡಲು, ನಮ್ಮ ಮತ್ತು ಎಲ್ಲಾ ಮುಸ್ಲಿಮರ ಸ್ಥಿತಿಗತಿಗಳನ್ನು ಸುಧಾರಿಸಲು, ನಮಗೆಲ್ಲರಿಗೂ ಧರ್ಮದಲ್ಲಿ ತಿಳುವಳಿಕೆಯನ್ನು ನೀಡಿ ಅದರ ಮೇಲೆ ಸ್ಥಿರವಾಗಿರುವಂತೆ ಮಾಡಲು, ಮತ್ತು ನಮ್ಮ ಆತ್ಮಗಳ ಕೆಡುಕುಗಳಿಂದ ಹಾಗೂ ನಮ್ಮ ಕರ್ಮಗಳ ಕೆಡುಕುಗಳಿಂದ ನಮ್ಮನ್ನು ಮತ್ತು ಎಲ್ಲಾ ಮುಸ್ಲಿಮರನ್ನು ರಕ್ಷಿಸಲು ನಾನು ಅಲ್ಲಾಹನಲ್ಲಿ ಬೇಡಿಕೊಳ್ಳುತ್ತೇನೆ. ನಿಶ್ಚಯವಾಗಿಯೂ ಅವನು ಅದನ್ನು ವಹಿಸಿಕೊಳ್ಳುತ್ತಾನೆ ಮತ್ತು ಅದಕ್ಕೆ ಸಾಮರ್ಥ್ಯವುಳ್ಳವನಾಗಿದ್ದಾನೆ.

ಅಲ್ಲಾಹನ ಶಾಂತಿ ಮತ್ತು ಶುಭಾಶೀರ್ವಾದಗಳು ಅವನ ದಾಸರು ಮತ್ತು ಸಂದೇಶವಾಹಕರಾದ, ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬ ಮತ್ತು ಸಹಚರರ ಮೇಲೆ ಇರಲಿ.

 

 

***

 


بِسْمِ اللهِ الرَّحمَنِ الرَّحِيمِ

ಮೂರನೆಯ ಸಂದೇಶ:

ಜಿನ್ನ್‌ಗಳಲ್ಲಿ ಮತ್ತು ಶೈತಾನರಲ್ಲಿ ಸಹಾಯ ಯಾಚಿಸುವುದರ ಮತ್ತು ಅವರಿಗೆ ಹರಕೆ ಹೊರುವುದರ ವಿಧಿ

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರಿಂದ, ಮುಸ್ಲಿಮರಲ್ಲಿ ಯಾರು ಇದನ್ನು ನೋಡುತ್ತಾರೋ ಅವರಿಗೆ. ಅಲ್ಲಾಹು ನನಗೆ ಮತ್ತು ಅವರಿಗೆ ತನ್ನ ಧರ್ಮವನ್ನು ಬಿಗಿಯಾಗಿ ಹಿಡಿಯಲು ಮತ್ತು ಅದರ ಮೇಲೆ ಸ್ಥಿರವಾಗಿರಲು ಅನುಗ್ರಹಿಸಲಿ, ಆಮೀನ್.

ನಿಮ್ಮ ಮೇಲೆ ಶಾಂತಿ, ಅಲ್ಲಾಹನ ಕರುಣೆ ಮತ್ತು ಅವನ ಆಶೀರ್ವಾದಗಳು ಇರಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಕೆಲವು ಸಹೋದರರು ನನ್ನೊಂದಿಗೆ, ಅಲ್ಲಾಹೇತರರನ್ನು ಕರೆದು ಪ್ರಾರ್ಥಿಸುವುದು, ಪ್ರಮುಖ ವಿಷಯಗಳಲ್ಲಿ ಅವರಿಂದ ಸಹಾಯ ಯಾಚಿಸುವುದು, ಜಿನ್ನ್‌ಗಳನ್ನು ಕರೆದು ಪ್ರಾರ್ಥಿಸುವುದು, ಅವರಿಂದ ಸಹಾಯ ಯಾಚಿಸುವುದು, ಅವರಿಗೆ ಹರಕೆ ಹೊರುವುದು, ಮತ್ತು ಅವರಿಗಾಗಿ ಬಲಿ ನೀಡುವುದು ಮುಂತಾದ ಕೆಲವು ಅಜ್ಞಾನಿಗಳು ಮಾಡುವ ಕಾರ್ಯಗಳ ಬಗ್ಗೆ ಕೇಳಿದ್ದಾರೆ. "ಓ ಏಳು ಜನರೇ!" ಅಂದರೆ, "ಜಿನ್ನ್‌ಗಳ ಏಳು ಮುಖ್ಯಸ್ಥರೇ! ಅವನನ್ನು ಹಿಡಿಯಿರಿ, ಅವನ ಮೂಳೆಗಳನ್ನು ಮುರಿಯಿರಿ, ಅವನ ರಕ್ತವನ್ನು ಕುಡಿಯಿರಿ, ಅವನನ್ನು ವಿರೂಪಗೊಳಿಸಿರಿ, ಓ ಏಳು ಜನರೇ! ಅವನಿಗೆ ಹೀಗೆ ಹೀಗೆ ಮಾಡಿರಿ" ಎಂದು ಜನರು ಹೇಳುವ ಮಾತು ಕೂಡ ಇದರಲ್ಲಿ ಒಳಪಡುತ್ತದೆ. ಅಥವಾ ಕೆಲವರು ಹೀಗೆ ಹೇಳುತ್ತಾರೆ: "ಓ ಮಧ್ಯಾಹ್ನದ ಜಿನ್ನ್‌ಗಳೇ! ಓ ಸಂಜೆಯ ಜಿನ್ನ್‌ಗಳೇ! ಅವನನ್ನು ಹಿಡಿಯಿರಿ." ಇದು ದಕ್ಷಿಣದ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪ್ರವಾದಿಗಳು, ಮಹಾಪುರುಷರು ಮುಂತಾದ ಮೃತರನ್ನು ಕರೆದು ಪ್ರಾರ್ಥಿಸುವುದು, ದೇವದೂತರನ್ನು ಕರೆದು ಪ್ರಾರ್ಥಿಸುವುದು ಮತ್ತು ಅವರಿಂದ ಸಹಾಯ ಯಾಚಿಸುವುದು ಕೂಡ ಇದರೊಂದಿಗೆ ಸೇರುತ್ತದೆ. ಇಸ್ಲಾಮಿಗೆ ಸೇರಿದವರೆಂದು (ಮುಸ್ಲಿಮರೆಂದು) ಹೇಳಿಕೊಳ್ಳುವ ಅನೇಕ ಜನರಿಂದ ಇಂತಹ ಕಾರ್ಯಗಳು ಸಂಭವಿಸುತ್ತವೆ. ಅದು ಅವರ ಅಜ್ಞಾನದಿಂದ, ಮತ್ತು ಅವರಿಗಿಂತ ಹಿಂದಿನವರನ್ನು ಅನುಕರಿಸುವುದರಿಂದಾಗಿದೆ. ಕೆಲವರು ಈ ವಿಷಯವನ್ನು ಕ್ಷುಲ್ಲಕವೆಂದು ಪರಿಗಣಿಸಿ, "ಇದು ಕೇವಲ ನಾಲಿಗೆಯ ಮೇಲೆ ಬರುವ ಮಾತು, ನಾವು ಅದನ್ನು ಉದ್ದೇಶಿಸುವುದಿಲ್ಲ ಅಥವಾ ನಂಬುವುದಿಲ್ಲ" ಎಂದು ವಾದಿಸಬಹುದು.

ಅವರು ನನ್ನಲ್ಲಿ ಕೇಳಿದ ಇನ್ನೊಂದು ವಿಷಯವೇನೆಂದರೆ, ಈ ಕಾರ್ಯಗಳನ್ನು ಮಾಡುವವರೆಂದು ಗುರುತಿಸಲ್ಪಟ್ಟವರೊಂದಿಗೆ ವಿವಾಹ ಮಾಡಿಕೊಳ್ಳುವುದು, ಅವರ ವಧೆ ಮಾಡಿದ ಪ್ರಾಣಿಗಳನ್ನು ತಿನ್ನುವುದು, ಅವರಿಗೆ (ಜನಾಝ) ನಮಾಝ್ ಮಾಡುವುದು, ಅವರ ಹಿಂದೆ (ನಮಾಝ್) ಮಾಡುವುದು, ಮತ್ತು ಮಾಟಗಾರರು ಹಾಗೂ ಭವಿಷ್ಯ ನುಡಿಯುವವರ ಮಾತನ್ನು ನಂಬುವುದು—ಉದಾಹರಣೆಗೆ, ಕೇವಲ ರೋಗಿಯ ದೇಹವನ್ನು ಸ್ಪರ್ಶಿಸಿದ ಪೇಟ, ಪೈಜಾಮ, ಮುಸುಕು ಮುಂತಾದ ವಸ್ತುಗಳನ್ನು ನೋಡಿ ರೋಗ ಮತ್ತು ಅದರ ಕಾರಣಗಳನ್ನು ತಿಳಿಯುವುದಾಗಿ ಹೇಳಿಕೊಳ್ಳುವವರ ಮಾತನ್ನು ನಂಬುವುದು ಮುಂತಾದವುಗಳ ವಿಧಿಯೇನು?

ಉತ್ತರ: ಅಲ್ಲಾಹನಿಗೆ ಸರ್ವಸ್ತುತಿಗಳು. ಯಾರ ನಂತರ ಬೇರೆ ಯಾವುದೇ ಪ್ರವಾದಿ ಇಲ್ಲವೋ ಅವರ (ಪ್ರವಾದಿ ಮುಹಮ್ಮದ್) ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಪುನರುತ್ಥಾನ ದಿನದವರೆಗೆ ಅವರ ಮಾರ್ಗದರ್ಶನವನ್ನು ಅನುಸರಿಸುವವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ಇರಲಿ.

ಇನ್ನು ವಿಷಯಕ್ಕೆ ಬರುವುದಾದರೆ: ನಿಶ್ಚಯವಾಗಿಯೂ ಅಲ್ಲಾಹು ಇತರ ಎಲ್ಲವನ್ನೂ ಬಿಟ್ಟು ತನ್ನನ್ನು ಮಾತ್ರ ಆರಾಧಿಸುವುದಕ್ಕಾಗಿ, ಮತ್ತು ಪ್ರಾರ್ಥನೆ, ಸಹಾಯ ಯಾಚನೆ, ಬಲಿ, ಹರಕೆ ಹಾಗೂ ಇತರ ಎಲ್ಲಾ ಆರಾಧನೆಗಳನ್ನು ತನಗೆ ಮಾತ್ರ ಅರ್ಪಿಸುವುದಕ್ಕಾಗಿ ಎರಡು ಭಾರವಾದ ಸೃಷ್ಟಿಗಳನ್ನು (ಜಿನ್ನ್ ಮತ್ತು ಮನುಷ್ಯರನ್ನು) ಸೃಷ್ಟಿಸಿದ್ದಾನೆ. ಇದಕ್ಕಾಗಿಯೇ ಅವನು ಸಂದೇಶವಾಹಕರನ್ನು ಕಳುಹಿಸಿದ್ದಾನೆ, ಮತ್ತು ಅವರಿಗೆ ಇದನ್ನೇ ಆದೇಶಿಸಿದ್ದಾನೆ. ಇದನ್ನು ವಿವರಿಸುವುದಕ್ಕಾಗಿ ಮತ್ತು ಇದರ ಕಡೆಗೆ ಆಹ್ವಾನಿಸುವುದಕ್ಕಾಗಿ, ಹಾಗೂ ಅಲ್ಲಾಹನೊಂದಿಗೆ ಶಿರ್ಕ್ ಮಾಡುವುದರಿಂದ ಮತ್ತು ಅವನ ಹೊರತಾಗಿ ಇತರರನ್ನು ಆರಾಧಿಸುವುದರಿಂದ ಜನರನ್ನು ಎಚ್ಚರಿಸುವುದಕ್ಕಾಗಿ ಅವನು ಆಕಾಶದಿಂದ ಗ್ರಂಥಗಳನ್ನು ಇಳಿಸಿದ್ದಾನೆ. ಅವುಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಪವಿತ್ರ ಕುರ್‌ಆನ್ ಆಗಿದೆ. ಇದು ಧರ್ಮದ ಮೂಲತತ್ವ ಮತ್ತು ಅಡಿಪಾಯವಾಗಿದೆ, 'ಲಾ ಇಲಾಹ ಇಲ್ಲಲ್ಲಾಹ್' ಎಂಬ ಸಾಕ್ಷ್ಯವಚನದ ಅರ್ಥವಾಗಿದೆ, ಮತ್ತು ಅಲ್ಲಾಹನಲ್ಲದೆ ಆರಾಧನೆಗೆ ಅರ್ಹನಾದ ಬೇರೆ ಸತ್ಯ ದೇವರಿಲ್ಲ ಎಂಬ ಮಾತಿನ ನಿಜಸ್ಥಿತಿಯಾಗಿದೆ. ಇದು ಅಲ್ಲಾಹು ಅಲ್ಲದವರಿಗೆ ದೈವತ್ವ ಮತ್ತು ಆರಾಧನೆಯನ್ನು ಅರ್ಪಿಸುವುದನ್ನು ನಿರಾಕರಿಸುತ್ತದೆ, ಮತ್ತು ಅದನ್ನು (ಆರಾಧನೆಯನ್ನು) ಅಲ್ಲಾಹನ ಹೊರತಾದ ಇತರ ಎಲ್ಲಾ ಸೃಷ್ಟಿಗಳನ್ನು ಬಿಟ್ಟು ಕೇವಲ ಅವನಿಗೆ ಮಾತ್ರ ದೃಢೀಕರಿಸುತ್ತದೆ. ಇದಕ್ಕೆ ಅಲ್ಲಾಹನ ಗ್ರಂಥ ಮತ್ತು ಅವನ ಸಂದೇಶವಾಹಕರ (ಸ) ಸುನ್ನತ್‌ನಲ್ಲಿ ಬಹಳಷ್ಟು ಪುರಾವೆಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ:

﴿وَمَا خَلَقْتُ الْجِنَّ وَالْإِنْسَ إِلَّا لِيَعْبُدُونِ56﴾

"ಮತ್ತು ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ನನ್ನನ್ನು ಆರಾಧಿಸಲಿಕ್ಕಾಗಿಯೇ ಹೊರತು ಬೇರೆ ಯಾವುದಕ್ಕೂ ಸೃಷ್ಟಿಸಿಲ್ಲ." [ಅದ್ದಾರಿಯಾತ್:56] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَقَضَى رَبُّكَ أَلَّا تَعْبُدُوا إِلَّا إِيَّاهُ...﴾

"ಮತ್ತು ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ವಿಧಿಸಿದ್ದಾನೆ." [ಅಲ್-ಇಸ್ರಾಅ್: 23] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَا أُمِرُوا إِلَّا لِيَعْبُدُوا اللَّهَ مُخْلِصِينَ لَهُ الدِّينَ حُنَفَاءَ...﴾

"ಮತ್ತು ಅವರಿಗೆ ಏಕನಿಷ್ಠೆಯಿಂದ, ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ, ಅವನನ್ನು ಆರಾಧಿಸಲು ಹೊರತು ಇನ್ನೇನೂ ಆದೇಶಿಸಲಾಗಿರಲಿಲ್ಲ." [ಅಲ್-ಬಯ್ಯಿನ: 5] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَقَالَ رَبُّكُمُ ادْعُونِي أَسْتَجِبْ لَكُمْ إِنَّ الَّذِينَ يَسْتَكْبِرُونَ عَنْ عِبَادَتِي سَيَدْخُلُونَ جَهَنَّمَ دَاخِرِينَ60﴾

"ಮತ್ತು ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ: 'ನನ್ನನ್ನು ಕರೆದು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ಯಾರು ನನ್ನ ಆರಾಧನೆ ಮಾಡುವುದರಿಂದ ಅಹಂಕಾರ ಪಡುತ್ತಾರೋ, ಅವರು ಶೀಘ್ರದಲ್ಲೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು." [ಗಾಫಿರ್: 60] ಅವನು (ಅಲ್ಲಾಹು) ಹೇಳುತ್ತಾನೆ:

﴿وَإِذَا سَأَلَكَ عِبَادِي عَنِّي فَإِنِّي قَرِيبٌ أُجِيبُ دَعْوَةَ الدَّاعِ إِذَا دَعَانِ...﴾

"ಮತ್ತು ನನ್ನ ದಾಸರು ನನ್ನ ಬಗ್ಗೆ ನಿಮ್ಮಲ್ಲಿ ಕೇಳಿದರೆ, (ಹೇಳಿರಿ) ನಿಶ್ಚಯವಾಗಿಯೂ ನಾನು ಹತ್ತಿರದಲ್ಲೇ ಇದ್ದೇನೆ. ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದಾಗ ನಾನು ಅವನ ಪ್ರಾರ್ಥನೆಗೆ ಉತ್ತರಿಸುತ್ತೇನೆ." [ಅಲ್-ಬಕರ: 186].

ತಾನು ಎರಡು ಭಾರವಾದ ಸೃಷ್ಟಿಗಳನ್ನು ತನ್ನ ಆರಾಧನೆಗಾಗಿ ಸೃಷ್ಟಿಸಿದ್ದೇನೆ, ಮತ್ತು ತನ್ನ ದಾಸರಿಗೆ ಕುರ್‌ಆನ್‌ನ ಸ್ಪಷ್ಟ ವಚನಗಳಲ್ಲಿ, ಮತ್ತು ಸಂದೇಶವಾಹಕರ (ಸ) ನಾಲಿಗೆಯ ಮೂಲಕ, ತಮ್ಮ ಪರಿಪಾಲಕನ (ಅಲ್ಲಾಹನ) ಹೊರತು ಬೇರೆ ಯಾರನ್ನೂ ಆರಾಧಿಸಬಾರದೆಂದು ಅವರಿಗೆ ವಿಧಿಸಿದ್ದೇನೆ (ಆದೇಶಿಸಿದ್ದೇನೆ ಮತ್ತು ಉಪದೇಶಿಸಿದ್ದೇನೆ) ಎಂದು ಈ ವಚನಗಳಲ್ಲಿ ಅಲ್ಲಾಹು ಸ್ಪಷ್ಟಪಡಿಸಿದ್ದಾನೆ.

ಹಾಗೆಯೇ, ಪ್ರಾರ್ಥನೆಯು ಒಂದು ಮಹಾನ್ ಆರಾಧನೆಯಾಗಿದ್ದು, ಯಾರು ಅದರ ಬಗ್ಗೆ ಅಹಂಕಾರ ಪಡುತ್ತಾರೋ ಅವರು ನರಕವನ್ನು ಪ್ರವೇಶಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾನೆ. ಅವನು ತನ್ನ ದಾಸರಿಗೆ ತನ್ನನ್ನು ಮಾತ್ರ ಕರೆದು ಪ್ರಾರ್ಥಿಸಲು ಆದೇಶಿಸಿದ್ದಾನೆ. ತಾನು ಅತ್ಯಂತ ಹತ್ತಿರವಿದ್ದು ಅವರ ಪ್ರಾರ್ಥನೆಗಳಿಗೆ ಉತ್ತರಿಸುತ್ತೇನೆಂದು ತಿಳಿಸಿದ್ದಾನೆ. ಆದ್ದರಿಂದ, ಪ್ರಾರ್ಥನೆಗಳನ್ನು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ ಮೀಸಲಿಡುವುದು ಎಲ್ಲಾ ದಾಸರ ಮೇಲೂ ಕಡ್ಡಾಯವಾಗಿದೆ. ಏಕೆಂದರೆ ಅದು ಅವರನ್ನು ಸೃಷ್ಟಿಸಲಾಗಿರುವ ಮತ್ತು ಅವರಿಗೆ ಆದೇಶಿಸಲಾಗಿರುವ ಆರಾಧನೆಯ ಒಂದು ವಿಧವಾಗಿದೆ. ಅಲ್ಲಾಹು ಹೇಳುತ್ತಾನೆ:

﴿قُلْ إِنَّ صَلَاتِي وَنُسُكِي وَمَحْيَايَ وَمَمَاتِي لِلَّهِ رَبِّ الْعَالَمِينَ162 لَا شَرِيكَ لَهُ وَبِذَلِكَ أُمِرْتُ وَأَنَا أَوَّلُ الْمُسْلِمِينَ163﴾

“ಹೇಳಿರಿ: ನನ್ನ ನಮಾಝ್, ಬಲಿಕರ್ಮ, ಜೀವನ ಮತ್ತು ಮರಣ ಎಲ್ಲವೂ ಸರ್ವಲೋಕಗಳ ಸಂರಕ್ಷಕನಾಗಿರುವ ಅಲ್ಲಾಹನಿಗೆ ಮೀಸಲಾಗಿದೆ.

ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆದೇಶಿಸಲಾಗಿದೆ. ಮತ್ತು ನಾನು ಮುಸಲ್ಮಾನರಲ್ಲಿ (ಅವನಿಗೆ ಶರಣಾದವರಲ್ಲಿ) ಮೊತ್ತಮೊದಲಿಗನಾಗಿದ್ದೇನೆ."

[ಅಲ್-ಅನ್ಆಮ್: 162, 163]

ಆದ್ದರಿಂದ, ಅವರ ನಮಾಝ್, ಅವರ ಬಲಿಕರ್ಮ, ಅವರ ಜೀವನ ಮತ್ತು ಅವರ ಮರಣ ಎಲ್ಲವೂ ಯಾವುದೇ ಸಹಭಾಗಿಗಳಿಲ್ಲದ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮಾತ್ರ ಮೀಸಲು ಎಂದು ಜನರಿಗೆ ತಿಳಿಸಲು ಅಲ್ಲಾಹು ತನ್ನ ಪ್ರವಾದಿ (ಸ) ರಿಗೆ ಆದೇಶಿಸಿದ್ದಾನೆ. ಇದರ ಆಧಾರದಲ್ಲಿ, ಯಾರು ಅಲ್ಲಾಹನಲ್ಲದೆ ಇತರರಿಗೆ ಬಲಿ ನೀಡುತ್ತಾರೋ, ಅವರು ಅಲ್ಲಾಹನೊಂದಿಗೆ ಶಿರ್ಕ್ ಮಾಡಿದ್ದಾರೆ. ಅಂದರೆ, ಅವರು ಅಲ್ಲಾಹನಲ್ಲದೆ ಇತರರಿಗೆ ನಮಾಝ್ ಮಾಡಿದಂತೆ ಆಗುತ್ತಾರೆ. ಏಕೆಂದರೆ ಅಲ್ಲಾಹು ನಮಾಝ್ ಮತ್ತು ಬಲಿಕರ್ಮವನ್ನು ಜೊತೆಯಾಗಿ ಹೇಳಿದ್ದಾನೆ, ಮತ್ತು ಅವೆರಡೂ ಯಾವುದೇ ಸಹಭಾಗಿಗಳಿಲ್ಲದ ಅಲ್ಲಾಹನಿಗೆ ಮಾತ್ರ ಮೀಸಲಾಗಿದೆ ಎಂದು ತಿಳಿಸಿದ್ದಾನೆ. ಆದ್ದರಿಂದ, ಯಾರು ಅಲ್ಲಾಹನಲ್ಲದೆ ಜಿನ್ನ್‌ಗಳು, ದೇವದೂತರು, ಮೃತರು ಮುಂತಾದವರಿಗೆ, ಅದರ ಮೂಲಕ ಅವರಿಗೆ ಹತ್ತಿರವಾಗಲು ಬಲಿ ನೀಡುತ್ತಾರೋ, ಅವರು ಅಲ್ಲಾಹನಲ್ಲದೆ ಇತರರಿಗೆ ನಮಾಝ್ ಮಾಡಿದಂತೆ ಆಗುತ್ತಾರೆ. ಸಹೀಹ್ ಹದೀಸ್‌ನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«لَعَنَ اللهُ مَنْ ذَبَحَ لِغَيْرِ اللهِ».

"ಅಲ್ಲಾಹು ಅಲ್ಲದವರಿಗೆ ಬಲಿ ಅರ್ಪಿಸುವವನನ್ನು ಅಲ್ಲಾಹು ಶಪಿಸಲಿ." ಇಮಾಮ್ ಅಹ್ಮದ್ ರವರು ಉತ್ತಮ ಸನದ್‌ನೊಂದಿಗೆ ತಾರಿಕ್ ಬಿನ್ ಶಿಹಾಬ್ (ರ) ರಿಂದ ವರದಿ ಮಾಡಿದ ಹದೀಸಿನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«مرَّ رَجُلَانِ عَلَى قَومٍ لَهُم صَنَمٌ لَا يَجُوزُهُ أَحَدٌ حَتَّى يُقرِّبَ لَهُ شَيئًا، فَقَالُوا لِأَحَدِهِمَا: قَرِّبْ. قَالَ: لَيسَ عِندِي شَيءٌ أَقَرِّبُهُ، قَالُوا: قَرِّبْ وَلَوْ ذَبَابًا، فَقَرَّبَ ذُبَابًا، فَخَلُّوا سَبِيلَهُ، فَدَخَلَ النَّارَ، وَقَالُوا لِلآخَرِ: قَرِّبْ. قَالَ: مَا كُنْتُ لِأُقَرِّبَ لِأَحَدٍ شَيْئًا دُونَ اللهِ جَلَّ جَلَالُهُ، فَضَرَبُوا عُنُقَه، فَدَخَلَ الجَنَّةَ».

"ಇಬ್ಬರು ವ್ಯಕ್ತಿಗಳು ಒಂದು ವಿಗ್ರಹವನ್ನು ಹೊಂದಿದ್ದ ಜನರ ಗುಂಪಿನ ಮೂಲಕ ಹಾದುಹೋದರು. ಅದಕ್ಕೆ ಏನನ್ನಾದರೂ ಅರ್ಪಿಸದೆ ಯಾರೂ ಅದನ್ನು ದಾಟಲು ಸಾಧ್ಯವಿರಲಿಲ್ಲ. ಅವರು ಒಬ್ಬನಿಗೆ ಹೇಳಿದರು: 'ಏನಾದರೂ ಅರ್ಪಿಸು.' ಅವನು ಹೇಳಿದನು: 'ನನ್ನ ಬಳಿ ಅರ್ಪಿಸಲು ಏನೂ ಇಲ್ಲ.' ಅವರು ಹೇಳಿದರು: 'ಒಂದು ನೊಣವನ್ನಾದರೂ ಅರ್ಪಿಸು.' ಅವನು ಒಂದು ನೊಣವನ್ನು ಅರ್ಪಿಸಿದನು. ಅವರು ಅವನನ್ನು ಹೋಗಲು ಬಿಟ್ಟರು. ಅವನು ನರಕವನ್ನು ಪ್ರವೇಶಿಸಿದನು. ಅವರು ಇನ್ನೊಬ್ಬನಿಗೆ ಹೇಳಿದರು: 'ಏನಾದರೂ ಅರ್ಪಿಸು.' ಅವನು ಹೇಳಿದನು: 'ನಾನು ಅಲ್ಲಾಹನಲ್ಲದೆ ಬೇರೆ ಯಾರಿಗೂ ಏನನ್ನೂ ಅರ್ಪಿಸಲಾರೆ.' ಅವರು ಅವನ ಕುತ್ತಿಗೆಯನ್ನು ಕತ್ತರಿಸಿದರು. ಅವನು ಸ್ವರ್ಗವನ್ನು ಪ್ರವೇಶಿಸಿದನು."

ಒಂದು ನೊಣ ಅಥವಾ ಅದರಂತಹ ವಸ್ತುವನ್ನು ವಿಗ್ರಹ ಮುಂತಾದವುಗಳಿಗೆ ಅರ್ಪಿಸಿದವನು ಶಿರ್ಕ್ ಮಾಡುವವನಾಗಿದ್ದರೆ, ಮತ್ತು ಅದಕ್ಕಾಗಿ ನರಕ ಪ್ರವೇಶಿಸಲು ಅರ್ಹನಾಗಿದ್ದರೆ, ಜಿನ್ನ್‌ಗಳು, ದೇವದೂತರುಗಳು ಮತ್ತು ಮಹಾಪುರುಷರುಗಳನ್ನು ಕರೆದು ಪ್ರಾರ್ಥಿಸುವವರ ಗತಿ ಏನು? ತಮ್ಮ ಆಸ್ತಿಯನ್ನು ಕಾಪಾಡಲು, ಅಥವಾ ತಮ್ಮ ರೋಗಿಯು ಗುಣಮುಖನಾಗಲು, ಅಥವಾ ತಮ್ಮ ಪ್ರಾಣಿಗಳು ಮತ್ತು ಬೆಳೆಗಳ ಸುರಕ್ಷತೆಯ ದೃಷ್ಟಿಯಿಂದ ಅವರೊಡನೆ ಸಹಾಯ ಯಾಚಿಸುವವರ, ಅವರಿಗೆ ಹರಕೆ ಹೊರುವವರ, ಮತ್ತು ಬಲಿಗಳ ಮೂಲಕ ಅವರಿಗೆ ಹತ್ತಿರವಾಗುವವರ ಗತಿ ಏನು? ಜಿನ್ನ್‌ಗಳ ಕೆಡುಕನ್ನು ಭಯಪಟ್ಟು ಅಥವಾ ಅಂತಹ ಕಾರಣದಿಂದ ಇದನ್ನು ಮಾಡುವವರ ಗತಿ ಏನು?! ಯಾರು ಇದು ಮತ್ತು ಇದರಂತಹ ಕೆಲಸಗಳನ್ನು ಮಾಡುತ್ತಾರೋ, ಅವರು ವಿಗ್ರಹಕ್ಕೆ ನೊಣವನ್ನು ಅರ್ಪಿಸಿದ ಈ ವ್ಯಕ್ತಿಗಿಂತಲೂ ಮುಶ್ರಿಕ್ ಆಗಲು ಮತ್ತು ನರಕ ಪ್ರವೇಶಿಸಲು ಹೆಚ್ಚು ಅರ್ಹರಾಗಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಇದಕ್ಕೆ ಸಂಬಂಧಿಸಿದ ವಚನಗಳಲ್ಲಿ ಅಲ್ಲಾಹನ ಈ ವಚನವೂ ಒಳಗೊಳ್ಳುತ್ತದೆ:

﴿إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ2 أَلَا لِلَّهِ ٱلدِّينُ ٱلۡخَالِصُۚ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ3﴾

"ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ಸತ್ಯದೊಂದಿಗೆ ನಿಮಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ನೀವು ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಆರಾಧಿಸಿರಿ.

ತಿಳಿಯಿರಿ! ನಿಷ್ಕಳಂಕವಾದ ಧರ್ಮವು ಅಲ್ಲಾಹನಿಗೆ ಮಾತ್ರ ಸೇರಿದ್ದು. ಮತ್ತು ಅವನ ಹೊರತು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡವರು (ಹೇಳುತ್ತಾರೆ): 'ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುವುದಕ್ಕಾಗಿ ಮಾತ್ರವಾಗಿದೆ.' ನಿಶ್ಚಯವಾಗಿಯೂ ಅಲ್ಲಾಹು ಅವರ ನಡುವೆ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ತೀರ್ಪು ನೀಡುತ್ತಾನೆ. ನಿಶ್ಚಯವಾಗಿಯೂ ಸುಳ್ಳುಗಾರನೂ, ಕೃತಘ್ನನೂ ಆದವನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ." [ಅಝ್ಝುಮರ್: 1-3] ಅವನು (ಅಲ್ಲಾಹು) ಹೇಳುತ್ತಾನೆ:

﴿وَيَعْبُدُونَ مِنْ دُونِ اللَّهِ مَا لَا يَضُرُّهُمْ وَلَا يَنْفَعُهُمْ وَيَقُولُونَ هَؤُلَاءِ شُفَعَاؤُنَا عِنْدَ اللَّهِ قُلْ أَتُنَبِّئُونَ اللَّهَ بِمَا لَا يَعْلَمُ فِي السَّمَاوَاتِ وَلَا فِي الْأَرْضِ سُبْحَانَهُ وَتَعَالَى عَمَّا يُشْرِكُونَ18﴾

"ಮತ್ತು ಅವರು ಅಲ್ಲಾಹನ ಹೊರತಾಗಿ ತಮಗೆ ಯಾವುದೇ ಹಾನಿ ಮಾಡದ ಅಥವಾ ಯಾವುದೇ ಲಾಭ ಮಾಡದವುಗಳನ್ನು ಆರಾಧಿಸುತ್ತಾರೆ ಮತ್ತು ಹೇಳುತ್ತಾರೆ: 'ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸುಗಾರರಾಗಿದ್ದಾರೆ.' ಹೇಳಿರಿ: 'ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅಲ್ಲಾಹನಿಗೆ ತಿಳಿಯದ ವಿಷಯವನ್ನು ನೀವು ಅವನಿಗೆ ತಿಳಿಸುತ್ತೀರಾ?' ಅವರು ಮಾಡುವ ದೇವಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅವನು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ." [ಯೂನುಸ್: 18]

ಅಲ್ಲಾಹು ಈ ಎರಡು ವಚನಗಳಲ್ಲಿ ತಿಳಿಸುವುದೇನೆಂದರೆ, ಶಿರ್ಕ್ ಮಾಡುವವರು ಅಲ್ಲಾಹನ ಹೊರತಾಗಿ ಸೃಷ್ಟಿಗಳಿಂದ ಕೆಲವು ರಕ್ಷಕರನ್ನು ಸ್ವೀಕರಿಸಿದ್ದಾರೆ ಮತ್ತು ಭಯ, ನಿರೀಕ್ಷೆ, ಬಲಿ, ಹರಕೆ, ಪ್ರಾರ್ಥನೆ ಮುಂತಾದ ಆರಾಧನೆಗಳ ಮೂಲಕ ಅವರನ್ನು ಆರಾಧಿಸುತ್ತಾರೆ. ಆ ರಕ್ಷಕರು ತಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆ ಮತ್ತು ಅವನ ಬಳಿ ತಮಗೆ ಶಿಫಾರಸು ಮಾಡುತ್ತಾರೆಂದು ಅವರು ವಾದಿಸುತ್ತಾರೆ. ನಂತರ ಅಲ್ಲಾಹು ಅವರನ್ನು ಸುಳ್ಳುಗಾರರೆಂದು ಕರೆದು, ಅವರ ಸುಳ್ಳನ್ನು ಸ್ಪಷ್ಟಪಡಿಸಿಕೊಡುತ್ತಾನೆ, ಮತ್ತು ಅವರನ್ನು ಸುಳ್ಳುಗಾರರು, ಸತ್ಯನಿಷೇಧಿಗಳು ಮತ್ತು ಶಿರ್ಕ್ ಮಾಡುವವರೆಂದು ಹೇಳುತ್ತಾನೆ. ಹಾಗೆಯೇ, ತನ್ನನ್ನು ಅವರ ಶಿರ್ಕ್‌ನಿಂದ ಪರಿಶುದ್ಧಗೊಳಿಸುತ್ತಾನೆ. ಅವನು ಹೇಳುತ್ತಾನೆ:

﴿...سُبْحَانَهُ وَتَعَالَى عَمَّا يُشْرِكُونَ﴾

"ಅವರು ಮಾಡುವ ದೇವಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅವನು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ." [ಅನ್ನಹ್ಲ್: 1]. ಇದರಿಂದ ತಿಳಿದುಬರುವುದೇನೆಂದರೆ, ಯಾರು ಅಲ್ಲಾಹನ ಬಳಿ ಶಿಫಾರಸು ಪಡೆಯುವುದಕ್ಕಾಗಿ, ಅವನಿಗೆ ಹತ್ತಿರವಾಗುವುದಕ್ಕಾಗಿ, ರೋಗಿ ಗುಣಮುಖನಾಗುವುದಕ್ಕಾಗಿ, ಆಸ್ತಿಯನ್ನು ಕಾಪಾಡುವುದಕ್ಕಾಗಿ ಅಥವಾ ದೂರದ ಊರಿನಲ್ಲಿರುವ ವ್ಯಕ್ತಿಯ ಸುರಕ್ಷತೆಗಾಗಿ ಅಲ್ಲಾಹನೊಂದಿಗೆ ದೇವದೂತರನ್ನು, ಪ್ರವಾದಿಗಳನ್ನು, ಜಿನ್ನ್‌ಗಳನ್ನು, ಮರಗಳನ್ನು ಅಥವಾ ಕಲ್ಲುಗಳನ್ನು ಕರೆದು ಪ್ರಾರ್ಥಿಸುತ್ತಾರೋ, ಅವರಿಂದ ಸಹಾಯ ಯಾಚಿಸುತ್ತಾರೋ, ಹರಕೆ ಮತ್ತು ಬಲಿಯ ಮೂಲಕ ಅವರಿಗೆ ಹತ್ತಿರವಾಗುತ್ತಾರೋ, ಅವರು ಅಲ್ಲಾಹು ಈ ಕೆಳಗಿನ ವಚನದಲ್ಲಿ ಹೇಳಿದ ಈ ಮಹಾ ಶಿರ್ಕ್ ಮತ್ತು ಗಂಭೀರವಾದ ವಿಪತ್ತಿನಲ್ಲಿ ಒಳಪಡುತ್ತಾರೆ:

﴿إِنَّ اللَّهَ لَا يَغْفِرُ أَنْ يُشْرَكَ بِهِ وَيَغْفِرُ مَا دُونَ ذَلِكَ لِمَنْ يَشَاءُ وَمَنْ يُشْرِكْ بِاللَّهِ فَقَدِ افْتَرَى إِثْمًا عَظِيمًا48﴾

"ನಿಶ್ಚಯವಾಗಿಯೂ ಅಲ್ಲಾಹು ತನ್ನೊಂದಿಗೆ ಶಿರ್ಕ್ ಮಾಡಲಾಗವುದನ್ನು ಕ್ಷಮಿಸುವುದಿಲ್ಲ, ಮತ್ತು ಅದಕ್ಕೆ ಹೊರತಾಗಿರುವುದನ್ನು ಅವನು ಇಚ್ಛಿಸುವವರಿಗೆ ಕ್ಷಮಿಸುತ್ತಾನೆ. ಮತ್ತು ಯಾರು ಅಲ್ಲಾಹನೊಂದಿಗೆ ಶಿರ್ಕ್ ಮಾಡುತ್ತಾರೋ, ಅವರು ಖಂಡಿತವಾಗಿಯೂ ಒಂದು ದೊಡ್ಡ ಪಾಪವನ್ನು ಎಸಗಿದ್ದಾರೆ." [ಅನ್ನಿಸಾ: 48] ಅವನು (ಅಲ್ಲಾಹು) ಹೇಳುತ್ತಾನೆ:

﴿...إِنَّهُ مَنْ يُشْرِكْ بِاللَّهِ فَقَدْ حَرَّمَ اللَّهُ عَلَيْهِ الْجَنَّةَ وَمَأْوَاهُ النَّارُ وَمَا لِلظَّالِمِينَ مِنْ أَنْصَارٍ72﴾

"ನಿಶ್ಚಯವಾಗಿಯೂ ಯಾರು ಅಲ್ಲಾಹನೊಂದಿಗೆ ಶಿರ್ಕ್ ಮಾಡುತ್ತಾರೋ, ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ ಮತ್ತು ಅವನ ವಾಸಸ್ಥಾನವು ನರಕವಾಗಿದೆ. ಮತ್ತು ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ." [ಅಲ್-ಮಾಇದ: 72]

ತೌಹೀದ್ (ಏಕದೇವೋಪಾಸನೆ) ಮತ್ತು ಇಖ್ಲಾಸ್ (ನಿಷ್ಕಳಂಕತೆ) ಇರುವವರಿಗೆ ಮಾತ್ರ ಪುನರುತ್ಥಾನ ದಿನದಂದು ಶಿಫಾರಸು ದೊರೆಯುತ್ತದೆ. ಶಿರ್ಕ್ ಮಾಡುವವರಿಗೆ ದೊರೆಯುವುದಿಲ್ಲ. "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಶಿಫಾರಸು ಪಡೆಯುವ ಅತ್ಯಂತ ಸೌಭಾಗ್ಯಪೂರ್ಣ ವ್ಯಕ್ತಿ ಯಾರು?" ಎಂದು ಪ್ರವಾದಿ (ಸ) ರವರಲ್ಲಿ ಕೇಳಿದಾಗ, ಅವರು ಹೇಳಿದರು:

«مَنْ قَالَ: لَا إِلَهَ إِلَّا اللهُ خَالِصًا مِنْ قَلْبِهِ».

"ಯಾರು ತನ್ನ ಹೃದಯದಿಂದ ನಿಷ್ಕಳಂಕವಾಗಿ 'ಲಾ ಇಲಾಹ ಇಲ್ಲಲ್ಲಾಹ್' ಎಂದು ಹೇಳುತ್ತಾನೋ ಅವನು." ಪ್ರವಾದಿ(ಸ) ರವರು ಹೇಳಿದರು:

«لِكُلِّ نَبِيٍّ دَعْوَةٌ مُسْتَجَابَةٌ، فَتَعَجَّلَ كُلُّ نَبِيٍ دَعْوَتَهُ، وَإِنِّي اخْتَـبَأْتُ دَعْوَتِي شَفَاعَةً لِأُمَّتِي يَومَ القِيَامَةِ، فَهِيَ نَائِلَةٌ إِنْ شَاءَ اللهِ مَن مَاتَ مِنْ أُمَّتِي لَا يُشْرِكُ بِاللهِ شَيْئًا».

ಪ್ರತಿಯೊಬ್ಬ ಪ್ರವಾದಿಗೂ ಉತ್ತರ ದೊರೆಯುವ ಒಂದು ಪ್ರಾರ್ಥನೆಯಿದೆ. ಪ್ರತಿಯೊಬ್ಬ ಪ್ರವಾದಿಯೂ ತನ್ನ ಆ ಪ್ರಾರ್ಥನೆಯನ್ನು ತ್ವರೆಯಿಂದ ನಿರ್ವಹಿಸಿದ್ದಾರೆ. ಆದರೆ ನಾನು ನನ್ನ ಪ್ರಾರ್ಥನೆಯನ್ನು ಪುನರುತ್ಥಾನ ದಿನದಂದು ನನ್ನ ಸಮುದಾಯಕ್ಕೆ ಶಿಫಾರಸ್ಸಾಗಿ ತೆಗೆದಿಟ್ಟಿದ್ದೇನೆ. ಅದು – ಅಲ್ಲಾಹು ಇಚ್ಛಿಸಿದರೆ – ನನ್ನ ಸಮುದಾಯದಲ್ಲಿ ಅಲ್ಲಾಹನೊಂದಿಗೆ ಏನನ್ನೂ ಶಿರ್ಕ್ ಮಾಡದೆ ಮರಣ ಹೊಂದಿದವರಿಗೆ ದೊರೆಯುತ್ತದೆ.

ಹಿಂದಿನ ಕಾಲದ ಮುಶ್ರಿಕರು ಅಲ್ಲಾಹನೇ ತಮ್ಮ ಪರಿಪಾಲಕ, ಸೃಷ್ಟಿಕರ್ತ ಮತ್ತು ಅನ್ನದಾತ ಎಂದು ನಂಬಿದ್ದರು. ಅವರು ಪ್ರವಾದಿಗಳು, ಔಲಿಯಾಗಳು, ದೇವದೂತರು, ಮರಗಳು, ಕಲ್ಲುಗಳು ಮುಂತಾದವುಗಳ ಮೇಲೆ ಅವಲಂಬಿತರಾದದ್ದು, ಅವರು ಅಲ್ಲಾಹನ ಬಳಿ ತಮಗೆ ಶಿಫಾರಸು ಮಾಡುತ್ತಾರೆ ಮತ್ತು ತಮ್ಮನ್ನು ಅವನಿಗೆ ಹತ್ತಿರಗೊಳಿಸುತ್ತಾರೆ ಎಂಬ ನಿರೀಕ್ಷೆಯಿಂದ ಮಾತ್ರವಾಗಿತ್ತು. ಇದನ್ನು ಈಗಾಗಲೇ ಅನೇಕ ವಚನಗಳ ಮೂಲಕ ವಿವರಿಸಲಾಗಿದೆ. ಆದರೂ, ಅಲ್ಲಾಹು ಅವರಿಗೆ ಇದರಿಂದ ವಿನಾಯಿತಿ ನೀಡಲಿಲ್ಲ. ಬದಲಿಗೆ, ಅಲ್ಲಾಹು ತನ್ನ ಮಹಾನ್ ಗ್ರಂಥದಲ್ಲಿ ಅವರನ್ನು ಖಂಡಿಸಿದನು, ಮತ್ತು ಅವರನ್ನು ಸತ್ಯನಿಷೇಧಿಗಳು ಮತ್ತು ಮುಶ್ರಿಕರೆಂದು ಕರೆದನು. ಅವರ ಈ ದೇವರುಗಳು ಅವರಿಗಾಗಿ (ಅಲ್ಲಾಹನ ಬಳಿ) ಶಿಫಾರಸು ಮಾಡುತ್ತಾರೆ ಮತ್ತು ಅವರನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆಂಬ ಅವರ ವಾದವನ್ನು ಸುಳ್ಳೆಂದು ನಿರೂಪಿಸಿದನು. ಅಲ್ಲಾಹನ ಸಂದೇಶವಾಹಕರು (ಸ) ಕೂಡ ಅವರಿಗೆ ವಿನಾಯಿತಿ ನೀಡಲಿಲ್ಲ. ಬದಲಿಗೆ, ಅಲ್ಲಾಹನ ಸಂದೇಶವಾಹಕರು (ಸ) ಅಲ್ಲಾಹನ ಈ ಕೆಳಗಿನ ವಚನದ ಆಧಾರದಲ್ಲಿ, ಅವರು ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ಅರ್ಪಿಸುವ ತನಕ, ಈ ಶಿರ್ಕ್‌ಗಾಗಿ ಅವರೊಂದಿಗೆ ಯುದ್ಧ ಮಾಡಿದರು:

﴿وَقَاتِلُوهُمْ حَتَّى لَا تَكُونَ فِتْنَةٌ وَيَكُونَ الدِّينُ لِلَّهِ...﴾

"ಮತ್ತು ಫಿತ್ನ (ಶಿರ್ಕ್) ಇಲ್ಲದಂತಾಗುವವರೆಗೆ ಮತ್ತು ಧರ್ಮವು ಅಲ್ಲಾಹನಿಗೆ ಮಾತ್ರ ಆಗುವವರೆಗೆ ಅವರೊಂದಿಗೆ ಹೋರಾಡಿರಿ." [ಅಲ್-ಬಕರ: 193]. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

«أُمِرْتُ أَنْ أُقَاتِلَ النَّاسَ حَتَّى يَشْهَدُوا أَنْ لَا إِلهَ إِلَّا اللهُ وَأَنَّ مُحَمَّدًا رَسُولُ اللهِ، وَيُقِيمُوا الصَّلَاةَ، وَيُؤتُوا الزَّكَاةَ، فَإِذَا فَعَلُوا ذَلِكَ عَصَمُوا مِنِّي دِمَاءَهُم وَأَمْوَالَهُمْ إِلَّا بِحَقِّ الإِسْلَامِ، وَحِسَابُهُم عَلَى اللهِ».

"ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವ, ನಮಾಝ್ ಸಂಸ್ಥಾಪಿಸುವ ಮತ್ತು ಝಕಾತ್ ನೀಡುವ ತನಕ ಜನರೊಂದಿಗೆ ಹೋರಾಡಲು ನನಗೆ ಆಜ್ಞಾಪಿಸಲಾಗಿದೆ. ಅವರು ಇವುಗಳನ್ನು ಮಾಡಿದರೆ, ಅವರು ನನ್ನಿಂದ ಅವರ ರಕ್ತ ಮತ್ತು ಸಂಪತ್ತನ್ನು ರಕ್ಷಿಸಿದರು. ಆದರೆ ಇಸ್ಲಾಮಿನ ಹಕ್ಕಿನ ಹೊರತು. ಅವರ ವಿಚಾರಣೆ ಮಾಡಬೇಕಾದ ಹೊಣೆ ಅಲ್ಲಾಹನದ್ದು." ಪ್ರವಾದಿ (ಸ) ರವರ ಈ ಮಾತಿನ ಅರ್ಥವೇನೆಂದರೆ:

«حَتَّى يَشْهَدُوا أَن لَا إِلهَ إِلَّا اللهُ».

"ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಸಾಕ್ಷ್ಯ ವಹಿಸುವವರೆಗೆ" ಅಂದರೆ: ಆರಾಧನೆಯನ್ನು ಇತರೆಲ್ಲವುಗಳ ಹೊರತಾಗಿ ಕೇವಲ ಅಲ್ಲಾಹನಿಗೆ ಮಾತ್ರ ಅರ್ಪಿಸುವವರೆಗೆ.

ಮುಶ್ರಿಕರು ಜಿನ್ನ್‌ಗಳನ್ನು ಭಯಪಡುತ್ತಿದ್ದರು ಮತ್ತು ಅವರಲ್ಲಿ ಅಭಯ ಯಾಚಿಸುತ್ತಿದ್ದರು. ಆಗ ಅಲ್ಲಾಹು ಆ ಕುರಿತು ಈ ವಚನವನ್ನು ಅವತೀರ್ಣಗೊಳಿಸಿದನು:

﴿وَأَنَّهُ كَانَ رِجَالٌ مِنَ الْإِنْسِ يَعُوذُونَ بِرِجَالٍ مِنَ الْجِنِّ فَزَادُوهُمْ رَهَقًا6﴾

"ಮತ್ತು ಮನುಷ್ಯರಲ್ಲಿ ಕೆಲವರು ಜಿನ್ನ್‌ಗಳಲ್ಲಿರುವ ಕೆಲವರಲ್ಲಿ ಅಭಯ ಯಾಚಿಸುತ್ತಿದ್ದರು. ಆದ್ದರಿಂದ ಅವರು ಅವರಿಗೆ (ಮನುಷ್ಯರಿಗೆ) ಭಯವನ್ನು ಹೆಚ್ಚಿಸಿದರು." [ಅಲ್-ಜಿನ್ನ್: 6] ಈ ಪವಿತ್ರ ವಚನಕ್ಕೆ ವ್ಯಾಖ್ಯಾನಕಾರರು ನೀಡುವ ಅರ್ಥವು ಹೀಗಿದೆ:

﴿...فَزَادُوهُمْ رَهَقًا﴾

"ಆದ್ದರಿಂದ ಅವರು ಅವರಿಗೆ (ಮನುಷ್ಯರಿಗೆ) ಭಯವನ್ನು ಹೆಚ್ಚಿಸಿದರು." ರಹಕ್ ಎಂದರೆ ಭಯ ಮತ್ತು ಭೀತಿ. ಏಕೆಂದರೆ, ಮನುಷ್ಯರು ತಮ್ಮಲ್ಲಿ ಅಭಯ ಯಾಚಿಸುವುದನ್ನು ನೋಡಿದಾಗ ಜಿನ್ನ್‌ಗಳು ತಮ್ಮನ್ನು ತಾವೇ ದೊಡ್ಡವರೆಂದು ಭಾವಿಸಿ ದುರಹಂಕಾರ ತೋರಿದರು. ನಂತರ ಅವರು ತಮ್ಮನ್ನು ಆರಾಧಿಸುವುದನ್ನು ಹಾಗೂ ತಮ್ಮಲ್ಲಿ ಆಶ್ರಯ ಬೇಡುವುದನ್ನು ಹೆಚ್ಚಿಸುವುದಕ್ಕಾಗಿ ಅವರು ಅವರಿಗೆ (ಮನುಷ್ಯರಿಗೆ) ಭಯ ಮತ್ತು ಭೀತಿಯನ್ನು ಹೆಚ್ಚಿಸುತ್ತಿದ್ದರು.

ಅಲ್ಲಾಹು ಮುಸ್ಲಿಮರಿಗೆ ಇದರ ಬದಲಿಗೆ ತನ್ನಲ್ಲಿ ಮತ್ತು ತನ್ನ ಪರಿಪೂರ್ಣ ವಚನಗಳಲ್ಲಿ ಅಭಯ ಯಾಚಿಸಲು ಆದೇಶಿಸಿದನು, ಮತ್ತು ಈ ಕುರಿತು ಈ ವಚನವನ್ನು ಅವತೀರ್ಣಗೊಳಿಸಿದನು:

﴿وَإِمَّا يَنْزَغَنَّكَ مِنَ الشَّيْطَانِ نَزْغٌ فَاسْتَعِذْ بِاللَّهِ إِنَّهُ سَمِيعٌ عَلِيمٌ200﴾

"ಮತ್ತು ಶೈತಾನನಿಂದ ನಿಮಗೆ ಯಾವುದೇ ಪ್ರಚೋದನೆ ಉಂಟಾದರೆ, ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ತಿಳಿದವನಾಗಿದ್ದಾನೆ." [ಅಲ್-ಅಅ್‌ರಾಫ್: 200]. ಅವನು (ಅಲ್ಲಾಹು) ಹೇಳುತ್ತಾನೆ:

﴿قُلْ أَعُوذُ بِرَبِّ الْفَلَقِ1﴾

"ಹೇಳಿರಿ: ನಾನು ಮುಂಜಾವಿನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಯಾಚಿಸುತ್ತೇನೆ." ಪ್ರವಾದಿ (ಸ) ರವರು ಹೀಗೆ ಹೇಳಿದರೆಂದು ದೃಢಪಟ್ಟಿದೆ:

«مَنْ نَزَلَ مَنْزِلًا فَقَالَ: (أَعُوذُ بِكَلِمَاتِ اللهِ التَّامَّاتِ مِنْ شَرِّ مَا خَلَقَ)؛ لَم يَضُرَّهُ شَيءٌ حَتَّى يَرْتَحِلَ مِنْ مَنْزِلِهِ ذَلِكَ».

"ಯಾರು ಒಂದು ಸ್ಥಳದಲ್ಲಿ ಇಳಿದು, 'ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮಾತಿ ಮಿನ್ ಶರ್‍ರಿ ಮಾ ಖಲಕ್' (ಅರ್ಥ: ಅಲ್ಲಾಹನ ಪರಿಪೂರ್ಣ ವಚನಗಳೊಂದಿಗೆ ಅವನು ಸೃಷ್ಟಿಸಿದ ಎಲ್ಲಾ ಕೆಡುಕುಗಳಿಂದ ನಾನು ಅಭಯ ಯಾಚಿಸುತ್ತೇನೆ) ಎಂದು ಹೇಳುತ್ತಾನೋ ಅವನು ಆ ಸ್ಥಳದಿಂದ ತೆರಳುವ ತನಕ ಅವನಿಗೆ ಯಾವುದೇ ವಸ್ತು ತೊಂದರೆ ಕೊಡುವುದಿಲ್ಲ."

ಮೋಕ್ಷವನ್ನು ಬಯಸುವ, ತನ್ನ ಧರ್ಮವನ್ನು ಕಾಪಾಡಿಕೊಳ್ಳಲು ಮತ್ತು ಶಿರ್ಕ್‌ನಿಂದ – ಅದರ ಸೂಕ್ಷ್ಮ ಮತ್ತು ಸ್ಪಷ್ಟ ರೂಪಗಳಿಂದ – ಸುರಕ್ಷಿತವಾಗಿರಲು ಬಯಸುವ ವ್ಯಕ್ತಿಗೆ ಮೇಲೆ ತಿಳಿಸಿದ ವಚನಗಳು ಮತ್ತು ಹದೀಸ್‌ಗಳಿಂದ ತಿಳಿದುಬರುವುದೇನೆಂದರೆ, ಮೃತರು, ದೇವದೂತರುಗಳು, ಜಿನ್ನ್‌ಗಳು ಮುಂತಾದ ಸೃಷ್ಟಿಗಳ ಮೇಲೆ ಅವಲಂಬಿತರಾಗುವುದು, ಅವರನ್ನು ಕರೆದು ಪ್ರಾರ್ಥಿಸುವುದು, ಅವರಲ್ಲಿ ಅಭಯ ಯಾಚಿಸುವುದು ಮುಂತಾದವುಗಳು ಅಜ್ಞಾನ ಕಾಲದಲ್ಲಿ ಶಿರ್ಕ್ ಮಾಡುತ್ತಿದ್ದವರ ಕೆಲಸಗಳಾಗಿದ್ದು, ಅವು ಅಲ್ಲಾಹನೊಂದಿಗೆ ಶಿರ್ಕ್ ಮಾಡುವ ಅತ್ಯಂತ ಕೆಟ್ಟ ರೂಪಗಳಲ್ಲಿ ಒಂದಾಗಿದೆ. ಆದ್ದರಿಂದ ಅದನ್ನು ತ್ಯಜಿಸುವುದು, ಅದರಿಂದ ದೂರವಿರುವುದು, ಅದನ್ನು ತ್ಯಜಿಸಲು ಪರಸ್ಪರ ಉಪದೇಶಿಸುವುದು, ಮತ್ತು ಅದನ್ನು ಮಾಡುವವರನ್ನು ಖಂಡಿಸುವುದು ಕಡ್ಡಾಯವಾಗಿದೆ.

ಜನರಲ್ಲಿ ಈ ಶಿರ್ಕ್‌ನ ಕಾರ್ಯಗಳನ್ನು ಮಾಡುವವರೆಂದು ಗುರುತಿಸಲ್ಪಟ್ಟವರೊಂದಿಗೆ ವಿವಾಹ ಮಾಡಿಕೊಳ್ಳುವುದು, ಅವರು ವಧೆ ಮಾಡಿದ್ದನ್ನು ತಿನ್ನುವುದು, ಅವರಿಗೆ (ಜನಾಝ) ನಮಾಝ್ ಮಾಡುವುದು, ಮತ್ತು ಅವರ ಹಿಂದೆ (ನಮಾಝ್) ಮಾಡುವುದು ಸಮ್ಮತಾರ್ಹವಲ್ಲ. ಅವರು ಅದರಿಂದ ಪಶ್ಚಾತ್ತಾಪ ಪಡುವುದಾಗಿ ಘೋಷಿಸುವವರೆಗೆ, ಮತ್ತು ಪ್ರಾರ್ಥನೆ ಹಾಗೂ ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕತೆಯಿಂದ ಅರ್ಪಿಸುವವರೆಗೆ. ಪ್ರವಾದಿ (ಸ) ರವರು ಹೇಳಿದಂತೆ ಪ್ರಾರ್ಥನೆಯೇ ಆರಾಧನೆಯಾಗಿದೆ. ಮಾತ್ರವಲ್ಲ, ಅದು ಅದರ ತಿರುಳಾಗಿದೆ:

«الدُّعَاءُ هُوَ العِبَادَةُ».

"ಪ್ರಾರ್ಥನೆಯೇ ಆರಾಧನೆಯಾಗಿದೆ." ಇನ್ನೊಂದು ವರದಿಯಲ್ಲಿ ಅವರಿಂದ (ಸ) ಹೀಗೆ ವರದಿಯಾಗಿದೆ:

«الدُّعَاءُ مُخُّ العِبَادَةِ».

"ಪ್ರಾರ್ಥನೆಯು ಆರಾಧನೆಯ ತಿರುಳಾಗಿದೆ." ಶಿರ್ಕ್ ಮಾಡುವವರೊಂದಿಗೆ ವಿವಾಹ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅಲ್ಲಾಹು ಹೇಳುತ್ತಾನೆ:

﴿وَلَا تَنْكِحُوا الْمُشْرِكَاتِ حَتَّى يُؤْمِنَّ وَلَأَمَةٌ مُؤْمِنَةٌ خَيْرٌ مِنْ مُشْرِكَةٍ وَلَوْ أَعْجَبَتْكُمْ وَلَا تُنْكِحُوا الْمُشْرِكِينَ حَتَّى يُؤْمِنُوا وَلَعَبْدٌ مُؤْمِنٌ خَيْرٌ مِنْ مُشْرِكٍ وَلَوْ أَعْجَبَكُمْ أُولَئِكَ يَدْعُونَ إِلَى النَّارِ وَاللَّهُ يَدْعُو إِلَى الْجَنَّةِ وَالْمَغْفِرَةِ بِإِذْنِهِ وَيُبَيِّنُ آيَاتِهِ لِلنَّاسِ لَعَلَّهُمْ يَتَذَكَّرُونَ221﴾

"ಮತ್ತು ನೀವು ಶಿರ್ಕ್ ಮಾಡುವ ಮಹಿಳೆಯರನ್ನು ವಿವಾಹವಾಗಬೇಡಿ. ಅವರು ವಿಶ್ವಾಸವಿಡುವವರೆಗೆ. ಮತ್ತು ಸತ್ಯವಿಶ್ವಾಸಿಯಾದ ಗುಲಾಮಳು ಶಿರ್ಕ್ ಮಾಡುವ ಮಹಿಳೆಗಿಂತ ಉತ್ತಮಳಾಗಿದ್ದಾಳೆ. ಅವಳು ನಿಮಗೆ ಎಷ್ಟೇ ಇಷ್ಟವಾದರೂ ಸಹ. ಮತ್ತು ಶಿರ್ಕ್ ಮಾಡುವ ಪುರುಷರಿಗೆ (ನಿಮ್ಮ ಮಹಿಳೆಯರನ್ನು) ವಿವಾಹ ಮಾಡಿಕೊಡಬೇಡಿ. ಅವರು ವಿಶ್ವಾಸವಿಡುವವರೆಗೆ. ಮತ್ತು ಸತ್ಯವಿಶ್ವಾಸಿಯಾದ ಗುಲಾಮನು ಶಿರ್ಕ್ ಮಾಡುವ ಪುರುಷನಿಗಿಂತ ಉತ್ತಮನಾಗಿದ್ದಾನೆ. ಅವನು ನಿಮಗೆ ಎಷ್ಟೇ ಇಷ್ಟವಾದರೂ ಸಹ. ಅವರು (ನಿಮ್ಮನ್ನು) ನರಕಕ್ಕೆ ಆಹ್ವಾನಿಸುತ್ತಾರೆ, ಮತ್ತು ಅಲ್ಲಾಹು ತನ್ನ ಅನುಮತಿಯೊಂದಿಗೆ (ನಿಮ್ಮನ್ನು) ಸ್ವರ್ಗ ಮತ್ತು ಕ್ಷಮೆಗೆ ಆಹ್ವಾನಿಸುತ್ತಾನೆ. ಮತ್ತು ಜನರಿಗೆ ತನ್ನ ವಚನಗಳನ್ನು ವಿವರಿಸುತ್ತಾನೆ, ಅವರು ಉಪದೇಶ ಪಡೆಯುವುದಕ್ಕಾಗಿ." [ಅಲ್-ಬಕರ: 221] ಆದ್ದರಿಂದ ಅಲ್ಲಾಹು ಶಿರ್ಕ್ ಮಾಡುವ ಮಹಿಳೆಯರನ್ನು – ಅಂದರೆ, ವಿಗ್ರಹಗಳು, ಜಿನ್ನ್‌ಗಳು, ದೇವದೂತರುಗಳು ಮುಂತಾದವರನ್ನು ಆರಾಧಿಸುವವರನ್ನು – ವಿವಾಹವಾಗುವುದನ್ನು ಮುಸ್ಲಿಮರಿಗೆ ನಿಷೇಧಿಸಿದ್ದಾನೆ. ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕವಾಗಿ ಅರ್ಪಿಸಬೇಕಾಗಿದೆ, ಸಂದೇಶವಾಹಕರು (ಸ) ತಂದಿರುವ ಸಂದೇಶದಲ್ಲಿ ವಿಶ್ವಾಸವಿಡಬೇಕಾಗಿದೆ, ಮತ್ತು ಅವರ ಮಾರ್ಗವನ್ನು ಅನುಸರಿಸಬೇಕಾಗಿದೆ ಎಂದು ಅವರು ವಿಶ್ವಾಸವಿಡುವವರೆಗೆ. ಶಿರ್ಕ್ ಮಾಡುವ ಪುರುಷರಿಗೆ ಮುಸ್ಲಿಂ ಮಹಿಳೆಯರನ್ನು ವಿವಾಹ ಮಾಡಿಕೊಡುವುದನ್ನು ಕೂಡ ಅವನು ನಿಷೇಧಿಸಿದ್ದಾನೆ. ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕವಾಗಿ ಅರ್ಪಿಸಬೇಕಾಗಿದೆ, ಸಂದೇಶವಾಹಕರು (ಸ) ತಂದಿರುವ ಸಂದೇಶದಲ್ಲಿ ವಿಶ್ವಾಸವಿಡಬೇಕಾಗಿದೆ, ಮತ್ತು ಅವರ ಮಾರ್ಗವನ್ನು ಅನುಸರಿಸಬೇಕಾಗಿದೆ ಎಂದು ಅವರು ವಿಶ್ವಾಸವಿಡುವವರೆಗೆ.

ನಂತರ ಅಲ್ಲಾಹು ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಯಾದ ಗುಲಾಮಸ್ತ್ರೀ ಶಿರ್ಕ್ ಮಾಡುವ ಸ್ವತಂತ್ರ ಮಹಿಳೆಗಿಂತ ಉತ್ತಮಳಾಗಿದ್ದಾಳೆ. ಅವಳು ನೋಡುವವರಿಗೆ ಮತ್ತು ಅವಳ ಮಾತನ್ನು ಕೇಳುವವರಿಗೆ ಅವಳ ಸೌಂದರ್ಯ ಮತ್ತು ಮಾತಿನ ಚಾತುರ್ಯದಿಂದ ಎಷ್ಟೇ ಇಷ್ಟವಾದರೂ ಸಹ. ಹಾಗೆಯೇ, ಸತ್ಯವಿಶ್ವಾಸಿಯಾದ ಗುಲಾಮನು ಶಿರ್ಕ್ ಮಾಡುವ ಸ್ವತಂತ್ರ ಪುರುಷನಿಗಿಂತ ಉತ್ತಮನಾಗಿದ್ದಾನೆ. ಅವನು ಕೇಳುಗನಿಗೆ ಮತ್ತು ನೋಡುವವನಿಗೆ ಅವನ ಸೌಂದರ್ಯ, ವಾಕ್ಚಾತುರ್ಯ, ಧೈರ್ಯ ಮತ್ತು ಇತರ ವಿಷಯಗಳಿಂದ ಎಷ್ಟೇ ಇಷ್ಟವಾದರೂ ಸಹ. ನಂತರ ಅವನು (ಅಲ್ಲಾಹು) ಈ ಶ್ರೇಷ್ಠತೆಯ ಕಾರಣಗಳನ್ನು ತನ್ನ ವಚನದ ಮೂಲಕ ಹೀಗೆ ಸ್ಪಷ್ಟಪಡಿಸುತ್ತಾನೆ:

﴿...أُولَئِكَ يَدْعُونَ إِلَى النَّارِ...﴾

"ಅವರು (ನಿಮ್ಮನ್ನು) ನರಕಕ್ಕೆ ಆಹ್ವಾನಿಸುತ್ತಾರೆ." [ಅಲ್-ಬಕರ: 221]. ಅವರು ಎಂದರೆ ಶಿರ್ಕ್ ಮಾಡುವ ಪುರುಷರು ಮತ್ತು ಮಹಿಳೆಯರು. ಏಕೆಂದರೆ ಅವರು ತಮ್ಮ ಮಾತುಗಳು, ಕೆಲಸಗಳು, ಚಾರಿತ್ರ್ಯ ಮತ್ತು ನಡವಳಿಕೆಯಿಂದ ನರಕಕ್ಕೆ ಆಹ್ವಾನಿಸುವವರಾಗಿದ್ದಾರೆ. ಆದರೆ ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರು ತಮ್ಮ ನಡವಳಿಕೆ, ಕೆಲಸಗಳು ಮತ್ತು ಚಾರಿತ್ರ್ಯದಿಂದ ಸ್ವರ್ಗಕ್ಕೆ ಆಹ್ವಾನಿಸುವವರಾಗಿದ್ದಾರೆ. ಹಾಗಾದರೆ ಇವರು ಮತ್ತು ಅವರು ಹೇಗೆ ಸಮಾನರಾಗಲು ಸಾಧ್ಯ!

ಇನ್ನು ಶಿರ್ಕ್ ಮಾಡುವವರಿಗೆ (ಜನಾಝ) ನಮಾಝ್ ಮಾಡುವುದಕ್ಕೆ ಸಂಬಂಧಿಸಿ ಹೇಳುವುದಾದರೆ, ಸರ್ವಶಕ್ತನಾದ ಅಲ್ಲಾಹು ಕಪಟವಿಶ್ವಾಸಿಗಳ ವಿಷಯದಲ್ಲಿ ಹೀಗೆ ಹೇಳುತ್ತಾನೆ:

﴿وَلَا تُصَلِّ عَلَى أَحَدٍ مِنْهُمْ مَاتَ أَبَدًا وَلَا تَقُمْ عَلَى قَبْرِهِ إِنَّهُمْ كَفَرُوا بِاللَّهِ وَرَسُولِهِ وَمَاتُوا وَهُمْ فَاسِقُونَ84﴾

"ಮತ್ತು ಅವರಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಎಂದಿಗೂ (ಜನಾಝ) ನಮಾಝ್ ಮಾಡಬೇಡಿ, ಮತ್ತು ಅವರ ಸಮಾಧಿಯ ಬಳಿ ನಿಲ್ಲಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ ಮತ್ತು ಅವರು ಅವಿಧೇಯರಾದ ಸ್ಥಿತಿಯಲ್ಲಿ ಮರಣ ಹೊಂದಿದ್ದಾರೆ." [ಅತ್ತೌಬಾ: 84] ಸರ್ವಶಕ್ತನಾದ ಅಲ್ಲಾಹು ಈ ಪವಿತ್ರ ವಚನದಲ್ಲಿ ಸ್ಪಷ್ಟಪಡಿಸುವುದೇನೆಂದರೆ, ಕಪಟವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳು ಸತ್ತರೆ ಅವರಿಗೆ ಜನಾಝ ನಮಾಝ್ ಮಾಡಬಾರದು. ಏಕೆಂದರೆ, ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ. ಹಾಗೆಯೇ ಅವರ ಹಿಂದೆ (ನಮಾಝ್) ಮಾಡಬಾರದು, ಮತ್ತು ಅವರನ್ನು ಮುಸ್ಲಿಮರಿಗೆ ಇಮಾಮ್‌ಗಳಾಗಿ ನೇಮಿಸಬಾರದು. ಅವರ ಕುಫ್ರ್ (ಸತ್ಯನಿಷೇಧ) ಮತ್ತು ವಿಶ್ವಾಸಾರ್ಹತೆಯ ಕೊರತೆಯು, ಮತ್ತು ಅವರ ಹಾಗೂ ಮುಸ್ಲಿಮರ ನಡುವಿನ ಮಹಾ ದ್ವೇಷವು, ಮತ್ತು ಅವರು ನಮಾಝ್ ಮತ್ತು ಆರಾಧನೆಗೆ ಅರ್ಹರಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಏಕೆಂದರೆ ಕುಫ್ರ್ ಮತ್ತು ಶಿರ್ಕ್‌ ಇದ್ದ ವ್ಯಕ್ತಿಯಲ್ಲಿ ಯಾವುದೇ ಕರ್ಮವು ಉಳಿಯುವುದಿಲ್ಲ. ನಾವು ಅಲ್ಲಾಹನಲ್ಲಿ ಇದರಿಂದ ರಕ್ಷಣೆ ಕೋರುತ್ತೇವೆ. ಇನ್ನು ಶಿರ್ಕ್ ಮಾಡುವವರು ವಧೆ ಮಾಡಿದ್ದನ್ನು ತಿನ್ನುವುದಕ್ಕೆ ಸಂಬಂಧಿಸಿ ಹೇಳುವುದಾದರೆ, ಸರ್ವಶಕ್ತನಾದ ಅಲ್ಲಾಹು ಸತ್ತ ಪ್ರಾಣಿ ಮತ್ತು ಶಿರ್ಕ್ ಮಾಡುವವರು ವಧೆ ಮಾಡಿದ್ದು ನಿಷಿದ್ಧವೆಂದು ವಿವರಿಸುತ್ತಾ ಹೇಳುತ್ತಾನೆ:

﴿وَلَا تَأْكُلُوا مِمَّا لَمْ يُذْكَرِ اسْمُ اللَّهِ عَلَيْهِ وَإِنَّهُ لَفِسْقٌ وَإِنَّ الشَّيَاطِينَ لَيُوحُونَ إِلَى أَوْلِيَائِهِمْ لِيُجَادِلُوكُمْ وَإِنْ أَطَعْتُمُوهُمْ إِنَّكُمْ لَمُشْرِكُونَ121﴾

"ಮತ್ತು ಯಾವುದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಛರಿಸಲಾಗಿಲ್ಲವೋ ಅದನ್ನು ತಿನ್ನಬೇಡಿ. ಮತ್ತು ನಿಶ್ಚಯವಾಗಿಯೂ ಅದು ಅವಿಧೇಯತೆ ಆಗಿದೆ. ಮತ್ತು ನಿಶ್ಚಯವಾಗಿಯೂ ಶೈತಾನರು ತಮ್ಮ ಮಿತ್ರರಿಗೆ ನಿಮ್ಮೊಂದಿಗೆ ವಾದಿಸಲು ಪ್ರೇರೇಪಿಸುತ್ತಾರೆ. ಮತ್ತು ನೀವು ಅವರಿಗೆ ವಿಧೇಯರಾದರೆ (ಅವರ ಮಾತನ್ನು ಕೇಳಿದರೆ), ನೀವು ಖಂಡಿತವಾಗಿಯೂ ಶಿರ್ಕ್ ಮಾಡುವವರಾಗುತ್ತೀರಿ." [ಅಲ್-ಅನ್‌ಆಮ್: 121] ಆದ್ದರಿಂದ ಅಲ್ಲಾಹು ಮುಸ್ಲಿಮರಿಗೆ ಸತ್ತ ಪ್ರಾಣಿ ಮತ್ತು ಶಿರ್ಕ್ ಮಾಡುವವನು ವಧೆ ಮಾಡಿದ್ದನ್ನು ತಿನ್ನುವುದನ್ನು ನಿಷೇಧಿಸಿದ್ದಾನೆ. ಏಕೆಂದರೆ ಅದು ಅಶುದ್ಧವಾಗಿದೆ. ಆದ್ದರಿಂದ ಅವನು ವಧೆ ಮಾಡಿದ್ದು ಸತ್ತ ಪ್ರಾಣಿಯ ವಿಧಿಯನ್ನು ಹೊಂದಿದೆ. ಅವನು ವಧೆ ಮಾಡುವಾಗ ಅಲ್ಲಾಹನ ಹೆಸರನ್ನು ಉಚ್ಛರಿಸಿದ್ದರೂ ಸಹ. ಏಕೆಂದರೆ, ಅವನು ಅಲ್ಲಾಹನ ಹೆಸರನ್ನು ಉಚ್ಛರಿಸುವುದು ವ್ಯರ್ಥವಾಗಿದೆ. ಅದಕ್ಕೆ ಯಾವುದೇ ಪರಿಣಾಮವಿಲ್ಲ. ಏಕೆಂದರೆ, ಅದು (ಅಲ್ಲಾಹನ ಹೆಸರನ್ನು ಉಚ್ಛರಿಸುವುದು) ಆರಾಧನೆಯಾಗಿದೆ. ಶಿರ್ಕ್ ಆರಾಧನೆಯನ್ನು ವ್ಯರ್ಥಗೊಳಿಸುತ್ತದೆ ಮತ್ತು ಅಸಿಂಧುಗೊಳಿಸುತ್ತದೆ. ಶಿರ್ಕ್ ಮಾಡುವವನು ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡುವವರೆಗೆ. ಆದರೆ, ಅಲ್ಲಾಹು ಗ್ರಂಥದವರ (ಯಹೂದಿ-ಕ್ರೈಸ್ತರ) ಆಹಾರವನ್ನು ಈ ವಚನದಲ್ಲಿ ಅನುಮತಿಸಿದ್ದಾನೆ:

﴿...وَطَعَامُ الَّذِينَ أُوتُوا الْكِتَابَ حِلٌّ لَكُمْ وَطَعَامُكُمْ حِلٌّ لَهُمْ...﴾

"ಮತ್ತು ಗ್ರಂಥವನ್ನು ನೀಡಲಾದವರ (ಯಹೂದಿ-ಕ್ರೈಸ್ತರ) ಆಹಾರವು ನಿಮಗೆ ಧರ್ಮಸಮ್ಮತವಾಗಿದೆ, ಮತ್ತು ನಿಮ್ಮ ಆಹಾರವು ಅವರಿಗೆ ಧರ್ಮಸಮ್ಮತವಾಗಿದೆ." [ಅಲ್-ಮಾಇದ: 5] ಏಕೆಂದರೆ ಅವರು ದೈವಿಕ ಧರ್ಮಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ, ಮತ್ತು ಮೂಸಾ ಹಾಗೂ ಈಸಾ ರವರ ಅನುಯಾಯಿಗಳೆಂದು ವಾದಿಸುತ್ತಾರೆ. ಆದರೆ ಅವರು ತಮ್ಮ ಮಾತಿನಲ್ಲಿ ಸುಳ್ಳುಗಾರರಾಗಿದ್ದಾರೆ. ಅಲ್ಲಾಹು ಮುಹಮ್ಮದ್ (ಸ) ರವರನ್ನು ಸಂಪೂರ್ಣ ಮನುಕುಲಕ್ಕೆ ಕಳುಹಿಸುವ ಮೂಲಕ ಅವರ ಧರ್ಮವನ್ನು ರದ್ದುಗೊಳಿಸಿದ್ದಾನೆ ಮತ್ತು ಅಸಿಂಧುಗೊಳಿಸಿದ್ದಾನೆ. ಆದರೆ ಅಲ್ಲಾಹು ನಮಗೆ ಗ್ರಂಥದವರ ಆಹಾರ ಮತ್ತು ಅವರ ಮಹಿಳೆಯರನ್ನು ಧರ್ಮಸಮ್ಮತಗೊಳಿಸಿದ್ದಾನೆ. ಇದರಲ್ಲಿ ಒಂದು ಮಹಾನ್ ಯುಕ್ತಿ ಮತ್ತು ಗಂಭೀರ ರಹಸ್ಯವಿದೆ. ಅದನ್ನು ಜ್ಞಾನಿಗಳು ವಿವರಿಸಿಕೊಟ್ಟಿದ್ದಾರೆ. ಪ್ರವಾದಿಗಳು, ಔಲಿಯಾಗಳು ಸೇರಿದಂತೆ ವಿಗ್ರಹಗಳು ಮತ್ತು ಮೃತರನ್ನು ಆರಾಧಿಸುವ ಮುಶ್ರಿಕ್‌ಗಳಿಗೆ ಇದು ಅನ್ವಯವಾಗುವುದಿಲ್ಲ. ಏಕೆಂದರೆ ಅವರ ಧರ್ಮಕ್ಕೆ ಯಾವುದೇ ಆಧಾರವಿಲ್ಲ. ಅದು ಸುಳ್ಳೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಧರ್ಮವು ಮೂಲದಿಂದಲೇ ಸುಳ್ಳಾಗಿದೆ. ಆದ್ದರಿಂದ ಆ ಧರ್ಮದ ಜನರು ಮಾಡಿದ ವಧೆಯು ಸತ್ತ ಪ್ರಾಣಿಯ ನಿಯಮವನ್ನು ಹೊಂದಿದೆ, ಮತ್ತು ಅದನ್ನು ತಿನ್ನುವುದು ಸಮ್ಮತಾರ್ಹವಲ್ಲ.

ಇನ್ನು ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ: "ಜಿನ್ನ್ ನಿನ್ನನ್ನು ಹಿಡಿದಿದೆ", "ಜಿನ್ನ್ ನಿನ್ನನ್ನು ವಶಕ್ಕೆ ತೆಗೆದುಕೊಂಡಿದೆ", "ಶೈತಾನ್ ನಿನ್ನನ್ನು ಅಪಹರಿಸಿದ್ದಾನೆ" ಮುಂತಾದ ಮಾತುಗಳನ್ನು ಹೇಳುವುದು ನಿಂದನೆ ಮತ್ತು ಅವಹೇಳನವಾಗಿದೆ. ಮುಸ್ಲಿಮರು ಹೀಗೆ ಮಾಡುವುದು ಸಮ್ಮತಾರ್ಹವಲ್ಲ. ಇದು ಇತರ ಎಲ್ಲಾ ರೀತಿಯ ನಿಂದನೆ ಮತ್ತು ಅವಹೇಳನಗಳಂತೆ ಆಗಿದೆಯೇ ಹೊರತು ಇದು ಶಿರ್ಕ್‌ ಅಲ್ಲ. ಆದರೆ ಹಾಗೆ ಹೇಳುವವನು ಜಿನ್ನ್‌ಗಳು ಅಲ್ಲಾಹನ ಅನುಮತಿ ಮತ್ತು ಇಚ್ಛೆಯ ಹೊರತಾಗಿ ಮನುಷ್ಯರ ಜೀವನದಲ್ಲಿ ಮಧ್ಯಪ್ರವೇಶಿಸುತ್ತಾರೆಂದು ನಂಬದಿದ್ದರೆ ಮಾತ್ರ. ಯಾರು ಅದನ್ನು ಜಿನ್ನ್‌ಗಳ ಬಗ್ಗೆ ಅಥವಾ ಇತರ ಸೃಷ್ಟಿಗಳ ಬಗ್ಗೆ ನಂಬುತ್ತಾರೋ, ಅವರು ಈ ನಂಬಿಕೆಯಿಂದಾಗಿ ಸತ್ಯನಿಷೇಧಿಗಳಾಗುತ್ತಾರೆ. ಏಕೆಂದರೆ ಅಲ್ಲಾಹು ಎಲ್ಲಾ ವಸ್ತುಗಳ ಮಾಲೀಕನಾಗಿದ್ದಾನೆ. ಅವನಿಗೆ ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವಿದೆ. ಲಾಭ ನೀಡುವವನು ಮತ್ತು ಹಾನಿ ಮಾಡುವವನು ಅವನೇ. ಅವನ ಅನುಮತಿ, ಇಚ್ಛೆ ಮತ್ತು ಪೂರ್ವನಿರ್ಧಾರವಿಲ್ಲದೆ ಏನೂ ಅಸ್ತಿತ್ವಕ್ಕೆ ಬರುವುದಿಲ್ಲ. ಈ ಮಹಾನ್ ಮೂಲತತ್ವವನ್ನು ಜನರಿಗೆ ತಿಳಿಸಲು ತನ್ನ ಪ್ರವಾದಿ (ಸ) ರವರಿಗೆ ಆದೇಶಿಸುತ್ತಾ ಅಲ್ಲಾಹು ಹೇಳುತ್ತಾನೆ:

﴿قُلْ لَا أَمْلِكُ لِنَفْسِي نَفْعًا وَلَا ضَرًّا إِلَّا مَا شَاءَ اللَّهُ وَلَوْ كُنْتُ أَعْلَمُ الْغَيْبَ لَاسْتَكْثَرْتُ مِنَ الْخَيْرِ وَمَا مَسَّنِيَ السُّوءُ إِنْ أَنَا إِلَّا نَذِيرٌ وَبَشِيرٌ لِقَوْمٍ يُؤْمِنُونَ188﴾

"ಹೇಳಿರಿ: ನಾನು ಸ್ವತಃ ನನಗೆ ಲಾಭ ಅಥವಾ ಹಾನಿ ಮಾಡುವ ಶಕ್ತಿಯನ್ನು ಹೊಂದಿಲ್ಲ. ಅಲ್ಲಾಹು ಇಚ್ಛಿಸಿದ್ದರ ಹೊರತು. ನಾನು ಅದೃಶ್ಯವನ್ನು ತಿಳಿದಿದ್ದರೆ, ನಾನು ಒಳಿತುಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದೆ ಮತ್ತು ಕೆಡುಕು ನನ್ನನ್ನು ಸ್ಪರ್ಶಿಸುತ್ತಿರಲಿಲ್ಲ. ನಾನು ವಿಶ್ವಾಸವಿಡುವ ಜನರಿಗೆ ಮುನ್ನೆಚ್ಚರಿಕೆ ನೀಡುವವನು ಮತ್ತು ಶುಭವಾರ್ತೆ ತಿಳಿಸುವವನು ಮಾತ್ರವಾಗಿದ್ದೇನೆ." [ಅಲ್-ಅಅ್‌ರಾಫ್: 188]، ಆದ್ದರಿಂದ ಸೃಷ್ಟಿಗಳಲ್ಲಿ ಶ್ರೇಷ್ಠರು ಮತ್ತು ಅತ್ಯುತ್ತಮರು (ಪ್ರವಾದಿ (ಸ)) ಅಲ್ಲಾಹು ಇಚ್ಛಿಸಿದ್ದರ ಹೊರತು ತಮಗೆ ಲಾಭ ಅಥವಾ ಹಾನಿ ಮಾಡುವ ಶಕ್ತಿಯನ್ನು ಹೊಂದಿಲ್ಲದಿದ್ದರೆ, ಇತರ ಸೃಷ್ಟಿಗಳ ಗತಿ ಏನು?! ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ಇನ್ನು ಭವಿಷ್ಯ ನುಡಿಯುವವರು, ಮಾಟಗಾರರು, ಜ್ಯೋತಿಷಿಗಳು ಮುಂತಾದ ಅದೃಶ್ಯದ ಬಗ್ಗೆ ತಮಗೆ ತಿಳಿದಿದೆಯೆಂದು ಹೇಳುಕೊಳ್ಳುವವರೊಡನೆ ಕೇಳುವುದು ನಿಷಿದ್ಧವಾಗಿದೆ. ಅದಕ್ಕೆ ಅನುಮತಿಯಿಲ್ಲ. ಅವರು ಹೇಳಿದ್ದನ್ನು ನಂಬುವುದು ಇದಕ್ಕಿಂತಲೂ ಕಠಿಣವಾದ ನಿಷಿದ್ಧವಾಗಿದೆ. ಅಷ್ಟೇ ಅಲ್ಲ, ಅದು ಸತ್ಯನಿಷೇಧದ ಶಾಖೆಗಳಲ್ಲಿ ಒಂದಾಗಿದೆ. ಪ್ರವಾದಿ (ಸ) ರವರು ಹೇಳುತ್ತಾರೆ:

«مَنْ أَتَى عَرَّافًا فَسَأَلَهُ عَنْ شَيءٍ؛ لَمْ تُقْبَلْ لَهُ صَلَاةٌ أَرْبَعِينَ يَومًا».

"ಯಾರು ಭವಿಷ್ಯ ನುಡಿಯುವವನ ಬಳಿಗೆ ಹೋಗಿ ಯಾವುದಾದರೂ ವಿಷಯದ ಬಗ್ಗೆ ಕೇಳುತ್ತಾರೋ, ಅವರ ನಲವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ." ಇದನ್ನು ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ವರದಿ ಮಾಡಿದ್ದಾರೆ. ಮುಸ್ಲಿಮ್ ರವರ ಸಹೀಹ್‌ನಲ್ಲಿರುವ ಮುಆವಿಯ ಬಿನ್ ಹಕಮ್ ಅಸ್ಸುಲಮಿ (ರ) ರಿಂದ ವರದಿ.

«أَنَّ النَّبيَّ ﷺ نَهَى عَنْ إِتْيَانِ الكُهَّانِ وَسُؤَالِهِم».

ಪ್ರವಾದಿ (ಸ) ರವರು ಭವಿಷ್ಯ ನುಡಿಯುವವರ ಬಳಿಗೆ ಹೋಗುವುದನ್ನು ಮತ್ತು ಅವರಲ್ಲಿ ಕೇಳುವುದನ್ನು ನಿಷೇಧಿಸಿದ್ದಾರೆ.

ಮತ್ತು ಸುನನ್‌ ಗ್ರಂಥಗಳ ಲೇಖಕರು ಪ್ರವಾದಿ (ಸ) ರಿಂದ ವರದಿ ಮಾಡುತ್ತಾರೆ. ಅವರು ಹೇಳಿದರು:

«مَنْ أَتَى كَاهِنًا، فَصَدَّقَهُ بِمَا يَقُولُ؛ فَقَدْ كَفَرَ بِمَا أُنْزِلَ عَلَى مُحَمَّدٍ ﷺ».

ಯಾರು ಜ್ಯೋತಿಷಿಯ ಬಳಿಗೆ ಹೋಗಿ ಅವನು ಹೇಳುವುದನ್ನು ಸತ್ಯವೆಂದು ನಂಬುತ್ತಾರೋ, ಅವರು ಮುಹಮ್ಮದ್ (ಸ) ರಿಗೆ ಅವತೀರ್ಣವಾದುದನ್ನು ನಿಷೇಧಿಸಿದರು. ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್‌ಗಳಿವೆ. ಆದ್ದರಿಂದ, ಅದೃಶ್ಯದ ಬಗ್ಗೆ ಸುದ್ದಿಗಳನ್ನು ನೀಡುವುದರಲ್ಲಿ ಮತ್ತು ಮುಸ್ಲಿಮರನ್ನು ಮೋಸಗೊಳಿಸುವುದರಲ್ಲಿ ನಿರತರಾಗಿರುವ ದೇವಮಾನವರು, ಭವಿಷ್ಯ ನುಡಿಯುವವರು, ಮತ್ತು ಇತರ ಎಲ್ಲಾ ಮಾಟಗಾರರ – ಅದು ವೈದ್ಯಕೀಯದ ಹೆಸರಿನಲ್ಲಿರಲಿ ಅಥವಾ ಬೇರೆ ಯಾವುದಾದರೂ ಹೆಸರಿನಲ್ಲಿರಲಿ – ಮಾತು ಕೇಳುವುದರಿಂದ ದೂರವಿರುವುದು ಮುಸ್ಲಿಮರ ಮೇಲೆ ಕಡ್ಡಾಯವಾಗಿದೆ. ಪ್ರವಾದಿ (ಸ) ರವರು ಇದನ್ನು ನಿಷೇಧಿಸಿದ್ದಾರೆ ಮತ್ತು ಅದರ ಬಗ್ಗೆ ಎಚ್ಚರಿಸಿದ್ದಾರೆಂದು ಹಿಂದೆ ವಿವರಿಸಲಾಗಿದೆ. ಇದರಲ್ಲಿ ಸೇರಿದ ಇನ್ನೊಂದು ವಿಷಯವೇನೆಂದರೆ, ಕೆಲವು ಜನರು ವೈದ್ಯಕೀಯದ ಹೆಸರಿನಲ್ಲಿ ಅದೃಶ್ಯ ವಿಷಯಗಳ ಬಗ್ಗೆ ವಾದಿಸುವುದು. ಅವರು ರೋಗಿಯ ಪೇಟವನ್ನು, ಅಥವಾ ರೋಗಿಯ ಮುಸುಕನ್ನು, ಅಥವಾ ಅದರಂತಹುದನ್ನು ಮೂಸಿ ನೋಡಿ ಹೇಳುತ್ತಾರೆ: ಈ ರೋಗಿ ಹೀಗೆ ಮಾಡಿದ್ದಾನೆ, ಅಥವಾ ಮಾಡಿದ್ದಾಳೆ. ಇವು ಅದೃಶ್ಯ ವಿಷಯಗಳಾಗಿದ್ದು, ರೋಗಿಯ ಪೇಟ ಮುಂತಾದವುಗಳಲ್ಲಿ ಅದರ ಬಗ್ಗೆ ಯಾವುದೇ ಸೂಚನೆಯಿಲ್ಲ. ಇವರ ಉದ್ದೇಶ ಜನಸಾಮಾನ್ಯರನ್ನು ಮೋಸಗೊಳಿಸುವುದು ಮತ್ತು ಜನರು ಅವರ ಬಗ್ಗೆ, "ಅವನು ವೈದ್ಯಕೀಯದಲ್ಲಿ, ಮತ್ತು ರೋಗಗಳ ವಿಧಗಳು ಮತ್ತು ಅವುಗಳ ಕಾರಣಗಳಲ್ಲಿ ತಜ್ಞನಾಗಿದ್ದಾನೆ" ಎಂದು ಹೇಳುವಂತೆ ಮಾಡುವುದು. ಕೆಲವೊಮ್ಮೆ ಅವನು ಅವರಿಗೆ ಕೆಲವು ಔಷಧಿಗಳನ್ನು ನೀಡುತ್ತಾನೆ. ಕೆಲವೊಮ್ಮೆ ಅದರಿಂದ ರೋಗಿ ಅಲ್ಲಾಹನ ಪೂರ್ವನಿರ್ಧಾರದಿಂದ ಗುಣಮುಖವಾಗಬಹುದು. ಆಗ ಅವರು ಅದು ಅವನ ಔಷಧಿಯ ಕಾರಣದಿಂದ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ರೋಗವು ಕೆಲವು ಜಿನ್ನ್‌ಗಳು ಮತ್ತು ಶೈತಾನರ ಕಾರಣದಿಂದಾಗಿರಬಹುದು ಮತ್ತು ವೈದ್ಯಕೀಯವನ್ನು ವಾದಿಸುವವನು ಅವುಗಳ ಸೇವೆ ಮಾಡುವವನಾಗಿರಬಹುದು. ಆಗ ಅವರು ಕೆಲವು ಅದೃಶ್ಯ ವಿಷಯಗಳ ಬಗ್ಗೆ ಅವನಿಗೆ ತಿಳಿಸುತ್ತಾರೆ ಮತ್ತು ಅವನು ಅದರ ಮೇಲೆ ಅವಲಂಬಿತನಾಗುತ್ತಾನೆ. ನಂತರ ಅವನು ಜಿನ್ನ್‌ಗಳು ಮತ್ತು ಶೈತಾನರಿಗೆ ಸೂಕ್ತವಾದ ರೀತಿಯಲ್ಲಿ ಆರಾಧನೆಗಳನ್ನು ಸಲ್ಲಿಸಿ ಸಂತುಷ್ಟಗೊಳಿಸುತ್ತಾನೆ. ಆಗ ಅವರು ಆ ರೋಗಿಯಿಂದ ದೂರವಾಗಿ ಅವನಿಗೆ ನೀಡುತ್ತಿದ್ದ ಹಿಂಸೆಯನ್ನು ನಿಲ್ಲಿಸುತ್ತಾರೆ. ಇದು ಜಿನ್ನ್‌ಗಳು, ಶೈತಾನರು ಮತ್ತು ಅವರನ್ನು ಆರಾಧಿಸುವವರ ಬಗ್ಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ.

ಮುಸ್ಲಿಮರು ಇವುಗಳಿಂದ ದೂರವಿರುವುದು, ಇವುಗಳನ್ನು ತ್ಯಜಿಸಲು ಪರಸ್ಪರ ಉಪದೇಶಿಸುವುದು, ಮತ್ತು ಎಲ್ಲಾ ವಿಷಯಗಳಲ್ಲಿ ಅಲ್ಲಾಹನ ಮೇಲೆ ಅವಲಂಬಿತರಾಗಿ, ಅವನಲ್ಲಿ ಭರವಸೆಯಿಡುವುದು ಕಡ್ಡಾಯವಾಗಿದೆ. ಶರೀಅತ್ ಸಮ್ಮತವಾದ ರುಕ್ಯಾಗಳನ್ನು (ಮಂತ್ರಗಳನ್ನು) ಪಠಿಸುವುದು, ಅನುಮತಿಸಲಾದ ಔಷಧಿಗಳನ್ನು ಸೇವಿಸುವುದು, ರೋಗಿಯ ಪರೀಕ್ಷೆ ಮಾಡಿ, ಇಂದ್ರಿಯಗೋಚರ ಮತ್ತು ತಾರ್ಕಿಕ ಕಾರಣಗಳಿಂದ ಅವನ ರೋಗವನ್ನು ಖಚಿತಪಡಿಸುವ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರವಾದಿ (ಸ) ರವರು ಹೀಗೆ ಹೇಳಿರುವುದು ದೃಢಪಟ್ಟಿದೆ:

«مَا أَنْزَلَ اللهُ دَاءً إِلَّا أَنْزَلَ لَهُ شِفَاءً، عَلِمَهُ مَنْ علِمه، وَجَهِلَهُ مَنْ جَهِلَهُ».

"ಅಲ್ಲಾಹು ಯಾವುದೇ ರೋಗವನ್ನು ಇಳಿಸಿಲ್ಲ, ಅದಕ್ಕೆ ಚಿಕಿತ್ಸೆಯನ್ನು ಇಳಿಸದೆ. ಅದನ್ನು ತಿಳಿದವರು ತಿಳಿದಿದ್ದಾರೆ, ಮತ್ತು ಅದನ್ನು ತಿಳಿಯದವರು ತಿಳಿದಿಲ್ಲ." ಪ್ರವಾದಿ(ಸ)ರು ಹೇಳಿದರು:

«لِكُلِّ دَاءٍ دَوَاءٌ، فإِذَا أُصِيبَ دَوَاءٌ الدَّاءَ بََرَأَ بِإِذْنِ اللهِ».

"ಪ್ರತಿಯೊಂದು ರೋಗಕ್ಕೂ ಒಂದು ಔಷಧಿಯಿದೆ. ರೋಗದ ಔಷಧಿಯನ್ನು ಸೇವಿಸಿದರೆ, ಅಲ್ಲಾಹನ ಅನುಮತಿಯಿಂದ ಅದು ನಿವಾರಣೆಯಾಗುತ್ತದೆ." ಪ್ರವಾದಿ(ಸ)ರು ಹೇಳಿದರು:

«عِبَادَ اللهِ، تَدَاوَوا وَلَا تَدَاوَوا بِحَرَامٍ».

"ಓ ಅಲ್ಲಾಹನ ದಾಸರೇ, ಔಷಧಿ ಸೇವಿಸಿರಿ. ಆದರೆ ನಿಷಿದ್ಧವಾದ ಔಷಧಿಗಳನ್ನು ಸೇವಿಸಬೇಡಿ." ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್‌ಗಳಿವೆ.

ಎಲ್ಲಾ ಮುಸ್ಲಿಮರ ಸ್ಥಿತಿಗತಿಗಳನ್ನು ಸುಧಾರಿಸಲು, ಅವರ ಹೃದಯಗಳನ್ನು ಮತ್ತು ದೇಹಗಳನ್ನು ಎಲ್ಲಾ ಕೆಡುಕುಗಳಿಂದ ಗುಣಪಡಿಸಲು, ಅವರನ್ನು ಸನ್ಮಾರ್ಗದ ಮೇಲೆ ಒಟ್ಟುಗೂಡಿಸಲು, ಮತ್ತು ದಾರಿತಪ್ಪಿಸುವ ಫಿತ್ನಗಳಿಂದ, ಹಾಗೂ ಶೈತಾನನ ಮತ್ತು ಅವನ ಮಿತ್ರರ ಆಜ್ಞಾಪಾಲನೆಯಿಂದ ನಮ್ಮನ್ನು ಮತ್ತು ಅವರನ್ನು ರಕ್ಷಿಸಲು ನಾನು ಅಲ್ಲಾಹನೊಂದಿಗೆ ಬೇಡುತ್ತೇನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಮಹೋನ್ನತನಾದ ಮತ್ತು ಮಹಾಮಹಿಮನಾದ ಅಲ್ಲಾಹನಲ್ಲಿ ಹೊರತು ಯಾವುದೇ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.

ಅಲ್ಲಾಹನ ಶಾಂತಿ ಮತ್ತು ಶುಭಾಶೀರ್ವಾದಗಳು ಅವನ ದಾಸರು ಮತ್ತು ಸಂದೇಶವಾಹಕರಾದ, ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬ ಮತ್ತು ಸಹಚರರ ಮೇಲೆ ಇರಲಿ.

 

 

***

 


بِسْمِ اللهِ الرَّحمَنِ الرَّحِيمِ

ನಾಲ್ಕನೆಯ ಸಂದೇಶ:

ಬಿದಈ ಮತ್ತು ಶಿರ್ಕಿ ಜಪಗಳ ಮೂಲಕ ಆರಾಧನೆ ಮಾಡುವುದರ ವಿಧಿ

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರಿಂದ ಗೌರವಾನ್ವಿತ ಸಹೋದರ "........." ರಿಗೆ, ಅಲ್ಲಾಹು ಅವರ ಎಲ್ಲಾ ಒಳಿತಿಗೂ ಯಶಸ್ಸು ನೀಡಲಿ, ಆಮೀನ್.

ನಿಮ್ಮ ಮೇಲೆ ಶಾಂತಿ, ಅಲ್ಲಾಹನ ಕರುಣೆ ಮತ್ತು ಅವನ ಆಶೀರ್ವಾದಗಳು ಇರಲಿ.

ಇನ್ನು ವಿಷಯಕ್ಕೆ ಬರುವುದಾದರೆ: ನಿಮ್ಮ ಗೌರವಾನ್ವಿತ ಪತ್ರವು ನನಗೆ ತಲುಪಿದೆ. ಅಲ್ಲಾಹು ತನ್ನ ಮಾರ್ಗದರ್ಶನದಿಂದ ನಿಮ್ಮನ್ನು ತಲುಪಲಿ. ನಿಮ್ಮ ದೇಶದಲ್ಲಿ ಕೆಲವರು ಅಲ್ಲಾಹು ಯಾವುದೇ ಆಧಾರವನ್ನು ಇಳಿಸದ ಜಪಗಳನ್ನು ಹಿಡಿದುಕೊಂಡು ಜಪಿಸುತ್ತಿದ್ದಾರೆಂದು ನಿಮ್ಮ ಪತ್ರದಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಕೆಲವು ಬಿದಈ ಮತ್ತು ಕೆಲವು ಶಿರ್ಕಿ ಜಪಗಳಿವೆ. ಅವರು ಅದನ್ನು ಅಮೀರುಲ್ ಮೂಮಿನೀನ್ ಅಲಿ ಬಿನ್ ಅಬೀ ತಾಲಿಬ್ (ರ) ಮುಂತಾದವರದ್ದೆಂದು ವಾದಿಸುತ್ತಾರೆ. ಅವರು ಆ ಜಪಗಳನ್ನು ಧಿಕ್ರ್‌ನ ಸಭೆಗಳಲ್ಲಿ, ಅಥವಾ ಮಗ್ರಿಬ್ ನಮಾಝ್ ನಂತರ ಮಸೀದಿಗಳಲ್ಲಿ ಪಠಿಸುತ್ತಾರೆ. ಅವು ಅಲ್ಲಾಹನ ಸಾಮೀಪ್ಯವನ್ನು ತರುತ್ತವೆ ಎಂದು ವಾದಿಸುತ್ತಾರೆ. ಉದಾಹರಣೆಗೆ ಅವರು ಹೇಳುತ್ತಾರೆ: ಅಲ್ಲಾಹನ ಹಕ್ಕಿನಿಂದ, ಓ ಅಲ್ಲಾಹನ ಜನರೇ! ಅಲ್ಲಾಹನ ಸಹಾಯದಿಂದ ನಮಗೆ ಸಹಾಯ ಮಾಡಿ, ಅಲ್ಲಾಹನ ಮೂಲಕ ನಮ್ಮ ಸಹಾಯಕರಾಗಿರಿ, ಇತ್ಯಾದಿ. ಹಾಗೆಯೇ ಅವರು ಹೇಳುತ್ತಾರೆ: ಓ ಧ್ರುವಬಿಂದುಗಳೇ! ಓ ಸರದಾರರೇ! ಓ ಸಹಾಯ ಮಾಡುವವರೇ! ನಮಗೆ ಉತ್ತರ ನೀಡಿರಿ, ನಮ್ಮ ಬಗ್ಗೆ ಅಲ್ಲಾಹನ ಬಳಿ ಶಿಫಾರಸ್ಸು ಮಾಡಿರಿ, ಈ ನಿಮ್ಮ ದಾಸನು ನಿಂತಿದ್ದಾನೆ, ನಿಮ್ಮ ಬಾಗಿಲಲ್ಲಿ ಮಂಡಿಯೂರಿದ್ದಾನೆ, ಮತ್ತು ಅವನು ತನ್ನ ಪಾಪಗಳಿಂದ ಭಯಭೀತನಾಗಿದ್ದಾನೆ. ಓ ಅಲ್ಲಾಹನ ಸಂದೇಶವಾಹಕರೇ! ನಮಗೆ ಸಹಾಯ ಮಾಡಿರಿ. ನಾನು ನಿಮ್ಮನ್ನು ಬಿಟ್ಟು ಎಲ್ಲಿಗೆ ಹೋಗಲಿ, ನಿಮ್ಮಿಂದಲೇ ಉದ್ದೇಶವು ಈಡೇರುತ್ತದೆ, ನೀವು ಅಲ್ಲಾಹನ ಜನರಾಗಿದ್ದೀರಿ. ಹುತಾತ್ಮರ ಮುಖಂಡರಾದ ಹಂಝರ ಮೂಲಕ, ಮತ್ತು ನಿಮ್ಮಲ್ಲಿ ನಮಗೆ ಸಹಾಯ ಮಾಡುವವರು ಯಾರಿದ್ದಾರೋ ಅವರ ಮೂಲಕ (ನಮಗೆ ಸಹಾಯ ಮಾಡಿರಿ), ಓ ಅಲ್ಲಾಹನ ಸಂದೇಶವಾಹಕರೇ! ನಮಗೆ ಸಹಾಯ ಮಾಡಿರಿ. ಹಾಗೆಯೇ ಅವರು ಹೇಳುತ್ತಾರೆ: ಓ ಅಲ್ಲಾಹ್! ಯಾರನ್ನು ನೀನು ನಿನ್ನ ಜಬರೂತಿಯ್ಯದ (ಸರ್ವಶಕ್ತಿಯ) ರಹಸ್ಯಗಳ ವಿಭಜನೆಗೆ ಮತ್ತು ನಿನ್ನ ರಹ್ಮಾನಿಯ್ಯ (ಕರುಣೆಯ) ಜ್ಯೋತಿಗಳ ಪ್ರಕಟಣೆಗೆ ಕಾರಣವನ್ನಾಗಿ ಮಾಡಿದ್ದೀಯೋ, ಅವರ ಮೇಲೆ ನಿನ್ನ ಆಶೀರ್ವಾದಗಳನ್ನು ಸುರಿಸು. ಇದರಿಂದಾಗಿ ಅವರು ನಿನ್ನ ರಬ್ಬಾನಿಯ್ಯದ (ದೈವಿಕತೆಯ) ಸನ್ನಿಧಿಯ ಪ್ರತಿನಿಧಿಯಾಗಿದ್ದಾರೆ, ಮತ್ತು ನಿನ್ನ ದಾತಿಯ್ಯದ (ಸಾರದ) ರಹಸ್ಯಗಳ ಖಲೀಫರಾಗಿದ್ದಾರೆ.

ಇವುಗಳಲ್ಲಿ ಯಾವುದು ಬಿದಅತ್ ಮತ್ತು ಯಾವುದು ಶಿರ್ಕ್ ಎಂದು ವಿವರಿಸಲು ನೀವು ಹಂಬಲ ವ್ಯಕ್ತಪಡಿಸಿದ್ದೀರಿ. ಅದೇ ರೀತಿ, ಇವೆಲ್ಲವನ್ನೂ ತಿಳಿದಿದ್ದೂ ಈ ಪ್ರಾರ್ಥನೆಯನ್ನು ಮಾಡುವ ಇಮಾಮರ ಹಿಂದೆ ನಮಾಝ್ ಸಿಂಧುವಾಗುತ್ತದೆಯೇ ಎಂದು ನೀವು ಕೇಳಿದ್ದೀರಿ.

ಉತ್ತರ: ಅಲ್ಲಾಹನಿಗೆ ಸರ್ವಸ್ತುತಿಗಳು. ಯಾರ ನಂತರ ಬೇರೆ ಯಾವುದೇ ಪ್ರವಾದಿ ಇಲ್ಲವೋ ಅವರ (ಪ್ರವಾದಿ ಮುಹಮ್ಮದ್) ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಪುನರುತ್ಥಾನ ದಿನದವರೆಗೆ ಅವರ ಮಾರ್ಗದರ್ಶನವನ್ನು ಅನುಸರಿಸುವವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ಇರಲಿ.

ಇನ್ನು ವಿಷಯಕ್ಕೆ ಬರುವುದಾದರೆ, ತಿಳಿದುಕೊಳ್ಳಿರಿ – ಅಲ್ಲಾಹು ನಿಮಗೆ ಅನುಗ್ರಹಿಸಲಿ – ಅಲ್ಲಾಹು ಇತರೆಲ್ಲಾ ಸೃಷ್ಟಿಗಳ ಹೊರತಾಗಿ, ಏಕೈಕನೂ ಸಹಭಾಗಿಯಿಲ್ಲದವನೂ ಆದ ತನ್ನನ್ನು ಮಾತ್ರ ಆರಾಧಿಸುವ ಉದ್ದೇಶದಿಂದ ಸೃಷ್ಟಿಗಳನ್ನು ಸೃಷ್ಟಿಸಿದ್ದಾನೆ ಮತ್ತು ಸಂದೇಶವಾಹಕರುಗಳನ್ನು (ಅವರ ಮೇಲೆ ಶಾಂತಿಯಿರಲಿ) ಕಳುಹಿಸಿದ್ದಾನೆ. ಅವನು ಹೇಳುತ್ತಾನೆ:

﴿وَمَا خَلَقْتُ الْجِنَّ وَالْإِنْسَ إِلَّا لِيَعْبُدُونِ56﴾

"ಮತ್ತು ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ನನ್ನನ್ನು ಆರಾಧಿಸಲಿಕ್ಕಾಗಿಯೇ ಹೊರತು ಬೇರೆ ಯಾವುದಕ್ಕೂ ಸೃಷ್ಟಿಸಿಲ್ಲ." [ಅದ್ದಾರಿಯಾತ್:56]

ಈಗಾಗಲೇ ವಿವರಿಸಿದಂತೆ, ಆರಾಧನೆ ಎಂದರೆ, ಅಲ್ಲಾಹು ಮತ್ತು ಅವನ ಸಂದೇಶವಾಹಕರು ಆದೇಶಿಸಿದ್ದನ್ನು ಮಾಡುವ ಮೂಲಕ, ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ್ದನ್ನು ತ್ಯಜಿಸುವ ಮೂಲಕ, ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವ ಮೂಲಕ, ಮತ್ತು ಆತ್ಯಂತಿಕ ಪ್ರೀತಿ ಮತ್ತು ಸಂಪೂರ್ಣ ವಿನಮ್ರತೆಯೊಂದಿಗೆ ಕರ್ಮಗಳನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಅರ್ಪಿಸುವ ಮೂಲಕ, ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರಿಗೆ ವಿಧೇಯರಾಗಿರುವುದು. ಅಲ್ಲಾಹು ಹೇಳುತ್ತಾನೆ:

﴿وَقَضَى رَبُّكَ أَلَّا تَعْبُدُوا إِلَّا إِيَّاهُ...﴾

"ಮತ್ತು ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ವಿಧಿಸಿದ್ದಾನೆ." [ಅಲ್-ಇಸ್ರಾಅ್: 23] ಅಂದರೆ, ಅವನನ್ನು ಮಾತ್ರ ಆರಾಧಿಸಬೇಕೆಂದು ಅವನು ಆದೇಶಿಸಿದ್ದಾನೆ ಮತ್ತು ಉಪದೇಶಿಸಿದ್ದಾನೆ. ಅವನು (ಅಲ್ಲಾಹು) ಹೇಳುತ್ತಾನೆ:

﴿الْحَمْدُ لِلَّهِ رَبِّ الْعَالَمِينَ2 الرَّحْمَنِ الرَّحِيمِ3 مَالِكِ يَوْمِ الدِّينِ4 إِيَّاكَ نَعْبُدُ وَإِيَّاكَ نَسْتَعِينُ5﴾

"ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.

ಪರಮ ದಯಾಮಯನು ಮತ್ತು ಕರುಣಾನಿಧಿ.

ಪ್ರತಿಫಲ ದಿನದ ಒಡೆಯನು.

ನಾನು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಾವು ನಿನ್ನಲ್ಲಿ ಮಾತ್ರ ಸಹಾಯ ಯಾಚಿಸುತ್ತೇವೆ." [ಅಲ್-ಫಾತಿಹಾ: 2-5] ಆದ್ದರಿಂದ ಅಲ್ಲಾಹು ಈ ವಚನಗಳ ಮೂಲಕ, ಅವನು ಮಾತ್ರ ಆರಾಧನೆಗೆ ಅರ್ಹನು, ಮತ್ತು ಅವನಲ್ಲಿ ಮಾತ್ರ ಸಹಾಯ ಯಾಚಿಸಬೇಕು ಎಂದು ವಿವರಿಸಿದ್ದಾನೆ. ಅವನು ಹೇಳುತ್ತಾನೆ:

﴿إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ2 أَلَا لِلَّهِ ٱلدِّينُ ٱلۡخَالِصُ...﴾

ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ನಿಮಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಆರಾಧಿಸಿರಿ.

ತಿಳಿಯಿರಿ! ನಿಷ್ಕಳಂಕವಾದ ಆರಾಧನೆಯು ಅಲ್ಲಾಹನಿಗೆ ಮಾತ್ರವಾಗಿರಬೇಕು. [ಅಝ್ಝುಮರ್: 2-3] ಅವನು (ಅಲ್ಲಾಹು) ಹೇಳುತ್ತಾನೆ:

﴿فَادْعُوا اللَّهَ مُخْلِصِينَ لَهُ الدِّينَ وَلَوْ كَرِهَ الْكَافِرُونَ14﴾

"ಆದ್ದರಿಂದ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ದ್ವೇಷಿಸಿದರೂ ಸಹ." [ಗಾಫಿರ್: 14] ಅವನು (ಅಲ್ಲಾಹು) ಹೇಳುತ್ತಾನೆ:

﴿وَأَنَّ الْمَسَاجِدَ لِلَّهِ فَلَا تَدْعُوا مَعَ اللَّهِ أَحَدًا18﴾

“ಮತ್ತು ಖಂಡಿತವಾಗಿಯೂ ಮಸೀದಿಗಳು ಅಲ್ಲಾಹನಿಗಾಗಿವೆ. ಆದ್ದರಿಂದ ಅಲ್ಲಾಹನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ.” [ಅಲ್-ಜಿನ್ನ್: 18] ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ. ಅವೆಲ್ಲವೂ ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕು ಎಂದು ಸೂಚಿಸುತ್ತವೆ.

ಎಲ್ಲರಿಗೂ ತಿಳಿದಿರುವಂತೆ, ಪ್ರಾರ್ಥನೆ ಮತ್ತು ಅದರ ಎಲ್ಲಾ ವಿಧಗಳು ಆರಾಧನೆಯಾಗಿವೆ. ಆದ್ದರಿಂದ ಯಾವುದೇ ವ್ಯಕ್ತಿ ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಹೊರತು ಬೇರೆ ಯಾರನ್ನೂ ಕರೆದು ಪ್ರಾರ್ಥಿಸುವುದು ಸಮ್ಮತಾರ್ಹವಲ್ಲ. ಹಾಗೆಯೇ, ಅವನಲ್ಲಿ ಹೊರತು ಬೇರೆ ಯಾರಿಂದಲೂ ಸಹಾಯ ಅಥವಾ ರಕ್ಷಣೆ ಬೇಡುವುದು ಸಮ್ಮತಾರ್ಹವಲ್ಲ. ಈ ಗೌರವಾನ್ವಿತ ವಚನಗಳು ಮತ್ತು ಅವುಗಳ ಅರ್ಥದಲ್ಲಿ ಬಂದಿರುವ ಇತರ ವಚನಗಳು ಇದನ್ನೇ ಸೂಚಿಸುತ್ತವೆ. ಜೀವಂತವಿರುವ ಮತ್ತು ಉಪಸ್ಥಿತವಿರುವ ಸೃಷ್ಟಿಯ ಸಾಮರ್ಥ್ಯದಲ್ಲಿ ಒಳಪಡುವ ರೂಢಿಯಾಗಿ ಮಾಡುವ ಕಾರ್ಯಗಳು ಮತ್ತು ಇಂದ್ರಿಯಗೋಚರ ಕಾರಣಗಳು ಇದಕ್ಕೆ ಹೊರತಾಗಿವೆ. ಅವು ಆರಾಧನೆಗಳಲ್ಲ. ಬದಲಿಗೆ, ಮನುಷ್ಯನು ಜೀವಂತವಿರುವ, ಸಾಮರ್ಥ್ಯವಿರುವ ಇನ್ನೊಬ್ಬ ಮನುಷ್ಯನಿಂದ ಅವನಿಗೆ ಸಾಮರ್ಥ್ಯವಿರುವ ವಿಷಯಗಳಲ್ಲಿ ರೂಢಿಯಾಗಿ ಕೇಳುವಂತಹ ಸಹಾಯವನ್ನು ಪಡೆಯಬಹುದು. ಉದಾಹರಣೆಗೆ, ತನ್ನ ಮಗನ, ಅಥವಾ ಸೇವಕನ, ಅಥವಾ ನಾಯಿಯ, ಕೆಡುಕನ್ನು ತಡೆಗಟ್ಟಲು ಅವನಿಂದ ಸಹಾಯ ಯಾಚಿಸುವುದು ಅಥವಾ ಸಹಾಯ ಕೇಳುವುದು. ಅದೇ ರೀತಿ ಮನುಷ್ಯನು ಜೀವಂತವಿರುವ, ಉಪಸ್ಥಿತಿವಿರುವ, ಅಥವಾ ಅನುಪಸ್ಥಿತವಾಗಿರುವ, ಸಾಮರ್ಥ್ಯವಿರುವ ಇನ್ನೊಬ್ಬ ಮನುಷ್ಯನಿಂದ, ತನ್ನ ಮನೆಯನ್ನು ಕಟ್ಟಲು, ಅಥವಾ ತನ್ನ ಕಾರನ್ನು ದುರಸ್ತಿಗೊಳಿಸಲು ಪತ್ರ ಮುಂತಾದ ಇಂದ್ರಿಯಗೋಚರ ಕಾರಣಗಳ ಮೂಲಕ ಸಹಾಯ ಕೇಳುವುದು. ಅದೇ ರೀತಿ, ಜಿಹಾದ್ ಮತ್ತು ಯುದ್ಧದಲ್ಲಿ ಮನುಷ್ಯನು ತನ್ನ ಸ್ನೇಹಿತರಿಂದ ಸಹಾಯ ಯಾಚಿಸುವುದು ಕೂಡ ಇದರಲ್ಲಿ ಒಳಪಡುತ್ತದೆ. ಅಲ್ಲಾಹು ಮೂಸಾ (ಅ) ರವರ ಕಥೆಯನ್ನು ವಿವರಿಸುತ್ತಾ ಹೇಳಿದ ಈ ವಚನವು ಈ ವಿಭಾಗದಲ್ಲಿ ಒಳಪಡುತ್ತದೆ:

﴿...فَاسْتَغَاثَهُ الَّذِي مِنْ شِيعَتِهِ عَلَى الَّذِي مِنْ عَدُوِّهِ...﴾

"ಆಗ ಅವರ (ಮೂಸಾರ) ಪಂಗಡದವನು ತನ್ನ ಶತ್ರುವಿನ ವಿರುದ್ಧ ಅವರೊಡನೆ ಸಹಾಯ ಯಾಚಿಸಿದನು." [ಅಲ್-ಕಸಸ್: 15]

ಆದರೆ ಮೃತರು, ಜಿನ್ನ್‌ಗಳು, ದೇವದೂತರುಗಳು, ಮರಗಳು ಮತ್ತು ಕಲ್ಲುಗಳಿಂದ ಸಹಾಯ ಯಾಚಿಸುವುದು ಮಹಾ ಶಿರ್ಕ್ ಆಗಿದೆ. ಹಿಂದಿನ ಕಾಲದ ಮುಶ್ರಿಕರು ಉಝ್ಝಾ, ಲಾತ್ ಮುಂತಾದ ತಮ್ಮ ದೇವರುಗಳೊಂದಿಗೆ ಮಾಡುತ್ತಿದ್ದದ್ದು ಇದೇ ಆಗಿದೆ. ಹಾಗೆಯೇ, ಅಲ್ಲಾಹನ ಹೊರತು ಬೇರೆ ಯಾರಿಗೂ ಮಾಡಲು ಸಾಮರ್ಥ್ಯವಿಲ್ಲದಂತಹ ವಿಷಯಗಳಲ್ಲಿ – ಉದಾ: ರೋಗಿಗಳನ್ನು ಗುಣಪಡಿಸುವುದು, ಹೃದಯಗಳಿಗೆ ಸನ್ಮಾರ್ಗ ನೀಡುವುದು, ಸ್ವರ್ಗಕ್ಕೆ ಪ್ರವೇಶ ಮಾಡಿಸುವುದು, ನರಕದಿಂದ ಮುಕ್ತಿ ನೀಡುವುದು ಮುಂತಾದ ವಿಷಯಗಳಲ್ಲಿ – ಮಹಾಪುರುಷರೆಂದು ಭಾವಿಸಲಾಗುವ ಜೀವಂತ ವ್ಯಕ್ತಿಗಳಲ್ಲಿ ಸಹಾಯ ಯಾಚಿಸುವುದು ಇದೇ ವಿಧಿಯನ್ನು ಹೊಂದಿದೆ.

ಮೇಲೆ ಉಲ್ಲೇಖಿಸಿದ ವಚನಗಳು ಮತ್ತು ಅವುಗಳ ಅರ್ಥದಲ್ಲಿ ಬಂದಿರುವ ವಚನಗಳು ಹಾಗೂ ಹದೀಸ್‌ಗಳೆಲ್ಲವೂ, ಎಲ್ಲಾ ವಿಷಯಗಳಲ್ಲೂ ಹೃದಯಗಳನ್ನು ಅಲ್ಲಾಹನ ಕಡೆಗೆ ತಿರುಗಿಸುವುದು, ಮತ್ತು ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸುವುದು ಕಡ್ಡಾಯವೆಂದು ಸೂಚಿಸುತ್ತವೆ. ಏಕೆಂದರೆ, ಹಿಂದಿನ ವಚನಗಳಲ್ಲಿ ಹೇಳಿದಂತೆ, ಮನುಷ್ಯರನ್ನು ಅದಕ್ಕಾಗಿಯೇ ಸೃಷ್ಟಿಸಲಾಗಿದೆ, ಮತ್ತು ಅದನ್ನೇ ಅವರಿಗೆ ಆದೇಶಿಸಲಾಗಿದೆ. ಅಲ್ಲಾಹು ಹೇಳುತ್ತಾನೆ:

﴿وَاعْبُدُوا اللَّهَ وَلَا تُشْرِكُوا بِهِ شَيْئًا...﴾

"ಮತ್ತು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಹಾಗೂ ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ (ಶಿರ್ಕ್) ಮಾಡಬೇಡಿ." [ಅನ್ನಿಸಾ: 36] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَا أُمِرُوا إِلَّا لِيَعْبُدُوا اللَّهَ مُخْلِصِينَ لَهُ الدِّينَ...﴾

"ಮತ್ತು ಅವರಿಗೆ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ, ಅವನನ್ನು ಆರಾಧಿಸಲು ಹೊರತು ಇನ್ನೇನೂ ಆದೇಶಿಸಲಾಗಿರಲಿಲ್ಲ." [ಅಲ್-ಬಯ್ಯಿನ: 5] ಮುಆದ್ (ರ) ರವರ ಹದೀಸ್‌ನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«حَقُّ اللهِ عَلَى العِبَادِ أَنْ يَعْبُدُوهُ وَلَا يُشْرِكُوا بِهِ شَيْئًا».

“ದಾಸರ ಮೇಲೆ ಅಲ್ಲಾಹನಿಗಿರುವ ಹಕ್ಕು ಏನೆಂದರೆ ಅವರು ಅವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಯಾವುದನ್ನೂ ಸಹಭಾಗಿಯನ್ನಾಗಿ ಮಾಡಬಾರದು.”. [ಬುಖಾರಿ ಮತ್ತು ಮುಸ್ಲಿಂ]،. ಇಬ್ನ್ ಮಸ್‌ಊದ್ (ರ) ರವರ ಹದೀಸ್‌ನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«مَنْ مَاتَ وَهُوَ يَدْعُو لِلَّهِ نِدًّا؛ دَخَلَ النَّارَ».

"ಯಾರು ಅಲ್ಲಾಹನಿಗೆ ಸರಿಸಾಟಿಯನ್ನು ಕಲ್ಪಿಸಿ ಪ್ರಾರ್ಥಿಸುತ್ತಾ ಮರಣ ಹೊಂದುತ್ತಾನೋ; ಅವನು ನರಕವನ್ನು ಪ್ರವೇಶಿಸುತ್ತಾನೆ." [ಬುಖಾರಿ]. ಬುಖಾರಿ ಮತ್ತು ಮುಸ್ಲಿಂನಲ್ಲಿ ಇಬ್ನ್ ಅಬ್ಬಾಸ್ (ರ) ರಿಂದ ವರದಿಯಾದ ಹದೀಸಿನಲ್ಲಿರುವಂತೆ, ಪ್ರವಾದಿ (ಸ) ರವರು ಮುಆದ್ ರನ್ನು ಯಮನ್‌ಗೆ ಕಳುಹಿಸಿದಾಗ ಹೇಳಿದರು:

«إِنَّكَ تَأْتِي قَومًا أَهْلَ كِتَابٍ، فَلْيَكُنْ أَوَّلَ مَا تَدْعُوهُم إِلَيهِ شَهَادَةِ أَنْ لَا إِلهَ إِلَّا اللهُ».

"ನೀನು ಗ್ರಂಥದವರ (ಯಹೂದಿ-ಕ್ರೈಸ್ತರ) ಬಳಿಗೆ ಹೋಗುತ್ತಿರುವೆ. ಆದ್ದರಿಂದ ನೀನು ಅವರನ್ನು ಮೊತ್ತಮೊದಲು ಆಹ್ವಾನಿಸಬೇಕಾದದ್ದು 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂಬ ಸಾಕ್ಷ್ಯಕ್ಕಾಗಿರಬೇಕು." ಇನ್ನೊಂದು ವರದಿಯಲ್ಲಿ ಹೀಗಿದೆ:

«اُدْعُهُمْ إِلَى شَهَادَةِ أَنْ لَا إِلهَ إِلَّا اللهُ وَأَنِّي رَسُولُ اللهِ».

"ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆ ಎಂಬ ಸಾಕ್ಷ್ಯಕ್ಕೆ ಅವರನ್ನು ಆಹ್ವಾನಿಸು." ಬುಖಾರಿಯ ವರದಿಯಲ್ಲಿ ಹೀಗಿದೆ:

«فَلْيَكُنْ أَوَّلَ مَا تَدْعُوهُم إِلَى أَنْ يُوَحِّدُوا اللهَ».

"ಆದ್ದರಿಂದ ನೀನು ಅವರನ್ನು ಮೊದಲು ಆಹ್ವಾನಿಸಬೇಕಾದದ್ದು ಅವರು (ಆರಾಧನೆಯಲ್ಲಿ) ಅಲ್ಲಾಹನನ್ನು ಏಕೈಕಗೊಳಿಸುವುದರ ಕಡೆಗಾಗಿದೆ." ಸಹೀಹ್ ಮುಸ್ಲಿಂನಲ್ಲಿ ತಾರಿಕ್ ಬಿನ್ ಅಶ್ಯಮ್ ಅಲ್-ಅಶ್ಜಈ (ರ) ರಿಂದ ವರದಿಯಾದ ಹದೀಸಿನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«مَنْ قَالَ: لَا إِلهَ إِلَّا اللهُ، وَكَفَرَ بِمَا يُعْبَدُ مِن دُونِ اللهِ؛ حَرُمَ مَالُهُ وَدَمُهُ، وَحِسَابُهُ عَلَى اللهِ جَلَّ جَلَالُهُ».

"ಯಾರು 'ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ' ಎಂದು ಹೇಳುತ್ತಾರೋ, ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲ್ಪಡುವುದನ್ನು ನಿರಾಕರಿಸುತ್ತಾರೋ; ಅವರ ಆಸ್ತಿ ಮತ್ತು ರಕ್ತವು ಪವಿತ್ರವಾಗಿದೆ. ಅವರ ವಿಚಾರಣೆ ಮಾಡುವುದು ಅಲ್ಲಾಹನ ಹೊಣೆಯಾಗಿದೆ." ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್‌ಗಳಿವೆ.

ಮೇಲೆ ಉಲ್ಲೇಖಿಸಿದ ವಚನಗಳು ಸೂಚಿಸುವಂತೆ, ಈ ತೌಹೀದ್ ಇಸ್ಲಾಂ ಧರ್ಮದ ಮೂಲ ಮತ್ತು ಅಡಿಪಾಯವಾಗಿದೆ. ಇದು ಧರ್ಮದ ಪ್ರಮುಖ ಭಾಗ, ಮತ್ತು ಪ್ರಮುಖ ಕಡ್ಡಾಯ ಕರ್ತವ್ಯವಾಗಿದೆ. ಇದು ಎರಡು ಭಾರವಾದ ಸೃಷ್ಟಿಗಳನ್ನು (ಜಿನ್ನ್ ಮತ್ತು ಮನುಷ್ಯರು) ಸೃಷ್ಟಿಸಿದ್ದರ, ಮತ್ತು ಎಲ್ಲಾ ಸಂದೇಶವಾಹಕರನ್ನು (ಸ) ಕಳುಹಿಸಿದ್ದರ ಹಿಂದಿರುವ ವಿವೇಕವಾಗಿದೆ. ಆ ವಚನಗಳಲ್ಲಿ ಇದು ಕೂಡ ಒಂದಾಗಿದೆ:

﴿وَمَا خَلَقْتُ الْجِنَّ وَالْإِنْسَ إِلَّا لِيَعْبُدُونِ56﴾

"ಮತ್ತು ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ನನ್ನನ್ನು ಆರಾಧಿಸಲಿಕ್ಕಾಗಿಯೇ ಹೊರತು ಬೇರೆ ಯಾವುದಕ್ಕೂ ಸೃಷ್ಟಿಸಿಲ್ಲ." [ಅದ್ದಾರಿಯಾತ್:56] ಇದಕ್ಕಿರುವ ಪುರಾವೆಗಳಲ್ಲಿ ಅಲ್ಲಾಹನ ಈ ವಚನವೂ ಒಳಗೊಳ್ಳುತ್ತದೆ:

﴿وَلَقَدْ بَعَثْنَا فِي كُلِّ أُمَّةٍ رَسُولًا أَنِ اعْبُدُوا اللَّهَ وَاجْتَنِبُوا الطَّاغُوتَ...﴾

"ಮತ್ತು ನಾವು ಪ್ರತಿಯೊಂದು ಸಮುದಾಯದಲ್ಲೂ ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದೇವೆ, (ಅವರು ಹೇಳಿದರು): ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತ್ (ಮಿಥ್ಯ ದೇವರುಗಳು) ಅನ್ನು ತ್ಯಜಿಸಿರಿ." [ಅನ್ನಹ್ಲ್: 36] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَا أَرْسَلْنَا مِنْ قَبْلِكَ مِنْ رَسُولٍ إِلَّا نُوحِي إِلَيْهِ أَنَّهُ لَا إِلَهَ إِلَّا أَنَا فَاعْبُدُونِ25﴾

"ನನ್ನ ಹೊರತು ಬೇರೆ ದೇವರಿಲ್ಲ, ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ ಎಂಬ ದಿವ್ಯಸಂದೇಶವನ್ನು ನೀಡದೆ ನಾವು ನಿಮಗಿಂತ ಮೊದಲು ಯಾವುದೇ ಸಂದೇಶವಾಹಕರನ್ನು ಕಳುಹಿಸಿಲ್ಲ." [ಅಲ್-ಅಂಬಿಯಾ: 25] ನೂಹ್, ಹೂದ್, ಸಾಲಿಹ್ ಮತ್ತು ಶುಐಬ್ – ಅವರೆಲ್ಲರ ಮೇಲೆ ಶಾಂತಿ ಇರಲಿ – ತಮ್ಮ ಜನರಿಗೆ ಹೀಗೆ ಬೋಧಿಸಿದ್ದರೆಂದು ಅಲ್ಲಾಹು ಹೇಳುತ್ತಾನೆ:

﴿...اعْبُدُوا اللَّهَ مَا لَكُمْ مِنْ إِلَهٍ غَيْرُهُ...﴾

"ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ನಿಮಗೆ ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ." [ಅಲ್-ಅಅ್‌ರಾಫ್: 59]، ಮೇಲಿನ ಎರಡು ವಚನಗಳು ಸೂಚಿಸುವಂತೆ ಇದು ಎಲ್ಲಾ ಸಂದೇಶವಾಹಕರು ನೀಡಿದ ಕರೆಯಾಗಿದೆ. ಆರಾಧನೆಯಲ್ಲಿ ಅಲ್ಲಾಹನನ್ನು ಏಕೈಕಗೊಳಿಸಲು ಮನುಷ್ಯರಿಗೆ ಕರೆ ನೀಡುವುದು ಮತ್ತು ಅವನ ಹೊರತಾಗಿ ಆರಾಧಿಸಲಾಗುವ ದೇವರುಗಳನ್ನು ತ್ಯಜಿಸಲು ಅವರಿಗೆ ಆದೇಶಿಸುವುದು ಸಂದೇಶವಾಹಕರ ದೌತ್ಯವೆಂದು ಅವರ ಶತ್ರುಗಳು ಕೂಡ ಒಪ್ಪಿಕೊಂಡಿದ್ದರು. ಅಲ್ಲಾಹು ಆದ್ ಗೋತ್ರದವರ ಕಥೆಯಲ್ಲಿ ತಿಳಿಸಿದಂತೆ, ಅವರು ಹೂದ್ (ಅ) ರೊಡನೆ ಹೇಳಿದರು:

﴿...أَجِئْتَنَا لِنَعْبُدَ اللَّهَ وَحْدَهُ وَنَذَرَ مَا كَانَ يَعْبُدُ آبَاؤُنَا...﴾

"ನೀನು ನಮ್ಮ ಬಳಿಗೆ ಬಂದಿರುವುದು ನಾವು ಅಲ್ಲಾಹನನ್ನು ಮಾತ್ರ ಆರಾಧಿಸಬೇಕೆಂದು ಮತ್ತು ನಮ್ಮ ಪೂರ್ವಜರು ಆರಾಧಿಸುತ್ತಿದ್ದವುಗಳನ್ನು ತ್ಯಜಿಸಬೇಕೆಂದು ಹೇಳುವುದಕ್ಕಾಗಿಯೇ?" [ಅಲ್-ಅಅ್‌ರಾಫ್: 70]، ಆರಾಧನೆಯಲ್ಲಿ ಅಲ್ಲಾಹನನ್ನು ಏಕೈಕಗೊಳಿಸಲು ಮತ್ತು ಅವನ ಹೊರತಾದ ದೇವದೂತರುಗಳು, ಔಲಿಯಾಗಳು, ವಿಗ್ರಹಗಳು, ಮರಗಳು ಮುಂತಾದವುಗಳ ಆರಾಧನೆಯನ್ನು ತ್ಯಜಿಸಲು ನಮ್ಮ ಪ್ರವಾದಿ ಮುಹಮ್ಮದ್ (ಸ) ರವರು ಕುರೈಶರನ್ನು ಆಹ್ವಾನಿಸಿದಾಗ, ಅವರು ಹೀಗೆ ಹೇಳಿದರೆಂದು ಅಲ್ಲಾಹು ಹೇಳುತ್ತಾನೆ:

﴿أَجَعَلَ الْآلِهَةَ إِلَهًا وَاحِدًا إِنَّ هَذَا لَشَيْءٌ عُجَابٌ5﴾

"ಅವನು ಅನೇಕ ದೇವರುಗಳನ್ನು ಒಂದೇ ದೇವರನ್ನಾಗಿ ಮಾಡಿದ್ದಾನೆಯೇ? ನಿಶ್ಚಯವಾಗಿಯೂ ಇದು ಒಂದು ಆಶ್ಚರ್ಯಕರ ವಿಷಯವಾಗಿದೆ!" [ಸ್ವಾದ್: 5]، ಅಲ್ಲಾಹು ಅವರ ಬಗ್ಗೆ ಹೇಳುತ್ತಾನೆ:

﴿إِنَّهُمْ كَانُوا إِذَا قِيلَ لَهُمْ لَا إِلَهَ إِلَّا اللَّهُ يَسْتَكْبِرُونَ35 وَيَقُولُونَ أَئِنَّا لَتَارِكُوٓاْ ءَالِهَتِنَا لِشَاعِرٖ مَّجۡنُونِۭ36﴾

"ನಿಶ್ಚಯವಾಗಿಯೂ ಅವರೊಡನೆ, 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿದರೆ, ಅವರು ಅಹಂಕಾರ ಪಡುತ್ತಿದ್ದರು.

ಅವರು ಹೇಳುತ್ತಿದ್ದರು: “ಒಬ್ಬ ಮಾನಸಿಕ ಅಸ್ವಸ್ಥ ಕವಿಯ ಮಾತು ಕೇಳಿ ನಾವು ನಮ್ಮ ದೇವರುಗಳನ್ನು ಬಿಟ್ಟುಬಿಡಬೇಕೇ?” [ಅಸ್ಸಾಫ್ಫಾತ್: 35-36] ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ನಾವು ಉಲ್ಲೇಖಿಸಿದ ವಚನಗಳು ಮತ್ತು ಹದೀಸ್‌ಗಳಿಂದ ನಿಮಗೆ ಸ್ಪಷ್ಟವಾಗುವುದೇನೆಂದರೆ, – ಅಲ್ಲಾಹು ನನಗೆ ಮತ್ತು ನಿಮಗೆ ಧರ್ಮದಲ್ಲಿ ತಿಳುವಳಿಕೆ ಮತ್ತು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಹಕ್ಕಿನ ಬಗ್ಗೆ ಒಳನೋಟವನ್ನು ನೀಡಲಿ – ಈ ಪ್ರಾರ್ಥನೆಗಳು ಮತ್ತು ಸಹಾಯ ಯಾಚನೆಯ ವಿಧಗಳು – ನೀವು ನಿಮ್ಮ ಪ್ರಶ್ನೆಯಲ್ಲಿ ವಿವರಿಸಿದಂತೆ – ಎಲ್ಲವೂ ಮಹಾ ಶಿರ್ಕ್‌ನ ವಿಧಗಳಾಗಿವೆ. ಏಕೆಂದರೆ ಅವು ಅಲ್ಲಾಹನಲ್ಲದವರಿಗೆ ಸಲ್ಲಿಸುವ ಆರಾಧನೆ, ಮತ್ತು ಅವನಿಗಲ್ಲದೆ ಬೇರೆ ಯಾರಿಗೂ ಸಾಮರ್ಥ್ಯವಿಲ್ಲದ ವಿಷಯಗಳಲ್ಲಿ – ಮೃತರು ಮತ್ತು ಅನುಪಸ್ಥಿತರಾಗಿರುವವರಲ್ಲಿ – ಬೇಡುವುದಾಗಿದೆ. ಇದು ಹಿಂದಿನ ಕಾಲದವರ ಶಿರ್ಕ್‌ಗಿಂತ ಕೆಟ್ಟದಾಗಿದೆ. ಏಕೆಂದರೆ ಹಿಂದಿನ ಕಾಲದವರು ಕೇವಲ ಆರಾಮದ ಸಮಯದಲ್ಲಿ ಮಾತ್ರ ಶಿರ್ಕ್ ಮಾಡುತ್ತಿದ್ದರು. ಆದರೆ ಕಷ್ಟದ ಸಮಯದಲ್ಲಿ ಅವರು ಆರಾಧನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸುತ್ತಿದ್ದರು. ಏಕೆಂದರೆ ಅವರ ಕಷ್ಟದಿಂದ ಅವರನ್ನು ಪಾರುಮಾಡಲು ಅಲ್ಲಾಹನ ಹೊರತು ಬೇರೆ ಯಾರಿಗೂ ಸಾಮರ್ಥ್ಯವಿಲ್ಲವೆಂದು ಅವರು ತಿಳಿದಿದ್ದರು. ಆ ಮುಶ್ರಿಕರ ಬಗ್ಗೆ ಅಲ್ಲಾಹು ತನ್ನ ಸ್ಪಷ್ಟವಾದ ಗ್ರಂಥದಲ್ಲಿ ಹೇಳುತ್ತಾನೆ:

﴿فَإِذَا رَكِبُواْ فِي ٱلۡفُلۡكِ دَعَوُاْ ٱللَّهَ مُخۡلِصِينَ لَهُ ٱلدِّينَ فَلَمَّا نَجَّىٰهُمۡ إِلَى ٱلۡبَرِّ إِذَا هُمۡ يُشۡرِكُونَ65﴾

ಅವರು (ಬಹುದೇವಾರಾಧಕರು) ನಾವೆಯನ್ನು ಏರಿದರೆ ಆರಾಧನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಕರೆದು ಪ್ರಾರ್ಥಿಸುತ್ತಾರೆ. ನಂತರ ಅವನು ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರೆ ಅಗೋ! ಅವರು ಅವನೊಡನೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ. [ಅಲ್-ಅನ್ಕಬೂತ್: 65] ಅವರನ್ನು ಸಂಬೋಧಿಸುತ್ತಾ ಇನ್ನೊಂದು ವಚನದಲ್ಲಿ ಅಲ್ಲಾಹು ಹೇಳುತ್ತಾನೆ:

﴿وَإِذَا مَسَّكُمُ ٱلضُّرُّ فِي ٱلۡبَحۡرِ ضَلَّ مَن تَدۡعُونَ إِلَّآ إِيَّاهُۖ فَلَمَّا نَجَّىٰكُمۡ إِلَى ٱلۡبَرِّ أَعۡرَضۡتُمۡۚ وَكَانَ ٱلۡإِنسَٰنُ كَفُورًا67﴾

ಕಡಲಲ್ಲಿ ನಿಮಗೇನಾದರೂ ತೊಂದರೆಯಾದರೆ ನೀವು ಅಲ್ಲಾಹನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ ಅವರೆಲ್ಲರೂ ನಿಮ್ಮನ್ನು ಬಿಟ್ಟು ಹೋಗುವರು. ಆದರೆ ಅಲ್ಲಾಹು ನಿಮ್ಮನ್ನು ಸುರಕ್ಷಿತವಾಗಿ ದಡ ಸೇರಿಸಿದರೆ ನೀವು ವಿಮುಖರಾಗುತ್ತೀರಿ. ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ. [ಅಲ್-ಇಸ್ರಾಅ್: 67]

ಆದರೆ, ಇಂದಿನ ಮುಶ್ರಿಕರು ಹೇಳುತ್ತಾರೆ: "ನಾವು ಅವರಲ್ಲಿ ಕೇಳುವುದು ಅವರು ಸ್ವತಃ ಪ್ರಯೋಜನ ನೀಡುತ್ತಾರೆ, ಅವರು ಸ್ವತಃ ನಮ್ಮ ರೋಗಿಗಳನ್ನು ಗುಣಪಡಿಸುತ್ತಾರೆ, ಅವರು ಸ್ವತಃ ನಮಗೆ ಲಾಭ ನೀಡುತ್ತಾರೆ, ಅಥವಾ ಅವರು ಸ್ವತಃ ನಮಗೆ ಹಾನಿ ಮಾಡುತ್ತಾರೆ ಎಂಬ ಉದ್ದೇಶದಿಂದಲ್ಲ, ಬದಲಿಗೆ ನಾವು ಉದ್ದೇಶಿಸುವುದು ಅವರು ಅದಕ್ಕಾಗಿ ಅಲ್ಲಾಹನ ಬಳಿ ಶಿಫಾರಸು ಮಾಡುತ್ತಾರೆ ಎಂಬುದಾಗಿದೆ."

ಇದಕ್ಕೆ ಉತ್ತರವಾಗಿ ಅವರಿಗೆ ಹೀಗೆ ಹೇಳಬೇಕು: ಹಿಂದಿನ ಕಾಲದ ಸತ್ಯನಿಷೇಧಿಗಳ ಉದ್ದೇಶ ಮತ್ತು ಗುರಿಯು ಇದೇ ಆಗಿತ್ತು. ಅವರ ದೇವರುಗಳು ಸೃಷ್ಟಿಸುತ್ತಾರೆ, ಅಥವಾ ಆಹಾರ ಒದಗಿಸುತ್ತಾರೆ, ಅಥವಾ ಸ್ವತಃ ಲಾಭ ಅಥವಾ ಹಾನಿ ಮಾಡುತ್ತಾರೆ ಎಂದು ಅವರು ನಂಬಿರಲಿಲ್ಲ. ಅಲ್ಲಾಹು ಕುರ್‌ಆನ್‌ನಲ್ಲಿ ಅವರ ಬಗ್ಗೆ ಉಲ್ಲೇಖಿಸಿರುವುದು ನಿಮ್ಮ ವಾದವನ್ನು ಖಂಡಿಸುತ್ತದೆ. ಅವರು ತಮ್ಮ ದೇವರುಗಳ ಶಿಫಾರಸು ಮತ್ತು ಸ್ಥಾನಮಾನವನ್ನು, ಮತ್ತು ಅಲ್ಲಾಹನಿಗೆ ಹತ್ತಿರವಾಗುವುದನ್ನು ಉದ್ದೇಶಿಸಿದ್ದರು. ಅಲ್ಲಾಹು ಹೇಳುತ್ತಾನೆ:

﴿وَيَعۡبُدُونَ مِن دُونِ ٱللَّهِ مَا لَا يَضُرُّهُمۡ وَلَا يَنفَعُهُمۡ وَيَقُولُونَ هَٰٓؤُلَآءِ شُفَعَٰٓؤُنَا عِندَ ٱللَّهِ...﴾

ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಯಾವುದೇ ಉಪಕಾರ ಅಥವಾ ತೊಂದರೆ ಮಾಡದವರನ್ನು ಆರಾಧಿಸುತ್ತಾರೆ. ಅವರು ಹೇಳುತ್ತಾರೆ: “ಇವರು ಅಲ್ಲಾಹನ ಬಳಿ ನಮಗೆ ಶಿಫಾರಸು ಮಾಡುತ್ತಾರೆ.” [ಯೂನುಸ್: 18] ಆಗ ಅಲ್ಲಾಹು ಅವರಿಗೆ ಉತ್ತರಿಸುತ್ತಾ ಹೇಳುತ್ತಾನೆ:

﴿...قُلۡ أَتُنَبِّـُٔونَ ٱللَّهَ بِمَا لَا يَعۡلَمُ فِي ٱلسَّمَٰوَٰتِ وَلَا فِي ٱلۡأَرۡضِۚ سُبۡحَٰنَهُۥ وَتَعَٰلَىٰ عَمَّا يُشۡرِكُونَ﴾

ಕೇಳಿರಿ: “ಭೂಮ್ಯಾಕಾಶಗಳಲ್ಲಿ ಅಲ್ಲಾಹನಿಗೆ ತಿಳಿಯದೇ ಇರುವ ಒಂದು ವಿಷಯವನ್ನು ನೀವು ಅವನಿಗೆ ತಿಳಿಸುತ್ತಿದ್ದೀರಾ?” ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ. [ಯೂನುಸ್: 18] ಅಲ್ಲಾಹು ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ, ಶಿರ್ಕ್ ಮಾಡುವವರು ಉದ್ದೇಶಿಸುವ ರೀತಿಯಲ್ಲಿ ತನ್ನ ಬಳಿ ಶಿಫಾರಸು ಮಾಡುವ ಯಾರಾದರೂ ಆಕಾಶಗಳಲ್ಲಿ ಅಥವಾ ಭೂಮಿಯಲ್ಲಿ ಇರುವುದನ್ನು ಅಲ್ಲಾಹು ತಿಳಿದಿಲ್ಲ. ಅಂತಹವರು ಅಸ್ತಿತ್ವದಲ್ಲಿರುವುದು ಅಲ್ಲಾಹನಿಗೆ ತಿಳಿದಿಲ್ಲವಾದ್ದರಿಂದ ಅವರು ಅಸ್ತಿತ್ವದಲ್ಲಿಯೇ ಇಲ್ಲ. ಏಕೆಂದರೆ ಅಲ್ಲಾಹನಿಂದ ಏನೂ ಮರೆಯಾಗಿಲ್ಲ. ಅವನು (ಅಲ್ಲಾಹು) ಹೇಳುತ್ತಾನೆ:

﴿تَنزِيلُ ٱلۡكِتَٰبِ مِنَ ٱللَّهِ ٱلۡعَزِيزِ ٱلۡحَكِيمِ 1 إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ2 أَلَا لِلَّهِ ٱلدِّينُ ٱلۡخَالِصُۚ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ3﴾

ಈ ಗ್ರಂಥವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದ ಅವತೀರ್ಣವಾಗಿದೆ.

ನಿಶ್ಚಯವಾಗಿಯೂ ನಾವು ಈ ಗ್ರಂಥವನ್ನು ನಿಮಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ಆದ್ದರಿಂದ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಮಾತ್ರ ಆರಾಧಿಸಿರಿ.

ತಿಳಿಯಿರಿ! ನಿಷ್ಕಳಂಕವಾದ ಧರ್ಮವು ಅಲ್ಲಾಹನಿಗೆ ಮಾತ್ರ ಸೇರಿದ್ದು. ಮತ್ತು ಅವನ ಹೊರತು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡವರು (ಹೇಳುತ್ತಾರೆ): 'ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುವುದಕ್ಕಾಗಿ ಮಾತ್ರವಾಗಿದೆ.' ನಿಶ್ಚಯವಾಗಿಯೂ ಅಲ್ಲಾಹು ಅವರ ನಡುವೆ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ತೀರ್ಪು ನೀಡುತ್ತಾನೆ. ನಿಶ್ಚಯವಾಗಿಯೂ ಸುಳ್ಳುಗಾರನೂ, ಕೃತಘ್ನನೂ ಆದವನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ." [ಅಝ್ಝುಮರ್: 1-3]

ಇಲ್ಲಿ ಧರ್ಮ ಎಂದರೆ ಆರಾಧನೆಯಾಗಿದೆ. ಈಗಾಗಲೇ ಹೇಳಿದಂತೆ, ಅದು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ (ಸ) ವಿಧೇಯತೆ ತೋರುವುದಾಗಿದೆ. ಅದರಲ್ಲಿ ನಮಾಝ್ ಮತ್ತು ಉಪವಾಸ ಒಳಪಡುವಂತೆ ಪ್ರಾರ್ಥನೆ, ಸಹಾಯ ಯಾಚನೆ, ಭಯ, ನಿರೀಕ್ಷೆ, ಬಲಿ ಮತ್ತು ಹರಕೆ ಕೂಡ ಒಳಪಡುತ್ತವೆ. ಅಲ್ಲಾಹು ಮತ್ತು ಅವನ ಸಂದೇಶವಾಹಕರು ಆದೇಶಿಸಿದ ಎಲ್ಲಾ ವಿಷಯಗಳೂ ಅದರಲ್ಲಿ ಒಳಪಡುತ್ತವೆ. ಆದ್ದರಿಂದ, ಆರಾಧನೆಯು ಅಲ್ಲಾಹನಿಗೆ ಮಾತ್ರ ಸೇರಿದ್ದಾಗಿದೆ, ಹಾಗೂ ಅದನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸುವುದು ಮನುಷ್ಯರ ಮೇಲೆ ಕಡ್ಡಾಯವಾಗಿದೆ ಎಂದು ಅಲ್ಲಾಹು ಇಲ್ಲಿ ವಿವರಿಸಿದ್ದಾನೆ. ಏಕೆಂದರೆ ಆರಾಧನೆಯನ್ನು ನಿಷ್ಕಳಂಕವಾಗಿ ಅವನಿಗೆ ಮಾತ್ರ ಅರ್ಪಿಸಲು ಅವನು ಪ್ರವಾದಿ (ಸ) ರವರಿಗೆ ನೀಡಿದ ಆದೇಶವು ಈ ಸಮುದಾಯದ ಎಲ್ಲಾ ಸದಸ್ಯರಿಗೂ ಅನ್ವಯವಾಗುತ್ತದೆ.

ನಂತರ, ಅದರ ಬಳಿಕ ಅಲ್ಲಾಹು ಸತ್ಯನಿಷೇಧಿಗಳ ಬಗ್ಗೆ ಹೇಳುತ್ತಾನೆ:

﴿...وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ...

ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಮಾಡಿಕೊಂಡವರು ಹೇಳುತ್ತಾರೆ: “ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆಂಬ ಕಾರಣದಿಂದಾಗಿದೆ.” [ಅಝ್ಝುಮರ್: 3] ಆಗ ಅಲ್ಲಾಹು ಅವರಿಗೆ ಹೀಗೆ ಉತ್ತರಿಸಿದನು:

﴿...إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ﴾

"ನಿಶ್ಚಯವಾಗಿಯೂ ಅಲ್ಲಾಹು ಅವರ ನಡುವೆ ಅವರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ತೀರ್ಪು ನೀಡುತ್ತಾನೆ. ನಿಶ್ಚಯವಾಗಿಯೂ ಸುಳ್ಳುಗಾರನೂ, ಕೃತಘ್ನನೂ ಆದವನಿಗೆ ಅಲ್ಲಾಹು ಮಾರ್ಗದರ್ಶನ ನೀಡುವುದಿಲ್ಲ." [ಅಝ್ಝುಮರ್: 3] ಅಲ್ಲಾಹು ಈ ಗೌರವಾನ್ವಿತ ವಚನದಲ್ಲಿ ತಿಳಿಸುವುದೇನೆಂದರೆ, ಸತ್ಯನಿಷೇಧಿಗಳು ಅಲ್ಲಾಹನ ಹೊರತಾಗಿ ಮಹಾಪುರುಷರುಗಳನ್ನು ಆರಾಧಿಸಿದ್ದು ಅವರನ್ನು ಅಲ್ಲಾಹನಿಗೆ ಹತ್ತಿರಗೊಳಿಸುವುದಕ್ಕಾಗಿ ಮಾತ್ರವಾಗಿತ್ತು. ಇದು ಹಿಂದಿನ ಕಾಲದ ಮತ್ತು ಇಂದಿನ ಕಾಲದ ಸತ್ಯನಿಷೇಧಿಗಳ ಉದ್ದೇಶವಾಗಿದೆ. ಅವರ ವಾದವನ್ನು ಖಂಡಿಸುತ್ತಾ ಅಲ್ಲಾಹು ಹೇಳುತ್ತಾನೆ:

﴿...إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٞ كَفَّارٞ﴾

ನಿಶ್ಚಯವಾಗಿಯೂ ಅಲ್ಲಾಹು ಅವರ ಮಧ್ಯೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಸುಳ್ಳು ಹೇಳುವ ಮತ್ತು ಕೃತಜ್ಞತಾಭಾವವಿಲ್ಲದ ಯಾರಿಗೂ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. [ಅಝ್ಝುಮರ್: 3] ತಮ್ಮ ದೇವರುಗಳು ತಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆಂಬ ಅವರ ವಾದದಲ್ಲಿರುವ ಸುಳ್ಳನ್ನು ಮತ್ತು ಅವರು ಆ ದೇವರುಗಳಿಗೆ ಆರಾಧನೆ ಅರ್ಪಿಸಿದ ಅವರ ಸತ್ಯನಿಷೇಧವನ್ನು ಅಲ್ಲಾಹು ಇಲ್ಲಿ ವಿವರಿಸಿದ್ದಾನೆ. ಹಿಂದಿನ ಕಾಲದ ಸತ್ಯನಿಷೇಧಿಗಳ ಸತ್ಯನಿಷೇಧವು ಕೇವಲ ಪ್ರವಾದಿಗಳು, ಔಲಿಯಾಗಳು, ಮರಗಳು, ಕಲ್ಲುಗಳು, ಹಾಗೂ ಇತರ ಸೃಷ್ಟಿಗಳನ್ನು, ತಮ್ಮ ಮತ್ತು ಅಲ್ಲಾಹನ ನಡುವೆ ಶಿಫಾರಸುಗಾರರನ್ನಾಗಿ ಮಾಡಿಕೊಳ್ಳುವ ಮೂಲಕವಾಗಿತ್ತು ಎಂದು ಕನಿಷ್ಠ ವಿವೇಚನೆಯುಳ್ಳ ಪ್ರತಿಯೊಬ್ಬರಿಗೂ ಇದರಿಂದ ಮನವರಿಕೆಯಾಗಬಹುದು. ಮಂತ್ರಿಗಳು ರಾಜರ ಬಳಿ ಶಿಫಾರಸು ಮಾಡುವಂತೆ, ಅವರು ಅಲ್ಲಾಹನ ಅನುಮತಿ ಮತ್ತು ತೃಪ್ತಿಯಿಲ್ಲದೆಯೇ ತಮ್ಮ ಬೇಡಿಕೆಗಳನ್ನು ಪೂರೈಸುತ್ತಾರೆಂದು ಅವರು ನಂಬುತ್ತಿದ್ದರು. ಹೀಗೆ ಅವರು ಸರ್ವಶಕ್ತನಾದ ಅಲ್ಲಾಹನನ್ನು ರಾಜರು ಮತ್ತು ನಾಯಕರಿಗೆ ಹೋಲಿಸಿದರು. ಅವರು ಹೇಳುತ್ತಿದ್ದರು: ರಾಜ ಮತ್ತು ಮುಖಂಡನಿಂದ ಏನಾದರೂ ಕೆಲಸವಾಗಬೇಕಾದರೆ, ಆತನ ಆಪ್ತರು ಮತ್ತು ಮಂತ್ರಿಗಳ ಮೂಲಕ ಅವನ ಬಳಿ ಶಿಫಾರಸು ಮಾಡುವಂತೆ, ನಾವು ನಮ್ಮ ಪ್ರವಾದಿಗಳು ಮತ್ತು ಔಲಿಯಾಗಳನ್ನು ಆರಾಧಿಸುವ ಮೂಲಕ ಅಲ್ಲಾಹನಿಗೆ ಹತ್ತಿರವಾಗುತ್ತೇವೆ. ಇದು ಅತ್ಯಂತ ದೊಡ್ಡ ಅಸಂಬದ್ಧವಾಗಿದೆ. ಏಕೆಂದರೆ ಅಲ್ಲಾಹನಿಗೆ ಸರಿಸಾಟಿಯಿಲ್ಲ, ಮತ್ತು ಅವನನ್ನು ಅವನ ಸೃಷ್ಟಿಗಳಿಗೆ ಹೋಲಿಸಲಾಗುವುದಿಲ್ಲ. ಅವನು ಶಿಫಾರಸು ಮಾಡಲು ಅನುಮತಿ ನೀಡಿದ ಬಳಿಕವಲ್ಲದೆ ಯಾರೂ ಅವನ ಬಳಿ ಶಿಫಾರಸು ಮಾಡಲು ಸಾಧ್ಯವಿಲ್ಲ. ಅವನು ತೌಹೀದ್ ನಲ್ಲಿರುವವರಿಗಲ್ಲದೆ ಬೇರೆ ಯಾರಿಗೂ ಅನುಮತಿ ನೀಡುವುದೂ ಇಲ್ಲ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು, ಮತ್ತು ಎಲ್ಲವನ್ನೂ ತಿಳಿದಿರುವವನು. ಅವನು ಕರುಣಾಮಯಿಗಳಲ್ಲೇ ಅತ್ಯಂತ ದೊಡ್ಡ ಕರುಣಾಮಯಿ. ಅವನು ಯಾರಿಗೂ ಭಯಪಡುವುದಿಲ್ಲ ಮತ್ತು ಹೆದರುವುದಿಲ್ಲ. ಏಕೆಂದರೆ, ಅವನು ತನ್ನ ದಾಸರ ಮೇಲೆ ಸರ್ವಾಧಿಕಾರವುಳ್ಳವನು, ಹಾಗೂ ಅವರಲ್ಲಿ ತಾನು ಇಚ್ಛಿಸಿದಂತೆ ವರ್ತಿಸುವವನಾಗಿದ್ದಾನೆ. ಆದರೆ, ರಾಜರು ಮತ್ತು ಮುಖಂಡರು ಹೀಗಲ್ಲ. ಅವರಿಗೆ ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವಿಲ್ಲ. ಆದ್ದರಿಂದ ಅವರು ತಮ್ಮ ಮಂತ್ರಿಗಳು, ಆಪ್ತರು ಮತ್ತು ಸೈನಿಕರು ಮುಂತಾದ, ತಾವು ಅಸಮರ್ಥರಾಗಿರುವ ವಿಷಯಗಳಲ್ಲಿ ತಮಗೆ ಸಹಾಯ ಮಾಡುವವರ ಆವಶ್ಯಕತೆಯನ್ನು ಹೊಂದಿರುತ್ತಾರೆ. ಯಾರಿಗೆ ಏನು ಬೇಕೆಂದು ಅವರಿಗೆ ತಿಳಿಯದಿರುವುದರಿಂದ ಅದನ್ನು ಅವರಿಗೆ ತಿಳಿಸಿಕೊಡುವವರ ಆವಶ್ಯಕತೆಯು ಅವರಿಗಿದೆ. ಆದ್ದರಿಂದ ಅವರು ತಮ್ಮ ಮಂತ್ರಿಗಳು ಮತ್ತು ಆಪ್ತರು ಮುಂತಾದ ತಮ್ಮನ್ನು ಸಮಾಧಾನಪಡಿಸುವ ಮತ್ತು ಸಂತೋಷಪಡಿಸುವವರ ಆವಶ್ಯಕತೆಯನ್ನು ಹೊಂದಿರುತ್ತಾರೆ. ಆದರೆ ಸರ್ವಶಕ್ತನಾದ ಅಲ್ಲಾಹು ತನ್ನ ಎಲ್ಲಾ ಸೃಷ್ಟಿಗಳಿಂದ ಸಂಪೂರ್ಣವಾಗಿ ನಿರಪೇಕ್ಷನಾಗಿದ್ದಾನೆ. ಅವನು ಅವರ ತಾಯಂದಿರಿಗಿಂತಲೂ ಅವರಿಗೆ ಹೆಚ್ಚು ಕರುಣೆ ತೋರುತ್ತಾನೆ. ಅವನು ನ್ಯಾಯಯುತ ಆಡಳಿತಗಾರನಾಗಿದ್ದಾನೆ. ತನ್ನ ಯುಕ್ತಿ, ಜ್ಞಾನ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಸರಿಯಾದ ಕೆಲಸವನ್ನು ಮಾಡುತ್ತಾನೆ. ಆದ್ದರಿಂದ ಅವನನ್ನು ಅವನ ಸೃಷ್ಟಿಗಳಿಗೆ ಯಾವುದೇ ರೀತಿಯಲ್ಲಿ ಹೋಲಿಸುವುದು ಸಮ್ಮತಾರ್ಹವಲ್ಲ. ಈ ಕಾರಣದಿಂದಲೇ, ಮುಶ್ರಿಕರು ಅವನನ್ನು ಸೃಷ್ಟಿಕರ್ತ, ಅನ್ನದಾತ ಮತ್ತು ನಿರ್ವಾಹಕನೆಂದು, ಕಷ್ಟದಲ್ಲಿರುವವರಿಗೆ ಉತ್ತರಿಸುವವನು, ಕೆಡುಕನ್ನು ನಿವಾರಿಸುವವನು, ಜೀವ ನೀಡುವವನು ಮತ್ತು ಮರಣ ನೀಡುವವನು ಮುಂತಾದ ಎಲ್ಲಾ ಕೆಲಸಗಳನ್ನು ಅವನೇ ಮಾಡುತ್ತಾನೆಂದು ಒಪ್ಪಿಕೊಂಡಿದ್ದರೆಂದು ಅಲ್ಲಾಹು ತನ್ನ ಗ್ರಂಥದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಮುಶ್ರಿಕರು ಮತ್ತು ಸಂದೇಶವಾಹಕರ ನಡುವಿನ ವಿವಾದವು ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸುವ ವಿಷಯದಲ್ಲಾಗಿತ್ತು. ಅಲ್ಲಾಹು ಹೇಳುತ್ತಾನೆ:

﴿وَلَئِن سَأَلۡتَهُم مَّنۡ خَلَقَهُمۡ لَيَقُولُنَّ ٱللَّهُ...﴾

ನೀವು ಅವರೊಡನೆ, “ಅವರನ್ನು ಸೃಷ್ಟಿಸಿದ್ದು ಯಾರು?” ಎಂದು ಕೇಳಿದರೆ ಖಂಡಿತವಾಗಿಯೂ ಅವರು “ಅಲ್ಲಾಹು” ಎನ್ನುತ್ತಾರೆ... [ಅಝ್ಝುಖ್ರುಫ್: 87] ಅವನು (ಅಲ್ಲಾಹು) ಹೇಳುತ್ತಾನೆ:

﴿قُلۡ مَن يَرۡزُقُكُم مِّنَ ٱلسَّمَآءِ وَٱلۡأَرۡضِ أَمَّن يَمۡلِكُ ٱلسَّمۡعَ وَٱلۡأَبۡصَٰرَ وَمَن يُخۡرِجُ ٱلۡحَيَّ مِنَ ٱلۡمَيِّتِ وَيُخۡرِجُ ٱلۡمَيِّتَ مِنَ ٱلۡحَيِّ وَمَن يُدَبِّرُ ٱلۡأَمۡرَۚ فَسَيَقُولُونَ ٱللَّهُۚ فَقُلۡ أَفَلَا تَتَّقُونَ31﴾

ಕೇಳಿರಿ: “ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಆಹಾರವನ್ನು ಒದಗಿಸುವುದು ಯಾರು? ನಿಮ್ಮ ಶ್ರವಣ ಮತ್ತು ದೃಷ್ಟಿ ಯಾರ ನಿಯಂತ್ರಣದಲ್ಲಿದೆ? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಜಗತ್ತಿನ ಎಲ್ಲಾ ವಿಷಯಗಳನ್ನು ನಿಯಂತ್ರಿಸುವುದು ಯಾರು?” ಆಗ ಅವರು ಹೇಳುವರು: “ಅಲ್ಲಾಹು.” ಕೇಳಿರಿ: “ಆದರೂ ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?” [ಯೂನುಸ್: 31] ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ಸಂದೇಶವಾಹಕರು ಮತ್ತು ವಿಭಿನ್ನ ಸಮುದಾಯಗಳ ನಡುವಿನ ವಿವಾದವು ಆರಾಧನೆಯನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಅರ್ಪಿಸುವ ವಿಷಯದಲ್ಲಿ ಮಾತ್ರವಾಗಿತ್ತು ಎಂಬುದನ್ನು ಸೂಚಿಸುವ ವಚನಗಳನ್ನು ಈಗಾಗಲೇ ಉಲ್ಲೇಖಿಸಲಾಗಿದೆ. ಉದಾಹರಣೆಗೆ ಅಲ್ಲಾಹು ಹೇಳುತ್ತಾನೆ:

﴿وَلَقَدۡ بَعَثۡنَا فِي كُلِّ أُمَّةٖ رَّسُولًا أَنِ ٱعۡبُدُواْ ٱللَّهَ وَٱجۡتَنِبُواْ ٱلطَّٰغُوتَ...﴾

“ಅಲ್ಲಾಹನನ್ನು ಆರಾಧಿಸಿರಿ ಮತ್ತು ಮಿಥ್ಯ ದೇವರುಗಳನ್ನು ತೊರೆಯಿರಿ” ಎಂಬ ಸಂದೇಶದೊಂದಿಗೆ ನಾವು ಎಲ್ಲಾ ಸಮುದಾಯಗಳಿಗೂ ಸಂದೇಶವಾಹಕರನ್ನು ಕಳುಹಿಸಿದ್ದೇವೆ... [ಅನ್ನಹ್ಲ್: 36] ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ. ಸರ್ವಶಕ್ತನಾದ ಅಲ್ಲಾಹು ತನ್ನ ಪವಿತ್ರ ಗ್ರಂಥದ ಅನೇಕ ಸ್ಥಳಗಳಲ್ಲಿ ಶಿಫಾರಸಿನ ಬಗ್ಗೆ ವಿವರಿಸಿದ್ದಾನೆ. ಅವನು ಹೇಳುತ್ತಾನೆ:

﴿...مَن ذَا ٱلَّذِي يَشۡفَعُ عِندَهُۥٓ إِلَّا بِإِذۡنِهِ...﴾

ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? [ಅಲ್-ಬಕರ: 255] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَكَم مِّن مَّلَكٖ فِي ٱلسَّمَٰوَٰتِ لَا تُغۡنِي شَفَٰعَتُهُمۡ شَيۡـًٔا إِلَّا مِنۢ بَعۡدِ أَن يَأۡذَنَ ٱللَّهُ لِمَن يَشَآءُ وَيَرۡضَىٰٓ26﴾

ಆಕಾಶಗಳಲ್ಲಿ ಎಷ್ಟು ದೇವದೂತರು‍ಗಳಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಮತ್ತು ಅವನ ಪ್ರೀತಿಗೆ ಪಾತ್ರರಾದವರಿಗೆ ಶಿಫಾರಸು ಮಾಡಲು ಅನುಮತಿ ನೀಡಿದವರ ಹೊರತು ಇತರರು ಮಾಡುವ ಶಿಫಾರಸಿನಿಂದ ಯಾವುದೇ ಪ್ರಯೋಜನವಿಲ್ಲ. [ಅನ್ನಜ್ಮ್: 26]

ದೇವದೂತರನ್ನು ಬಣ್ಣಿಸುತ್ತಾ ಅಲ್ಲಾಹು ಹೇಳುತ್ತಾನೆ:

﴿...وَلَا يَشۡفَعُونَ إِلَّا لِمَنِ ٱرۡتَضَىٰ وَهُم مِّنۡ خَشۡيَتِهِۦ مُشۡفِقُونَ﴾

ಅವನ ಸಂಪ್ರೀತಿಗೆ ಪಾತ್ರರಾದವರಿಗೆ ಮಾತ್ರ ಅವರು ಶಿಫಾರಸು ಮಾಡುತ್ತಾರೆ. ಅವರು ಅವನ ಭಯದಿಂದ ತರಗುಟ್ಟುತ್ತಾರೆ. [ಅಲ್-ಅಂಬಿಯಾ: 28]

ತಾನು ತನ್ನ ದಾಸರಿಂದ ಸತ್ಯನಿಷೇಧವನ್ನು ತೃಪ್ತಿಪಡುವುದಿಲ್ಲ, ಬದಲಿಗೆ ಅವರಿಂದ ಕೃತಜ್ಞತೆಯನ್ನು ತೃಪ್ತಿಪಡುತ್ತೇನೆಂದು ಅಲ್ಲಾಹು ತಿಳಿಸಿದ್ದಾನೆ. ಕೃತಜ್ಞತೆ ಎಂದರೆ ಆರಾಧನೆಯಲ್ಲಿ ಅವನನ್ನು ಏಕೈಕಗೊಳಿಸುವುದು ಮತ್ತು ಅವನಿಗೆ ವಿಧೇಯವಾಗಿ ಕಾರ್ಯವೆಸಗುವುದು. ಅವನು ಹೇಳುತ್ತಾನೆ:

﴿إِن تَكۡفُرُواْ فَإِنَّ ٱللَّهَ غَنِيٌّ عَنكُمۡۖ وَلَا يَرۡضَىٰ لِعِبَادِهِ ٱلۡكُفۡرَۖ وَإِن تَشۡكُرُواْ يَرۡضَهُ لَكُمۡ...﴾

ನೀವು ಕೃತಘ್ನತೆ ತೋರುವುದಾದರೆ ನಿಶ್ಚಯವಾಗಿಯೂ ಅಲ್ಲಾಹನಿಗೆ ನಿಮ್ಮ ಅಗತ್ಯವಿಲ್ಲ. ದಾಸರು ಕೃತಘ್ನರಾಗುವುದನ್ನು ಅವನು ಇಷ್ಟಪಡುವುದಿಲ್ಲ. ನೀವು ಕೃತಜ್ಞರಾಗುವುದಾದರೆ ಅವನು ಅದನ್ನು ನಿಮಗಾಗಿ ಇಷ್ಟಪಡುವನು... [ಅಝ್ಝುಮರ್: 7]

ಬುಖಾರಿ ತಮ್ಮ ಸಹೀಹ್‌ನಲ್ಲಿ ಅಬು ಹುರೈರಾ (ರ) ರಿಂದ ವರದಿ. ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಜನರ ಪೈಕಿ ತಮ್ಮ ಶಿಫಾರಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರು?" ಅವರು (ಪ್ರವಾದಿ) ಉತ್ತರಿಸಿದರು:

«مَنْ قَالَ: لَا إِلهَ إِلَّا اللهُ خَالِصًا مِنْ قَلْبِهِ».

"ಯಾರು ತನ್ನ ಹೃದಯದಿಂದ ನಿಷ್ಕಳಂಕವಾಗಿ 'ಲಾ ಇಲಾಹ ಇಲ್ಲಲ್ಲಾಹ್' ಎಂದು ಹೇಳುತ್ತಾನೋ ಅವನು." ಅಥವಾ ಅವರು ಹೇಳಿದರು:

«مِنْ نَفْسِهِ».

"ತನ್ನ ಆತ್ಮದಿಂದ."

ಸಹೀಹ್‌ ಗ್ರಂಥದಲ್ಲಿ ಅನಸ್ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:

«لِكُلِّ نَبِيٍّ دَعْوَةٌ مُسْتَجَابَةٌ، فَتَعَجَّلَ كُلُّ نَبِيٍّ دَعْوَتَهُ، وَإِنِّي اخْتَبَأْتُ دَعْوَتِي شَفَاعَةً لِأُمَّتِي يَوْمَ الْقِيَامَةِ، فَهِيَ نَائِلَةٌ إِنْ شَاءَ اللَّهُ مَنْ مَاتَ مِنْ أُمَّتِي لَا يُشْرِكُ بِاللَّهِ شَيْئًا».

ಪ್ರತಿಯೊಬ್ಬ ಪ್ರವಾದಿಗೂ ಉತ್ತರ ದೊರೆಯುವ ಒಂದು ಪ್ರಾರ್ಥನೆಯಿದೆ. ಪ್ರತಿಯೊಬ್ಬ ಪ್ರವಾದಿಯೂ ತನ್ನ ಆ ಪ್ರಾರ್ಥನೆಯನ್ನು ತ್ವರೆಯಿಂದ ನಿರ್ವಹಿಸಿದ್ದಾರೆ. ಆದರೆ ನಾನು ನನ್ನ ಪ್ರಾರ್ಥನೆಯನ್ನು ಪುನರುತ್ಥಾನ ದಿನದಂದು ನನ್ನ ಸಮುದಾಯಕ್ಕೆ ಶಿಫಾರಸ್ಸಾಗಿ ತೆಗೆದಿಟ್ಟಿದ್ದೇನೆ. ಅದು – ಅಲ್ಲಾಹು ಇಚ್ಛಿಸಿದರೆ – ನನ್ನ ಸಮುದಾಯದಲ್ಲಿ ಅಲ್ಲಾಹನೊಂದಿಗೆ ಏನನ್ನೂ ಶಿರ್ಕ್ ಮಾಡದೆ ಮರಣ ಹೊಂದಿದವರಿಗೆ ದೊರೆಯುತ್ತದೆ. ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್‌ಗಳಿವೆ.

ನಾವು ಉಲ್ಲೇಖಿಸಿದ ಎಲ್ಲಾ ಕುರ್‌ಆನ್ ವಚನಗಳು ಮತ್ತು ಹದೀಸ್‌ಗಳು ಆರಾಧನೆಯು ಅಲ್ಲಾಹನಿಗೆ ಮಾತ್ರವಿರುವ ಹಕ್ಕಾಗಿದೆ, ಅದರ ಯಾವುದೇ ಭಾಗವನ್ನು ಅಲ್ಲಾಹನಲ್ಲದೆ ಬೇರೆಯವರಿಗೆ – ಅವರು ಪ್ರವಾದಿಗಳಿಗಾಗಲಿ ಅಥವಾ ಇತರರಿಗಾಗಲಿ – ಅರ್ಪಿಸುವುದು ಸಮ್ಮತಾರ್ಹವಲ್ಲ, ಮತ್ತು ಶಿಫಾರಸ್ಸು ಸರ್ವಶಕ್ತನಾದ ಅಲ್ಲಾಹನ ಅಧೀನದಲ್ಲಿದೆ ಎಂದು ಸೂಚಿಸುತ್ತವೆ. ಅಲ್ಲಾಹು ಹೇಳುತ್ತಾನೆ:

﴿قُل لِّلَّهِ ٱلشَّفَٰعَةُ جَمِيعٗا...﴾

ಹೇಳಿರಿ: “ಶಿಫಾರಸು ಸಂಪೂರ್ಣವಾಗಿ ಅಲ್ಲಾಹನ ಅಧೀನದಲ್ಲಿದೆ... [ಅಝ್ಝುಮರ್: 44] ಶಿಫಾರಸು ಮಾಡುವವನಿಗೆ ಅಲ್ಲಾಹು ಅನುಮತಿ ನೀಡಿದ ಬಳಿಕ ಮತ್ತು ಶಿಫಾರಸು ಪಡೆಯುವವನ ಬಗ್ಗೆ ಅವನು ಸಂತೃಪ್ತನಾಗಿರುವ ಹೊರತು ಯಾರೂ ಅದಕ್ಕೆ ಅರ್ಹರಾಗುವುದಿಲ್ಲ. ಈಗಾಗಲೇ ಹೇಳಿದಂತೆ, ತೌಹೀದ್ ಅಲ್ಲದೆ ಬೇರೆ ಯಾವುದನ್ನೂ ಅಲ್ಲಾಹು ತೃಪ್ತಿಪಡುವುದಿಲ್ಲ. ಇದರ ಆಧಾರದ ಮೇಲೆ ಹೇಳುವುದಾದರೆ, ಶಿರ್ಕ್ ಮಾಡುವವರಿಗೆ ಶಿಫಾರಸಿನಲ್ಲಿ ಯಾವುದೇ ಪಾಲು ಇಲ್ಲ. ಅಲ್ಲಾಹು ಇದನ್ನು ತನ್ನ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ:

﴿فَمَا تَنفَعُهُمۡ شَفَٰعَةُ ٱلشَّٰفِعِينَ 48﴾

ಅವರಿಗೆ ಶಿಫಾರಸುಗಾರರ ಶಿಫಾರಸು ಪ್ರಯೋಜನಪಡುವುದಿಲ್ಲ. [ಅಲ್-ಮುದ್ದಸ್ಸಿರ್: 48] ಅವನು (ಅಲ್ಲಾಹು) ಹೇಳುತ್ತಾನೆ:

﴿...مَا لِلظَّٰلِمِينَ مِنۡ حَمِيمٖ وَلَا شَفِيعٖ يُطَاعُ﴾

ಅಕ್ರಮಿಗಳಿಗೆ ಯಾವುದೇ ಆಪ್ತಮಿತ್ರರು ಅಥವಾ ಅಂಗೀಕಾರಯೋಗ್ಯ ಶಿಫಾರಸು ಮಾಡುವವರು ಯಾರೂ ಇರಲಾರರು. [ಗಾಫಿರ್: 18]

ಎಲ್ಲರಿಗೂ ತಿಳಿದಿರುವಂತೆ 'ಝುಲ್ಮ್' (ಅಕ್ರಮ) ಎಂಬ ಪದವನ್ನು ಅನಿರ್ದಿಷ್ಟವಾಗಿ ಬಳಸಿದರೆ, ಅದರರ್ಥ ಅಲ್ಲಾಹನೊಂದಿಗೆ ಶಿರ್ಕ್ ಮಾಡುವುದಾಗಿದೆ. ಅಲ್ಲಾಹು ಹೇಳುತ್ತಾನೆ:

﴿...وَٱلۡكَٰفِرُونَ هُمُ ٱلظَّٰلِمُونَ﴾

ಸತ್ಯನಿಷೇಧಿಗಳೇ ಅಕ್ರಮಿಗಳು. [ಅಲ್-ಬಕರ: 254] ಅವನು (ಅಲ್ಲಾಹು) ಹೇಳುತ್ತಾನೆ:

﴿...إِنَّ ٱلشِّرۡكَ لَظُلۡمٌ عَظِيمٞ﴾

ನಿಶ್ಚಯವಾಗಿಯೂ ಸಹಭಾಗಿತ್ವವು (ಶಿರ್ಕ್) ಘೋರ ಅಕ್ರಮವಾಗಿದೆ. [ಲುಕ್ಮಾನ್: 13]

ಕೆಲವು ಸೂಫಿಗಳು ಮಸೀದಿ ಹಾಗೂ ಇತರ ಸ್ಥಳಗಳಲ್ಲಿ, "ಓ ಅಲ್ಲಾಹ್! ಯಾರನ್ನು ನೀನು ನಿನ್ನ ಜಬರೂತಿಯ್ಯದ (ಸರ್ವಶಕ್ತಿಯ) ರಹಸ್ಯಗಳ ವಿಭಜನೆಗೆ ಮತ್ತು ನಿನ್ನ ರಹ್ಮಾನಿಯ್ಯ (ಕರುಣೆಯ) ಜ್ಯೋತಿಗಳ ಪ್ರಕಟಣೆಗೆ ಕಾರಣವನ್ನಾಗಿ ಮಾಡಿದ್ದೀಯೋ, ಅವರ ಮೇಲೆ ನಿನ್ನ ಆಶೀರ್ವಾದಗಳನ್ನು ಸುರಿಸು. ಇದರಿಂದಾಗಿ ಅವರು ನಿನ್ನ ರಬ್ಬಾನಿಯ್ಯದ (ದೈವಿಕತೆಯ) ಸನ್ನಿಧಿಯ ಪ್ರತಿನಿಧಿಯಾಗಿದ್ದಾರೆ, ಮತ್ತು ನಿನ್ನ ದಾತಿಯ್ಯದ (ಸಾರದ) ರಹಸ್ಯಗಳ ಖಲೀಫರಾಗಿದ್ದಾರೆ" ಎಂದು ಹೇಳುವ ಬಗ್ಗೆ ನೀವು ಕೇಳಿದ ಪ್ರಶ್ನೆಗೆ,

ಉತ್ತರವಾಗಿ ಹೀಗೆ ಹೇಳಬೇಕು: ಇಂತಹ ಮಾತುಗಳು ಸ್ವಯಂ ಕಷ್ಟಗೊಳಿಸುವುದು ಮತ್ತು ಅತಿರೇಕವೆಸಗುವುದರ ಭಾಗವಾಗಿದೆ. ನಮ್ಮ ಪ್ರವಾದಿ ಮುಹಮ್ಮದ್ (ಸ) ರವರು ಇವುಗಳ ಬಗ್ಗೆ ನಮ್ಮನ್ನು ಎಚ್ಚರಿಸಿದ್ದಾರೆ. ಸಹೀಹ್ ಮುಸ್ಲಿಂನಲ್ಲಿ ಅಬ್ದುಲ್ಲಾ ಬಿನ್ ಮಸ್‌ಊದ್ (ರ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:

«هَلَكَ المُتَنَطِّعُونَ» قَالَهَا ثَلَاثًا.

"ಅತಿರೇಕವೆಸಗುವವರು ನಾಶವಾದರು." ಅವರು ಇದನ್ನು ಮೂರು ಬಾರಿ ಹೇಳಿದರು.

ಇಮಾಮ್ ಖತ್ತಾಬಿ (ರ) ಹೇಳುತ್ತಾರೆ: ಅತಿರೇಕವೆಸಗುವವನು ಎಂದರೆ ಒಂದು ವಿಷಯದಲ್ಲಿ ಆಳವಾಗಿ ಹೋಗುವವನು ಮತ್ತು ಅದರ ಬಗ್ಗೆ ಸಂಶೋಧನೆ ಮಾಡಲು ಸ್ವಯಂ ಕಷ್ಟವನ್ನು ಹೇರಿಕೊಳ್ಳುವವನು. ಅಹ್ಲುಲ್ ಕಲಾಂನ ಜನರು ಇದಕ್ಕೆ ಉದಾಹರಣೆಯಾಗಿದ್ದಾರೆ. ಅವರು ತಮಗೆ ಸಂಬಂಧಿಸದ ವಿಷಯಗಳಲ್ಲಿ ಪ್ರವೇಶಿಸುತ್ತಾರೆ ಮತ್ತು ತಮ್ಮ ಬುದ್ಧಿಶಕ್ತಿ ತಲುಪದ ವಿಷಯಗಳಲ್ಲಿ ಮುಳುಗುತ್ತಾರೆ.

ಅಬು ಸ್ಸಆದಾತ್ ಇಬ್ನುಲ್-ಅಸೀರ್ ಹೇಳುತ್ತಾರೆ: ಅವರು ಮಾತಿನಲ್ಲಿ ಆಳವಾಗಿ ಹೋಗುವವರು ಮತ್ತು ಅತಿರೇಕವೆಸಗುವವರು, ಹಾಗೂ ತಮ್ಮ ಗಂಟಲಿನ ತುದಿಯಿಂದ ಮಾತನಾಡುವವರು. ಇದು 'ನತಅ್' ಎಂಬ ಶಬ್ದದಿಂದ ಬಂದಿದೆ. ಅದರ ಅರ್ಥ ಬಾಯೊಳಗೆ ಮೇಲ್ಭಾಗದಲ್ಲಿರುವ ರಂಧ್ರ. ನಂತರ ಮಾತು ಮತ್ತು ಕಾರ್ಯದಲ್ಲಿ ಆಳವಾಗಿ ಹೋಗುವ ಪ್ರತಿಯೊಬ್ಬರಿಗೂ ಇದನ್ನು ಬಳಸಲಾಯಿತು.

ಈ ಇಬ್ಬರು ಭಾಷಾ ಪಂಡಿತರು ಹೇಳಿದ ವಿಷಯಗಳಿಂದ, ನಿಮಗೆ ಮತ್ತು ಕನಿಷ್ಠ ಒಳನೋಟವುಳ್ಳ ಪ್ರತಿಯೊಬ್ಬರಿಗೂ ಸ್ಪಷ್ಟವಾಗುವುದೇನೆಂದರೆ, ನಮ್ಮ ಪ್ರವಾದಿ ಮತ್ತು ನಮ್ಮ ಸರದಾರರಾದ ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಈ ರೀತಿಯಲ್ಲಿ ಸಲಾತ್ ಮತ್ತು ಸಲಾಂ ಹೇಳುವುದು ಅವರು ನಿಷೇಧಿಸಿದ ಸ್ವಯಂ ಕಷ್ಟಗೊಳಿಸುವುದು ಮತ್ತು ಅತಿರೇಕವೆಸಗುವುದರ ಭಾಗವಾಗಿದೆ. ಈ ವಿಷಯದಲ್ಲಿ ಮುಸ್ಲಿಮರಿಗೆ ನಿಯಮಗೊಳಿಸಲಾಗಿರುವುದು, ಅವರು ಅಲ್ಲಾಹನ ಸಂದೇಶವಾಹಕರಿಂದ (ಸ) ದೃಢಪಟ್ಟಿರುವ ರೀತಿಯಲ್ಲಿ ಅವರ ಮೇಲೆ ಸಲಾತ್ ಮತ್ತು ಸಲಾಂ ಹೇಳುವ ವಿಧಾನವನ್ನು ಅನುಸರಿಸುವುದು. ಇವು ಇತರ ರೀತಿಯ ಸಲಾತ್‌ಗಳನ್ನು ಅಗತ್ಯವಿಲ್ಲದಂತೆ ಮಾಡುತ್ತವೆ.

ಅವುಗಳಲ್ಲಿ ಒಂದು: ಬುಖಾರಿ ಮತ್ತು ಮುಸ್ಲಿಮ್‌ನಲ್ಲಿ ಕಅಬ್ ಬಿನ್ ಉಜ್ರಾ (ರ) ರಿಂದ ವರದಿಯಾದದ್ದು. ಸಹಾಬಿಗಳು (ರ) ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಮೇಲೆ ಸಲಾತ್ ಹೇಳಲು ಅಲ್ಲಾಹು ನಮಗೆ ಆದೇಶಿಸಿದ್ದಾನೆ. ನಾವು ನಿಮ್ಮ ಮೇಲೆ ಹೇಗೆ ಸಲಾತ್ ಹೇಳಬೇಕು? ಅವರು ಉತ್ತರಿಸಿದರು:

«قُولُوا: اللَّهُمَّ صَلِّ عَلَى مُحَمَّدٍ وَعَلَى آلِ مُحَمَّدٍ كَمَا صَلَّيْتَ عَلَى إِبرَاهِيمَ وَعَلَى آلِ إِبرَاهِيمَ، إِنَّكَ حَمِيدٌ مَجِيدٌ، وَبَارِكْ عَلَى مُحَمَّدٍ وَعَلَى آلِ مُحَمَّدٍ كَمَا بَارَكْتَ عَلَى إِبرَاهِيمَ وَعَلَى آلِ إِبرَاهِيمَ إِنَّكَ حَمِيدٌ مَجِيدٌ».

ನೀವು ಹೀಗೆ ಹೇಳಿರಿ: "ಓ ಅಲ್ಲಾಹ್, ಮುಹಮ್ಮದ್(ಸ) ರಿಗೆ ಮತ್ತು ಮುಹಮ್ಮದ್(ಸ) ರವರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸು, ಇಬ್ರಾಹೀಂ(ಅ) ಮತ್ತು ಇಬ್ರಾಹೀಂ(ಅ) ರವರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಿಮೆಯುಳ್ಳವನಾಗಿರುವೆ. ಓ ಅಲ್ಲಾಹ್, ಮುಹಮ್ಮದ್(ಸ) ರಿಗೆ ಮತ್ತು ಮುಹಮ್ಮದ್(ಸ) ರವರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸು, ಇಬ್ರಾಹೀಂ(ಅ) ಮತ್ತು ಇಬ್ರಾಹೀಂ(ಅ) ರವರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಿಮೆಯುಳ್ಳವನಾಗಿರುವೆ."

ಬುಖಾರಿ ಮತ್ತು ಮುಸ್ಲಿಂನಲ್ಲಿ ಅಬೂ ಹುಮೈದ್ ಅಸ್ಸಾಇದೀ (ರ) ರಿಂದ ವರದಿ: ಅವರು ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ! ನಾವು ನಿಮ್ಮ ಮೇಲೆ ಹೇಗೆ ಸಲಾತ್ ಹೇಳಬೇಕು? ಅವರು ಉತ್ತರಿಸಿದರು:

«قُولُوا: اللَّهُمَّ صَلِّ عَلَى مُحَمَّدٍ وَعَلَى أَزْوَاجِهِ وَذُرِّيَّتِهِ كَمَا صَلَّيْتَ عَلَى آلِ إِبرَاهِيمَ، وَبَارِكْ عَلَى مُحَمَّدٍ وَعَلَى أَزْوَاجِهِ وَذُرِّيَّتِهِ كَمَا بَارَكْتَ عَلَى آلِ إِبرَاهِيمَ، إِنَّكَ حَمِيدٌ مَجِيدٌ».

ಹೀಗೆ ಹೇಳಿರಿ: "ಓ ಅಲ್ಲಾಹ್, ಮುಹಮ್ಮದ್‌ರಿಗೆ ಮತ್ತು ಅವರ ಪತ್ನಿಯರು ಹಾಗೂ ಅವರ ಸಂತತಿಗೆ ಶಾಂತಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸಿದಂತೆ. ಮುಹಮ್ಮದ್‌ರಿಗೆ ಮತ್ತು ಅವರ ಪತ್ನಿಯರು ಹಾಗೂ ಅವರ ಸಂತತಿಗೆ ಸಮೃದ್ಧಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿರುವೆ.

ಸಹೀಹ್ ಮುಸ್ಲಿಂನಲ್ಲಿ ಅಬೂ ಮಸ್‌ಊದ್ ಅಲ್-ಅನ್ಸಾರಿ (ರ) ರಿಂದ ವರದಿ. ಬಶೀರ್ ಬಿನ್ ಸಅದ್ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಮೇಲೆ ಸಲಾತ್ ಹೇಳಲು ಅಲ್ಲಾಹು ನಮಗೆ ಆದೇಶಿಸಿದ್ದಾನೆ; ನಾವು ನಿಮ್ಮ ಮೇಲೆ ಹೇಗೆ ಸಲಾತ್ ಹೇಳಬೇಕು? ಅವರು ಮೌನವಾದರು, ನಂತರ ಹೇಳಿದರು:

«قُولُوا: اللَّهُمَّ صَلِّ عَلَى مُحَمَّدٍ وَعَلَى آلِ مُحَمَّدٍ؛ كَمَا صَلَّيْتَ عَلَى آلِ إِبرَاهِيمَ، وَبَارِكْ عَلَى مُحَمَّدٍ وَعَلَى آلِ مُحَمَّدٍ؛ كَمَا بَارَكْتَ عَلَى آلِ إِبرَاهِيمَ فِي العَالَمِينَ، إِنَّكَ حَمِيدٌ مَجِيدٌ، وَالسَّلَامُ كَمَا عَلِمتُم».

ಹೀಗೆ ಹೇಳಿರಿ: "ಓ ಅಲ್ಲಾಹ್, ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸು, ಇಬ್ರಾಹೀಮರ ಕುಟುಂಬಕ್ಕೆ ಶಾಂತಿಯನ್ನು ವರ್ಷಿಸಿದಂತೆ. ಮುಹಮ್ಮದ್‌ರಿಗೆ ಮತ್ತು ಮುಹಮ್ಮದ್‌ರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸು, ಸರ್ವ ಲೋಕಗಳಲ್ಲಿ ಇಬ್ರಾಹೀಮರ ಕುಟುಂಬಕ್ಕೆ ಸಮೃದ್ಧಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿರುವೆ." ಸಲಾಂ ಹೇಗೆ ಹೇಳಬೇಕೆಂದು ನಾನು ನಿಮಗೆ ಈಗಾಗಲೇ ಕಲಿಸಿದ್ದೇನೆ.

ಮುಸ್ಲಿಮನು ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಸಲಾತ್ ಮತ್ತು ಸಲಾಂ ಹೇಳುವಾಗ ಪ್ರವಾದಿ (ಸ) ರವರಿಂದ ದೃಢಪಟ್ಟಿರುವ ಇಂತಹ ಪದಗಳನ್ನು ಬಳಸಬೇಕಾದುದು ಸೂಕ್ತವಾಗಿದೆ. ಏಕೆಂದರೆ, ತನಗೆ ಸಂಬಂಧಿಸಿ ಬಳಸಲು ಯೋಗ್ಯವಾದ ಪದಗಳ ಬಗ್ಗೆ ಜನರಲ್ಲೇ ಅತ್ಯಂತ ತಿಳಿದಿರುವವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ. ಹಾಗೆಯೇ, ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸಂಬಂಧಿಸಿ ಬಳಸಬೇಕಾದ ಪದಗಳ ಬಗ್ಗೆಯೂ ಅವರು ಜನರಲ್ಲೇ ಅತ್ಯಂತ ತಿಳಿದವರಾಗಿದ್ದಾರೆ.

ಆದರೆ, ಪ್ರಶ್ನೆಯಲ್ಲಿ ಉಲ್ಲೇಖಿಸಲಾದ ಪದಗಳಂತೆ ಸ್ವಯಂ ರಚಿಸಿದ ಮತ್ತು ನವೀನವಾದ ಪದಗಳನ್ನು, ಹಾಗೂ ಸರಿಯಲ್ಲದ ಅರ್ಥವನ್ನು ಹೊಂದಿರಬಹುದಾದ ಪದಗಳನ್ನು ಬಳಸುವುದು ಸೂಕ್ತವಲ್ಲ. ಏಕೆಂದರೆ, ಅದು ಸ್ವಯಂ ರಚಿಸಿದ್ದಾಗಿವೆ. ಮಾತ್ರವಲ್ಲದೆ, ಅವುಗಳನ್ನು ಅಸಂಬದ್ಧವಾಗಿ ವ್ಯಾಖ್ಯಾನಿಸಬಹುದಾದ ಸಂಭವನೀಯತೆಯಗಳಿವೆ. ಅದೇ ರೀತಿ, ಅವು ಅಲ್ಲಾಹನ ಸಂದೇಶವಾಹಕರು (ಸ) ಆಯ್ಕೆ ಮಾಡಿದ ಮತ್ತು ತಮ್ಮ ಸಮುದಾಯಕ್ಕೆ ನಿರ್ದೇಶಿಸಿದ ಪದಗಳಿಗೆ ವಿರುದ್ಧವಾಗಿವೆ. ಅವರು ಸೃಷ್ಟಿಗಳಲ್ಲೇ ಅತ್ಯಂತ ತಿಳಿದವರು, ಅತ್ಯಂತ ಉಪದೇಶ ನೀಡುವವರು ಮತ್ತು ಸ್ವಯಂ ಕಷ್ಟಗೊಳಿಸುವುದರಿಂದ ಅತ್ಯಂತ ದೂರವಿರುವವರು. ಅವರ ಮೇಲೆ ಅವರ ಪರಿಪಾಲಕನ (ಅಲ್ಲಾಹನ) ಅತ್ಯುತ್ತಮ ಸಲಾತ್ ಮತ್ತು ಸಲಾಂ ಇರಲಿ.

ತೌಹೀದ್‌ನ ನಿಜಸ್ಥಿತಿ, ಶಿರ್ಕ್‌ನ ನಿಜಸ್ಥಿತಿ, ಹಿಂದಿನ ಕಾಲದ ಮುಶ್ರಿಕರು ಮತ್ತು ಇಂದಿನ ಕಾಲದಲ್ಲಿ ಶಿರ್ಕ್ ಮಾಡುವವರ ನಡುವಿನ ವ್ಯತ್ಯಾಸ, ಹಾಗೂ ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಹೇಳಬೇಕೆಂದು ನಿಯಮಗೊಳಿಸಲಾಗಿರುವ ಸಲಾತ್‌ನ ವಿಧಾನ ಮುಂತಾದ ವಿಷಯಗಳನ್ನು ವಿವರಿಸಲು ನಾವು ಉಲ್ಲೇಖಿಸಿದ ಪುರಾವೆಗಳು ಸತ್ಯಾನ್ವೇಷಕರಿಗೆ ಸಾಕಾಗುತ್ತವೆ ಮತ್ತು ಮನವರಿಕೆ ಮಾಡುತ್ತವೆ ಎಂದು ನಾನು ಆಶಿಸುತ್ತೇನೆ. ಆದರೆ ಯಾರಿಗೆ ಸತ್ಯವನ್ನು ತಿಳಿಯಲು ಆಸಕ್ತಿಯಿಲ್ಲವೋ ಅವನು ತನ್ನ ಸ್ವೇಚ್ಛೆಯನ್ನು ಅನುಸರಿಸುವವನಾಗಿದ್ದಾನೆ. ಅಲ್ಲಾಹು ಹೇಳುತ್ತಾನೆ:

﴿فَإِن لَّمۡ يَسۡتَجِيبُواْ لَكَ فَٱعۡلَمۡ أَنَّمَا يَتَّبِعُونَ أَهۡوَآءَهُمۡۚ وَمَنۡ أَضَلُّ مِمَّنِ ٱتَّبَعَ هَوَىٰهُ بِغَيۡرِ هُدٗى مِّنَ ٱللَّهِۚ إِنَّ ٱللَّهَ لَا يَهۡدِي ٱلۡقَوۡمَ ٱلظَّٰلِمِينَ50﴾

ಅವರೇನಾದರೂ ನಿಮಗೆ ಉತ್ತರ ನೀಡದಿದ್ದರೆ ತಿಳಿಯಿರಿ! ಅವರು ಅವರ ಸ್ವೇಚ್ಛೆಗಳನ್ನು ಮಾತ್ರ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯ ಯಾವುದೇ ಮಾರ್ಗದರ್ಶನವನ್ನು ಪಡೆಯದೆ ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುವವನಿಗಿಂತ ಹೆಚ್ಚು ದಾರಿತಪ್ಪಿದವನು ಯಾರು? ನಿಶ್ಚಯವಾಗಿಯೂ ಅಲ್ಲಾಹು ಅಕ್ರಮಿಗಳಾದ ಜನರಿಗೆ ಸನ್ಮಾರ್ಗ ತೋರಿಸುವುದಿಲ್ಲ. [ಅಲ್-ಕಸಸ್: 50]

ಈ ಗೌರವಾನ್ವಿತ ವಚನದಲ್ಲಿ ಅಲ್ಲಾಹು ಸ್ಪಷ್ಟಪಡಿಸುವುದೇನೆಂದರೆ: ಅಲ್ಲಾಹು ತನ್ನ ಪ್ರವಾದಿ ಮುಹಮ್ಮದ್ (ಸ) ರವರ ಮೂಲಕ ಕಳುಹಿಸಿದ ಮಾರ್ಗದರ್ಶನ ಮತ್ತು ಸತ್ಯ ಧರ್ಮಕ್ಕೆ ಸಂಬಂಧಿಸಿದಂತೆ ಜನರಲ್ಲಿ ಎರಡು ವಿಭಾಗಗಳಿವೆ:

ಒಂದನೇ ವಿಭಾಗ: ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ಉತ್ತರಿಸುವವರು.

ಎರಡನೇ ವಿಭಾಗ: ತಮ್ಮ ಸ್ವೇಚ್ಛೆಯನ್ನು ಅನುಸರಿಸುವವರು. ಅಲ್ಲಾಹನಿಂದ ಮಾರ್ಗದರ್ಶನವನ್ನು ಅನುಸರಿಸದೆ ತನ್ನ ಸ್ವೇಚ್ಛೆಯನ್ನು ಅನುಸರಿಸುವವನಿಗಿಂತ ಹೆಚ್ಚು ದಾರಿತಪ್ಪಿದವರು ಯಾರೂ ಇಲ್ಲ ಎಂದು ನಂತರ ಅವನು ತಿಳಿಸುತ್ತಾನೆ.

ಸ್ವೇಚ್ಛೆಯನ್ನು ಅನುಸರಿಸುವುದರಿಂದ ರಕ್ಷಿಸಲು, ಮತ್ತು ನಮ್ಮನ್ನು, ನಿಮ್ಮನ್ನು ಹಾಗೂ ನಮ್ಮ ಎಲ್ಲಾ ಸಹೋದರರನ್ನು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ (ಸ) ಉತ್ತರಿಸುವವರಲ್ಲಿ, ಅವನ ಶರೀಅತ್ ಅನ್ನು ಗೌರವಿಸುವವರಲ್ಲಿ, ಮತ್ತು ಅವನ ಶರೀಅತ್‌ಗೆ ವಿರುದ್ಧವಾದ ಎಲ್ಲಾ ಬಿದಅತ್‌ಗಳು ಮತ್ತು ಸ್ವೇಚ್ಛೆಗಳಿಂದ ದೂರವಿರುವವರಲ್ಲಿ ಸೇರಿಸಲಿ ಎಂದು ನಾನು ಸರ್ವಶಕ್ತನಾದ ಅಲ್ಲಾಹನಲ್ಲಿ ಬೇಡುತ್ತೇನೆ. ನಿಶ್ಚಯವಾಗಿಯೂ ಅವನು ಉದಾರನು ಮತ್ತು ಕರುಣೆ ತೋರುವವನಾಗಿದ್ದಾನೆ.

ಅಲ್ಲಾಹನ ಶಾಂತಿ ಮತ್ತು ಶುಭಾಶೀರ್ವಾದಗಳು ಅವನ ದಾಸರು ಮತ್ತು ಸಂದೇಶವಾಹಕ, ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಪುನರುತ್ಥಾನ ದಿನದವರೆಗೆ ಅವರ ಮಾರ್ಗದರ್ಶನವನ್ನು ಅನುಸರಿಸುವವರ ಮೇಲೆ ಇರಲಿ.

 

 

***

 


بِسْمِ اللهِ الرَّحمَنِ الرَّحِيمِ

ಐದನೇ ಸಂದೇಶ:

ಪ್ರವಾದಿ ಜನ್ಮದಿನಾಚರಣೆ (ಮೀಲಾದುನ್ನಬಿ) ಮತ್ತು ಇತರ ಜನ್ಮದಿನಗಳ ಆಚರಣೆಯ ವಿಧಿ

ಸರ್ವ ಸ್ತುತಿಗಳು ಅಲ್ಲಾಹನಿಗೆ. ಅಲ್ಲಾಹನ ಸಂದೇಶವಾಹಕರ (ಸ) ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸಿದವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಪ್ರವಾದಿ (ಸ) ರವರ ಜನ್ಮದಿನವನ್ನು ಆಚರಿಸುವುದು, ಆ ಸಂದರ್ಭದಲ್ಲಿ ಅವರಿಗಾಗಿ ಎದ್ದು ನಿಲ್ಲುವುದು, ಅವರಿಗೆ ಸಲಾಂ ಹೇಳುವುದು ಮತ್ತು ಜನ್ಮದಿನಾಚರಣೆಗಳಲ್ಲಿ ಮಾಡಲಾಗುವ ಇತರ ಕಾರ್ಯಗಳ ವಿಧಿಯ ಬಗ್ಗೆ ಅನೇಕರಿಂದ ಪದೇ ಪದೇ ಪ್ರಶ್ನೆಗಳು ಬಂದಿವೆ.

ಇದಕ್ಕೆ ನೀಡಲಾಗುವ ಉತ್ತರ ಹೀಗಿದೆ: ಪ್ರವಾದಿ (ಸ) ರವರ ಜನ್ಮದಿನವನ್ನಾಗಲಿ ಅಥವಾ ಬೇರೆಯವರ ಜನ್ಮದಿನವನ್ನಾಗಲಿ ಆಚರಿಸುವುದು ಧರ್ಮದಲ್ಲಿ ಅನುಮತಿಸಲಾಗಿಲ್ಲ. ಏಕೆಂದರೆ ಇದು ಧರ್ಮದಲ್ಲಿ ಹೊಸದಾಗಿ ಸೃಷ್ಟಿಸಲಾದ ಬಿದ್‌ಅತ್‌ (ನೂತನಾಚಾರ) ಆಗಿದೆ. ಕಾರಣ, ಪ್ರವಾದಿ (ಸ) ರವರು ಇದನ್ನು ಮಾಡಿಲ್ಲ, ಸನ್ಮಾರ್ಗದಲ್ಲಿರುವ ಖಲೀಫರುಗಳು ಮಾಡಿಲ್ಲ, ಇತರ ಸಹಾಬಿಗಳು (ಅವರೆಲ್ಲರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಮಾಡಿಲ್ಲ, ಮತ್ತು ಉತ್ತಮ ರೀತಿಯಲ್ಲಿ ಅವರನ್ನು ಹಿಂಬಾಲಿಸಿದ ಉತ್ತಮ ತಲೆಮಾರುಗಳಲ್ಲಿ ಜೀವಿಸಿದ ತಾಬಿಯೀನ್‌ಗಳು ಸಹ ಇದನ್ನು ಮಾಡಿಲ್ಲ. ಇವರೆಲ್ಲರೂ ಸುನ್ನತ್ (ಪ್ರವಾದಿಚರ್ಯೆ) ಬಗ್ಗೆ ಹೆಚ್ಚು ತಿಳಿದವರಾಗಿದ್ದರು, ಪ್ರವಾದಿ (ಸ) ರವರನ್ನು ಹೆಚ್ಚು ಪ್ರೀತಿಸುತ್ತಿದ್ದರು ಮತ್ತು ಅವರ ನಂತರ ಬಂದವರಿಗಿಂತ ಹೆಚ್ಚಾಗಿ ಅವರ ಶರೀಅತ್ (ಧರ್ಮಶಾಸ್ತ್ರ) ಅನ್ನು ಅನುಸರಿಸುತ್ತಿದ್ದರು. ಮಹೋನ್ನತನಾದ ಅಲ್ಲಾಹು ತನ್ನ ಸ್ಪಷ್ಟ ಗ್ರಂಥದಲ್ಲಿ ಹೇಳುತ್ತಾನೆ:

﴿...وَمَآ ءَاتَىٰكُمُ ٱلرَّسُولُ فَخُذُوهُ وَمَا نَهَىٰكُمۡ عَنۡهُ فَٱنتَهُواْ...﴾

ಸಂದೇಶವಾಹಕರು ನಿಮಗೆ ಏನು ಕೊಡುತ್ತಾರೋ ಅದನ್ನು ಸ್ವೀಕರಿಸಿರಿ ಮತ್ತು ಅವರು ನಿಮಗೆ ಏನು ವಿರೋಧಿಸುತ್ತಾರೋ ಅದರಿಂದ ದೂರವಿರಿ.

[ಅಲ್-ಹಶ್ರ್: 7] ಅವನು (ಅಲ್ಲಾಹು) ಹೇಳುತ್ತಾನೆ:

﴿...فَلۡيَحۡذَرِ ٱلَّذِينَ يُخَالِفُونَ عَنۡ أَمۡرِهِۦٓ أَن تُصِيبَهُمۡ فِتۡنَةٌ أَوۡ يُصِيبَهُمۡ عَذَابٌ أَلِيمٌ﴾

ಪ್ರವಾದಿಯವರ ಆಜ್ಞೆಗೆ ವಿರುದ್ಧವಾಗಿ ಸಾಗುವವರು—ಅವರಿಗೇನಾದರೂ ಅನಾಹುತ ಸಂಭವಿಸುವುದರ ಬಗ್ಗೆ ಅಥವಾ ಯಾತನಾಮಯ ಶಿಕ್ಷೆ ಎರಗುವುದರ ಬಗ್ಗೆ ಸದಾ ಭಯಪಡುತ್ತಿರಲಿ. [ಅನ್ನೂರ್: 63] ಅವನು (ಅಲ್ಲಾಹು) ಹೇಳುತ್ತಾನೆ:

﴿لَّقَدۡ كَانَ لَكُمۡ فِي رَسُولِ ٱللَّهِ أُسۡوَةٌ حَسَنَةٞ لِّمَن كَانَ يَرۡجُواْ ٱللَّهَ وَٱلۡيَوۡمَ ٱلۡأٓخِرَ وَذَكَرَ ٱللَّهَ كَثِيرٗا21﴾

ನಿಮಗೆ ಅಲ್ಲಾಹನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಲ್ಲಾಹನನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ. [ಅಲ್-ಅಹ್‌ಝಾಬ್: 21] ಅವನು (ಅಲ್ಲಾಹು) ಹೇಳುತ್ತಾನೆ:

﴿وَٱلسَّٰبِقُونَ ٱلۡأَوَّلُونَ مِنَ ٱلۡمُهَٰجِرِينَ وَٱلۡأَنصَارِ وَٱلَّذِينَ ٱتَّبَعُوهُم بِإِحۡسَٰنٖ رَّضِيَ ٱللَّهُ عَنۡهُمۡ وَرَضُواْ عَنۡهُ وَأَعَدَّ لَهُمۡ جَنَّٰتٖ تَجۡرِي تَحۡتَهَا ٱلۡأَنۡهَٰرُ خَٰلِدِينَ فِيهَآ أَبَدٗاۚ ذَٰلِكَ ٱلۡفَوۡزُ ٱلۡعَظِيمُ100﴾

ಮುಹಾಜಿರ್ ಮತ್ತು ಅನ್ಸಾರ್‌ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ. [ಅತ್ತೌಬಾ: 100] ಅವನು (ಅಲ್ಲಾಹು) ಹೇಳುತ್ತಾನೆ:

﴿...ٱلۡيَوۡمَ أَكۡمَلۡتُ لَكُمۡ دِينَكُمۡ وَأَتۡمَمۡتُ عَلَيۡكُمۡ نِعۡمَتِي وَرَضِيتُ لَكُمُ ٱلۡإِسۡلَٰمَ دِينٗا...﴾

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. [ಅಲ್-ಮಾಇದಾ: 3] ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ. ಪ್ರವಾದಿ (ಸ) ರವರು ಹೀಗೆ ಹೇಳಿದರೆಂದು ದೃಢಪಟ್ಟಿದೆ:

«مَنْ أَحْدَثَ فِي أَمْرِنَا هَذَا مَا لَيْسَ مِنهُ فَهُوَ رَدٌّ».

"ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸುತ್ತಾರೋ, ಅದು ತಿರಸ್ಕೃತವಾಗಿದೆ." ಅಂದರೆ, ಅದನ್ನು ತಿರಸ್ಕರಿಸಿ ಅವನಿಗೇ ಹಿಂತಿರುಗಿಸಲಾಗುತ್ತದೆ. ಮತ್ತೊಂದು ಹದೀಸ್‌ನಲ್ಲಿ ಅವರು ಹೇಳಿದರು:

«عَلَيكُم بِسُنَّتِي وَسُنَّةِ الخُلَفَاءِ الرَّاشِدِينَ المَهْدِيَّينَ مِنْ بَعدِي، تَمَسَّكُوا بِهَا، وَعَضُّوا عَلَيهَا بِالنَّوَاجِذِ، وَإِيَّاكُمْ وَمُحْدَثَاتِ الأُمُورِ، فَإِنَّ كُلَّ مُحْدَثَةٍ بِدْعَةٌ وَكُلَّ بِدْعَةٍ ضَلَالةٌ».

ನನ್ನ ಸುನ್ನತ್ (ಚರ್ಯೆ) ಮತ್ತು ನನ್ನ ನಂತರ ಬರುವ ಸನ್ಮಾರ್ಗಿಗಳಾದ, ಮಾರ್ಗದರ್ಶನ ಪಡೆದ ಖಲೀಫರುಗಳ ಸುನ್ನತ್ ಅನ್ನು ಅನುಸರಿಸಿರಿ. ಅದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಅದನ್ನು ನಿಮ್ಮ ದವಡೆ ಹಲ್ಲುಗಳಿಂದ ಕಚ್ಚಿ ಹಿಡಿಯಿರಿ. ಹೊಸದಾಗಿ ಸೃಷ್ಟಿಸಲಾದ ವಿಷಯಗಳಿಂದ ದೂರವಿರಿ. ಏಕೆಂದರೆ ಪ್ರತಿಯೊಂದು ಹೊಸ ಆವಿಷ್ಕಾರವು ಬಿದ್‌ಅತ್ ಆಗಿದೆ ಮತ್ತು ಪ್ರತಿಯೊಂದು ಬಿದ್‌ಅತ್ ದುರ್ಮಾರ್ಗವಾಗಿದೆ." ಈ ಎರಡು ಹದೀಸ್‌ಗಳಲ್ಲಿ ಬಿದ್‌ಅತ್‌ಗಳನ್ನು ಸೃಷ್ಟಿಸುವುದರ ಮತ್ತು ಅದರಂತೆ ಕಾರ್ಯವೆಸಗುವುದರ ವಿರುದ್ಧ ತೀವ್ರ ಎಚ್ಚರಿಕೆ ನೀಡಲಾಗಿದೆ.

ಇಂತಹ ಜನ್ಮದಿನಾಚರಣೆಗಳನ್ನು ಸೃಷ್ಟಿಸುವುದರಿಂದ, ಅಲ್ಲಾಹು ಈ ಉಮ್ಮತ್‌ಗೆ (ಸಮುದಾಯಕ್ಕೆ) ಧರ್ಮವನ್ನು ಪೂರ್ಣಗೊಳಿಸಿಲ್ಲ ಮತ್ತು ಈ ಸಮುದಾಯದವರು ಏನೆಲ್ಲಾ ಮಾಡಬೇಕೆಂಬುದನ್ನು ಪ್ರವಾದಿ (ಸ) ರವರು ಸರಿಯಾಗಿ ತಿಳಿಸಿಕೊಟ್ಟಿಲ್ಲ. ಈ ಕಾರಣದಿಂದಲೇ ನಂತರ ಬಂದ ಇವರು ಅಲ್ಲಾಹು ಅನುಮತಿಸದ ವಿಷಯಗಳನ್ನು ಅವನ ಧರ್ಮಶಾಸ್ತ್ರದಲ್ಲಿ ಹೊಸದಾಗಿ ಸೇರಿಸಿದ್ದಾರೆ ಎಂದು ಅರ್ಥವಾಗುತ್ತದೆ. ಇದು ಅವರನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತದೆ ಎಂದು ಅವರು ವಾದಿಸುತ್ತಾರೆ. ಇದರಲ್ಲಿ ನಿಸ್ಸಂದೇಹವಾಗಿ ದೊಡ್ಡ ಅಪಾಯವಿದೆ ಮತ್ತು ಇದು ಅಲ್ಲಾಹು ಮತ್ತು ಅವನ ಸಂದೇಶವಾಹಕರ (ಸ) ಬಗ್ಗೆ ಆಕ್ಷೇಪವೆತ್ತುವುದಾಗಿದೆ. ಅಲ್ಲಾಹು ತನ್ನ ದಾಸರಿಗಾಗಿ ಧರ್ಮವನ್ನು ಪೂರ್ಣಗೊಳಿಸಿದ್ದಾನೆ ಮತ್ತು ಅವರ ಮೇಲೆ ಅನುಗ್ರಹವನ್ನು ಪೂರ್ಣಗೊಳಿಸಿದ್ದಾನೆ. ಪ್ರವಾದಿ (ಸ) ರವರು ಸ್ಪಷ್ಟವಾದ ಸಂದೇಶವನ್ನು ತಲುಪಿಸಿದ್ದಾರೆ. ಸ್ವರ್ಗಕ್ಕೆ ಕೊಂಡೊಯ್ಯುವ ಮತ್ತು ನರಕದಿಂದ ದೂರವಿರಿಸುವ ಯಾವುದೇ ಮಾರ್ಗವನ್ನು ಅವರು ಸಮುದಾಯಕ್ಕೆ ವಿವರಿಸದೆ ಬಿಟ್ಟಿಲ್ಲ. ಅಬ್ದುಲ್ಲಾ ಬಿನ್ ಅಮ್ರ್ (ರ) ರಿಂದ ವರದಿಯಾದ ಸಹೀಹ್ ಹದೀಸ್‌ನಲ್ಲಿ ಪ್ರವಾದಿ (ಸ) ರವರು ಹೇಳುತ್ತಾರೆ:

«مَا بَعَثَ اللهُ مِن نَبِيٍ إِلَّا كَانَ حَقًّا عَلَيهِ أَن يَدُلَّ أُمَّتَهُ عَلَى خَيرِ مَا يَعْلَمُهُ لَهُم، وَيُنْذِرَهُمْ شَرَّ مَا يَعْلَمُهُ لَهُمْ».

"ತನ್ನ ಉಮ್ಮತ್‌ಗೆ (ಸಮುದಾಯಕ್ಕೆ) ತಾನು ತಿಳಿದಿರುವ ಒಳಿತನ್ನು ತಿಳಿಸುವುದನ್ನು ಮತ್ತು ತಾನು ತಿಳಿದಿರುವ ಕೆಡುಕಿನ ಬಗ್ಗೆ ಅವರನ್ನು ಎಚ್ಚರಿಸುವುದನ್ನು ಒಂದು ಕರ್ತವ್ಯವಾಗಿ ಹೊರಿಸದೆ ಅಲ್ಲಾಹು ಯಾವುದೇ ಪ್ರವಾದಿಯನ್ನೂ ಕಳುಹಿಸಿಲ್ಲ." ಇದನ್ನು ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ವರದಿ ಮಾಡಿದ್ದಾರೆ.

ನಮ್ಮ ಪ್ರವಾದಿ (ಸ) ರವರು ಪ್ರವಾದಿಗಳಲ್ಲೇ ಸರ್ವ ಶ್ರೇಷ್ಠರು, ಅಂತಿಮರು, ಮತ್ತು ಸಂದೇಶವನ್ನು ತಲುಪಿಸುವುದರಲ್ಲಿ ಹಾಗೂ ಉಪದೇಶ ನೀಡುವುದರಲ್ಲಿ ಪರಿಪೂರ್ಣರು ಎಂಬುದು ತಿಳಿದಿರುವ ವಿಷಯವಾಗಿದೆ. ಒಂದು ವೇಳೆ ಜನ್ಮದಿನಾಚರಣೆಗಳು ಅಲ್ಲಾಹು ಮೆಚ್ಚುವ ಧರ್ಮದ ಭಾಗವಾಗಿದ್ದರೆ, ಪ್ರವಾದಿ (ಸ) ರವರು ಅದನ್ನು ಉಮ್ಮತ್‌ಗೆ ವಿವರಿಸಿಕೊಡುತ್ತಿದ್ದರು, ಅಥವಾ ತಮ್ಮ ಜೀವನದಲ್ಲಿ ಅದನ್ನು ಮಾಡಿ ತೋರಿಸುತ್ತಿದ್ದರು, ಅಥವಾ ಅವರ ಸಹಾಬಿಗಳು (ರ) ಅದನ್ನು ಮಾಡುತ್ತಿದ್ದರು. ಇವುಗಳಲ್ಲಿ ಯಾವುದೂ ಸಂಭವಿಸದ ಕಾರಣ, ಇದು ಇಸ್ಲಾಂನ ಭಾಗವಲ್ಲ, ಬದಲಿಗೆ ಪ್ರವಾದಿ (ಸ) ರವರು ತಮ್ಮ ಉಮ್ಮತ್‌ಗೆ ಎಚ್ಚರಿಕೆ ನೀಡಿದ ಹೊಸ ಆವಿಷ್ಕಾರಗಳಲ್ಲಿ ಒಂದಾಗಿದೆ ಎಂಬುದು ತಿಳಿದುಬರುತ್ತದೆ. ಇದರ ಬಗ್ಗೆ ಹದೀಸ್‌ಗಳಲ್ಲಿ ಬಂದಿರುವುದನ್ನು ಈಗಾಗಲೇ ಉಲ್ಲೇಖಿಸಲಾಗಿದೆ. ಈ ವಿಷಯದಲ್ಲಿ ಕುರ್‌ಆನ್ ವಚನಗಳು ಮತ್ತು ಹದೀಸ್‌ಗಳು ಹೇರಳವಾಗಿವೆ.

ಹಲವಾರು ವಿದ್ವಾಂಸರು ಮೇಲೆ ಉಲ್ಲೇಖಿಸಲಾದ ಮತ್ತು ಇತರ ಪುರಾವೆಗಳ ಆಧಾರದಲ್ಲಿ ಜನ್ಮದಿನಾಚರಣೆಗಳನ್ನು ನಿರಾಕರಿಸಿದ್ದಾರೆ ಮತ್ತು ಅವುಗಳ ಬಗ್ಗೆ ಎಚ್ಚರಿಸಿದ್ದಾರೆ. ಆದರೆ, ನಂತರದ ಕೆಲವು ವಿದ್ವಾಂಸರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿ, ಪ್ರವಾದಿ (ಸ) ರವರ ಬಗ್ಗೆ ಅತಿರೇಕ ತೋರುವುದು, ಮಹಿಳೆಯರು ಮತ್ತು ಪುರುಷರು ಬೆರೆಯುವುದು, ಮನರಂಜನೆಯ ಸಾಧನಗಳನ್ನು ಬಳಸುವುದು ಮುಂತಾದ ಪರಿಶುದ್ಧ ಶರೀಅತ್ ನಿಷೇಧಿಸಿದ ವಿಷಯಗಳು ಒಳಗೊಂಡಿರದಿದ್ದರೆ ಅವುಗಳನ್ನು ಅನುಮತಿಸಿದ್ದಾರೆ. ಅವರು ಅದನ್ನು "ಬಿದಅತ್ ಹಸನ" (ಉತ್ತಮ ನೂತನಾಚಾರ) ಎಂದು ಭಾವಿಸಿದ್ದಾರೆ.

ಆದರೆ ಶರೀಅತ್‌ನ ನಿಯಮವೇನೆಂದರೆ: ಜನರು ವಿವಾದದಲ್ಲಿರುವ ವಿಷಯಗಳನ್ನು ಅಲ್ಲಾಹನ ಗ್ರಂಥ ಮತ್ತು ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರ ಸುನ್ನತ್‌ಗೆ ಹಿಂತಿರುಗಿಸುವುದು. ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلَّذِينَ ءَامَنُوٓاْ أَطِيعُواْ ٱللَّهَ وَأَطِيعُواْ ٱلرَّسُولَ وَأُوْلِي ٱلۡأَمۡرِ مِنكُمۡۖ فَإِن تَنَٰزَعۡتُمۡ فِي شَيۡءٖ فَرُدُّوهُ إِلَى ٱللَّهِ وَٱلرَّسُولِ إِن كُنتُمۡ تُؤۡمِنُونَ بِٱللَّهِ وَٱلۡيَوۡمِ ٱلۡأٓخِرِۚ ذَٰلِكَ خَيۡرٞ وَأَحۡسَنُ تَأۡوِيلًا59﴾

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮ್ಮ ಮೇಲೆ ಅಧಿಕಾರವಿರುವವರನ್ನೂ ಅನುಸರಿಸಿರಿ. ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಮರಳಿಸಿರಿ—ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ. [ಅನ್ನಿಸಾ: 59] ಅವನು (ಅಲ್ಲಾಹು) ಹೇಳುತ್ತಾನೆ:

﴿وَمَا ٱخۡتَلَفۡتُمۡ فِيهِ مِن شَيۡءٖ فَحُكۡمُهُۥٓ إِلَى ٱللَّهِ ...﴾

ನೀವು ಯಾವುದೇ ವಿಷಯದಲ್ಲಿ ಭಿನ್ನಮತ ತಳೆದಿದ್ದರೂ ಆ ವಿಷಯದಲ್ಲಿ ತೀರ್ಪು ನೀಡುವ ಅಧಿಕಾರವಿರುವುದು ಅಲ್ಲಾಹನಿಗೆ ಮಾತ್ರ... [ಅಶ್ಶೂರಾ: 10]

ನಾವು ಈ ವಿಷಯವನ್ನು - ಅಂದರೆ ಜನ್ಮದಿನಾಚರಣೆಗಳನ್ನು - ಅಲ್ಲಾಹನ ಗ್ರಂಥಕ್ಕೆ ಹಿಂತಿರುಗಿಸಿದಾಗ,ಅದು ನಮಗೆ ಪ್ರವಾದಿ (ಸ) ರವರು ತಂದದ್ದನ್ನು ಅನುಸರಿಸಲು ಆದೇಶಿಸುತ್ತದೆ ಮತ್ತು ಅವರು ನಿಷೇಧಿಸಿದ್ದರಿಂದ (ದೂರವಿರುವಂತೆ) ನಮ್ಮನ್ನು ಎಚ್ಚರಿಸುತ್ತದೆ ಎಂದು ನಾವು ಕಾಣುತ್ತೇವೆ. ಅಲ್ಲಾಹು ಈ ಉಮ್ಮತ್‌ಗೆ (ಸಮುದಾಯಕ್ಕೆ) ಅವರ ಧರ್ಮವನ್ನು ಪೂರ್ಣಗೊಳಿಸಿದ್ದಾನೆ ಎಂದು ಅದು ನಮಗೆ ತಿಳಿಸುತ್ತದೆ. ಈ ಆಚರಣೆಯು ಪ್ರವಾದಿ (ಸ) ರವರು ತಂದದ್ದರ (ಧರ್ಮದ) ಭಾಗವಲ್ಲ. ಆದ್ದರಿಂದ ಇದು ಅಲ್ಲಾಹು ನಮಗೆ ಪೂರ್ಣಗೊಳಿಸಿದ ಮತ್ತು ಪ್ರವಾದಿ (ಸ) ರವರನ್ನು ಅನುಸರಿಸಲು ನಮಗೆ ಆದೇಶಿಸಿದ ಧರ್ಮದ ಭಾಗವಾಗುವುದಿಲ್ಲ.

ನಾವು ಇದನ್ನು - ಅಂದರೆ ಜನ್ಮದಿನಾಚರಣೆಗಳನ್ನು - ಪ್ರವಾದಿ (ಸ) ರವರ ಸುನ್ನತ್‌ಗೆ ಹಿಂತಿರುಗಿಸಿದಾಗ, ಅವರು ಅದನ್ನು ಮಾಡಿದ್ದು, ಅದರ ಬಗ್ಗೆ ಆದೇಶಿಸಿದ್ದು, ಅಥವಾ ಅವರ ಸಹಾಬಿಗಳು (ರ) ಅದನ್ನು ಮಾಡಿದ್ದು ಮುಂತಾದ ಯಾವುದನ್ನೂ ನಾವು ಕಾಣುವುದಿಲ್ಲ. ಇದರಿಂದ ಇದು ಧರ್ಮದ ಭಾಗವಲ್ಲ, ಬದಲಿಗೆ, ಇದು ಹೊಸದಾಗಿ ಸೃಷ್ಟಿಸಲಾದ ಬಿದ್‌ಅತ್‌ಗಳಲ್ಲಿ ಒಂದಾಗಿದೆ ಮತ್ತು ಯಹೂದಿಗಳು ಹಾಗೂ ಕ್ರಿಶ್ಚಿಯನ್ನರು ಆಚರಿಸುವ ಹಬ್ಬಗಳಲ್ಲಿ ಅವರನ್ನು ಅನುಕರಿಸುವುದಾಗಿದೆ ಎಂದು ನಮಗೆ ತಿಳಿದುಬರುತ್ತದೆ.

ಇದರಿಂದ, ಸತ್ಯವನ್ನು ಅರಿಯಲು ಸ್ವಲ್ಪವಾದರೂ ಒಳನೋಟ ಮತ್ತು ಹಂಬಲವಿರುವ ಹಾಗೂ ಅದನ್ನು ಹುಡುಕುವುದರಲ್ಲಿ ನಿಷ್ಪಕ್ಷರಾಗಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗುವುದೇನೆಂದರೆ: ಜನ್ಮದಿನಾಚರಣೆಗಳು ಇಸ್ಲಾಂ ಧರ್ಮದ ಭಾಗವಲ್ಲ, ಬದಲಿಗೆ ಅವು ಹೊಸದಾಗಿ ಸೃಷ್ಟಿಸಲಾದ, ಅವುಗಳನ್ನು ತ್ಯಜಿಸಲು ಮತ್ತು ಅವುಗಳ ಬಗ್ಗೆ ಎಚ್ಚರವಾಗಿರಲು ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಸ) ಆದೇಶಿಸಿದ ಬಿದ್‌ಅತ್‌ಗಳಾಗಿವೆ. ವಿವಿಧ ದೇಶಗಳಲ್ಲಿ ಇದನ್ನು ಆಚರಿಸುವವರ ಸಂಖ್ಯೆ ಹೆಚ್ಚಿರುವುದನ್ನು ಕಂಡು ಬುದ್ಧಿವಂತನು ಮೋಸಹೋಗಬಾರದು. ಏಕೆಂದರೆ ಸತ್ಯವು ಅದನ್ನು ಮಾಡುವವರ ಸಂಖ್ಯೆಯಿಂದ ಗುರುತಿಸಲ್ಪಡುವುದಿಲ್ಲ. ಬದಲಿಗೆ ಶರೀಅತ್‌ನ ಪುರಾವೆಗಳಿಂದ ಗುರುತಿಸಲ್ಪಡುತ್ತದೆ. ಯಹೂದಿಗಳು ಮತ್ತು ಕ್ರಿಶ್ಚಿಯನ್ನರ ಬಗ್ಗೆ ಅಲ್ಲಾಹು ಹೇಳುತ್ತಾನೆ:

﴿وَقَالُواْ لَن يَدۡخُلَ ٱلۡجَنَّةَ إِلَّا مَن كَانَ هُودًا أَوۡ نَصَٰرَىٰۗ تِلۡكَ أَمَانِيُّهُمۡۗ قُلۡ هَاتُواْ بُرۡهَٰنَكُمۡ إِن كُنتُمۡ صَٰدِقِينَ111﴾

ಅವರು ಹೇಳುತ್ತಾರೆ: “ಯಹೂದಿ ಅಥವಾ ಕ್ರೈಸ್ತರ ಹೊರತು ಇನ್ನಾರೂ ಸ್ವರ್ಗಕ್ಕೆ ಹೋಗುವುದಿಲ್ಲ.” ಅವೆಲ್ಲವೂ ಅವರ ಗುಮಾನಿಗಳಾಗಿವೆ. ಹೇಳಿರಿ: “ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ.” [ಅಲ್-ಬಕರ: 111] ಅವನು (ಅಲ್ಲಾಹು) ಹೇಳುತ್ತಾನೆ:

﴿وَإِنْ تُطِعْ أَكْثَرَ مَنْ فِي الْأَرْضِ يُضِلُّوكَ عَنْ سَبِيلِ اللَّهِ...﴾

"ಮತ್ತು ಭೂಮಿಯಲ್ಲಿರುವ ಹೆಚ್ಚಿನ ಜನರನ್ನು ನೀವು ಅನುಸರಿಸಿದರೆ, ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುತ್ತಾರೆ."

[ಅಲ್-ಅನ್‌ಆಮ್: 116]

ಇದಲ್ಲದೆ, ಈ ಜನ್ಮದಿನಾಚರಣೆಗಳು ಬಿದ್‌ಅತ್ ಆಗಿರುವುದರ ಜೊತೆಗೆ, ಅವುಗಳಲ್ಲಿ ಹೆಚ್ಚಿನವು ಇತರ ನಿಷಿದ್ಧ ವಿಷಯಗಳನ್ನು ಕೂಡ ಒಳಗೊಂಡಿರುತ್ತವೆ. ಉದಾಹರಣೆಗೆ ಮಹಿಳೆಯರು ಮತ್ತು ಪುರುಷರು ಬೆರೆಯುವುದು, ಹಾಡುಗಳು ಮತ್ತು ಸಂಗೀತ ವಾದ್ಯಗಳ ಬಳಕೆ, ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವನೆ, ಹಾಗೂ ಇತರ ಕೆಡುಕುಗಳು. ಕೆಲವೊಮ್ಮೆ ಅದಕ್ಕಿಂತಲೂ ಗಂಭೀರವಾದ, ಅಂದರೆ ದೊಡ್ಡ ಶಿರ್ಕ್ ಕೂಡ ಸಂಭವಿಸಬಹುದು. ಇದು ಪ್ರವಾದಿ (ಸ) ರವರ ಬಗ್ಗೆ ಅಥವಾ ಔಲಿಯಾಗಳು (ಮಹಾಪುರುಷರು) ಎಂದು ಕರೆಯಲ್ಪಡುವವರ ಬಗ್ಗೆ ಅತಿರೇಕವಾಗಿ ವರ್ತಿಸುವುದು, ಅವರನ್ನು ಕರೆದು ಪ್ರಾರ್ಥಿಸುವುದು, ಅವರಿಂದ ಸಹಾಯ ಯಾಚಿಸುವುದು, ಅವರು ಅದೃಶ್ಯವನ್ನು ತಿಳಿದಿದ್ದಾರೆಂದು ನಂಬುವುದು, ಮತ್ತು ಪ್ರವಾದಿ (ಸ) ರವರ ಜನ್ಮದಿನ ಹಾಗೂ ಔಲಿಯಾಗಳೆಂದು ಕರೆಯಲ್ಪಡುವವರ ಜನ್ಮದಿನಗಳನ್ನು ಆಚರಿಸುವಾಗ ಅನೇಕ ಜನರು ಮಾಡುವ ಇತರ ಕುಫ್ರ್ (ಸತ್ಯನಿಷೇಧ) ನ ಕಾರ್ಯಗಳು. ಪ್ರವಾದಿ (ಸ) ರವರು ಹೀಗೆ ಹೇಳಿದರೆಂದು ದೃಢಪಟ್ಟಿದೆ:

«إِيَّاكُم وَالغُلُوُّ فِي الدِّينِ، فَإِنَّمَا أَهْلَكَ مَن كَانَ قَبْلَكُم الغُلُوَّ فِي الدِّينِ».

"ಧರ್ಮದಲ್ಲಿ ಅತಿರೇಕವೆಸಗುವುದರಿಂದ ದೂರವಿರಿ, ಏಕೆಂದರೆ ನಿಮ್ಮ ಹಿಂದಿನವರನ್ನು ನಾಶಮಾಡಿದ್ದು ಧರ್ಮದಲ್ಲಿನ ಅತಿರೇಕವಾಗಿದೆ." ಅವರು (ಸ) ಹೇಳಿದರು:

«لَا تُطْرُونِي كَمَا أَطْرَتِ النَّصَارَى ابْنَ مَرْيَمَ، إِنَّمَا أَنَا عَبْدٌ، فَقُولُوا: عَبْدُ اللهِ وَرَسُولُه».

"ಕ್ರೈಸ್ತರು ಮರ್ಯಮ್‌ರ ಮಗನನ್ನು (ಈಸಾ) ಅತಿಯಾಗಿ ಹೊಗಳಿದಂತೆ ನನ್ನನ್ನು ಅತಿಯಾಗಿ ಹೊಗಳಬೇಡಿ. ನಾನು ಕೇವಲ ಒಬ್ಬ ದಾಸ ಮಾತ್ರವಾಗಿದ್ದೇನೆ. ಆದ್ದರಿಂದ, 'ಅಲ್ಲಾಹನ ದಾಸ ಮತ್ತು ಅವನ ಸಂದೇಶವಾಹಕ' ಎಂದು ಹೇಳಿರಿ." ಇದನ್ನು ಬುಖಾರಿ ತಮ್ಮ ಸಹೀಹ್‌ನಲ್ಲಿ ಉಮರ್ (ರ) ರವರ ಹದೀಸ್‌ನಿಂದ ವರದಿ ಮಾಡಿದ್ದಾರೆ.

ಆಶ್ಚರ್ಯಕರ ಮತ್ತು ವಿಚಿತ್ರವಾದ ಸಂಗತಿಗಳಲ್ಲಿ ಒಂದು ಏನೆಂದರೆ: ಅನೇಕ ಜನರು ಈ ನವೀನ ಆಚರಣೆಗಳಲ್ಲಿ ಭಾಗವಹಿಸಲು ಉತ್ಸಾಹ ಮತ್ತು ಶ್ರದ್ಧೆ ತೋರುತ್ತಾರೆ ಮತ್ತು ಅವುಗಳನ್ನು ಸಮರ್ಥಿಸುತ್ತಾರೆ. ಆದರೆ ಅಲ್ಲಾಹು ಅವರ ಮೇಲೆ ಕಡ್ಡಾಯಗೊಳಿಸಿದ ಶುಕ್ರವಾರದ ಜುಮುಆ ಮತ್ತು ಸಾಮೂಹಿಕ ನಮಾಝ್‌ಗಳಿಂದ ಹಿಂದೆ ಉಳಿಯುತ್ತಾರೆ. ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಾವು ದೊಡ್ಡ ನಿಷಿದ್ಧ ಕಾರ್ಯವನ್ನು ಮಾಡಿದ್ದೇವೆಂದೂ ಅವರು ಭಾವಿಸುವುದಿಲ್ಲ. ನಿಸ್ಸಂದೇಹವಾಗಿಯೂ ಇದು ದುರ್ಬಲ ಈಮಾನ್, ಕಡಿಮೆ ಒಳನೋಟ, ಮತ್ತು ವಿವಿಧ ಪಾಪಗಳು ಮತ್ತು ಅವಿಧೇಯತೆಗಳಿಂದಾಗಿ ಹೃದಯಗಳ ಮೇಲೆ ಸಂಗ್ರಹವಾಗಿರುವ ಕಪ್ಪುಕಲೆಗಳ ಹೆಚ್ಚಳದಿಂದಾಗಿದೆ. ನಮಗೂ ಮತ್ತು ಇತರ ಎಲ್ಲಾ ಮುಸ್ಲಿಮರಿಗೂ ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ.

ಇನ್ನೊಂದು ಏನೆಂದರೆ: ಪ್ರವಾದಿ (ಸ) ರವರು ಜನ್ಮದಿನಾಚರಣೆಗೆ ಹಾಜರಾಗುತ್ತಾರೆಂದು ಕೆಲವರು ಭಾವಿಸುತ್ತಾರೆ. ಆದ್ದರಿಂದ ಅವರಿಗೆ ಗೌರವ ಸೂಚಿಸಲು ಮತ್ತು ಸ್ವಾಗತಿಸಲು ಅವರು ಎದ್ದು ನಿಲ್ಲುತ್ತಾರೆ. ಇದು ಅತ್ಯಂತ ದೊಡ್ಡ ಸುಳ್ಳು ಮತ್ತು ಅತಿ ಕೆಟ್ಟ ಅಜ್ಞಾನವಾಗಿದೆ. ಏಕೆಂದರೆ ಪ್ರವಾದಿ (ಸ) ರವರು ಕಿಯಾಮತ್ ದಿನದ ಮೊದಲು ತಮ್ಮ ಸಮಾಧಿಯಿಂದ ಹೊರಬರುವುದಿಲ್ಲ, ಜನರಲ್ಲಿ ಯಾರನ್ನೂ ಸಂಪರ್ಕಿಸುವುದಿಲ್ಲ, ಮತ್ತು ಅವರ ಸಭೆಗಳಲ್ಲಿ ಹಾಜರಾಗುವುದಿಲ್ಲ. ಬದಲಿಗೆ, ಅವರು ಕಿಯಾಮತ್ ದಿನದವರೆಗೆ ತಮ್ಮ ಸಮಾಧಿಯಲ್ಲಿರುತ್ತಾರೆ, ಮತ್ತು ಅವರ ಆತ್ಮವು ಅಲ್ಲಾಹನ ಬಳಿ, ಗೌರವದ ಮನೆಯಲ್ಲಿ, ಅತ್ಯುನ್ನತ ಸ್ಥಾನವಾದ 'ಇಲ್ಲಿಯೀನ್'ನಲ್ಲಿದೆ. ಅಲ್ಲಾಹು ಹೇಳುತ್ತಾನೆ:

﴿ثُمَّ إِنَّكُمْ بَعْدَ ذَلِكَ لَمَيِّتُونَ15 ثُمَّ إِنَّكُمْ يَوْمَ الْقِيَامَةِ تُبْعَثُونَ16﴾

"ನಂತರ, ಇದರ ಬಳಿಕ, ನೀವು ಖಂಡಿತವಾಗಿಯೂ ನಿಧನರಾಗುವಿರಿ.

ನಂತರ, ಕಿಯಾಮತ್ ದಿನದಂದು, ನಿಮ್ಮನ್ನು ಪುನರುತ್ಥಾನಗೊಳಿಸಲಾಗುವುದು." [ಅಲ್-ಮುಅ್‌ಮಿನೂನ್: 15, 16]

ಪ್ರವಾದಿ (ಸ) ಹೇಳಿದರು:

«أَنَا أَوَّلُ مَنْ يَنْشَقُّ عَنْهُ القَبْرُ يَومَ القِيَامَةِ، وَأَنَا أَوَّلُ شَافِعٍ، وَأَوَّلُ مُشَفَّعٍ».

"ಕಿಯಾಮತ್ ದಿನದಂದು ಸಮಾಧಿಯಿಂದ ಮೊತ್ತಮೊದಲು ಹೊರಬರುವವನು ನಾನೇ, ಮೊತ್ತಮೊದಲು ಶಿಫಾರಸು ಮಾಡುವವನು ನಾನೇ, ಮತ್ತು ಮೊತ್ತಮೊದಲು ಶಿಫಾರಸು ಸ್ವೀಕರಿಸಲ್ಪಡುವವನೂ ನಾನೇ." ಅವರ ಮೇಲೆ ಅವರ ರಬ್ಬಿನಿಂದ ಅತ್ಯುತ್ತಮ ಸಲಾತ್ ಮತ್ತು ಸಲಾಂ ಇರಲಿ.

ಈ ಎರಡು ಪವಿತ್ರ ವಚನಗಳು, ಮತ್ತು ಈ ಶ್ರೇಷ್ಠ ಹದೀಸ್, ಹಾಗೂ ಇವುಗಳ ಅರ್ಥದಲ್ಲಿ ಬಂದಿರುವ ಇತರ ವಚನಗಳು ಮತ್ತು ಹದೀಸ್‌ಗಳು—ಇವೆಲ್ಲವೂ ಪ್ರವಾದಿ (ಸ) ರವರು ಮತ್ತು ಇತರ ಮೃತರು ಕಿಯಾಮತ್ ದಿನದಂದು ಮಾತ್ರ ತಮ್ಮ ಸಮಾಧಿಗಳಿಂದ ಹೊರಬರುತ್ತಾರೆ ಎಂದು ಸೂಚಿಸುತ್ತವೆ. ಇದು ಮುಸ್ಲಿಂ ವಿದ್ವಾಂಸರ ನಡುವೆ ಒಮ್ಮತವಿರುವ ವಿಷಯವಾಗಿದೆ. ಇದರಲ್ಲಿ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದ್ದರಿಂದ, ಪ್ರತಿಯೊಬ್ಬ ಮುಸ್ಲಿಮನು ಈ ವಿಷಯಗಳ ಬಗ್ಗೆ ಗಮನಹರಿಸಬೇಕು ಮತ್ತು ಅಜ್ಞಾನಿಗಳು ಹಾಗೂ ಅವರಂತಿರುವವರು ಸೃಷ್ಟಿಸಿರುವ ಬಿದ್‌ಅತ್‌ಗಳು ಮತ್ತು ಮೂಢನಂಬಿಕೆಗಳ ಬಗ್ಗೆ ಎಚ್ಚರವಾಗಿರಬೇಕು. ಇವುಗಳಿಗೆ ಅಲ್ಲಾಹು ಯಾವುದೇ ಪುರಾವೆಯನ್ನು ಇಳಿಸಿಲ್ಲ. ಅಲ್ಲಾಹನೇ ಸಹಾಯ ಮಾಡುವವನು, ಮತ್ತು ಅವನ ಮೇಲೆಯೇ ಭರವಸೆ ಇಡಬೇಕಾಗಿದೆ. ಅವನ ಹೊರತು ಯಾವುದೇ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.

ಇನ್ನು, ಪ್ರವಾದಿ (ಸ) ರವರ ಮೇಲೆ ಸಲಾತ್ ಮತ್ತು ಸಲಾಂ ಹೇಳುವುದು ಅತ್ಯುತ್ತಮ ಸತ್ಕರ್ಮಗಳಲ್ಲಿ ಮತ್ತು ಪುಣ್ಯ ಕರ್ಮಗಳಲ್ಲಿ ಒಂದಾಗಿದೆ. ಅಲ್ಲಾಹು ಹೇಳುತ್ತಾನೆ:

﴿إِنَّ ٱللَّهَ وَمَلَٰٓئِكَتَهُۥ يُصَلُّونَ عَلَى ٱلنَّبِيِّۚ يَٰٓأَيُّهَا ٱلَّذِينَ ءَامَنُواْ صَلُّواْ عَلَيۡهِ وَسَلِّمُواْ تَسۡلِيمًا56﴾

ನಿಶ್ಚಯವಾಗಿಯೂ ಅಲ್ಲಾಹು ಪ್ರವಾದಿಯ ಮೇಲೆ ಕೃಪೆ ತೋರುತ್ತಾನೆ ಮತ್ತು ದೇವದೂತರುಗಳು ಅದಕ್ಕಾಗಿ ಪ್ರಾರ್ಥಿಸುತ್ತಾರೆ. ಓ ಸತ್ಯವಿಶ್ವಾಸಿಗಳೇ! ನೀವು ಕೂಡ ಅವರ ಮೇಲೆ ಕೃಪೆ ಮತ್ತು ಶಾಂತಿ ವರ್ಷಿಸಲು ಪ್ರಾರ್ಥಿಸಿರಿ. [ಅಲ್-ಅಹ್‌ಝಾಬ್: 56] ಪ್ರವಾದಿ (ಸ) ಹೇಳಿದರು:

«مَنْ صَلَّى عَلَيَّ وَاحِدَةً؛ صَلَّى اللهُ عَلَيهِ بِهَا عَشْرًا».

"ಯಾರು ನನ್ನ ಮೇಲೆ ಒಂದು ಬಾರಿ ಸಲಾತ್ ಹೇಳುತ್ತಾರೋ; ಅಲ್ಲಾಹು ಅವನ ಮೇಲೆ ಹತ್ತು ಬಾರಿ ಸಲಾತ್ ಹೇಳುತ್ತಾನೆ." ಇದು (ಸಲಾತ್ ಹೇಳುವುದು) ಎಲ್ಲ ಸಮಯಗಳಲ್ಲೂ ನಿಯಮಗೊಳಿಸಲಾಗಿದೆ. ಪ್ರತಿ ನಮಾಝ್‌ನ ಕೊನೆಯಲ್ಲಿ (ತಶಹುದ್‌ನಲ್ಲಿ) ಇದನ್ನು ಪಠಿಸುವುದಕ್ಕೆ ಹೆಚ್ಚು ಒತ್ತುಕೊಡಲಾಗಿದೆ. ಮಾತ್ರವಲ್ಲ, ಕೆಲವು ವಿದ್ವಾಂಸರ ಪ್ರಕಾರ ಪ್ರತಿ ನಮಾಝ್‌ನ ಕೊನೆಯ ತಶಹುದ್‌ನಲ್ಲಿ ಇದನ್ನು ಪಠಿಸುವುದು ಕಡ್ಡಾಯವಾಗಿದೆ. ಅನೇಕ ಸಂದರ್ಭಗಳಲ್ಲಿ ಇದನ್ನು ಪಠಿಸುವುದು ಸುನ್ನತ್ ಆಗಿದೆಯೆಂದು ಒತ್ತಿಹೇಳಲಾಗಿದೆ. ಉದಾಹರಣೆಗೆ, ಅಝಾನ್‌ನ ನಂತರ, ಪ್ರವಾದಿ (ಸ) ರವರ ಹೆಸರಿನ ಪ್ರಸ್ತಾಪವಾದಾಗ, ಮತ್ತು ಶುಕ್ರವಾರದ ದಿನ-ರಾತ್ರಿ. ಅನೇಕ ಹದೀಸ್‌ಗಳು ಇದನ್ನು ಸೂಚಿಸುತ್ತವೆ.

ನಮಗೂ ಮತ್ತು ಎಲ್ಲಾ ಮುಸ್ಲಿಮರಿಗೂ ಧರ್ಮದಲ್ಲಿ ತಿಳುವಳಿಕೆ ನೀಡಲು, ಅದರಲ್ಲಿ ಸ್ಥಿರತೆಯನ್ನು ನೀಡಲು, ಮತ್ತು ಎಲ್ಲರಿಗೂ ಸುನ್ನತ್ ಅನ್ನು ಅನುಸರಿಸುವ ಹಾಗೂ ಬಿದ್‌ಅತ್‌ನಿಂದ ದೂರವಿರುವ ಅನುಗ್ರಹವನ್ನು ನೀಡಲು ನಾವು ಅಲ್ಲಾಹನಲ್ಲಿ ಬೇಡುತ್ತೇವೆ. ನಿಶ್ಚಯವಾಗಿಯೂ ಅವನು ಉದಾರನು ಮತ್ತು ಕರುಣಾಮಯಿಯಾಗಿದ್ದಾನೆ.

ನಮ್ಮ ಪ್ರವಾದಿ ಮುಹಮ್ಮದ್ (ಸ) ಅವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಚರರ ಮೇಲೆ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ.

 

 

***

 


بِسْمِ اللهِ الرَّحمَنِ الرَّحِيمِ

ಆರನೇ ಸಂದೇಶ:

ಇಸ್ರಾ ಮತ್ತು ಮಿಅರಾಜ್ ರಾತ್ರಿಯನ್ನು ಆಚರಿಸುವ ವಿಧಿ

ಸರ್ವ ಸ್ತುತಿಗಳು ಅಲ್ಲಾಹನಿಗೆ. ಅಲ್ಲಾಹನ ಸಂದೇಶವಾಹಕರ (ಸ) ಮೇಲೆ, ಅವರ ಕುಟುಂಬದ ಮೇಲೆ, ಮತ್ತು ಅವರ ಸಹಚರರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಇಸ್ರಾ (ನಿಶಾಯಾನ) ಮತ್ತು ಮಿಅರಾಜ್ (ಆಕಾಶಾರೋಹಣ) ಅಲ್ಲಾಹನ ಮಹಾನ್ ದೃಷ್ಟಾಂತಗಳಲ್ಲಿ ಸೇರಿವೆ ಮತ್ತು ಇವು ಪ್ರವಾದಿ ಮುಹಮ್ಮದ್ (ಸ) ರವರ ಸತ್ಯತೆ ಹಾಗೂ ಅಲ್ಲಾಹನ ಬಳಿ ಅವರಿಗಿರುವ ಉನ್ನತ ಸ್ಥಾನವನ್ನು ಸೂಚಿಸುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗೆಯೇ, ಇವು ಅಲ್ಲಾಹನ ಅಪಾರವಾದ ಸಾಮರ್ಥ್ಯಕ್ಕೆ ಮತ್ತು ಅವನು ತನ್ನೆಲ್ಲಾ ಸೃಷ್ಟಿಗಳಿಗಿಂತ ಮೇಲಿದ್ದಾನೆ ಎನ್ನುವುದಕ್ಕೆ ಪುರಾವೆಯಾಗಿದೆ. ಅಲ್ಲಾಹು ಹೇಳುತ್ತಾನೆ:

﴿سُبۡحَٰنَ ٱلَّذِيٓ أَسۡرَىٰ بِعَبۡدِهِۦ لَيۡلٗا مِّنَ ٱلۡمَسۡجِدِ ٱلۡحَرَامِ إِلَى ٱلۡمَسۡجِدِ ٱلۡأَقۡصَا ٱلَّذِي بَٰرَكۡنَا حَوۡلَهُۥ لِنُرِيَهُۥ مِنۡ ءَايَٰتِنَآۚ إِنَّهُۥ هُوَ ٱلسَّمِيعُ ٱلۡبَصِيرُ1﴾

ತನ್ನ ದಾಸನನ್ನು (ಪ್ರವಾದಿಯನ್ನು) ಒಂದೇ ರಾತ್ರಿಯಲ್ಲಿ ಮಸ್ಜಿದ್ ಹರಾಮ್‌ನಿಂದ (ಮಕ್ಕಾ) ಮಸ್ಜಿದ್ ಅಕ್ಸಾಗೆ (ಜೆರೂಸಲೇಂ) ನಿಶಾಯಾನ ಮಾಡಿಸಿದವನು ಪರಮ ಪರಿಶುದ್ಧನು. ಅದರ (ಮಸ್ಜಿದ್ ಅಕ್ಸಾದ) ಪರಿಸರವನ್ನು ನಾವು ಸಮೃದ್ಧಗೊಳಿಸಿದ್ದೇವೆ. ಇದು ಅವರಿಗೆ ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿಕೊಡುವುದಕ್ಕಾಗಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.

[ಅಲ್-ಇಸ್ರಾಅ್: 1]

ಅಲ್ಲಾಹನ ಸಂದೇಶವಾಹಕರಿಂದ (ಸ) ಮುತವಾತಿರ್ ಆಗಿ ವರದಿಯಾಗಿರುವಂತೆ, ಅವರನ್ನು ಆಕಾಶಗಳಿಗೆ ಆರೋಹಣ ಮಾಡಿಸಲಾಯಿತು, ಮತ್ತು ಏಳನೇ ಆಕಾಶವನ್ನು ದಾಟುವವರೆಗೆ ಅದರ ಬಾಗಿಲುಗಳನ್ನು ಅವರಿಗಾಗಿ ತೆರೆಯಲಾಯಿತು. ಅಲ್ಲಿ ಅವರ ರಬ್ಬ್ (ಅಲ್ಲಾಹು) ಅವನು ಬಯಸಿದ್ದನ್ನು ಅವರೊಂದಿಗೆ ಮಾತನಾಡಿದನು ಮತ್ತು ಅವರ ಮೇಲೆ ದೈನಂದಿನ ಐದು ವೇಳೆಯ ನಮಾಝ್‌ಗಳನ್ನು ಕಡ್ಡಾಯಗೊಳಿಸಿದನು. ಅಲ್ಲಾಹು ಮೊದಲು ಐವತ್ತು ನಮಾಝ್‌ಗಳನ್ನು ಕಡ್ಡಾಯಗೊಳಿಸಿದ್ದನು. ನಮ್ಮ ಪ್ರವಾದಿ ಮುಹಮ್ಮದ್ (ಸ) ರವರು ನಿರಂತರವಾಗಿ ಅಲ್ಲಾಹನ ಬಳಿ ಮರುಪರಿಶೀಲನೆ ಮಾಡಲು ಮತ್ತು ಕಡಿತಗೊಳಿಸಲು ವಿನಂತಿಸಿದಾಗ, ಕೊನೆಗೆ ಅದನ್ನು ಐದಕ್ಕೆ ಇಳಿಸಲಾಯಿತು. ಆದ್ದರಿಂದ ಕಡ್ಡಾಯದ ವಿಷಯದಲ್ಲಿ ಅವು ಐದು ಆಗಿದ್ದರೂ ಪ್ರತಿಫಲದಲ್ಲಿ ಐವತ್ತು ಆಗಿವೆ. ಏಕೆಂದರೆ ಒಂದು ಸತ್ಕರ್ಮಕ್ಕೆ ಹತ್ತು ಪಟ್ಟು ಪ್ರತಿಫಲವಿದೆ. ಅಲ್ಲಾಹನ ಎಲ್ಲಾ ಅನುಗ್ರಹಗಳಿಗಾಗಿ ಅವನಿಗೆ ಸ್ತುತಿ ಮತ್ತು ಕೃತಜ್ಞತೆಗಳು ಸಲ್ಲುತ್ತವೆ.

ಈ ರಾತ್ರಿಯ—ಇಸ್ರಾ ಮತ್ತು ಮಿಅರಾಜ್ ಸಂಭವಿಸಿದ ರಾತ್ರಿಯ—ನಿರ್ದಿಷ್ಟ ದಿನಾಂಕವನ್ನು ರಜಬ್ ತಿಂಗಳಲ್ಲಾಗಲಿ ಅಥವಾ ಬೇರೆ ಯಾವುದೇ ತಿಂಗಳಲ್ಲಾಗಲಿ ಆಗಿದೆಯೆಂದು ಸಹೀಹ್ (ಪ್ರಬಲ) ಹದೀಸ್‌ಗಳಲ್ಲಿ ಉಲ್ಲೇಖಿಸಲಾಗಿಲ್ಲ. ಅದರ ದಿನಾಂಕವನ್ನು ನಿರ್ದಿಷ್ಟಪಡಿಸುವ ಎಲ್ಲಾ ವರದಿಗಳು ಹದೀಸ್ ವಿದ್ವಾಂಸರ ಪ್ರಕಾರ ಪ್ರವಾದಿ (ಸ) ರಿಂದ ದೃಢಪಟ್ಟಿಲ್ಲ. ಜನರಿಗೆ ಅದನ್ನು ತಿಳಿಸದಿರುವುದರಲ್ಲಿ ಅಲ್ಲಾಹನಿಗೆ ಮಹತ್ತರವಾದ ವಿವೇಕವಿದೆ. ಒಂದು ವೇಳೆ ಅದರ ದಿನಾಂಕ ದೃಢಪಟ್ಟಿದ್ದರೂ ಸಹ, ಮುಸ್ಲಿಮರು ಅದನ್ನು ಯಾವುದೇ ಇಬಾದತ್‌ಗಳಿಗಾಗಿ ವಿಶೇಷವಾಗಿ ಪರಿಗಣಿಸುವುದು ಅಥವಾ ಅದನ್ನು ಆಚರಿಸುವುದು ಅನುಮತಿಸಲಾಗುವುದಿಲ್ಲ. ಏಕೆಂದರೆ ಪ್ರವಾದಿ (ಸ) ರವರು ಮತ್ತು ಅವರ ಸಹಾಬಿಗಳು (ರ) ಅದನ್ನು ಆಚರಿಸಲಿಲ್ಲ ಮತ್ತು ಯಾವುದೇ ವಿಶೇಷ ಕಾರ್ಯಕ್ಕಾಗಿ ಅದನ್ನು ಮೀಸಲಿಡಲಿಲ್ಲ. ಒಂದು ವೇಳೆ ಅದನ್ನು ಆಚರಿಸುವುದು ನಿಯಮಗೊಳಿಸಲ್ಪಟ್ಟ ವಿಷಯವಾಗಿದ್ದರೆ, ಅಲ್ಲಾಹನ ಸಂದೇಶವಾಹಕರು (ಸ) ಅದನ್ನು ಉಮ್ಮತ್‌ಗೆ (ಸಮುದಾಯಕ್ಕೆ) ಮಾತು ಅಥವಾ ಕಾರ್ಯದ ಮೂಲಕ ಸ್ಪಷ್ಟಪಡಿಸುತ್ತಿದ್ದರು. ಒಂದು ವೇಳೆ ಅಂತಹದ್ದು ಏನಾದರೂ ಸಂಭವಿಸಿದ್ದರೆ, ಅದು ತಿಳಿದುಬರುತ್ತಿತ್ತು ಮತ್ತು ಪ್ರಸಿದ್ಧವಾಗುತ್ತಿತ್ತು. ಸಹಾಬಿಗಳು (ರ) ಅದನ್ನು ನಮಗೆ ರವಾನಿಸುತ್ತಿದ್ದರು. ಉಮ್ಮತ್‌ಗೆ ಬೇಕಾದ ಪ್ರತಿಯೊಂದು ವಿಷಯವನ್ನೂ ಅವರು ಪ್ರವಾದಿ (ಸ) ರಿಂದ ರವಾನಿಸಿದ್ದಾರೆ ಮತ್ತು ಧರ್ಮದ ಯಾವುದೇ ವಿಷಯದಲ್ಲಿ ಅವರು ನಿರ್ಲಕ್ಷ್ಯ ತೋರಿಲ್ಲ. ಬದಲಿಗೆ ಅವರು ಪ್ರತಿಯೊಂದು ಒಳ್ಳೆಯ ಕಾರ್ಯವನ್ನು ಮಾಡುವುದರಲ್ಲಿ ಮೊದಲಿಗರಾಗಿದ್ದರು. ಒಂದು ವೇಳೆ ಈ ರಾತ್ರಿಯನ್ನು ಆಚರಿಸುವುದು ನಿಯಮಗೊಳಿಸಲ್ಪಟ್ಟಿರುತ್ತಿದ್ದರೆ, ಅವರು ಅದನ್ನು ಮಾಡಲು ಎಲ್ಲರಿಗಿಂತ ಮೊದಲಿರುತ್ತಿದ್ದರು. ಪ್ರವಾದಿ (ಸ) ರವರು ಜನರ ಬಗ್ಗೆ ಅತಿಹೆಚ್ಚು ಹಿತಚಿಂತನೆಯನ್ನು ಹೊಂದಿದ್ದರು. ಅವರು ಸಂದೇಶವನ್ನು ಸಂಪೂರ್ಣವಾಗಿ ತಲುಪಿಸಿದರು ಮತ್ತು ಹೊಣೆಗಾರಿಕೆಯನ್ನು ನಿರ್ವಹಿಸಿದರು. ಒಂದು ವೇಳೆ ಈ ರಾತ್ರಿಯನ್ನು ಗೌರವಿಸುವುದು ಮತ್ತು ಆಚರಿಸುವುದು ಅಲ್ಲಾಹನ ಧರ್ಮದ ಭಾಗವಾಗಿದ್ದರೆ, ಪ್ರವಾದಿ (ಸ) ರವರು ಅದನ್ನು ನಿರ್ಲಕ್ಷಿಸುತ್ತಿರಲಿಲ್ಲ ಅಥವಾ ಮರೆಮಾಚುತ್ತಿರಲಿಲ್ಲ. ಇವುಗಳಲ್ಲಿ ಯಾವುದೂ ಸಂಭವಿಸದಿರುವ ಕಾರಣ, ಅದನ್ನು ಆಚರಿಸುವುದು ಮತ್ತು ಗೌರವಿಸುವುದು ಇಸ್ಲಾಂ ಧರ್ಮದ ಭಾಗವಲ್ಲ ಎಂಬುದು ತಿಳಿದುಬರುತ್ತದೆ. ಅಲ್ಲಾಹು ಈ ಉಮ್ಮತ್‌ಗಾಗಿ ಅವರ ಧರ್ಮವನ್ನು ಪೂರ್ಣಗೊಳಿಸಿದ್ದಾನೆ ಮತ್ತು ಅವರ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಿದ್ದಾನೆ. ಅಲ್ಲಾಹು ಅನುಮತಿಸದ ವಿಷಯಗಳನ್ನು ಧರ್ಮದಲ್ಲಿ ಸೇರಿಸುವವರನ್ನು ಅವನು ಖಂಡಿಸಿದ್ದಾನೆ. ಅವನು ತನ್ನ ಸ್ಪಷ್ಟ ಗ್ರಂಥದಲ್ಲಿ ಹೇಳುತ್ತಾನೆ:

﴿...ٱلۡيَوۡمَ أَكۡمَلۡتُ لَكُمۡ دِينَكُمۡ وَأَتۡمَمۡتُ عَلَيۡكُمۡ نِعۡمَتِي وَرَضِيتُ لَكُمُ ٱلۡإِسۡلَٰمَ دِينٗا...﴾

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. [ಅಲ್-ಮಾಇದ: 3] ಅವನು (ಅಲ್ಲಾಹು) ಹೇಳುತ್ತಾನೆ:

﴿أَمۡ لَهُمۡ شُرَكَٰٓؤُاْ شَرَعُواْ لَهُم مِّنَ ٱلدِّينِ مَا لَمۡ يَأۡذَنۢ بِهِ ٱللَّهُۚ وَلَوۡلَا كَلِمَةُ ٱلۡفَصۡلِ لَقُضِيَ بَيۡنَهُمۡۗ وَإِنَّ ٱلظَّٰلِمِينَ لَهُمۡ عَذَابٌ أَلِيمٞ21﴾

ಅಲ್ಲಾಹು ಆಜ್ಞಾಪಿಸದ ವಿಷಯಗಳನ್ನು ಅವರಿಗೆ ಧರ್ಮವನ್ನಾಗಿ ಮಾಡಿಕೊಟ್ಟ ಯಾರಾದರೂ ದೇವ-ಸಹಭಾಗಿಗಳು ಅವರಿಗಿದ್ದಾರೆಯೇ? ತೀರ್ಪು ನೀಡುವ ದಿನದ ಕುರಿತಾದ ವಾಗ್ದಾನವು ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು. ನಿಶ್ಚಯವಾಗಿಯೂ ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿದೆ. [ಅಶ್ಶೂರಾ: 21]

ಪ್ರವಾದಿ (ಸ) ರವರು ಬಿದ್‌ಅತ್‌ಗಳ (ಧರ್ಮದಲ್ಲಿ ಹೊಸ ಆವಿಷ್ಕಾರಗಳು) ವಿರುದ್ಧ ಎಚ್ಚರಿಕೆ ನೀಡಿರುವುದು ಮತ್ತು ಅವು ದುರ್ಮಾರ್ಗವಾಗಿವೆಯೆಂದು ವಿವರಿಸಿರುವುದು ಸಹೀಹ್ ಹದೀಸ್‌ಗಳಲ್ಲಿ ದೃಢಪಟ್ಟಿದೆ. ಇದು ಉಮ್ಮತ್‌ಗೆ (ಸಮುದಾಯಕ್ಕೆ) ಅದರ ಗಂಭೀರ ಅಪಾಯದ ಬಗ್ಗೆ ತಿಳಿಸುವುದಕ್ಕಾಗಿ ಮತ್ತು ಅದನ್ನು ಮಾಡುವುದರಿಂದ ಅವರನ್ನು ದೂರವಿರಿಸುವುದಕ್ಕಾಗಿದೆ. ಅವುಗಳಲ್ಲಿ ಕೆಲವು ಹೀಗಿವೆ: ಬುಖಾರಿ ಮತ್ತು ಮುಸ್ಲಿಂನಲ್ಲಿ ಆಯಿಶಾ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:

«مَنْ أَحْدَثَ فِي أَمْرِنَا هَذَا مَا لَيْسَ مِنْهُ؛ فَهُوَ رَدٌّ».

"ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸುತ್ತಾರೋ, ಅದು ತಿರಸ್ಕೃತವಾಗಿದೆ." ಮುಸ್ಲಿಮ್‌ರ ವರದಿಯಲ್ಲಿ ಹೀಗಿದೆ:

«مَنْ عَمِلَ عَمَلًا لَيْسَ عَلَيهِ أَمْرَنَا؛ فَهُوَ رَدٌّ».

"ಯಾರು ನಮ್ಮ ಆದೇಶವಿಲ್ಲದ ಒಂದು ಕಾರ್ಯವನ್ನು ಮಾಡುತ್ತಾರೋ, ಅದು ತಿರಸ್ಕೃತವಾಗಿದೆ." ಸಹೀಹ್ ಮುಸ್ಲಿಂನಲ್ಲಿ ಜಾಬಿರ್ (ರ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಸ) ಶುಕ್ರವಾರದ ತಮ್ಮ ಖುತ್ಬಾದಲ್ಲಿ (ಪ್ರವಚನದಲ್ಲಿ) ಹೇಳುತ್ತಿದ್ದರು:

«أَمَا بَعْدَ، فَإِنَّ خَيرَ الحَدِيثِ كِتَابُ اللهِ، وَخَيرَ الهَدْيِ هَدْيُ مُحَمَّدٍ ﷺ، وَشَرَّ الأُمُورِ مُحْدَثَاتُهَا، وَكُلَّ بِدْعَةٍ ضَلَالَةٌ».

ಇನ್ನು ವಿಷಯಕ್ಕೆ ಬರುವುದಾದರೆ, ಮಾತುಗಳಲ್ಲಿ ಅತ್ಯುತ್ತಮವಾದುದು ಅಲ್ಲಾಹನ ಗ್ರಂಥವಾಗಿದೆ, ಮತ್ತು ಮಾರ್ಗದರ್ಶನಗಳಲ್ಲಿ ಅತ್ಯುತ್ತಮವಾದುದು ಮುಹಮ್ಮದ್ (ಸ) ರವರ ಮಾರ್ಗದರ್ಶನವಾಗಿದೆ. ಕಾರ್ಯಗಳಲ್ಲಿ ಅತ್ಯಂತ ಕೆಟ್ಟದು ಹೊಸದಾಗಿ ಸೃಷ್ಟಿಸಲಾದವುಗಳಾಗಿವೆ, ಮತ್ತು ಪ್ರತಿಯೊಂದು ಬಿದ್‌ಅತ್ (ನೂತನಾಚಾರ) ದುರ್ಮಾರ್ಗವಾಗಿದೆ. ನಸಾಈ ಉತ್ತಮ ಸನದ್‌ನೊಂದಿಗೆ ಇದನ್ನು ಸೇರಿಸಿದ್ದಾರೆ:

«وَكُلَّ ضَلَالَةٍ فِي النَّارِ».

"ಮತ್ತು ಪ್ರತಿಯೊಂದು ದುರ್ಮಾರ್ಗವು ನರಕದಲ್ಲಾಗಿದೆ." ಸುನನ್‌ ಗ್ರಂಥಗಳಲ್ಲಿ ಇರ್ಬಾದ್ ಬಿನ್ ಸಾರಿಯಾ (ರ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಸ) ನಮಗೆ ಹೃದಯಗಳನ್ನು ಕರಗಿಸುವ ಮತ್ತು ಕಣ್ಣುಗಳಿಂದ ನೀರು ಹರಿಸುವಂತಹ ಅತ್ಯಂತ ಪರಿಣಾಮಕಾರಿಯಾದ ಉಪದೇಶವನ್ನು ನೀಡಿದರು. ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ಇದು ಬೀಳ್ಕೊಡುಗೆಯ ಉಪದೇಶದಂತಿದೆ, ಆದ್ದರಿಂದ ನಮಗೆ ಉಪದೇಶ ನೀಡಿ." ಅವರು ಹೇಳಿದರು:

«أُوصِيكُم بِتَقْوَى اللهِ وَالسَّمعِ وَالطَّاعَةِ وَإِنْ تَأَمَّرَ عَلَيكُم عَبدٌ، فَإِنَّهُ مَنْ يَعِشْ مِنْكُم فَسَيَرَى اخْتِلَافًا كَثِيرًا، فَعَلَيكُم بِسُنَّتِي وَسُنَّةِ الخلُفَاءِ الرَّاشِدِينَ المَهْدِيِّينَ مِنْ بَعْدِي، تَمَسَّكُوا بِهَا وَعَضُّوا عَلَيْهَا بِالنَّوَاجِذِ، وَإِيَّاكُم وَمُحْدَثَاتِ الأُمُورِ، فَإِنَّ كُلَّ مُحْدَثَةٍ بِدْعَةٍ وَكُلَّ بِدْعَةٍ ضَلَالَةٌ».

"ನಾನು ನಿಮಗೆ ಅಲ್ಲಾಹನನ್ನು ಭಯಪಡಬೇಕೆಂದು ಮತ್ತು ನಿಮ್ಮ ಮೇಲೆ ಒಬ್ಬ ಗುಲಾಮನು ಅಧಿಕಾರ ಹೊಂದಿದ್ದರೂ ಅವನ ಮಾತನ್ನು ಕೇಳಲು ಮತ್ತು ಪಾಲಿಸಲು ಉಪದೇಶಿಸುತ್ತೇನೆ. ಏಕೆಂದರೆ, (ನನ್ನ ನಂತರ) ನಿಮ್ಮಲ್ಲಿ ಯಾರು ಬದುಕುತ್ತಾರೋ ಅವರು ಅನೇಕ ಭಿನ್ನಾಭಿಪ್ರಾಯಗಳನ್ನು ಕಾಣುವರು. ಆದ್ದರಿಂದ, ನನ್ನ ಸುನ್ನತ್ (ಚರ್ಯೆ) ಮತ್ತು ನನ್ನ ನಂತರ ಬರುವ ಸನ್ಮಾರ್ಗಿಗಳಾದ, ಮಾರ್ಗದರ್ಶನ ಪಡೆದ ಖಲೀಫರುಗಳ ಸುನ್ನತ್ ಅನ್ನು ನೀವು ಅನುಸರಿಸಿರಿ. ಅದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಅದನ್ನು ನಿಮ್ಮ ದವಡೆ ಹಲ್ಲುಗಳಿಂದ ಕಚ್ಚಿ ಹಿಡಿಯಿರಿ. ಹೊಸದಾಗಿ ಸೃಷ್ಟಿಸಲಾದ ವಿಷಯಗಳಿಂದ ದೂರವಿರಿ. ಏಕೆಂದರೆ ಪ್ರತಿಯೊಂದು ಹೊಸ ಆವಿಷ್ಕಾರವು ಬಿದ್‌ಅತ್ ಆಗಿದೆ ಮತ್ತು ಪ್ರತಿಯೊಂದು ಬಿದ್‌ಅತ್ ದುರ್ಮಾರ್ಗವಾಗಿದೆ." ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್‌ಗಳಿವೆ.

ಅಲ್ಲಾಹನ ಸಂದೇಶವಾಹಕರ (ಸ) ಸಹಾಬಿಗಳಿಂದ ಮತ್ತು ಅವರ ನಂತರದ ಸಜ್ಜನ ಪೂರ್ವಿಕರಿಂದ, ಅವರು ಬಿದ್‌ಅತ್‌ಗಳ ವಿರುದ್ಧ ಎಚ್ಚರಿಕೆ ನೀಡಿರುವುದು ಮತ್ತು ಅವುಗಳಿಂದ ದೂರವಿರಲು ಭಯ ಹುಟ್ಟಿಸಿರುವುದು ದೃಢಪಟ್ಟಿದೆ. ಇದೇಕೆಂದರೆ, ಅವು (ಬಿದ್‌ಅತ್‌ಗಳು) ಧರ್ಮದಲ್ಲಿರುವ ಸೇರ್ಪಡೆಗಳು, ಅಲ್ಲಾಹು ಅನುಮತಿಸದ ನಿಯಮಗಳು, ಮತ್ತು ತಮ್ಮ ಧರ್ಮದಲ್ಲಿ ಹೊಸದನ್ನು ಸೇರಿಸಿ ಅಲ್ಲಾಹು ಅನುಮತಿಸದ ವಿಷಯಗಳನ್ನು ಸೃಷ್ಟಿಸಿದ ಯಹೂದಿಗಳು ಮತ್ತು ಕ್ರೈಸ್ತರಂತಹ ಅಲ್ಲಾಹನ ಶತ್ರುಗಳನ್ನು ಅನುಕರಿಸುವುದಾಗಿದೆ. ಏಕೆಂದರೆ ಅದು ಇಸ್ಲಾಮ್ ಧರ್ಮವನ್ನು ಕೀಳಾಗಿ ಕಾಣುವುದನ್ನು ಮತ್ತು ಅದು ಅಪೂರ್ಣವೆಂದು ಆರೋಪಿಸುವುದನ್ನು ಅನಿವಾರ್ಯಗೊಳಿಸುತ್ತದೆ. ಇದರಲ್ಲಿ ಮಹಾ ತೊಂದರೆಗಳು, ಭಯಾನಕ ಕೆಡುಕುಗಳು, ಮತ್ತು ಅಲ್ಲಾಹನ ಈ ಕೆಳಗಿನ ವಚನಕ್ಕೆ ವಿರುದ್ಧವಾಗಿ ನಡೆಯುವುದು ಇವೆಯೆಂಬುದು ತಿಳಿದಿರುವ ವಿಷಯವಾಗಿದೆ:

﴿...ٱلۡيَوۡمَ أَكۡمَلۡتُ لَكُمۡ دِينَكُمۡ...﴾

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. [ಅಲ್-ಮಾಇದ: 3] ಬಿದ್‌ಅತ್‌ಗಳ ವಿರುದ್ಧ ಎಚ್ಚರಿಕೆ ನೀಡುವ ಮತ್ತು ಅವುಗಳಿಂದ ದೂರ ಸರಿಸುವ ಪ್ರವಾದಿ (ಸ) ರವರ ಹದೀಸ್‌ಗಳ ಸ್ಪಷ್ಟ ಉಲ್ಲಂಘನೆಯೂ ಇದರಲ್ಲಿದೆ.

ಸತ್ಯವನ್ನು ಹುಡುಕುವವನಿಗೆ ಈ ಬಿದ್‌ಅತ್ ಅನ್ನು – ಅಂದರೆ, ಇಸ್ರಾ ಮತ್ತು ಮಿಅರಾಜ್ ರಾತ್ರಿಯನ್ನು ಆಚರಿಸುವ ಬಿದ್‌ಅತ್ ಅನ್ನು – ನಿರಾಕರಿಸಲು, ಅದರ ಬಗ್ಗೆ ಎಚ್ಚರದಿಂದಿರಲು ಮತ್ತು ಅದು ಇಸ್ಲಾಂ ಧರ್ಮದ ಭಾಗವೇ ಅಲ್ಲ ಎಂದು ತಿಳಿಯಲು ನಾವು ಉಲ್ಲೇಖಿಸಿದ ಪುರಾವೆಗಳು ಸಾಕಾಗುತ್ತವೆ ಮತ್ತು ಮನವರಿಕೆ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ.

ಮುಸ್ಲಿಮರಿಗೆ ಉಪದೇಶ ನೀಡುವುದು, ಅಲ್ಲಾಹು ಅವರಿಗಾಗಿ ನಿಯಮಗೊಳಿಸಿದ ಧರ್ಮವನ್ನು ಅವರಿಗೆ ವಿವರಿಸಿಕೊಡುವುದು, ಮತ್ತು ಜ್ಞಾನವನ್ನು ಅಡಗಿಸಿಡದಿರುವುದು ಅಲ್ಲಾಹು ಕಡ್ಡಾಯಗೊಳಿಸಿದ ಕರ್ತವ್ಯಗಳಾಗಿರುವುದರಿಂದ, ನನ್ನ ಮುಸ್ಲಿಂ ಸಹೋದರರಿಗೆ ಈ ಬಿದ್‌ಅತ್‌ನ ಬಗ್ಗೆ ಎಚ್ಚರಿಕೆ ನೀಡುವುದು ಸೂಕ್ತವೆಂದು ನಾನು ಕಂಡೆನು. ಈ ಬಿದ್‌ಅತ್ ಅನೇಕ ನಗರಗಳಲ್ಲಿ ಎಷ್ಟರಮಟ್ಟಿಗೆ ಹರಡಿಕೊಂಡಿದೆ ಎಂದರೆ ಕೆಲವರು ಇದನ್ನು ಧರ್ಮದ ಭಾಗವೆಂದು ಭಾವಿಸಿಬಿಟ್ಟಿದ್ದಾರೆ.

ಎಲ್ಲಾ ಮುಸ್ಲಿಮರ ಸ್ಥಿತಿಗತಿಗಳನ್ನು ಸರಿಪಡಿಸಲು, ಅವರಿಗೆ ಧರ್ಮದಲ್ಲಿ ತಿಳುವಳಿಕೆಯನ್ನು ನೀಡಲು, ನಮಗೂ ಮತ್ತು ಅವರಿಗೂ ಸತ್ಯವನ್ನು ಬಿಗಿಯಾಗಿ ಹಿಡಿಯಲು ಮತ್ತು ಅದರ ಮೇಲೆ ಸ್ಥಿರವಾಗಿರಲು ಹಾಗೂ ಅದಕ್ಕೆ ವಿರುದ್ಧವಾದದ್ದನ್ನು ತ್ಯಜಿಸಲು ಅಲ್ಲಾಹನಲ್ಲಿ ಬೇಡಿಕೊಳ್ಳುತ್ತೇನೆ. ನಿಶ್ಚಯವಾಗಿಯೂ ಅವನು ಅದನ್ನು ಮಾಡುವವನು ಮತ್ತು ಅದರ ಸಾಮರ್ಥ್ಯವುಳ್ಳವನಾಗಿದ್ದಾನೆ.

ಅಲ್ಲಾಹು ತನ್ನ ದಾಸ ಮತ್ತು ಸಂದೇಶವಾಹಕರಾದ ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಸಹಚರರ ಮೇಲೆ ಸಲಾತ್, ಸಲಾಂ ಮತ್ತು ಬರಕತ್ ವರ್ಷಿಸಲಿ.

 

 

***

 


بِسْمِ اللهِ الرَّحمَنِ الرَّحِيمِ

ಏಳನೇ ಸಂದೇಶ:

ಶಅಬಾನ್ ತಿಂಗಳ ಹದಿನೈದನೇ ರಾತ್ರಿಯನ್ನು (ಶಬೇ ಬರಾತ್) ಆಚರಿಸುವ ವಿಧಿ

ನಮಗಾಗಿ ಧರ್ಮವನ್ನು ಪೂರ್ಣಗೊಳಿಸಿದ ಮತ್ತು ನಮ್ಮ ಮೇಲೆ ತನ್ನ ಅನುಗ್ರಹವನ್ನು ಸಂಪೂರ್ಣಗೊಳಿಸಿದ ಅಲ್ಲಾಹನಿಗೆ ಸರ್ವ ಸ್ತುತಿಗಳು. ಪಶ್ಚಾತ್ತಾಪ ಮತ್ತು ಕರುಣೆಯ ಪ್ರವಾದಿಯಾದ ಅವನ ಪ್ರವಾದಿ ಮತ್ತು ಸಂದೇಶವಾಹಕ ಮುಹಮ್ಮದ್ (ಸ) ರವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಮಹೋನ್ನತನಾದ ಅಲ್ಲಾಹು ಹೇಳುತ್ತಾನೆ:

﴿...ٱلۡيَوۡمَ أَكۡمَلۡتُ لَكُمۡ دِينَكُمۡ وَأَتۡمَمۡتُ عَلَيۡكُمۡ نِعۡمَتِي وَرَضِيتُ لَكُمُ ٱلۡإِسۡلَٰمَ دِينٗا...﴾

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. [ಅಲ್-ಮಾಇದ: 3] ಅವನು (ಅಲ್ಲಾಹು) ಹೇಳುತ್ತಾನೆ:

﴿أَمۡ لَهُمۡ شُرَكَٰٓؤُاْ شَرَعُواْ لَهُم مِّنَ ٱلدِّينِ مَا لَمۡ يَأۡذَنۢ بِهِ ٱللَّهُ...﴾

ಅಲ್ಲಾಹು ಆಜ್ಞಾಪಿಸದ ವಿಷಯಗಳನ್ನು ಅವರಿಗೆ ಧರ್ಮವನ್ನಾಗಿ ಮಾಡಿಕೊಟ್ಟ ಯಾರಾದರೂ ದೇವ-ಸಹಭಾಗಿಗಳು ಅವರಿಗಿದ್ದಾರೆಯೇ? [ಅಶ್ಶೂರಾ: 21] ಬುಖಾರಿ ಮತ್ತು ಮುಸ್ಲಿಂ ನಲ್ಲಿ ಆಯಿಶಾ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:

«مَنْ أَحْدَثَ فِي أَمْرِنَا هَذَا مَا لَيْسَ مِنْهُ؛ فَهُوَ رَدٌّ».

"ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸುತ್ತಾರೋ, ಅದು ತಿರಸ್ಕೃತವಾಗಿದೆ." ಸಹೀಹ್ ಮುಸ್ಲಿಂನಲ್ಲಿ ಜಾಬಿರ್ (ರ) ರಿಂದ ವರದಿ. ಪ್ರವಾದಿ (ಸ) ರವರು ಶುಕ್ರವಾರದ ತಮ್ಮ ಖುತ್ಬಾದಲ್ಲಿ (ಪ್ರವಚನದಲ್ಲಿ) ಹೇಳುತ್ತಿದ್ದರು:

«أَمَّا بَعْدُ: فَإِنَّ خَيرَ الحَدِيثِ كِتَابُ اللهِ، وَخَيرَ الهَدْيِ هَدْيُ مُحَمَّدٍ صَلَّى اللهُ عَلَيهِ وَسَلَّمَ، وَشَرَّ الأُمُورِ مُحْدَثَاتُهَا، وَكُلَّ بِدْعَةٍ ضَلَالَةٌ».

"ಇನ್ನು ವಿಷಯಕ್ಕೆ ಬರುವುದಾದರೆ, ಮಾತುಗಳಲ್ಲಿ ಅತ್ಯುತ್ತಮವಾದುದು ಅಲ್ಲಾಹನ ಗ್ರಂಥವಾಗಿದೆ, ಮತ್ತು ಮಾರ್ಗದರ್ಶನಗಳಲ್ಲಿ ಅತ್ಯುತ್ತಮವಾದುದು ಮುಹಮ್ಮದ್ (ಸ) ರವರ ಮಾರ್ಗದರ್ಶನವಾಗಿದೆ. ಕಾರ್ಯಗಳಲ್ಲಿ ಅತ್ಯಂತ ಕೆಟ್ಟದು ಹೊಸದಾಗಿ ಸೃಷ್ಟಿಸಲಾದವುಗಳಾಗಿವೆ, ಮತ್ತು ಪ್ರತಿಯೊಂದು ಬಿದ್‌ಅತ್ (ನೂತನಾಚಾರ) ದುರ್ಮಾರ್ಗವಾಗಿದೆ." ಈ ಅರ್ಥದಲ್ಲಿ ಅನೇಕ ಕುರ್‌ಆನ್ ವಚನಗಳು ಮತ್ತು ಹದೀಸ್‌ಗಳಿವೆ. ಇವು ಸ್ಪಷ್ಟವಾಗಿ ಸೂಚಿಸುವುದೇನೆಂದರೆ, ಅಲ್ಲಾಹು ಈ ಉಮ್ಮತ್‌ಗೆ (ಸಮುದಾಯಕ್ಕೆ) ಅವರ ಧರ್ಮವನ್ನು ಪೂರ್ಣಗೊಳಿಸಿದ್ದಾನೆ ಮತ್ತು ಅವರ ಮೇಲೆ ತನ್ನ ಅನುಗ್ರಹವನ್ನು ಸಂಪೂರ್ಣಗೊಳಿಸಿದ್ದಾನೆ. ಹಾಗೆಯೇ, ಅವನು ತನ್ನ ಪ್ರವಾದಿ (ಸ) ರನ್ನು, ಅವರು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿಕೊಟ್ಟ ನಂತರ ಮತ್ತು ಅಲ್ಲಾಹು ಈ ಉಮ್ಮತ್‌ಗೆ ನಿಯಮಗೊಳಿಸಿದ ಎಲ್ಲಾ ಮಾತುಗಳು ಮತ್ತು ಕರ್ಮಗಳನ್ನು ಅವರು ಉಮ್ಮತ್‌ಗೆ ವಿವರಿಸಿಕೊಟ್ಟ ನಂತರವೇ ಮರಣಗೊಳಿಸಿದನು. ಪ್ರವಾದಿ (ಸ) ರವರು ವಿವರಿಸುವುದೇನೆಂದರೆ, ಅವರ ಮರಣಾನಂತರ ಜನರು ಹೊಸದಾಗಿ ಸೃಷ್ಟಿಸುವ ಮತ್ತು ಇಸ್ಲಾಂ ಧರ್ಮಕ್ಕೆ ಸೇರಿಸುವ ಮಾತುಗಳು ಅಥವಾ ಕರ್ಮಗಳೆಲ್ಲವೂ ಬಿದ್‌ಅತ್ ಆಗಿದ್ದು, ಅದನ್ನು ಸೃಷ್ಟಿಸಿದವನಿಗೇ ಅದನ್ನು ಹಿಂದಿರುಗಿಸಲಾಗುತ್ತದೆ. ಅವನ ಉದ್ದೇಶ ಒಳ್ಳೆಯದಾಗಿದ್ದರೂ ಸಹ. ಅಲ್ಲಾಹನ ಸಂದೇಶವಾಹಕರ (ಸ) ಸಹಾಬಿಗಳು ಈ ವಿಷಯವನ್ನು ತಿಳಿದಿದ್ದರು. ಹಾಗೆಯೇ ಅವರ ನಂತರದ ಇಸ್ಲಾಮಿ ವಿದ್ವಾಂಸರೂ ಸಹ. ಅವರು ಬಿದ್‌ಅತ್‌ಗಳನ್ನು ಖಂಡಿಸಿದರು ಮತ್ತು ಅವುಗಳ ಬಗ್ಗೆ ಎಚ್ಚರಿಸಿದರು. ಸುನ್ನತ್ ಅನ್ನು ಗೌರವಿಸುವ ಮತ್ತು ಬಿದ್‌ಅತ್ ಅನ್ನು ಖಂಡಿಸುವ ವಿಷಯದಲ್ಲಿ ಕೃತಿಗಳನ್ನು ರಚಿಸಿದ, ಇಬ್ನ್ ವದ್ದಾಹ್, ಅತ್ತರ್ತೂಶಿ, ಅಬೂ ಶಾಮಾ ಮುಂತಾದ ಪ್ರತಿಯೊಬ್ಬರೂ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

ಕೆಲವು ಜನರು ಸೃಷ್ಟಿಸಿರುವ ಬಿದ್‌ಅತ್‌ಗಳಲ್ಲಿ ಒಂದು ಏನೆಂದರೆ: ಶಅಬಾನ್ ತಿಂಗಳ ಹದಿನೈದನೇ ರಾತ್ರಿಯನ್ನು ಆಚರಿಸುವುದು ಮತ್ತು ಅದರ ಹಗಲನ್ನು ಉಪವಾಸಕ್ಕಾಗಿ ವಿಶೇಷಗೊಳಿಸುವುದು. ಈ ವಿಷಯದಲ್ಲಿ ಅವಲಂಬಿಸಬಹುದಾದ ಯಾವುದೇ ಪುರಾವೆ ಇಲ್ಲ. ಇದರ (ಈ ರಾತ್ರಿಯ) ಶ್ರೇಷ್ಠತೆಯ ಬಗ್ಗೆ ದುರ್ಬಲ ಹದೀಸ್‌ಗಳು ವರದಿಯಾಗಿದ್ದು, ಅವುಗಳನ್ನು ಅವಲಂಬಿಸುವುದು ಸಮ್ಮತಾರ್ಹವಲ್ಲ.

ಅದರಲ್ಲಿ (ಆ ರಾತ್ರಿಯಲ್ಲಿ) ನಮಾಝ್‌ ನಿರ್ವಹಿಸುವ ಶ್ರೇಷ್ಠತೆಯ ಬಗ್ಗೆ ವರದಿಯಾಗಿರುವುದರ ಬಗ್ಗೆ ಹೇಳುವುದಾದರೆ, ಅದೆಲ್ಲವೂ ಕಟ್ಟುಕಥೆಗಳಾಗಿವೆ. ಅನೇಕ ವಿದ್ವಾಂಸರು ಈ ಬಗ್ಗೆ ಗಮನ ಸೆಳೆದಿದ್ದಾರೆ. ಅವರ ಕೆಲವು ಮಾತುಗಳನ್ನು ಅಲ್ಲಾಹು ಇಚ್ಛಿಸಿದರೆ ಮುಂದೆ ಉಲ್ಲೇಖಿಸಲಾಗುವುದು.

ಈ ವಿಷಯದಲ್ಲಿ ಶಾಮ್ (ಸಿರಿಯಾ ಪ್ರದೇಶ) ಮತ್ತು ಇತರ ಕಡೆಗಳ ಕೆಲವು ಸಜ್ಜನ ಪೂರ್ವಿಕರಿಂದ ಕೆಲವು ವರದಿಗಳೂ ಬಂದಿವೆ.

ಬಹುಪಾಲು ವಿದ್ವಾಂಸರು ಒಮ್ಮತದಿಂದ ಹೇಳುವುದೇನೆಂದರೆ, ಅದನ್ನು ಆಚರಿಸುವುದು ಬಿದ್‌ಅತ್ ಆಗಿದೆ, ಮತ್ತು ಅದರ ಶ್ರೇಷ್ಠತೆಯ ಬಗ್ಗೆ ಬಂದಿರುವ ಎಲ್ಲಾ ಹದೀಸ್‌ಗಳು ದುರ್ಬಲವಾಗಿವೆ, ಮತ್ತು ಕೆಲವು ಕಟ್ಟುಕಥೆಗಳಾಗಿವೆ. ಹಾಫಿಝ್ ಇಬ್ನ್ ರಜಬ್ ತಮ್ಮ "ಲತಾಯಿಫುಲ್-ಮಆರಿಫ್" ಎಂಬ ಗ್ರಂಥದಲ್ಲಿ ಹಾಗೂ ಇತರರು ಇದರ ಬಗ್ಗೆ ಗಮನ ಸೆಳೆದವರಲ್ಲಿ ಪ್ರಮುಖರು. ಸಹೀಹ್ (ಪ್ರಬಲ) ಹದೀಸ್‌ಗಳಿಂದ ಮೂಲವು ದೃಢಪಟ್ಟಿರುವ ಇಬಾದತ್‌ಗಳ (ಆರಾಧನೆಗಳ) ವಿಷಯದಲ್ಲಿ ಮಾತ್ರ ದುರ್ಬಲ ಹದೀಸ್‌ಗಳನ್ನು ಪರಿಗಣಿಸಬಹುದು ಎಂಬುದು ತಿಳಿದಿರುವ ವಿಷಯವಾಗಿದೆ. ಆದರೆ ಶಅಬಾನ್ ತಿಂಗಳ ಹದಿನೈದನೇ ರಾತ್ರಿಯ ಆಚರಣೆಗೆ ಯಾವುದೇ ಪ್ರಬಲ ಮೂಲವಿಲ್ಲ. ಆದ್ದರಿಂದ ದುರ್ಬಲ ಹದೀಸ್‌ಗಳ ಮೂಲಕ ಅದನ್ನು ಸಮರ್ಥನೆ ಮಾಡಲಾಗುವುದಿಲ್ಲ. ಈ ಮಹತ್ವದ ನಿಯಮವನ್ನು ಇಮಾಮ್ ಅಬುಲ್ ಅಬ್ಬಾಸ್ ಶೈಖುಲ್ ಇಸ್ಲಾಂ ಇಬ್ನ್ ತೈಮಿಯಾ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಉಲ್ಲೇಖಿಸಿದ್ದಾರೆ.

ಓದುಗರೇ, ಈ ವಿಷಯದಲ್ಲಿ ಕೆಲವು ವಿದ್ವಾಂಸರು ಏನು ಹೇಳಿದ್ದಾರೆಂಬುದನ್ನು ನಾನು ನಿಮಗೆ ತಿಳಿಸುತ್ತೇನೆ, ಇದರಿಂದ ನೀವು ಈ ಬಗ್ಗೆ ಸ್ಪಷ್ಟ ಜ್ಞಾನವನ್ನು ಹೊಂದಬಹುದು.

ವಿದ್ವಾಂಸರು (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಒಮ್ಮತದಿಂದ ಹೇಳಿದ್ದೇನೆಂದರೆ, ಜನರು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳನ್ನು ಅಲ್ಲಾಹನ ಗ್ರಂಥಕ್ಕೆ ಮತ್ತು ಅವನ ಸಂದೇಶವಾಹಕರ (ಸ) ಸುನ್ನತ್‌ಗೆ ಹಿಂತಿರುಗಿಸುವುದು ಕಡ್ಡಾಯವಾಗಿದೆ. ಅವೆರಡೂ ಅಥವಾ ಅವುಗಳಲ್ಲಿ ಒಂದು ನೀಡುವ ತೀರ್ಪು ಕಡ್ಡಾಯವಾಗಿ ಅನುಸರಿಸಬೇಕಾದ ನಿಯಮವಾಗಿದೆ. ಅವೆರಡಕ್ಕೂ ವಿರುದ್ಧವಾಗಿರುವುದನ್ನು ತಿರಸ್ಕರಿಸುವುದು ಕಡ್ಡಾಯವಾಗಿದೆ. ಅವೆರಡರಲ್ಲೂ ಉಲ್ಲೇಖಿಸದ ಇಬಾದತ್‌ಗಳು (ಆರಾಧನೆಗಳು) ಬಿದ್‌ಅತ್ ಆಗಿದ್ದು, ಅವುಗಳನ್ನು ನಿರ್ವಹಿಸುವುದು ಬಿಡಿ, ಅವುಗಳನ್ನು ನಿರ್ವಹಿಸಲು ಕರೆಯುವುದು ಮತ್ತು ಅವುಗಳನ್ನು ಇಷ್ಟಪಡುವುದು ಕೂಡ ಸಮ್ಮತಾರ್ಹವಲ್ಲ. ಅಲ್ಲಾಹು ಹೇಳುತ್ತಾನೆ:

﴿يَٰٓأَيُّهَا ٱلَّذِينَ ءَامَنُوٓاْ أَطِيعُواْ ٱللَّهَ وَأَطِيعُواْ ٱلرَّسُولَ وَأُوْلِي ٱلۡأَمۡرِ مِنكُمۡۖ فَإِن تَنَٰزَعۡتُمۡ فِي شَيۡءٖ فَرُدُّوهُ إِلَى ٱللَّهِ وَٱلرَّسُولِ إِن كُنتُمۡ تُؤۡمِنُونَ بِٱللَّهِ وَٱلۡيَوۡمِ ٱلۡأٓخِرِۚ ذَٰلِكَ خَيۡرٞ وَأَحۡسَنُ تَأۡوِيلًا59﴾

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮ್ಮ ಮೇಲೆ ಅಧಿಕಾರವಿರುವವರನ್ನೂ ಅನುಸರಿಸಿರಿ. ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಮರಳಿಸಿರಿ—ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ. [ಅನ್ನಿಸಾ: 59] ಅವನು (ಅಲ್ಲಾಹು) ಹೇಳುತ್ತಾನೆ:

﴿َمَا ٱخۡتَلَفۡتُمۡ فِيهِ مِن شَيۡءٖ فَحُكۡمُهُۥٓ إِلَى ٱللَّهِ...﴾

ನೀವು ಯಾವುದೇ ವಿಷಯದಲ್ಲಿ ಭಿನ್ನಮತ ತಳೆದಿದ್ದರೂ ಆ ವಿಷಯದಲ್ಲಿ ತೀರ್ಪು ನೀಡುವ ಅಧಿಕಾರವಿರುವುದು ಅಲ್ಲಾಹನಿಗೆ ಮಾತ್ರ... [ಅಶ್ಶೂರಾ: 10] ಅವನು (ಅಲ್ಲಾಹು) ಹೇಳುತ್ತಾನೆ:

﴿قُلۡ إِن كُنتُمۡ تُحِبُّونَ ٱللَّهَ فَٱتَّبِعُونِي يُحۡبِبۡكُمُ ٱللَّهُ وَيَغۡفِرۡ لَكُمۡ ذُنُوبَكُمۡ...﴾

ಹೇಳಿರಿ: “ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ... [ಆಲು-ಇಮ್ರಾನ್: 31] ಅವನು (ಅಲ್ಲಾಹು) ಹೇಳುತ್ತಾನೆ:

﴿فَلَا وَرَبِّكَ لَا يُؤۡمِنُونَ حَتَّىٰ يُحَكِّمُوكَ فِيمَا شَجَرَ بَيۡنَهُمۡ ثُمَّ لَا يَجِدُواْ فِيٓ أَنفُسِهِمۡ حَرَجٗا مِّمَّا قَضَيۡتَ وَيُسَلِّمُواْ تَسۡلِيمٗا65﴾

ಇಲ್ಲ, ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ಅವರು ತಮ್ಮ ನಡುವಿನ ಭಿನ್ನಮತಗಳಿಗೆ ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡಿ, ನಂತರ ನೀವು ನೀಡುವ ತೀರ್ಪನ್ನು ಯಾವುದೇ ಜಂಜಾಟವಿಲ್ಲದೆ ಸ್ವೀಕರಿಸಿ ಸಂಪೂರ್ಣ ವಿಧೇಯರಾಗುವ ತನಕ ಅವರು ಸತ್ಯವಿಶ್ವಾಸಿಗಳಾಗುವುದಿಲ್ಲ. [ಅನ್ನಿಸಾ: 65] ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ. ವಿವಾದಾತ್ಮಕ ವಿಷಯಗಳನ್ನು ಕುರ್‌ಆನ್ ಮತ್ತು ಸುನ್ನತ್‌ಗೆ ಹಿಂತಿರುಗಿಸುವುದು ಕಡ್ಡಾಯವಾಗಿದೆ ಮತ್ತು ಅವು ನೀಡುವ ತೀರ್ಪನ್ನು ಒಪ್ಪಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಇವು ಸ್ಪಷ್ಟವಾಗಿ ಹೇಳುತ್ತವೆ. ಅದೇ ರೀತಿ ಇದು ಸತ್ಯವಿಶ್ವಾಸದ ಅವಶ್ಯಕತೆಯಾಗಿದೆ, ದಾಸರಿಗೆ ಇಹಲೋಕ ಮತ್ತು ಪರಲೋಕದಲ್ಲಿ ಉತ್ತಮವಾಗಿದೆ, ಮತ್ತು ಅಂತಿಮ ಫಲಿತಾಂಶದ ದೃಷ್ಟಿಯಲ್ಲೂ ಅತ್ಯುತ್ತಮವಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತವೆ.

ಹಾಫಿಝ್ ಇಬ್ನ್ ರಜಬ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ತಮ್ಮ "ಲತಾಯಿಫುಲ್-ಮಆರಿಫ್" ಎಂಬ ಗ್ರಂಥದಲ್ಲಿ ಈ ವಿಷಯದ ಬಗ್ಗೆ – ಹಿಂದಿನ ಮಾತುಕತೆಯ ನಂತರ – ಹೀಗೆ ಹೇಳುತ್ತಾರೆ:

"ಶಅಬಾನ್‌ನ ಹದಿನೈದನೇ ರಾತ್ರಿಯನ್ನು ಖಾಲಿದ್ ಬಿನ್ ಮಅದಾನ್, ಮಕ್‌ಹೂಲ್, ಲುಖ್ಮಾನ್ ಬಿನ್ ಆಮಿರ್ ಮುಂತಾದ ಶಾಮ್‌ನ ತಾಬಿಯೀನ್‌ಗಳು ಗೌರವಿಸುತ್ತಿದ್ದರು ಮತ್ತು ಅದರಲ್ಲಿ ಆರಾಧನೆಗಳಲ್ಲಿ ತೊಡಗಿಕೊಳ್ಳಲು ಪರಿಶ್ರಮಿಸುತ್ತಿದ್ದರು. ಜನರು ಅದರ (ಆ ರಾತ್ರಿಯ) ಶ್ರೇಷ್ಠತೆ ಮತ್ತು ಗೌರವವನ್ನು ಅವರಿಂದಲೇ ಪಡೆದರು. ಹೀಗೆ ಹೇಳಲಾಗಿದೆ: ಈ ಬಗ್ಗೆ ಅವರಿಗೆ ಇಸ್ರೇಲಿ ವರದಿಗಳು ತಲುಪಿದ್ದವು. ಈ ವಿಷಯವು ಇವರಿಗೆ ನಗರಗಳಲ್ಲಿ ಪ್ರಸಿದ್ಧವಾದಾಗ, ಜನರು ಈ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದರು. ಕೆಲವರು ಅದನ್ನು ಅವರಿಂದ ಸ್ವೀಕರಿಸಿದರು ಮತ್ತು ಅದನ್ನು ಗೌರವಿಸುವುದರಲ್ಲಿ ಅವರೊಂದಿಗೆ ಸಹಮತ ವ್ಯಕ್ತಪಡಿಸಿದರು. ಅವರಲ್ಲಿ ಬಸ್ರಾದ ಮತ್ತು ಇತರ ಸ್ಥಳಗಳ ಕೆಲವು ಆರಾಧಕರೂ ಸೇರಿದ್ದರು. ಆದರೆ, ಅತಾ, ಇಬ್ನ್ ಅಬೀ ಮುಲೈಕಾ ಮುಂತಾದ ಹಿಜಾಝ್‌ನ (ಸೌದಿ ಅರೇಬಿಯಾದ ಪಶ್ಚಿಮ ಭಾಗ) ಹೆಚ್ಚಿನ ವಿದ್ವಾಂಸರು ಇದನ್ನು ಖಂಡಿಸಿದರು. ಅಬ್ದುರ್ರಹ್ಮಾನ್ ಬಿನ್ ಝೈದ್ ಬಿನ್ ಅಸ್ಲಮ್ ಇದನ್ನು ಮದೀನಾದ ಕರ್ಮಶಾಸ್ತ್ರಜ್ಞರಿಂದ ವರದಿ ಮಾಡಿದ್ದಾರೆ. ಇದು ಮಾಲಿಕ್ ಮದ್‌ಹಬ್‌ನ ಅನುಯಾಯಿಗಳು ಮತ್ತು ಇತರರ ಅಭಿಪ್ರಾಯವಾಗಿದೆ. ಅವರು ಇದೆಲ್ಲವೂ ಬಿದ್‌ಅತ್ ಎಂದು ಹೇಳಿದರು.

ಅದನ್ನು (ಆ ರಾತ್ರಿಯನ್ನು) ಹೇಗೆ ಜೀವಂತಗೊಳಿಸಬೇಕು ಎಂಬ ವಿಷಯದಲ್ಲಿ ಶಾಮ್‌ನ ವಿದ್ವಾಂಸರು ಎರಡು ಅಭಿಪ್ರಾಯಗಳನ್ನು ಹೊಂದಿದ್ದರು:

ಒಂದು: ಅದನ್ನು ಮಸೀದಿಗಳಲ್ಲಿ ಸಾಮೂಹಿಕವಾಗಿ ಜೀವಂತಗೊಳಿಸುವುದು ಅಪೇಕ್ಷಣೀಯವಾಗಿದೆ. ಖಾಲಿದ್ ಬಿನ್ ಮಅದಾನ್, ಲುಖ್ಮಾನ್ ಬಿನ್ ಆಮಿರ್ ಮುಂತಾದವರು ಆ ರಾತ್ರಿ ಅತ್ಯುತ್ತಮ ಬಟ್ಟೆಗಳನ್ನು ಧರಿಸುತ್ತಿದ್ದರು, ಸುಗಂಧ ದ್ರವ್ಯಗಳನ್ನು ಹಚ್ಚಿಕೊಳ್ಳುತ್ತಿದ್ದರು, ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುತ್ತಿದ್ದರು ಮತ್ತು ಮಸೀದಿಯಲ್ಲಿ ಆ ರಾತ್ರಿ ನಮಾಝ್ ನಿರ್ವಹಿಸುತ್ತಿದ್ದರು. ಇಸ್‌ಹಾಕ್ ಬಿನ್ ರಾಹವೈಹ್ ಈ ಬಗ್ಗೆ ಅವರೊಂದಿಗೆ ಸಹಮತದಲ್ಲಿದ್ದರು. ಆ ರಾತ್ರಿ ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸುವುದರ ಬಗ್ಗೆ ಅದು ಬಿದ್‌ಅತ್ ಅಲ್ಲ ಎಂದು ಅವರು ಹೇಳಿದರು. ಇದನ್ನು ಹರ್ಬ್ ಅಲ್-ಕಿರ್ಮಾನಿ ತಮ್ಮ 'ಮಸಾಯಿಲ್' ನಲ್ಲಿ ವರದಿ ಮಾಡಿದ್ದಾರೆ.

ಎರಡು: ಆ ರಾತ್ರಿಯಲ್ಲಿ ನಮಾಝ್, ಕಥೆ ಹೇಳುವುದು ಮತ್ತು ದುಆ (ಪ್ರಾರ್ಥನೆ) ಗಾಗಿ ಮಸೀದಿಗಳಲ್ಲಿ ಸೇರುವುದು ಅನಪೇಕ್ಷಣೀಯವಾಗಿದೆ. ಆದರೆ ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನೇ ನಮಾಝ್ ಮಾಡುವುದು ಅನಪೇಕ್ಷಣೀಯವಲ್ಲ. ಇದು ಶಾಮ್‌ನ ಇಮಾಮ್, ಫಕೀಹ್ ಮತ್ತು ವಿದ್ವಾಂಸರಾದ ಅಲ್-ಔಝಾಈಯವರ ಅಭಿಪ್ರಾಯವಾಗಿದೆ. ಅಲ್ಲಾಹು ಇಚ್ಛಿಸಿದರೆ ಇದು (ಸತ್ಯಕ್ಕೆ) ಹೆಚ್ಚು ಹತ್ತಿರದ ಅಭಿಪ್ರಾಯವಾಗಿದೆ." ನಂತರ ಅವರು ಹೇಳುತ್ತಾರೆ: "ಶಅಬಾನ್‌ನ ಹದಿನೈದನೇ ರಾತ್ರಿಯ ಬಗ್ಗೆ ಇಮಾಮ್ ಅಹ್ಮದ್ ರವರು ಏನಾದರೂ ಹೇಳಿದ್ದಾಗಿ ತಿಳಿದುಬಂದಿಲ್ಲ. ಅದರ ರಾತ್ರಿಯಲ್ಲಿ ನಮಾಝ್ ನಿರ್ವಹಿಸುವುದು ಅಪೇಕ್ಷಣೀಯವೇ ಎಂಬುದರ ಬಗ್ಗೆ, ಈದ್ ರಾತ್ರಿಗಳಲ್ಲಿ ನಮಾಝ್ ನಿರ್ವಹಿಸುವ ಬಗ್ಗೆ ಅವರಿಂದ ಬಂದಿರುವ ಎರಡು ವರದಿಗಳಿಂದ ಎರಡು ಅಭಿಪ್ರಾಯಗಳನ್ನು ತೆಗೆದುಕೊಳ್ಳಬಹುದು. ಅವರು (ಒಂದು ವರದಿಯಲ್ಲಿ) ಅದನ್ನು ಸಾಮೂಹಿಕವಾಗಿ ನಿರ್ವಹಿಸುವುದನ್ನು ಅಪೇಕ್ಷಣೀಯವೆಂದು ಪರಿಗಣಿಸಲಿಲ್ಲ. ಏಕೆಂದರೆ ಅದು ಪ್ರವಾದಿ (ಸ) ರಿಂದ ಮತ್ತು ಅವರ ಸಹಾಬಿಗಳಿಂದ ವರದಿಯಾಗಿಲ್ಲ. ಅವರು ಅದನ್ನು (ಇನ್ನೊಂದು ವರದಿಯಲ್ಲಿ) ಅಪೇಕ್ಷಣೀಯವೆಂದು ಪರಿಗಣಿಸಿದ್ದಾರೆ. ಅಬ್ದುರ್ರಹ್ಮಾನ್ ಬಿನ್ ಯಝೀದ್ ಬಿನ್ ಅಲ್-ಅಸ್ವದ್ ಅದನ್ನು ಮಾಡಿದ್ದರಿಂದ. ಅವರು ತಾಬಿಯೀನ್‌ಗಳಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಶಅಬಾನ್‌ನ ಹದಿನೈದನೇ ರಾತ್ರಿಯ ಇಬಾದತ್‌ನ ಬಗ್ಗೆ ಪ್ರವಾದಿ (ಸ) ರಿಂದ ಅಥವಾ ಅವರ ಸಹಾಬಿಗಳಿಂದ ಏನೂ ದೃಢಪಟ್ಟಿಲ್ಲ. ಆದರೆ ಶಾಮ್‌ನ ಪ್ರಮುಖ ಕರ್ಮಶಾಸ್ತ್ರಜ್ಞರಾದ ತಾಬಿಯೀನ್‌ಗಳ ಒಂದು ಗುಂಪಿನಿಂದ ಅದು ದೃಢಪಟ್ಟಿದೆ.

ಹಾಫಿಝ್ ಇಬ್ನ್ ರಜಬ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ರವರ ಮಾತಿನ ಉದ್ದೇಶಿತ ಭಾಗವು ಇಲ್ಲಿಗೆ ಕೊನೆಗೊಳ್ಳುತ್ತದೆ. ಪ್ರವಾದಿ (ಸ) ರಿಂದ ಅಥವಾ ಅವರ ಸಹಾಬಿಗಳಿಂದ (ರ) ಶಅಬಾನ್‌ನ ಹದಿನೈದನೇ ರಾತ್ರಿಯ ಬಗ್ಗೆ ಏನೂ ದೃಢಪಟ್ಟಿಲ್ಲ ಎಂದು ಅವರು ಇದರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಇನ್ನು ಆ ರಾತ್ರಿಯಲ್ಲಿ ನಮಾಝ್ ಮಾಡುವುದನ್ನು ಔಝಾಈ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ವ್ಯಕ್ತಿಗತವಾಗಿ ಅಪೇಕ್ಷಣೀಯವೆಂದು ಆಯ್ಕೆ ಮಾಡಿದ್ದು ಮತ್ತು ಹಾಫಿಝ್ ಇಬ್ನ್ ರಜಬ್ ಈ ಅಭಿಪ್ರಾಯವನ್ನು ಆಯ್ಕೆ ಮಾಡಿದ್ದು ವಿಚಿತ್ರ ಮತ್ತು ದುರ್ಬಲವಾಗಿದೆ. ಏಕೆಂದರೆ (ಧಾರ್ಮಿಕವಾಗಿ) ನಿಯಮಗೊಳಿಸಲ್ಪಟ್ಟಿದೆ ಎಂದು ಯಾವುದೆಲ್ಲ ಶರೀಅತ್‌ನ ಪುರಾವೆಗಳಿಂದ ದೃಢಪಟ್ಟಿಲ್ಲವೋ, ಅದನ್ನು ಮುಸ್ಲಿಮನು ಅಲ್ಲಾಹನ ಧರ್ಮದಲ್ಲಿ ಹೊಸದಾಗಿ ಸೇರಿಸುವುದು ಸಮ್ಮತಾರ್ಹವಲ್ಲ. ಅವನು ಅದನ್ನು ಏಕಾಂಗಿಯಾಗಿ ಮಾಡಿದರೂ ಅಥವಾ ಸಾಮೂಹಿಕವಾಗಿ ಮಾಡಿದರೂ, ಅವನು ಅದನ್ನು ರಹಸ್ಯವಾಗಿ ಮಾಡಿದರೂ ಅಥವಾ ಬಹಿರಂಗವಾಗಿ ಮಾಡಿದರೂ ಸಹ. ಇದಕ್ಕೆ ಆಧಾರ ಪ್ರವಾದಿ (ಸ) ರವರ ಈ ಸಾರ್ವತ್ರಿಕ ವಚನ:

«مَنْ عَمِلَ عَمَلًا لَيْسَ عَلَيهِ أَمْرُنَا؛ فَهُوَ رَدٌّ».

"ಯಾರು ನಮ್ಮ ಆದೇಶವಿಲ್ಲದ ಒಂದು ಕಾರ್ಯವನ್ನು ಮಾಡುತ್ತಾರೋ, ಅದು ತಿರಸ್ಕೃತವಾಗಿದೆ." ಹಾಗೆಯೇ, ಬಿದ್‌ಅತ್‌ಗಳನ್ನು ಖಂಡಿಸುವ ಮತ್ತು ಅವುಗಳ ಬಗ್ಗೆ ಎಚ್ಚರಿಸುವ ಇತರ ಪುರಾವೆಗಳು ಇದಕ್ಕೆ ಆಧಾರವಾಗಿವೆ.

ಇಮಾಮ್ ಅಬೂ ಬಕರ್ ಅತ್ತರ್ತೂಶಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ತಮ್ಮ "ಅಲ್-ಹವಾದಿಸ್ ವಲ್-ಬಿದಅ್" ಎಂಬ ಗ್ರಂಥದಲ್ಲಿ ಹೇಳುತ್ತಾರೆ:

"ಇಬ್ನ್ ವದ್ದಾಹ್ ರವರು ಝೈದ್ ಬಿನ್ ಅಸ್ಲಮ್ ರಿಂದ ವರದಿ. ಅವರು ಹೇಳಿದರು: 'ನಮ್ಮ ಯಾವುದೇ ಗುರುವರ್ಯರು ಅಥವಾ ಕರ್ಮಶಾಸ್ತ್ರ ವಿದ್ವಾಂಸರು ಶಅಬಾನ್‌ನ ಹದಿನೈದನೇ ರಾತ್ರಿಗೆ ಗಮನ ಕೊಡುತ್ತಿದ್ದದ್ದು, ಅಥವಾ ಮಕ್‌ಹೂಲ್ ರವರ ಹದೀಸ್‌ಗೆ ಗಮನ ಕೊಡುತ್ತಿದ್ದದ್ದು, ಅಥವಾ ಅದಕ್ಕೆ ಇತರ ರಾತ್ರಿಗಳಿಗಿಂತ ಹೆಚ್ಚಿನ ಶ್ರೇಷ್ಠತೆಯನ್ನು ನೀಡುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿಲ್ಲ.'

ಇಬ್ನ್ ಅಬೀ ಮುಲೈಕಾರೊಂದಿಗೆ ಹೇಳಲಾಯಿತು: ಝಿಯಾದ್ ಅನ್ನುಮೈರಿ ಹೇಳುತ್ತಾರೆ: 'ಶಅಬಾನ್‌ನ ಹದಿನೈದನೇ ರಾತ್ರಿಯ ಪ್ರತಿಫಲವು ಲೈಲತುಲ್ ಖದ್ರ್ ನ ಪ್ರತಿಫಲದಂತಿದೆ.' ಅವರು ಹೇಳಿದರು: 'ಅವನು ಹೀಗೆ ಹೇಳುವುದನ್ನು ನಾನು ಕೇಳುತ್ತಿದ್ದರೆ, ಮತ್ತು ನನ್ನ ಕೈಯಲ್ಲಿ ಕೋಲು ಇದ್ದಿದ್ದರೆ, ನಾನು ಅವನಿಗೆ ಹೊಡೆಯುತ್ತಿದ್ದೆ.' ಝಿಯಾದ್ ಕಥೆಗಾರನಾಗಿದ್ದರು." ಉದ್ದೇಶಿತ ಭಾಗವು ಇಲ್ಲಿಗೆ ಕೊನೆಗೊಳ್ಳುತ್ತದೆ.

ಅಲ್ಲಾಮಾ ಅಶ್ಶೌಕಾನಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ತಮ್ಮ "ಅಲ್-ಫವಾಇದುಲ್-ಮಜ್ಮೂಆ" ಎಂಬ ಗ್ರಂಥದಲ್ಲಿ ಹೇಳುತ್ತಾರೆ:

"'ಓ ಅಲಿ, ಯಾರು ಶಅಬಾನ್‌ನ ಹದಿನೈದನೇ ರಾತ್ರಿ, ಪ್ರತಿ ರಕಅತ್‌ನಲ್ಲಿ ಫಾತಿಹ ಮತ್ತು ಕುಲ್ ಹುವಲ್ಲಾಹು ಅಹದ್ (ಸೂರಾ ಇಖ್ಲಾಸ್) ಹತ್ತು ಬಾರಿ ಓದುತ್ತಾ, ನೂರು ರಕಅತ್ ನಮಾಝ್ ಮಾಡುತ್ತಾನೋ, ಅಲ್ಲಾಹು ಅವನ ಎಲ್ಲಾ ಬಯಕೆಗಳನ್ನು ನೆರವೇರಿಸುತ್ತಾನೆ.' ಎಂಬ ಹದೀಸ್. ಇದು ಕಟ್ಟುಕಥೆಯಾಗಿದೆ. ಹೀಗೆ ಮಾಡುವವನಿಗೆ ಸಿಗುವ ಪ್ರತಿಫಲದ ಬಗ್ಗೆ ಇದರ ಪದಗಳಲ್ಲಿ ಸ್ಪಷ್ಟವಾಗಿ ಹೇಳಿರುವುದನ್ನು ನೋಡಿದರೆ, ವಿವೇಚನೆಯುಳ್ಳ ಯಾವುದೇ ವ್ಯಕ್ತಿಗೂ ಅದು ಕಟ್ಟುಕಥೆಯೆಂಬ ಬಗ್ಗೆ ಯಾವುದೇ ಸಂದೇಹವಿರಲಾರದು. ಇದರ ವರದಿಗಾರರು ಅಜ್ಞಾತರಾಗಿದ್ದಾರೆ. ಇದು ಎರಡನೇ ಮತ್ತು ಮೂರನೇ ಸನದ್‌ಗಳಿಂದಲೂ ವರದಿಯಾಗಿದ್ದು, ಅವೆಲ್ಲವೂ ಕಟ್ಟುಕಥೆಗಳಾಗಿವೆ ಮತ್ತು ಅವುಗಳ ವರದಿಗಾರರೆಲ್ಲರೂ ಅಜ್ಞಾತರಾಗಿದ್ದಾರೆ. ಅವರು 'ಅಲ್-ಮುಖ್ತಸರ್' ನಲ್ಲಿ ಹೀಗೆ ಹೇಳಿದ್ದಾರೆ: "ಶಅಬಾನ್‌ನ ಹದಿನೈದನೇ ರಾತ್ರಿಯ ನಮಾಝ್‌ನ ಕುರಿತಾದ ಹದೀಸ್ ಸುಳ್ಳಾಗಿದೆ. ಇಬ್ನ್ ಹಿಬ್ಬಾನ್ ರವರು ಅಲಿ (ರ) ರಿಂದ ವರದಿ ಮಾಡಿದ: 'ಶಅಬಾನ್‌ನ ಹದಿನೈದನೇ ರಾತ್ರಿ ಬಂದಾಗ, ಅದರ ರಾತ್ರಿಯಲ್ಲಿ ನಮಾಝ್ ಮಾಡಿರಿ ಮತ್ತು ಅದರ ಹಗಲಿನಲ್ಲಿ ಉಪವಾಸ ಮಾಡಿರಿ' ಎಂಬ ಹದೀಸ್ ದುರ್ಬಲವಾಗಿದೆ." ಅವರು 'ಅಲ್ಲಆಲಿ' ನಲ್ಲಿ ಹೀಗೆ ಹೇಳಿದ್ದಾರೆ: "ಶಅಬಾನ್‌ ಹದಿನೈದರಲ್ಲಿ ಸೂರ ಇಖ್ಲಾಸ್‌ ಹತ್ತು ಬಾರಿ ಪಠಿಸುವ ಮೂಲಕ ನೂರು ರಕಅತ್ ನಮಾಝ್ ಮಾಡಬೇಕೆಂದು ಹೇಳುವ ಹದೀಸ್ ಅದರ ದೀರ್ಘತೆಯ ಶ್ರೇಷ್ಠತೆಯೊಂದಿಗೆ, ದೈಲಮಿ ಮತ್ತು ಇತರರಿಂದ ವರದಿಯಾಗಿದ್ದು, ಇದು ಕಟ್ಟುಕಥೆಯಾಗಿದೆ. ಮೂರೂ ಸನದ್‌ಗಳಲ್ಲಿರುವ ಹೆಚ್ಚಿನ ವರದಿಗಾರರು ಅಜ್ಞಾತರು ಮತ್ತು ದುರ್ಬಲರಾಗಿದ್ದಾರೆ." ಅವರು ಹೇಳುತ್ತಾರೆ: "ಸೂರ ಇಖ್ಲಾಸ್‌ ಮೂವತ್ತು ಬಾರಿ ಪಠಿಸುವುದರೊಂದಿಗೆ ಹನ್ನೆರಡು ರಕಅತ್ ನಮಾಝ್ ನಿರ್ವಹಿಸಬೇಕು ಎಂದು ಹೇಳುವ ಹದೀಸ್ ಕಟ್ಟುಕಥೆಯಾಗಿದೆ. 'ಹದಿನಾಲ್ಕು ರಕಅತ್' ಎಂದು ಹೇಳುವ ಹದೀಸ್ ಕೂಡ ಕಟ್ಟುಕಥೆಯಾಗಿದೆ.

ಈ ಹದೀಸ್‌ನಿಂದ 'ಇಹ್ಯಾ' (ಇಹ್ಯಾವು ಉಲೂಮಿದ್ದೀನ್) ಗ್ರಂಥದ ಲೇಖಕರು ಸೇರಿದಂತೆ ಹಲವಾರು ಕರ್ಮಶಾಸ್ತ್ರ ವಿದ್ವಾಂಸರು ಮೋಸ ಹೋಗಿದ್ದಾರೆ. ಹಾಗೆಯೇ ಕೆಲವು ಮುಫಸ್ಸಿರ್‌ಗಳು (ಕುರ್‌ಆನ್ ವ್ಯಾಖ್ಯಾನಕಾರರು) ಕೂಡ. ಈ ರಾತ್ರಿಯ – ಅಂದರೆ ಶಅಬಾನ್‌ನ ಹದಿನೈದನೇ ರಾತ್ರಿಯ – ನಮಾಝನ್ನು ವಿವಿಧ ರೀತಿಗಳಲ್ಲಿ ವರದಿ ಮಾಡಲಾಗಿದ್ದು, ಅವೆಲ್ಲವೂ ಸುಳ್ಳು ಮತ್ತು ಕಟ್ಟುಕಥೆಗಳಾಗಿವೆ. ಆದರೆ, ಇದು ತಿರ್ಮಿಝಿ ಆಯಿಶಾ (ರ) ರಿಂದ ವರದಿ ಮಾಡಿದ ಹದೀಸ್‌ಗೆ – ಅಂದರೆ, ಪ್ರವಾದಿ (ಸ) ರವರು ಬಕೀಅ್‌ಗೆ ಹೋಗಿದ್ದು, ಮತ್ತು ಹದಿನೈದನೇ ರಾತ್ರಿ ಅಲ್ಲಾಹು ಇಹಲೋಕದ ಆಕಾಶಕ್ಕೆ ಇಳಿಯುವುದು, ಮತ್ತು ಅವನು ಕಲ್ಬ್ ಬುಡಕಟ್ಟಿನ ಕುರಿಗಳ ಕೂದಲಿಗಿಂತ ಹೆಚ್ಚು ಜನರನ್ನು ಕ್ಷಮಿಸುವುದು – ಎಂದು ಹೇಳುವ ಹದೀಸ್‌ಗೆ ವಿರುದ್ಧವಾಗಿಲ್ಲ. ಏಕೆಂದರೆ ನಾವು ಇಲ್ಲಿ ಮಾತನಾಡುತ್ತಿರುವುದು ಈ ರಾತ್ರಿಯಲ್ಲಿ ನಿರ್ವಹಿಸುವ ಈ ನಿರ್ಮಿತ ನಮಾಝ್‌ನ ಬಗ್ಗೆ ಮಾತ್ರವಾಗಿದೆ. ಇದಲ್ಲದೆ, ಆಯಿಶಾ(ರ) ರವರ ಈ ಹದೀಸ್‌ನ ಸನದ್‌ನಲ್ಲೂ ದೌರ್ಬಲ್ಯ ಮತ್ತು ಸಂಪರ್ಕ ಕಡಿತವಿದೆ. ಹಾಗೆಯೇ ಆ ರಾತ್ರಿಯಲ್ಲಿ ನಮಾಝ್ ಮಾಡುವ ಬಗ್ಗೆ ಈ ಹಿಂದೆ ಉಲ್ಲೇಖಿಸಲಾದ ಅಲಿ ಅವರ ಹದೀಸ್, ನಾವು ಉಲ್ಲೇಖಿಸಿದಂತೆ ಅದರಲ್ಲಿ ದೌರ್ಬಲ್ಯವಿರುವ ಹೊರತಾಗಿಯೂ ಈ ನಮಾಝ್ ಕಟ್ಟುಕಥೆಯಾಗಿರುವುದಕ್ಕೆ ವಿರುದ್ಧವಾಗಿಲ್ಲ." ಉದ್ದೇಶಿತ ಭಾಗ ಇಲ್ಲಿಗೆ ಕೊನೆಗೊಳ್ಳುತ್ತದೆ.

ಹಾಫಿಝ್ ಅಲ್-ಇರಾಕಿ ಹೇಳಿದ್ದಾರೆ: "ಹದಿನೈದನೇ ರಾತ್ರಿಯ ನಮಾಝ್‌ನ ಹದೀಸ್ ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಹೊರಿಸಲಾದ ಕಟ್ಟುಕಥೆ ಮತ್ತು ಅವರ ಹೆಸರಲ್ಲಿ ಹೇಳಿದ ಸುಳ್ಳಾಗಿದೆ. ಇಮಾಮ್ ಅನ್ನವವಿ "ಅಲ್-ಮಜ್ಮೂಅ್" ಎಂಬ ಗ್ರಂಥದಲ್ಲಿ ಹೇಳಿದ್ದಾರೆ: "ಸಲಾತು

ರ್ರಗಾಯಿಬ್ ಎಂದು ಕರೆಯಲ್ಪಡುವ, ರಜಬ್ ತಿಂಗಳ ಮೊದಲ ಶುಕ್ರವಾರದ ರಾತ್ರಿ ಮಗ್ರಿಬ್ ಮತ್ತು ಇಶಾ ನಡುವೆ ನಿರ್ವಹಿಸಲಾಗುವ ಹನ್ನೆರಡು ರಕಅತ್ ನಮಾಝ್, ಮತ್ತು ಶಅಬಾನ್‌ನ ಹದಿನೈದನೇ ರಾತ್ರಿಯ ನೂರು ರಕಅತ್ ನಮಾಝ್ – ಈ ಎರಡು ನಮಾಝ್‌ಗಳು ನಿಷಿದ್ಧ ಬಿದ್‌ಅತ್‌ಗಳಾಗಿವೆ. 'ಕೂತುಲ್-ಕುಲೂಬ್' ಮತ್ತು 'ಇಹ್ಯಾವು ಉಲೂಮಿದ್ದೀನ್' ಗ್ರಂಥಗಳಲ್ಲಿ ಅವುಗಳನ್ನು ಉಲ್ಲೇಖಿಸಿರುವುದನ್ನು ಕಂಡು ಮೋಸಹೋಗಬೇಡಿ, ಅಥವಾ ಅವುಗಳಲ್ಲಿ ಉಲ್ಲೇಖಿಸಲಾದ ಹದೀಸ್‌ಗಳಿಂದಲೂ ಮೋಸಹೋಗಬೇಡಿ. ಏಕೆಂದರೆ ಅದೆಲ್ಲವೂ ಸುಳ್ಳಾಗಿವೆ. ಕೆಲವು ಇಮಾಮ್‌ಗಳು ಅವುಗಳ ಬಗ್ಗೆ ಗೊಂದಲಕ್ಕೊಳಗಾಗಿ ಅವುಗಳನ್ನು ಅಪೇಕ್ಷಣೀಯವೆಂದು ಹೇಳುತ್ತಾ ಕೆಲವು ಕೃತಿಗಳನ್ನು ರಚಿಸಿರುವುದನ್ನು ಕಂಡು ಮೋಸಹೋಗಬೇಡಿ. ಏಕೆಂದರೆ ಅವರು ಈ ಬಗ್ಗೆ ತಪ್ಪಾಗಿ ಭಾವಿಸಿದ್ದಾರೆ."

ಅಶ್ಶೈಖ್ ಅಲ್-ಇಮಾಮ್ ಅಬೂ ಮುಹಮ್ಮದ್ ಅಬ್ದುರ್ರಹ್ಮಾನ್ ಬಿನ್ ಇಸ್ಮಾಯಿಲ್ ಅಲ್-ಮಖ್ದಿಸಿ ಇವುಗಳನ್ನು ನಿರಾಕರಿಸುವ ಬಗ್ಗೆ ಒಂದು ಅಮೂಲ್ಯವಾದ ಗ್ರಂಥವನ್ನು ರಚಿಸಿದ್ದಾರೆ. ಅವರು ಅದರಲ್ಲಿ ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ವಿಷಯವನ್ನು ಮಂಡಿಸಿದ್ದಾರೆ. ಈ ವಿಷಯದಲ್ಲಿ ವಿದ್ವಾಂಸರ ಮಾತುಗಳು ಬಹಳಷ್ಟಿವೆ. ಈ ವಿಷಯದಲ್ಲಿ ನಾವು ತಿಳಿದಿರುವ ಎಲ್ಲಾ ಮಾತುಗಳನ್ನು ನಾವು ಉಲ್ಲೇಖಿಸುತ್ತಾ ಹೋದರೆ, ಮಾತು ದೀರ್ಘವಾಗಿ ಬಿಡಬಹುದು. ಸತ್ಯಾನ್ವೇಷಿಗಳಿಗೆ ನಾವು ಉಲ್ಲೇಖಿಸಿರುವುದು ಧಾರಾಳ ಸಾಕಾಗುತ್ತದೆ ಮತ್ತು ಅವರಿಗೆ ಮನವರಿಕೆ ಮಾಡುತ್ತದೆ ಎಂದು ಭಾವಿಸುತ್ತೇವೆ.

ಮೇಲೆ ತಿಳಿಸಿದ ಕುರ್‌ಆನ್ ವಚನಗಳು, ಹದೀಸ್‌ಗಳು ಮತ್ತು ವಿದ್ವಾಂಸರ ಮಾತುಗಳಿಂದ ಸತ್ಯಾನ್ವೇಷಕನಿಗೆ ಸ್ಪಷ್ಟವಾಗುವುದೇನೆಂದರೆ, ಶಅಬಾನ್‌ನ ಹದಿನೈದನೇ ರಾತ್ರಿಯನ್ನು ನಮಾಝ್ ಅಥವಾ ಇತರ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸುವುದು ಮತ್ತು ಅದರ ಹಗಲನ್ನು ಉಪವಾಸಕ್ಕಾಗಿ ವಿಶೇಷಗೊಳಿಸುವುದು, ಹೆಚ್ಚಿನ ವಿದ್ವಾಂಸರ ಪ್ರಕಾರ ನಿಷಿದ್ಧ ಬಿದ್‌ಅತ್ ಆಗಿದೆ. ಇದಕ್ಕೆ ಪವಿತ್ರ ಶರೀಅತ್‌ನಲ್ಲಿ ಯಾವುದೇ ಆಧಾರವಿಲ್ಲ. ಬದಲಿಗೆ ಇದು ಸಹಾಬಿಗಳ (ರ) ಕಾಲಾನಂತರ ಇಸ್ಲಾಂನಲ್ಲಿ ಸೃಷ್ಟಿಯಾದ ಹೊಸ ವಿಷಯಗಳಲ್ಲಿ ಒಂದಾಗಿದೆ. ಈ ವಿಷಯದಲ್ಲಿ ಮತ್ತು ಇತರ ವಿಷಯಗಳಲ್ಲಿ ಸತ್ಯವನ್ನು ಹುಡುಕುವವನಿಗೆ ಅಲ್ಲಾಹನ ಈ ವಚನ ಧಾರಾಳ ಸಾಕು:

﴿...ٱلۡيَوۡمَ أَكۡمَلۡتُ لَكُمۡ دِينَكُمۡ...﴾

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. [ಅಲ್-ಮಾಇದಾ: 3] ಹಾಗೆಯೇ ಅದರ ಅರ್ಥದಲ್ಲಿ ಬಂದಿರುವ ಇತರ ವಚನಗಳು, ಮತ್ತು ಪ್ರವಾದಿ (ಸ) ರವರ ಈ ಮಾತು:

«مَنْ أَحْدَثَ فِي أَمْرِنَا هَذَا مَا لَيْسَ مِنْهُ فَهُوَ رَدٌّ».

"ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸುತ್ತಾರೋ, ಅದು ತಿರಸ್ಕೃತವಾಗಿದೆ." ಮತ್ತು ಇದೇ ಅರ್ಥದಲ್ಲಿ ಬಂದಿರುವ ಇತರ ಹದೀಸ್‌ಗಳು (ಧಾರಾಳ ಸಾಕು).

ಸಹೀಹ್ ಮುಸ್ಲಿಂನಲ್ಲಿ ಅಬೂ ಹುರೈರಾ (ರ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

«لَا تَخُصُّوا لَيْلَةَ الْجُمُعَةِ بِقِيَامٍ مِنْ بَيْنِ اللَّيَالِي، وَلَا تَخُصُّوا يَوْمَهَا بِالصِّيَامِ مِنْ بَيْنِ الْأَيَّامِ، إِلَّا أَنْ يَكُونَ فِي صَوْمٍ يَصُومُهُ أَحَدُكُمْ».

"ರಾತ್ರಿಗಳಲ್ಲಿ ಶುಕ್ರವಾರದ ರಾತ್ರಿಯನ್ನು ನಿರ್ವಹಿಸುವುದಕ್ಕಾಗಿ ವಿಶೇಷಗೊಳಿಸಬೇಡಿ, ಮತ್ತು ದಿನಗಳಲ್ಲಿ ಅದರ ದಿನವನ್ನು ಉಪವಾಸಕ್ಕಾಗಿ ವಿಶೇಷಗೊಳಿಸಬೇಡಿ. ನಿಮ್ಮಲ್ಲಿ ಯಾರಾದರೂ ಸಾಮಾನ್ಯವಾಗಿ ಉಪವಾಸ ಆಚರಿಸುತ್ತಾ ಬಂದಿದ್ದರೆ ಹೊರತು." ಒಂದು ವೇಳೆ ಯಾವುದೇ ರಾತ್ರಿಗಳನ್ನು ಯಾವುದೇ ಇಬಾದತ್‌ಗಾಗಿ ವಿಶೇಷಗೊಳಿಸುವುದು ಅನುಮತಿಸಲಾಗಿರುತ್ತಿದ್ದರೆ, ಅದಕ್ಕೆ ಇತರ ರಾತ್ರಿಗಳಿಗಿಂತ ಶುಕ್ರವಾರದ ರಾತ್ರಿ ಹೆಚ್ಚು ಅರ್ಹವಾಗಿರುತ್ತಿತ್ತು. ಏಕೆಂದರೆ ಅದರ ದಿನವು ಸೂರ್ಯನು ಉದಯಿಸಿದ ದಿನಗಳಲ್ಲಿ ಅತ್ಯುತ್ತಮ ದಿನವಾಗಿದೆ. ಅಲ್ಲಾಹನ ಸಂದೇಶವಾಹಕರಿಂದ (ಸ) ಬಂದಿರುವ ಸಹೀಹ್ ಹದೀಸ್‌ಗಳು ಇದನ್ನು ಸ್ಪಷ್ಟವಾಗಿ ಹೇಳಿದೆ. ರಾತ್ರಿಗಳಲ್ಲಿ ಶುಕ್ರವಾದರ ರಾತ್ರಿಯನ್ನು ನಮಾಝ್ ನಿರ್ವಹಿಸುವುದಕ್ಕಾಗಿ ವಿಶೇಷಗೊಳಿಸುವುದರ ಬಗ್ಗೆ ಪ್ರವಾದಿ (ಸ) ರವರು ಎಚ್ಚರಿಸಿರುವಾಗ, ಇತರ ರಾತ್ರಿಗಳು ಈ ಎಚ್ಚರಿಕೆಗೆ ಹೆಚ್ಚು ಅರ್ಹವಾಗುತ್ತವೆ ಮತ್ತು ರಾತ್ರಿಗಳಲ್ಲಿ ಯಾವುದನ್ನೂ ಯಾವುದೇ ಇಬಾದತ್‌ಗಾಗಿ ವಿಶೇಷಗೊಳಿಸುವುದು ಅನುಮತಿಸಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ವಿಶೇಷಗೊಳಿಸಲು ಪ್ರಬಲವಾದ ಯಾವುದೇ ಪುರಾವೆಯಿರುವ ಹೊರತು.

ಲೈಲತುಲ್ ಖದ್ರ್ ಮತ್ತು ರಮಝಾನ್ ತಿಂಗಳ ರಾತ್ರಿಗಳಲ್ಲಿ ನಮಾಝ್ ನಿರ್ವಹಿಸುವುದು ಮತ್ತು ಅವುಗಳಲ್ಲಿ (ಆರಾಧನೆಗಳನ್ನು ಮಾಡಲು) ಪರಿಶ್ರಮಿಸುವುದು ನಿಯಮಗೊಳಿಸಲಾಗಿರುವುದರಿಂದ, ಪ್ರವಾದಿ (ಸ) ರವರು ಅದರ ಬಗ್ಗೆ ಗಮನ ಸೆಳೆದರು, ಆ ರಾತ್ರಿಗಳಲ್ಲಿ ನಮಾಝ್ ಮಾಡಲು ಸಮುದಾಯವನ್ನು ಪ್ರೇರೇಪಿಸಿದರು, ಮತ್ತು ತಾವೇ ಸ್ವತಃ ಅದನ್ನು ಮಾಡಿ ತೋರಿಸಿದರು. ಬುಖಾರಿ ಮತ್ತು ಮುಸ್ಲಿಮ್‌ನಲ್ಲಿ ಪ್ರವಾದಿ (ಸ) ರಿಂದ ವರದಿ. ಅವರು ಹೇಳಿದರು:

«مَنْ قَامَ رَمَضَانَ إِيمَانًا وَاحْتِسَابًا، غُفِرَ لَهُ مَا تَقَدَّمَ مِنْ ذَنْبِهِ، وَمَنْ قَامَ لَيْلَةَ الْقَدْرِ إِيمَانًا وَاحْتِسَابًا، غُفِرَ لَهُ مَا تَقَدَّمَ مِنْ ذَنْبِهِ».

"ಯಾರು ರಮಝಾನ್‌ನಲ್ಲಿ ಈಮಾನ್‌ನೊಂದಿಗೆ ಮತ್ತು ಪ್ರತಿಫಲವನ್ನು ನಿರೀಕ್ಷಿಸಿ ನಮಾಝ್ ನಿರ್ವಹಿಸುತ್ತಾರೋ, ಅವರ ಹಿಂದಿನ ಪಾಪಗಳು ಕ್ಷಮಿಸಲ್ಪಡುತ್ತವೆ. ಮತ್ತು ಯಾರು ಲೈಲತುಲ್ ಖದ್ರ್‌ನಲ್ಲಿ ಈಮಾನ್‌ನೊಂದಿಗೆ ಮತ್ತು ಪ್ರತಿಫಲವನ್ನು ನಿರೀಕ್ಷಿಸಿ ನಮಾಝ್ ನಿರ್ವಹಿಸುತ್ತಾರೋ, ಅವರ ಹಿಂದಿನ ಪಾಪಗಳು ಕ್ಷಮಿಸಲ್ಪಡುತ್ತವೆ." ಒಂದು ವೇಳೆ ಶಅಬಾನ್‌ನ ಹದಿನೈದನೇ ರಾತ್ರಿ, ಅಥವಾ ರಜಬ್‌ನ ಮೊದಲ ಶುಕ್ರವಾರದ ರಾತ್ರಿ ಅಥವಾ ಇಸ್ರಾ ಮತ್ತು ಮಿಅರಾಜ್ ರಾತ್ರಿಯನ್ನು ಆಚರಣೆ ಅಥವಾ ಯಾವುದೇ ಇಬಾದತ್‌ಗಾಗಿ ವಿಶೇಷಗೊಳಿಸುವುದು ನಿಯಮಗೊಳಿಸಲಾಗಿರುತ್ತಿದ್ದರೆ, ಪ್ರವಾದಿ (ಸ) ರವರು ಅದರ ಬಗ್ಗೆ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿದ್ದರು, ಅಥವಾ ತಾವೇ ಅದನ್ನು ಮಾಡಿ ತೋರಿಸುತ್ತಿದ್ದರು. ಒಂದು ವೇಳೆ ಅಂತಹದ್ದು ಏನಾದರೂ ಸಂಭವಿಸಿದ್ದರೆ, ಸಹಾಬಿಗಳು (ರ) ಅದನ್ನು ಸಮುದಾಯಕ್ಕೆ ತಲುಪಿಸುತ್ತಿದ್ದರು. ಅವರು ಅದನ್ನು ಸಮುದಾಯದಿಂದ ಬಚ್ಚಿಡುತ್ತಿರಲಿಲ್ಲ. ಅವರು ಪ್ರವಾದಿಗಳ (ಅವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ಇರಲಿ) ನಂತರ ಅತ್ಯುತ್ತಮ ಜನರು ಮತ್ತು ಅತ್ಯುತ್ತಮ ಹಿತಚಿಂತಕರಾಗಿದ್ದಾರೆ. ಅಲ್ಲಾಹನ ಸಂದೇಶವಾಹಕರ (ಸ) ಸಹಾಬಿಗಳ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ ಮತ್ತು ಅವರು ಕೂಡ ಸಂಪ್ರೀತರಾಗುವಂತೆ ಮಾಡಲಿ.

ವಿದ್ವಾಂಸರ ಮಾತುಗಳಿಂದ ನೀವು ಈ ಹಿಂದೆ ತಿಳಿದುಕೊಂಡಂತೆ, ರಜಬ್‌ನ ಮೊದಲ ಶುಕ್ರವಾರದ ರಾತ್ರಿಯ ಶ್ರೇಷ್ಠತೆಯ ಬಗ್ಗೆ ಅಥವಾ ಶಅಬಾನ್‌ನ ಹದಿನೈದನೇ ರಾತ್ರಿಯ ಬಗ್ಗೆ ಅಲ್ಲಾಹನ ಸಂದೇಶವಾಹಕರಿಂದ (ಸ) ಅಥವಾ ಅವರ ಸಹಾಬಿಗಳಿಂದ (ರ) ಏನೂ ದೃಢಪಟ್ಟಿಲ್ಲ. ಆದ್ದರಿಂದ, ಅವೆರಡನ್ನೂ ಆಚರಿಸುವುದು ಇಸ್ಲಾಂನಲ್ಲಿ ಹೊಸದಾಗಿ ಸೃಷ್ಟಿಸಲಾದ ಬಿದ್‌ಅತ್ ಎಂದು ತಿಳಿಯುತ್ತದೆ. ಹಾಗೆಯೇ, ಅವುಗಳನ್ನು ಯಾವುದೇ ಇಬಾದತ್‌ಗಾಗಿ ವಿಶೇಷಗೊಳಿಸುವುದು ನಿಷಿದ್ಧ ಬಿದ್‌ಅತ್ ಆಗಿದೆ. ಹಾಗೆಯೇ, ಕೆಲವರು ಇಸ್ರಾ ಮತ್ತು ಮಿಅರಾಜ್ ರಾತ್ರಿ ಎಂದು ನಂಬುವ ರಜಬ್‌ ತಿಂಗಳ ಇಪ್ಪತ್ತೇಳನೇ ರಾತ್ರಿ. ಅದನ್ನು ಯಾವುದೇ ಇಬಾದತ್‌ಗಾಗಿ ವಿಶೇಷಗೊಳಿಸುವುದು ಅನುಮತಿಸಲಾಗಿಲ್ಲ. ಹಾಗೆಯೇ ಈ ಹಿಂದೆ ಉಲ್ಲೇಖಿಸಿದ ಪುರಾವೆಗಳಿಂದಾಗಿ, ಅದನ್ನು ಆಚರಿಸುವುದೂ ಅನುಮತಿಸಲಾಗಿಲ್ಲ. ಇದು ಒಂದು ವೇಳೆ (ಆ ರಾತ್ರಿ ಇಸ್ರಾ ಮತ್ತು ಮಿಅರಾಜ್‌ನ ರಾತ್ರಿಯೆಂದು) ತಿಳಿದಿದ್ದರೆ ಮಾತ್ರ. ಇನ್ನು ವಿದ್ವಾಂಸರ ಪ್ರಬಲ ಅಭಿಪ್ರಾಯಗಳ ಪ್ರಕಾರ ಅದು ಆ ರಾತ್ರಿಯೆಂದು ತಿಳಿದಿಲ್ಲದಿರುವಾಗ ಅದರ ಸ್ಥಿತಿ ಏನಾಗಿರಬಹುದು? ಅದು (ಇಸ್ರಾ ಮತ್ತು ಮಿಅರಾಜ್) ರಜಬ್‌ ತಿಂಗಳ ಇಪ್ಪತ್ತೇಳನೇ ರಾತ್ರಿ ಎಂದು ಹೇಳುವವರ ಮಾತು, ಸಹೀಹ್ ಹದೀಸ್‌ಗಳಲ್ಲಿ ಯಾವುದೇ ಆಧಾರವಿಲ್ಲದ ಸುಳ್ಳು ಮಾತಾಗಿದೆ. ಈ ಕೆಳಗಿನ ಮಾತನ್ನು ಹೇಳಿದವರು ಚೆನ್ನಾಗಿ ಹೇಳಿದ್ದಾರೆ:

"ಕಾರ್ಯಗಳಲ್ಲಿ ಅತ್ಯುತ್ತಮವಾದುದು ಮಾರ್ಗದರ್ಶನದ ಮೇಲೆ ಗತಿಸಿ ಹೋಗಿರುವ ಕಾರ್ಯಗಳಾಗಿವೆ... ಮತ್ತು ಕಾರ್ಯಗಳಲ್ಲಿ ಅತ್ಯಂತ ಕೆಟ್ಟದು ಹೊಸದಾಗಿ ಸೃಷ್ಟಿಸಲಾದ ಬಿದ್‌ಅತ್‌ಗಳಾಗಿವೆ."

ನಮಗೂ ಮತ್ತು ಎಲ್ಲಾ ಮುಸ್ಲಿಮರಿಗೂ ಧರ್ಮದಲ್ಲಿ ತಿಳುವಳಿಕೆ ನೀಡಲು, ಅದರಲ್ಲಿ ಸ್ಥಿರತೆಯನ್ನು ನೀಡಲು, ಮತ್ತು ಎಲ್ಲರಿಗೂ ಸುನ್ನತ್ ಅನ್ನು ಅನುಸರಿಸುವ ಹಾಗೂ ಬಿದ್‌ಅತ್‌ನಿಂದ ದೂರವಿರುವ ಅನುಗ್ರಹವನ್ನು ನೀಡಲು ನಾವು ಅಲ್ಲಾಹನಲ್ಲಿ ಬೇಡುತ್ತೇವೆ. ನಿಶ್ಚಯವಾಗಿಯೂ ಅವನು ಉದಾರನು ಮತ್ತು ಕರುಣಾಮಯಿಯಾಗಿದ್ದಾನೆ.

ಅಲ್ಲಾಹು ತನ್ನ ದಾಸ ಮತ್ತು ಸಂದೇಶವಾಹಕರಾದ ನಮ್ಮ ಪ್ರವಾದಿ ಮುಹಮ್ಮದ್ (ಸ) ಅವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಸಲಾತ್ ಮತ್ತು ಸಲಾಂ ವರ್ಷಿಸಲಿ.

 

 

***

 


بِسْمِ اللهِ الرَّحمَنِ الرَّحِيمِ

ಎಂಟನೇ ಸಂದೇಶ:

ಶೈಖ್ ಅಹ್ಮದ್ ರ ಹೆಸರಿಗೆ ಆರೋಪಿಸಲಾದ ವಸಿಯ್ಯತ್ತಿನ ಸುಳ್ಳುತನದ ಕುರಿತು ಗಂಭೀರ ಎಚ್ಚರಿಕೆ

ಪ್ರವಾದಿ (ಸ) ರವರ ಪವಿತ್ರ ಮಸೀದಿಯ ಸೇವಕರಾದ ಶೈಖ್ ಅಹ್ಮದ್

ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರಿಂದ ಇದನ್ನು ಓದುವ ಎಲ್ಲಾ ಮುಸ್ಲಿಮರಿಗೆ, ಅಲ್ಲಾಹು ಅವರನ್ನು ಇಸ್ಲಾಂನೊಂದಿಗೆ ಸಂರಕ್ಷಿಸಲಿ, ಮತ್ತು ನಮ್ಮನ್ನು ಹಾಗೂ ಅವರನ್ನು ಅಜ್ಞಾನಿಗಳ ಮತ್ತು ದುರುಳರ ಕಟ್ಟುಕಥೆಗಳ ಕೆಡುಕಿನಿಂದ ಕಾಪಾಡಲಿ, ಆಮೀನ್.

ನಿಮ್ಮ ಮೇಲೆ ಶಾಂತಿ, ಅಲ್ಲಾಹನ ಕರುಣೆ ಮತ್ತು ಆಶೀರ್ವಾದಗಳು ಇರಲಿ.

ಇನ್ನು ವಿಷಯಕ್ಕೆ ಬರುವುದಾದರೆ, ಪ್ರವಾದಿ (ಸ) ರವರ ಪವಿತ್ರ ಮಸೀದಿಯ ಸೇವಕರಾದ ಶೈಖ್ ಅಹ್ಮದ್ ರಿಗೆ ಆರೋಪಿಸಲಾದ ಒಂದು ಪತ್ರವನ್ನು ನೋಡಿದೆ, ಅದರ ಶೀರ್ಷಿಕೆ ಹೀಗಿತ್ತು: "ಇದು ಮದೀನಾ ಮುನವ್ವರದಿಂದ, ಪ್ರವಾದಿ (ಸ) ರವರ ಪವಿತ್ರ ಮಸೀದಿಯ ಸೇವಕರಾದ ಶೈಖ್ ಅಹ್ಮದ್ ರಿಂದ ಬಂದ ವಸಿಯ್ಯತ್." ಅದರಲ್ಲಿ ಹೀಗೆ ಹೇಳಲಾಗಿದೆ:

ನಾನು ಶುಕ್ರವಾರ ರಾತ್ರಿ ಕುರ್‌ಆನ್ ಓದುತ್ತಾ ಎಚ್ಚರವಾಗಿದ್ದೆ. ಅಲ್ಲಾಹನ ಸುಂದರ ನಾಮಗಳನ್ನು ಓದಿದ ನಂತರ, ನಾನು ನಿದ್ರಿಸಲು ಸಿದ್ಧನಾದೆ. ಆಗ ನಾನು, ಕುರ್‌ಆನ್‌ನ ಆಯತ್‌ಗಳನ್ನು ಮತ್ತು ಶ್ರೇಷ್ಠ ನಿಯಮಗಳನ್ನು ತಂದ, ಸರ್ವಲೋಕಗಳಿಗೆ ಕರುಣೆಯಾಗಿ ನಿಯೋಗಿಸಲ್ಪಟ್ಟ ನಮ್ಮ ನಾಯಕ ಮುಹಮ್ಮದ್ (ಸ) ರನ್ನು, ಆ ಸುಂದರ ಮುಖದವರನ್ನು ಕಂಡೆ. ಅವರು ಹೇಳಿದರು: 'ಓ ಶೈಖ್ ಅಹ್ಮದ್,' ನಾನು ಹೇಳಿದೆ: 'ನಿಮ್ಮ ಸೇವೆಗೆ ಹಾಜರಿದ್ದೇನೆ, ಓ ಅಲ್ಲಾಹನ ಸಂದೇಶವಾಹಕರೇ, ಓ ಅಲ್ಲಾಹನ ಸೃಷ್ಟಿಗಳಲ್ಲಿ ಅತ್ಯಂತ ಗೌರವಾನ್ವಿತರೇ.' ಆಗ ಅವರು ಹೇಳಿದರು: 'ನಾನು ಜನರ ಕೆಟ್ಟ ಕೆಲಸಗಳನ್ನು ಕಂಡು ನಾಚಿಕೆಪಡುತ್ತಿದ್ದೇನೆ. ನನಗೆ ನನ್ನ ರಬ್ಬ್ (ಅಲ್ಲಾಹು) ನನ್ನು ಅಥವಾ ದೇವದೂತರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಒಂದು ಶುಕ್ರವಾರದಿಂದ ಇನ್ನೊಂದು ಶುಕ್ರವಾರದವರೆಗೆ ಒಂದು ಲಕ್ಷದ ಅರವತ್ತು ಸಾವಿರ ಜನರು ಇಸ್ಲಾಂ ಧರ್ಮವಲ್ಲದ ಬೇರೆ ಧರ್ಮದಲ್ಲಿ ಮರಣ ಹೊಂದಿದ್ದಾರೆ – ನಂತರ ಜನರು ಮಾಡುತ್ತಿರುವ ಕೆಲವು ಪಾಪಗಳನ್ನು ಅವರು ಉಲ್ಲೇಖಿಸಿದರು. ನಂತರ ಅವರು ಹೇಳಿದರು: – ಈ ವಸಿಯ್ಯತ್, ಮಹಾಪರಾಕ್ರಮಿ ಮತ್ತು ಸರ್ವಶಕ್ತನಾದವನಿಂದ ಅವರಿಗೆ ಕರುಣಿಸಲಾದ ಕರುಣೆಯಾಗಿದೆ. ನಂತರ ಅವರು ಅಂತ್ಯ ದಿನದ ಕೆಲವು ಚಿಹ್ನೆಗಳನ್ನು ಉಲ್ಲೇಖಿಸಿ, ಹೀಗೆ ಹೇಳಿದರು: – ಓ ಶೈಖ್ ಅಹ್ಮದ್, ಈ ವಸಿಯ್ಯತ್ತಿನ ಬಗ್ಗೆ ಅವರಿಗೆ ತಿಳಿಸಿರಿ; ಏಕೆಂದರೆ ಇದು 'ಲೌಹುಲ್ ಮಹ್‌ಫೂಝ್' ನಿಂದ 'ಕಲಮುಲ್-ಕದ್ರ್' (ವಿಧಿಯ ಲೇಖನಿ) ಯಿಂದ ನಕಲು ಮಾಡಲ್ಪಟ್ಟಿದೆ. ಯಾರು ಇದನ್ನು ಬರೆದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಳುಹಿಸುತ್ತಾರೋ, ಅವನಿಗಾಗಿ ಸ್ವರ್ಗದಲ್ಲಿ ಒಂದು ಅರಮನೆ ನಿರ್ಮಿಸಲಾಗುವುದು. ಯಾರು ಇದನ್ನು ಬರೆದು ಕಳುಹಿಸುವುದಿಲ್ಲವೋ, ಕಿಯಾಮತ್ ದಿನದಂದು ನನ್ನ ಶಫಾಅತ್ ಅವನಿಗೆ ನಿಷಿದ್ಧವಾಗುವುದು. ಇದನ್ನು ಬರೆಯುವವರು ಬಡವರಾಗಿದ್ದರೆ, ಅಲ್ಲಾಹು ಅವರನ್ನು ಶ್ರೀಮಂತರನ್ನಾಗಿ ಮಾಡುವನು, ಅಥವಾ ಸಾಲಗಾರನಾಗಿದ್ದರೆ, ಅಲ್ಲಾಹು ಅವನ ಸಾಲವನ್ನು ತೀರಿಸುವನು, ಅಥವಾ ಅವನ ಮೇಲೆ ಪಾಪವಿದ್ದರೆ, ಈ ವಸಿಯ್ಯತ್ತಿನ ಬರಕತ್‌ನಿಂದ ಅಲ್ಲಾಹು ಅವನನ್ನು ಮತ್ತು ಅವನ ಹೆತ್ತವರನ್ನು ಕ್ಷಮಿಸುವನು. ಅಲ್ಲಾಹನ ದಾಸರಲ್ಲಿ ಯಾರು ಇದನ್ನು ಬರೆಯುವುದಿಲ್ಲವೋ, ಅವನ ಮುಖವು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಕಪ್ಪಾಗುವುದು. ನಂತರ ಅವರು ಹೇಳಿದರು: 'ಮಹಾನನಾದ ಅಲ್ಲಾಹನ ಮೇಲಾಣೆ, (ಮೂರು ಬಾರಿ) ಇದು ಸತ್ಯ. ಒಂದು ವೇಳೆ ನಾನು ಸುಳ್ಳು ಹೇಳುತ್ತಿದ್ದರೆ, ನಾನು ಇಸ್ಲಾಂ ಅಲ್ಲದ ಬೇರೆ ಧರ್ಮದಲ್ಲಿ ಈ ಲೋಕದಿಂದ ಹೊರಡುವಂತಾಗಲಿ. ಯಾರು ಇದನ್ನು ನಂಬುತ್ತಾರೋ ಅವರು ನರಕದ ಶಿಕ್ಷೆಯಿಂದ ಪಾರಾಗುತ್ತಾರೆ, ಮತ್ತು ಯಾರು ಇದನ್ನು ಸುಳ್ಳೆಂದು ಹೇಳುತ್ತಾರೋ ಅವರು ಕಾಫಿರ್ (ಸತ್ಯನಿಷೇಧಿ) ಆಗುತ್ತಾರೆ.'"

ಇದು ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಹೊರಿಸಲಾದ ಸುಳ್ಳು ವಸಿಯ್ಯತ್ತಿನ ಸಾರಾಂಶವಾಗಿದೆ. ನಾವು ಈ ಸುಳ್ಳು ವಸಿಯ್ಯತ್ತನ್ನು ಹಲವಾರು ವರ್ಷಗಳಿಂದ ಅನೇಕ ಬಾರಿ ಕೇಳಿದ್ದೇವೆ. ಅದು ಕಾಲಕಾಲಕ್ಕೆ ಜನರ ನಡುವೆ ಪ್ರಕಟವಾಗುತ್ತಿರುತ್ತದೆ ಮತ್ತು ಜನ ಸಾಮಾನ್ಯರ ನಡುವೆ ಹೆಚ್ಚಾಗಿ ಪ್ರಚಾರವಾಗುತ್ತಿರುತ್ತದೆ. ಅದರ ಪದಗಳಲ್ಲಿ ವ್ಯತ್ಯಾಸಗಳಿರಬಹುದು. ಈ ಸುಳ್ಳ ತಾನು ಪ್ರವಾದಿ (ಸ) ರನ್ನು ಕನಸಿನಲ್ಲಿ ಕಂಡೆನೆಂದು ಮತ್ತು ಅವರು ಈ ವಸಿಯ್ಯತ್ತನ್ನು ತನಗೆ ವಹಿಸಿದರೆಂದು ಹೇಳುತ್ತಾನೆ. ಓದುಗರೇ, ನಾವು ಉಲ್ಲೇಖಿಸಿದ ಈ ಮೇಲಿನ ಪ್ರಕಟಣೆಯಲ್ಲಿ, ಆ ಸುಳ್ಳನ್ನು ತಾನು ನಿದ್ರೆಗೆ ಸಿದ್ಧವಾದಾಗ ಪ್ರವಾದಿ (ಸ) ರನ್ನು ಕಂಡೆನೆಂದು ಹೇಳಿಕೊಂಡಿದ್ದಾನೆ. ಇದರರ್ಥ ಅವನು ಅವರನ್ನು ಎಚ್ಚರದಲ್ಲೇ ಕಂಡಿದ್ದಾನೆ.

ಈ ಸುಳ್ಳುಗಾರನು ಈ ವಸಿಯ್ಯತ್ತಿನಲ್ಲಿ ಅನೇಕ ವಿಷಯಗಳನ್ನು ಹೇಳಿಕೊಂಡಿದ್ದಾನೆ. ಅವು ಅತ್ಯಂತ ಸ್ಪಷ್ಟವಾದ ಸುಳ್ಳು ಮತ್ತು ಅತಿ ಬಹಿರಂಗವಾದ ಮಿಥ್ಯವಾಗಿದೆ. ಅಲ್ಲಾಹು ಇಚ್ಛಿಸಿದರೆ, ಈ ಪತ್ರದಲ್ಲಿ ನಾನು ಶೀಘ್ರದಲ್ಲೇ ಅವುಗಳ ಬಗ್ಗೆ ನಿಮಗೆ ಎಚ್ಚರಿಸುತ್ತೇನೆ. ನಾನು ಕಳೆದ ಕೆಲವು ವರ್ಷಗಳಲ್ಲಿ ಅವುಗಳ ಬಗ್ಗೆ ಎಚ್ಚರಿಸಿದ್ದೇನೆ ಮತ್ತು ಅವು ಅತ್ಯಂತ ಸ್ಪಷ್ಟವಾದ ಸುಳ್ಳು ಮತ್ತು ಅತಿ ಬಹಿರಂಗವಾದ ಮಿಥ್ಯ ಎಂದು ಜನರಿಗೆ ವಿವರಿಸಿದ್ದೇನೆ. ಈ ಇತ್ತೀಚಿನ ಪ್ರಕಟಣೆಯನ್ನು ನೋಡಿದಾಗ, ಅದರ ಸುಳ್ಳು ಸ್ಪಷ್ಟವಾಗಿರುವುದರಿಂದ ಮತ್ತು ಸುಳ್ಳು ಹೇಳುವುದರಲ್ಲಿ ಸುಳ್ಳುಗಾರನ ಧೈರ್ಯವು ಅತಿಯಾಗಿರುವುದರಿಂದ, ಅದರ ಬಗ್ಗೆ ಬರೆಯಲು ನಾನು ಹಿಂಜರಿದೆ. ಸ್ವಲ್ಪವಾದರೂ ಒಳನೋಟವಿರುವ ಅಥವಾ ಆರೋಗ್ಯಕರ ಸಹಜತೆಯನ್ನು ಹೊಂದಿರುವವರ ಮೇಲೆ ಅವನ ಸುಳ್ಳು ಪರಿಣಾಮ ಬೀರಬಹುದು ಎಂದು ನಾನು ಭಾವಿಸಿರಲಿಲ್ಲ. ಆದರೆ ಅನೇಕ ಸಹೋದರರು, ಇದು ಅನೇಕ ಜನರ ಮೇಲೆ ಪರಿಣಾಮ ಬೀರಿದೆ, ಅವರು ಅದನ್ನು ತಮ್ಮ ನಡುವೆ ಹಂಚಿಕೊಂಡಿದ್ದಾರೆ ಮತ್ತು ಕೆಲವರು ಅದನ್ನು ನಂಬಿದ್ದಾರೆ ಎಂದು ನನಗೆ ತಿಳಿಸಿದರು. ಈ ಕಾರಣದಿಂದ ಯಾರೂ ಅದರಿಂದ ಮೋಸಹೋಗಬಾರದೆಂದು, ಅದರ ಸುಳ್ಳನ್ನು ವಿವರಿಸಲು ಮತ್ತು ಇದು ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಹೊರಿಸಲಾದ ಕಟ್ಟುಕಥೆ ಎಂದು ಸ್ಪಷ್ಟಪಡಿಸಲು, ನನ್ನಂತಹವರು ಅದರ ಬಗ್ಗೆ ಬರೆಯುವುದು ಕಡ್ಡಾಯವೆಂದು ನಾನು ಭಾವಿಸಿದೆ. ಜ್ಞಾನ ಮತ್ತು ಈಮಾನ್ ಉಳ್ಳವರು, ಅಥವಾ ಆರೋಗ್ಯಕರ ವಿವೇಕ ಮತ್ತು ಬುದ್ಧಿಶಕ್ತಿ ಉಳ್ಳವರು ಇದನ್ನು ಪರಿಶೀಲಿಸಿದರೆ, ಇದು ಅನೇಕ ಕಾರಣಗಳಿಂದ ಸುಳ್ಳು ಮತ್ತು ಕಟ್ಟುಕಥೆ ಎಂದು ತಿಳಿಯುತ್ತಾರೆ.

ನಾನು ಈ ಕಟ್ಟುಕಥೆಯು ಯಾರಿಗೆ ಆರೋಪಿಸಲಾಗಿದೆಯೋ ಆ ಶೈಖ್ ಅಹ್ಮದ್ ರವರ ಕೆಲವು ಸಂಬಂಧಿಕರಲ್ಲಿ ಈ ವಸಿಯ್ಯತ್ತಿನ ಬಗ್ಗೆ ಕೇಳಿದಾಗ ಅವರು ಹೀಗೆ ಉತ್ತರಿಸಿದರು: ಇದು ಶೈಖ್ ಅಹ್ಮದ್ ರವರ ಮೇಲೆ ಹೊರಿಸಲಾದ ಸುಳ್ಳು. ಮೂಲತಃ ಅವರು ಅದನ್ನು ಹೇಳಿಯೇ ಇಲ್ಲ. ಈ ಶೈಖ್ ಅಹ್ಮದ್ ಬಹಳ ಹಿಂದೆಯೇ ಮರಣ ಹೊಂದಿದ್ದರು. ಒಂದು ವೇಳೆ ಈ ಶೈಖ್ ಅಹ್ಮದ್, ಅಥವಾ ಅವರಿಗಿಂತ ಹಿರಿಯರು, ಪ್ರವಾದಿ (ಸ) ರನ್ನು ಕನಸಿನಲ್ಲಿ ಅಥವಾ ಎಚ್ಚರದಲ್ಲಿ ಕಂಡೆನೆಂದು ಮತ್ತು ಈ ವಸಿಯ್ಯತ್ತನ್ನು ಅವರಿಗೆ ನೀಡಿದರೆಂದು ಹೇಳಿಕೊಂಡರೂ, ಅವರು ಸುಳ್ಳುಗಾರರು ಅಥವಾ ಅವರಿಗೆ ಅದನ್ನು ಹೇಳಿದವನು ಶೈತಾನನೇ ಹೊರತು ಅಲ್ಲಾಹನ ಸಂದೇಶವಾಹಕರಲ್ಲ (ಸ) ಎಂದು ನಾವು ಅನೇಕ ಕಾರಣಗಳಿಂದ ಖಚಿತವಾಗಿ ತಿಳಿಯುತ್ತಿದ್ದೆವು:

ಮೊದಲನೆಯದಾಗಿ: ಪ್ರವಾದಿ (ಸ) ರವರು ತಮ್ಮ ಮರಣದ ನಂತರ ಎಚ್ಚರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಜ್ಞಾನಿ ಸೂಫಿಗಳಲ್ಲಿ ಯಾರಾದರೂ ತಾನು ಪ್ರವಾದಿ (ಸ) ರನ್ನು ಎಚ್ಚರದಲ್ಲಿ ಕಾಣುತ್ತೇನೆಂದು ಅಥವಾ ಅವರು ಮೀಲಾದುನ್ನಬಿ ಅಥವಾ ಅಂತಹ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆಂದು ವಾದಿಸಿದರೆ, ಅವರು ಅತ್ಯಂತ ಕೆಟ್ಟ ತಪ್ಪನ್ನು ಮಾಡಿದ್ದಾರೆ, ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದ್ದಾರೆ, ಗಂಭೀರ ದೋಷವನ್ನು ಎಸಗಿದ್ದಾರೆ, ಮತ್ತು ಕುರ್‌ಆನ್, ಸುನ್ನತ್ ಹಾಗೂ ವಿದ್ವಾಂಸರ ಒಮ್ಮತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಏಕೆಂದರೆ ಮೃತರು ಕಿಯಾಮತ್ ದಿನದಂದು ತಮ್ಮ ಸಮಾಧಿಗಳಿಂದ ಹೊರಬರುತ್ತಾರೆಯೇ ಹೊರತು ಈ ಲೋಕದಲ್ಲಿ ಅಲ್ಲ. ಇದಕ್ಕೆ ವಿರುದ್ಧವಾಗಿ ಹೇಳುವವನು ಸ್ಪಷ್ಟವಾಗಿ ಸುಳ್ಳು ಹೇಳುವವನಾಗಿದ್ದಾನೆ. ಅಥವಾ ಗೊಂದಲಕ್ಕೊಳಗಾಗಿ ತಪ್ಪುದಾರಿಗೆಳೆಯಲ್ಪಟ್ಟವನಾಗಿದ್ದಾನೆ. ಸಜ್ಜನ ಪೂರ್ವಿಕರು ತಿಳಿದಿದ್ದ ಸತ್ಯವನ್ನು ಮತ್ತು ಅಲ್ಲಾಹನ ಸಂದೇಶವಾಹಕರ (ಸ) ಸಹಾಬಿಗಳು ಹಾಗೂ ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸಿದವರು ನಡೆದ ಸತ್ಯದ ದಾರಿಯನ್ನು ಅವನು ತಿಳಿದಿಲ್ಲ. ಅಲ್ಲಾಹು ಹೇಳುತ್ತಾನೆ:

﴿ثُمَّ إِنَّكُم بَعۡدَ ذَٰلِكَ لَمَيِّتُونَ15 ثُمَّ إِنَّكُمْ يَوْمَ الْقِيَامَةِ تُبْعَثُونَ16﴾

ನಂತರ ಅದರ ಬಳಿಕ ನೀವು ಖಂಡಿತ ಸಾಯುವಿರಿ.

ನಂತರ ಪುನರುತ್ಥಾನ ದಿನದಂದು ನಿಮ್ಮನ್ನು ಖಂಡಿತ ಜೀವ ನೀಡಿ ಎಬ್ಬಿಸಲಾಗುವುದು. [ಅಲ್-ಮುಅ್‌ಮಿನೂನ್: 15, 16] ಪ್ರವಾದಿ (ಸ) ಹೇಳಿದರು:

«أَنَا أَوَّلُ مَنْ تَنْشَقُّ عَنْهُ الْأَرْضُ يَوْمَ الْقِيَامَةِ، وَأَنَا أَوَّلُ شَافِعٍ وَأَوَّلُ مُشَفَّعٍ».

"ಕಿಯಾಮತ್ ದಿನದಂದು ಭೂಮಿಯಿಂದ ಮೊದಲು ಹೊರಬರುವವನು ನಾನೇ. ಮೊದಲು ಶಫಾಅತ್ ಮಾಡುವವನು ಮತ್ತು ಮೊದಲು ಶಫಾಅತ್ ಸ್ವೀಕರಿಸಲ್ಪಡುವವನೂ ನಾನೇ." ಈ ಅರ್ಥದಲ್ಲಿ ಅನೇಕ ಕುರ್‌ಆನ್ ವಚನಗಳು ಮತ್ತು ಹದೀಸ್‌ಗಳು ಇವೆ.

ಎರಡನೆಯದಾಗಿ: ಪ್ರವಾದಿ (ಸ) ರವರು ತಮ್ಮ ಜೀವನದಲ್ಲಾಗಲಿ ಅಥವಾ ಮರಣದ ನಂತರವಾಗಲಿ ಸತ್ಯಕ್ಕೆ ವಿರುದ್ಧವಾಗಿ ಏನನ್ನೂ ಹೇಳುವುದಿಲ್ಲ. ಈ ವಸಿಯ್ಯತ್ ಅವರ ಶರೀಅತ್‌ಗೆ ಸ್ಪಷ್ಟವಾಗಿ ವಿರುದ್ಧವಾಗಿದೆ. ಇದಕ್ಕೆ ಅನೇಕ ಕಾರಣಗಳಿದ್ದು ಅವುಗಳನ್ನು ಮುಂದೆ ವಿವರಿಸಲಾಗುವುದು. ಪ್ರವಾದಿ (ಸ) ರವರು ಕನಸಿನಲ್ಲಿ ಕಾಣಿಸಿಕೊಳ್ಳಬಹುದು. ಯಾರು ಅವರನ್ನು ಕನಸಿನಲ್ಲಿ ಅವರ ಶ್ರೇಷ್ಠ ರೂಪದಲ್ಲಿ ಕಂಡರೋ, ಅವರು ನಿಜವಾಗಿಯೂ ಅವರನ್ನೇ ಕಂಡರು. ಏಕೆಂದರೆ ಶೈತಾನನು ಅವರ ರೂಪದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಪ್ರಬಲ ಮತ್ತು ಶ್ರೇಷ್ಠ ಹದೀಸ್‌ನಲ್ಲಿ ಇದು ವರದಿಯಾಗಿದೆ. ಆದರೆ ಮುಖ್ಯ ವಿಷಯವೇನೆಂದರೆ, ಕನಸು ಕಂಡವನ ಈಮಾನ್, ಸತ್ಯತೆ, ನ್ಯಾಯಪರತೆ, ನೆನಪಿನ ಶಕ್ತಿ, ಧಾರ್ಮಿಕತೆ, ಪ್ರಾಮಾಣಿಕತೆ, ಮತ್ತು ಅವನು ಪ್ರವಾದಿ (ಸ) ರನ್ನು ಅವರ ರೂಪದಲ್ಲಿ ಕಂಡನೇ ಅಥವಾ ಬೇರೆ ರೂಪದಲ್ಲಿ ಕಂಡನೇ ಎಂಬುದು ಪ್ರಶ್ನಾರ್ಹವಾಗುತ್ತದೆ.

ಒಂದು ವೇಳೆ ಪ್ರವಾದಿ (ಸ) ರವರು ತಮ್ಮ ಜೀವನದಲ್ಲಿ ಹೇಳಿದ ಒಂದು ಹದೀಸ್, ವಿಶ್ವಾಸಾರ್ಹ, ನ್ಯಾಯಪರ, ಉತ್ತಮ ನೆನಪಿನ ಶಕ್ತಿ ಉಳ್ಳವರ ಮಾರ್ಗದಿಂದ ಬರದಿದ್ದರೆ, ಅದನ್ನು ಅವಲಂಬಿಸಲಾಗುವುದಿಲ್ಲ ಮತ್ತು ಅದನ್ನು ಪುರಾವೆಯಾಗಿ ಬಳಸಲಾಗುವುದಿಲ್ಲ. ಅಥವಾ ವಿಶ್ವಾಸಾರ್ಹ, ಉತ್ತಮ ನೆನಪಿನ ಶಕ್ತಿ ಉಳ್ಳವರ ಮಾರ್ಗದಿಂದ ಬಂದರೂ, ಅದು ಅವರಿಗಿಂತ ಹೆಚ್ಚು ನೆನಪಿನ ಶಕ್ತಿ ಉಳ್ಳವರು ಮತ್ತು ಹೆಚ್ಚು ವಿಶ್ವಾಸಾರ್ಹರಾದವರ ವರದಿಗೆ ವಿರುದ್ಧವಾಗಿದ್ದರೆ, ಮತ್ತು ಆ ಎರಡು ವರದಿಗಳನ್ನು ಸಮನ್ವಯಗೊಳಿಸಲು ಸಾಧ್ಯವಾಗದಿದ್ದರೆ, ಅವುಗಳಲ್ಲಿ ಒಂದು ಮನ್ಸೂಖ್ (ರದ್ದುಗೊಂಡಿರುವುದು) ಆಗುತ್ತದೆ ಮತ್ತು ಅದರ ಮೇಲೆ ಕಾರ್ಯನಿರ್ವಹಿಸಲಾಗುವುದಿಲ್ಲ, ಹಾಗೂ ಇನ್ನೊಂದು ನಾಸಿಖ್ (ರದ್ದುಗೊಳಿಸುವಂತಹುದು) ಆಗುತ್ತದೆ ಮತ್ತು ಅದರ ಮೇಲೆ ಅದರ ಷರತ್ತುಗಳೊಂದಿಗೆ ಸಾಧ್ಯವಾದರೆ ಕಾರ್ಯನಿರ್ವಹಿಸಲಾಗುತ್ತದೆ. ಒಂದು ವೇಳೆ ಸಮನ್ವಯಗೊಳಿಸುವುದು ಅಥವಾ ರದ್ದುಗೊಳಿಸುವುದು ಸಾಧ್ಯವಾಗದಿದ್ದರೆ, ಕಡಿಮೆ ನೆನಪಿನ ಶಕ್ತಿ ಮತ್ತು ಕಡಿಮೆ ನ್ಯಾಯಪರತೆ ಉಳ್ಳವರ ವರದಿಯನ್ನು ತಿರಸ್ಕರಿಸುವುದು ಮತ್ತು ಅದನ್ನು 'ಶಾಝ್' (ಅಸಹಜ) ಎಂದು ಪರಿಗಣಿಸಿ ಅದರ ಮೇಲೆ ಕಾರ್ಯನಿರ್ವಹಿಸದಿರುವುದು ಕಡ್ಡಾಯವಾಗಿದೆ.

ಹೀಗಿರುವಾಗ, ಅಲ್ಲಾಹನ ಸಂದೇಶವಾಹಕರಿಂದ (ಸ) ಯಾರು ರವಾನಿಸಿದ್ದಾರೆಂದು ತಿಳಿಯದ, ಮತ್ತು ಅವನ ನ್ಯಾಯಪರತೆ ಮತ್ತು ಪ್ರಾಮಾಣಿಕತೆ ಏನೆಂದು ತಿಳಿಯದ ಒಂದು ವಸಿಯ್ಯತ್ತಿನ ಸ್ಥಿತಿ ಏನು? ಇಂತಹ ಪರಿಸ್ಥಿತಿಯಲ್ಲಿ, ಅದರಲ್ಲಿ ಶರೀಅತ್‌ಗೆ ವಿರುದ್ಧವಾದ ಏನೂ ಇಲ್ಲದಿದ್ದರೂ ಸಹ ಅದನ್ನು ತಿರಸ್ಕರಿಸುವುದು ಮತ್ತು ಅದಕ್ಕೆ ಗಮನ ಕೊಡದಿರುವುದು ಅರ್ಹವಾಗಿದೆ. ಇನ್ನು, ಆ ವಸಿಯ್ಯತ್ ಅದರ ಸುಳ್ಳನ್ನು ಸೂಚಿಸುವ ಅನೇಕ ವಿಷಯಗಳನ್ನು ಒಳಗೊಂಡಿದ್ದರೆ, ಮತ್ತು ಅದು ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಹೊರಿಸಲಾದ ಸುಳ್ಳು ಎಂದು, ಮತ್ತು ಅಲ್ಲಾಹು ಅನುಮತಿಸದ ಧಾರ್ಮಿಕ ನಿಯಮ ಸ್ಥಾಪಿಸುವುದನ್ನು ಒಳಗೊಂಡಿದ್ದರೆ ಹೇಗೆ?

ಪ್ರವಾದಿ (ಸ) ರವರು ಹೇಳಿದರು:

«مَنْ قَالَ عَلَيَّ مَا لَمْ أَقُلْ؛ فَلْيَتَـبَوَّأْ مَقْعَدَهُ مِنَ النَّارِ».

ಯಾರು ನನ್ನ ಹೆಸರಲ್ಲಿ ನಾನು ಹೇಳದಿರುವುದನ್ನು ಹೇಳುತ್ತಾರೋ; ಅವರು ತಮ್ಮ ಸ್ಥಾನವನ್ನು ನರಕದಲ್ಲಿ ಸಿದ್ಧಪಡಿಸಿಕೊಳ್ಳಲಿ. ಈ ವಸಿಯ್ಯತ್ತಿನ ಸುಳ್ಳುಗಾರನು ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಅವರು ಹೇಳದಿರುವುದನ್ನು ಹೇಳಿದ್ದಾನೆ, ಮತ್ತು ಅವರ ಮೇಲೆ ಸ್ಪಷ್ಟವಾದ ಮತ್ತು ಗಂಭೀರವಾದ ಸುಳ್ಳನ್ನು ಹೊರಿಸಿದ್ದಾನೆ. ಅವನು ಪಶ್ಚಾತ್ತಾಪಪಟ್ಟು, ಈ ವಸಿಯ್ಯತ್ ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಹೊರಿಸಲಾದ ಸುಳ್ಳು ಎಂದು ಜನರಿಗೆ ಪ್ರಕಟಿಸದಿದ್ದರೆ, ಈ ಮಹಾ ಎಚ್ಚರಿಕೆಗೆ ಅವನು ಅತ್ಯಂತ ಅರ್ಹನಾಗುತ್ತಾನೆ, ಮತ್ತು ಅದಕ್ಕೆ ಅವನು ಅತ್ಯಂತ ಯೋಗ್ಯನಾಗುತ್ತಾನೆ! ಏಕೆಂದರೆ ಯಾರು ಜನರ ನಡುವೆ ಸುಳ್ಳನ್ನು ಹರಡುತ್ತಾರೋ ಮತ್ತು ಅದನ್ನು ಧರ್ಮಕ್ಕೆ ಆರೋಪಿಸುತ್ತಾರೋ, (ಅವರು ತಮ್ಮ ತಪ್ಪನ್ನು) ಘೋಷಿಸದಿದ್ದರೆ ಮತ್ತು ಬಹಿರಂಗಪಡಿಸದಿದ್ದರೆ ಅವರ ಪಶ್ಚಾತ್ತಾಪವು ಸ್ವೀಕಾರವಾಗುವುದಿಲ್ಲ. ಇದು ಜನರು ಅವನು ತನ್ನ ಸುಳ್ಳಿನ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾನೆ ಮತ್ತು ತನ್ನನ್ನು ತಾನೇ ಸುಳ್ಳುಗಾರನೆಂದು ಹೇಳಿದ್ದಾನೆಂದು ತಿಳಿಯುವುದಕ್ಕಾಗಿದೆ. ಅಲ್ಲಾಹು ಹೇಳುತ್ತಾನೆ:

﴿إِنَّ ٱلَّذِينَ يَكۡتُمُونَ مَآ أَنزَلۡنَا مِنَ ٱلۡبَيِّنَٰتِ وَٱلۡهُدَىٰ مِنۢ بَعۡدِ مَا بَيَّنَّٰهُ لِلنَّاسِ فِي ٱلۡكِتَٰبِ أُوْلَٰٓئِكَ يَلۡعَنُهُمُ ٱللَّهُ وَيَلۡعَنُهُمُ ٱللَّٰعِنُونَ159 إِلَّا ٱلَّذِينَ تَابُواْ وَأَصۡلَحُواْ وَبَيَّنُواْ فَأُوْلَٰٓئِكَ أَتُوبُ عَلَيۡهِمۡ وَأَنَا ٱلتَّوَّابُ ٱلرَّحِيمُ160﴾

ನಾವು ಅವತೀರ್ಣಗೊಳಿಸಿದ ಸಾಕ್ಷ್ಯಾಧಾರಗಳನ್ನು ಮತ್ತು ಸನ್ಮಾರ್ಗವನ್ನು—ಅದನ್ನು ನಾವು ಗ್ರಂಥದಲ್ಲಿ ಜನರಿಗೆ ವಿವರಿಸಿಕೊಟ್ಟ ಬಳಿಕವೂ—ಬಚ್ಚಿಡುವವರು ಯಾರೋ ಅವರ ಮೇಲೆ ಅಲ್ಲಾಹನ ಶಾಪವಿದೆ; ಶಪಿಸುವವರೆಲ್ಲರ ಶಾಪವೂ ಇದೆ.

ಆದರೆ ಪಶ್ಚಾತ್ತಾಪಪಡುವವರು, ಸರಿಪಡಿಸುವವರು ಮತ್ತು ವಿವರಿಸಿಕೊಡುವವರು ಯಾರೋ (ಅವರು ಇದಕ್ಕೆ ಹೊರತಾಗಿದ್ದಾರೆ). ಅವರ ಪಶ್ಚಾತ್ತಾಪವನ್ನು ನಾನು ಸ್ವೀಕರಿಸುತ್ತೇನೆ. ನಾನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದೇನೆ. [ಅಲ್-ಬಕರ: 159, 160] ಈ ಪವಿತ್ರ ವಚನದಲ್ಲಿ ಅಲ್ಲಾಹು ಸ್ಪಷ್ಟಪಡಿಸುವುದೇನೆಂದರೆ: ಯಾರು ಸತ್ಯದ ಯಾವುದೇ ಭಾಗವನ್ನು ಮುಚ್ಚಿಡುತ್ತಾರೋ, ಅವರು ತಿದ್ದುಪಡಿ ಮತ್ತು ಸ್ಪಷ್ಟೀಕರಣ ಮಾಡಿದ ನಂತರವೇ ಅವರ ಪಶ್ಚಾತ್ತಾಪವು ಸಿಂಧುವಾಗುತ್ತದೆ. ಅಲ್ಲಾಹು ತನ್ನ ದಾಸರಿಗಾಗಿ ಧರ್ಮವನ್ನು ಪೂರ್ಣಗೊಳಿಸಿದ್ದಾನೆ, ಮತ್ತು ತನ್ನ ಸಂದೇಶವಾಹಕ ಮುಹಮ್ಮದ್ ﷺ ರನ್ನು ಕಳುಹಿಸುವ ಮೂಲಕ ಹಾಗೂ ಅವರಿಗೆ ಅವತೀರ್ಣಗೊಳಿಸಿದ ಸಂಪೂರ್ಣ ಶರೀಅತ್‌ನ ಮೂಲಕ ಅವರ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಿದ್ದಾನೆ. ಪೂರ್ಣಗೊಳಿಸಿದ ಮತ್ತು ವಿವರಿಸಿದ ನಂತರವೇ ಅವನು ತನ್ನ ಪ್ರವಾದಿಯನ್ನು ತನ್ನ ಬಳಿಗೆ ಕರೆಸಿಕೊಂಡನು. ಅಲ್ಲಾಹು ಹೇಳುತ್ತಾನೆ:

﴿...ٱلۡيَوۡمَ أَكۡمَلۡتُ لَكُمۡ دِينَكُمۡ وَأَتۡمَمۡتُ عَلَيۡكُمۡ نِعۡمَتِي وَرَضِيتُ لَكُمُ ٱلۡإِسۡلَٰمَ دِينٗا...﴾

ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. [ಅಲ್-ಮಾಯಿದಾ: 3]

ಈ ವಸಿಯ್ಯತ್ತಿನ ಸುಳ್ಳುಗಾರನು ಹಿಜರಿ ಹದಿನಾಲ್ಕನೇ ಶತಮಾನದಲ್ಲಿ ಬಂದು, ಜನರಿಗೆ ಒಂದು ಹೊಸ ಧರ್ಮವನ್ನು ತೊಡಿಸಲು ಬಯಸುತ್ತಿದ್ದಾನೆ. ತನ್ನ ನಿಯಮವನ್ನು ಪಾಲಿಸಿದವರು ಸ್ವರ್ಗವನ್ನು ಪ್ರವೇಶಿಸುತ್ತಾರೆ ಮತ್ತು ತನ್ನ ನಿಯಮವನ್ನು ಪಾಲಿಸದವರಿಗೆ ಸ್ವರ್ಗವು ನಿಷಿದ್ಧವಾಗುತ್ತದೆ ಮತ್ತು ಅವರು ನರಕವನ್ನು ಪ್ರವೇಶಿಸುತ್ತಾರೆ ಎಂದು ಹೇಳುತ್ತಾನೆ. ತಾನು ಸ್ವಯಂ ರಚಿಸಿದ ಈ ವಸಿಯ್ಯತ್ತನ್ನು ಕುರ್‌ಆನ್‌ಗಿಂತ ಶ್ರೇಷ್ಠ ಮತ್ತು ಉತ್ತಮ ಎಂದು ತೋರಿಸಲು ಬಯಸುತ್ತಾನೆ. ಏಕೆಂದರೆ, ಅವನು ಅದರಲ್ಲಿ ಆರೋಪಿಸುವ ಸುಳ್ಳು ಹೀಗಿದೆ: ಯಾರು ಇದನ್ನು ಬರೆದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಳುಹಿಸುತ್ತಾನೋ; ಅವನಿಗಾಗಿ ಸ್ವರ್ಗದಲ್ಲಿ ಒಂದು ಅರಮನೆ ನಿರ್ಮಿಸಲಾಗುವುದು, ಮತ್ತು ಯಾರು ಇದನ್ನು ಬರೆದು ಕಳುಹಿಸುವುದಿಲ್ಲವೋ, ಕಿಯಾಮತ್ ದಿನದಂದು ಪ್ರವಾದಿ (ಸ) ರವರ ಶಫಾಅತ್ ಅವನಿಗೆ ನಿಷಿದ್ಧವಾಗುವುದು. ಇದು ಅತ್ಯಂತ ಕೆಟ್ಟ ಸುಳ್ಳಾಗಿದ್ದು, ಈ ವಸಿಯ್ಯತ್ತಿನ ಸುಳ್ಳುತನಕ್ಕೆ ಅದನ್ನು ರಚಿಸಿದವನ ನಿರ್ಲಜ್ಜತೆ, ಮತ್ತು ಸುಳ್ಳು ಹೇಳುವುದರಲ್ಲಿ ಅವನ ಮಹಾ ಎದೆಗಾರಿಕೆ ಅತ್ಯಂತ ಸ್ಪಷ್ಟವಾದ ಪುರಾವೆಗಳಾಗಿವೆ. ಏಕೆಂದರೆ ಯಾರು ಪವಿತ್ರ ಕುರ್‌ಆನ್ ಅನ್ನು ಬರೆದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಳುಹಿಸುತ್ತಾರೋ, ಅವರು ಕುರ್‌ಆನ್‌ನ ಪ್ರಕಾರ ಕಾರ್ಯನಿರ್ವಹಿಸದಿದ್ದರೆ ಈ ಶ್ರೇಷ್ಠತೆ ಅವರಿಗೆ ಸಿಗುವುದಿಲ್ಲ. ಹಾಗಾದರೆ ಈ ಕಟ್ಟುಕಥೆಯನ್ನು ಬರೆದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವವನಿಗೆ ಇದು ಹೇಗೆ ಸಿಗುತ್ತದೆ? ಯಾರು ಕುರ್‌ಆನ್ ಅನ್ನು ಬರೆಯುವುದಿಲ್ಲವೋ ಮತ್ತು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಳುಹಿಸುವುದಿಲ್ಲವೋ, ಅವರು ಪ್ರವಾದಿ (ಸ) ರಲ್ಲಿ ವಿಶ್ವಾಸವಿಟ್ಟು, ಅವರ ಶರೀಅತ್ ಅನ್ನು ಅನುಸರಿಸಿದರೆ, ಅವರು ಪ್ರವಾದಿ (ಸ) ರವರ ಶಫಾಅತ್‌ನಿಂದ ವಂಚಿತರಾಗುವುದಿಲ್ಲ. ಈ ವಸಿಯ್ಯತ್ತಿನಲ್ಲಿರುವ ಈ ಒಂದು ಕಟ್ಟುಕಥೆಯೇ ಅದರ ಸುಳ್ಳನ್ನು ಮತ್ತು ಅದನ್ನು ಪ್ರಕಟಿಸಿದವನ ಸುಳ್ಳುತನ, ನಿರ್ಲಜ್ಜತೆ, ಮೂರ್ಖತನ ಮತ್ತು ಪ್ರವಾದಿ (ಸ) ರವರು ತಂದ ಮಾರ್ಗದರ್ಶನದ ಕುರಿತು ಅರಿವಿಲ್ಲದಿರುವುದನ್ನು ಸೂಚಿಸಲು ಧಾರಾಳ ಸಾಕಾಗುತ್ತದೆ.

ಈ ವಸಿಯ್ಯತ್ತಿನಲ್ಲಿ – ಮೇಲೆ ಉಲ್ಲೇಖಿಸಿದ್ದಲ್ಲದೆ – ಇತರ ವಿಷಯಗಳೂ ಇವೆ. ಅವೆಲ್ಲವೂ ಅದರ ನಿರರ್ಥಕತೆ ಮತ್ತು ಸುಳ್ಳುತನವನ್ನು ಸೂಚಿಸುತ್ತವೆ. ಅದನ್ನು ರಚಿಸಿದವನು ಅದರ ಸತ್ಯತೆಯ ಬಗ್ಗೆ ಸಾವಿರ ಅಥವಾ ಅದಕ್ಕಿಂತ ಹೆಚ್ಚು ಬಾರಿ ಆಣೆ ಮಾಡಿದರೂ, ಅಥವಾ ತಾನು ಸತ್ಯವಂತನೆಂಬುದಕ್ಕೆ ತನ್ನ ಮೇಲೆ ಅತ್ಯಂತ ದೊಡ್ಡ ಶಿಕ್ಷೆ ಮತ್ತು ಕಠಿಣ ದಂಡನೆಯನ್ನು ಪ್ರಾರ್ಥಿಸಿದರೂ; ಅವನು ಸತ್ಯವಂತನಾಗುವುದಿಲ್ಲ, ಮತ್ತು ಅದು (ವಸಿಯ್ಯತ್) ಸತ್ಯವಾಗುವುದಿಲ್ಲ. ಬದಲಿಗೆ, ಅಲ್ಲಾಹನ ಮೇಲೆ ಆಣೆಯಿಟ್ಟು ಹೇಳುತ್ತೇನೆ, ಮತ್ತೊಮ್ಮೆ ಅಲ್ಲಾಹನ ಮೇಲೆ ಆಣೆಯಿಟ್ಟು ಹೇಳುತ್ತೇನೆ, ಇದು ಅತ್ಯಂತ ದೊಡ್ಡ ಮತ್ತು ಕೆಟ್ಟ ಸುಳ್ಳುಗಳಲ್ಲಿ ಒಂದಾಗಿದೆ. ಇದಕ್ಕೆ ನಾವು ಅಲ್ಲಾಹನನ್ನು ಮತ್ತು ನಮ್ಮ ಬಳಿ ಹಾಜರಿರುವ ದೇವದೂತರನ್ನು ಸಾಕ್ಷಿಯಾಗಿಸುತ್ತೇವೆ. ಹಾಗೆಯೇ ಈ ಪತ್ರವನ್ನು ನೋಡುವ ಮುಸ್ಲಿಮರನ್ನು ಸಾಕ್ಷಿಯಾಗಿಸುತ್ತೇವೆ. ಈ ವಸಿಯ್ಯತ್ ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಹೊರಿಸಲಾದ ಸುಳ್ಳು ಮತ್ತು ಕಟ್ಟುಕಥೆ ಎಂದು ಈ ಸಾಕ್ಷ್ಯದೊಂದಿಗೆ ನಾವು ನಮ್ಮ ರಬ್ಬ್‌ನನ್ನು ಭೇಟಿಯಾಗುತ್ತೇವೆ. ಯಾರು ಈ ಕಟ್ಟುಕಥೆಯನ್ನು ರಚಿಸಿದರೋ ಅಲ್ಲಾಹು ಅವರನ್ನು ಅವಮಾನಿಸಲಿ ಮತ್ತು ಅವರು ಅರ್ಹರಾಗಿರುವ ರೀತಿಯಲ್ಲಿ ಅವರೊಂದಿಗೆ ವ್ಯವಹರಿಸಲಿ.

ಮೇಲೆ ಹೇಳಿದ್ದಲ್ಲದೆ, ಅದರ ಪಠ್ಯದಲ್ಲಿರುವ ಇತರ ಅನೇಕ ವಿಷಯಗಳು ಕೂಡ ಈ ವಸಿಯ್ಯತ್ತಿನ ಸುಳ್ಳುತನ ಮತ್ತು ನಿರರ್ಥಕತೆಯನ್ನು ಸೂಚಿಸುತ್ತವೆ. ಅವುಗಳಲ್ಲಿ ಕೆಲವು ಹೀಗಿವೆ:

ಮೊದಲನೇ ವಿಷಯ: ಅದರಲ್ಲಿರುವ ಮಾತು: "ಏಕೆಂದರೆ ಒಂದು ಶುಕ್ರವಾರದಿಂದ ಇನ್ನೊಂದು ಶುಕ್ರವಾರದವರೆಗೆ ಒಂದು ಲಕ್ಷದ ಅರವತ್ತು ಸಾವಿರ ಜನರು ಇಸ್ಲಾಂ ಅಲ್ಲದ ಬೇರೆ ಧರ್ಮದಲ್ಲಿ ಮರಣ ಹೊಂದಿದ್ದಾರೆ." ಇದು ಅದೃಶ್ಯದ ಜ್ಞಾನವಾಗಿದೆ, ಮತ್ತು ಪ್ರವಾದಿ (ಸ) ರವರ ಮರಣದ ನಂತರ ಅವರಿಗೆ ವಹೀ (ದೈವಿಕ ಸಂದೇಶ) ಬರುವುದು ನಿಂತುಹೋಗಿದೆ. ಅವರು ತಮ್ಮ ಜೀವನದಲ್ಲಿಯೇ ಅದೃಶ್ಯವನ್ನು ತಿಳಿದಿರಲಿಲ್ಲ. ಇನ್ನು ಅವರ ಮರಣದ ನಂತರ ಹೇಗೆ ತಿಳಿಯುತ್ತಾರೆ? ಅಲ್ಲಾಹು ಹೇಳುತ್ತಾನೆ:

﴿قُل لَّآ أَقُولُ لَكُمۡ عِندِي خَزَآئِنُ ٱللَّهِ وَلَآ أَعۡلَمُ ٱلۡغَيۡبَ...﴾

ಹೇಳಿರಿ: “ಅಲ್ಲಾಹನ ಖಜಾನೆಗಳು ನನ್ನ ವಶದಲ್ಲಿವೆಯೆಂದು ನಾನು ಹೇಳುವುದಿಲ್ಲ. ನನಗೆ ಅದೃಶ್ಯ ವಿಷಯಗಳು ತಿಳಿದಿಲ್ಲ... [ಅಲ್-ಅನ್‌ಆಮ್: 50] ಅಲ್ಲಾಹು ಹೇಳುತ್ತಾನೆ:

﴿قُل لَّا يَعۡلَمُ مَن فِي ٱلسَّمَٰوَٰتِ وَٱلۡأَرۡضِ ٱلۡغَيۡبَ إِلَّا ٱللَّهُ...﴾

ಹೇಳಿರಿ: “ಅಲ್ಲಾಹನ ಹೊರತು ಭೂಮ್ಯಾಕಾಶಗಳಲ್ಲಿರುವ ಯಾರಿಗೂ ಅದೃಶ್ಯ ಜ್ಞಾನವಿಲ್ಲ... [ಅನ್ನಮ್ಲ್: 65] ಪ್ರವಾದಿ ﷺ ರಿಂದ ವರದಿಯಾದ ಸಹೀಹ್ ಹದೀಸ್‌ನಲ್ಲಿ ಅವರು ಹೇಳಿದರು:

«يُذَادُ رِجَالٌ عَنْ حَوْضِي يَوْمَ القِيَامَةِ، فَأَقُولُ: يَا رَبِّ! أَصْحَابِي أَصْحَابِي، فَيُقَالُ لِي: إِنَّكَ لَا تَدْرِي مَا أَحْدَثُوا بَعْدَكَ، فَأَقُولُ كَمَا قَالَ العَبْدُ الصَّالِحُ: ﴿وَكُنتُ عَلَيۡهِمۡ شَهِيدٗا مَّا دُمۡتُ فِيهِمۡۖ فَلَمَّا تَوَفَّيۡتَنِي كُنتَ أَنتَ ٱلرَّقِيبَ عَلَيۡهِمۡۚ وَأَنتَ عَلَىٰ كُلِّ شَيۡءٖ شَهِيدٌ [المائدة: 117]».

"ಕಿಯಾಮತ್ ದಿನದಂದು ಕೆಲವು ಪುರುಷರನ್ನು ನನ್ನ ಹೌಝ್‌ನಿಂದ (ನೀರಿನ ಕೊಳ) ದೂರ ಓಡಿಸಲಾಗುವುದು. ಆಗ ನಾನು ಹೇಳುತ್ತೇನೆ: 'ಓ ನನ್ನ ಪರಿಪಾಲಕನೇ! ನನ್ನ ಸಹಚರರು, ನನ್ನ ಸಹಚರರು.' ಆಗ ನನಗೆ ಹೇಳಲಾಗುವುದು: 'ನಿಮ್ಮ ನಂತರ ಅವರು ಏನು ಹೊಸದಾಗಿ ಮಾಡಿದರು ಎಂಬುದು ನಿಮಗೆ ತಿಳಿದಿಲ್ಲ.' ಆಗ ನಾನು ಸಜ್ಜನ ದಾಸನು (ಈಸಾ) ಹೇಳಿದಂತೆ ಹೇಳುತ್ತೇನೆ: 'ನಾನು ಅವರೊಂದಿಗೆ ಇದ್ದಾಗ ನಾನು ಅವರ ಮೇಲೆ ಸಾಕ್ಷಿಯಾಗಿದ್ದೆ. ನೀನು ನನ್ನನ್ನು ಮರಣಗೊಳಿಸಿದ ನಂತರ, ನೀನೇ ಅವರ ಮೇಲೆ ಕಾವಲುಗಾರನಾಗಿದ್ದೆ. ಮತ್ತು ನೀನು ಪ್ರತಿಯೊಂದು ವಿಷಯಕ್ಕೂ ಸಾಕ್ಷಿಯಾಗಿರುವೆ.' [ಅಲ್-ಮಾಯಿದ: 117]"

ಎರಡನೇ ವಿಷಯ: ಈ ವಸಿಯ್ಯತ್ತಿನ ನಿರರ್ಥಕತೆಯನ್ನು ಮತ್ತು ಅದು ಸುಳ್ಳು ಎಂಬುದನ್ನು ಸೂಚಿಸುವ ವಿಷಯಗಳಲ್ಲಿ ಇನ್ನೊಂದು ಏನೆಂದರೆ, ಅದರಲ್ಲಿರುವ ಮಾತು: "ಇದನ್ನು ಬರೆಯುವವರು ಬಡವರಾಗಿದ್ದರೆ, ಅಲ್ಲಾಹು ಅವರನ್ನು ಶ್ರೀಮಂತರನ್ನಾಗಿ ಮಾಡುವನು, ಅಥವಾ ಸಾಲಗಾರನಾಗಿದ್ದರೆ, ಅಲ್ಲಾಹು ಅವನ ಸಾಲವನ್ನು ತೀರಿಸುವನು, ಅಥವಾ ಅವನ ಮೇಲೆ ಪಾಪವಿದ್ದರೆ, ಈ ವಸಿಯ್ಯತ್ತಿನ ಬರಕತ್‌ನಿಂದ ಅಲ್ಲಾಹು ಅವನನ್ನು ಮತ್ತು ಅವನ ಹೆತ್ತವರನ್ನು ಕ್ಷಮಿಸುವನು" ಎಂಬಲ್ಲಿಂದ ಕೊನೆಯವರೆಗೆ. ಇದು ಅತ್ಯಂತ ದೊಡ್ಡ ಸುಳ್ಳಾಗಿದ್ದು, ಈ ವಸಿಯ್ಯತ್ತನ್ನು ರಚಿಸಿದವನ ಸುಳ್ಳುಗಾರಿಕೆ ಮತ್ತು ಅಲ್ಲಾಹು ಹಾಗೂ ಅವನ ದಾಸರ ಮುಂದೆ ಅವರು ತೋರಿಸುವ ನಿರ್ಲಜ್ಜತೆಯೇ ಅತ್ಯಂತ ಸ್ಪಷ್ಟವಾದ ಪುರಾವೆಗಳಾಗಿವೆ. ಏಕೆಂದರೆ ಈ ಮೂರು ವಿಷಯಗಳು ಪವಿತ್ರ ಕುರ್‌ಆನ್ ಅನ್ನು ಬರೆಯುವುದರಿಂದಲೂ ದೊರೆಯುವುದಿಲ್ಲ. ಹಾಗಿರುವಾಗ, ಈ ಸುಳ್ಳು ವಸಿಯ್ಯತ್ತನ್ನು ಬರೆದವನಿಗೆ ಅವು ಹೇಗೆ ದೊರೆಯುತ್ತವೆ?! ಈ ದುರುಳನು ಜನರನ್ನು ಗೊಂದಲಕ್ಕೀಡುಮಾಡಲು ಮತ್ತು ಅವರು ಈ ವಸಿಯ್ಯತ್ತಿಗೆ ಅಂಟಿಕೊಳ್ಳುವಂತೆ ಮಾಡಲು ಬಯಸುತ್ತಾನೆ. ಅವರು ಅದನ್ನು ಬರೆಯುತ್ತಲೂ ಈ ಸುಳ್ಳು ಶ್ರೇಷ್ಠತೆಗೆ ಅಂಟಿಕೊಳ್ಳುತ್ತಲೂ ಇದ್ದು, ಅಲ್ಲಾಹು ತನ್ನ ದಾಸರಿಗಾಗಿ ನಿಯಮಗೊಳಿಸಿದ ಮತ್ತು ಶ್ರೀಮಂತಿಕೆ, ಸಾಲ ತೀರಿಸುವಿಕೆ ಮತ್ತು ಪಾಪಗಳ ಕ್ಷಮೆಗೆ ಕಾರಣಗಳಾಗಿ ಮಾಡಿದ ಮಾರ್ಗಗಳನ್ನು ತೊರೆಯಬೇಕೆಂದು ಬಯಸುತ್ತಾನೆ. ನಿರಾಶಾದಾಯಕ ಮಾರ್ಗಗಳಿಂದ ಮತ್ತು ಸ್ವೇಚ್ಛೆಯನ್ನು ಹಾಗೂ ಶೈತಾನನನ್ನು ಅನುಸರಿಸುವುದರಿಂದ ಅಲ್ಲಾಹನಲ್ಲಿ ಅಭಯ ಕೋರುತ್ತೇವೆ.

ಮೂರನೇ ವಿಷಯ: ಈ ವಸಿಯ್ಯತ್ತಿನ ನಿರರ್ಥಕತೆಯನ್ನು ಮತ್ತು ಅದು ಸುಳ್ಳು ಎಂಬುದನ್ನು ಸೂಚಿಸುವ ವಿಷಯಗಳಲ್ಲಿ ಇನ್ನೊಂದು ಏನೆಂದರೆ, ಅದರಲ್ಲಿರುವ ಮಾತು: "ಮತ್ತು ಅಲ್ಲಾಹನ ದಾಸರಲ್ಲಿ ಯಾರು ಇದನ್ನು ಬರೆಯುವುದಿಲ್ಲವೋ; ಅವನ ಮುಖವು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಕಪ್ಪಾಗುವುದು". ಇದು ಸಹ ಅತ್ಯಂತ ಕೆಟ್ಟ ಸುಳ್ಳಾಗಿದ್ದು, ಈ ವಸಿಯ್ಯತ್ತಿನ ನಿರರ್ಥಕತೆ ಮತ್ತು ಅದನ್ನು ರಚಿಸಿದವನ ಸುಳ್ಳುಗಾರಿಕೆಗೆ ಅತ್ಯಂತ ಸ್ಪಷ್ಟವಾದ ಪುರಾವೆಗಳಲ್ಲಿ ಒಂದಾಗಿದೆ. ಹದಿನಾಲ್ಕನೇ ಶತಮಾನದಲ್ಲಿ ಒಬ್ಬ ಅಜ್ಞಾತ ವ್ಯಕ್ತಿಯು, ಅಲ್ಲಾಹನ ಸಂದೇಶವಾಹಕರ (ಸ) ಮೇಲೆ ಕಟ್ಟುಕಥೆ ರಚಿಸಿ, ಯಾರು ಅದನ್ನು ಬರೆಯುವುದಿಲ್ಲವೋ ಅವನ ಮುಖವು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಕಪ್ಪಾಗುತ್ತದೆ, ಮತ್ತು ಯಾರು ಅದನ್ನು ಬರೆಯುತ್ತಾರೋ ಅವರು ಬಡವರಾಗಿದ್ದರೆ ಶ್ರೀಮಂತರಾಗುತ್ತಾರೆ, ಸಾಲದ ರಾಶಿಯನ್ನು ಹೊಂದಿದ್ದರೆ ಅದರಿಂದ ಮುಕ್ತರಾಗುತ್ತಾರೆ, ಮತ್ತು ತಾವು ಮಾಡಿದ ಪಾಪಗಳಿಗೆ ಕ್ಷಮೆ ಪಡೆಯುತ್ತಾರೆ ಎಂದು ಹೇಳುವ ಈ ವಸಿಯ್ಯತ್ತನ್ನು ಬರೆಯುವುದು ಯಾವುದೇ ಬುದ್ಧಿವಂತನ ಬುದ್ಧಿಗೆ ಹೇಗೆ ಸರಿಹೊಂದುತ್ತದೆ!

ಅಲ್ಲಾಹು ಪರಿಶುದ್ಧನು! ಇದು ಮಹಾ ಸುಳ್ಳಾಗಿದೆ!! ಪುರಾವೆಗಳು ಮತ್ತು ವಾಸ್ತವಿಕತೆಯು ಈ ಸುಳ್ಳುಗಾರನ ಸುಳ್ಳುಗಾರಿಕೆ, ಅಲ್ಲಾಹನ ಮುಂದೆ ಅವನ ಮಹಾ ಎದೆಗಾರಿಕೆ, ಮತ್ತು ಅಲ್ಲಾಹು ಹಾಗೂ ಜನರ ಮುಂದೆ ಅವನು ತೋರುವ ನಿರ್ಲಜ್ಜೆಗಳು ಸಾಕ್ಷಿಯಾಗಿವೆ. ಎಷ್ಟೋ ಜನಾಂಗಗಳು ಇದನ್ನು ಬರೆದಿಲ್ಲ. ಹಾಗಂತ ಅವರ ಮುಖಗಳು ಕಪ್ಪಾಗಿಲ್ಲ. ಇಲ್ಲಿ, ಅಲ್ಲಾಹನಿಗೆ ಮಾತ್ರ ಎಣಿಸಲಾಗುವಷ್ಟು ದೊಡ್ಡ ಸಂಖ್ಯೆಯ ಜನರು ಇದನ್ನು ಅನೇಕ ಸಲ ಬರೆದಿದ್ದಾರೆ. ಆದರೂ ಅವರ ಸಾಲ ತೀರಲಿಲ್ಲ, ಅವರ ಬಡತನ ದೂರವಾಗಲಿಲ್ಲ. ಹೃದಯಗಳ ವಕ್ರತೆಯಿಂದ ಮತ್ತು ಪಾಪಗಳ ಕಳಂಕದಿಂದ ನಾವು ಅಲ್ಲಾಹನಲ್ಲಿ ಅಭಯ ಕೋರುತ್ತೇವೆ. ಈ ವೈಶಿಷ್ಟ್ಯಗಳು ಮತ್ತು ಪ್ರತಿಫಲಗಳು ಅತ್ಯುತ್ತಮ ಮತ್ತು ಮಹಾನ್ ಗ್ರಂಥವಾದ ಪವಿತ್ರ ಕುರ್‌ಆನ್ ಅನ್ನು ಬರೆದವರಿಗೆ ಸಿಗುತ್ತದೆಯೆಂದು ಪವಿತ್ರ ಶರೀಅತ್‌ನಲ್ಲಿ ಹೇಳಲಾಗಿಲ್ಲ. ಹಾಗಿರುವಾಗ, ವಿಭಿನ್ನ ಸುಳ್ಳುಗಳನ್ನು ಒಳಗೊಂಡ, ಮತ್ತು ಸತ್ಯನಿಷೇಧದ ವಾಕ್ಯಗಳನ್ನು ಒಳಗೊಂಡ ಈ ಸುಳ್ಳು ವಸಿಯ್ಯತ್ತನ್ನು ಬರೆದವನಿಗೆ ಅವು ಹೇಗೆ ಸಿಗುತ್ತವೆ? ಸುಬ್‌ಹಾನಲ್ಲಾಹ್!! ತನ್ನ ಮೇಲೆ ಸುಳ್ಳು ಹೇಳುವ ಧೈರ್ಯ ಮಾಡಿದವನಿಗೂ (ಶಿಕ್ಷೆ ಕೊಡದ ಅಲ್ಲಾಹು) ಎಷ್ಟು ದೊಡ್ಡ ಸಹನಾಶೀಲನು.

ನಾಲ್ಕನೇ ವಿಷಯ: – ಈ ವಸಿಯ್ಯತ್ತಿನ ನಿರರ್ಥಕತೆಯನ್ನು ಮತ್ತು ಅದು ಸುಳ್ಳು ಎಂಬುದನ್ನು ಸೂಚಿಸುವ ವಿಷಯಗಳಲ್ಲಿ ಇನ್ನೊಂದು ಏನೆಂದರೆ, ಅದರಲ್ಲಿರುವ ಮಾತು: "ಯಾರು ಇದನ್ನು ನಂಬುತ್ತಾರೋ ಅವರು ನರಕದ ಶಿಕ್ಷೆಯಿಂದ ಪಾರಾಗುತ್ತಾರೆ, ಮತ್ತು ಯಾರು ಇದನ್ನು ಸುಳ್ಳೆಂದು ಹೇಳುತ್ತಾರೋ ಅವರು ಕಾಫಿರ್ (ಸತ್ಯನಿಷೇಧಿ) ಆಗುತ್ತಾರೆ." ಇದು ಕೂಡ ಸುಳ್ಳು ಹೇಳುವುದರಲ್ಲಿ ತೋರುವ ಅತ್ಯಂತ ದೊಡ್ಡ ಎದೆಗಾರಿಕೆಯಾಗಿದೆ ಮತ್ತು ಅತ್ಯಂತ ಕೆಟ್ಟ ಸುಳ್ಳಾಗಿದೆ. ಈ ಸುಳ್ಳುಗಾರನು ತನ್ನ ಕಟ್ಟುಕಥೆಯನ್ನು ನಂಬುವಂತೆ ಎಲ್ಲಾ ಜನರಿಗೂ ಕರೆ ನೀಡುತ್ತಿದ್ದಾನೆ, ಮತ್ತು ಅದರಿಂದ ಅವರು ನರಕದ ಶಿಕ್ಷೆಯಿಂದ ಪಾರಾಗುತ್ತಾರೆಂದು, ಮತ್ತು ಯಾರು ಅದನ್ನು ಸುಳ್ಳೆಂದು ಹೇಳುತ್ತಾರೋ ಅವರು ಕಾಫಿರ್ ಆಗುತ್ತಾರೆಂದು ವಾದಿಸುತ್ತಾನೆ. ಅಲ್ಲಾಹನ ಮೇಲಾಣೆ, ಈ ಸುಳ್ಳುಗಾರನು ಅಲ್ಲಾಹನ ಮೇಲೆ ಮಹಾ ಸುಳ್ಳನ್ನು ಹೊರಿಸಿದ್ದಾನೆ. ಅಲ್ಲಾಹನ ಮೇಲಾಣೆ, ಅವನು ಸತ್ಯವಲ್ಲದ್ದನ್ನು ಹೇಳಿದ್ದಾನೆ. ಇದನ್ನು ನಂಬಿದವರೇ ಕಾಫಿರ್ ಆಗಲು ಅರ್ಹರಾಗಿದ್ದಾರೆಯೇ ಹೊರತು ಅದನ್ನು ಸುಳ್ಳೆಂದು ಹೇಳಿದವರಲ್ಲ. ಏಕೆಂದರೆ ಇದು ಕಟ್ಟುಕಥೆ, ಮಿಥ್ಯೆ ಮತ್ತು ಸುಳ್ಳಾಗಿದ್ದು, ಅದಕ್ಕೆ ಸತ್ಯದ ಯಾವುದೇ ಆಧಾರವಿಲ್ಲ. ಇದು ಸುಳ್ಳಾಗಿದೆ, ಮತ್ತು ಇದನ್ನು ರಚಿಸಿದವನು ಸುಳ್ಳುಗಾರನಾಗಿದ್ದಾನೆ ಎಂದು ನಾವು ಅಲ್ಲಾಹನನ್ನು ಸಾಕ್ಷಿಯಾಗಿಸಿ ಹೇಳುತ್ತೇವೆ. ಅಲ್ಲಾಹು ಅನುಮತಿಸದ ವಿಷಯಗಳನ್ನು ಜನರಿಗೆ ನಿಯಮವನ್ನಾಗಿ ಮಾಡಲು ಮತ್ತು ಧರ್ಮದಲ್ಲಿಲ್ಲದ್ದನ್ನು ಸೇರಿಸಲು ಅವನು ಬಯಸುತ್ತಾನೆ. ಅಲ್ಲಾಹು ಈ ಕಟ್ಟುಕಥೆಗಿಂತ ಹದಿನಾಲ್ಕು ಶತಮಾನಗಳ ಹಿಂದೆಯೇ ಈ ಉಮ್ಮತ್‌ಗೆ ಧರ್ಮವನ್ನು ಪೂರ್ಣಗೊಳಿಸಿದ್ದಾನೆ. ಆದ್ದರಿಂದ, ಓದುಗರೇ ಮತ್ತು ಸಹೋದರರೇ, ಎಚ್ಚರವಾಗಿರಿ. ಇಂತಹ ಕಟ್ಟುಕಥೆಗಳನ್ನು ನಂಬುವುದರಿಂದ ಮತ್ತು ಅವು ನಿಮ್ಮ ನಡುವೆ ಪ್ರಚಾರವಾಗುವುದರಿಂದ ದೂರವಿರಿ. ಏಕೆಂದರೆ, ಸತ್ಯದ ಮೇಲೆ ಒಂದು ಬೆಳಕು ಇದ್ದು, ಅದನ್ನು ಹುಡುಕುವವನಿಗೆ ಅದು ಗೊಂದಲಕ್ಕೀಡುಮಾಡುವುದಿಲ್ಲ. ಆದ್ದರಿಂದ ಸತ್ಯವನ್ನು ಅದರ ಪುರಾವೆಯೊಂದಿಗೆ ಹುಡುಕಿರಿ, ಮತ್ತು ನಿಮಗೆ ಗೊಂದಲವಿರುವ ವಿಷಯಗಳ ಬಗ್ಗೆ ವಿದ್ವಾಂಸರನ್ನು ಕೇಳಿರಿ. ಸುಳ್ಳುಗಾರರ ಆಣೆಗಳಿಂದ ಮೋಸಹೋಗಬೇಡಿ. ಶಾಪಗ್ರಸ್ತ ಇಬ್ಲೀಸನು ನಿಮ್ಮ ತಂದೆತಾಯಿಗಳಾದ ಆದಂ ಮತ್ತು ಹವ್ವಾ ರಿಗೆ ತಾನು ಅವರಿಬ್ಬರ ಹಿತಚಿಂತಕನೆಂದು ಆಣೆ ಮಾಡಿ ಹೇಳಿದ್ದನು. ಆದರೆ ಅವನು ಅತ್ಯಂತ ದೊಡ್ಡ ದ್ರೋಹಿ ಮತ್ತು ಅತ್ಯಂತ ದೊಡ್ಡ ಸುಳ್ಳುಗಾರನಾಗಿದ್ದಾನೆಂದು ಅಲ್ಲಾಹು ಹೇಳಿದ್ದಾನೆ. ಅಲ್ಲಾಹು ಹೇಳುತ್ತಾನೆ:

﴿وَقَاسَمَهُمَآ إِنِّي لَكُمَا لَمِنَ ٱلنَّٰصِحِينَ21﴾

“ನಿಶ್ಚಯವಾಗಿಯೂ ನಾನು ನಿಮ್ಮ ಹಿತೈಷಿಯಾಗಿದ್ದೇನೆ” ಎಂದು ಅವನು ಪ್ರತಿಜ್ಞೆ ಮಾಡಿ ಹೇಳಿದನು. [ಅಲ್-ಅಅ್‌ರಾಫ್: 21] ಆದ್ದರಿಂದ ಅವನ ಬಗ್ಗೆ ಮತ್ತು ಸುಳ್ಳುಗಾರರಾದ ಅವನ ಅನುಯಾಯಿಗಳ ಬಗ್ಗೆ ಎಚ್ಚರವಾಗಿರಿ. ಅವನ ಮತ್ತು ಅವರ (ಅವನ ಅನುಯಾಯಿಗಳ) ಸುಳ್ಳು ಆಣೆಗಳಿಗೆ, ವಂಚನೆಯ ಕರಾರುಗಳಿಗೆ, ಮತ್ತು ದಾರಿತಪ್ಪಿಸಲು ಹಾಗೂ ಮೋಸಗೊಳಿಸಲು ಹೇಳಿದ ಅಲಂಕೃತ ಮಾತುಗಳಿಗೆ ಲೆಕ್ಕವೇ ಇಲ್ಲ! ನಿಷಿದ್ಧ ಕಾರ್ಯಗಳು ಹೆಚ್ಚಾಗಿರುವುದರ ಬಗ್ಗೆ ಈ ಸುಳ್ಳುಗಾರನು ಹೇಳಿದ್ದು ಸತ್ಯ ಸಂಗತಿಯಾಗಿದೆ. ಪವಿತ್ರ ಕುರ್‌ಆನ್ ಮತ್ತು ಪರಿಶುದ್ಧ ಸುನ್ನತ್ ಅವುಗಳ ಬಗ್ಗೆ ಅತ್ಯಂತ ತೀವ್ರವಾಗಿ ಎಚ್ಚರಿಸಿವೆ. ಮಾರ್ಗದರ್ಶನ ಮತ್ತು ಪರ್ಯಾಪ್ತತೆಯಿರುವುದು ಅವೆರಡರಲ್ಲಿ ಮಾತ್ರ.

ಇನ್ನು ಅವನು ಹೇಳಿರುವ ಕಿಯಾಮತ್ ದಿನದ ಚಿಹ್ನೆಗಳ ಬಗ್ಗೆ ಹೇಳುವುದಾದರೆ, ಕಿಯಾಮತ್ ದಿನದ ಚಿಹ್ನೆಗಳು ಹೇಗಿರುತ್ತವೆ ಎಂಬುದನ್ನು ಪ್ರವಾದಿ (ಸ) ರವರ ಹದೀಸ್‌ಗಳು ವಿವರಿಸಿಕೊಟ್ಟಿವೆ, ಮತ್ತು ಪವಿತ್ರ ಕುರ್‌ಆನ್ ಅದರ ಕೆಲವು ಭಾಗಗಳನ್ನು ಸೂಚಿಸಿದೆ. ಅದನ್ನು ತಿಳಿಯಲು ಬಯಸುವವರು ಅದನ್ನು ಸುನ್ನತ್‌ನ ಗ್ರಂಥಗಳಲ್ಲಿ ಮತ್ತು ಜ್ಞಾನ ಹಾಗೂ ಈಮಾನ್ ಉಳ್ಳವರ ಕೃತಿಗಳಲ್ಲಿ ಅದರ ಅಧ್ಯಾಯಗಳಲ್ಲಿ ಕಾಣಬಹುದು. ಇಂತಹ ಸುಳ್ಳುಗಾರನ ವಿವರಣೆ, ಅವನ ಗೊಂದಲ, ಮತ್ತು ಸತ್ಯವನ್ನು ಮಿಥ್ಯದೊಂದಿಗೆ ಬೆರೆಸುವುದರ ಅವಶ್ಯಕತೆ ಜನರಿಗೆ ಇಲ್ಲ. ಅಲ್ಲಾಹು ನನ್ನನ್ನು, ನಿಮ್ಮನ್ನು ಮತ್ತು ಎಲ್ಲ ಮುಸ್ಲಿಮರನ್ನು ಶೈತಾನರ ಕೆಡುಕಿನಿಂದ, ದಾರಿತಪ್ಪಿಸುವವರ ಫಿತ್ನಾ (ಗೊಂದಲ) ಗಳಿಂದ, ದಾರಿತಪ್ಪಿದವರ ವಕ್ರತೆಯಿಂದ, ಮತ್ತು ಅಲ್ಲಾಹನ ಬೆಳಕನ್ನು ತಮ್ಮ ಬಾಯಿಗಳಿಂದ ನಂದಿಸಲು ಬಯಸುವ, ಹಾಗೂ ಜನರಿಗೆ ಅವರ ಧರ್ಮದ ಬಗ್ಗೆ ಗೊಂದಲ ಮೂಡಿಸಲು ಬಯಸುವ, ಅಲ್ಲಾಹನ ಶತ್ರುಗಳಾದ ಮಿಥ್ಯಾವಾದಿಗಳ ಗೊಂದಲದಿಂದ ರಕ್ಷಿಸಲಿ. ಅಲ್ಲಾಹು ತನ್ನ ಬೆಳಕನ್ನು ಪೂರ್ಣಗೊಳಿಸುವನು ಮತ್ತು ತನ್ನ ಧರ್ಮಕ್ಕೆ ಸಹಾಯ ಮಾಡುವನು. ಶೈತಾನರು ಮತ್ತು ಅವರ ಅನುಯಾಯಿಗಳಾದ ಸತ್ಯನಿಷೇಧಿಗಳು ಮತ್ತು ನಾಸ್ತಿಕರಾದ ಅಲ್ಲಾಹನ ಶತ್ರುಗಳು ಅದನ್ನು ಎಷ್ಟೇ ದ್ವೇಷಿಸಿದರೂ ಸಹ. ಮುಸ್ಲಿಮರ ಪರಿಸ್ಥಿತಿಗಳನ್ನು ಸರಿಪಡಿಸಲು, ಸತ್ಯವನ್ನು ಅನುಸರಿಸುವ, ಅದರ ಮೇಲೆ ಸ್ಥಿರವಾಗಿ ನಿಲ್ಲುವ ಮತ್ತು ಎಲ್ಲಾ ಪಾಪಗಳಿಂದ ಅಲ್ಲಾಹನ ಬಳಿ ಪಶ್ಚಾತ್ತಾಪಪಡುವ ಅನುಗ್ರಹವನ್ನು ಅವರಿಗೆ ದಯಪಾಲಿಸಲು ನಾವು ಅಲ್ಲಾಹನಲ್ಲಿ ಬೇಡುತ್ತೇವೆ. ನಿಶ್ಚಯವಾಗಿಯೂ ಅವನು ಅತ್ಯಂತ ಪಶ್ಚಾತ್ತಾಪ ಸ್ವೀಕರಿಸುವವನು, ಕರುಣಾಮಯಿ ಮತ್ತು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ನಮಗೆ ಅಲ್ಲಾಹು ಸಾಕು, ಮತ್ತು ಅವನು ಅತ್ಯುತ್ತಮ ಕಾರ್ಯನಿರ್ವಾಹಕನಾಗಿದ್ದಾನೆ. ಮಹೋನ್ನತನು ಮತ್ತು ಮಹಾನನಾದ ಅಲ್ಲಾಹನಲ್ಲಿಯೇ ಹೊರತು ಯಾವುದೇ ಶಕ್ತಿ ಅಥವಾ ಸಾಮರ್ಥ್ಯವಿಲ್ಲ.

ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹು ಸತ್ಯವಂತ ಮತ್ತು ಪ್ರಾಮಾಣಿಕರಾದ ತನ್ನ ದಾಸ ಮತ್ತು ಸಂದೇಶವಾಹಕರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಮತ್ತು ಕಿಯಾಮತ್ ದಿನದವರೆಗೆ ಉತ್ತಮ ರೀತಿಯಲ್ಲಿ ಅವರನ್ನು ಅನುಸರಿಸುವವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳನ್ನು ವರ್ಷಿಸಲಿ.

 

 

***

 


بِسْمِ اللهِ الرَّحمَنِ الرَّحِيمِ

ಒಂಬತ್ತನೇ ಸಂದೇಶ:

ಮಾಟ, ಭವಿಷ್ಯ ಹೇಳುವುದು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ವಿಧಿ18

ಅಲ್ಲಾಹನೊಬ್ಬನಿಗೇ ಸರ್ವಸ್ತುತಿಗಳು. ಯಾರ ನಂತರ ಬೇರೆ ಯಾವುದೇ ಪ್ರವಾದಿ ಇಲ್ಲವೋ ಅವರ (ಪ್ರವಾದಿ ಮುಹಮ್ಮದ್) ಮೇಲೆ ಶಾಂತಿ ಹಾಗೂ ಶುಭಾಶೀರ್ವಾದಗಳು ವರ್ಷಿಸಲಿ.

ಇತ್ತೀಚಿನ ದಿನಗಳಲ್ಲಿ ಮಾಟ ಅಥವಾ ಭವಿಷ್ಯ ನುಡಿಯುವ ಮೂಲಕ ವೈದ್ಯರೆಂದು ಹೇಳಿಕೊಳ್ಳುವ ಮತ್ತು ಚಿಕಿತ್ಸೆ ನೀಡುವ ಮೋಸಗಾರರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ, ಹಾಗೂ ಕೆಲವು ದೇಶಗಳಲ್ಲಿ ಅವರು ಹರಡುತ್ತಿರುವುದನ್ನು ಮತ್ತು ಹೆಚ್ಚಾಗಿ ಅವರು ಅಜ್ಞಾನಿಗಳಾಗಿರುವ ಮುಗ್ಧ ಜನರನ್ನು ಶೋಷಿಸುತ್ತಿರುವುದನ್ನು ಗಮನಿಸಿ, ಅಲ್ಲಾಹು ಮತ್ತು ಅವನ ದಾಸರ ಹಿತಚಿಂತನೆ ಮಾಡುವುದರ ಒಂದು ಭಾಗವಾಗಿ, ಇಸ್ಲಾಂ ಮತ್ತು ಮುಸ್ಲಿಮರ ಮೇಲೆ ಇದು ಬೀರುವ ಗಂಭೀರ ಅಪಾಯವನ್ನು ವಿವರಿಸಲು ನಾನು ನಿರ್ಧರಿಸಿದೆ. ಏಕೆಂದರೆ ಇದು ಸರ್ವಶಕ್ತನಾದ ಅಲ್ಲಾಹನನ್ನು ಬಿಟ್ಟು ಇತರರೊಂದಿಗೆ ಸಂಬಂಧ ಹೊಂದುವುದನ್ನು, ಮತ್ತು ಅವನ ಹಾಗೂ ಅವನ ಸಂದೇಶವಾಹಕರ (ಸ) ಆದೇಶವನ್ನು ಉಲ್ಲಂಘಿಸುವುದನ್ನು ಒಳಗೊಂಡಿದೆ.

ಆದ್ದರಿಂದ, ಸರ್ವಶಕ್ತನಾದ ಅಲ್ಲಾಹನ ಸಹಾಯವನ್ನು ಕೋರುತ್ತಾ ನಾನು ಹೇಳುವುದೇನೆಂದರೆ: ಚಿಕಿತ್ಸೆ ಪಡೆಯಬಹುದು ಎಂಬುದಕ್ಕೆ ವಿದ್ವಾಂಸರ ಒಮ್ಮತವಿದೆ. ತನ್ನ ರೋಗವನ್ನು ಪತ್ತೆ ಹಚ್ಚಲು, ಮತ್ತು ವೈದ್ಯಕೀಯ ಶಾಸ್ತ್ರದಂತೆ ವೈದ್ಯರು ಅದಕ್ಕೆ ಶರಿಯತ್ ಪ್ರಕಾರ ಅನುಮತಿಸಲಾದ ಸೂಕ್ತವಾದ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲು, ಒಬ್ಬ ಮುಸ್ಲಿಂ ವ್ಯಕ್ತಿಯು ಆಂತರಿಕ ತಜ್ಞ, ಸರ್ಜನ್, ನರರೋಗ ತಜ್ಞ ಮುಂತಾದ ವೈದ್ಯರ ಬಳಿಗೆ ಹೋಗಬಹುದು. ಏಕೆಂದರೆ ಇದು ಕಾರ್ಯ ಕಾರಣಗಳನ್ನು ಸ್ವೀಕರಿಸಿಕೊಳ್ಳುವುದರ ಭಾಗವಾಗಿದೆ. ಇದು ಅಲ್ಲಾಹನ ಮೇಲೆ ಭರವಸೆ ಇಡುವುದಕ್ಕೆ (ತವಕ್ಕುಲ್) ವಿರುದ್ಧವಲ್ಲ. ಏಕೆಂದರೆ, ಅಲ್ಲಾಹು ರೋಗವನ್ನು ಇಳಿಸಿದ್ದಾನೆ ಮತ್ತು ಅದರೊಂದಿಗೆ ಔಷಧಿಯನ್ನೂ ಇಳಿಸಿದ್ದಾನೆ. ಕೆಲವರಿಗೆ ಆ ಔಷಧವು ತಿಳಿದಿದೆ ಮತ್ತು ಇತರರಿಗೆ ತಿಳಿದಿಲ್ಲ. ಆದರೆ ಅಲ್ಲಾಹು ತನ್ನ ದಾಸರಿಗೆ ನಿಷಿದ್ಧಗೊಳಿಸಿದ ವಸ್ತುಗಳಲ್ಲಿ ಅವನು ಗುಣಪಡಿಸುವಿಕೆಯನ್ನು ಇಟ್ಟಿಲ್ಲ.

ಆದ್ದರಿಂದ, ರೋಗಿಯು ಅದೃಶ್ಯ ವಿಷಯಗಳನ್ನು ತಿಳಿದಿದ್ದೇವೆಂದು ಹೇಳಿಕೊಳ್ಳುವ ಭವಿಷ್ಯ ನುಡಿಯುವವರ ಬಳಿಗೆ ತನ್ನ ರೋಗದ ಬಗ್ಗೆ ತಿಳಿಯಲು ಹೋಗುವುದು ಸಮ್ಮತಾರ್ಹವಲ್ಲ. ಹಾಗೆಯೇ, ಅವರು ಹೇಳುವ ವಿಷಯಗಳಲ್ಲಿ ಅವರನ್ನು ನಂಬುವುದೂ ಸಮ್ಮತಾರ್ಹವಲ್ಲ. ಏಕೆಂದರೆ ಅವರು ಊಹಾಪೋಹಗಳ ಮೂಲಕ ಮಾತನಾಡುತ್ತಾರೆ. ಅಥವಾ ಅವರು ಬಯಸಿದ್ದನ್ನು ಸಾಧಿಸಲು ಸಹಾಯಕ್ಕಾಗಿ ಜಿನ್ನ್‌ಗಳನ್ನು ಕರೆಯುತ್ತಾರೆ. ಇವರು ತಮಗೆ ಅದೃಶ್ಯ ಜ್ಞಾನವಿದೆಯೆಂದು ಹೇಳಿಕೊಂಡರೆ ಅವರ ವಿಧಿಯು ಸತ್ಯನಿಷೇಧ ಮತ್ತು ದುರ್ಮಾರ್ಗವಾಗಿದೆ.

ಇಮಾಮ್ ಮುಸ್ಲಿಮ್ ತನ್ನ ಸಹೀಹ್ನಲ್ಲಿ ವರದಿ ಮಾಡಿದ್ದಾರೆ, ಅಲ್ಲಾಹನ ಪ್ರವಾದಿ ﷺ ರವರು ಹೇಳಿದರು:

«مَنْ أَتَى عَرَّافًا فَسَأَلَهُ عَنْ شَيْءٍ، لَمْ تُقْبَلْ لَهُ صَلَاةٌ أَرْبَعِينَ يَوْمًا».

"ಯಾರು ಭವಿಷ್ಯ ನುಡಿಯುವವನ ಬಳಿಗೆ ಹೋಗಿ ಯಾವುದಾದರೂ ವಿಷಯದ ಬಗ್ಗೆ ಕೇಳುತ್ತಾರೋ, ಅವರ ನಲವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ."

ಅಬೂ ಹುರೈರಾ (ರ) ರಿಂದ ವರದಿ. ಪ್ರವಾದಿ (ಸ) ಹೇಳಿದರು:

«مَنْ أَتَى كَاهِنًا فَصَدَّقَهُ بِمَا يَقُولُ، فَقَدْ كَفَرَ بِمَا أُنْزِلَ عَلَى مُحَمَّدٍ ﷺ».

ಯಾರು ಜ್ಯೋತಿಷಿಯ ಬಳಿಗೆ ಹೋಗಿ ಅವನು ಹೇಳುವುದನ್ನು ಸತ್ಯವೆಂದು ನಂಬುತ್ತಾರೋ, ಅವರು ಮುಹಮ್ಮದ್ (ಸ) ರಿಗೆ ಅವತೀರ್ಣವಾದುದನ್ನು ನಿಷೇಧಿಸಿದರು. ಇದನ್ನು ಅಬೂ ದಾವೂದ್ ವರದಿ ಮಾಡಿದ್ದಾರೆ ಮತ್ತು ನಾಲ್ಕು ಸುನನ್‌ಗಳ ಲೇಖಕರು ಇದನ್ನು ಉಲ್ಲೇಖಿಸಿದ್ದಾರೆ. ಹಾಕಿಮ್ ಇದನ್ನು ಪ್ರವಾದಿ (ಸ) ರವರಿಂದ ಈ ಕೆಳಗಿನ ಪದಗಳೊಂದಿಗೆ ಸಹೀಹ್ ಎಂದು ಘೋಷಿಸಿದ್ದಾರೆ:

«مَنْ أَتَى عَرَّافًا أَوْ كَاهِنًا فَصَدَّقَهُ بِمَا يَقُولُ، فَقَدْ كَفَرَ بِمَا أُنْزِلَ عَلَى مُحَمَّدٍ ﷺ».

«ಯಾರು ಜ್ಯೋತಿಷಿ ಅಥವಾ ಶಕುನ ಹೇಳುವವನ ಬಳಿಗೆ ಹೋಗಿ ಅವನು ಹೇಳುವುದನ್ನು ಸತ್ಯವೆಂದು ದೃಢೀಕರಿಸುತ್ತಾನೋ, ಅವನು ಮುಹಮ್ಮದ್ ﷺ ರವರಿಗೆ ಅವತೀರ್ಣವಾದುದನ್ನು ನಿಷೇಧಿಸಿದನು».

ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

«لَيْسَ مِنَّا مَنْ تَطَيَّرَ أَوْ تُطُيِّرَ لَهُ، أَوْ تَكَهَّنَ أَوْ تُكُهِّنَ لَهُ، أَوْ سَحَرَ أَوْ سُحِرَ لَهُ، وَمَنْ أَتَى كَاهِنًا فَصَدَّقَهُ بِمَا يَقُولُ، فَقَدْ كَفَرَ بِمَا أُنْزِلَ عَلَى مُحَمَّدٍ ﷺ».

ಶಕುನ ನೋಡುವವನು ಅಥವಾ ಶಕುನ ನೋಡಿಸುವವನು, ಭವಿಷ್ಯ ನುಡಿಯುವವನು ಅಥವಾ ಭವಿಷ್ಯ ನುಡಿಸುವವನು, ಮಾಟ ಮಾಡುವವನು ಅಥವಾ ಮಾಟ ಮಾಡಿಸುವವನು ನಮ್ಮವರಲ್ಲ. ಯಾರು ಜ್ಯೋತಿಷಿಯ ಬಳಿಗೆ ಹೋಗಿ ಅವನು ಹೇಳುವುದನ್ನು ದೃಢೀಕರಿಸುತ್ತಾನೋ, ಅವನು ಮುಹಮ್ಮದ್ ﷺ ರವರ ಮೇಲೆ ಅವತೀರ್ಣವಾದುದನ್ನು ನಿಷೇಧಿಸಿದನು, ಇದನ್ನು ಬಝ್ಝಾರ್ ಉತ್ತಮ ಸನದ್‌ನೊಂದಿಗೆ ವರದಿ ಮಾಡಿದ್ದಾರೆ.

ಈ ಗೌರವಾನ್ವಿತ ಹದೀಸ್‌ಗಳಲ್ಲಿ ಭವಿಷ್ಯ ನುಡಿಯುವವರು, ಜ್ಯೋತಿಷಿಗಳು, ಮಾಟಗಾರರು ಮುಂತಾದ ವ್ಯಕ್ತಿಗಳ ಬಳಿಗೆ ಹೋಗುವುದನ್ನು, ಅವರೊಡನೆ ಕೇಳುವುದನ್ನು ಮತ್ತು ಅವರು ಹೇಳುವುದನ್ನು ನಂಬುವುದನ್ನು ನಿಷೇಧಿಸಲಾಗಿದೆ, ಮತ್ತು ಅದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಅವರ ಕೆಲವು ವಿಷಯಗಳು ಸತ್ಯವಾಗಿ ಮತ್ತು ಅವರ ಬಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮೋಸಗೊಳಗಾಗುವುದು ಸರಿಯಲ್ಲ. ಏಕೆಂದರೆ ಅವರು ಅಜ್ಞಾನಿಗಳಾಗಿದ್ದು, ಜನರು ಅವರಿಂದ ಮೋಸಹೋಗಬಾರದು. ಏಕೆಂದರೆ ಪ್ರವಾದಿ(ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರು ಅವರ ಬಳಿಗೆ ಹೋಗುವುದನ್ನು, ಅವರಿಂದ ಕೇಳುವುದನ್ನು ಮತ್ತು ಅವರ ಮಾತನ್ನು ದೃಢೀಕರಿಸುವುದನ್ನು ನಿಷೇಧಿಸಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಅದರಲ್ಲಿ ದೊಡ್ಡ ಕೆಡುಕು, ಗಂಭೀರ ಅಪಾಯ ಮತ್ತು ಕೆಟ್ಟ ಪರಿಣಾಮಗಳಿವೆ. ಹಾಗೆಯೇ ಅವರು ಸುಳ್ಳುಗಾರರು ಮತ್ತು ಪಾಪಿಗಳಾಗಿದ್ದಾರೆ.

ಅಷ್ಟೇ ಅಲ್ಲದೆ, ಈ ಹದೀಸ್‌ಗಳಲ್ಲಿ ಭವಿಷ್ಯ ನುಡಿಯುವವರ ಮತ್ತು ಮಾಟಗಾರರ ಸತ್ಯನಿಷೇಧಕ್ಕೆ ಪುರಾವೆಗಳಿವೆ. ಏಕೆಂದರೆ ಅವರಿಬ್ಬರೂ ತಮಗೆ ಅದೃಶ್ಯ ಜ್ಞಾನವಿದೆಯೆಂದು ಹೇಳಿಕೊಳ್ಳುತ್ತಾರೆ. ಇದು ಸತ್ಯನಿಷೇಧವಾಗಿದೆ. ಹಾಗೆಯೇ, ಅವರು ಜಿನ್ನ್‌ಗಳ ಸೇವೆ ಮಾಡದೆ ಮತ್ತು ಅಲ್ಲಾಹನ ಹೊರತಾಗಿ ಅವರನ್ನು ಪೂಜಿಸದೆ ತಮ್ಮ ಉದ್ದೇಶವನ್ನು ಸಾಧಿಸಲಾರರು. ಇದು ಅಲ್ಲಾಹನೊಂದಿಗೆ ಕುಫ್ರ್ (ಸತ್ಯನಿಷೇಧ) ಮತ್ತು ಶಿರ್ಕ್ (ಸಹಭಾಗಿತ್ವ) ಮಾಡುವುದಾಗಿದೆ. ತಮಗೆ ಅದೃಶ್ಯ ಜ್ಞಾನವಿದೆಯೆಂಬ ಅವರ ಹೇಳಿಕೆಯಲ್ಲಿ ಅವರನ್ನು ನಂಬುವವನು ಅವರಂತೆಯೇ ಆಗುತ್ತಾನೆ. ಯಾರು ಈ ವಿಷಯಗಳನ್ನು ಅವುಗಳಲ್ಲಿ ತೊಡಗಿಕೊಂಡವರಿಂದ ಸ್ವೀಕರಿಸುತ್ತಾರೋ, ಅವರಿಂದ ಅಲ್ಲಾಹನ ಸಂದೇಶವಾಹಕರು (ಸ) ಸಂಪೂರ್ಣ ಮುಕ್ತರಾಗಿದ್ದಾರೆ.

ಅಷ್ಟೇ ಅಲ್ಲದೆ, ಅವರು ಚಿಕಿತ್ಸೆ ಎಂದು ಹೇಳಿಕೊಳ್ಳುವುದಕ್ಕೆ ಒಳಗಾಗುವುದು ಮುಸ್ಲಿಮನಿಗೆ ಸಮ್ಮತಾರ್ಹವಲ್ಲ. ಉದಾಹರಣೆಗೆ; ತಾಯಿತಗಳಿಂದ ಮಂತ್ರಿಸುವುದು ಅಥವಾ ಸೀಸವನ್ನು ಕರಗಿಸುವುದು ಮುಂತಾದ ಮೂಢನಂಬಿಕೆಗಳು. ಏಕೆಂದರೆ ಇದು ಭವಿಷ್ಯ ನುಡಿಯುವುದು ಮತ್ತು ಜನರನ್ನು ಮೋಸಗೊಳಿಸುವುದಾಗಿದೆ. ಯಾರು ಇದಕ್ಕೆ ಸಮ್ಮತಿ ಸೂಚಿಸುತ್ತಾರೋ, ಅವರು ಅವರ ಸುಳ್ಳು ಮತ್ತು ಸತ್ಯನಿಷೇಧದಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ತನ್ನ ಮಗ ಅಥವಾ ಸಂಬಂಧಿಕರು ಯಾರನ್ನು ಮದುವೆಯಾಗುತ್ತಾರೆ, ಅಥವಾ ದಂಪತಿಗಳು ಮತ್ತು ಅವರ ಕುಟುಂಬಗಳ ನಡುವೆ ಪ್ರೀತಿ ಮತ್ತು ನಿಷ್ಠೆ ಇರುತ್ತದೆಯೇ, ಅಥವಾ ದ್ವೇಷ ಮತ್ತು ವಿರಹ ಇರುತ್ತದೆಯೇ ಎಂದು ಅವರನ್ನು ಕೇಳಲು ಯಾವುದೇ ಮುಸ್ಲಿಮನು ಅವರ ಬಳಿಗೆ ಹೋಗುವುದು ಸಮ್ಮತಾರ್ಹವಲ್ಲ. ಏಕೆಂದರೆ ಇದು ಸರ್ವಶಕ್ತನಾದ ಅಲ್ಲಾಹನಿಗೆ ಮಾತ್ರ ತಿಳಿದಿರುವ ಅದೃಶ್ಯ (ಗೈಬ್) ವಿಷಯಗಳಾಗಿವೆ.

ಆದ್ದರಿಂದ ಆಡಳಿತಗಾರರು, ಹಿಸ್ಬಾ ಅಧಿಕಾರಿಗಳು ಹಾಗೂ ಅಧಿಕಾರ ಮತ್ತು ಪ್ರಭಾವ ಹೊಂದಿರುವವರು ಜ್ಯೋತಿಷಿಗಳು ಮತ್ತು ಭವಿಷ್ಯ ನುಡಿಯುವವರ ಬಳಿಗೆ ಹೋಗುವುದನ್ನು ತಡೆಯುವುದು, ಮಾರುಕಟ್ಟೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ನಿಲ್ಲಿಸುವುದು, ಅವರನ್ನು ಹಾಗೂ ಅವರ ಬಳಿಗೆ ಹೋಗುವವರನ್ನು ಕಠಿಣವಾಗಿ ಆಕ್ಷೇಪಿಸುವುದು ಕಡ್ಡಾಯವಾಗಿದೆ.

ಹಾಗೆಯೇ ಮಾಟಗಾರಿಕೆ ಕೂಡ. ಇದು ಕೂಡ ಸತ್ಯನಿಷೇಧದ ನಿಷಿದ್ಧ ಕಾರ್ಯಗಳಲ್ಲಿ ಒಂದಾಗಿದೆ. ಇಬ್ಬರು ದೇವದೂತರ ಬಗ್ಗೆ ಅಲ್ಲಾಹು ಹೇಳುತ್ತಾನೆ:

﴿...وَمَا يُعَلِّمَانِ مِنۡ أَحَدٍ حَتَّىٰ يَقُولَآ إِنَّمَا نَحۡنُ فِتۡنَةٞ فَلَا تَكۡفُرۡۖ فَيَتَعَلَّمُونَ مِنۡهُمَا مَا يُفَرِّقُونَ بِهِۦ بَيۡنَ ٱلۡمَرۡءِ وَزَوۡجِهِۦۚ وَمَا هُم بِضَآرِّينَ بِهِۦ مِنۡ أَحَدٍ إِلَّا بِإِذۡنِ ٱللَّهِۚ وَيَتَعَلَّمُونَ مَا يَضُرُّهُمۡ وَلَا يَنفَعُهُمۡۚ وَلَقَدۡ عَلِمُواْ لَمَنِ ٱشۡتَرَىٰهُ مَا لَهُۥ فِي ٱلۡأٓخِرَةِ مِنۡ خَلَٰقٖۚ وَلَبِئۡسَ مَا شَرَوۡاْ بِهِۦٓ أَنفُسَهُمۡۚ لَوۡ كَانُواْ يَعۡلَمُونَ﴾

ನಾವೊಂದು ಪರೀಕ್ಷೆಯಾಗಿದ್ದೇವೆ; ಆದ್ದರಿಂದ ನೀವು ಸತ್ಯನಿಷೇಧಿಗಳಾಗಬೇಡಿ ಎಂದು ಹೇಳದೆ ಆ ಇಬ್ಬರು ಯಾರಿಗೂ ಏನನ್ನೂ ಕಲಿಸಿಕೊಡುತ್ತಿರಲಿಲ್ಲ. ಹೀಗೆ ಜನರು ಅವರಿಂದ ಗಂಡ ಹೆಂಡತಿಯ ನಡುವೆ ಒಡಕು ಮೂಡಿಸುವ ವಿಷಯಗಳನ್ನು ಕಲಿಯುತ್ತಿದ್ದರು. ಆದರೆ ಅಲ್ಲಾಹನ ಅಪ್ಪಣೆಯಿಲ್ಲದೆ ಯಾರಿಗೂ ಯಾವುದೇ ತೊಂದರೆ ಮಾಡಲು ಅವರಿಂದ ಸಾಧ್ಯವಿರಲಿಲ್ಲ. ತಮಗೆ ತೊಂದರೆಯಾಗುವ ಮತ್ತು ತಮಗೆ ಯಾವುದೇ ಪ್ರಯೋಜನ ನೀಡದ ವಿಷಯಗಳನ್ನು ಅವರು ಕಲಿಯುತ್ತಿದ್ದರು. ಅದನ್ನು ಪಡೆದವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲವೆಂದು ಅವರು ದೃಢವಾಗಿ ತಿಳಿದಿದ್ದರು. ಅವರು ಯಾವುದಕ್ಕೆ ತಮ್ಮ ಆತ್ಮಗಳನ್ನು ಮಾರಿಕೊಂಡರೋ ಅದು ಬಹಳ ನಿಕೃಷ್ಟವಾಗಿದೆ. ಇದನ್ನು ಅವರು ತಿಳಿದಿದ್ದರೆ ಎಷ್ಟೋ ಚೆನ್ನಾಗಿತ್ತು!

[ಅಲ್-ಬಕರ: 102].

ಮಾಟಗಾರಿಕೆಯು ಸತ್ಯನಿಷೇಧವಾಗಿದೆ ಮತ್ತು ಮಾಟಗಾರರು ಪತಿ ಮತ್ತು ಪತ್ನಿಯ ನಡುವೆ ವಿರಹವನ್ನು ಉಂಟುಮಾಡುತ್ತಾರೆ ಎಂದು ಈ ಗೌರವಾನ್ವಿತ ವಚನಗಳು ಸೂಚಿಸುತ್ತವೆ. ಅಷ್ಟೇ ಅಲ್ಲದೆ, ಮಾಟವು ಸ್ವಯಂ ಲಾಭ ಅಥವಾ ಹಾನಿಯನ್ನು ಉಂಟುಮಾಡುವುದಿಲ್ಲ. ಬದಲಿಗೆ ಅದು ಅಲ್ಲಾಹನ ಸಾರ್ವತ್ರಿಕ ಮತ್ತು ವಿಧಿ ನಿರ್ಣಿತ ಅನುಮತಿಯಿಂದ ಮಾತ್ರ ಪರಿಣಾಮ ಬೀರುತ್ತದೆ ಎಂದು ಅವು ಸೂಚಿಸುತ್ತವೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹನೇ ಒಳಿತು ಮತ್ತು ಕೆಡುಕನ್ನು ಸೃಷ್ಟಿಸಿದವನು.

ಮಾಟವನ್ನು ಕಲಿಯುವವರು ತಮಗೆ ಹಾನಿ ಮಾಡುವ ಮತ್ತು ಲಾಭ ಮಾಡದ ವಿಷಯಗಳನ್ನು ಮಾತ್ರ ಕಲಿಯುತ್ತಾರೆ, ಹಾಗೂ ಅವರಿಗೆ ಅಲ್ಲಾಹನ ಬಳಿ ಯಾವುದೇ ಪಾಲು (ಅಂದರೆ, ಯಾವುದೇ ಭಾಗ ಅಥವಾ ಹಂಚಿಕೆ) ಇರುವುದಿಲ್ಲ ಎಂದು ಈ ಗೌರವಾನ್ವಿತ ವಚನವು ಸೂಚಿಸುತ್ತದೆ. ಇದು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಅವರಿಗೆ ತೀವ್ರ ನಷ್ಟ ಉಂಟಾಗುವುದನ್ನು ಸೂಚಿಸುವ ಒಂದು ದೊಡ್ಡ ಎಚ್ಚರಿಕೆಯಾಗಿದೆ. ಅದೇ ರೀತಿ, ಅವರು ತಮ್ಮ ಆತ್ಮಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಿಕೊಂಡಿದ್ದಾರೆ (ಎಂದು ಈ ವಚನವು ಸೂಚಿಸುತ್ತದೆ). ಈ ಕಾರಣದಿಂದಲೇ ಸರ್ವಶಕ್ತನಾದ ಅಲ್ಲಾಹು ಅವರನ್ನು ಖಂಡಿಸುತ್ತಾ ಹೇಳುತ್ತಾನೆ:

﴿...وَلَبِئۡسَ مَا شَرَوۡاْ بِهِۦٓ أَنفُسَهُمۡۚ لَوۡ كَانُواْ يَعۡلَمُونَ﴾

"ಮತ್ತು ಅವರು ತಮ್ಮ ಆತ್ಮಗಳನ್ನು ಯಾವುದಕ್ಕೆ ಮಾರಿಕೊಂಡರೋ ಅದು ನಿಜವಾಗಿಯೂ ಕೆಟ್ಟದಾಗಿತ್ತು, ಅವರಿಗೆ ತಿಳಿದಿದ್ದರೆ!" [ಅಲ್-ಬಕರ: 102] ಇಲ್ಲಿ 'ಖರೀದಿ' ಎಂದರೆ 'ಮಾರಾಟ'.

ಬಹುದೇವಾರಾಧಕರಿಂದ ಈ ಜ್ಞಾನವನ್ನು ಪಡೆದು, ಅದರಿಂದ ದುರ್ಬಲ ಮನಸ್ಸಿನವರನ್ನು ಮೋಸಗೊಳಿಸುವ ಈ ಸುಳ್ಳುಗಾರರ ಹಾನಿಯು ಬಹಳ ದೊಡ್ಡದಾಗಿದೆ ಮತ್ತು ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದೆ. ನಿಶ್ಚಯವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನ ಬಳಿಗೇ ಮರಳುವವರಾಗಿದ್ದೇವೆ. ಅಲ್ಲಾಹನೇ ನಮಗೆ ಸಾಕು, ಮತ್ತು ಅವನೇ ಉತ್ತಮ ನಿರ್ವಾಹಕನು.

ಮಾಟಗಾರರು, ಭವಿಷ್ಯ ನುಡಿಯುವವರು ಮತ್ತು ಇತರ ಎಲ್ಲಾ ಮೋಸಗಾರರ ಕೆಡುಕಿನಿಂದ ನಾವು ಅಲ್ಲಾಹನಲ್ಲಿ ಕ್ಷೇಮ ಮತ್ತು ಸುರಕ್ಷತೆಯನ್ನು ಬೇಡುತ್ತೇವೆ.ಅವರ ಕೆಡುಕಿನಿಂದ ಮುಸ್ಲಿಮರನ್ನು ರಕ್ಷಿಸಲು, ಮುಸ್ಲಿಂ ಆಡಳಿತಗಾರರು ಅವರ ಬಗ್ಗೆ ಎಚ್ಚರದಿಂದಿರಲು ಮತ್ತು ಅವರ ವಿಷಯದಲ್ಲಿ ಅಲ್ಲಾಹನ ತೀರ್ಪನ್ನು ಜಾರಿಗೆ ತರಲು ನಾವು ಅಲ್ಲಾಹನಲ್ಲಿ ಬೇಡುತ್ತೇವೆ. ದಾಸರು ಅವರ ಹಾನಿ ಮತ್ತು ಅವರ ದುಷ್ಕಾರ್ಯಗಳಿಂದ ನೆಮ್ಮದಿ ಪಡೆಯುವುದಕ್ಕಾಗಿ. ನಿಶ್ಚಯವಾಗಿಯೂ, ಅವನು ಉದಾರನು ಮತ್ತು ಕರುಣಾಮಯಿ ಆಗಿದ್ದಾನೆ.

ಮಾಟವು ಸಂಭವಿಸುವ ಮೊದಲೇ ಅದರ ಕೆಡುಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವ ವಿಧಾನಗಳನ್ನು ಮತ್ತು ಅದು ಸಂಭವಿಸಿದ ನಂತರ ಅದಕ್ಕೆ ಚಿಕಿತ್ಸೆ ನೀಡುವ ವಿಧಾನಗಳನ್ನು ಸರ್ವಶಕ್ತನಾದ ಅಲ್ಲಾಹು ತನ್ನ ದಾಸರಿಗೆ ನಿಯಮಗೊಳಿಸಿದ್ದಾನೆ. ಇದು ಅವನಿಗೆ ಅವರ (ದಾಸರ) ಮೇಲಿರುವ ಕರುಣೆ, ಅವರಿಗೆ ಮಾಡಿದ ಉಪಕಾರ ಮತ್ತು ಅವರ ಮೇಲಿನ ತನ್ನ ಅನುಗ್ರಹಗಳ ಪೂರ್ಣತೆಯ ಭಾಗವಾಗಿದೆ.

ಮಾಟದ ಅಪಾಯವನ್ನು ಅದು ಸಂಭವಿಸುವ ಮೊದಲೇ ತಡೆಯುವ ವಿಧಾನಗಳು ಮತ್ತು ಅದು ಸಂಭವಿಸಿದ ನಂತರ ಶರಿಯತ್ ಪ್ರಕಾರ ಅನುಮತಿಸಲಾದ ವಿಷಯಗಳೊಂದಿಗೆ ಅದಕ್ಕೆ ಚಿಕಿತ್ಸೆ ನೀಡುವ ವಿಧಾನಗಳು ಈ ಕೆಳಗಿನಂತಿದೆ:

ಮೊದಲನೆಯದಾಗಿ: ಮಾಟದ ಅಪಾಯವನ್ನು ಅದು ಸಂಭವಿಸುವ ಮೊದಲೇ ತಡೆಯುವ ವಿಧಾನಗಳು: ಇವುಗಳಲ್ಲಿ ಅತ್ಯಂತ ಪ್ರಮುಖ ಮತ್ತು ಪ್ರಯೋಜನಕಾರಿಯಾದ ವಿಧಾನವೇನೆಂದರೆ ಧಾರ್ಮಿಕ ಸ್ಮರಣೆಗಳು (ದಿಕ್ರ್), ಪ್ರಾರ್ಥನೆಗಳು ಮತ್ತು ಹದೀಸ್‌ಗಳಲ್ಲಿ ವರದಿಯಾದ ಅಭಯ ಯಾಚನೆಗಳು (ಮುಅವ್ವಿದಾತ್) ಮುಂತಾದವುಗಳ ಮೂಲಕ ರಕ್ಷಣೆ ಪಡೆಯುವುದು. ಪವಿತ್ರ ಕುರ್‌ಆನ್‌ನಲ್ಲಿನ ಅತ್ಯಂತ ಶ್ರೇಷ್ಠವಾದ ವಚನವಾಗಿರುವ ಆಯತಲ್ ಕುರ್ಸಿಯನ್ನು ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಸಲಾಮ್ ಹೇಳಿದ ಮೇಲೆ ಪಠಿಸುವುದು ಇದರಲ್ಲಿ ಒಳಪಡುತ್ತದೆ. ಅದು ಹೀಗಿದೆ:

﴿ٱللَّهُ لَآ إِلَٰهَ إِلَّا هُوَ ٱلۡحَيُّ ٱلۡقَيُّومُۚ لَا تَأۡخُذُهُۥ سِنَةٞ وَلَا نَوۡمٞۚ لَّهُۥ مَا فِي ٱلسَّمَٰوَٰتِ وَمَا فِي ٱلۡأَرۡضِۗ مَن ذَا ٱلَّذِي يَشۡفَعُ عِندَهُۥٓ إِلَّا بِإِذۡنِهِۦۚ يَعۡلَمُ مَا بَيۡنَ أَيۡدِيهِمۡ وَمَا خَلۡفَهُمۡۖ وَلَا يُحِيطُونَ بِشَيۡءٖ مِّنۡ عِلۡمِهِۦٓ إِلَّا بِمَا شَآءَۚ وَسِعَ كُرۡسِيُّهُ ٱلسَّمَٰوَٰتِ وَٱلۡأَرۡضَۖ وَلَا يَـُٔودُهُۥ حِفۡظُهُمَاۚ وَهُوَ ٱلۡعَلِيُّ ٱلۡعَظِيمُ255﴾

ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲರನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ತೂಕಡಿಕೆ ಅಥವಾ ನಿದ್ದೆ ಅವನನ್ನು ವಶಪಡಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? ಅವರ ಮುಂದಿರುವುದನ್ನು ಮತ್ತು ಅವರ ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸುವಷ್ಟನ್ನಲ್ಲದೆ (ಬೇರೇನನ್ನೂ) ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ವ್ಯಾಪಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನನ್ನು ಆಯಾಸಗೊಳಿಸುವುದಿಲ್ಲ. ಅವನು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ. [ಅಲ್-ಬಕರ: 255] ಇದನ್ನು ಮಲಗುವಾಗಲೂ ಪಠಿಸಬೇಕು. ಅಲ್ಲಾಹನ ಸಂದೇಶವಾಹಕರು (ಸ) ಹೀಗೆ ಹೇಳಿದ್ದಾರೆಂದು ದೃಢಪಟ್ಟಿದೆ:

«مَنْ قَرَأَ آيَةَ الْكُرْسِيِّ فِي لَيْلَةٍ، لَمْ يَزَلْ عَلَيْهِ مِنَ اللَّهِ حَافِظٌ، وَلَا يَقْرَبُهُ شَيْطَانٌ حَتَّى يُصْبِحَ».

"ಯಾರು ರಾತ್ರಿಯಲ್ಲಿ ಆಯತುಲ್ ಕುರ್ಸಿಯನ್ನು ಪಠಿಸುತ್ತಾರೋ, ಅವರೊಂದಿಗೆ ಬೆಳಗಾಗುವವರೆಗೂ ಅಲ್ಲಾಹನ ಕಡೆಯಿಂದ ಒಬ್ಬ ರಕ್ಷಕನು ಇರುತ್ತಾನೆ ಮತ್ತು ಯಾವುದೇ ಶೈತಾನನು ಅವನ ಹತ್ತಿರ ಸುಳಿಯುವುದಿಲ್ಲ."

ಈ ಕೆಳಗಿನವುಗಳನ್ನು ಪಠಿಸುವುದು ಕೂಡ ಅವುಗಳಲ್ಲಿ ಸೇರಿದೆ:

﴿قُلۡ هُوَ ٱللَّهُ أَحَدٌ1﴾

ಹೇಳಿರಿ: “ಅವನು ಅಲ್ಲಾಹು, ಏಕೈಕನು.

﴿قُلۡ أَعُوذُ بِرَبِّ ٱلۡفَلَقِ1﴾

ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.

﴿قُلۡ أَعُوذُ بِرَبِّ ٱلنَّاسِ1﴾

ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. (ಅನ್ನಾಸ್‌ :1) ಇವುಗಳನ್ನು ಪ್ರತಿ ಕಡ್ಡಾಯ ನಮಾಝ್ ನಿರ್ವಹಿಸಿದ ನಂತರ ಮತ್ತು ಈ ಮೂರು ಸೂರಗಳನ್ನು ಮುಂಜಾನೆ ಫಜ್ರ್ ನಮಾಝ್ ನಿರ್ವಹಿಸಿದ ನಂತರ ಮೂರು ಬಾರಿ ಮತ್ತು ಸಂಜೆ ಮಗ್ರಿಬ್ ನಮಾಝ್ ನಿರ್ವಹಿಸಿದ ನಂತರ ಮೂರು ಬಾರಿ ಪಠಿಸಬೇಕು.

ರಾತ್ರಿಯ ಆರಂಭದಲ್ಲಿ ಸೂರ ಅಲ್-ಬಕರದ ಕೊನೆಯ ಎರಡು ವಚನಗಳನ್ನು ಪಠಿಸುವುದು ಕೂಡ ಇದರಲ್ಲಿ ಒಳಪಡುತ್ತದೆ. ಅದು ಹೀಗಿದೆ:

﴿ءَامَنَ ٱلرَّسُولُ بِمَآ أُنزِلَ إِلَيۡهِ مِن رَّبِّهِۦ وَٱلۡمُؤۡمِنُونَۚ كُلٌّ ءَامَنَ بِٱللَّهِ وَمَلَٰٓئِكَتِهِۦ وَكُتُبِهِۦ وَرُسُلِهِۦ لَا نُفَرِّقُ بَيۡنَ أَحَدٖ مِّن رُّسُلِهِۦۚ وَقَالُواْ سَمِعۡنَا وَأَطَعۡنَاۖ غُفۡرَانَكَ رَبَّنَا وَإِلَيۡكَ ٱلۡمَصِيرُ285﴾

ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶದಲ್ಲಿ ಸಂದೇಶವಾಹಕರು ವಿಶ್ವಾಸವಿಟ್ಟಿದ್ದಾರೆ; ಸತ್ಯವಿಶ್ವಾಸಿಗಳು ಕೂಡ ವಿಶ್ವಾಸವಿಟ್ಟಿದ್ದಾರೆ. ಅವರೆಲ್ಲರೂ ಅಲ್ಲಾಹನಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ಅವನ ಸಂದೇಶವಾಹಕರುಗಳಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ಅವರು ಹೇಳುತ್ತಾರೆ: "ನಾವು ಕೇಳಿದ್ದೇವೆ ಮತ್ತು ವಿಧೇಯರಾಗಿದ್ದೇವೆ. ಓ ನಮ್ಮ ಪರಿಪಾಲಕನೇ! ನಮ್ಮನ್ನು ಕ್ಷಮಿಸು. ನಮಗೆ ನಿನ್ನ ಬಳಿಗೇ ಮರಳಬೇಕಾಗಿದೆ. ಸೂರದ ಕೊನೆಯವರೆಗೂ ಪಠಿಸಬೇಕು.

ಪ್ರವಾದಿ (ಸ) ರವರು ಹೀಗೆ ಹೇಳಿದರೆಂದು ದೃಢಪಟ್ಟಿದೆ:

«مَنْ قَرَأَ الآيَتَيْنِ مِنْ آخِرِ سُورَةِ البَقَرَةِ فِي لَيْلَةٍ كَفَتَاهُ».

"ಯಾರು ರಾತ್ರಿಯಲ್ಲಿ ಸೂರ ಅಲ್-ಬಕರದ ಕೊನೆಯ ಎರಡು ವಚನಗಳನ್ನು ಪಠಿಸುತ್ತಾರೋ, ಅವು ಅವರಿಗೆ ಸಾಕಾಗುತ್ತವೆ." ಇದರ ಅರ್ಥವೇನೆಂದರೆ, (ಅಲ್ಲಾಹನೇ ಹೆಚ್ಚು ಬಲ್ಲವನು) ಎಲ್ಲಾ ಕೆಡುಕಿನಿಂದ (ಆ ಎರಡು ವಚನಗಳು) ಅವರಿಗೆ ಸಾಕಾಗುತ್ತವೆ. ಹಗಲು ಮತ್ತು ರಾತ್ರಿ, ಕಟ್ಟಡದಲ್ಲಿ, ಮರುಭೂಮಿಯಲ್ಲಿ, ಗಾಳಿಯಲ್ಲಿ ಅಥವಾ ಸಮುದ್ರದಲ್ಲಿ ಯಾವುದೇ ಸ್ಥಳದಲ್ಲಿ ಇಳಿಯುವಾಗ "ಅಲ್ಲಾಹನ ಪರಿಪೂರ್ಣ ವಚನಗಳಿಂದ, ಅವನು ಸೃಷ್ಟಿಸಿದ ಕೆಡುಕಿನಿಂದ ಅಭಯ ಯಾಚಿಸುತ್ತೇನೆ" ಎಂದು ಹೆಚ್ಚು ಹೆಚ್ಚಾಗಿ ಹೇಳುವುದು ಕೂಡ ಇದರಲ್ಲಿ ಒಳಪಡುತ್ತದೆ. ಪ್ರವಾದಿ (ಸ) ಹೇಳಿದರು:

«مَن نَزَلَ مَنْزِلًا فَقالَ: أَعُوذُ بِكَلِمَاتِ اللهِ التَّامَّاتِ مِن شَرِّ ما خَلَقَ، لَمْ يَضُرَّهُ شَيءٌ حتَّى يَرْتَحِلَ مِن مَنْزِلِهِ ذَلِكَ».

"ಯಾರು ಒಂದು ಸ್ಥಳದಲ್ಲಿ ಇಳಿದು, 'ಅಲ್ಲಾಹನ ಪರಿಪೂರ್ಣ ವಚನಗಳಿಂದ, ಅವನು ಸೃಷ್ಟಿಸಿದ ಕೆಡುಕಿನಿಂದ ಅಭಯ ಯಾಚಿಸುತ್ತೇನೆ' ಎಂದು ಹೇಳುತ್ತಾರೋ, ಅವರು ಆ ಸ್ಥಳದಿಂದ ಹೊರಡುವವರೆಗೂ ಯಾವುದೂ ಅವರಿಗೆ ಹಾನಿ ಮಾಡುವುದಿಲ್ಲ."

ಅದೇ ರೀತಿ, ಮುಸ್ಲಿಮನು ಹಗಲಿನ ಆರಂಭದಲ್ಲಿ ಮತ್ತು ರಾತ್ರಿಯ ಆರಂಭದಲ್ಲಿ ಮೂರು ಬಾರಿ ಹೀಗೆ ಹೇಳುವುದು ಕೂಡ ಇದರಲ್ಲಿ ಒಳಪಡುತ್ತದೆ:

«بِسْمِ اللهِ الَّذِي لَا يَضُرُّ مَعَ اسْمِهِ شَيءٌ فِي الأَرْضِ وَلَا فِي السَّمَاءِ، وَهُوَ السَّمِيعُ العَلِيمُ».

"ಯಾರ ಹೆಸರಿನೊಂದಿಗೆ ಭೂಮಿಯಲ್ಲಿ ಅಥವಾ ಆಕಾಶದಲ್ಲಿ ಯಾವುದೂ ಹಾನಿ ಮಾಡುವುದಿಲ್ಲವೋ ಅವನ ಹೆಸರಿನಿಂದ. ಅವನು ಎಲ್ಲವನ್ನೂ ಕೇಳುವವನೂ, ಎಲ್ಲವನ್ನು ತಿಳಿದವನೂ ಆಗಿದ್ದಾನೆ."

ಇದನ್ನು ಪಠಿಸಬೇಕೆಂದು ಅಲ್ಲಾಹನ ಸಂದೇಶವಾಹಕರು (ಸ) ಪ್ರೋತ್ಸಾಹಿಸಿದ್ದು ಪ್ರಬಲವಾಗಿ ವರದಿಯಾಗಿದೆ. ಇದು ಎಲ್ಲಾ ಕೆಡುಕಿನಿಂದ ರಕ್ಷಣೆ ಪಡೆಯುವುದಕ್ಕೆ ಒಂದು ಕಾರಣವಾಗಿದೆ.

ಎರಡನೆಯದಾಗಿ: ಮಾಟವು ಸಂಭವಿಸಿದ ನಂತರ ಅದಕ್ಕೆ ಚಿಕಿತ್ಸೆ ನೀಡುವ ವಿಧಾನಗಳು: ಇದು ಕೂಡ ಹಲವಾರು ವಿಷಯಗಳ ಮೂಲಕ ಆಗಿದೆ:

ಒಂದು: ಅಲ್ಲಾಹನಿಗೆ ಹೆಚ್ಚಾಗಿ ವಿನಮ್ರತೆ ತೋರುವುದು, ಮತ್ತು ಹಾನಿಯನ್ನು ನಿವಾರಿಸಲು ಹಾಗೂ ತೊಂದರೆಯನ್ನು ತೆಗೆದುಹಾಕಲು ಅವನಲ್ಲಿ ಬೇಡುವುದು.

ಎರಡು: ಭೂಮಿಯಲ್ಲಿ, ಪರ್ವತದಲ್ಲಿ ಅಥವಾ ಬೇರೆಲ್ಲಿಯಾದರೂ ಮಾಟಮಂತ್ರವನ್ನು ಇಡಲಾದ ಸ್ಥಳವನ್ನು ಕಂಡುಹಿಡಿಯಲು ಪ್ರಯತ್ನಿಸುವುದು. ಅದನ್ನು ಕಂಡುಹಿಡಿದು, ಹೊರತೆಗೆದು ನಾಶಪಡಿಸಿದರೆ, ಮಾಟವು ನಿಷ್ಫಲವಾಗುತ್ತದೆ. ಇದು ಮಾಟಕ್ಕೆ ಅತ್ಯಂತ ಪ್ರಯೋಜನಕಾರಿ ಚಿಕಿತ್ಸೆಯಾಗಿದೆ.

ಮೂರು: ಶರಿಯತ್‌ನಲ್ಲಿ ಬಂದಿರುವ ಸ್ಮರಣೆಗಳು (ದಿಕ್ರ್) ಮತ್ತು ಪಠಣಗಳ (ಔರಾದ್) ಮೂಲಕ ಮಂತ್ರಿಸುವುದು. ಅವು ಅನೇಕ ಇವೆ; ಅವುಗಳಲ್ಲಿ ಕೆಲವು ಹೀಗಿವೆ:

ಅಲ್ಲಾಹನ ಸಂದೇಶವಾಹಕರ (ಸ) ವಚನದ ಮೂಲಕ ದೃಢಪಟ್ಟವುಗಳು:

«اللَّهُمَّ رَبَّ النَّاسِ، أَذْهِبِ الْبَأْسَ، وَاشْفِ أَنْتَ الشَّافِي، لَا شِفَاءَ إِلَّا شِفَاؤُكَ، شِفَاءً لَا يُغَادِرُ سَقَمًا».

"ಓ ಅಲ್ಲಾಹ್, ಮಾನವರ ಪರಿಪಾಲಕನೇ, ತೊಂದರೆಯನ್ನು ನಿವಾರಿಸು ಮತ್ತು ಗುಣಪಡಿಸು. ನೀನೇ ಗುಣಪಡಿಸುವವನು. ನಿನ್ನ ಗುಣಪಡಿಸುವಿಕೆಯಲ್ಲದೆ ಬೇರೆ ಗುಣಪಡಿಸುವಿಕೆ ಇಲ್ಲ. ಯಾವುದೇ ರೋಗವನ್ನು ಬಿಟ್ಟುಬಿಡದ ಗುಣಪಡಿಸುವಿಕೆ." ಇದನ್ನು ಮೂರು ಬಾರಿ ಹೇಳಬೇಕು.

ಅವುಗಳಲ್ಲಿ ಇನ್ನೊಂದು ಏನೆಂದರೆ: ಜಿಬ್ರೀಲ್(ಅ) ರವರು ಪ್ರವಾದಿ ﷺ ರವರಿಗೆ ಮಂತ್ರಿಸಿದ ಮಂತ್ರ. ಅದು ಹೀಗಿದೆ:

«بِسْمِ اللَّهِ أَرْقِيكَ، مِنْ كُلِّ شَيْءٍ يُؤْذِيكَ، وَمِنْ شَرِّ كُلِّ نَفْسٍ أَوْ عَيْنِ حَاسِدٍ، اللَّهُ يَشْفِيكَ، بِسْمِ اللَّهِ أَرْقِيكَ».

"ಅಲ್ಲಾಹನ ಹೆಸರಿನಿಂದ ನಾನು ನಿನಗೆ ಮಂತ್ರಿಸುತ್ತೇನೆ. ನಿನಗೆ ಹಾನಿ ಮಾಡುವ ಪ್ರತಿಯೊಂದು ವಿಷಯದಿಂದ, ಮತ್ತು ಪ್ರತಿಯೊಂದು ಆತ್ಮದ ಅಥವಾ ಅಸೂಯೆಯ ಕಣ್ಣಿನ ಕೆಡುಕಿನಿಂದ. ಅಲ್ಲಾಹು ನಿನ್ನನ್ನು ಗುಣಪಡಿಸಲಿ. ಅಲ್ಲಾಹನ ಹೆಸರಿನಿಂದ ನಾನು ನಿನಗೆ ಮಂತ್ರಿಸುತ್ತೇನೆ." ಇದನ್ನು ಮೂರು ಬಾರಿ ಪುನರಾವರ್ತಿಸಬೇಕು.

ಅವುಗಳಲ್ಲಿ ಇನ್ನೊಂದು ಏನೆಂದರೆ, (ಇದು ಪತ್ನಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದುವುದರಿಂದ ತಡೆಯಲ್ಪಟ್ಟ ಪುರುಷನಿಗೆ ಪ್ರಯೋಜನಕಾರಿ ಚಿಕಿತ್ಸೆಯಾಗಿದೆ) ಏಳು ಹಸಿರು ಸಿದ್ರ್ (ಎಲಚಿ) ಎಲೆಗಳನ್ನು ತೆಗೆದುಕೊಂಡು, ಅವುಗಳನ್ನು ಕಲ್ಲು ಮುಂತಾದ ವಸ್ತುಗಳಿಂದ ಪುಡಿಮಾಡಿ, ಒಂದು ಪಾತ್ರೆಯಲ್ಲಿ ಹಾಕಿ, ಮತ್ತು ಸ್ನಾನಕ್ಕೆ ಸಾಕಾಗುವಷ್ಟು ನೀರನ್ನು ಅದರ ಮೇಲೆ ಸುರಿದು, ಅದರಲ್ಲಿ ಇವುಗಳನ್ನು ಪಠಿಸುವುದು:

ಆಯತುಲ್ ಕುರ್ಸಿ, ಮತ್ತು

﴿قُلۡ يَٰٓأَيُّهَا ٱلۡكَٰفِرُونَ1﴾

ಹೇಳಿರಿ: “ಓ ಸತ್ಯನಿಷೇಧಿಗಳೇ! [ಸೂರಾ ಅಲ್-ಕಾಫಿರೂನ್: 1], ಮತ್ತು

﴿قُلۡ هُوَ ٱللَّهُ أَحَدٌ1﴾

ಹೇಳಿರಿ: “ಅವನು ಅಲ್ಲಾಹು, ಏಕೈಕನು. [ಸೂರಾ ಅಲ್-ಇಖ್ಲಾಸ್:1], ಮತ್ತು

﴿قُلۡ أَعُوذُ بِرَبِّ ٱلۡفَلَقِ1﴾

ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.

[ಅಲ್-ಫಲಕ್: 1] ಮತ್ತು

﴿قُلۡ أَعُوذُ بِرَبِّ ٱلنَّاسِ1﴾

ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. (ಅನ್ನಾಸ್‌ :1)

ಮತ್ತು ಸೂರ ಅಲ್-ಅಅ್‌ರಾಫ್‌ನಲ್ಲಿರುವ ಸಿಹ್ರ್‌ನ ವಚನಗಳು. ಅವು ಹೀಗಿವೆ:

﴿وَأَوۡحَيۡنَآ إِلَىٰ مُوسَىٰٓ أَنۡ أَلۡقِ عَصَاكَۖ فَإِذَا هِيَ تَلۡقَفُ مَا يَأۡفِكُونَ117 فَوَقَعَ ٱلۡحَقُّ وَبَطَلَ مَا كَانُواْ يَعۡمَلُونَ118 فَغُلِبُواْ هُنَالِكَ وَٱنقَلَبُواْ صَٰغِرِينَ119﴾

“ತಮ್ಮ ಕೋಲನ್ನು ಎಸೆಯಿರಿ” ಎಂದು ನಾವು ಮೂಸಾರಿಗೆ ದೇವವಾಣಿ ನೀಡಿದೆವು. ಆಗ ಅಗೋ ಅವರು ಕೃತಕವಾಗಿ ನಿರ್ಮಿಸಿದ (ಸರ್ಪಗಳನ್ನು) ಅದು ನುಂಗತೊಡಗಿತು.

ಸತ್ಯವು ಸಾಬೀತಾಯಿತು ಮತ್ತು ಅವರು ಮಾಡುತ್ತಿದ್ದ ಕೆಲಸಗಳೆಲ್ಲವೂ ನಿಷ್ಫಲವಾದವು118

ಅವರು ಅಲ್ಲಿಯೇ ಸೋತು ದಯನೀಯ ಸ್ಥಿತಿಯಲ್ಲಿ ಮರಳಿದರು.119

[ಅಲ್-ಅಅ್‌ರಾಫ್: 117-119]

ಮತ್ತು ಸೂರ ಯೂನಸ್‌ನಲ್ಲಿರುವ ವಚನಗಳು:

﴿وَقَالَ فِرۡعَوۡنُ ٱئۡتُونِي بِكُلِّ سَٰحِرٍ عَلِيمٖ79 فَلَمَّا جَآءَ ٱلسَّحَرَةُ قَالَ لَهُم مُّوسَىٰٓ أَلۡقُواْ مَآ أَنتُم مُّلۡقُونَ80 فَلَمَّآ أَلۡقَوۡاْ قَالَ مُوسَىٰ مَا جِئۡتُم بِهِ ٱلسِّحۡرُۖ إِنَّ ٱللَّهَ سَيُبۡطِلُهُۥٓ إِنَّ ٱللَّهَ لَا يُصۡلِحُ عَمَلَ ٱلۡمُفۡسِدِينَ81 وَيُحِقُّ ٱللَّهُ ٱلۡحَقَّ بِكَلِمَٰتِهِۦ وَلَوۡ كَرِهَ ٱلۡمُجۡرِمُونَ82﴾

ಫರೋಹ ಹೇಳಿದನು: “ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ನನ್ನ ಬಳಿಗೆ ಕರೆತನ್ನಿ.”

ಮಾಟಗಾರರು ಬಂದಾಗ ಮೂಸಾ ಅವರೊಡನೆ ಹೇಳಿದರು: “ನೀವು ಎಸೆಯುವುದನ್ನೆಲ್ಲಾ ಎಸೆಯಿರಿ.”

ಅವರು ಎಸೆದಾಗ ಮೂಸಾ ಹೇಳಿದರು: “ನೀವು ತಂದಿರುವುದೆಲ್ಲವೂ ಮಾಟಗಳಾಗಿವೆ. ನಿಶ್ಚಯವಾಗಿಯೂ ಅಲ್ಲಾಹು ಅವೆಲ್ಲವನ್ನೂ ವಿಫಲಗೊಳಿಸುವನು. ನಿಶ್ಚಯವಾಗಿಯೂ ಕಿಡಿಗೇಡಿಗಳ ಕೃತ್ಯವನ್ನು ಅಲ್ಲಾಹು ಯಶಸ್ವಿಗೊಳಿಸುವುದಿಲ್ಲ.

ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸಾಬೀತುಪಡಿಸುವನು. ಅಪರಾಧಿಗಳು ಎಷ್ಟು ಅಸಹ್ಯಪಟ್ಟರೂ ಸಹ.82 [ಯೂನುಸ್: 79-82].

ಮತ್ತು ಸೂರ ತಾಹಾದಲ್ಲಿರುವ ವಚನಗಳು:

﴿قَالُواْ يَٰمُوسَىٰٓ إِمَّآ أَن تُلۡقِيَ وَإِمَّآ أَن نَّكُونَ أَوَّلَ مَنۡ أَلۡقَىٰ65 قَالَ بَلۡ أَلۡقُواْۖ فَإِذَا حِبَالُهُمۡ وَعِصِيُّهُمۡ يُخَيَّلُ إِلَيۡهِ مِن سِحۡرِهِمۡ أَنَّهَا تَسۡعَىٰ66 فَأَوۡجَسَ فِي نَفۡسِهِۦ خِيفَةٗ مُّوسَىٰ67 قُلۡنَا لَا تَخَفۡ إِنَّكَ أَنتَ ٱلۡأَعۡلَىٰ68 وَأَلۡقِ مَا فِي يَمِينِكَ تَلۡقَفۡ مَا صَنَعُوٓاْۖ إِنَّمَا صَنَعُواْ كَيۡدُ سَٰحِرٖۖ وَلَا يُفۡلِحُ ٱلسَّاحِرُ حَيۡثُ أَتَىٰ69﴾

ಮಾಟಗಾರರು ಹೇಳಿದರು: “ಓ ಮೂಸಾ! ಒಂದೋ ನೀವು ಎಸೆಯಿರಿ ಅಥವಾ ನಾವೇ ಮೊದಲು ಎಸೆಯುವೆವು.”

ಮೂಸಾ ಹೇಳಿದರು: “ಬೇಡ, ನೀವೇ ಎಸೆಯಿರಿ.” ಆಗ ಅಗೋ! ಅವರ ಮಾಟಗಾರಿಕೆಯಿಂದ ಅವರ ಹಗ್ಗಗಳು ಮತ್ತು ಕೋಲುಗಳು ಚಲಿಸುತ್ತಿರುವಂತೆ ಕಾಣತೊಡಗಿದವು.

ಮೂಸಾರಿಗೆ ಮನಸ್ಸಿನಲ್ಲಿ ಭಯವಾಯಿತು 67.

ನಾವು ಹೇಳಿದೆವು: “ಭಯಪಡಬೇಡಿ. ನಿಶ್ಚಯವಾಗಿಯೂ ನೀವೇ ಮೇಲುಗೈ ಸಾಧಿಸುವಿರಿ.68

ನಿಮ್ಮ ಬಲಗೈಯ್ಯಲ್ಲಿರುವುದನ್ನು (ಕೋಲನ್ನು) ಎಸೆಯಿರಿ. ಅವರು ನಿರ್ಮಿಸಿದ ಎಲ್ಲವನ್ನೂ ಅದು ನುಂಗಿ ಬಿಡುವುದು. ಅವರು ಮಾಡಿರುವುದು ಮಾಟಗಾರರು ಮಾಡುವ ಕಣ್ಕಟ್ಟು ವಿದ್ಯೆಯಾಗಿದೆ. ಮಾಟಗಾರರು ಎಲ್ಲೇ ಹೋದರೂ ಯಶಸ್ವಿಯಾಗುವುದಿಲ್ಲ. 69 [ತ್ವಾಹಾ:65-69]

ಮೇಲೆ ಉಲ್ಲೇಖಿಸಲಾದವುಗಳನ್ನು ನೀರಿನಲ್ಲಿ ಪಠಿಸಿದ ನಂತರ, ಅದರಿಂದ ಮೂರು ಗುಟುಕು ಕುಡಿದು ಉಳಿದವುಗಳಿಂದ ಸ್ನಾನ ಮಾಡಬೇಕು. ಹೀಗೆ ಮಾಡಿದರೆ ಅಲ್ಲಾಹು ಇಚ್ಛಿಸಿದರೆ ರೋಗವು ನಿವಾರಣೆಯಾಗುತ್ತದೆ. ಅಗತ್ಯವಿದ್ದರೆ, ರೋಗವು ನಿವಾರಣೆಯಾಗುವವರೆಗೆ ಇದನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ.

ಈ ದಿಕ್ರ್‌ಗಳು, ಅಭಯ ಯಾಚನೆಗಳು ಮತ್ತು ವಿಧಾನಗಳು ಮಾಟದ ಕೆಡುಕಿನಿಂದ ಮತ್ತು ಇತರ ಕೆಡುಕುಗಳಿಂದ ರಕ್ಷಿಸಿಕೊಳ್ಳಲು ಅತ್ಯಂತ ಶ್ರೇಷ್ಠ ಕಾರಣಗಳಾಗಿವೆ. ಅವು ಮಾಟವು ಸಂಭವಿಸಿದ ನಂತರ ಅದನ್ನು ತೆಗೆದುಹಾಕಲು ಅತ್ಯಂತ ಶ್ರೇಷ್ಠ ಅಸ್ತ್ರಗಳೂ ಆಗಿವೆ. ಯಾರು ಸತ್ಯವಂತಿಕೆ, ವಿಶ್ವಾಸ ನಂಬಿಕೆ, ಅಲ್ಲಾಹನಲ್ಲಿ ದೃಢವಿಶ್ವಾಸ ಮತ್ತು ಅವನ ಮೇಲಿನ ಭರವಸೆಯೊಂದಿಗೆ, ಮತ್ತು ಅವು ಸೂಚಿಸಿದ್ದಕ್ಕೆ ಹೃದಯವನ್ನು ತೆರೆದಿಟ್ಟು ಅವುಗಳನ್ನು ರೂಢಿ ಮಾಡಿಕೊಳ್ಳುವವರಿಗೆ ಮಾತ್ರ.

ಮಾಟದಿಂದ ರಕ್ಷಿಸಿಕೊಳ್ಳುವ ಮತ್ತು ಚಿಕಿತ್ಸೆ ನೀಡುವ ವಿಷಯಗಳ ಬಗ್ಗೆ ವಿವರಿಸಲು ನನಗೆ ಸಾಧ್ಯವಾದದ್ದು ಇಷ್ಟೇ. ಅಲ್ಲಾಹನೇ ಯಶಸ್ಸನ್ನೂ ನೀಡುವವನು.

ಇಲ್ಲಿ ಒಂದು ಪ್ರಮುಖ ವಿಷಯ ಬರುತ್ತದೆ. ಅದೇನೆಂದರೆ, ಮಾಟಗಾರರಿಂದ ಮಾಟಕ್ಕೆ ಚಿಕಿತ್ಸೆ ನೀಡುವುದು. ಇದನ್ನು ಅವರು ಬಲಿ ಕೊಡುವುದು ಅಥವಾ ಇತರ ಅರ್ಪಣೆಗಳ ಮೂಲಕ ಜಿನ್ನ್‌ಗಳಿಗೆ ಹತ್ತಿರವಾಗುವುದರ ಮೂಲಕ ಮಾಡುತ್ತಾರೆ. ಇದಕ್ಕೆ ಅನುಮತಿಯಿಲ್ಲ. ಏಕೆಂದರೆ ಇದು ಶೈತಾನನ ಕೆಲಸವಾಗಿದೆ. ಅಷ್ಟೇ ಅಲ್ಲ, ಇದು ದೊಡ್ಡ ಶಿರ್ಕ್ ಕೂಡ ಆಗಿದೆ. ಅದೇ ರೀತಿ, ಶಕುನಿಗಳು, ಭವಿಷ್ಯ ನುಡಿಯುವವರು ಮತ್ತು ಮೋಸಗಾರರಲ್ಲಿ ಕೇಳುವ ಮೂಲಕ ಮತ್ತು ಅವರು ಹೇಳುವುದನ್ನು ಬಳಸುವ ಮೂಲಕ ಅದಕ್ಕೆ ಚಿಕಿತ್ಸೆ ನೀಡುವುದು ಸಮ್ಮತಾರ್ಹವಲ್ಲ. ಏಕೆಂದರೆ ಅವರು ವಿಶ್ವಾಸಿಗಳಲ್ಲ. ಅವರು ಅದೃಶ್ಯ ಜ್ಞಾನವಿದೆಯೆಂದು ಹೇಳಿಕೊಳ್ಳುವ ಸುಳ್ಳುಗಾರರು ಮತ್ತು ಪಾಪಿಗಳಾಗಿದ್ದು, ಜನರನ್ನು ಮೋಸಗೊಳಿಸುತ್ತಾರೆ. ಪ್ರವಾದಿ (ಸ) ರವರು ಅವರ ಬಳಿಗೆ ಹೋಗುವುದು, ಅವರಲ್ಲಿ ಕೇಳುವುದು ಮತ್ತು ಅವರನ್ನು ನಂಬುವುದರ ವಿರುದ್ಧ ಎಚ್ಚರಿಸಿದ್ದಾರೆ. ಈ ಲೇಖನದ ಪ್ರಾರಂಭದಲ್ಲಿ ಇದನ್ನು ಈಗಾಗಲೇ ವಿವರಿಸಲಾಗಿದೆ. ಆದ್ದರಿಂದ, ಇದರ ಬಗ್ಗೆ ಎಚ್ಚರದಿಂದಿರುವುದು ಕಡ್ಡಾಯವಾಗಿದೆ. ಅಲ್ಲಾಹನ ಸಂದೇಶವಾಹಕರೊಂದಿಗೆ ﷺ 'ನುಶ್ರಾ' (ಮಾಟವನ್ನು ತೆಗೆಯುವ ಒಂದು ವಿಧಾನ) ಬಗ್ಗೆ ಕೇಳಿದಾಗ, ಅವರು ಹೇಳಿದರು:

«هِيَ مِنْ عَمَلِ الشَّيْطَانِ».

"ಇದು ಶೈತಾನನ ಕೆಲಸ." ಇದನ್ನು ಇಮಾಮ್ ಅಹ್ಮದ್ ಮತ್ತು ಅಬೂ ದಾವೂದ್ ಉತ್ತಮ ಸನದ್‌ನೊಂದಿಗೆ ವರದಿ ಮಾಡಿದ್ದಾರೆ.

'ನುಶ್ರಾ' ಎಂದರೆ ಮಾಟಕ್ಕೊಳಗಾದವನಿಂದ ಮಾಟವನ್ನು ತೆಗೆದುಹಾಕುವುದು. ಪ್ರವಾದಿ (ಸ) ರವರ ಮಾತಿನ ಅರ್ಥವು ಅಜ್ಞಾನದ ಕಾಲದಲ್ಲಿ (ಜಾಹಿಲಿಯ್ಯಾ) ಜನರು ಮಾಡುತ್ತಿದ್ದ 'ನುಶ್ರಾ'. ಅಂದರೆ, ಮಾಟವನ್ನು ತೆಗೆದುಹಾಕಲು ಮಾಟಗಾರನನ್ನು ಕೇಳುವುದು, ಅಥವಾ ಇನ್ನೊಬ್ಬ ಮಾಟಗಾರನಿಂದ ಅದೇ ರೀತಿಯ ಮಾಟ ಮಾಡಿಸಿ ಅದನ್ನು ತೆಗೆದುಹಾಕುವುದು.

ಈಗಾಗಲೇ ಹೇಳಿದಂತೆ, ಧಾರ್ಮಿಕ ಮಂತ್ರಗಳು, ಅಭಯ ಯಾಚನೆಗಳು ಮತ್ತು ಸಮ್ಮತಾರ್ಹ ಔಷಧಿಗಳಿಂದ ಅದನ್ನು ತೆಗೆದುಹಾಕುವುದರಲ್ಲಿ ಯಾವುದೇ ತಪ್ಪಿಲ್ಲ. ಇದನ್ನು ಅಲ್ಲಾಮಾ ಇಬ್ನುಲ್ ಕಯ್ಯಿಮ್, ಶೈಖ್ ಅಬ್ದುರ್ರಹ್ಮಾನ್ ಬಿನ್ ಹಸನ್ 'ಫತ್ಹುಲ್-ಮಜೀದ್' ನಲ್ಲಿ (ಅಲ್ಲಾಹು ಅವರಿಬ್ಬರ ಮೇಲೆ ಕರುಣೆ ತೋರಲಿ) ಸ್ಪಷ್ಟವಾಗಿ ಹೇಳಿದ್ದಾರೆ. ಇತರ ವಿದ್ವಾಂಸರೂ ಕೂಡ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಎಲ್ಲಾ ಕೆಡುಕಿನಿಂದ ಮುಸ್ಲಿಮರಿಗೆ ಕ್ಷೇಮವನ್ನು ನೀಡಲು, ಅವರ ಧರ್ಮವನ್ನು ಅವರಿಗಾಗಿ ಸಂರಕ್ಷಿಸಲು, ಅದರಲ್ಲಿ ಪಾಂಡಿತ್ಯವನ್ನು ನೀಡಲು, ಮತ್ತು ಶರಿಯತ್‌ಗೆ ವಿರುದ್ಧವಾದ ಎಲ್ಲದರಿಂದ ಕ್ಷೇಮವನ್ನು ನೀಡಲು ಅಲ್ಲಾಹನಲ್ಲಿ ಬೇಡುತ್ತೇನೆ.

ಅಲ್ಲಾಹು ತನ್ನ ದಾಸ ಮತ್ತು ಸಂದೇಶವಾಹಕರಾದ ಮುಹಮ್ಮದ್ (ಸ) ರವರ ಮೇಲೆ, ಮತ್ತು ಅವರ ಕುಟುಂಬ ಹಾಗೂ ಸಹಚರರ ಮೇಲೆ ಶಾಂತಿ ಮತ್ತು ಆಶೀರ್ವಾದಗಳನ್ನು ವರ್ಷಿಸಲಿ.

 

 

***

 


بِسْمِ اللهِ الرَّحمَنِ الرَّحِيمِ

ಹತ್ತನೆಯ ಸಂದೇಶ:

ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದರ ವಿರುದ್ಧ ಎಚ್ಚರಿಕೆ

ಅಲ್ಲಾಹನ ನಾಮನಿಂದ, ಸರ್ವಸ್ತುತಿಗಳು ಅಲ್ಲಾಹನಿಗೆ. ಅಲ್ಲಾಹನ ಸಂದೇಶವಾಹಕರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಇಸ್ಲಾಮೀ ಜ್ಞಾನಗಳ ಸಂಘದ (ರಾಬಿತತುಲ್-ಉಲೂಮಿಲ್-ಇಸ್ಲಾಮಿಯ್ಯ) ಪತ್ರಿಕೆಯ ಮೂರನೇ ಸಂಚಿಕೆಯಲ್ಲಿ 'ತಿಂಗಳ ಮುಸ್ಲಿಂ ಸುದ್ದಿ' ವಿಭಾಗದಲ್ಲಿ ಪ್ರಕಟವಾದ ವಿಷಯವನ್ನು ನಾನು ನೋಡಿದೆನು. ಅದರಲ್ಲಿ, ಜೋರ್ಡಾನಿನಲ್ಲಿರುವ ಇಸ್ಲಾಮೀ ಜ್ಞಾನಗಳ ಸಂಘವು, ಕುರ್‌ಆನ್‌ನಲ್ಲಿ ಉಲ್ಲೇಖಿಸಲಾದ ಅಸ್‌ಹಾಬುಲ್ ಕಹ್ಫ್ (ಗುಹೆಯ ಜನರು) ಮಲಗಿದ್ದರೆಂದು ಹೇಳಲಾಗುವ, ಅರ್ರುಹೈಬ್ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ಗುಹೆಯ ಮೇಲೆ ಮಸೀದಿಯನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ತಿಳಿಸಲಾಗಿತ್ತು.

ಅಲ್ಲಾಹನ ಮತ್ತು ಅವನ ದಾಸನ ಹಿತಚಿಂತಕನಾಗಿರಬೇಕೆಂಬ ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು, ಜೋರ್ಡಾನ್‌ನಲ್ಲಿರುವ ಇಸ್ಲಾಮೀ ಜ್ಞಾನಗಳ ಸಂಘಕ್ಕೆ ಈ ಪತ್ರಿಕೆಯಲ್ಲಿಯೇ ಒಂದು ಸಂದೇಶವನ್ನು ನೀಡಲು ನಾನು ನಿರ್ಧರಿಸಿದೆನು. ಉಲ್ಲೇಖಿತ ಗುಹೆಯ ಮೇಲೆ ಮಸೀದಿಯನ್ನು ನಿರ್ಮಿಸುವ ತಮ್ಮ ಉದ್ದೇಶವನ್ನು ಕಾರ್ಯಗತಗೊಳಿಸದಂತೆ ಸಂಘಕ್ಕೆ ಸಲಹೆ ನೀಡುವುದು ಅದರ ಸಾರಾಂಶವಾಗಿದೆ. ಇದಕ್ಕೆ ಕಾರಣವೇನೆಂದರೆ, ಪ್ರವಾದಿಗಳ ಮತ್ತು ಸಜ್ಜನರ ಸಮಾಧಿಗಳ ಮೇಲೆ ಅಥವಾ ಅವರ ಸ್ಮಾರಕಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದನ್ನು ಇಸ್ಲಾಮೀ ಶರಿಯತ್ (ಕಾನೂನು) ನಿಷೇಧಿಸಿದೆ, ಅದರ ಬಗ್ಗೆ ಎಚ್ಚರಿಸಿದೆ ಮತ್ತು ಹಾಗೆ ಮಾಡಿದವರನ್ನು ಶಪಿಸಿದೆ. ಏಕೆಂದರೆ ಅದು ಬಹುದೇವಾರಾಧನೆಗೆ (ಶಿರ್ಕ್) ಮತ್ತು ಪ್ರವಾದಿಗಳು ಹಾಗೂ ಸಜ್ಜನರ ವಿಷಯದಲ್ಲಿ ಮಿತಿಮೀರುವುದಕ್ಕೆ ದಾರಿಯಾಗುತ್ತದೆ. ಶರಿಯತ್ ತಂದಿರುವ ವಿಷಯಗಳ ಸತ್ಯತೆಗೆ ವಾಸ್ತವವೇ ಸಾಕ್ಷಿಯಾಗಿದೆ, ಮತ್ತು ಅದು ಅಲ್ಲಾಹನಿಂದ ಬಂದಿದೆ ಎಂಬುದಕ್ಕೆ ಪುರಾವೆಯಾಗಿದೆ. ಅಲ್ಲಾಹನ ಸಂದೇಶವಾಹಕರು (ಸ) ಅಲ್ಲಾಹನಿಂದ ತಂದ ಮತ್ತು ಉಮ್ಮತ್ತಿಗೆ ತಲುಪಿಸಿದ ವಿಷಯಗಳಲ್ಲಿ ಸತ್ಯವಂತರು ಎಂಬುದಕ್ಕೆ ಇದು ಸ್ಪಷ್ಟವಾದ ಪುರಾವೆ ಮತ್ತು ನಿರ್ಣಾಯಕ ವಾದವಾಗಿದೆ. ಇಸ್ಲಾಮೀ ಪ್ರಪಂಚದ ಆಗುಹೋಗುಗಳನ್ನು ಮತ್ತು ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದು, ಅವುಗಳನ್ನು ಪೂಜ್ಯಭಾವದಿಂದ ಕಾಣುವುದು, ಅಲಂಕರಿಸುವುದು, ಸುಂದರಗೊಳಿಸುವುದು ಮತ್ತು ಅವುಗಳಿಗೆ ಪೂಜಾರಿಗಳನ್ನು ನೇಮಿಸುವುದು ಮುಂತಾದವುಗಳಿಂದ ಉಂಟಾಗಿರುವ ಶಿರ್ಕ್ ಮತ್ತು ಮಿತಿಮೀರುವಿಕೆಯನ್ನು ಗಮನಿಸುವವರಿಗೆ, ಇದು ಶಿರ್ಕ್‌ನ ಕಡೆಗೆ ಒಯ್ಯುವ ಸಾಧನಗಳಲ್ಲಿ ಒಂದೆಂದು ಖಚಿತವಾಗಿ ತಿಳಿಯುತ್ತದೆ. ಇವುಗಳನ್ನು ನಿಷೇಧಿಸುವುದು ಮತ್ತು ಇವುಗಳ ಬಗ್ಗೆ ಎಚ್ಚರಿಕೆ ನೀಡುವುದು ಇಸ್ಲಾಮೀ ಶರಿಯತ್‌ನ ಸೌಂದರ್ಯಗಳಲ್ಲಿ ಒಂದಾಗಿದೆ.

ಈ ಕುರಿತು ಬಂದಿರುವ ವರದಿಗಳಲ್ಲಿ ಒಂದು ಹೀಗಿದೆ: ಬುಖಾರಿ ಮತ್ತು ಮುಸ್ಲಿಂ (ಅಲ್ಲಾಹು ಅವರಿಬ್ಬರ ಮೇಲೆ ಕರುಣೆ ತೋರಲಿ) ಆಯಿಷಾ (ರ) ರಿಂದ ವರದಿ ಮಾಡಿದ್ದಾರೆ. ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು:

«لَعَنَ اللَّهُ الْيَهُودَ وَالنَّصَارَى، اتَّخَذُوا قُبُورَ أَنْبِيَائِهِمْ مَسَاجِدَ، قالَتْ عَائِشَةُ: يُحَذِّرُ مَا صَنَعُوا، قالَتْ: وَلَوْلَا ذَلِكَ لَأُبْرِزَ قَبْرُهُ، غَيْرَ أَنَّهُ خُشِيَ أَنْ يُتَّخَذَ مَسْجِدًا».

"ಅಲ್ಲಾಹು ಯಹೂದಿಗಳು ಮತ್ತು ಕ್ರಿಶ್ಚಿಯನ್ನರನ್ನು ಶಪಿಸಲಿ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳಾಗಿ (ಆರಾಧನಾ ಸ್ಥಳಗಳಾಗಿ) ಮಾಡಿಕೊಂಡರು." ಆಯಿಷಾ (ರ) ಹೇಳುತ್ತಾರೆ: "ಅವರು ಮಾಡಿದ್ದನ್ನು (ಮಾಡಬಾರದೆಂದು) ಪ್ರವಾದಿ(ಸ) ರವರು ಎಚ್ಚರಿಸುತ್ತಿದ್ದರು." ಅವರು (ಆಯಿಷಾ) ಮುಂದುವರಿಸಿದರು: "ಹಾಗಲ್ಲದಿದ್ದರೆ, ಅವರ (ಪ್ರವಾದಿಯ) ಸಮಾಧಿಯನ್ನು ಹೊರಗೆ ಎದ್ದು ಕಾಣುವಂತೆ ಮಾಡಲಾಗುತ್ತಿತ್ತು. ಆದರೆ ಅದನ್ನು (ಜನರು) ಮಸೀದಿಯಾಗಿ ಮಾಡಿಕೊಳ್ಳಬಹುದೆಂಬ ಭಯವಿತ್ತು." ಬುಖಾರಿ ಮತ್ತು ಮುಸ್ಲಿಂ ನಲ್ಲಿರುವ ಇನ್ನೊಂದು ಹದೀಸ್ ಹೀಗಿದೆ: ಉಮ್ಮು ಸಲಮಾ (ರ) ಮತ್ತು ಉಮ್ಮು ಹಬೀಬಾ (ರ) ರವರು ಅಬಿಸ್ಸೀನಿಯಾದಲ್ಲಿ ತಾವು ನೋಡಿದ ಒಂದು ಚರ್ಚ್ ಮತ್ತು ಅದರಲ್ಲಿನ ಚಿತ್ರಗಳ ಬಗ್ಗೆ ಅಲ್ಲಾಹನ ಸಂದೇಶವಾಹಕರಿಗೆ (ಸ) ತಿಳಿಸಿದರು. ಆಗ ಅವರು (ಸ) ಹೇಳಿದರು:

«أُولَئِكَ إِذَا مَاتَ فِيهِمُ الرَّجُلُ الصَّالِحُ؛ بَنَوْا عَلَى قَبْرِهِ مَسْجِدًا، وَصَوَّرُوا فِيهِ تِلْكَ الصُّوَرَ، أُولَئِكَ شِرَارُ الْخَلْقِ عِنْدَ اللَّهِ».

"ಆ ಜನರು, ಅವರಲ್ಲಿ ಒಬ್ಬ ಸಜ್ಜನ ವ್ಯಕ್ತಿ ಮರಣಹೊಂದಿದರೆ; ಅವನ ಸಮಾಧಿಯ ಮೇಲೆ ಮಸೀದಿಯನ್ನು ನಿರ್ಮಿಸುತ್ತಿದ್ದರು ಮತ್ತು ಅದರಲ್ಲಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅವರು ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟ ಸೃಷ್ಟಿಗಳು."

ಸಹೀಹ್ ಮುಸ್ಲಿಂನಲ್ಲಿ ಜುಂದುಬ್ ಬಿನ್ ಅಬ್ದುಲ್ಲಾ (ರ) ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಸ) ತಮ್ಮ ಮರಣಕ್ಕೆ ಐದು ದಿನಗಳ ಮೊದಲು ಹೀಗೆ ಹೇಳುವುದನ್ನು ಕೇಳಿದೆ:

«إِنِّي أَبْرَأُ إِلَى اللَّهِ أَنْ يَكُونَ لِي مِنْكُمْ خَلِيلٌ، فَإِنَّ اللَّهَ قَدِ اتَّخَذَنِي خَلِيلًا، كَمَا اتَّخَذَ إِبْرَاهِيمَ خَلِيلًا، وَلَوْ كُنْتُ مُتَّخِذًا مِنْ أُمَّتِي خَلِيلًا، لَاتَّخَذْتُ أَبَا بَكْرٍ خَلِيلًا، أَلَا وَإِنَّ مَنْ كَانَ قَبْلَكُمْ كَانُوا يَتَّخِذُونَ قُبُورَ أَنْبِيَائِهِمْ وَصَالِحِيهِمْ مَسَاجِدَ، أَلَا فَلَا تَتَّخِذُوا الْقُبُورَ مَسَاجِدَ، فَإِنِّي أَنْهَاكُمْ عَنْ ذَلِكَ».

"ನಾನು ನಿಮ್ಮಲ್ಲಿ ಯಾರನ್ನಾದರೂ ನನ್ನ ಖಲೀಲ್ (ಆಪ್ತಮಿತ್ರ) ಆಗಿ ಮಾಡಿಕೊಳ್ಳುವುದರಿಂದ ಅಲ್ಲಾಹನ ಮುಂದೆ ಮುಕ್ತತೆಯನ್ನು ಘೋಷಿಸುತ್ತೇನೆ. ಖಂಡಿತವಾಗಿಯೂ ಅಲ್ಲಾಹು ಇಬ್ರಾಹೀಮ್ (ಅ) ರನ್ನು ಖಲೀಲ್ ಆಗಿ ಮಾಡಿಕೊಂಡಂತೆ ನನ್ನನ್ನೂ ಖಲೀಲ್ ಆಗಿ ಮಾಡಿಕೊಂಡಿದ್ದಾನೆ. ಒಂದು ವೇಳೆ ನಾನು ನನ್ನ ಉಮ್ಮತ್ತಿನಿಂದ ಯಾರನ್ನಾದರೂ ಖಲೀಲ್ ಆಗಿ ಮಾಡಿಕೊಳ್ಳುವುದಾಗಿದ್ದರೆ, ಅಬೂಬಕರ್ (ರ) ರನ್ನು ಖಲೀಲ್ ಆಗಿ ಮಾಡಿಕೊಳ್ಳುತ್ತಿದ್ದೆ. ತಿಳಿಯಿರಿ, ನಿಮ್ಮ ಹಿಂದಿನ ಸಮುದಾಯದವರು ತಮ್ಮ ಪ್ರವಾದಿಗಳ ಮತ್ತು ಸಜ್ಜನರ ಸಮಾಧಿಗಳನ್ನು ಮಸೀದಿಗಳಾಗಿ ಮಾಡಿಕೊಳ್ಳುತ್ತಿದ್ದರು. ಆದ್ದರಿಂದ, ಸಮಾಧಿಗಳನ್ನು ಮಸೀದಿಗಳಾಗಿ ಮಾಡಿಕೊಳ್ಳಬೇಡಿ; ನಾನು ನಿಮಗೆ ಅದನ್ನು ನಿಷೇಧಿಸುತ್ತೇನೆ." ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್‌ಗಳಿವೆ.

ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದನ್ನು ನಾಲ್ಕು ಮಝ್‌ಹಬ್‌ಗಳ ವಿದ್ವಾಂಸರು ಹಾಗೂ ಇತರ ಮುಸ್ಲಿಂ ವಿದ್ವಾಂಸರು ನಿಷೇಧಿಸಿದ್ದಾರೆ ಮತ್ತು ಅದರ ಬಗ್ಗೆ ಎಚ್ಚರಿಸಿದ್ದಾರೆ. ಪ್ರವಾದಿಯವರ (ಸ) ಸುನ್ನತ್ತನ್ನು ಅನುಸರಿಸುವ, ಉಮ್ಮತ್ತಿಗೆ ಉಪದೇಶ ನೀಡುವ ಮತ್ತು ಯಹೂದಿಗಳು, ಕ್ರಿಶ್ಚಿಯನ್ನರು ಹಾಗೂ ಈ ಉಮ್ಮತ್ತಿನ ದುರ್ಮಾರ್ಗಿಗಳು ತಲುಪಿದಂತಹ ಸ್ಥಿತಿಗೆ ತಲುಪದಂತೆ ಅವರನ್ನು ಎಚ್ಚರಿಸುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದಾರೆ.

ಆದ್ದರಿಂದ, ಸುನ್ನತ್ತನ್ನು ಅನುಸರಿಸುವುದು, ಇಮಾಮರ ಮಾರ್ಗದಲ್ಲಿ ನಡೆಯುವುದು ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರು (ಸ) ಎಚ್ಚರಿಸಿದ ವಿಷಯಗಳಿಂದ ದೂರವಿರುವುದು ಜೋರ್ಡಾನ್‌ನಲ್ಲಿರುವ ಇಸ್ಲಾಮೀ ಜ್ಞಾನಗಳ ಸಂಘದ ಮೇಲೆ ಮತ್ತು ಇತರ ಮುಸ್ಲಿಮರ ಮೇಲೆ ಕಡ್ಡಾಯವಾಗಿದೆ; ಇದರಲ್ಲಿಯೇ ದಾಸರ ಒಳಿತು, ಅವರ ಸಂತೋಷ ಮತ್ತು ಇಹಲೋಕ ಹಾಗೂ ಪರಲೋಕದಲ್ಲಿ ಅವರ ಮೋಕ್ಷವು ಅಡಗಿದೆ. ಕೆಲವು ಜನರು ಈ ವಿಷಯದಲ್ಲಿ, ಗುಹಾವಾಸಿಗಳ ಕಥೆಯಲ್ಲಿ ಅಲ್ಲಾಹು ಹೇಳಿರುವ ಈ ಮಾತನ್ನು ಆಧಾರವಾಗಿ ಮಾಡಿಕೊಳ್ಳುತ್ತಾರೆ:

﴿...قَالَ ٱلَّذِينَ غَلَبُواْ عَلَىٰٓ أَمۡرِهِمۡ لَنَتَّخِذَنَّ عَلَيۡهِم مَّسۡجِدٗا﴾

ಅವರ ವಿಷಯದಲ್ಲಿ ಪ್ರಾಬಲ್ಯ ಪಡೆದವರು ಹೇಳಿದರು: “ನಿಶ್ಚಯವಾಗಿಯೂ ನಾವು ಅವರ ಗುಹೆಯ ಬಳಿ ಒಂದು ಮಸೀದಿಯನ್ನು ನಿರ್ಮಿಸುತ್ತೇವೆ.” [ಅಲ್-ಕಹ್ಫ್: 21]

ಇದಕ್ಕೆ ಉತ್ತರವೇನೆಂದರೆ: ಅಲ್ಲಾಹು ಆ ಕಾಲದ ಮುಖಂಡರು ಮತ್ತು ಅಧಿಕಾರದಲ್ಲಿದ್ದವರು ಈ ಮಾತನ್ನು ಹೇಳಿದರು ಎಂದು ತಿಳಿಸಿದ್ದಾನೆ. ಇದು ಅವರು ಮಾಡಿದ ಕೆಲಸವನ್ನು ಒಪ್ಪಿಕೊಳ್ಳುವ ಅಥವಾ ಅನುಮೋದಿಸುವ ರೀತಿಯಲ್ಲಿಲ್ಲ. ಬದಲಿಗೆ ಅವರು ಮಾಡಿದ ಕೆಲಸವನ್ನು ಖಂಡಿಸುವ, ದೂಷಿಸುವ ಮತ್ತು ಅದರಿಂದ ದೂರವಿರಲು ಪ್ರೇರೇಪಿಸುವ ರೀತಿಯಲ್ಲಿದೆ. ಇದಕ್ಕೆ ಪುರಾವೆಯೇನೆಂದರೆ: ಈ ಆಯತ್ತನ್ನು ಯಾರಿಗೆ ಅವತೀರ್ಣಗೊಳಿಸಲಾಯಿತೋ, ಮತ್ತು ಯಾರು ಅದರ ವ್ಯಾಖ್ಯಾನವನ್ನು ಎಲ್ಲರಿಗಿಂತ ಚೆನ್ನಾಗಿ ತಿಳಿದಿದ್ದರೋ ಆ ಸಂದೇಶವಾಹಕರು (ಸ) ತಮ್ಮ ಉಮ್ಮತ್ತಿಗೆ ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದನ್ನು ನಿಷೇಧಿಸಿದ್ದಾರೆ, ಅದರ ಬಗ್ಗೆ ಎಚ್ಚರಿಸಿದ್ದಾರೆ ಮತ್ತು ಹಾಗೆ ಮಾಡಿದವರನ್ನು ಶಪಿಸಿದ್ದಾರೆ ಹಾಗೂ ಖಂಡಿಸಿದ್ದಾರೆ.

ಒಂದು ವೇಳೆ ಅದು ಅನುಮತಿಸಲ್ಪಟ್ಟಿದ್ದರೆ, ಅಲ್ಲಾಹನ ಸಂದೇಶವಾಹಕರು (ಸ) ಈ ವಿಷಯದಲ್ಲಿ ಇಷ್ಟು ಕಠಿಣವಾದ ನಿಲುವನ್ನು ತಾಳುತ್ತಿರಲಿಲ್ಲ, ಮತ್ತು ಹಾಗೆ ಮಾಡಿದವರನ್ನು ಶಪಿಸಿ, ಅವರು ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟ ಸೃಷ್ಟಿಗಳು ಎಂದು ಹೇಳುವಷ್ಟು ತೀವ್ರವಾಗಿ ವಿರೋಧಿಸುತ್ತಿರಲಿಲ್ಲ. ಸತ್ಯಾನ್ವೇಷಿಗೆ ಇದರಲ್ಲಿ ಸಾಕಷ್ಟು ಮತ್ತು ಮನವರಿಕೆಯಾಗುವಷ್ಟು ಪುರಾವೆಯಿದೆ. ಒಂದು ವೇಳೆ ನಾವು ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದು ನಮ್ಮ ಹಿಂದಿನ ಸಮುದಾಯದವರಿಗೆ ಅನುಮತಿಸಲ್ಪಟ್ಟಿತ್ತು ಎಂದು ಭಾವಿಸಿದರೂ, ಆ ವಿಷಯದಲ್ಲಿ ಅವರನ್ನು ಅನುಕರಿಸಲು ನಮಗೆ ಅನುಮತಿಯಿಲ್ಲ. ಏಕೆಂದರೆ ನಮ್ಮ ಶರಿಯತ್ ಹಿಂದಿನ ಶರಿಯತ್‌ಗಳನ್ನು ರದ್ದುಗೊಳಿಸುತ್ತದೆ. ನಮ್ಮ ಸಂದೇಶವಾಹಕರು (ಸ) ಎಲ್ಲಾ ಪ್ರವಾದಿಗಳ ಮುದ್ರೆಯಾಗಿದ್ದಾರೆ ಮತ್ತು ಅವರು ತಂದ ಶರಿಯತ್ ಸಂಪೂರ್ಣ ಮತ್ತು ಸಾರ್ವತ್ರಿಕವಾಗಿದೆ. ಅವರು ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದನ್ನು ನಮಗೆ ನಿಷೇಧಿಸಿದ್ದಾರೆ. ಆದ್ದರಿಂದ ಅವರ ಮಾತಿಗೆ ವಿರುದ್ಧವಾಗಿ ನಡೆಯಲು ನಮಗೆ ಅನುಮತಿಯಿಲ್ಲ. ಅವರನ್ನು ಅನುಸರಿಸುವುದು, ಅವರು ತಂದಿರುವುದನ್ನು ಬಿಗಿಯಾಗಿ ಹಿಡಿದುಕೊಳ್ಳುವುದು ಮತ್ತು ಹಳೆಯ ಶರಿಯತ್‌ಗಳಲ್ಲಿ ಇದಕ್ಕೆ ವಿರುದ್ಧವಾಗಿರುವುದನ್ನು ಅಥವಾ ಅದನ್ನು ಮಾಡಿದವರು ಉತ್ತಮವೆಂದು ಪರಿಗಣಿಸಿದ ಪದ್ಧತಿಗಳನ್ನು ತ್ಯಜಿಸುವುದು ನಮ್ಮ ಮೇಲೆ ಕಡ್ಡಾಯವಾಗಿದೆ. ಏಕೆಂದರೆ ಅಲ್ಲಾಹನ ನಿಯಮಕ್ಕಿಂತ ಪರಿಪೂರ್ಣವಾದುದು ಯಾವುದೂ ಇಲ್ಲ, ಮತ್ತು ಅಲ್ಲಾಹನ ಸಂದೇಶವಾಹಕರ (ಸ) ಮಾರ್ಗದರ್ಶನಕ್ಕಿಂತ ಉತ್ತಮವಾದ ಮಾರ್ಗದರ್ಶನ ಯಾವುದೂ ಇಲ್ಲ.

ಅಲ್ಲಾಹನನ್ನು ಭೇಟಿಯಾಗುವವರೆಗೂ ಅವನ ಧರ್ಮದಲ್ಲಿ ದೃಢವಾಗಿ ನಿಲ್ಲಲು ಮತ್ತು ಮಾತುಗಳಲ್ಲಿ, ಕಾರ್ಯಗಳಲ್ಲಿ, ಬಾಹ್ಯ ಮತ್ತು ಆಂತರಿಕ ವಿಷಯಗಳಲ್ಲಿ ಹಾಗೂ ಇತರ ಎಲ್ಲಾ ವ್ಯವಹಾರಗಳಲ್ಲಿ ಅವನ ಸಂದೇಶವಾಹಕರಾದ ಮುಹಮ್ಮದ್ (ಸ) ರವರ ಮಾರ್ಗದರ್ಶನವನ್ನು ಅನುಸರಿಸಲು ಅಲ್ಲಾಹು ನಮಗೂ, ಎಲ್ಲಾ ಮುಸ್ಲಿಮರಿಗೂ ತೌಫೀಕ್ ನೀಡಲಿ ಎಂದು ನಾವು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ. ಖಂಡಿತವಾಗಿಯೂ ಅವನು ಕೇಳುವವನು ಮತ್ತು ಹತ್ತಿರವಿರುವವನಾಗಿದ್ದಾನೆ.

ಅಲ್ಲಾಹನ ಶಾಂತಿ ಮತ್ತು ಶುಭಾಶೀರ್ವಾದಗಳು ಅವನ ದಾಸರು ಮತ್ತು ಸಂದೇಶವಾಹಕರಾದ, ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಚರರ ಮೇಲೆ ಹಾಗೂ ಪುನರುತ್ಥಾನ ದಿನದವರೆಗೆ ಅವರ ಮಾರ್ಗದರ್ಶನವನ್ನು ಅನುಸರಿಸುವವರ ಮೇಲೆ ಇರಲಿ.

 

 

***

 


بِسْمِ اللهِ الرَّحمَنِ الرَّحِيمِ

ಹನ್ನೊಂದನೆಯ ಸಂದೇಶ:

ಮೃತರನ್ನು ಮಸೀದಿಗಳಲ್ಲಿ ದಫನ ಮಾಡುವುದು

ಅಲ್ಲಾಹನ ನಾಮದಿಂದ, ಸರ್ವಸ್ತುತಿಗಳು ಅಲ್ಲಾಹನಿಗೆ. ಅಲ್ಲಾಹನ ಸಂದೇಶವಾಹಕರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸುವವರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ. ಇನ್ನು ವಿಷಯಕ್ಕೆ ಬರುವುದಾದರೆ:

ನಾನು ಹಿಜರಿ 17/4/1415 ರಂದು ಪ್ರಕಟವಾದ "ಅಲ್-ಖರ್ತೂಮ್" ದಿನಪತ್ರಿಕೆಯನ್ನು ನೋಡಿದೆನು. ಅದರಲ್ಲಿ ಸಯ್ಯಿದ್ ಮುಹಮ್ಮದ್ ಅಲ್-ಹಸನ್ ಅಲ್-ಇದ್ರೀಸಿಯವರನ್ನು ಅವರ ತಂದೆಯ ಸಮಾಧಿಯ ಪಕ್ಕದಲ್ಲಿ, ಉಮ್ಮು ದುರ್ಮಾನ್ ನಗರದಲ್ಲಿರುವ ಅವರ ಮಸೀದಿಯಲ್ಲಿ ದಫನ ಮಾಡಲಾದ ಬಗ್ಗೆ ಒಂದು ಹೇಳಿಕೆ ಪ್ರಕಟವಾಗಿತ್ತು.

ಮುಸ್ಲಿಮರಿಗೆ ಉಪದೇಶ ನೀಡುವುದನ್ನು ಮತ್ತು ಕೆಡುಕನ್ನು ವಿರೋಧಿಸುವುದನ್ನು ಅಲ್ಲಾಹು ಕಡ್ಡಾಯಗೊಳಿಸಿರುವುದರಿಂದ, ಮಸೀದಿಗಳಲ್ಲಿ ದಫನ ಮಾಡುವುದು ಅನುಮತಿಸಲಾಗದ ವಿಷಯವಾಗಿದೆ ಎಂದು ಎಚ್ಚರಿಸಲು ನಾನು ಬಯಸುತ್ತೇನೆ. ಅಷ್ಟೇ ಅಲ್ಲ, ಅದು ಬಹುದೇವರಾಧನೆಯ (ಶಿರ್ಕ್) ಕಡೆಗೆ ಒಯ್ಯುವ ಸಾಧನಗಳಲ್ಲಿ ಒಂದಾಗಿದೆ. ಅದು ಯಹೂದಿಗಳು ಮತ್ತು ಕ್ರಿಶ್ಚಿಯನ್ನರ ಕೆಲಸ-ಕಾರ್ಯಗಳಲ್ಲಿ ಒಂದಾಗಿದೆ. ಇದಕ್ಕಾಗಿ ಅಲ್ಲಾಹು ಅವರನ್ನು ಖಂಡಿಸಿದ್ದಾನೆ ಮತ್ತು ಅವನ ಸಂದೇಶವಾಹಕರು (ಸ) ಅವರನ್ನು ಶಪಿಸಿದ್ದಾರೆ. ಬುಖಾರಿ ಮತ್ತು ಮುಸ್ಲಿಂನಲ್ಲಿ ಆಯಿಷಾ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:

«لَعَنَ اللَّهُ الْيَهُودَ وَالنَّصَارَى، اتَّخَذُوا قُبُورَ أَنْبِيَائِهِمْ مَسَاجِدَ».

"ಅಲ್ಲಾಹು ಯಹೂದಿಗಳು ಮತ್ತು ಕ್ರಿಶ್ಚಿಯನ್ನರನ್ನು ಶಪಿಸಲಿ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳಾಗಿ (ಆರಾಧನಾ ಸ್ಥಳಗಳಾಗಿ) ಮಾಡಿಕೊಂಡರು." ಮತ್ತು ಸಹೀಹ್ ಮುಸ್ಲಿಂನಲ್ಲಿ, ಜುಂದುಬ್ ಬಿನ್ ಅಬ್ದುಲ್ಲಾ ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:

«أَلَا وَإِنَّ مَنْ كَانَ قَبْلَكُمْ كَانُوا يَتَّخِذُونَ قُبُورَ أَنْبِيَائِهِمْ وَصَالِحِيهِمْ مَسَاجِدَ، أَلَا فَلَا تَتَّخِذُوا الْقُبُورَ مَسَاجِدَ؛ فَإِنِّي أَنْهَاكُمْ عَنْ ذَلِكَ».

"ತಿಳಿಯಿರಿ! ನಿಮ್ಮ ಹಿಂದಿನವರು (ಹಿಂದಿನ ಸಮುದಾಯದವರು) ತಮ್ಮ ಪ್ರವಾದಿಗಳ ಮತ್ತು ಸಜ್ಜನರ ಸಮಾಧಿಗಳನ್ನು ಮಸೀದಿಗಳಾಗಿ ಮಾಡಿಕೊಳ್ಳುತ್ತಿದ್ದರು. ಆದ್ದರಿಂದ, ಸಮಾಧಿಗಳನ್ನು ಮಸೀದಿಗಳಾಗಿ ಮಾಡಿಕೊಳ್ಳಬೇಡಿ; ನಾನು ನಿಮಗೆ ಅದನ್ನು ನಿಷೇಧಿಸುತ್ತೇನೆ." ಈ ಅರ್ಥದಲ್ಲಿ ಇನ್ನೂ ಅನೇಕ ಹದೀಸ್‌ಗಳಿವೆ.

ಆದ್ದರಿಂದ, ಪ್ರತಿಯೊಂದು ಸ್ಥಳದಲ್ಲಿರುವ ಮುಸ್ಲಿಮರ ಮೇಲೆ – ಸರ್ಕಾರಗಳು ಮತ್ತು ಪ್ರಜೆಗಳ ಮೇಲೆ – ಅಲ್ಲಾಹನನ್ನು ಭಯಪಡುವುದು, ಅವನು ನಿಷೇಧಿಸಿದ ವಿಷಯಗಳಿಂದ ದೂರವಿರುವುದು ಮತ್ತು ಮೃತರನ್ನು ಮಸೀದಿಗಳ ಹೊರಗೆ ದಫನ ಮಾಡುವುದು ಕಡ್ಡಾಯವಾಗಿದೆ. ಪ್ರವಾದಿ (ಸ) ರವರು ಮತ್ತು ಅವರ ಸಹಚರರು (ರ) ಮೃತರನ್ನು ಮಸೀದಿಗಳ ಹೊರಗೆ ದಫನ ಮಾಡುತ್ತಿದ್ದರು, ಮತ್ತು ಅವರ ಅನುಯಾಯಿಗಳು ಸಹ ಇದೇ ರೀತಿ ಮಾಡುತ್ತಿದ್ದರು.

ಇನ್ನು, ಪ್ರವಾದಿ (ಸ) ರವರು ಮತ್ತು ಅವರ ಇಬ್ಬರು ಸಹಚರರಾದ ಅಬೂಬಕರ್ (ರ) ಮತ್ತು ಉಮರ್ (ರ) ಅವರ ಸಮಾಧಿಗಳು ಮಸೀದಿಯಲ್ಲಿರುವುದು, ಮಸೀದಿಗಳಲ್ಲಿ ಮೃತರನ್ನು ದಫನ ಮಾಡಲು ಯಾವುದೇ ಪುರಾವೆಯಿಲ್ಲ. ಏಕೆಂದರೆ ಪ್ರವಾದಿ (ಸ) ರನ್ನು ಅವರ ಮನೆಯಲ್ಲಿ – ಆಯಿಷಾ (ರ) ರವರ ಮನೆಯಲ್ಲಿ – ದಫನ ಮಾಡಲಾಯಿತು, ನಂತರ ಅವರ ಇಬ್ಬರು ಸಹಚರರನ್ನು ಅವರೊಂದಿಗೆ ದಫನ ಮಾಡಲಾಯಿತು. ವಲೀದ್ ಬಿನ್ ಅಬ್ದುಲ್ ಮಲಿಕ್ ಮಸೀದಿಯನ್ನು ವಿಸ್ತರಿಸಿದಾಗ, ಅವರು ಆ ಕೋಣೆಯನ್ನು ಮಸೀದಿಯೊಳಗೆ ಸೇರಿಸಿದರು. ಇದು ನಡೆದದ್ದು ಹಿಜರಿ ಮೊದಲ ಶತಮಾನದ ಕೊನೆಯಲ್ಲಿ. ಅಂದಿನ ವಿದ್ವಾಂಸರು ಇದನ್ನು ವಿರೋಧಿಸಿದ್ದರು. ಆದರೆ ವಿಸ್ತರಣೆಗೆ ಇದು ಅಡ್ಡಿಯಾಗುವುದಿಲ್ಲ ಮತ್ತು ವಿಷಯವು ಸ್ಪಷ್ಟವಾಗಿದೆ, ಗೊಂದಲವಿಲ್ಲ ಎಂದು ಅವರು ಭಾವಿಸಿದ್ದರು.

ಇದರಿಂದ ಪ್ರತಿಯೊಬ್ಬ ಮುಸ್ಲಿಮನಿಗೆ ಸ್ಪಷ್ಟವಾಗುವುದೇನೆಂದರೆ: ಪ್ರವಾದಿ (ಸ) ರನ್ನು ಮತ್ತು ಅವರ ಇಬ್ಬರು ಸಹಚರರನ್ನು (ರ) ಮಸೀದಿಯಲ್ಲಿ ದಫನ ಮಾಡಲಾಗಿಲ್ಲ. ವಿಸ್ತರಣೆಯ ಕಾರಣದಿಂದಾಗಿ ಅವರ ಸಮಾಧಿಗಳನ್ನು ಮಸೀದಿಯೊಳಗೆ ಸೇರಿಸಿದ್ದು ಮಸೀದಿಗಳಲ್ಲಿ ದಫನ ಮಾಡುವುದಕ್ಕೆ ಪುರಾವೆಯಾಗುವುದಿಲ್ಲ; ಏಕೆಂದರೆ ಅವರು ಮಸೀದಿಯಲ್ಲಿಲ್ಲ, ಬದಲಿಗೆ ಅವರು ಪ್ರವಾದಿ (ಸ) ರವರ ಮನೆಯಲ್ಲಿದ್ದಾರೆ. ವಲೀದ್ ಮಾಡಿದ ಈ ಕೆಲಸವು ಈ ವಿಷಯದಲ್ಲಿ ಯಾರಿಗೂ ಪುರಾವೆಯಾಗಲು ಯೋಗ್ಯವಾಗಿಲ್ಲ. ಪುರಾವೆಯು ಕುರ್‌ಆನ್ ಮತ್ತು ಸುನ್ನತ್‌ನಲ್ಲಿದೆ, ಮತ್ತು ಉಮ್ಮತ್ತಿನ ಸಜ್ಜನರ (ಸಲಫ್) ಒಮ್ಮತದಲ್ಲಿದೆ. ಅಲ್ಲಾಹು ಅವರೆಲ್ಲರ ಬಗ್ಗೆ ಸಂತುಷ್ಟನಾಗಲಿ ಮತ್ತು ಅವರನ್ನು ಉತ್ತಮವಾಗಿ ಅನುಸರಿಸುವವರಲ್ಲಿ ನಮ್ಮನ್ನು ಸೇರಿಸಲಿ.

ಉಪದೇಶ ನೀಡುವುದಕ್ಕಾಗಿ ಮತ್ತು ಜವಾಬ್ದಾರಿಯಿಂದ ಮುಕ್ತನಾಗಲು ಇದನ್ನು ಹಿಜರಿ 14/5/1415 ರಂದು ಬರೆಯಲಾಗಿದೆ.

ಅಲ್ಲಾಹನೇ ಯಶಸ್ಸನ್ನು ನೀಡುವವನು. ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬದವರ ಮೇಲೆ, ಅವರ ಸಹಚರರ ಮೇಲೆ ಮತ್ತು ಅವರನ್ನು ಉತ್ತಮ ರೀತಿಯಲ್ಲಿ ಅನುಸರಿಸುವವರ ಮೇಲೆ ಅಲ್ಲಾಹನ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ.

 

 

***

 


بِسْمِ اللهِ الرَّحمَنِ الرَّحِيمِ

ಹನ್ನೆರಡನೆಯ ಸಂದೇಶ:

ಮುಹಮ್ಮದ್ (ಸ) ರವರ ಶರಿಯತ್‌ನಿಂದ ಹೊರಗುಳಿಯಲು ಯಾರಿಗಾದರೂ ಅನುಮತಿಯಿದೆ ಎಂದು ವಾದಿಸುವವರ ಸತ್ಯನಿಷೇಧ ಮತ್ತು ದುರ್ಮಾರ್ಗದ ವಿವರಣೆ

ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. ಪ್ರವಾದಿಗಳ ಮತ್ತು ಸಂದೇಶವಾಹಕರ ಮುದ್ರೆಯಾದ ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ, ಅವರ ಕುಟುಂಬ ಮತ್ತು ಎಲ್ಲಾ ಸಹಚರರ ಮೇಲೆ ಶಾಂತಿ ಮತ್ತು ಆಶೀರ್ವಾದಗಳು ವರ್ಷಿಸಲಿ.

ಇನ್ನು ವಿಷಯಕ್ಕೆ ಬರುವುದಾದರೆ: ಹಿಜರಿ 5/6/1415 ದಿನಾಂಕದ "ಅಶ್ಶರ್ಕುಲ್-ಅವ್ಸತ್" ಪತ್ರಿಕೆಯ ಸಂಚಿಕೆ ಸಂಖ್ಯೆ (5824) ರಲ್ಲಿ ಪ್ರಕಟವಾದ ಲೇಖನವನ್ನು ನೋಡಿದೆನು. ಅದನ್ನು ಅಬ್ದುಲ್ ಫತ್ತಾಹ್ ಅಲ್-ಹಾಯಿಕ್ ಎಂಬ ಹೆಸರಿನಿಂದ ಬರೆಯಲಾಗಿದ್ದು, ಅದರ ಶೀರ್ಷಿಕೆ "ತಪ್ಪುಕಲ್ಪನೆ" ಎಂದಿದೆ.

ಪ್ರವಾದಿ ಮುಹಮ್ಮದ್ (ಸ) ರವರ ಸಂದೇಶವು ಸಂಪೂರ್ಣ ಮನುಕುಲಕ್ಕಿರುವ ಸಂದೇಶವಾಗಿದೆಯೆಂದು ಇಸ್ಲಾಂ ಧರ್ಮದಿಂದ ಮತ್ತು ಪವಿತ್ರ ಗ್ರಂಥಗಳ ಹಾಗೂ ವಿದ್ವಾಂಸರ ಒಮ್ಮತದಿಂದ ಖಚಿತವಾಗಿ ತಿಳಿದುಬಂದಿರುವ ವಿಷಯವನ್ನು ನಿರಾಕರಿಸುವುದು ಮತ್ತು ಮುಹಮ್ಮದ್ (ಸ) ರನ್ನು ಅನುಸರಿಸದೆ, ಅವರಿಗೆ ವಿಧೇಯರಾಗದೆ, ಯಹೂದಿ ಅಥವಾ ಕ್ರಿಶ್ಚಿಯನ್ ಆಗಿ ಉಳಿಯುವವರು ಸತ್ಯ ಧರ್ಮದ ಮೇಲೆ ಇದ್ದಾರೆ ಎಂದು ವಾದಿಸುವುದು ಲೇಖನದ ಸಾರಾಂಶವಾಗಿದೆ. ನಂತರ ಅದರಲ್ಲಿ ಅಲ್ಲಾಹು ಸತ್ಯನಿಷೇಧಿಗಳನ್ನು ಮತ್ತು ಪಾಪಿಗಳನ್ನು ಶಿಕ್ಷಿಸುವ ಅವನ ವಿವೇಕವನ್ನು ಪ್ರಶ್ನಿಸಿ, ಅದನ್ನು ವ್ಯರ್ಥವೆಂದು ಸಾರಲಾಗಿದೆ.

ತಮ್ಮ ಮಾತುಗಳಿಂದ ಅಜ್ಞಾನಿಗಳು ಮೋಸಹೋಗಲೆಂದು ಅವರು (ಲೇಖಕರು) ಧಾರ್ಮಿಕ ಗ್ರಂಥಗಳನ್ನು ತಿರುಚಿದ್ದಾರೆ, ಅವುಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸಿದ್ದಾರೆ, ಅವುಗಳನ್ನು ತಮ್ಮ ಇಷ್ಟದಂತೆ ವ್ಯಾಖ್ಯಾನಿಸಿದ್ದಾರೆ ಮತ್ತು ಮುಹಮ್ಮದ್ (ಸ) ಅವರ ಸಂದೇಶದ ಸಾರ್ವತ್ರಿಕತೆಯನ್ನು—ಅವರ ಬಗ್ಗೆ ಕೇಳಿಯೂ ಅವರನ್ನು ಅನುಸರಿಸದವರ ಸತ್ಯನಿಷೇಧವನ್ನು ಮತ್ತು ಅಲ್ಲಾಹು ಇಸ್ಲಾಂ ಹೊರತುಪಡಿಸಿ ಬೇರೆ ಯಾವುದೇ ಧರ್ಮವನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ಸೂಚಿಸುವ ಸ್ಪಷ್ಟವಾದ ಧಾರ್ಮಿಕ ಪುರಾವೆಗಳು ಮತ್ತು ಪಠ್ಯಗಳನ್ನು ನಿರ್ಲಕ್ಷಿಸಿದ್ದಾರೆ. ಅವರು ಸ್ಪಷ್ಟವಾದ ಸತ್ಯನಿಷೇಧ, ಧರ್ಮಪರಿತ್ಯಾಗ ಮತ್ತು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು (ಸ) ನಿಷೇಧಿಸುವುದನ್ನು ಮಾಡಿದ್ದಾರೆ. ಲೇಖನವನ್ನು ಓದುವ ವಿದ್ವಾಂಸರು ಮತ್ತು ಸತ್ಯವಿಶ್ವಾಸಿಗಳಿಗೆ ಇದು ಖಂಡಿತ ಮನವರಿಕೆಯಾಗುವುದು.

ಅವರನ್ನು (ಲೇಖಕರನ್ನು) ನ್ಯಾಯಾಲಯಕ್ಕೆ ಹಾಜರುಪಡಿಸಿ, ಪಶ್ಚಾತ್ತಾಪ ಪಡಲು ಅವಕಾಶ ನೀಡಿ, ಅವರ ವಿಷಯದಲ್ಲಿ ಪರಿಶುದ್ಧ ಶರಿಯತ್ ಪ್ರಕಾರ ತೀರ್ಪು ನೀಡುವುದು ಆಡಳಿತಗಾರರ ಕರ್ತವ್ಯವಾಗಿದೆ.

ಮುಹಮ್ಮದ್ (ಸ) ರವರ ಸಂದೇಶದ ಸಾರ್ವತ್ರಿಕತೆಯನ್ನು ಮತ್ತು ಎಲ್ಲಾ ಜಿನ್ನ್ ಹಾಗೂ ಮಾನವರು ಅವರನ್ನು ಅನುಸರಿಸಬೇಕೆಂಬ ಕಡ್ಡಾಯತೆಯನ್ನು ಅಲ್ಲಾಹು ಸ್ಪಷ್ಟಪಡಿಸಿದ್ದಾನೆ. ಮುಸ್ಲಿಮರಲ್ಲಿ ಕನಿಷ್ಠ ಜ್ಞಾನವುಳ್ಳವರಿಗೂ ಕೂಡ ಇದು ತಿಳಿಯದ ವಿಷಯವಲ್ಲ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قُلۡ يَٰٓأَيُّهَا ٱلنَّاسُ إِنِّي رَسُولُ ٱللَّهِ إِلَيۡكُمۡ جَمِيعًا ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۖ لَآ إِلَٰهَ إِلَّا هُوَ يُحۡيِۦ وَيُمِيتُۖ فَـَٔامِنُواْ بِٱللَّهِ وَرَسُولِهِ ٱلنَّبِيِّ ٱلۡأُمِّيِّ ٱلَّذِي يُؤۡمِنُ بِٱللَّهِ وَكَلِمَٰتِهِۦ وَٱتَّبِعُوهُ لَعَلَّكُمۡ تَهۡتَدُونَ158﴾

ಹೇಳಿರಿ: “ಓ ಮನುಷ್ಯರೇ! ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಬಳಿಗೆ (ಕಳುಹಿಸಲಾದ) ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅಂದರೆ, ಭೂಮ್ಯಾಕಾಶಗಳ ಆಧಿಪತ್ಯವು ಯಾರಿಗೆ ಸೇರಿದ್ದೋ ಅವನ (ಸಂದೇಶವಾಹಕ). ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ.” ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ—ಅಂದರೆ ಅಲ್ಲಾಹನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ಆ ಅನಕ್ಷರಸ್ಥ ಪ್ರವಾದಿಯಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ. [ಅಲ್-ಅಅ್‌ರಾಫ್: 158]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَأُوحِيَ إِلَيَّ هَٰذَا ٱلۡقُرۡءَانُ لِأُنذِرَكُم بِهِۦ وَمَنۢ بَلَغَ...﴾

ಈ ಕುರ್‌ಆನಿನ ಮೂಲಕ ನಿಮಗೆ ಮತ್ತು ಇದು ತಲುಪುವ ಎಲ್ಲರಿಗೂ ಮುನ್ನೆಚ್ಚರಿಕೆ ನೀಡಲು ನನಗೆ ಈ ಕುರ್‌ಆನನ್ನು ದೇವವಾಣಿಯಾಗಿ ನೀಡಲಾಗಿದೆ. [ಅಲ್-ಅನ್ಆಮ್: 19] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قُلۡ إِن كُنتُمۡ تُحِبُّونَ ٱللَّهَ فَٱتَّبِعُونِي يُحۡبِبۡكُمُ ٱللَّهُ وَيَغۡفِرۡ لَكُمۡ ذُنُوبَكُمۡۚ وَٱللَّهُ غَفُورٞ رَّحِيمٞ31﴾

ಹೇಳಿರಿ: “ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”

[ಆಲು ಇಮ್ರಾನ್: 31].

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَن يَبۡتَغِ غَيۡرَ ٱلۡإِسۡلَٰمِ دِينٗا فَلَن يُقۡبَلَ مِنۡهُ وَهُوَ فِي ٱلۡأٓخِرَةِ مِنَ ٱلۡخَٰسِرِينَ85﴾

ಯಾರು ಇಸ್ಲಾಂ ಅಲ್ಲದ ಬೇರೊಂದು ಧರ್ಮವನ್ನು ಹುಡುಕುತ್ತಾನೋ—ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರಲ್ಲಿ ಸೇರುವನು. [ಆಲು ಇಮ್ರಾನ್: 85]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَآ أَرۡسَلۡنَٰكَ إِلَّا كَآفَّةٗ لِّلنَّاسِ بَشِيرٗا وَنَذِيرٗا...﴾

ನಾವು ನಿಮ್ಮನ್ನು ಸಂಪೂರ್ಣ ಮನುಕುಲಕ್ಕೆ ಸುವಾರ್ತೆ ತಿಳಿಸಲು ಮತ್ತು ಮುನ್ನೆಚ್ಚರಿಕೆ ನೀಡಲು ಕಳುಹಿಸಿದ್ದೇವೆ... [ಸಬಅ್:28] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَآ أَرۡسَلۡنَٰكَ إِلَّا رَحۡمَةٗ لِّلۡعَٰلَمِينَ107﴾

(ಪ್ರವಾದಿಯವರೇ) ನಾವು ನಿಮ್ಮನ್ನು ಸರ್ವಲೋಕದವರಿಗೆ ಒಂದು ದಯೆಯಾಗಿಯೇ ಕಳುಹಿಸಿದ್ದೇವೆ. [ಅಲ್-ಅಂಬಿಯಾ:107] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَقُل لِّلَّذِينَ أُوتُواْ ٱلۡكِتَٰبَ وَٱلۡأُمِّيِّـۧنَ ءَأَسۡلَمۡتُمۡۚ فَإِنۡ أَسۡلَمُواْ فَقَدِ ٱهۡتَدَواْۖ وَّإِن تَوَلَّوۡاْ فَإِنَّمَا عَلَيۡكَ ٱلۡبَلَٰغُۗ وَٱللَّهُ بَصِيرُۢ بِٱلۡعِبَادِ﴾

ಗ್ರಂಥ ನೀಡಲಾದವರೊಂದಿಗೆ ಮತ್ತು ಅನಕ್ಷರಸ್ಥರೊಂದಿಗೆ (ಅರಬ್ ಬಹುದೇವಾರಾಧಕರೊಂದಿಗೆ) ಕೇಳಿರಿ: “ನೀವು ಶರಣಾಗಿದ್ದೀರಾ?” ಅವರು ಶರಣಾದರೆ ಅವರು ಸನ್ಮಾರ್ಗವನ್ನು ಪಡೆಯುತ್ತಾರೆ. ಆದರೆ ಅವರು ಮುಖ ತಿರುಗಿಸಿ ನಡೆದರೆ ನಿಮ್ಮ ಕರ್ತವ್ಯವು ಅವರಿಗೆ ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.

[ಆಲು ಇಮ್ರಾನ್: 20]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿تَبَارَكَ ٱلَّذِي نَزَّلَ ٱلۡفُرۡقَانَ عَلَىٰ عَبۡدِهِۦ لِيَكُونَ لِلۡعَٰلَمِينَ نَذِيرًا1﴾

ಸತ್ಯಾಸತ್ಯ ವಿವೇಚಕ ಗ್ರಂಥವನ್ನು (ಕುರ್‌ಆನನ್ನು) ತನ್ನ ದಾಸನಿಗೆ (ಪ್ರವಾದಿಗೆ)—ಅವರು ಸರ್ವಲೋಕದವರಿಗೆ ಒಬ್ಬ ಮುನ್ನೆಚ್ಚರಿಕೆಗಾರನಾಗಲೆಂದು—ಅವತೀರ್ಣಗೊಳಿಸಿದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ. [ಅಲ್-ಫುರ್ಕಾನ್: 1].

ಬುಖಾರಿ ಮತ್ತು ಮುಸ್ಲಿಂ ಜಾಬಿರ್ (ರ) ರಿಂದ ವರದಿ. ಪ್ರವಾದಿ (ಸ) ರವರು ಹೇಳಿದರು:

«أُعْطِيتُ خَمْسًا لَمْ يُعْطَهُنَّ أَحَدٌ قَبْلِي: نُصِرْتُ بِالرُّعْبِ مَسِيرَةَ شَهْرٍ، وَجُعِلَتْ لِيَ الْأَرْضُ مَسْجِدًا وَطَهُورًا، فَأَيُّمَا رَجُلٍ مِنْ أُمَّتِي أَدْرَكَتْهُ الصَّلَاةُ، فَلْيُصَلّ، وَأُحِلَّتْ لِيَ الْمَغَانِمُ، وَلَمْ تُحَلَّ لِأَحَدٍ قَبْلِي، وَأُعْطِيتُ الشَّفَاعَةَ، وَكَانَ النَّبِيُّ يُبْعَثُ إِلَى قَوْمِهِ خَاصَّةً، وَبُعِثْتُ إِلَى النَّاسِ عَامَّةً».

"ನನಗೆ ಐದು ವಿಷಯಗಳನ್ನು ನೀಡಲಾಗಿದೆ, ನನಗಿಂತ ಮೊದಲು ಯಾರಿಗೂ ಅವುಗಳನ್ನು ನೀಡಲಾಗಿಲ್ಲ: ಒಂದು ತಿಂಗಳ ಪ್ರಯಾಣದ ದೂರದವರೆಗೆ (ಶತ್ರುಗಳ ಹೃದಯದಲ್ಲಿ) ಭಯವನ್ನು ಬಿತ್ತುವ ಮೂಲಕ ನನಗೆ ಸಹಾಯವನ್ನು ನೀಡಲಾಗಿದೆ. ಭೂಮಿಯನ್ನು ನನಗೆ (ಮತ್ತು ನನ್ನ ಅನುಯಾಯಿಗಳಿಗೆ) ನಮಾಝಿನ ಸ್ಥಳವಾಗಿ ಮತ್ತು ತಯಮ್ಮುಮ್ ಮಾಡುವ ವಸ್ತುವನ್ನಾಗಿ ಮಾಡಲಾಗಿದೆ—ಆದ್ದರಿಂದ ನನ್ನ ಅನುಯಾಯಿಗಳಲ್ಲಿ ಯಾರಿಗಾದರೂ ನಮಾಝಿನ ಸಮಯವಾದಾಗ ಅವರು ನಮಾಝ್ ಮಾಡಲಿ. ಯುದ್ಧದ ಸಂಪತ್ತನ್ನು ನನಗೆ ಧರ್ಮಬದ್ಧಗೊಳಿಸಲಾಗಿದೆ—ಆದರೆ ನನಗಿಂತ ಮೊದಲು ಯಾರಿಗೂ ಅದು ಧರ್ಮಬದ್ಧವಾಗಿರಲಿಲ್ಲ. ನನಗೆ ಶಫಾಅತ್ (ಪುನರುತ್ಥಾನ ದಿನದಂದು ಶಿಫಾರಸ್ಸು) ಮಾಡುವ ಅಧಿಕಾರವನ್ನು ನೀಡಲಾಗಿದೆ. ಪ್ರತಿಯೊಬ್ಬ ಪ್ರವಾದಿಯನ್ನು ಅವರ ಜನಾಂಗಕ್ಕೆ ಮಾತ್ರ ಕಳುಹಿಸಲಾಗುತ್ತಿತ್ತು, ಆದರೆ ನನ್ನನ್ನು ಸರ್ವ ಮಾನವಕುಲಕ್ಕೆ ಕಳುಹಿಸಲಾಗಿದೆ."

ನಮ್ಮ ಪ್ರವಾದಿ ಮುಹಮ್ಮದ್ (ಸ) ರವರ ಸಂದೇಶವು ಸರ್ವ ಮಾನವಕುಲಕ್ಕಿರುವ ಸಾರ್ವತ್ರಿಕ ಮತ್ತು ಸಮಗ್ರ ಸಂದೇಶವಾಗಿದೆ ಎಂಬುದಕ್ಕೆ ಮತ್ತು ಅದು ಹಿಂದಿನ ಎಲ್ಲಾ ಧರ್ಮಶಾಸ್ತ್ರಗಳನ್ನು ರದ್ದುಗೊಳಿಸಿದೆ ಎಂಬುದಕ್ಕೆ ಇವೆಲ್ಲವೂ ಸ್ಪಷ್ಟವಾದ ಪುರಾವೆಯಾಗಿವೆ. ಮುಹಮ್ಮದ್ (ಸ) ರನ್ನು ಅನುಸರಿಸದವರು ಮತ್ತು ಅವರಿಗೆ ವಿಧೇಯರಾಗದವರು ಸತ್ಯನಿಷೇಧಿ ಮತ್ತು ಪಾಪಿಗಳಾಗಿದ್ದು, ಅವರು ಅಲ್ಲಾಹನ ಶಿಕ್ಷೆಗೆ ಅರ್ಹರಾಗಿದ್ದಾರೆ. ಅಲ್ಲಾಹು ಹೇಳುತ್ತಾನೆ:

﴿...وَمَن يَكۡفُرۡ بِهِۦ مِنَ ٱلۡأَحۡزَابِ فَٱلنَّارُ مَوۡعِدُهُۥ...﴾

ವಿವಿಧ ಪಂಗಡಗಳಲ್ಲಿ ಯಾರು ಅದನ್ನು ನಿಷೇಧಿಸುತ್ತಾರೋ ಅವರಿಗೆ ವಾಗ್ದಾನ ಮಾಡಲಾದ ಸ್ಥಳವು ನರಕಾಗ್ನಿಯಾಗಿದೆ. [ಹೂದ್: 17]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...فَلۡيَحۡذَرِ ٱلَّذِينَ يُخَالِفُونَ عَنۡ أَمۡرِهِۦٓ أَن تُصِيبَهُمۡ فِتۡنَةٌ أَوۡ يُصِيبَهُمۡ عَذَابٌ أَلِيمٌ﴾

ಪ್ರವಾದಿಯವರ ಆಜ್ಞೆಗೆ ವಿರುದ್ಧವಾಗಿ ಸಾಗುವವರು—ಅವರಿಗೇನಾದರೂ ಅನಾಹುತ ಸಂಭವಿಸುವುದರ ಬಗ್ಗೆ ಅಥವಾ ಯಾತನಾಮಯ ಶಿಕ್ಷೆ ಎರಗುವುದರ ಬಗ್ಗೆ ಸದಾ ಭಯಪಡುತ್ತಿರಲಿ. [ಅನ್ನೂರ್: 63] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَمَن يَعۡصِ ٱللَّهَ وَرَسُولَهُۥ وَيَتَعَدَّ حُدُودَهُۥ يُدۡخِلۡهُ نَارًا خَٰلِدٗا فِيهَا وَلَهُۥ عَذَابٞ مُّهِينٞ14﴾

ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುತ್ತಾನೋ ಮತ್ತು ಅವನ ಎಲ್ಲೆಗಳನ್ನು ಮೀರುತ್ತಾನೋ—ಅವನನ್ನು ಅಲ್ಲಾಹು ನರಕಾಗ್ನಿಗೆ ಪ್ರವೇಶ ಮಾಡಿಸುವನು. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನಿಗೆ ಅಪಮಾನಕರ ಶಿಕ್ಷೆಯಿದೆ. [ಅನ್ನಿಸಾ: 14]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿...وَمَن يَتَبَدَّلِ ٱلۡكُفۡرَ بِٱلۡإِيمَٰنِ فَقَدۡ ضَلَّ سَوَآءَ ٱلسَّبِيلِ﴾

ಯಾರು ಸತ್ಯವಿಶ್ವಾಸವನ್ನು ಸತ್ಯನಿಷೇಧಕ್ಕೆ ಬದಲಾಯಿಸುತ್ತಾನೋ ಅವನು ನೇರ ಮಾರ್ಗದಿಂದ ತಪ್ಪಿ ಹೋಗುತ್ತಾನೆ. [ಅಲ್-ಬಕರ: 108] ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳಿವೆ.

ಸಂದೇಶವಾಹಕರ (ಸ) ವಿಧೇಯತೆಯನ್ನು ಅಲ್ಲಾಹು ತನ್ನ ವಿಧೇಯತೆಗೆ ಜೋಡಿಸಿದ್ದಾನೆ. ಇಸ್ಲಾಂ ಹೊರತುಪಡಿಸಿ ಬೇರೆ ಧರ್ಮದಲ್ಲಿ ನಂಬಿಕೆಯಿಡುವವನು ನಷ್ಟ ಅನುಭವಿಸುವನು ಹಾಗೂ ಅವನಿಂದ ಯಾವುದೇ ದಂಡ ಅಥವಾ ಪ್ರಾಯಶ್ಚಿತ್ತವನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಅವನು ಹೇಳುತ್ತಾನೆ:

﴿وَمَنْ يَبْتَغِ غَيْرَ الْإِسْلَامِ دِينًا فَلَنْ يُقْبَلَ مِنْهُ وَهُوَ فِي الْآخِرَةِ مِنَ الْخَاسِرِينَ85

"ಮತ್ತು ಯಾರು ಇಸ್ಲಾಂ ಅಲ್ಲದ ಬೇರೆ ಧರ್ಮವನ್ನು ಅರಸುತ್ತಾರೋ, ಅದು ಅವರಿಂದ ಎಂದಿಗೂ ಸ್ವೀಕರಿಸಲ್ಪಡುವುದಿಲ್ಲ, ಮತ್ತು ಪರಲೋಕದಲ್ಲಿ ಅವರು ನಷ್ಟ ಅನುಭವಿಸುವವರಲ್ಲಿ ಸೇರುತ್ತಾರೆ." [ಆಲು ಇಮ್ರಾನ್: 85]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿مَنْ يُطِعِ الرَّسُولَ فَقَدْ أَطَاعَ اللَّهَ...

"ಯಾರು ಸಂದೇಶವಾಹಕರಿಗೆ ವಿಧೇಯರಾಗುತ್ತಾರೋ, ಅವರು ಖಂಡಿತವಾಗಿಯೂ ಅಲ್ಲಾಹನಿಗೆ ವಿಧೇಯರಾಗಿದ್ದಾರೆ." [ಅನ್ನಿಸಾ: 80]. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿قُلْ أَطِيعُوا اللَّهَ وَأَطِيعُوا الرَّسُولَ فَإِنْ تَوَلَّوْا فَإِنَّمَا عَلَيْهِ مَا حُمِّلَ وَعَلَيْكُمْ مَا حُمِّلْتُمْ وَإِنْ تُطِيعُوهُ تَهْتَدُوا...

"ಹೇಳಿರಿ: ಅಲ್ಲಾಹನಿಗೆ ವಿಧೇಯರಾಗಿರಿ ಮತ್ತು ಸಂದೇಶವಾಹಕರಿಗೆ ವಿಧೇಯರಾಗಿರಿ. ಆದರೆ ನೀವು ವಿಮುಖರಾದರೆ, ಅವರ ಹೊಣೆಗಾರಿಕೆಯು ಅವರ ಮೇಲೆ ಹೊರಿಸಲಾದ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರವಾಗಿದೆ ಮತ್ತು ನಿಮ್ಮ ಹೊಣೆಗಾರಿಕೆಯು ನಿಮ್ಮ ಮೇಲೆ ಹೊರಿಸಲಾದ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರವಾಗಿದೆ. ನೀವು ಅವರಿಗೆ ವಿಧೇಯರಾದರೆ, ನೀವು ಸರಿಯಾದ ಮಾರ್ಗದರ್ಶನದಲ್ಲಿರುತ್ತೀರಿ." [ಅನ್ನೂರ್: 54] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿إِنَّ الَّذِينَ كَفَرُوا مِنْ أَهْلِ الْكِتَابِ وَالْمُشْرِكِينَ فِي نَارِ جَهَنَّمَ خَالِدِينَ فِيهَا أُولَئِكَ هُمْ شَرُّ الْبَرِيَّةِ 6

"ಖಂಡಿತವಾಗಿಯೂ, ಗ್ರಂಥದ ಜನರಲ್ಲಿ (ಯಹೂದಿಗಳು ಮತ್ತು ಕ್ರಿಶ್ಚಿಯನ್ನರು) ಮತ್ತು ಬಹುದೇವವಿಶ್ವಾಸಿಗಳಲ್ಲಿರುವ ಸತ್ಯನಿಷೇಧಿಗಳು ನರಕಾಗ್ನಿಯಲ್ಲಿ ಶಾಶ್ವತವಾಗಿರುತ್ತಾರೆ. ಅವರೇ ಸೃಷ್ಟಿಗಳಲ್ಲಿ ಅತ್ಯಂತ ಕೆಟ್ಟವರು."

[ಅಲ್-ಬಯ್ಯಿನ: 6].

ಮುಸ್ಲಿಂ ತಮ್ಮ ಸಹೀಹ್‌ನಲ್ಲಿ ವರದಿ ಮಾಡಿದ ಹದೀಸಿನಲ್ಲಿ ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು:

«وَالَّذِي نَفْسِي بِيَدِهِ؛ لَا يَسْمَعُ بِي أَحَدٌ مِنْ هَذِهِ الْأُمَّةِ، يَهُودِيٌّ وَلَا نَصْرَانِيٌّ، ثُمَّ يَمُوتُ وَلَمْ يُؤْمِنْ بِالَّذِي أُرْسِلْتُ بِهِ؛ إِلَّا كَانَ مِنْ أَهْلِ النَّارِ».

"ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಈ ಸಮುದಾಯದಲ್ಲಿರುವ ಯಹೂದಿ ಅಥವಾ ಕ್ರಿಶ್ಚಿಯನ್ ಯಾರೇ ಆಗಲಿ, ಅವರು ನನ್ನ ಬಗ್ಗೆ ಕೇಳಿ, ನಂತರ ನನ್ನೊಂದಿಗೆ ಕಳುಹಿಸಲಾದ ಸಂದೇಶದಲ್ಲಿ ವಿಶ್ವಾಸವಿಡದೆ ಮರಣಹೊಂದಿದರೆ; ಅವರು ನರಕವಾಸಿಗಳಲ್ಲಿ ಸೇರುತ್ತಾರೆ."

ಇಸ್ಲಾಂ ಧರ್ಮವನ್ನು ಸ್ವೀಕರಿಸದವರ ಧರ್ಮವು ಅಸಿಂಧುವಾಗಿದೆ ಎಂದು ಪ್ರವಾದಿ (ಸ) ರವರು ತಮ್ಮ ಕ್ರಿಯೆ ಮತ್ತು ವಚನಗಳ ಮೂಲಕ ವಿವರಿಸಿದ್ದಾರೆ. ಇತರ ಸತ್ಯನಿಷೇಧಿಗಳೊಂದಿಗೆ ಹೋರಾಡಿದಂತೆ ಅವರು ಯಹೂದಿಗಳು ಮತ್ತು ಕ್ರಿಶ್ಚಿಯನ್ನರೊಂದಿಗೆ ಹೋರಾಡಿದ್ದಾರೆ. ಮತ್ತು ಅವರ ಪೈಕಿ ಜಿಝ್ಯಾ ನೀಡಿದವರಿಂದ ಅದನ್ನು ಸ್ವೀಕರಿಸಿದ್ದಾರೆ. ಇದೇಕೆಂದರೆ, ಉಳಿದವರಿಗೆ ಇಸ್ಲಾಂನ ಕರೆ ತಲುಪುವುದನ್ನು ಅವರು ತಡೆಯದಿರುವುದಕ್ಕಾಗಿ, ಮತ್ತು ಅವರಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಯಸುವವರು ತಮ್ಮ ಜನಾಂಗದವರ ಅಡೆತಡೆ, ನಿಷೇಧ ಅಥವಾ ಹತ್ಯೆಯ ಭಯವಿಲ್ಲದೆ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಕ್ಕಾಗಿ.

ಬುಖಾರಿ ಮತ್ತು ಮುಸ್ಲಿಂ, ಅಬೂ ಹುರೈರಾ (ರ) ರಿಂದ ವರದಿ. ಅವರು ಹೇಳಿದರು: ನಾವು ಮಸೀದಿಯಲ್ಲಿದ್ದಾಗ, ಅಲ್ಲಾಹನ ಸಂದೇಶವಾಹಕರು (ಸ) ಹೊರಬಂದು ಹೇಳಿದರು:

«انْطَلِقُوا إِلَى يَهُودَ، فَخَرَجْنَا مَعَهُ حَتَّى جِئْنَا بَيْتَ الْمِدْرَاسِ، فَقَامَ النَّبِيُّ ﷺ، فَنَادَاهُمْ فَقَالَ :يَا مَعْشَرَ يَهُودَ، أَسْلِمُوا تَسْلَمُوا، فَقَالُوا: قَدْ بَلَّغْتَ يَا أَبَا الْقَاسِمِ، فَقَالَ لَهُمْ رَسُولُ اللَّهِ ﷺ: ذَلِكَ أُرِيدُ، أَسْلِمُوا تَسْلَمُوا، فَقَالُوا: قَدْ بَلَّغْتَ يَا أَبَا الْقَاسِمِ، فَقَالَ لَهُمْ رَسُولُ اللَّهِ ﷺ: ذَلِكَ أُرِيدُ، ثُمَّ قَالَهَا الثَّالِثَةَ...».

ಯಹೂದಿಗಳ ಬಳಿಗೆ ಹೋಗಿ." ಆಗ ನಾವು ಅವರೊಂದಿಗೆ ಬೈತುಲ್-ಮಿದ್ರಾಸ್‌ಗೆ (ಯಹೂದಿ ಪಾಠಶಾಲೆ) ತಲುಪುವ ತನಕ ಹೊರಟೆವು. ಅಲ್ಲಿ ಪ್ರವಾದಿ (ಸ) ರವರು ಅವರನ್ನು ಕರೆದು ಹೇಳಿದರು: "ಓ ಯಹೂದಿಗಳ ಸಮೂಹವೇ, ಇಸ್ಲಾಂ ಸ್ವೀಕರಿಸಿ, ನೀವು ಸುರಕ್ಷಿತರಾಗಿರುತ್ತೀರಿ." ಅವರು ಹೇಳಿದರು: "ಓ ಅಬುಲ್ ಕಾಸಿಂ, ನೀವು ಸಂದೇಶವನ್ನು ತಲುಪಿಸಿದ್ದೀರಿ." ಆಗ ಅಲ್ಲಾಹನ ಸಂದೇಶವಾಹಕರು (ಸ) ಅವರಿಗೆ ಹೇಳಿದರು: "ನಾನು ಅದನ್ನೇ ಬಯಸುತ್ತೇನೆ, ಇಸ್ಲಾಂ ಸ್ವೀಕರಿಸಿ, ನೀವು ಸುರಕ್ಷಿತರಾಗಿರುತ್ತೀರಿ." ಅವರು ಹೇಳಿದರು: "ಓ ಅಬುಲ್ ಕಾಸಿಂ, ನೀವು ಸಂದೇಶವನ್ನು ತಲುಪಿಸಿದ್ದೀರಿ." ಆಗ ಅಲ್ಲಾಹನ ಸಂದೇಶವಾಹಕರು (ಸ) ಅವರಿಗೆ ಹೇಳಿದರು: "ನಾನು ಅದನ್ನೇ ಬಯಸುತ್ತೇನೆ." ನಂತರ ಅದನ್ನು ಮೂರನೇ ಬಾರಿಗೆ ಹೇಳಿದರು... ಹದೀಸ್.

ಇದರ ಅರ್ಥವೇನೆಂದರೆ, ಪ್ರವಾದಿ (ಸ) ರವರು ಯಹೂದಿ ಧರ್ಮದವರ ಬಳಿಗೆ ಅವರ ಮದ್ರಸಾ (ಪಾಠಶಾಲೆ) ಗೆ ಹೋಗಿ, ಅವರನ್ನು ಇಸ್ಲಾಂಗೆ ಆಹ್ವಾನಿಸಿದರು, ಮತ್ತು ಅವರಿಗೆ ಹೇಳಿದರು: "ಇಸ್ಲಾಂ ಸ್ವೀಕರಿಸಿ, ನೀವು ಸುರಕ್ಷಿತರಾಗಿರುತ್ತೀರಿ". ಅವರು ಅದನ್ನು (ಹಲವು ಬಾರಿ) ಪುನರಾವರ್ತಿಸಿದರು.

ಅದೇ ರೀತಿ, ಅವರು ಹಿರ್ಕಲ್‌ಗೆ (ಹಿರಾಕ್ಲಿಯಸ್) ಪತ್ರವನ್ನು ಕಳುಹಿಸಿ ಅವನನ್ನು ಇಸ್ಲಾಂಗೆ ಆಹ್ವಾನಿಸಿದರು. ಅವನು ಅದನ್ನು ನಿಷೇಧಿಸಿದರೆ, ಅವನ ನಿಷೇಧದಿಂದಾಗಿ ಇಸ್ಲಾಂ ಅನ್ನು ಸ್ವೀಕರಿಸದವರ ಪಾಪವು ಕೂಡ ಅವನ ಮೇಲೆ ಇರುತ್ತದೆ ಎಂದು ತಿಳಿಸಿದರು. ಬುಖಾರಿ ಮತ್ತು ಮುಸ್ಲಿಂ ತಮ್ಮ ಸಹೀಹ್‌ಗಳಲ್ಲಿ ವರದಿ ಮಾಡಿದಂತೆ, ಹಿರ್ಕಲ್ ಅಲ್ಲಾಹನ ಸಂದೇಶವಾಹಕರ (ಸ) ಪತ್ರವನ್ನು ತರಿಸಿಕೊಂಡು ಓದಿದನು, ಅದರಲ್ಲಿ ಹೀಗೆ ಬರೆಯಲಾಗಿತ್ತು:

«بِسْمِ اللَّهِ الرَّحْمَنِ الرَّحِيمِ، مِنْ مُحَمَّدٍ رَسُولِ اللَّهِ إِلَى هِرَقْلَ عَظِيمِ الرُّومِ، سَلَامٌ عَلَى مَنِ اتَّبَعَ الْهُدَى، أَمَّا بَعْدُ: فَإِنِّي أَدْعُوكَ بِدِعَايَةِ الْإِسْلَامِ، أَسْلِمْ تَسْلَمْ، وَأَسْلِمْ يُؤْتِكَ اللَّهُ أَجْرَكَ مَرَّتَيْنِ، فَإِنْ تَوَلَّيْتَ، فَإِنَّ عَلَيْكَ إِثْمَ الْأَرِيسِيِّينَ وَ

"ಪರಮ ದಯಾಮಯನೂ, ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಅಲ್ಲಾಹನ ಸಂದೇಶವಾಹಕ ಮುಹಮ್ಮದ್‌ರಿಂದ ರೋಮ್‌ನ ಮಹಾನ್ ಚಕ್ರವರ್ತಿ ಹಿರ್ಕಲ್‌ಗೆ. ಸನ್ಮಾರ್ಗವನ್ನು ಅನುಸರಿಸುವವರ ಮೇಲೆ ಶಾಂತಿಯಿರಲಿ. ಇನ್ನು ಮುಂದಕ್ಕೆ ಹೇಳುವುದೇನೆಂದರೆ, ನಾನು ನಿಮ್ಮನ್ನು ಇಸ್ಲಾಂನ ಕರೆಯೊಂದಿಗೆ ಆಹ್ವಾನಿಸುತ್ತೇನೆ. ಇಸ್ಲಾಂ ಸ್ವೀಕರಿಸಿರಿ, ನೀವು ಸುರಕ್ಷಿತರಾಗಿರುತ್ತೀರಿ. ಇಸ್ಲಾಂ ಸ್ವೀಕರಿಸಿರಿ, ಅಲ್ಲಾಹು ನಿಮಗೆ ನಿಮ್ಮ ಪ್ರತಿಫಲವನ್ನು ಎರಡು ಬಾರಿ ನೀಡುತ್ತಾನೆ. ಆದರೆ ನೀವು ವಿಮುಖರಾದರೆ, ನಿಮ್ಮ ಅನುಯಾಯಿಗಳ ಪಾಪವು ನಿಮ್ಮ ಮೇಲಿರುತ್ತದೆ.

﴿يَٰٓأَهۡلَ ٱلۡكِتَٰبِ تَعَالَوۡاْ إِلَىٰ كَلِمَةٖ سَوَآءِۭ بَيۡنَنَا وَبَيۡنَكُمۡ أَلَّا نَعۡبُدَ إِلَّا ٱللَّهَ وَلَا نُشۡرِكَ بِهِۦ شَيۡـٔٗا وَلَا يَتَّخِذَ بَعۡضُنَا بَعۡضًا أَرۡبَابٗا مِّن دُونِ ٱللَّهِۚ فَإِن تَوَلَّوۡاْ فَقُولُواْ ٱشۡهَدُواْ بِأَنَّا مُسۡلِمُونَ64﴾

"ಓ ಗ್ರಂಥದ ಜನರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾದ ಒಂದು ವಚನಕ್ಕೆ ಬನ್ನಿರಿ. (ಆ ವಚನವೇನೆಂದರೆ) ನಾವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು, ಮತ್ತು ನಾವು ಅವನೊಂದಿಗೆ ಯಾವುದೇ ಸಹಭಾಗಿಗಳನ್ನು ಮಾಡಿಕೊಳ್ಳಬಾರದು, ಮತ್ತು ನಮ್ಮಲ್ಲಿ ಯಾರೂ ಅಲ್ಲಾಹನ ಹೊರತಾಗಿ ಇತರರನ್ನು ಪ್ರಭುಗಳಾಗಿ ಸ್ವೀಕರಿಸಬಾರದು. ನಂತರ, ಅವರೇನಾದರೂ ವಿಮುಖರಾದರೆ, ಹೇಳಿರಿ: ನಾವು ಮುಸ್ಲಿಮರು ಎಂಬುದಕ್ಕೆ (ನೀವು) ಸಾಕ್ಷಿಯಾಗಿರಿ."

[ಆಲು ಇಮ್ರಾನ್: 64].

ನಂತರ ಅವರು ವಿಮುಖರಾಗಿ ಇಸ್ಲಾಂ ಸ್ವೀಕರಿಸಲು ನಿರಾಕರಿಸಿದಾಗ, ಪ್ರವಾದಿ (ಸ) ರವರು ಮತ್ತು ಅವರ ಸಹಚರರು (ಸಹಾಬಿಗಳು) ಅವರೊಂದಿಗೆ ಯುದ್ಧ ಮಾಡಿದರು ಮತ್ತು ಅವರ ಮೇಲೆ ಜಿಝ್ಯಾವನ್ನು ವಿಧಿಸಿದರು.

ಅವರ ದುರ್ಮಾರ್ಗವನ್ನು ಮತ್ತು ಮುಹಮ್ಮದ್ (ಸ) ರವರ ಧರ್ಮದ ಮೂಲಕ ಅವರ ಧರ್ಮಗಳು ರದ್ದುಗೊಂಡ ಬಳಿಕ, ಅವರು ಅನುಸರಿಸುತ್ತಿರುವವರ ಧರ್ಮವು ಸುಳ್ಳಾಗಿದೆ ಎಂಬುದನ್ನು ಒತ್ತಿಹೇಳುವುದಕ್ಕಾಗಿ, ಅಲ್ಲಾಹು ನೇರವಾದ, ಸರಿಯಾದ, ಸ್ವೀಕಾರಾರ್ಹವಾದ ಮಾರ್ಗಕ್ಕೆ (ಇಸ್ಲಾಂ ಧರ್ಮಕ್ಕೆ) ಮಾರ್ಗದರ್ಶನ ನೀಡುವಂತೆ ಪ್ರತಿದಿನ, ಪ್ರತಿ ನಮಾಝಿನಲ್ಲಿ ಮತ್ತು ಪ್ರತಿ ರಕಅತ್‌ನಲ್ಲಿ ಬೇಡಿಕೊಳ್ಳುವಂತೆ ಮುಸ್ಲಿಮರಿಗೆ ಆಜ್ಞಾಪಿಸಿದ್ದಾನೆ. ಹಾಗೆಯೇ ಅವನ ಕೋಪಕ್ಕೆ ಗುರಿಯಾದವರ (ಯಹೂದಿಗಳು ಮತ್ತು ಅವರಂತೆಯೇ ತಾವು ತಪ್ಪುದಾರಿಯಲ್ಲಿದ್ದೇವೆಂದು ತಿಳಿದೂ ಅದರ ಮೇಲೆ ಹಠ ಹಿಡಿಯುವವರು) ಮಾರ್ಗದಿಂದ ದೂರವಿರಿಸುವಂತೆ, ಹಾಗೂ ದಾರಿತಪ್ಪಿದವರ (ಜ್ಞಾನವಿಲ್ಲದೆ ಆರಾಧಿಸುವವರು, ಮತ್ತು ತಾವು ಸನ್ಮಾರ್ಗದಲ್ಲಿದ್ದೇವೆಂದು ವಾದಿಸುವವರು—ವಾಸ್ತವವಾಗಿ ಅವರು ದಾರಿತಪ್ಪಿದ ಮಾರ್ಗದಲ್ಲಿದ್ದಾರೆ. ಇವರು ಯಾರೆಂದರೆ, ಕ್ರಿಶ್ಚಿಯನ್ನರು, ಮತ್ತು ಇತರ ಜನಾಂಗಗಳಲ್ಲಿ ಸೇರಿದ ಅಜ್ಞಾನ ಮತ್ತು ದುರ್ಮಾರ್ಗದ ಆಧಾರದಲ್ಲಿ ಆರಾಧಿಸುವವರು) ಮಾರ್ಗದಿಂದ ದೂರವಿರಿಸುವಂತೆ (ಬೇಡಿಕೊಳ್ಳಬೇಕೆಂದು ಆದೇಶಿಸಿದ್ದಾನೆ). ಇದೆಲ್ಲವೂ, ಇಸ್ಲಾಂ ಹೊರತುಪಡಿಸಿ ಇತರೆಲ್ಲಾ ಧರ್ಮಗಳು ಸುಳ್ಳು ಎಂದು ಮತ್ತು ಇಸ್ಲಾಂ ಹೊರತುಪಡಿಸಿ ಇತರ ಧರ್ಮಗಳ ಪ್ರಕಾರ ಅಲ್ಲಾಹನನ್ನು ಆರಾಧಿಸುವ ಪ್ರತಿಯೊಬ್ಬರೂ ದಾರಿತಪ್ಪಿದವರೆಂದು ಮುಸ್ಲಿಮನಿಗೆ ಖಚಿತವಾಗಿ ತಿಳಿಯುವುದಕ್ಕಾಗಿದೆ. ಯಾರು ಇದನ್ನು ನಂಬುವುದಿಲ್ಲವೋ ಅವನು ಮುಸ್ಲಿಮರಲ್ಲಿ ಸೇರಿದವನಲ್ಲ. ಈ ವಿಷಯದಲ್ಲಿ ಕುರ್‌ಆನ್ ಮತ್ತು ಸುನ್ನತ್‌ನಲ್ಲಿ ಅನೇಕ ಪುರಾವೆಗಳಿವೆ.

ಆದ್ದರಿಂದ, ಪ್ರಾಮಾಣಿಕ ಪಶ್ಚಾತ್ತಾಪಕ್ಕೆ ಮುಂದಾಗುವುದು, ಮತ್ತು ತನ್ನ ಪಶ್ಚಾತ್ತಾಪವನ್ನು ಘೋಷಿಸುವ ಲೇಖನವನ್ನು ಬರೆಯುವುದು ಆ ಲೇಖನದ ಲೇಖಕರಾದ ಅಬ್ದುಲ್ ಫತ್ತಾಹ್‌ರಿಗೆ ಕಡ್ಡಾಯವಾಗಿದೆ. ಯಾರು ಅಲ್ಲಾಹನ ಬಳಿ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತಾರೋ; ಅಲ್ಲಾಹು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ; ಅಲ್ಲಾಹು ಹೇಳುತ್ತಾನೆ:

﴿...وَتُوبُوٓاْ إِلَى ٱللَّهِ جَمِيعًا أَيُّهَ ٱلۡمُؤۡمِنُونَ لَعَلَّكُمۡ تُفۡلِحُونَ﴾

ಓ ಸತ್ಯವಿಶ್ವಾಸಿಗಳೇ! ನೀವೆಲ್ಲರೂ ಅಲ್ಲಾಹನ ಬಳಿಗೆ ಪಶ್ಚಾತ್ತಾಪಪಟ್ಟು ಮರಳಿರಿ. ನೀವು ಯಶಸ್ವಿಯಾಗುವುದಕ್ಕಾಗಿ. [ಅನ್ನೂರ್: 31] ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

﴿وَٱلَّذِينَ لَا يَدۡعُونَ مَعَ ٱللَّهِ إِلَٰهًا ءَاخَرَ وَلَا يَقۡتُلُونَ ٱلنَّفۡسَ ٱلَّتِي حَرَّمَ ٱللَّهُ إِلَّا بِٱلۡحَقِّ وَلَا يَزۡنُونَۚ وَمَن يَفۡعَلۡ ذَٰلِكَ يَلۡقَ أَثَامٗا68 يُضَٰعَفۡ لَهُ ٱلۡعَذَابُ يَوۡمَ ٱلۡقِيَٰمَةِ وَيَخۡلُدۡ فِيهِۦ مُهَانًا69 إِلَّا مَن تَابَ وَءَامَنَ وَعَمِلَ عَمَلٗا صَٰلِحٗا فَأُوْلَٰٓئِكَ يُبَدِّلُ ٱللَّهُ سَيِّـَٔاتِهِمۡ حَسَنَٰتٖۗ وَكَانَ ٱللَّهُ غَفُورٗا رَّحِيمٗا70﴾

ಅವರು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲ, ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲುವುದಿಲ್ಲ ಮತ್ತು ವ್ಯಭಿಚಾರ ಮಾಡುವುದಿಲ್ಲ. ಯಾರು ಇವುಗಳನ್ನು ಮಾಡುತ್ತಾನೋ ಅವನು ಶಿಕ್ಷೆಯನ್ನು ಪಡೆಯುವನು.

ಪುನರುತ್ಥಾನ ದಿನದಂದು ಅವನಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಅವನು ಅವಮಾನವನ್ನು ಸಹಿಸುತ್ತಾ ಸದಾಕಾಲ ಅದರಲ್ಲಿ ವಾಸಿಸುವನು.

ಆದರೆ ಪಶ್ಚಾತ್ತಾಪಪಟ್ಟವರು, ಸತ್ಯವಿಶ್ವಾಸಿಗಳಾದವರು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅಲ್ಲಾಹು ಅವರ ದುಷ್ಕೃತ್ಯಗಳನ್ನು ಸತ್ಕರ್ಮಗಳಾಗಿ ಬದಲಾಯಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.70 [ಅಲ್-ಫುರ್ಕಾನ್: 68-70]. ಪ್ರವಾದಿ(ಸ) ರವರು ಹೇಳುತ್ತಾರೆ:

«الإِسْلَامُ يَهْدِمُ مَا كَانَ قَبْلَهُ، وَالتَّوبَةُ تَهْدِمُ مَا كَانَ قَبْلَهَا».

"ಇಸ್ಲಾಂ ಅದರ ಹಿಂದಿನದನ್ನು ನಾಶಪಡಿಸುತ್ತದೆ, ಮತ್ತು ಪಶ್ಚಾತ್ತಾಪವು ಅದರ ಹಿಂದಿನದನ್ನು ನಾಶಪಡಿಸುತ್ತದೆ." ಮತ್ತು ಪ್ರವಾದಿ (ﷺ) ರವರು ಹೇಳಿದರು:

«التَّائِبُ مِنَ الذَّنْبَ كَمَنْ لَا ذَنْبَ لَهُ».

"ಪಾಪದಿಂದ ಪಶ್ಚಾತ್ತಾಪ ಪಡುವವನು ಪಾಪವಿಲ್ಲದವನಂತೆ ಆಗುತ್ತಾನೆ."

ಈ ಅರ್ಥದಲ್ಲಿ ಇನ್ನೂ ಅನೇಕ ವಚನಗಳು ಮತ್ತು ಹದೀಸ್‌ಗಳಿವೆ.

ನಮಗೆ ಸತ್ಯವನ್ನು ಸತ್ಯವಾಗಿ ತೋರಿಸಲು, ಮತ್ತು ಅದನ್ನು ಅನುಸರಿಸುವ ಸಾಮರ್ಥ್ಯವನ್ನು ನೀಡಲು, ಅಸತ್ಯವನ್ನು ಅಸತ್ಯವಾಗಿ ತೋರಿಸಲು, ಮತ್ತು ಅದರಿಂದ ದೂರವಿರುವ ಸಾಮರ್ಥ್ಯವನ್ನು ನೀಡಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. ಅವನು ನಮಗೆ, ಲೇಖಕರಾದ ಅಬ್ದುಲ್ ಫತ್ತಾಹ್ ರಿಗೆ ಮತ್ತು ಎಲ್ಲಾ ಮುಸ್ಲಿಮರಿಗೆ ಪ್ರಾಮಾಣಿಕ ಪಶ್ಚಾತ್ತಾಪ ಮಾಡುವ ಅನುಗ್ರಹವನ್ನು ದಯಪಾಲಿಸಲಿ. ಅವನು ನಮ್ಮೆಲ್ಲರನ್ನೂ ದಾರಿತಪ್ಪಿಸುವ ಪರೀಕ್ಷೆಗಳಿಂದ ಮತ್ತು ಮೋಹಗಳಿಗೆ ಹಾಗೂ ಶೈತಾನನಿಗೆ ವಿಧೇಯರಾಗುವುದರಿಂದ ರಕ್ಷಿಸಲಿ. ಖಂಡಿತವಾಗಿಯೂ ಅವನು ಅದಕ್ಕೆ ಸಮರ್ಥನಾಗಿದ್ದಾನೆ.

ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಾಬಾಗಳ ಮೇಲೆ ಮತ್ತು ಪ್ರತಿಫಲ ದಿನದ ತನಕ ಅವರನ್ನು ಅತ್ಯುತ್ತಮವಾಗಿ ಅನುಸರಿಸಿದವರ ಮೇಲೆ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ.

 

 

***

ಪರಿವಿಡಿ

 

ಸರಿಯಾದ ವಿಶ್ವಾಸ (ಅಕೀದ) ಮತ್ತು ಅದಕ್ಕೆ ವಿರುದ್ಧವಾದದ್ದು 2

ಮೊದಲನೆಯ ಮೂಲತತ್ವ: ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುವುದು 8

ಎರಡನೆಯ ಮೂಲತತ್ವ: ದೇವದೂತರುಗಳಲ್ಲಿ ವಿಶ್ವಾಸವಿಡುವುದು, 29

ಮೂರನೆಯ ಮೂಲತತ್ವ: ಗ್ರಂಥಗಳಲ್ಲಿ ವಿಶ್ವಾಸವಿಡುವುದು. ಇದು ಸಹ ಎರಡು ವಿಷಯಗಳನ್ನು ಒಳಗೊಂಡಿದೆ: 32

ನಾಲ್ಕನೆಯ ಮೂಲತತ್ವ: ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು 35

ಐದನೆಯ ಮೂಲತತ್ವ: ಅಂತ್ಯದಿನದಲ್ಲಿ ವಿಶ್ವಾಸವಿಡುವುದು 37

ಆರನೆಯ ಮೂಲತತ್ವ: ಕದ್ರ್ (ವಿಧಿ) ಯಲ್ಲಿ ವಿಶ್ವಾಸವಿಡುವುದು 39

ಸರಿಯಾದ ವಿಶ್ವಾಸಕ್ಕೆ (ಅಕೀದಕ್ಕೆ) ವಿರುದ್ಧವಾದ ವಿಶ್ವಾಸಗಳು 47

ಎರಡನೆಯ ಸಂದೇಶ: ಪ್ರವಾದಿ (ಸ) ರವರಲ್ಲಿ ಸಹಾಯ ಯಾಚಿಸುವ ವಿಧಿ 61

ಮೂರನೆಯ ಸಂದೇಶ 87

ಜಿನ್ನ್‌ಗಳಲ್ಲಿ ಮತ್ತು ಶೈತಾನರಲ್ಲಿ ಸಹಾಯ ಯಾಚಿಸುವುದರ ಮತ್ತು ಅವರಿಗೆ ಹರಕೆ ಹೊರುವುದರ ವಿಧಿ 87

ನಾಲ್ಕನೆಯ ಸಂದೇಶ: 120

ಬಿದಈ ಮತ್ತು ಶಿರ್ಕಿ ಜಪಗಳ ಮೂಲಕ ಆರಾಧನೆ ಮಾಡುವುದರ ವಿಧಿ 120

ಐದನೇ ಸಂದೇಶ: 158

ಪ್ರವಾದಿ ಜನ್ಮದಿನಾಚರಣೆ (ಮೀಲಾದುನ್ನಬಿ) ಮತ್ತು ಇತರ ಜನ್ಮದಿನಗಳ ಆಚರಣೆಯ ವಿಧಿ 158

ಆರನೇ ಸಂದೇಶ: 175

ಇಸ್ರಾ ಮತ್ತು ಮಿಅರಾಜ್ ರಾತ್ರಿಯನ್ನು ಆಚರಿಸುವ ವಿಧಿ 175

ಏಳನೇ ಸಂದೇಶ: 186

ಶಅಬಾನ್ ತಿಂಗಳ ಹದಿನೈದನೇ ರಾತ್ರಿಯನ್ನು (ಶಬೇ ಬರಾತ್) ಆಚರಿಸುವ ವಿಧಿ 186

ಎಂಟನೇ ಸಂದೇಶ: 209

ಶೈಖ್ ಅಹ್ಮದ್ ರ ಹೆಸರಿಗೆ ಆರೋಪಿಸಲಾದ ವಸಿಯ್ಯತ್ತಿನ ಸುಳ್ಳುತನದ ಕುರಿತು ಗಂಭೀರ ಎಚ್ಚರಿಕೆ 209

ಪ್ರವಾದಿ (ಸ) ರವರ ಪವಿತ್ರ ಮಸೀದಿಯ ಸೇವಕರಾದ ಶೈಖ್ ಅಹ್ಮದ್ 209

ಒಂಬತ್ತನೇ ಸಂದೇಶ: ಮಾಟ, ಭವಿಷ್ಯ ಹೇಳುವುದು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ವಿಧಿ 234

ಹತ್ತನೆಯ ಸಂದೇಶ: ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದರ ವಿರುದ್ಧ ಎಚ್ಚರಿಕೆ 258

ಹನ್ನೊಂದನೆಯ ಸಂದೇಶ: ಮೃತರನ್ನು ಮಸೀದಿಗಳಲ್ಲಿ ದಫನ ಮಾಡುವುದು 267

ಹನ್ನೆರಡನೆಯ ಸಂದೇಶ: ಮುಹಮ್ಮದ್ (ಸ) ರವರ ಶರಿಯತ್‌ನಿಂದ ಹೊರಗುಳಿಯಲು ಯಾರಿಗಾದರೂ ಅನುಮತಿಯಿದೆ ಎಂದು ವಾದಿಸುವವರ ಸತ್ಯನಿಷೇಧ ಮತ್ತು ದುರ್ಮಾರ್ಗದ ವಿವರಣೆ 272

***

kn397v4.0 - 16/02/2026


ಬುಖಾರಿ (2856) ಮತ್ತು ಮುಸ್ಲಿಂ (30).

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (735) ರಲ್ಲಿ ಮತ್ತು ಇಬ್ನ್ ಅಬ್ದುಲ್-ಬರ್‍ರ್ 'ಜಾಮಿಉಲ್ ಇಲ್ಮಿ ವ ಫದ್‌ಲಿಹಿ' (1801) ರಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅದರಲ್ಲಿ ಕುರ್‌ಆನ್ ವಚನಗಳ ಬದಲು ಹದೀಸ್‌ಗಳ ಪ್ರಸ್ತಾಪವಿದೆ. ಅದರಲ್ಲಿರುವ ವಾಕ್ಯವು ಹೀಗಿದೆ: "ಈ ಹದೀಸ್‌ಗಳು ಬಂದಂತೆಯೇ ಅವುಗಳನ್ನು ವರದಿ ಮಾಡಿ ಮತ್ತು ಅವುಗಳ ಬಗ್ಗೆ ತರ್ಕ ಮಾಡಬೇಡಿ."

ಇದನ್ನು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (865) ರಲ್ಲಿ ಉಲ್ಲೇಖಿಸಿದ್ದಾರೆ. ಇದರ ಸನದ್ ಅನ್ನು ಇಬ್ನ್ ತೈಮಿಯ್ಯ 'ಅಲ್-ಹಮವಿಯ್ಯ' (ಪುಟ: 269) ರಲ್ಲಿ ಸಹೀಹ್ ಎಂದು ಹೇಳಿದ್ದಾರೆ. ಅಝ್ಝಹಬಿ 'ಅಲ್-ಅರ್ದ್' (2/223) ರಲ್ಲಿ ಇದರ ವರದಿಗಾರರು ವಿಶ್ವಾಸಾರ್ಹ ಇಮಾಮ್‌ಗಳು ಎಂದು ಹೇಳಿದ್ದಾರೆ.

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (930) ರಲ್ಲಿ ಮತ್ತು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (955) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (665) ರಲ್ಲಿ ಮತ್ತು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (868) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (664) ರಲ್ಲಿ, ಅಬೂ ನುಐಮ್ 'ಹಿಲ್ಯತುಲ್ ಔಲಿಯಾ' (325/6) ರಲ್ಲಿ, ಮತ್ತು ಅಲ್-ಬೈಹಕಿ 'ಅಲ್-ಅಸ್ಮಾ ವಸ್ಸಿಫಾತ್' (867) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಲ್-ಮುಝಕ್ಕಿ 'ಅಲ್-ಮುಝಕ್ಕಿಯಾತ್' (29) ರಲ್ಲಿ, ಇಬ್ನ್ ಬತ್ತಾ 'ಅಲ್-ಇಬಾನಾ' (120) ರಲ್ಲಿ, ಮತ್ತು ಅಲ್ಲಾಲಕಾಈ 'ಶರ್ಹ್ ಉಸೂಲುಲ್ ಇಅ್‌ತಿಕಾದ್' (663) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅದ್ದಾರಿಮಿ ಅವರು 'ಅರ್‍ರದ್ದ್ ಅಲಲ್-ಜಹ್ಮಿಯ್ಯ' (67) ರಲ್ಲಿ ಮತ್ತು ಅಲ್-ಬೈಹಕಿ ಅವರು 'ಅಲ್-ಅಸ್ಮಾ ವಸ್ಸಿಫಾತ್' (903) ರಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಅಝ್ಝಹಬಿ 'ಅಲ್-ಉಲುವ್ವ್' (464) ರಲ್ಲಿ ಉಲ್ಲೇಖಿಸಿದ್ದಾರೆ. ಅಲ್-ಅಲ್ಬಾನಿ 'ಮುಖ್ತಸರುಲ್-ಉಲುವ್ವ್' (ಪುಟ: 184) ರಲ್ಲಿ, ಇದು ಸನದ್ ಸಹೀಹ್ ಆಗಿದೆ, ಇದರ ವರದಿಗಾರರು ವಿಶ್ವಾಸಾರ್ಹರು ಮತ್ತು ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ತಫ್ಸೀರ್ ಇಬ್ನ್ ಕಸೀರ್ (3/426, 427).

ಇದನ್ನು ಬುಖಾರಿ (22) ಯವರು ಅಬೂ ಸಈದ್ ಖುದ್ರಿ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಮುಸ್ಲಿಂ (2996) ಆಯಿಷಾ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಬುಖಾರಿ (3651) ಮತ್ತು ಮುಸ್ಲಿಂ (2533) ಅಬ್ದುಲ್ಲಾ ಬಿನ್ ಮಸ್ಊದ್ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಮುಸ್ಲಿಂ (1920) ಸೌಬಾನ್ (ರ) ರಿಂದ ವರದಿ ಮಾಡಿದ್ದಾರೆ.

ಇದನ್ನು ಇಬ್ನ್ ಮಾಜ (3952) ಸೌಬಾನ್ (ರ) ರಿಂದ ವರದಿ ಮಾಡಿದ್ದಾರೆ. ಇಬ್ನ್ ಹಿಬ್ಬಾನ್ (6714) ಮತ್ತು ಅಲ್-ಹಾಕಿಮ್ (8653) ಇದನ್ನು ಸಹೀಹ್ ಎಂದು ಹೇಳಿದ್ದಾರೆ.

ಇದನ್ನು ತಿರ್ಮಿಝಿ (2641) ಅಬ್ದುಲ್ಲಾ ಬಿನ್ ಅಮ್ರ್ (ರ) ರಿಂದ ವರದಿ ಮಾಡಿದ್ದಾರೆ. ಅಲ್-ಮುನಾವಿ 'ಫೈಝುಲ್ ಕದೀರ್' (5/347) ರಲ್ಲಿ ಹೇಳಿದ್ದಾರೆ: "ಇದರಲ್ಲಿ ಅಬ್ದುರ್‍ರಹ್ಮಾನ್ ಬಿನ್ ಝಿಯಾದ್ ಅಲ್-ಅಫ್ರಿಕಿ ಇದ್ದಾರೆ. ಹದೀಸ್ ವಿದ್ವಾಂಸರು ಅವರನ್ನು ದುರ್ಬಲರೆಂದು ಪರಿಗಣಿಸಿದ್ದಾರೆ ಎಂದು ಝಹಬಿ ಹೇಳಿದ್ದಾರೆ." ಅಲ್ಬಾನಿ 'ಸಹೀಹುಲ್-ಜಾಮಿಅ್' (5343) ರಲ್ಲಿ ಇದನ್ನು ಸಹೀಹ್ ಎಂದು ಹೇಳಿದ್ದಾರೆ.

ಈ ಉಪದೇಶವನ್ನು ಹಿಜರಿ 1402 ನೇ ವರ್ಷದಲ್ಲಿ ವೈಜ್ಞಾನಿಕ ಸಂಶೋಧನೆ, ಫತ್ವಾ, ದಾವಾ ಮತ್ತು ಮಾರ್ಗದರ್ಶನ ಇಲಾಖೆಗಳ ಸಾಮಾನ್ಯ ಅಧ್ಯಕ್ಷತೆಯ ಕರಪತ್ರ ಸಂಖ್ಯೆ 17 ರಲ್ಲಿ ಪ್ರಕಟಿಸಲಾಗಿದೆ.

ಮುಸ್ಲಿಂ (8).