الوَسَائِلُ المُفِيدَةُ لِلحَيَاةِ السَّعِيدَةِ
ಸೌಭಾಗ್ಯ ಜೀವನಕ್ಕಾಗಿ
ಉಪಯುಕ್ತ ಮಾರ್ಗಗಳು
الشَّيْخُ عَبْدُ الرَّحمَنِ بْنُ نَاصِرٍ السَّعْدِيُّ
رَحِمَهُ اللهُ
ಲೇಖಕರು
ಶೇಖ್ ಅಬ್ದುರ್ರಹ್ಮಾನ್ ಇಬ್ನ್ ನಾಸಿರ್ ಅಸ್ಸಾದಿ
(ಅಲ್ಲಾಹು ಅವರ ಮೇಲೆ ಕರುಣೆ ತೊರಲಿ)
بِسْمِ اللهِ الرَّحْمَنِ الرَّحِيمِ
ಲೇಖಕರ ಮುನ್ನುಡಿ
ಸ್ತುತಿಗಳಿಗೆ ಅರ್ಹನಾದ ಅಲ್ಲಾಹನಿಗೆ ಸರ್ವ ಸ್ತುತಿಗಳು. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ, ಅವನು ಏಕೈಕನು ಮತ್ತು ಅವನಿಗೆ ಯಾವುದೇ ಸಹಭಾಗಿಗಳಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ. ಮುಹಮ್ಮದ್ (ಸ) ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷಿ ಹೇಳುತ್ತೇನೆ. ಅವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲೆ ಅಲ್ಲಾಹನ ಶಾಂತಿ ಮತ್ತು ಆಶೀರ್ವಾದಗಳು ಇರಲಿ.
ಖಂಡಿತವಾಗಿಯೂ, ಪ್ರತಿಯೊಬ್ಬರೂ ಹೃದಯದ ನೆಮ್ಮದಿ, ಅದರ ಶಾಂತಿ, ಸಂತೋಷ, ಮತ್ತು ಚಿಂತೆಗಳು ಹಾಗೂ ದುಃಖಗಳ ನಿವಾರಣೆಯನ್ನು ಬಯಸುತ್ತಾರೆ. ಅದರ ಮೂಲಕವೇ ಉತ್ತಮ ಜೀವನವನ್ನು ಸಾಧಿಸಲಾಗುತ್ತದೆ, ಮತ್ತು ಸಂತೋಷ ಹಾಗೂ ಆನಂದವು ಪೂರ್ಣಗೊಳ್ಳುತ್ತದೆ. ಇದಕ್ಕಾಗಿ ಧಾರ್ಮಿಕ, ನೈಸರ್ಗಿಕ ಮತ್ತು ಪ್ರಾಯೋಗಿಕ ಕಾರಣಗಳಿವೆ. ಇವುಗಳನ್ನು ಕೇವಲ ಸತ್ಯವಿಶ್ವಾಸಿಗಳು ಮಾತ್ರ ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯ. ಇತರರು, ತಮ್ಮಲ್ಲಿನ ಬುದ್ಧಿವಂತರು ಶ್ರಮಿಸುವ ಕೆಲವು ವಿಧಾನಗಳು ಮತ್ತು ಕಾರಣಗಳಿಂದ ಇದನ್ನು ಸಾಧಿಸಿದರೂ, ಹೆಚ್ಚು ಪ್ರಯೋಜನಕಾರಿ, ಹೆಚ್ಚು ಶಾಶ್ವತವಾದ ಮತ್ತು ಪರಿಸ್ಥಿತಿ ಹಾಗೂ ಪರಿಣಾಮದಲ್ಲಿ ಉತ್ತಮವಾದ ಅಂಶಗಳನ್ನು ಅವರು ಕಳೆದುಕೊಳ್ಳುತ್ತಾರೆ.
ಆದಾಗ್ಯೂ, ಈ ಸಂದೇಶದಲ್ಲಿ, ಪ್ರತಿಯೊಬ್ಬರೂ ಶ್ರಮಿಸುವ ಈ ಅತ್ಯುನ್ನತ ಉದ್ದೇಶಕ್ಕಾಗಿ ನನಗೆ ನೆನಪಿಗೆ ಬರುವ ಕಾರಣಗಳನ್ನು ನಾನು ತಿಳಿಸುತ್ತೇನೆ.
ಅದನ್ನು ಸಾಧಿಸಿದ ಬಹಳಷ್ಟು ಮಂದಿ ಅವರಲ್ಲಿದ್ದಾರೆ. ಅವರು ಸಂತೋಷದ ಜೀವನವನ್ನು ನಡೆಸುತ್ತಾ ಉತ್ತಮ ಬದುಕನ್ನು ಆನಂದಿಸುತ್ತಾರೆ. ಅದರಲ್ಲಿ ಸಂಪೂರ್ಣವಾಗಿ ವಿಫಲರಾದವರೂ ಅವರಲ್ಲಿದ್ದಾರೆ. ಅವರು ಸಂಕಟದ ಜೀವನವನ್ನು ನಡೆಸುತ್ತಾ ಶೋಚನೀಯ ಬದುಕನ್ನು ಅನುಭವಿಸುತ್ತಾರೆ. ತನಗೆ ದೊರೆತ ಮಾರ್ಗದರ್ಶನಕ್ಕೆ ಅನುಗುಣವಾಗಿ ಮಧ್ಯಮ ಸ್ಥಿತಿಯಲ್ಲಿರುವವರೂ ಅವರಲ್ಲಿದ್ದಾರೆ. ಯಶಸ್ಸನ್ನು ನೀಡುವವನು ಅಲ್ಲಾಹು ಮಾತ್ರ. ಎಲ್ಲಾ ಒಳಿತುಗಳನ್ನು ಪಡೆಯಲು ಹಾಗೂ ಎಲ್ಲಾ ಕೆಡುಕುಗಳನ್ನು ತಡೆಯಲು ಅವನಿಂದಲೇ ಸಹಾಯ ಯಾಚಿಸಲಾಗುತ್ತದೆ.
ಅಧ್ಯಾಯ
1. ಸುಖಕರ ಜೀವನಕ್ಕೆ ಪ್ರಮುಖ ಮತ್ತು ಮೂಲ ಕಾರಣವು ಅಲ್ಲಾಹನಲ್ಲಿರುವ ವಿಶ್ವಾಸ ಮತ್ತು ಸತ್ಕರ್ಮಗಳು. ಅಲ್ಲಾಹನು ಹೇಳುತ್ತಾನೆ:
﴿مَنْ عَمِلَ صَالِحًا مِّن ذَكَرٍ أَوْ أُنثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُم بِأَحْسَنِ مَا كَانُوا يَعْمَلُونَ 97﴾
"ಗಂಡಾಗಿರಲಿ, ಹೆಣ್ಣಾಗಿರಲಿ—ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳನ್ನು ಮಾಡುತ್ತಾರೋ ಅವರಿಗೆ ನಾವು ಖಂಡಿತವಾಗಿಯೂ ಅತ್ಯುತ್ತಮ ಬದುಕನ್ನು ನೀಡುವೆವು. ಅವರು ಮಾಡುವ ಅತ್ಯುತ್ತಮ ಕರ್ಮಗಳಿಗೆ ನಾವು ಅತ್ಯುತ್ತಮ ಪ್ರತಿಫಲವನ್ನು ನೀಡುವೆವು." [ಸೂರ ನಹ್ಲ್: 97]
ವಿಶ್ವಾಸ ಮತ್ತು ಸತ್ಕರ್ಮಗಳನ್ನು ಜೊತೆಯಾಗಿ ಅಳವಡಿಸಿಕೊಂಡವರಿಗೆ ಅಲ್ಲಾಹನು ಇಹಲೋಕದಲ್ಲಿ ಉತ್ತಮ ಜೀವನ ಮತ್ತು ಪರಲೋಕದಲ್ಲಿ ಉತ್ತಮ ಪ್ರತಿಫಲದ ವಾಗ್ದಾನವನ್ನು ಮಾಡಿದ್ದಾನೆ.
ಅದಕ್ಕೆ ಕಾರಣವು ಸ್ಪಷ್ಟ. ಏಕೆಂದರೆ ಅಲ್ಲಾಹನಲ್ಲಿ ಸರಿಯಾದ ವಿಶ್ವಾಸವಿರುವ ಸತ್ಯವಿಶ್ವಾಸಿಗಳು, ಸತ್ಕರ್ಮಗಳನ್ನು ಮಾಡುವ ಮೂಲಕ ಹೃದಯವನ್ನು, ನಡವಳಿಕೆಗಳನ್ನು, ಇಹಲೋಕ-ಪರಲೋಕವನ್ನು ಸರಿಪಡಿಸುತ್ತಾರೆ. ಅವರಿಗೆ ತತ್ವಗಳು ಮತ್ತು ಅಡಿಪಾಯಗಳಿದ್ದು, ಅದರ ಮೂಲಕ ಅವರು ಸಂತೋಷ ಮತ್ತು ಆನಂದದ ಕಾರಣಗಳು ಹಾಗೂ ಆತಂಕ, ಚಿಂತೆ ಮತ್ತು ದುಃಖದ ಕಾರಣಗಳಿಂದ ಬರುವ ಎಲ್ಲವನ್ನೂ ಸ್ವೀಕರಿಸುತ್ತಾರೆ.
ಅವರು ಇಷ್ಟಕರ ಮತ್ತು ಸಂತೋಷಕರ ವಿಷಯಗಳನ್ನು ಪೂರ್ಣ ಹೃದಯದಿಂದ ಸ್ವೀಕರಿಸುತ್ತಾರೆ. ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಮತ್ತು ಅವುಗಳನ್ನು ಪ್ರಯೋಜನಕಾರಿ ಚಟುವಟಿಕೆಗಳಲ್ಲಿ ಬಳಸುತ್ತಾರೆ. ಅವುಗಳನ್ನು ಉಪಯುಕ್ತವಾಗಿ ಬಳಸಿದಾಗ, ಅದರಲ್ಲಿ ಸಂತೋಷಪಡುತ್ತಾರೆ. ಆ ವಸ್ತುಗಳು ಉಳಿಯಲು ಮತ್ತು ಅದರಿಂದ ಬರಕತ್ ಪಡೆಯಲು ಬಯಸುತ್ತಾರೆ. ಕೃತಜ್ಞತೆ ಸಲ್ಲಿಸಿದ್ದಕ್ಕಾಗಿ ಕೃತಜ್ಞರಿಗೆ ಲಭ್ಯವಿರುವ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ, ಫಲಿತಾಂಶವು ಸಂತೋಷ ಮತ್ತು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.
ಅವರು ಕಷ್ಟ, ತೊಂದರೆ, ಸಂಕಟ, ವ್ಯಥೆ ಮುಂತಾದವುಗಳನ್ನು ಸಾಧ್ಯವಾದಷ್ಟು ಪ್ರತಿರೋಧಿಸುವ ಮೂಲಕ ಮತ್ತು ಸಾಧ್ಯವಾದಷ್ಟು ಕಡಿಮೆ ಮಾಡುವ ಮೂಲಕ ಎದುರಿಸುತ್ತಾರೆ. ಅವುಗಳಲ್ಲಿ ತಪ್ಪಿಸಲಾಗದ್ದಕ್ಕೆ ಅವರು ಸುಂದರವಾದ ತಾಳ್ಮೆ ತೋರುತ್ತಾರೆ. ಇದರ ಮೂಲಕ, ಅವರು ಕಷ್ಟಗಳಿಂದ ಪ್ರಯೋಜನಕಾರಿ ಪ್ರತಿರೋಧ, ಅನುಭವ ಮತ್ತು ಶಕ್ತಿಯನ್ನು ಪಡೆಯುತ್ತಾರೆ. ತಾಳ್ಮೆಯಿಂದ ಹಾಗೂ ಅಲ್ಲಾಹನಿಂದ ಪ್ರತಿಫಲವನ್ನು ನಿರೀಕ್ಷಿಸುವುದರಿಂದ, ಅವರು ಕಷ್ಟಗಳನ್ನು ಕಡಿಮೆ ಮಾಡುವ ಶ್ರೇಷ್ಠ ವಿಷಯಗಳನ್ನು ಸಾಧಿಸುತ್ತಾರೆ. ಅವುಗಳನ್ನು ಸಂತೋಷ, ಉತ್ತಮ ಭರವಸೆಗಳು, ಮತ್ತು ಅಲ್ಲಾಹನ ಅನುಗ್ರಹ ಹಾಗೂ ಪ್ರತಿಫಲದ ಆಕಾಂಕ್ಷೆಯೊಂದಿಗೆ ಬದಲಾಯಿಸುತ್ತಾರೆ. ಸಹೀಹ್ ಹದೀಸ್ನಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸುತ್ತಾ, ಅಲ್ಲಾಹನ ಪ್ರವಾದಿ (ﷺ) ಹೀಗೆ ಹೇಳಿದ್ದಾರೆ:
(عَجَبًا لِأَمْرِ الْمُؤْمِنِ، إِنَّ أَمْرَهُ كُلَّهُ خَيْرٌ، إِنْ أَصَابَتْهُ سَرَّاءُ شَكَرَ فَكَانَ خَيْرًا لَهُ، وَإِنْ أَصَابَتْهُ ضَرَّاءُ صَبَرَ فَكَانَ خَيْرًا لَهُ، وَلَيْسَ ذَلِكَ لِأَحَدٍ إِلَّا لِلْمُؤْمِنِ)
"ಸತ್ಯವಿಶ್ವಾಸಿಯ ವಿಷಯವು ಬಹಳ ಆಶ್ಚರ್ಯಕರವಾಗಿದೆ! ನಿಶ್ಚಯವಾಗಿಯೂ ಅವನ ಪ್ರತಿಯೊಂದು ವಿಷಯವೂ ಅವನಿಗೆ ಒಳಿತೇ ಆಗಿದೆ. ಅವನಿಗೆ ಸಂತೋಷ ನೀಡುವಂತದ್ದು ಸಂಭವಿಸಿದರೆ ಅವನು (ಅಲ್ಲಾಹನಿಗೆ) ಕೃತಜ್ಞತೆ ಸಲ್ಲಿಸುತ್ತಾನೆ, ಅದು ಅವನಿಗೆ ಒಳಿತಾಗುತ್ತದೆ. ಒಂದು ವೇಳೆ ಅವನಿಗೆ ಕಷ್ಟ ಬಂದರೆ ಅವನು ಸಹನೆ ವಹಿಸುತ್ತಾನೆ, ಅದೂ ಅವನಿಗೆ ಒಳಿತಾಗುತ್ತದೆ. ಇದು ಸತ್ಯವಿಶ್ವಾಸಿಗೆ ಹೊರತು ಬೇರೆ ಯಾರಿಗೂ ಇರುವುದಿಲ್ಲ." (ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ).
ಪ್ರವಾದಿ (ﷺ) ರವರು ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಗೆ ಸಂಭವಿಸುವ ಪ್ರತಿಯೊಂದು ಸಂತೋಷ ಮತ್ತು ಕಷ್ಟಗಳಲ್ಲಿ ಅವನ ಲಾಭಗಳು, ಅವನ ಒಳಿತು ಮತ್ತು ಅವನ ಕರ್ಮಗಳ ಪ್ರತಿಫಲಗಳು ದ್ವಿಗುಣಗೊಳ್ಳುತ್ತವೆ. ಈ ಕಾರಣದಿಂದ, ಇಬ್ಬರು ವ್ಯಕ್ತಿಗಳಿಗೆ ಒಂದೇ ರೀತಿಯ ಒಳಿತು ಅಥವಾ ಕೆಡುಕು ಸಂಭವಿಸಿದಾಗ, ಅವರು ಅದನ್ನು ಸ್ವೀಕರಿಸುವ (ಎದುರಿಸುವ) ರೀತಿಯಲ್ಲಿ ದೊಡ್ಡ ವ್ಯತ್ಯಾಸವಿರುವುದನ್ನು ನೀವು ಕಾಣುತ್ತೀರಿ. ಈ ವ್ಯತ್ಯಾಸವು ಅವರ ವಿಶ್ವಾಸ (ಈಮಾನ್) ಮತ್ತು ಸತ್ಕರ್ಮಗಳಲ್ಲಿನ ವ್ಯತ್ಯಾಸಕ್ಕೆ ಅನುಗುಣವಾಗಿರುತ್ತದೆ. ಈಗಾಗಲೇ ತಿಳಿಸಿದ ಕೃತಜ್ಞತೆ (ಶುಕ್ರ್) ಮತ್ತು ತಾಳ್ಮೆ (ಸಬ್ರ್) ಎಂಬ ಈ ಗುಣಗಳನ್ನು ಹೊಂದಿರುವವನು, ಒಳಿತು-ಕೆಡುಕುಗಳನ್ನು ಕೃತಜ್ಞತೆ ಮತ್ತು ಸಹನೆಯಿಂದ ಮತ್ತು ಅವುಗಳನ್ನು ಅನುಸರಿಸುವ ಇತರ ಗುಣಗಳಿಂದ ಸ್ವೀಕರಿಸುತ್ತಾನೆ. ಇದರ ಪರಿಣಾಮವಾಗಿ, ಅವನಿಗೆ ಸಂತೋಷ ಮತ್ತು ಆನಂದ ಉಂಟಾಗುತ್ತದೆ. ಚಿಂತೆ, ದುಃಖ, ಆತಂಕ, ಎದೆಯ ಬಿಗಿತ ಮತ್ತು ಜೀವನದ ಸಂಕಟಗಳು ದೂರವಾಗುತ್ತವೆ. ಈ ಲೋಕದಲ್ಲಿ ಅವನಿಗೆ ಉತ್ತಮ ಜೀವನವು ಲಭ್ಯವಾಗುತ್ತದೆ. ಆದರೆ ಇನ್ನೊಬ್ಬ ವ್ಯಕ್ತಿ, ತನಗೆ ಪ್ರಿಯವಾದ ವಿಷಯಗಳನ್ನು ದುರಹಂಕಾರ, ಸೊಕ್ಕು ಮತ್ತು ಅತಿರೇಕದಿಂದ ಸ್ವೀಕರಿಸುತ್ತಾನೆ. ಹಾಗಾಗಿ ಅವನ ನಡವಳಿಕೆಯು ಹಾದಿತಪ್ಪುತ್ತದೆ. ಅವನು ಅವುಗಳನ್ನು ಪಶುಗಳಂತೆ ದುರಾಸೆ ಮತ್ತು ತಳಮಳದಿಂದ ಸ್ವೀಕರಿಸುತ್ತಾನೆ. ಆದರೂ, ಅವನ ಹೃದಯವು ನೆಮ್ಮದಿಯಿಂದ ಇರುವುದಿಲ್ಲ. ಬದಲಿಗೆ, ಅದು ಹಲವಾರು ದಿಕ್ಕುಗಳಲ್ಲಿ ಒಡೆದುಹೋಗಿರುತ್ತದೆ: ತನಗೆ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯವಿರುತ್ತದೆ. ಹೆಚ್ಚಾಗಿ ಅವರಿಂದಲೇ ಉಂಟಾಗುವ ಸಮಸ್ಯೆಗಳಿರುತ್ತವೆ. ಮನಸ್ಸು ಒಂದು ಮಿತಿಯಲ್ಲಿ ನಿಲ್ಲದೆ, ಸದಾ ಇತರ ವಿಷಯಗಳಿಗಾಗಿ ಹಂಬಲಿಸುತ್ತಿರುತ್ತದೆ. ಅವನು ಬಯಸಿದ ವಸ್ತುಗಳು ಸಿಗಬಹುದು ಅಥವಾ ಸಿಗದೇ ಇರಬಹುದು. ಒಂದು ವೇಳೆ, ಅವು ಸಿಕ್ಕರೂ ಸಹ, ಅವನು ಮೇಲೆ ತಿಳಿಸಿದ ಕಾರಣಗಳಿಂದ ಆತಂಕಿತನಾಗಿಯೇ ಇರುತ್ತಾನೆ. ಇನ್ನು, ಅವನು ಕಷ್ಟಗಳನ್ನು ಆತಂಕ, ತಳಮಳ, ಭಯ ಮತ್ತು ಅಸಮಾಧಾನದಿಂದ ಸ್ವೀಕರಿಸುತ್ತಾನೆ. ಹಾಗಾಗಿ, ಅವನಿಗೆ ಸಂಭವಿಸುವ ಜೀವನದ ದುಃಖ-ದುಮ್ಮಾನಗಳ ಬಗ್ಗೆ, ಮಾನಸಿಕ ಹಾಗೂ ನರಗಳ ಕಾಯಿಲೆಗಳ ಬಗ್ಗೆ, ಮತ್ತು ಅವನನ್ನು ಅತ್ಯಂತ ಕೆಟ್ಟ ಪರಿಸ್ಥಿತಿಗೆ ಹಾಗೂ ಭಯಾನಕ ಸಂಕಷ್ಟಕ್ಕೆ ತಲುಪಿಸಬಹುದಾದ ಭಯದ ಬಗ್ಗೆ ಕೇಳಲೇಬೇಡಿ! ಏಕೆಂದರೆ ಅವನು ಯಾವುದೇ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ಅವನ ಬಳಿ ಅವನಿಗೆ ಸಾಂತ್ವನ ನೀಡಿ, ಅವನಿಗೆ (ಕಷ್ಟವನ್ನು) ಹಗುರಗೊಳಿಸುವಂತಹ ತಾಳ್ಮೆಯೂ ಇರುವುದಿಲ್ಲ.
ಇವೆಲ್ಲವನ್ನೂ ಅನುಭವದಿಂದ ತಿಳಿಯಬಹುದು. ಈ ಬಗೆಯ ಒಂದು ಉದಾಹರಣೆಯನ್ನು ನೀವು ಆಳವಾಗಿ ಯೋಚಿಸಿ, ಅದನ್ನು ಜನರ ಪರಿಸ್ಥಿತಿಗೆ ಅನ್ವಯಿಸಿದರೆ, ವಿಶ್ವಾಸದ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಯವೆಸಗುವ ಸತ್ಯವಿಶ್ವಾಸಿ ಮತ್ತು ಸತ್ಯವಿಶ್ವಾಸಿಯಲ್ಲದವನ ನಡುವೆ ಭಾರೀ ವ್ಯತ್ಯಾಸವನ್ನು ಕಾಣುವಿರಿ. ಅದೇನೆಂದರೆ, ಅಲ್ಲಾಹನು ನೀಡಿದ ಜೀವನೋಪಾಯ ಮತ್ತು ಅವನು ತನ್ನ ದಾಸರಿಗೆ ನೀಡಿದ ವಿವಿಧ ರೀತಿಯ ಅನುಗ್ರಹ ಮತ್ತು ಔದಾರ್ಯದಲ್ಲಿ ಸಂತೃಪ್ತಿ ಹೊಂದಲು ಇಸ್ಲಾಂ ಧರ್ಮವು ಬಲವಾಗಿ ಒತ್ತಾಯಿಸುತ್ತದೆ.
ಆದ್ದರಿಂದ, ಸತ್ಯವಿಶ್ವಾಸಿಯು ರೋಗ ಅಥವಾ ಬಡತನದಿಂದ, ಅಥವಾ ಪ್ರತಿಯೊಬ್ಬರೂ ಎದುರಿಸಬಹುದಾದ ಇಂತಹ ಇತರ ಸಂಕಷ್ಟಗಳಿಂದ ಪರೀಕ್ಷಿಸಲ್ಪಟ್ಟಾಗ, ಅವನು - ತನ್ನ ವಿಶ್ವಾಸದಿಂದ ಮತ್ತು ಅಲ್ಲಾಹನು ಅವನಿಗೆ ವಿಧಿಸಿದ್ದರಲ್ಲಿ ಅವನಲ್ಲಿರುವ ಸಂತೃಪ್ತಿ ಹಾಗೂ ಸಂತೋಷದಿಂದ - ಸಂತೃಪ್ತನಾಗುತ್ತಾನೆ. ತನಗೆ ವಿಧಿಸಿಲ್ಲದ ವಿಷಯವನ್ನು ಅವನು ಬಯಸುವುದಿಲ್ಲ. ಅವನು ತನಗಿಂತ ಕೆಳಗಿರುವವರನ್ನು ನೋಡುತ್ತಾನೆ, ತನಗಿಂತ ಮೇಲಿರುವವರನ್ನು ನೋಡುವುದಿಲ್ಲ. ಬಹುಶಃ, ಎಲ್ಲಾ ಐಹಿಕ ಬಯಕೆಗಳನ್ನು ಪಡೆದವನಿಗೆ ಸಂತೃಪ್ತಿ ನೀಡಲ್ಪಡದಿದ್ದರೆ, ಅವನಿಗಿಂತ ಹೆಚ್ಚಾಗಿ ಇವನಿಗೆ (ಸತ್ಯವಿಶ್ವಾಸಿಗೆ) ಆನಂದ, ಸಂತೋಷ ಮತ್ತು ನೆಮ್ಮದಿಯು ಇರುತ್ತದೆ.
ಆದರೆ, ಸತ್ಯವಿಶ್ವಾಸದ ಬೇಡಿಕೆಗಳಿಗೆ ಅನುಗುಣವಾಗಿ ನಡೆಯದ ವ್ಯಕ್ತಿಯನ್ನು ಸ್ವಲ್ಪ ಬಡತನದಿಂದ ಪರೀಕ್ಷಿಸಲಾದಾಗ, ಅಥವಾ ಅವನು ಕೆಲವು ಐಹಿಕ ಬಯಕೆಗಳನ್ನು ಕಳೆದುಕೊಂಡಾಗ, ತೀವ್ರ ದುಃಖ ಮತ್ತು ಸಂಕಟದಲ್ಲಿರುವುದನ್ನು ನೀವು ಕಾಣುತ್ತೀರಿ.
ಇನ್ನೊಂದು ಉದಾಹರಣೆ: ಭಯವುಂಟಾದಾಗ, ಮತ್ತು ಸಂಕಷ್ಟಗಳು ಮನುಷ್ಯನ ಮೇಲೆ ಎರಗಿದಾಗ, ಸರಿಯಾದ ಸತ್ಯವಿಶ್ವಾಸವುಳ್ಳವನು ಸ್ಥಿರವಾದ ಹೃದಯವನ್ನು ಹೊಂದಿರುವುದನ್ನು ಮತ್ತು ಅವನ ಆತ್ಮವು ನೆಮ್ಮದಿಯಿಂದ ಕೂಡಿರುವುದನ್ನು ನೀವು ಕಾಣುತ್ತೀರಿ. ಅವನು, ತನಗೆ ಎದುರಾದ ಈ ವಿಷಯವನ್ನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಲೋಚನೆ, ಮಾತು ಮತ್ತು ಕೃತಿಯ ಮೂಲಕ ನಿರ್ವಹಿಸಲು ಮತ್ತು ಮುನ್ನಡೆಸಲು ಸಮರ್ಥನಾಗಿರುತ್ತಾನೆ. ಆ ಸಂಕಷ್ಟಕ್ಕೆ ಅವನು ತನ್ನ ಮನಸ್ಸನ್ನು ಸಿದ್ಧಪಡಿಸಿಕೊಂಡಿರುತ್ತಾನೆ. ಇವು ಮನುಷ್ಯನಿಗೆ ನೆಮ್ಮದಿಯನ್ನು ನೀಡುವ ಮತ್ತು ಅವನ ಹೃದಯವನ್ನು ಸ್ಥಿರಗೊಳಿಸುವ ಸಂಗತಿಗಳಾಗಿವೆ.
ಮತ್ತೊಂದೆಡೆ, ಸತ್ಯವಿಶ್ವಾಸವಿಲ್ಲದವನನ್ನು ಈ ಸ್ಥಿತಿಗೆ ವ್ಯತಿರಿಕ್ತವಾಗಿ ನೀವು ಕಾಣುವಿರಿ. ಭಯಗಳು ಸಂಭವಿಸಿದಾಗ ಅವನ ಮನಸ್ಸಾಕ್ಷಿಯು ಕದಡುತ್ತದೆ, ಅವನ ನರಗಳು ಬಿಗಿಯಾಗುತ್ತವೆ, ಅವನ ಆಲೋಚನೆಗಳು ದಿಕ್ಕು ತಪ್ಪುತ್ತವೆ, ಭಯ ಮತ್ತು ಭೀತಿಯು ಅವನನ್ನು ಆವರಿಸಿಕೊಳ್ಳುತ್ತದೆ, ಮತ್ತು ಬಾಹ್ಯ ಭಯ ಹಾಗೂ ಅದರ ಸ್ವರೂಪವನ್ನು ವಿವರಿಸಲಾಗದ ಆಂತರಿಕ ಆತಂಕವು ಅವನಲ್ಲಿ ಮನೆ ಮಾಡುತ್ತದೆ. ಈ ರೀತಿಯ ಜನರು, ಬಹಳಷ್ಟು ತರಬೇತಿಯ ಅಗತ್ಯವಿರುವ ಕೆಲವು ನೈಸರ್ಗಿಕ ಸಾಧನಗಳನ್ನು ಹೊಂದಿಲ್ಲದಿದ್ದರೆ, ಅವರ ಶಕ್ತಿ ಕುಸಿದು, ಅವರ ನರಗಳು ಬಿಗಿಯಾಗುತ್ತವೆ. ತಾಳ್ಮೆಗಾಗಿ ಪ್ರೇರೇಪಿಸುವ ಸತ್ಯವಿಶ್ವಾಸದ ಕೊರತೆಯೇ ಇದಕ್ಕೆ ಕಾರಣ. ವಿಶೇಷವಾಗಿ ಗಂಭೀರ ಸಂದರ್ಭಗಳಲ್ಲಿ ಮತ್ತು ದುಃಖದಾಯಕ, ಸಂಕಟಮಯ ಸನ್ನಿವೇಶಗಳಲ್ಲಿ.
ಆದ್ದರಿಂದ, ಸಜ್ಜನರು-ದುರ್ಜನರು, ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳು - ಎಲ್ಲರೂ (ಪ್ರಯತ್ನದಿಂದ) ಗಳಿಸಬಹುದಾದ ಧೈರ್ಯವನ್ನು ಪಡೆಯುವುದರಲ್ಲಿ ಮತ್ತು ಭಯಯನ್ನು ಕಡಿಮೆ ಮಾಡಿ, ಅವುಗಳನ್ನು ಹಗುರಗೊಳಿಸುವ ಸಹಜ ಪ್ರವೃತ್ತಿಯಲ್ಲಿ ಸಮಾನರು. ಆದರೆ ಸತ್ಯವಿಶ್ವಾಸಿಯು ವಿಶ್ವಾಸದ ಶಕ್ತಿ, ತಾಳ್ಮೆ, ಅಲ್ಲಾಹನ ಮೇಲಿನ ಭರವಸೆ ಮತ್ತು ಅವಲಂಬನೆ, ಹಾಗೂ ಅವನಿಂದ ಪ್ರತಿಫಲದ ನಿರೀಕ್ಷೆ - ಈ ಕಾರಣಗಳಿಂದ ಬೇರ್ಪಟ್ಟು ನಿಲ್ಲುತ್ತಾನೆ. ಇವು ಅವನ ಧೈರ್ಯವನ್ನು ಹೆಚ್ಚಿಸುವ, ಭಯದ ಭಾರವನ್ನು ಕಡಿಮೆ ಮಾಡುವ, ಹಾಗೂ ಕಷ್ಟಗಳನ್ನು ಹಗುರಗೊಳಿಸುವ ಸಂಗತಿಗಳಾಗಿವೆ. ಅಲ್ಲಾಹನು ಹೇಳುತ್ತಾನೆ:
﴿إِن تَكُونُوا تَأْلَمُونَ فَإِنَّهُمْ يَأْلَمُونَ كَمَا تَأْلَمُونَ وَتَرْجُونَ مِنَ اللَّهِ مَا لَا يَرْجُونَ 104﴾
"ನೀವು ನೋವು ಅನುಭವಿಸುತ್ತಿದ್ದರೆ, ಖಂಡಿತವಾಗಿಯೂ ನಿಮ್ಮಂತೆಯೇ ಅವರೂ ನೋವು ಅನುಭವಿಸುತ್ತಿದ್ದಾರೆ. ಆದರೆ ನೀವು ಅಲ್ಲಾಹನಿಂದ ಅವರು ನಿರೀಕ್ಷಿಸದಂತಹ ವಿಷಯಗಳನ್ನು ನಿರೀಕ್ಷಿಸುತ್ತೀರಿ." [ಸೂರ ಅನ್ನಿಸಾ:104] ಮತ್ತು ಅಲ್ಲಾಹನ ಸಹಾಯ, ಅವನ ವಿಶೇಷ ನೆರವು ಮತ್ತು ಬೆಂಬಲದಿಂದ ಅವರು ಭಯವನ್ನು ದೂರೀಕರಿಸುವಂತಹ ಶಕ್ತಿಯನ್ನು ಪಡೆಯುತ್ತಾರೆ. ಅಲ್ಲಾಹನು ಹೇಳುತ್ತಾನೆ:
﴿...وَاصْبِرُوا ۚ إِنَّ اللَّهَ مَعَ الصَّابِرِينَ﴾
"ಮತ್ತು ಸಹನೆಯಿಂದಿರಿ; ನಿಶ್ಚಯವಾಗಿಯೂ ಅಲ್ಲಾಹನು ಸಹನಶೀಲರೊಂದಿಗಿದ್ದಾನೆ." [ಸೂರ ಅಲ್-ಅನ್ಫಾಲ್: 46]
2- ಚಿಂತೆ, ದುಃಖ ಮತ್ತು ಆತಂಕವನ್ನು ನಿವಾರಿಸುವ ಕಾರಣಗಳಲ್ಲಿ ಇನ್ನೊಂದು ಏನೆಂದರೆ, ಮಾತು ಮತ್ತು ಕ್ರಿಯೆಯ ಮೂಲಕ ಸೃಷ್ಟಿಗಳಿಗೆ ಉಪಕಾರ ಮಾಡುವುದು, ಮತ್ತು ವಿವಿಧ ರೀತಿಯ ಒಳಿತುಗಳನ್ನು ಮಾಡುವುದು. ಇವೆಲ್ಲವೂ ಒಳಿತು ಮತ್ತು ಉಪಕಾರಗಳಾಗಿವೆ. ಅವುಗಳ ಮೂಲಕ ಅಲ್ಲಾಹನು ಸಜ್ಜನ ಮತ್ತು ದುರ್ಜನರಿಂದ, ಅವರವರ ಕರ್ಮಗಳಿಗೆ ಅನುಗುಣವಾಗಿ ಚಿಂತೆ ಮತ್ತು ದುಃಖಗಳನ್ನು ದೂರ ಮಾಡುತ್ತಾನೆ. ಆದರೆ ಸತ್ಯವಿಶ್ವಾಸಿಗೆ ಅತ್ಯಂತ ಪರಿಪೂರ್ಣವಾದ ಪಾಲು ಮತ್ತು ಹಕ್ಕು ಇರುತ್ತದೆ. ಏಕೆಂದರೆ, ಅವನು ಮಾಡುವ ಉಪಕಾರದಲ್ಲಿ ನಿಷ್ಕಳಂಕತೆ ಮತ್ತು ಅಲ್ಲಾಹನ ಪ್ರತಿಫಲದ ನಿರೀಕ್ಷೆ ಎಂಬ ವೈಶಿಷ್ಟ್ಯವಿರುತ್ತದೆ.
ಆದ್ದರಿಂದ, ಅವನು ನಿರೀಕ್ಷಿಸುವ ಒಳಿತಿಗಾಗಿ, ಒಳಿತುಗಳನ್ನು ಮಾಡಲು ಅಲ್ಲಾಹು ಅವನಿಗೆ ಸುಲಭಗೊಳಿಸುತ್ತಾನೆ. ಅವನ ನಿಷ್ಕಳಂಕತೆ ಹಾಗೂ ಪ್ರತಿಫಲದ ನಿರೀಕ್ಷೆಯ ಕಾರಣದಿಂದ ಅವನಿಂದ ಕಷ್ಟಗಳನ್ನು ದೂರ ಮಾಡುತ್ತಾನೆ. ಅಲ್ಲಾಹನು ಹೇಳುತ್ತಾನೆ:
﴿لَا خَيْرَ فِي كَثِيرٍۢ مِّن نَّجْوَىٰهُمْ إِلَّا مَنْ أَمَرَ بِصَدَقَةٍ أَوْ مَعْرُوفٍ أَوْ إِصْلَاحٍۢ بَيْنَ النَّاسِ وَمَن يَفْعَلْ ذَٰلِكَ ابْتِغَآءَ مَرْضَاتِ اللَّهِ فَسَوْفَ نُؤْتِيهِ أَجْرًا عَظِيمًا 114﴾
"ಅವರ ಹೆಚ್ಚಿನ ಗುಪ್ತ ಸಂಭಾಷಣೆಗಳಲ್ಲಿ ಯಾವುದೇ ಒಳಿತಿಲ್ಲ - ದಾನಧರ್ಮ ಮಾಡಲು, ಅಥವಾ ಒಳಿತನ್ನು ಮಾಡಲು, ಅಥವಾ ಜನರ ನಡುವೆ ಸುಧಾರಣೆ ಮಾಡಲು ಆದೇಶಿಸುವವರ ಹೊರತು. ಮತ್ತು ಯಾರು ಅಲ್ಲಾಹನ ಸಂತೃಪ್ತಿಯನ್ನು ಬಯಸಿ ಇದನ್ನು ಮಾಡುತ್ತಾನೋ, ಅವನಿಗೆ ನಾವು ಶೀಘ್ರದಲ್ಲೇ ಮಹಾ ಪ್ರತಿಫಲವನ್ನು ನೀಡುವೆವು." [ಸೂರ ಅನ್ನಿಸಾ 114]
ಆದ್ದರಿಂದ, ಅಲ್ಲಾಹು ತಿಳಿಸುವುದೇನೆಂದರೆ, ಈ ಎಲ್ಲಾ ಕಾರ್ಯಗಳು ಅವರಿಂದ ಬಂದ ಒಳಿತುಗಳೇ ಆಗಿವೆ. ಒಳಿತು ಒಳಿತನ್ನೇ ತರುತ್ತದೆ, ಮತ್ತು ಕೆಡುಕನ್ನು ದೂರ ಮಾಡುತ್ತದೆ. ಪ್ರತಿಫಲವನ್ನು ನಿರೀಕ್ಷಿಸುವ ಸತ್ಯವಿಶ್ವಾಸಿಗೆ ಅಲ್ಲಾಹನು ಮಹಾ ಪ್ರತಿಫಲವನ್ನು ನೀಡುತ್ತಾನೆ. ಆ ಮಹಾ ಪ್ರತಿಫಲದ ಭಾಗವೇ ಚಿಂತೆ, ದುಃಖ, ಕಷ್ಟಗಳು ಮುಂತಾದವುಗಳನ್ನು ನಿವಾರಿಸುವುದು.
ಅಧ್ಯಾಯ
ನರಗಳ ಬಿಗಿತದಿಂದ ಮತ್ತು ಕೆಲವು ಕಷ್ಟಕರ ವಿಷಯಗಳಲ್ಲಿ ಹೃದಯವು ಮುಳುಗಿಹೋಗುವುದರಿಂದ ಉಂಟಾಗುವ ಆತಂಕವನ್ನು ದೂರ ಮಾಡುವ ಕಾರಣಗಳಲ್ಲಿ ಒಂದು ಏನೆಂದರೆ, ಯಾವುದಾದರೂ ಪ್ರಯೋಜನಕಾರಿ ಕೆಲಸದಲ್ಲಿ ಅಥವಾ ಜ್ಞಾನದಲ್ಲಿ ತೊಡಗಿಸಿಕೊಳ್ಳುವುದು. ಏಕೆಂದರೆ ಇದು, ಹೃದಯವನ್ನು ಆತಂಕಕಾರಿ ವಿಷಯದಿಂದ ಬೇರೆಡೆಗೆ ಸೆಳೆಯುತ್ತದೆ. ಕೆಲವೊಮ್ಮೆ ಈ ಕಾರಣದಿಂದ ಅವನು ತನಗೆ ಚಿಂತೆ ಮತ್ತು ದುಃಖವನ್ನುಂಟುಮಾಡಿದ ಕಾರಣಗಳನ್ನು ಮರೆತುಬಿಡಬಹುದು. ಆಗ ಅವನ ಮನಸ್ಸು ಸಂತೋಷಪಡುತ್ತದೆ ಮತ್ತು ಚಟುವಟಿಕೆಯು ಹೆಚ್ಚುತ್ತದೆ. ಈ ಕಾರಣವು ಸತ್ಯವಿಶ್ವಾಸಿ ಮತ್ತು ಸತ್ಯನಿಷೇಧಿ ಇಬ್ಬರಿಗೂ ಸಮಾನವಾಗಿದೆ. ಆದರೆ ಸತ್ಯವಿಶ್ವಾಸಿಯು ತನ್ನ ವಿಶ್ವಾಸ, ನಿಷ್ಕಳಂಕತೆ ಮತ್ತು ಪ್ರತಿಫಲದ ನಿರೀಕ್ಷೆಯಿಂದ - ಅವನು ಕಲಿಯುವ ಅಥವಾ ಕಲಿಸುವ ಜ್ಞಾನದಲ್ಲಿ, ಮತ್ತು ಅವನು ಮಾಡುವ ಸತ್ಕರ್ಮದಲ್ಲಿ ಬೇರ್ಪಟ್ಟು ನಿಲ್ಲುತ್ತಾನೆ. ಅದು ಆರಾಧನೆಯಾಗಿದ್ದರೆ ಅದು ಆರಾಧನೆಯಾಗಿದೆ. ಆದರೆ, ಅದು ಐಹಿಕ ಕೆಲಸ-ಕಾರ್ಯಗಳಾಗಿದ್ದರೆ, ಅದರ ಜೊತೆಗೆ ಉತ್ತಮ ನಿಯ್ಯತ್ ಮತ್ತು ಅದರ ಮೂಲಕ ಅಲ್ಲಾಹನ ಆಜ್ಞಾಪಾಲನೆ ಮಾಡಲು ಸಹಾಯ ಪಡೆಯುವ ಉದ್ದೇಶವಿರುತ್ತದೆ. ಇದು ಚಿಂತೆ, ದುಃಖ ಮತ್ತು ವ್ಯಥೆಗಳನ್ನು ದೂರ ಮಾಡುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಆತಂಕ ಮತ್ತು ನಿರಂತರ ಕಷ್ಟಗಳಿಂದ ಪರೀಕ್ಷಿಸಲಾದ ಎಷ್ಟೋ ಜನರು, ವಿವಿಧ ರೋಗಗಳಿಗೆ ತುತ್ತಾದಾಗ, ಅವರಿಗಿರುವ ಪರಿಣಾಮಕಾರಿ ಔಷಧವೆಂದರೆ, ಅವರ ಕಷ್ಟ ಮತ್ತು ಆತಂಕದ ಕಾರಣವನ್ನು ಮರೆಯುವುದು ಮತ್ತು ಇತರ ಪ್ರಮುಖ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು.
ಆದರೆ, ಅವರು ತೊಡಗಿಸಿಕೊಳ್ಳುವ ಕೆಲಸವು ಅವರ ಮನಸ್ಸಿಗೆ ಆನಂದ ನೀಡುವ ಇಷ್ಟಕರ ಕೆಲಸವಾಗಿರಬೇಕು. ಏಕೆಂದರೆ ಇದು ಈ ಪ್ರಯೋಜನಕಾರಿ ಉದ್ದೇಶವನ್ನು ಸಾಧಿಸಲು ಹೆಚ್ಚು ಸಹಾಯಕವಾಗುತ್ತದೆ. ಅಲ್ಲಾಹನೇ ಹೆಚ್ಚು ತಿಳಿದವನು.
ಚಿಂತೆ ಮತ್ತು ಆತಂಕವನ್ನು ದೂರ ಮಾಡುವ ಇನ್ನೊಂದು ವಿಧಾನವೆಂದರೆ, ಎಲ್ಲಾ ಆಲೋಚನೆಗಳನ್ನು ಇಂದಿನ ದಿನದ ಕೆಲಸದ ಕಡೆಗೆ ಗಮನಹರಿಸಲು ಕೇಂದ್ರೀಕರಿಸುವುದು, ಮತ್ತು ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಹಾಗೂ ಭೂತಕಾಲದ ಬಗ್ಗೆ ದುಃಖಿಸುವುದನ್ನು ನಿಲ್ಲಿಸುವುದು. ಈ ಕಾರಣದಿಂದಲೇ ಪ್ರವಾದಿ (ﷺ) ರವರು ಚಿಂತೆ (ಭವಿಷ್ಯದ ಬಗ್ಗೆ) ಮತ್ತು ದುಃಖದಿಂದ (ಭೂತಕಾಲದ ಬಗ್ಗೆ) ಅಲ್ಲಾಹನಲ್ಲಿ ಅಭಯ ಕೋರುತ್ತಿದ್ದರು. (ಬುಖಾರಿ ಮತ್ತು ಮುಸ್ಲಿಂ). ಮರಳಿಸಲು ಅಥವಾ ಸರಿಪಡಿಸಲು ಸಾಧ್ಯವಿಲ್ಲದ ಗತಕಾಲದ ವಿಷಯಗಳ ಬಗ್ಗೆ ದುಃಖಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಭವಿಷ್ಯದ ಬಗ್ಗೆ ಭಯಪಡುವಾಗ ಉಂಟಾಗುವ ಚಿಂತೆಯು ಹಾನಿಕಾರಕವಾಗಬಹುದು. ಆದ್ದರಿಂದ, ಮನುಷ್ಯನು 'ದಿನದ ಪುತ್ರನಾಗಿರಬೇಕು'. ಅಂದರೆ, ತನ್ನ ಇಂದಿನ ಮತ್ತು ಈಗಿನ ಸಮಯವನ್ನು ಸುಧಾರಿಸಲು ತನ್ನ ಗಮನ ಮತ್ತು ಶ್ರಮವನ್ನು ಕೇಂದ್ರೀಕರಿಸಬೇಕು. ಏಕೆಂದರೆ ಹೃದಯವನ್ನು ಇದರ ಮೇಲೆ ಕೇಂದ್ರೀಕರಿಸುವುದರಿಂದ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಮತ್ತು ಮನುಷ್ಯನು ಚಿಂತೆ ಮತ್ತು ದುಃಖದಿಂದ ಸಾಂತ್ವನವನ್ನು ಪಡೆಯುತ್ತಾನೆ. ಪ್ರವಾದಿ (ﷺ) ರವರು ಒಂದು ಪ್ರಾರ್ಥನೆ ಮಾಡುವಾಗ ಅಥವಾ ತಮ್ಮ ಸಮುದಾಯಕ್ಕೆ ಒಂದು ಪ್ರಾರ್ಥನೆಯನ್ನು ಕಲಿಸಿಕೊಡುವಾಗ, ಅಲ್ಲಾಹನ ಸಹಾಯವನ್ನು ಬೇಡುವುದು ಮತ್ತು ಅವನ ಅನುಗ್ರಹವನ್ನು ಆಶಿಸುವುದರ ಜೊತೆಗೆ, ಯಾವುದಕ್ಕಾಗಿ ಆ ಪ್ರಾರ್ಥನೆಯನ್ನು ಮಾಡಲಾಗುತ್ತದೋ ಅದನ್ನು ಪಡೆಯಲು ಶ್ರದ್ಧೆ ಮತ್ತು ಶ್ರಮ ವಹಿಸಲು ಪ್ರೋತ್ಸಾಹಿಸುತ್ತಿದ್ದರು. ಹಾಗೆಯೇ, ಯಾವುದನ್ನು ದೂರ ಮಾಡಲು ಆ ಪ್ರಾರ್ಥನೆಯನ್ನು ಮಾಡಲಾಗುತ್ತದೋ ಅದನ್ನು ತ್ಯಜಿಸಲು ಪ್ರೋತ್ಸಾಹಿಸುತ್ತಿದ್ದರು. ಏಕೆಂದರೆ ಪ್ರಾರ್ಥನೆಯು ಕ್ರಿಯೆಯೊಂದಿಗೆ ಸೇರಿಕೊಂಡಿದೆ. ಆದ್ದರಿಂದ ಮನುಷ್ಯನು ತನ್ನ ಧಾರ್ಮಿಕ ಮತ್ತು ಐಹಿಕವಾದ ಪ್ರಯೋಜನಕಾರಿ ವಿಷಯಗಳಿಗಾಗಿ ಶ್ರಮ ವಹಿಸಬೇಕು, ತನ್ನ ಉದ್ದೇಶವನ್ನು ಯಶಸ್ವಿಗೊಳಿಸಲು ಅಲ್ಲಾಹನಲ್ಲಿ ಪ್ರಾರ್ಥಿಸಬೇಕು ಮತ್ತು ಅದಕ್ಕಾಗಿ ಅವನಿಂದ ಸಹಾಯವನ್ನು ಬೇಡಬೇಕು. ಪ್ರವಾದಿ (ﷺ) ರವರು ಹೇಳುತ್ತಾರೆ:
(احْرِصْ عَلَىٰ مَا يَنْفَعُكَ، وَاسْتَعِنْ باللَّهِ، وَلَا تَعْجِزْ، وَإِذَآ أَصَابَكَ شَىْءٌ فَلَا تَقُلْ: لَوْ أَنِّي فَعَلْتُ كَذَا كَانَ كَذَا وَكَذَا، وَلَـٰكِنْ قُلْ: قَدَرُ اللَّهِ وَمَا شَآءَ فَعَلَ، فَإِنَّ "لَوْ" تَفْتَحُ عَمَلَ الشَّيْطَانِ)
"ನಿನಗೆ ಪ್ರಯೋಜನ ನೀಡುವ ವಿಷಯದಲ್ಲಿ ಆಸಕ್ತಿ ವಹಿಸು, ಅದಕ್ಕಾಗಿ ಅಲ್ಲಾಹನಿಂದ ಸಹಾಯವನ್ನು ಬೇಡು ಮತ್ತು ಸೋಮಾರಿಯಾಗಬೇಡ. ನಿನಗೆ ಏನಾದರೂ (ಕೆಟ್ಟದ್ದು) ಸಂಭವಿಸಿದರೆ, 'ನಾನು ಒಂದು ವೇಳೆ ಹೀಗೆ ಮಾಡಿದ್ದರೆ, ಹೀಗೆ ಹೀಗೆ ಆಗುತ್ತಿತ್ತು' ಎಂದು ಹೇಳಬೇಡ. ಬದಲಿಗೆ, 'ಅಲ್ಲಾಹನು ವಿಧಿಸಿದನು ಮತ್ತು ಅವನು ಇಚ್ಛಿಸಿದ್ದನ್ನು ಅವನು ಮಾಡಿದನು' (ಖದ್ದರಲ್ಲಾಹು ವ ಮಾ ಶಾಅ ಫಅಲ) ಎಂದು ಹೇಳು. ಏಕೆಂದರೆ 'ಒಂದು ವೇಳೆ' ಎಂಬುದು ಶೈತಾನನ ಕೆಲಸಕ್ಕೆ ದಾರಿ ತೆರೆಯುತ್ತದೆ." (ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ). ಎಲ್ಲಾ ಸ್ಥಿತಿಗಳಲ್ಲಿಯೂ ಪ್ರಯೋಜನಕಾರಿ ವಿಷಯಗಳ ಬಗ್ಗೆ ಆಸಕ್ತಿ ವಹಿಸುವ ಆದೇಶವನ್ನು, ಅಲ್ಲಾಹನಿಂದ ಸಹಾಯ ಬೇಡುವುದನ್ನು ಮತ್ತು ಹಾನಿಕಾರಕ ಸೋಮಾರಿತನಕ್ಕೆ ಬಲಿಯಾಗದಿರುವುದನ್ನು, ಮತ್ತು ಈಗಾಗಲೇ ಸಂಭವಿಸಿರುವ ಗತಕಾಲದ ವಿಷಯಗಳಿಗೆ ಶರಣಾಗುವುದನ್ನು ಹಾಗೂ ಅಲ್ಲಾಹನ ವಿಧಿ ಮತ್ತು ನಿರ್ಣಯವನ್ನು ಒಪ್ಪಿಕೊಳ್ಳುವುದನ್ನು ಪ್ರವಾದಿ (ﷺ) ರವರು ಇಲ್ಲಿ ಒಟ್ಟುಗೂಡಿಸಿದ್ದಾರೆ.
ಅವರು ವಿಷಯಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ: ಒಂದನೇ ವಿಭಾಗ ಏನೆಂದರೆ, ಯಾವುದನ್ನು (ಪೂರ್ಣವಾಗಿ) ಪಡೆಯಲು ಅಥವಾ ಆಂಶಿಕವಾಗಿ ಪಡೆಯಲು, ಅಥವಾ ಅದನ್ನು ತಡೆಯಲು ಅಥವಾ ಕಡಿಮೆ ಮಾಡಲು ಮನುಷ್ಯನು ಪ್ರಯತ್ನಿಸಬಹುದೋ ಅಂತಹ ವಿಷಯಗಳು. ಇದಕ್ಕೆ ಮನುಷ್ಯನು ಪ್ರಯತ್ನವನ್ನು ಮಾಡುತ್ತಾನೆ ಮತ್ತು ತನ್ನ ಆರಾಧ್ಯನ (ಅಲ್ಲಾಹನ) ಸಹಾಯವನ್ನು ಕೋರುತ್ತಾನೆ. ಎರಡನೇ ವಿಭಾಗ ಏನೆಂದರೆ, ಯಾವುದರಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲವೋ ಅಂತಹ ವಿಷಯಗಳು. ಇಂತಹ ವಿಷಯಗಳಲ್ಲಿ ಮನುಷ್ಯನು ಸಮಾಧಾನಿತನಾಗುತ್ತಾನೆ, ಸಂತೃಪ್ತಿ ಸೂಚಿಸುತ್ತಾನೆ ಮತ್ತು ಶರಣಾಗುತ್ತಾನೆ. ಈ ಮೂಲತತ್ವವನ್ನು ಪಾಲಿಸಿದರೆ ಸಂತೋಷ ದೊರೆಯುತ್ತದೆ ಮತ್ತು ಚಿಂತೆ ಹಾಗೂ ದುಃಖ ನಿವಾರಣೆಯಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಅಧ್ಯಾಯ
ಎದೆಯ ವಿಶಾಲತೆ ಮತ್ತು ಅದರ ನೆಮ್ಮದಿಗೆ ಅತಿ ದೊಡ್ಡ ಕಾರಣಗಳಲ್ಲಿ ಇನ್ನೊಂದು ಏನೆಂದರೆ, ಅಲ್ಲಾಹನ ಸ್ಮರಣೆಯನ್ನು (ಧಿಕ್ರ್) ಅಧಿಕಗೊಳಿಸುವುದು. ಏಕೆಂದರೆ ಇದು ಎದೆಯನ್ನು ವಿಶಾಲಗೊಳಿಸುವುದರಲ್ಲಿ, ಅದಕ್ಕೆ ಸಮಾಧಾನ ನೀಡುವುದರಲ್ಲಿ, ಮತ್ತು ಚಿಂತೆ-ದುಃಖಗಳ ನಿವಾರಣೆಯಲ್ಲಿ ಅದ್ಭುತ ಪಾತ್ರ ವಹಿಸುತ್ತದೆ. ಅಲ್ಲಾಹನು ಹೇಳುತ್ತಾನೆ:
﴿...أَلَا بِذِكْرِ اللَّهِ تَطْمَئِنُّ الْقُلُوبُ﴾
"ತಿಳಿಯಿರಿ! ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳು ನೆಮ್ಮದಿ ಪಡೆಯುತ್ತವೆ." [ಸೂರ ಅರ್ರಅದ್: 28] ಆದ್ದರಿಂದ, ಅಲ್ಲಾಹನ ಸ್ಮರಣೆಯು (ಧಿಕ್ರ್), ಅದರ ವಿಶಿಷ್ಟ ಗುಣದಿಂದಾಗಿ ಮತ್ತು ಮನುಷ್ಯನು ಅದರಿಂದ ನಿರೀಕ್ಷಿಸುವ ಪ್ರತಿಫಲ ಮತ್ತು ಪುಣ್ಯದಿಂದಾಗಿ ಈ ಉದ್ದೇಶವನ್ನು ಸಾಧಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.
ಹಾಗೆಯೇ, ಅಲ್ಲಾಹನ ಪ್ರತ್ಯಕ್ಷ ಮತ್ತು ಪರೋಕ್ಷ ಅನುಗ್ರಹಗಳ ಬಗ್ಗೆ ಮಾತನಾಡುವುದು (ಕೂಡ ನೆಮ್ಮದಿಗೆ ಕಾರಣವಾಗುತ್ತದೆ). ಏಕೆಂದರೆ ಅವುಗಳನ್ನು ಅರಿಯುವಾಗ ಮತ್ತು ಅವುಗಳ ಬಗ್ಗೆ ಮಾತನಾಡುವಾಗ - ಅಲ್ಲಾಹನು ಅದರ ಮೂಲಕ ಚಿಂತೆ ಮತ್ತು ದುಃಖವನ್ನು ದೂರ ಮಾಡುತ್ತಾನೆ. ಇದು ಮನುಷ್ಯನನ್ನು ಕೃತಜ್ಞತೆ ಸಲ್ಲಿಸಲು ಪ್ರೇರೇಪಿಸುತ್ತದೆ. ಕೃತಜ್ಞತೆಯು ಅತ್ಯಂತ ಉನ್ನತ ಮತ್ತು ಶ್ರೇಷ್ಠ ಪದವಿಯಾಗಿದೆ. ದಾಸನು ಬಡತನ, ರೋಗ ಅಥವಾ ಇತರ ಬಗೆಯ ಪರೀಕ್ಷೆಗಳ ಸ್ಥಿತಿಯಲ್ಲಿದ್ದರೂ ಸಹ. ಏಕೆಂದರೆ, ಅವನು ತನಗಿರುವ ಅಲ್ಲಾಹನ ಅನುಗ್ರಹಗಳನ್ನು - ಅವುಗಳಿಗೆ ಎಣಿಕೆ ಮತ್ತು ಲೆಕ್ಕವಿಲ್ಲ - ತನಗೆ ಒದಗಿದ ಕಷ್ಟದೊಂದಿಗೆ ಹೋಲಿಸಿದರೆ, ಆ ಕಷ್ಟಗಳು ಅನುಗ್ರಹಗಳಿಗೆ ಸರಿಸಾಟಿಯಾಗಿರುವುದಿಲ್ಲ.
ಬದಲಿಗೆ, ಅಲ್ಲಾಹನು ಮನುಷ್ಯನನ್ನು ಕಷ್ಟ ಮತ್ತು ವಿಪತ್ತುಗಳಿಂದ ಪರೀಕ್ಷಿಸಿದಾಗ, ಅವನು ಸಹನೆ, ತೃಪ್ತಿ ಮತ್ತು ಶರಣಾಗತಿ ಎಂಬ ತನ್ನ ಕರ್ತವ್ಯವನ್ನು ನಿರ್ವಹಿಸಿದರೆ, ಕಷ್ಟವನ್ನು ಎದುರಿಸುವುದು ಸುಲಭವಾಗುತ್ತದೆ ಮತ್ತು ಅದರ ಭಾರವು ಕಡಿಮೆಯಾಗುತ್ತದೆ. ಮನುಷ್ಯನು ಅದರ ಪ್ರತಿಫಲ ಮತ್ತು ಪುಣ್ಯವನ್ನು ನಿರೀಕ್ಷಿಸುವುದು, ಹಾಗೂ ಸಹನೆ ಮತ್ತು ತೃಪ್ತಿಯ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಅಲ್ಲಾಹನ ಆರಾಧನೆ ಮಾಡುವುದು - ಇವು ಕಹಿಯಾದ ವಿಷಯಗಳನ್ನು ಸಿಹಿಯಾಗಿಸುತ್ತವೆ. ಆಗ, ಅದರ ಪ್ರತಿಫಲದ ಸಿಹಿಯು ಸಹನೆಯ ಕಹಿಯನ್ನು ಮರೆಸಿಬಿಡುತ್ತದೆ.
ಈ ವಿಷಯದಲ್ಲಿ ಅತ್ಯಂತ ಪ್ರಯೋಜನಕಾರಿ ಸಂಗತಿಯೆಂದರೆ, ಪ್ರವಾದಿ (ﷺ) ರವರು ಸಹೀಹ್ ಹದೀಸ್ನಲ್ಲಿ ನಿರ್ದೇಶಿಸಿರುವುದನ್ನು ಪಾಲಿಸುವುದು. ಅವರು ಹೇಳಿದರು:
(انظُرُوا إِلَىٰ مَنْ هُوَ أَسْفَلَ مِنكُمْ، وَلَا تَنظُرُوا إِلَىٰ مَنْ هُوَ فَوْقَكُمْ، فَإِنَّهُ أَجْدَرُ أَلَّا تَزْدَرُوا نِعْمَةَ اللَّهِ عَلَيْكُمْ)
"ನಿಮಗಿಂತ ಕೆಳಗಿರುವವರನ್ನು ನೋಡಿರಿ. ನಿಮಗಿಂತ ಮೇಲಿರುವವರನ್ನು ನೋಡಬೇಡಿ. ಏಕೆಂದರೆ ಅದು, ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹವನ್ನು ನೀವು ಕಡೆಗಣಿಸದಿರಲು ಹೆಚ್ಚು ಸೂಕ್ತವಾಗಿದೆ." (ಇದನ್ನು ಬುಖಾರಿ ವರದಿ ಮಾಡಿದ್ದಾರೆ). ಮನುಷ್ಯನು ಈ ಮಹತ್ವಪೂರ್ಣವಾದ ಅಂಶವನ್ನು ತನ್ನ ಕಣ್ಣ ಮುಂದೆ ಇಟ್ಟುಕೊಂಡರೆ, ಅವನ ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ಸಹ, ಅವನು ಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ಹಾಗೂ ಜೀವನೋಪಾಯ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇತರ ಅನೇಕ ಮನುಷ್ಯರಿಗಿಂತ ಉತ್ತಮವಾಗಿರುತ್ತಾನೆ. ಅವನ ಆತಂಕ, ಚಿಂತೆ ಮತ್ತು ದುಃಖವು ದೂರವಾಗುತ್ತದೆ. ತನಗಿಂತ ಕೆಳಮಟ್ಟದಲ್ಲಿರುವವರಿಗಿಂತ ತಾನು ಶ್ರೇಷ್ಠನಾಗಿರುವ ವಿಷಯಗಳಲ್ಲಿರುವ ಅಲ್ಲಾಹನ ಅನುಗ್ರಹಗಳಿಗಾಗಿ ಅವನ ಸಂತೋಷ ಮತ್ತು ಹರ್ಷವು ಹೆಚ್ಚಾಗುತ್ತದೆ.
ಮನುಷ್ಯನು ಅಲ್ಲಾಹನ ಪ್ರತ್ಯಕ್ಷ ಮತ್ತು ಪರೋಕ್ಷ, ಧಾರ್ಮಿಕ ಮತ್ತು ಐಹಿಕ ಅನುಗ್ರಹಗಳ ಬಗ್ಗೆ ಹೆಚ್ಚು ಹೆಚ್ಚು ಆಲೋಚಿಸಿದಂತೆಲ್ಲಾ, ಅಲ್ಲಾಹು ತನಗೆ ಒಳಿತನ್ನು ನೀಡಿದ್ದಾನೆ ಮತ್ತು ಹಲವಾರು ಕೆಡುಕುಗಳನ್ನು ತನ್ನಿಂದ ದೂರ ಮಾಡಿದ್ದಾನೆ ಎಂಬುದನ್ನು ಅವನು ಅರಿತುಕೊಳ್ಳುತ್ತಾನೆ. ಇದು ಚಿಂತೆ ಮತ್ತು ದುಃಖಗಳನ್ನು ದೂರ ಮಾಡುತ್ತದೆ, ಮತ್ತು ಸಂತೋಷ ಹಾಗೂ ಹರ್ಷವನ್ನು ಉಂಟುಮಾಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಅಧ್ಯಾಯ
ಸಂತೋಷವನ್ನು ಉಂಟುಮಾಡುವ ಮತ್ತು ಚಿಂತೆ ಹಾಗೂ ದುಃಖವನ್ನು ನಿವಾರಿಸುವ ಕಾರಣಗಳಲ್ಲಿ ಇನ್ನೊಂದು ಏನೆಂದರೆ, ಚಿಂತೆಗಳನ್ನು ತರುವ ಕಾರಣಗಳನ್ನು ದೂರ ಮಾಡಲು ಮತ್ತು ಸಂತೋಷವನ್ನು ತರುವ ಕಾರಣಗಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುವುದು. ಇದು, ತನ್ನಿಂದ ತಡೆಯಲು ಸಾಧ್ಯವಿಲ್ಲದ ಮತ್ತು ಈಗಾಗಲೇ ಸಂಭವಿಸಿದ ದುರಂತಗಳನ್ನು ಮರೆಯುವುದರ ಮೂಲಕ ಮತ್ತು ಅವುಗಳ ಬಗ್ಗೆ ಆಲೋಚಿಸುವುದು ವ್ಯರ್ಥ ಮತ್ತು ಅಸಾಧ್ಯವಾದದ್ದು, ಹಾಗೂ ಅದು ಮೂರ್ಖತನ ಮತ್ತು ಹುಚ್ಚುತನ ಎಂದು ಅರಿತುಕೊಳ್ಳುವುದರ ಮೂಲಕ (ಸಾಧ್ಯವಾಗುತ್ತದೆ). ಆದ್ದರಿಂದ ಅವುಗಳ ಬಗ್ಗೆ ಆಲೋಚಿಸದಂತೆ ತನ್ನ ಹೃದಯವನ್ನು ತಡೆಯಬೇಕು. ಹಾಗೆಯೇ, ಭವಿಷ್ಯದಲ್ಲಿ ತನಗೆ ಸಂಭವಿಸಬಹುದೆಂದು ಊಹಿಸುವ ಬಡತನ, ಭಯ ಅಥವಾ ಇತರ ಕಷ್ಟಗಳ ಬಗ್ಗೆ ಆತಂಕ ಪಡದಂತೆ ತನ್ನ ಹೃದಯವನ್ನು ತಡೆಯಬೇಕು. ಭವಿಷ್ಯದ ವಿಷಯಗಳಲ್ಲಿ ಸಂಭವಿಸುವ ಒಳಿತು, ಕೆಡುಕು, ನಲಿವು ಮತ್ತು ನೋವುಗಳು ಅಜ್ಞಾತವಾಗಿವೆ ಎಂದು ಅರಿಯಬೇಕು. ಅವು ಪ್ರಬಲನೂ ಯುಕ್ತಿವಂತನೂ ಆದ ಅಲ್ಲಾಹನ ಕೈಯಲ್ಲಿವೆ, ಒಳಿತನ್ನು ಪಡೆಯಲು ಮತ್ತು ಕೆಡುಕನ್ನು ತಡೆಯಲು ಪ್ರಯತ್ನಿಸುವುದನ್ನು ಹೊರತುಪಡಿಸಿ ಮನುಷ್ಯರ ಕೈಯಲ್ಲಿ ಏನೂ ಇಲ್ಲ ಎಂದು (ಅರಿಯಬೇಕು). ಮನುಷ್ಯನು ತನ್ನ ಭವಿಷ್ಯದ ಬಗ್ಗೆ ಆತಂಕಪಡುವುದನ್ನು ಬಿಟ್ಟುಬಿಡಬೇಕು, ಅದನ್ನು ಸರಿಪಡಿಸಲು ಅಲ್ಲಾಹನ ಮೇಲೆ ಭರವಸೆ ಇಡಬೇಕು ಮತ್ತು ಆ ವಿಷಯದಲ್ಲಿ ಸಮಾಧಾನ ಹೊಂದಿರಬೇಕು. ಹೀಗಾದರೆ, ಅವನ ಹೃದಯವು ನೆಮ್ಮದಿ ಪಡೆಯುತ್ತದೆ, ಅವನ ಪರಿಸ್ಥಿತಿಗಳು ಸುಧಾರಿಸುತ್ತವೆ, ಮತ್ತು ಅವನ ಚಿಂತೆ ಹಾಗೂ ಆತಂಕವು ದೂರವಾಗುತ್ತದೆ ಎಂದು ಅವನು ಅರಿತುಕೊಳ್ಳುತ್ತಾನೆ.
ಭವಿಷ್ಯದ ವಿಷಯದಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಒಂದು ಸಂಗತಿ ಏನೆಂದರೆ, ಪ್ರವಾದಿ (ﷺ) ರವರು ಪ್ರಾರ್ಥಿಸುತ್ತಿದ್ದ ಈ ಪ್ರಾರ್ಥನೆಯನ್ನು ಪ್ರಾರ್ಥಿಸುವುದು:
(اللَّهُمَّ أَصْلِحْ لِي دِينِيَ الَّذِي هُوَ عِصْمَةُ أَمْرِي، وَأَصْلِحْ لِي دُنْيَايَ الَّتِي فِيهَا مَعَاشِي، وَأَصْلِحْ لِيٓ آخِرَتِيَ الَّتِيٓ إِلَيْهَا مَعَادِي، وَاجْعَلِ الْحَيَاةَ زِيَادَةً لِّي فِي كُلِّ خَيْرٍ، وَالْمَوْتَ رَاحَةً لِّي مِن كُلِّ شَرٍّ)
"ಅಲ್ಲಾಹುಮ್ಮ ಅಸ್ಲಿಹ್ ಲೀ ದೀನಿಲ್ಲದೀ ಹುವ ಇಸ್ಮತು ಅಮ್ರೀ, ವ ಅಸ್ಲಿಹ್ ಲೀ ದುನ್ಯಾಯಲ್ಲತೀ ಫೀಹಾ ಮಆಶೀ, ವ ಅಸ್ಲಿಹ್ ಲೀ ಆಖಿರತಿಯಲ್ಲತೀ ಇಲೈಹಾ ಮಆದೀ, ವಜ್ಅಲಿಲ್ ಹಯಾತ ಝಿಯಾದತನ್ ಲೀ ಫೀ ಕುಲ್ಲಿ ಖೈರ್, ವಲ್ ಮೌತ ರಾಹತನ್ ಲೀ ಮಿನ್ ಕುಲ್ಲಿ ಶರ್ರ್" (ಓ ಅಲ್ಲಾಹ್, ನನ್ನ ಎಲ್ಲ ಕೆಲಸ-ಕಾರ್ಯಗಳ ಭದ್ರತೆಯಾಗಿರುವ ನನ್ನ ಧರ್ಮವನ್ನು ನನಗಾಗಿ ಸುಧಾರಿಸು. ನನ್ನ ಜೀವನೋಪಾಯವಿರುವ ನನ್ನ ಐಹಿಕ ಜೀವನವನ್ನು ನನಗಾಗಿ ಸುಧಾರಿಸು. ನಾನು ಮರಳಬೇಕಾಗಿರುವ ನನ್ನ ಪರಲೋಕವನ್ನು ನನಗಾಗಿ ಸುಧಾರಿಸು. ಬದುಕನ್ನು ನನಗೆ ಪ್ರತಿಯೊಂದು ಒಳಿತಿನಲ್ಲೂ ಹೆಚ್ಚಳವಾಗುವಂತೆ ಮಾಡು, ಮತ್ತು ಮರಣವನ್ನು ನನಗೆ ಪ್ರತಿಯೊಂದು ಕೆಡುಕಿನಿಂದಲೂ ವಿಶ್ರಾಂತಿಯಾಗುವಂತೆ ಮಾಡು.) (ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ). ಹಾಗೆಯೇ ಅವರ ಈ ಪ್ರಾರ್ಥನೆ:
(اللَّهُمَّ رَحْمَتَكَ أَرْجُو، فَلَا تَكِلْنِي إِلَىٰ نَفْسِي طَرْفَةَ عَيْنٍ، وَأَصْلِحْ لِي شَأْنِي كُلَّهُ، لَآ إِلَٰهَ إِلَّآ أَنتَ)
"ಅಲ್ಲಾಹುಮ್ಮ ರಹ್ಮತಕ ಅರ್ಜೂ ಫಲಾ ತಕಿಲ್ನೀ ಇಲಾ ನಫ್ಸೀ ತರ್ಫತ ಐನ್, ವ ಅಸ್ಲಿಹ್ ಲೀ ಶಅನೀ ಕುಲ್ಲಹು, ಲಾ ಇಲಾಹ ಇಲ್ಲಾ ಅಂತ" (ಓ ಅಲ್ಲಾಹ್, ನಿನ್ನ ಕರುಣೆಯನ್ನೇ ನಾನು ನಿರೀಕ್ಷಿಸುತ್ತೇನೆ. ಆದ್ದರಿಂದ ಕಣ್ಣು ಮಿಟುಕಿಸುವಷ್ಟೂ ಕಾಲ ಕೂಡ ನನ್ನನ್ನು ನನ್ನ ಪಾಡಿಗೆ ಬಿಡಬೇಡ. ನನ್ನ ಎಲ್ಲಾ ವ್ಯಕೆಲಸ-ಕಾರ್ಯಗಳನ್ನು ನನಗಾಗಿ ಸರಿಪಡಿಸು. ನಿನ್ನ ಹೊರತು ಬೇರೆ ಆರಾಧ್ಯನಿಲ್ಲ.) (ಇದನ್ನು ಅಬೂ ದಾವೂದ್ ಸಹೀಹ್ ಸನದ್ನೊಂದಿಗೆ ವರದಿ ಮಾಡಿದ್ದಾರೆ). ದಾಸನು ತನ್ನ ಧಾರ್ಮಿಕ ಮತ್ತು ಐಹಿಕ ಭವಿಷ್ಯದ ಸುಧಾರಣೆಯನ್ನು ಒಳಗೊಂಡ ಈ ಪ್ರಾರ್ಥನೆಯನ್ನು ಜಾಗೃತ ಹೃದಯ ಮತ್ತು ಪ್ರಾಮಾಣಿಕ ನಿಯ್ಯತಿನೊಂದಿಗೆ, ಅದನ್ನು ಸಾಧಿಸಲು ಬೇಕಾದ ಪ್ರಯತ್ನದೊಂದಿಗೆ ನಿರಂತರವಾಗಿ ಪ್ರಾರ್ಥಿಸಿದರೆ, ಅಲ್ಲಾಹನು ಅವನು ಯಾವುದಕ್ಕಾಗಿ ಪ್ರಾರ್ಥಿಸಿದನೋ, ಆಶಿಸಿದನೋ ಮತ್ತು ಶ್ರಮಿಸಿದನೋ ಅದನ್ನು ಅವನಿಗೆ ಖಂಡಿತವಾಗಿಯೂ ನೀಡುತ್ತಾನೆ, ಮತ್ತು ಅವನ ಚಿಂತೆಯು ಸಂತೋಷ ಮತ್ತು ಹರ್ಷವಾಗಿ ಬದಲಾಗುತ್ತದೆ.
ಅಧ್ಯಾಯ
ಮನುಷ್ಯನಿಗೆ ಯಾವುದಾದರೂ ವಿಪತ್ತುಗಳು ಸಂಭವಿಸಿದಾಗ, ಆತಂಕ ಮತ್ತು ಚಿಂತೆಗಳನ್ನು ನಿವಾರಿಸಲು ಅತ್ಯಂತ ಪ್ರಯೋಜನಕಾರಿ ಕಾರಣಗಳಲ್ಲಿ ಇನ್ನೊಂದು ಏನೆಂದರೆ, ಆ ವಿಪತ್ತು ಉಂಟುಮಾಡಬಹುದಾದ ಅತ್ಯಂತ ಕೆಟ್ಟ ಸಂಭವನೀಯತೆಯನ್ನು ಊಹಿಸಿಕೊಂಡು, ಅದಕ್ಕಾಗಿ ತನ್ನ ಮನಸ್ಸನ್ನು ಸಿದ್ಧಪಡಿಸಿಕೊಳ್ಳುವ ಮೂಲಕ ಅದನ್ನು (ವಿಪತ್ತನ್ನು) ಕಡಿಮೆ ಮಾಡಲು ಪ್ರಯತ್ನಿಸುವುದು. ಹೀಗೆ ಮಾಡಿದ ನಂತರ, ಕಡಿಮೆಗೊಳಿಸಲು ಸಾಧ್ಯವಾದಷ್ಟೂ ಕಡಿಮೆಗೊಳಿಸಲು ಪ್ರಯತ್ನಿಸಬೇಕು. ಮನಸ್ಸಿನ ಈ ಸಿದ್ಧತೆಯಿಂದ ಮತ್ತು ಈ ಉಪಯುಕ್ತ ಪ್ರಯತ್ನದಿಂದ, ಚಿಂತೆಗಳು ಮತ್ತು ದುಃಖಗಳು ದೂರವಾಗುತ್ತವೆ. ಆ ಪ್ರಯತ್ನವನ್ನು ಪ್ರಯೋಜನಗಳನ್ನು ತರುವ ಮತ್ತು ಮನುಷ್ಯನಿಗೆ ತಡೆಯಲು ಸಾಧ್ಯವಿರುವ ಹಾನಿಗಳನ್ನು ತಡೆಯುವ ವಿಷಯಗಳಲ್ಲಿ ವಿನಿಯೋಗಿಸಬೇಕಾಗಿದೆ.
ಮನುಷ್ಯನಿಗೆ ಭಯದ ಕಾರಣಗಳು, ರೋಗಗಳ ಕಾರಣಗಳು, ಅಥವಾ ಅವನು ಇಷ್ಟಪಡುವ ವಿವಿಧ ವಸ್ತುಗಳ ಅಭಾವ ಮತ್ತು ಅನಾಸ್ತಿತ್ವದ ಕಾರಣಗಳು ಎದುರಾದರೆ, ಅವನು ಅದನ್ನು ಸಮಾಧಾನದಿಂದ ಮತ್ತು ಅದಕ್ಕಾಗಿ ಮನಸ್ಸನ್ನು ಸಿದ್ಧಪಡಿಸಿಕೊಂಡು ಸ್ವೀಕರಿಸಬೇಕು. ಅಷ್ಟೇ ಅಲ್ಲ, ಅದರಲ್ಲಿ ಸಂಭವಿಸಬಹುದಾದ ಅತ್ಯಂತ ಕಠಿಣ ಪರಿಸ್ಥಿತಿಗಾಗಿ (ಸಿದ್ಧಪಡಿಸಿಕೊಳ್ಳಬೇಕು). ಏಕೆಂದರೆ ಕಷ್ಟಗಳನ್ನು ಸಹಿಸಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು ಕಷ್ಟಗಳನ್ನು ಹಗುರಗೊಳಿಸುತ್ತದೆ ಮತ್ತು ಅವುಗಳ ತೀವ್ರತೆಯನ್ನು ನಿವಾರಿಸುತ್ತದೆ. ವಿಶೇಷವಾಗಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅವುಗಳನ್ನು ತಡೆಗಟ್ಟಲು ಪ್ರಯತ್ನಿಸುವಾಗ. ಆಗ ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು ಮತ್ತು ಮನಸ್ಸು ವಿಪತ್ತುಗಳ ಬಗ್ಗೆ ಗಮನಹರಿಸದಂತೆ ಅದನ್ನು ಬೇರೆಡೆಗೆ ಸೆಳೆಯುವ ಪ್ರಯೋಜನಕಾರಿ ಪ್ರಯತ್ನವು ಒಟ್ಟಿಗೆ ಸೇರುತ್ತವೆ. ಅವನು ಅಲ್ಲಾಹನ ಮೇಲೆ ಅವಲಂಬಿತನಾಗಿ ಮತ್ತು ಅವನಲ್ಲಿ ಉತ್ತಮ ಭರವಸೆ ಇಟ್ಟು, ಕಷ್ಟಗಳನ್ನು ಪ್ರತಿರೋಧಿಸುವ ಶಕ್ತಿಯನ್ನು ನವೀಕರಿಸಲು ಹೋರಾಡಬೇಕು. ಸಂತೋಷವನ್ನು ಗಳಿಸುವುದರಲ್ಲಿ ಮತ್ತು ಎದೆಗಳನ್ನು ವಿಶಾಲಗೊಳಿಸುವುದರಲ್ಲಿ, ಅಷ್ಟೇ ಅಲ್ಲ, ಮನುಷ್ಯನು ನಿರೀಕ್ಷಿಸುವ ತಕ್ಷಣದ ಮತ್ತು ನಂತರದ ಪ್ರತಿಫಲದಲ್ಲಿಯೂ ಇವು ಬಹುದೊಡ್ಡ ಪ್ರಯೋಜನವನ್ನು ಹೊಂದಿವೆ. ಇದು ಅನುಭವವೇದ್ಯ ಸತ್ಯವಾಗಿದೆ. ಇದನ್ನು ಅನುಭವಿಸಿದವರ ಉದಾಹರಣೆಗಳು ಬಹಳಷ್ಟಿವೆ.
ಅಧ್ಯಾಯ
ಹೃದಯದ ನರಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ, ಅಷ್ಟೇ ಅಲ್ಲ, ದೈಹಿಕ ಕಾಯಿಲೆಗಳಿಗೂ ಸಹ ಅತ್ಯಂತ ಶ್ರೇಷ್ಠ ಚಿಕಿತ್ಸೆಗಳಲ್ಲಿ ಒಂದು ಏನೆಂದರೆ, ಹೃದಯದ ಶಕ್ತಿ ಮತ್ತು ಕೆಟ್ಟ ಆಲೋಚನೆಗಳನ್ನು ತರುವ ಭ್ರಮೆಗಳಿಂದ ಹಾಗೂ ಕಲ್ಪನೆಗಳಿಂದ ಅದು ವಿಚಲಿತಗೊಳ್ಳದೆ ಮತ್ತು ಪ್ರಭಾವಿತಗೊಳ್ಳದೆ ಇರುವುದು. ಕೋಪ ಮತ್ತು ಗೊಂದಲಗಳು ನೋವುಂಟುಮಾಡುವ ಕಾರಣಗಳಾಗಿವೆ. ಹಾಗೆಯೇ ಕಷ್ಟಗಳು ಸಂಭವಿಸಬಹುದೆಂಬ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಕಾದೀತೆಂಬ ನಿರೀಕ್ಷೆಯು (ಕೂಡ). ಇದು ವ್ಯಕ್ತಿಯನ್ನು ಚಿಂತೆ, ದುಃಖ, ಹೃದಯ ಮತ್ತು ದೈಹಿಕ ಕಾಯಿಲೆ, ಹಾಗೂ ನರಗಳ ದೌರ್ಬಲ್ಯಕ್ಕೆ ತಳ್ಳುತ್ತದೆ. ಇದರ ಕೆಟ್ಟ ಪರಿಣಾಮಗಳಿಂದ ಜನರು ಅನೇಕ ರೀತಿಯ ಹಾನಿಗಳನ್ನು ಕಂಡಿದ್ದಾರೆ.
ಯಾವಾಗ ಹೃದಯವು ಅಲ್ಲಾಹನ ಮೇಲೆ ಅವಲಂಬಿತವಾಗಿ, ಅವನ ಮೇಲೆ ಭರವಸೆ ಇಡುತ್ತದೆಯೋ, ಭ್ರಮೆಗಳಿಗೆ ಶರಣಾಗದೆ ಮತ್ತು ಕೆಟ್ಟ ಕಲ್ಪನೆಗಳು ಅದನ್ನು ವಶಪಡಿಸಿಕೊಳ್ಳದೆ ಇರುತ್ತದೆಯೋ, ಮತ್ತು ಅಲ್ಲಾಹನಲ್ಲಿ ನಂಬಿಕೆಯಿಟ್ಟು ಅವನ ಅನುಗ್ರಹವನ್ನು ಆಶಿಸುತ್ತದೆಯೋ, ಆಗ ಅದರ ಮೂಲಕ ಚಿಂತೆಮತ್ತು ದುಃಖಗಳು ದೂರವಾಗುತ್ತವೆ. ಇದರಿಂದಾಗಿ ಅನೇಕ ದೈಹಿಕ ಹಾಗೂ ಹೃದಯದ ಕಾಯಿಲೆಗಳು ದೂರವಾಗುತ್ತವೆ. ಹೃದಯಕ್ಕೆ ವ್ಯಕ್ತಪಡಿಸಲಾಗದಂತಹ ಶಕ್ತಿ, ವಿಶಾಲತೆ ಮತ್ತು ಸಂತೋಷ ಲಭ್ಯವಾಗುತ್ತದೆ. ಭ್ರಮೆಗಳು ಮತ್ತು ಕೆಟ್ಟ ಕಲ್ಪನೆಗಳಿರುವ ರೋಗಿಗಳಿಂದ ಎಷ್ಟೊಂದು ಆಸ್ಪತ್ರೆಗಳು ತುಂಬಿಹೋಗಿವೆ! ದುರ್ಬಲರನ್ನು ಬಿಡಿ, ಎಷ್ಟೋ ಬಲಿಷ್ಠರ ಹೃದಯಗಳ ಮೇಲೂ ಈ ವಿಷಯಗಳು ಪರಿಣಾಮ ಬೀರಿವೆ! ಎಷ್ಟೋ ಬಾರಿ ಇವು ಅವಿವೇಕತನ ಮತ್ತು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಿವೆ! ಯಾರನ್ನು ಅಲ್ಲಾಹನು ರಕ್ಷಿಸಿದ್ದಾನೋ ಮತ್ತು ಹೃದಯವನ್ನು ಬಲಪಡಿಸುವ, ಅದರ ಆತಂಕವನ್ನು ದೂರ ಮಾಡುವ ಪ್ರಯೋಜನಕಾರಿ ಕಾರಣಗಳನ್ನು ಪಡೆಯುವುದಕ್ಕಾಗಿ ತನ್ನ ಆತ್ಮದ ವಿರುದ್ಧ ಹೋರಾಡಲು ಯಶಸ್ಸನ್ನು ನೀಡಿದ್ದಾನೋ ಅವನೇ ರಕ್ಷಣೆ ಪಡೆದವನು. ಅಲ್ಲಾಹು ಹೇಳುತ್ತಾನೆ:
﴿وَمَن يَتَوَكَّلْ عَلَى اللَّهِ فَهُوَ حَسْبُهُ...﴾
"ಮತ್ತು ಯಾರು ಅಲ್ಲಾಹನ ಮೇಲೆ ಭರವಸೆ ಇಡುತ್ತಾರೋ, ಅವರಿಗೆ ಅವನೇ ಸಾಕು." [ಸೂರ ಅತ್ತಲಾಕ್: 3] ಅಂದರೆ, ಅವನ ಧಾರ್ಮಿಕ ಮತ್ತು ಐಹಿಕ ವಿಷಯಗಳಲ್ಲಿ ಅವನಿಗೆ ಅಗತ್ಯವಿರುವ ಎಲ್ಲದಕ್ಕೂ ಅವನೇ (ಅಲ್ಲಾಹನೇ) ಸಾಕಾಗುತ್ತಾನೆ.
ಅಲ್ಲಾಹನ ಮೇಲೆ ಭರವಸೆ ಇಡುವವನು ಸದೃಢ ಹೃದಯವನ್ನು ಹೊಂದಿರುತ್ತಾನೆ. ಭ್ರಮೆಗಳು ಅವನ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಘಟನೆಗಳು ಅವನನ್ನು ವಿಚಲಿತಗೊಳಿಸುವುದಿಲ್ಲ. ಏಕೆಂದರೆ ಹೀಗಾಗುವುದು ಆತ್ಮದ ದೌರ್ಬಲ್ಯದಿಂದ, ಮತ್ತು ವಾಸ್ತವವಲ್ಲದ ಹೇಡಿತನ ಹಾಗೂ ಭಯದಿಂದ ಎಂದು ಅವನಿಗೆ ತಿಳಿದಿರುತ್ತದೆ. ಇದರೊಂದಿಗೆ, ತನ್ನ ಮೇಲೆ ಭರವಸೆ ಇಟ್ಟವರಿಗೆ ಪರಿಪೂರ್ಣವಾಗಿ ಸಾಕಾಗುವುದಾಗಿ ಅಲ್ಲಾಹನು ಹೊಣೆಗಾರಿಕೆ ಹೊತ್ತಿದ್ದಾನೆಂದೂ ಅವನಿಗೆ ತಿಳಿದಿರುತ್ತದೆ. ಹಾಗಾಗಿ ಅವನು ಅಲ್ಲಾಹನಲ್ಲಿ ನಂಬಿಕೆಯಿಡುತ್ತಾನೆ ಮತ್ತು ಅವನ ವಾಗ್ದಾನದ ಬಗ್ಗೆ ಸಮಾಧಾನ ಹೊಂದುತ್ತಾನೆ. ಆಗ ಅವನ ಚಿಂತೆ ಮತ್ತು ಆತಂಕವು ದೂರವಾಗುತ್ತದೆ, ಅವನ ಕಷ್ಟವು ಸುಲಭವಾಗುತ್ತದೆ, ಅವನ ದುಃಖವು ಸಂತೋಷವಾಗಿ, ಮತ್ತು ಅವನ ಭಯವು ನಿರ್ಭಯವಾಗಿ ಬದಲಾಗುತ್ತದೆ. ಆದ್ದರಿಂದ ನಾವು ಅಲ್ಲಾಹನಲ್ಲಿ ಕ್ಷೇಮವನ್ನು ಬೇಡುತ್ತೇವೆ. ಅವನು ನಮ್ಮ ಮೇಲೆ ಹೃದಯದ ಶಕ್ತಿ ಹಾಗೂ ಅದರ ಸ್ಥಿರತೆಯಿಂದ, ಮತ್ತು ಪೂರ್ಣ ತವಕ್ಕುಲ್ನಿಂದ (ತವಕ್ಕುಲ್ ಮಾಡುವವರಿಗೆ ಅಲ್ಲಾಹನು ಸಕಲ ಒಳಿತನ್ನು ಮತ್ತು ಪ್ರತಿಯೊಂದು ಕಷ್ಟ ಹಾಗೂ ಹಾನಿಯನ್ನು ತಡೆಯುವುದಾಗಿ ಹೊಣೆ ಹೊತ್ತಿದ್ದಾನೆ) ಅನುಗ್ರಹಿಸಲಿ ಎಂದು (ಬೇಡುತ್ತೇವೆ).
ಅಧ್ಯಾಯ
ಪ್ರವಾದಿ (ﷺ) ರವರ ಒಂದು ವಚನ ಹೀಗಿದೆ:
(لَا يَفْرَكْ مُؤْمِنٌ مُؤْمِنَةً، إِنْ كَرِهَ مِنْهَا خُلُقًا رَضِيَ مِنْهَا خُلُقًا آخَرَ)
"ಒಬ್ಬ ಸತ್ಯವಿಶ್ವಾಸಿ ಪುರುಷನು ಸತ್ಯವಿಶ್ವಾಸಿ ಮಹಿಳೆಯನ್ನು ದ್ವೇಷಿಸಬಾರದು. ಅವಳಲ್ಲಿನ ಒಂದು ಸ್ವಭಾವವನ್ನು ಅವನು ಇಷ್ಟಪಡದಿದ್ದರೆ, ಇನ್ನೊಂದು ಸ್ವಭಾವವನ್ನು ಅವನು ಇಷ್ಟಪಡುತ್ತಾನೆ." (ಇದನ್ನು ಮುಸ್ಲಿಂ ವರದಿ ಮಾಡಿದ್ದಾರೆ). ಇದರಲ್ಲಿ ಎರಡು ದೊಡ್ಡ ಪ್ರಯೋಜನಗಳಿವೆ:
ಮೊದಲನೆಯದು: ಪತ್ನಿ, ಸಂಬಂಧಿಕ, ಸ್ನೇಹಿತ, ಸಹವರ್ತಿ, ಮತ್ತು ನಿಮ್ಮೊಂದಿಗೆ ಸಂಬಂಧ ಹಾಗೂ ಸಂಪರ್ಕವಿರುವ ಪ್ರತಿಯೊಬ್ಬರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಮಾರ್ಗದರ್ಶನ. ಅದೇನೆಂದರೆ, ಅವರಲ್ಲಿ ಖಂಡಿತವಾಗಿಯೂ ಒಂದು ದೋಷ, ನ್ಯೂನತೆ, ಅಥವಾ ನೀವು ಇಷ್ಟಪಡದ ಏನಾದರೂ ಇರುತ್ತದೆ ಎಂದು ಮೊದಲೇ ನಿಮ್ಮ ಮನಸ್ಸನ್ನು ನೀವು ಸಿದ್ಧಪಡಿಸಿಕೊಳ್ಳಬೇಕು. ನೀವು ಅವರಲ್ಲಿ ಅದನ್ನು ಕಂಡಾಗ, ಅವರಲ್ಲಿರುವ ಉತ್ತಮ ಗುಣಗಳು ಮತ್ತು ಅವರ ವೈಯುಕ್ತಿಕ ಹಾಗೂ ಬಹಿರಂಗ ಉದ್ದೇಶಗಳ ಜೊತೆಗೆ, ಅವರೊಂದಿಗೆ ಬಲವಾದ ಸಂಪರ್ಕವನ್ನು ಕಾಪಾಡಿಕೊಳ್ಳುವ ಹಾಗೂ ಪ್ರೀತಿಯನ್ನು ಉಳಿಸಿಕೊಳ್ಳುವ ನಿಮ್ಮ ಬಾಧ್ಯತೆ ಅಥವಾ ಅಪೇಕ್ಷೆಗೆ ಅದನ್ನು ಹೋಲಿಸಿರಿ. ಹೀಗೆ ಕೆಡುಕನ್ನು ಕಡೆಗಣಿಸಿ ಒಳಿತನ್ನು ಗಮನಿಸುವ ಮೂಲಕ, ಸಹವಾಸ ಮತ್ತು ಸಂಪರ್ಕವು ಮುಂದುವರಿಯುತ್ತದೆ, ನೆಮ್ಮದಿಯು ಪೂರ್ಣಗೊಳ್ಳುತ್ತದೆ ಮತ್ತು ನಿಮಗೆ ಅದು ದೊರೆಯುತ್ತದೆ.
ಎರಡನೆಯದು: ಚಿಂತೆ ಮತ್ತು ಆತಂಕ ದೂರವಾಗುವುದು, ಮನಸ್ಸಿನ ಶುದ್ಧತೆ ಉಳಿಯುವುದು, ಮತ್ತು ಕಡ್ಡಾಯ ಹಾಗೂ ಐಚ್ಛಿಕ ಹಕ್ಕುಗಳನ್ನು ಮುಂದುವರಿಸುವ ಮೂಲಕ ಎರಡೂ ಕಡೆಯವರಿಗೆ ನೆಮ್ಮದಿ ದೊರೆಯುವುದು. ಯಾರು ಪ್ರವಾದಿ (ﷺ) ಅವರು ತಿಳಿಸಿದ ಈ ಮಾರ್ಗದರ್ಶನವನ್ನು ಪಾಲಿಸುವುದಿಲ್ಲವೋ - ಬದಲಿಗೆ ಅದಕ್ಕೆ ತದ್ವಿರುದ್ಧವಾಗಿ, ಕೆಡುಕನ್ನು ಗಮನಿಸಿ, ಒಳಿತಿನ ಬಗ್ಗೆ ಕುರುಡಾಗುತ್ತಾನೋ - ಅವನು ಖಂಡಿತವಾಗಿಯೂ ಆತಂಕಕ್ಕೆ ಒಳಗಾಗುತ್ತಾನೆ. ಅವನ ಹಾಗೂ ಅವನೊಂದಿಗೆ ಸಂಪರ್ಕದಲ್ಲಿರುವವರ ನಡುವಿನ ಪ್ರೀತಿಯು ಕದಡುತ್ತದೆ ಮತ್ತು ಇಬ್ಬರೂ ಕಾಪಾಡಬೇಕಾದ ಅನೇಕ ಹಕ್ಕುಗಳು ಕಡಿದುಹೋಗುತ್ತವೆ.
ಉನ್ನತ ಧ್ಯೇಯವುಳ್ಳ ಅನೇಕ ಜನರು ದೊಡ್ಡ ವಿಪತ್ತುಗಳು ಮತ್ತು ಗೊಂದಲಗಳು ಸಂಭವಿಸಿದಾಗ ಸಹನೆ ಮತ್ತು ನೆಮ್ಮದಿಗಾಗಿ ತಮ್ಮ ಮನಸ್ಸುಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಆದರೆ ಕ್ಷುಲ್ಲಕ, ಸರಳ ವಿಷಯಗಳಲ್ಲಿ ಅವರು ಆತಂಕಗೊಳ್ಳುತ್ತಾರೆ, ಮತ್ತು ಅವರ ಮನಃಶಾಂತಿಯು ಕದಡುತ್ತದೆ. ಇದಕ್ಕೆ ಕಾರಣವೇನೆಂದರೆ, ಅವರು ದೊಡ್ಡ ವಿಷಯಗಳಿಗೆ ತಮ್ಮ ಮನಸ್ಸನ್ನು ಸಿದ್ಧಪಡಿಸಿಕೊಂಡು, ಸಣ್ಣ ವಿಷಯಗಳನ್ನು ಹಾಗೆಯೇ ಬಿಟ್ಟುಬಿಡುತ್ತಾರೆ. ಆದ್ದರಿಂದ ಅದು ಅವರಿಗೆ ಹಾನಿ ಮಾಡುತ್ತದೆ ಮತ್ತು ಅವರ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ. ದೃಢನಿಶ್ಚಯದ ವ್ಯಕ್ತಿಯು ಸಣ್ಣ ಮತ್ತು ದೊಡ್ಡ ವಿಷಯಗಳಿಗೂ ತನ್ನ ಮನಸ್ಸನ್ನು ಸಿದ್ಧಪಡಿಸಿಕೊಳ್ಳುತ್ತಾನೆ. ಅವುಗಳ ಬಗ್ಗೆ ಅಲ್ಲಾಹನಲ್ಲಿ ಸಹಾಯವನ್ನು ಬೇಡುತ್ತಾನೆ ಮತ್ತು ಕಣ್ಣು ಮಿಟುಕಿಸುವಷ್ಟೂ ಕಾಲ ತನ್ನನ್ನು ತನ್ನ ಪಾಡಿಗೆ ಬಿಡಬಾರದೆಂದು ವಿನಂತಿಸಿಕೊಳ್ಳುತ್ತಾನೆ. ಆಗ ಅವನಿಗೆ ದೊಡ್ಡದು ಸುಲಭವಾದಂತೆ ಸಣ್ಣದೂ ಸುಲಭವಾಗುತ್ತದೆ. ಅವನು ಆತ್ಮವು ನೆಮ್ಮದಿಯಾಗಿರುತ್ತದೆ, ಹೃದಯವು ಶಾಂತವಾಗಿ ವಿಶ್ರಾಂತವಾಗಿರುತ್ತದೆ.
ಅಧ್ಯಾಯ
ತನ್ನ ನಿಜವಾದ ಜೀವನವು ಸಂತೋಷ ಮತ್ತು ನೆಮ್ಮದಿಯ ಜೀವನವಾಗಿದೆ, ಮತ್ತು ಅದು ಅತ್ಯಂತ ಚಿಕ್ಕದಾಗಿದೆ ಎಂದು ಬುದ್ಧಿವಂತನು ಅರಿಯುತ್ತಾನೆ. ಆದ್ದರಿಂದ ಅವನು ಚಿಂತೆಗಳಿಂದ ಮತ್ತು ಕಷ್ಟಗಳಲ್ಲಿ ಮುಳುಗುವುದರಿಂದ ಅದನ್ನು ಇನ್ನಷ್ಟು ಚಿಕ್ಕದಾಗಿಸಬಾರದು. ಏಕೆಂದರೆ ಅದು ನಿಜವಾದ ಜೀವನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅವನು ತನ್ನ ಜೀವನದ ಹೆಚ್ಚಿನ ಭಾಗವು ಚಿಂತೆ ಮತ್ತು ಕಷ್ಟಗಳ ಪಾಲಾಗದಂತೆ ಜಾಗರೂಕತೆ ವಹಿಸಬೇಕು. ಈ ವಿಷಯದಲ್ಲಿ ಸಜ್ಜನ ಮತ್ತು ದುರ್ಜನರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆದರೆ ಸತ್ಯವಿಶ್ವಾಸಿಯು ಇದನ್ನು ಸಾಧಿಸುವಾಗ ಅವನಿಗೆ ಅತಿ ದೊಡ್ಡ ಪಾಲು ಮತ್ತು ತಕ್ಷಣದ ಹಾಗೂ ನಂತರದ ಪ್ರಯೋಜನಕಾರಿ ಪಾಲು ಇರುತ್ತದೆ.
ಹಾಗೆಯೇ, ಅವನಿಗೆ ಯಾವುದಾದರೂ ಕಷ್ಟ ಸಂಭವಿಸಿದರೆ ಅಥವಾ ಅದರ ಬಗ್ಗೆ ಭಯಪಟ್ಟರೆ, ತನ್ನಲ್ಲಿರುವ ಉಳಿದ ಧಾರ್ಮಿಕ ಅಥವಾ ಐಹಿಕ ಅನುಗ್ರಹಗಳೊಂದಿಗೆ ಆ ಕಷ್ಟವನ್ನು ಹೋಲಿಸಬೇಕು. ಆಗ ತಾನು ಎಷ್ಟೊಂದು ಅನುಗ್ರಹಗಳಲ್ಲಿದ್ದೇನೆ ಎಂಬುದು ಮತ್ತು ತನಗೆ ಸಂಭವಿಸಿದ ಕಷ್ಟಗಳು ಎಷ್ಟು ನಗಣ್ಯ ಎಂಬುದು ಸ್ಪಷ್ಟವಾಗುತ್ತದೆ.
ಹಾಗೆಯೇ, ತನಗೆ ಸಂಭವಿಸಬಹುದಾದ ಹಾನಿಗಳ ಭಯವನ್ನು, ಆ ಭಯಗಳಿಂದ ರಕ್ಷಣೆಯ ಪಡೆಯಬಹುದಾದ ಸಾಧ್ಯತೆಗಳೊಂದಿಗೆ ಹೋಲಿಸಬೇಕು. ದುರ್ಬಲವಾದ ಸಾಧ್ಯತೆಗಳು ಬಲವಾದ ಸಾಧ್ಯತೆಗಳ ಮೇಲೆ ಜಯಗಳಿಸಲು ಬಿಡಬಾರದು. ಇದರಿಂದ ಅವನ ಚಿಂತೆ ಮತ್ತು ಭಯವು ದೂರವಾಗುತ್ತದೆ. ತನಗೆ ಸಂಭವಿಸಬಹುದಾದ ಅತ್ಯಂತ ಕೆಟ್ಟ ಸಂಭವನೀಯತೆಯನ್ನು ಊಹಿಸಿಕೊಂಡು ಅದು ಸಂಭವಿಸುವಾಗ ಅದಕ್ಕಾಗಿ ತನ್ನ ಮನಸ್ಸನ್ನು ಸಿದ್ಧಪಡಿಸಿಕೊಳ್ಳಬೇಕು. ಸಂಭವಿಸದಿರುವುದನ್ನು ತಡೆಯಲು, ಹಾಗೂ ಸಂಭವಿಸಿದ್ದನ್ನು ನಿವಾರಿಸಲು ಅಥವಾ ಕಡಿಮೆ ಮಾಡಲು ಪ್ರಯತ್ನಿಸಬೇಕು.
ಪ್ರಯೋಜನಕಾರಿ ವಿಷಯಗಳಲ್ಲಿ ಇನ್ನೊಂದು ಏನೆಂದರೆ, ಜನರು ನಿಮಗೆ ನೀಡುವ ಕಿರುಕುಳ - ವಿಶೇಷವಾಗಿ ಕೆಟ್ಟ ಮಾತುಗಳು - ನಿಮಗೆ ಹಾನಿ ಮಾಡುವುದಿಲ್ಲ, ಬದಲಿಗೆ ಅವರಿಗೇ ಹಾನಿ ಮಾಡುತ್ತವೆ ಎಂದು ನೀವು ತಿಳಿಯುವುದು. ಆದರೆ ನೀವು ಅವುಗಳ ಬಗ್ಗೆ ತಲೆಕೆಡಿಸಿಕೊಂಡು, ಅವು ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಅವಕಾಶ ನೀಡಿದರೆ ಅವು ಅವರಿಗೇ ಹಾನಿ ಮಾಡಿದಂತೆ ನಿಮಗೂ ಹಾನಿ ಮಾಡುತ್ತವೆ. ನೀವು ಅದಕ್ಕೆ ಯಾವುದೇ ಗಮನ ಕೊಡದಿದ್ದರೆ, ಅದು ನಿಮಗೆ ಸ್ವಲ್ಪವೂ ಹಾನಿ ಮಾಡುವುದಿಲ್ಲ.
ನಿಮ್ಮ ಜೀವನವು ನಿಮ್ಮ ಆಲೋಚನೆಗಳನ್ನು ಹಿಂಬಾಲಿಸುತ್ತದೆ ಎಂದು ತಿಳಿಯಿರಿ. ನಿಮ್ಮ ಆಲೋಚನೆಗಳು ನಿಮಗೆ ಧಾರ್ಮಿಕವಾಗಿ ಅಥವಾ ಐಹಿಕವಾಗಿ ಪ್ರಯೋಜನವನ್ನು ತರುವಂತಿದ್ದರೆ, ನಿಮ್ಮ ಜೀವನವು ಉತ್ತಮ ಮತ್ತು ಸಂತೋಷಮಯವಾಗಿರುತ್ತದೆ. ಇಲ್ಲದಿದ್ದರೆ, ವಿಷಯವು ಅದಕ್ಕೆ ತದ್ವಿರುದ್ಧವಾಗಿರುತ್ತದೆ.
ಚಿಂತೆಯನ್ನು ದೂರ ಮಾಡಲು ಅತ್ಯಂತ ಪ್ರಯೋಜನಕಾರಿ ವಿಷಯಗಳಲ್ಲಿ ಇನ್ನೊಂದು ಏನೆಂದರೆ, ಅಲ್ಲಾಹನಿಂದ ಹೊರತು ಬೇರೆ ಯಾರಿಂದಲೂ ಕೃತಜ್ಞತೆಯನ್ನು ಬಯಸದಂತೆ ನಿಮ್ಮ ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು. ನಿಮ್ಮ ಮೇಲೆ ಹಕ್ಕಿರುವವನಿಗೆ ಅಥವಾ ಹಕ್ಕಿಲ್ಲದವನಿಗೆ ನೀವು ಉಪಕಾರ ಮಾಡುವಾಗ, ಇದು ನೀವು ಅಲ್ಲಾಹನೊಂದಿಗೆ ಮಾಡುತ್ತಿರುವ ಒಂದು ವ್ಯವಹಾರವೆಂದು ತಿಳಿಯಿರಿ. ಹಾಗಾಗಿ ನೀವು ಯಾರಿಗೆ ಉಪಕಾರ ಮಾಡಿದ್ದೀರೋ ಅವರ ಕೃತಜ್ಞತೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅಲ್ಲಾಹನು ತನ್ನ ವಿಶೇಷ ದಾಸರ ಬಗ್ಗೆ ಹೇಳುತ್ತಾನೆ:
﴿إِنَّمَا نُطْعِمُكُمْ لِوَجْهِ اللَّهِ لَا نُرِيدُ مِنكُمْ جَزَآءً وَلَا شُكُورًا 9﴾
"ನಾವು ನಿಮಗೆ ಆಹಾರ ನೀಡುವುದು ಕೇವಲ ಅಲ್ಲಾಹನ ಸಂತೃಪ್ತಿಗಾಗಿ. ನಾವು ನಿಮ್ಮಿಂದ ಯಾವುದೇ ಪ್ರತಿಫಲ ಅಥವಾ ಕೃತಜ್ಞತೆಯನ್ನು ಬಯಸುವುದಿಲ್ಲ." [ಸೂರ ಅಲ್-ಇನ್ಸಾನ್: 9]
ಇದು ಕುಟುಂಬ, ಮಕ್ಕಳು ಮತ್ತು ನಿಮ್ಮೊಂದಿಗೆ ಬಲವಾದ ಸಂಪರ್ಕವಿರುವವರೊಂದಿಗಿನ ವ್ಯವಹಾರದಲ್ಲಿ ಇನ್ನಷ್ಟು ಮಹತ್ವ ಪಡೆಯುತ್ತದೆ. ಯಾವಾಗ ನೀವು ಅವರಿಂದ ಕೆಡುಕನ್ನು ದೂರ ಮಾಡಲು ನಿಮ್ಮ ಮನಸ್ಸನ್ನು ಸಿದ್ಧಪಡಿಸಿಕೊಳ್ಳುತ್ತೀರೋ, ಆಗ ನೀವು ಅವರಿಗೆ ನೆಮ್ಮದಿ ನೀಡುತ್ತೀರಿ ಮತ್ತು ಸ್ವತಃ ನೀವು ನೆಮ್ಮದಿ ಪಡೆಯುತ್ತೀರಿ. ನೆಮ್ಮದಿಗೆ ಕಾರಣವಾಗುವ ವಿಷಯಗಳಲ್ಲಿ ಒಂದು ಏನೆಂದರೆ, ಉತ್ತಮ ಗುಣಗಳನ್ನು ಸ್ವೀಕರಿಸುವುದು ಮತ್ತು ಆಂತರಿಕ ಪ್ರೇರಣೆಗೆ ಅನುಗುಣವಾಗಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು. ಆದರೆ, ನಿಮಗೆ ಆತಂಕವನ್ನು ತರುವ ರೀತಿಯಲ್ಲಿ ಒತ್ತಾಯದಿಂದ ಅವುಗಳನ್ನು ನಿಮ್ಮ ಮೇಲೆ ಹೇರಬಾರದು. ಹಾಗೆ ಮಾಡಿದರೆ ನೀವು ಡೊಂಕಾದ ದಾರಿಯನ್ನು ಹಿಡಿದ ಕಾರಣ, ಉತ್ತಮ ಗುಣವನ್ನು ಪಡೆಯಲು ನೀವು ವಿಫಲರಾಗಬಹುದು. ಇದು (ಒತ್ತಾಯವಿಲ್ಲದೆ ಅಳವಡಿಸಿಕೊಳ್ಳುವುದು) ಜಾಣತನವಾಗಿದೆ. ಹಾಗೆಯೇ ಕಷ್ಟಕರವಾದ ವಿಷಯಗಳನ್ನು ಶುದ್ಧವಾದ, ಸಿಹಿ ವಿಷಯಗಳಾಗಿ ಪರಿವರ್ತಿಸುವುದರಿಂದ ಆನಂದದ ಶುದ್ಧತೆಯು ಹೆಚ್ಚುತ್ತದೆ ಮತ್ತು ಕಷ್ಟಗಳು ದೂರವಾಗುತ್ತವೆ.
ಪ್ರಯೋಜನಕಾರಿ ವಿಷಯಗಳನ್ನು ನಿಮ್ಮ ಕಣ್ಣ ಮುಂದೆ ಇಟ್ಟುಕೊಳ್ಳಿ ಮತ್ತು ಅವುಗಳನ್ನು ಸಾಧಿಸಲು ಕೆಲಸ ಮಾಡಿ. ಹಾನಿಕಾರಕ ವಿಷಯಗಳತ್ತ ಗಮನ ಹರಿಸಬೇಡಿ. ನೀವು ಚಿಂತೆ ಮತ್ತು ದುಃಖವನ್ನು ತರುವ ಕಾರಣಗಳಿಂದ ದೂರವಾಗಲು ಇದು ಸಹಾಯ ಮಾಡುತ್ತದೆ. ಪ್ರಮುಖ ಕೆಲಸಗಳಿಗಾಗಿ ವಿಶ್ರಾಂತಿ ಮತ್ತು ಮನಸ್ಸಿನ ಏಕಾಗ್ರತೆಯ ಸಹಾಯವನ್ನು ಪಡೆಯಿರಿ.
ಪ್ರಯೋಜನಕಾರಿ ವಿಷಯಗಳಲ್ಲಿ ಒಂದು ಏನೆಂದರೆ, ಕೆಲಸಗಳನ್ನು ತಕ್ಷಣವೇ ನಿರ್ಧರಿಸಿ ಮುಗಿಸುವುದು, ಮತ್ತು ಭವಿಷ್ಯಕ್ಕಾಗಿ ಬಿಡುವು ಮಾಡಿಕೊಳ್ಳುವುದು. ಏಕೆಂದರೆ ಕೆಲಸಗಳನ್ನು ನಿರ್ಧರಿಸಿ ಮುಗಿಸದಿದ್ದರೆ, ಬಾಕಿಯಿರುವ ಹಿಂದಿನ ಕೆಲಸಗಳು ಮತ್ತು ನಂತರದ ಕೆಲಸಗಳು ಸೇರಿಕೊಂಡು ಅವುಗಳ ಹೊರೆ ತೀವ್ರಗೊಳ್ಳುತ್ತದೆ. ನೀವು ಪ್ರತಿಯೊಂದನ್ನೂ ಅದರ ಸಮಯದಲ್ಲಿ ನಿರ್ಧರಿಸಿ ಮುಗಿಸಿದರೆ, ಭವಿಷ್ಯದ ವಿಷಯಗಳನ್ನು ಆಲೋಚನಾ ಶಕ್ತಿ ಮತ್ತು ಕ್ರಿಯಾ ಶಕ್ತಿಯೊಂದಿಗೆ ಎದುರಿಸಲು ಸಾಧ್ಯವಾಗುತ್ತದೆ.
ಪ್ರಯೋಜನಕಾರಿ ಕೆಲಸಗಳಲ್ಲಿ ಅತ್ಯಂತ ಪ್ರಮುಖ್ಯವಾದುದನ್ನು ಮೊದಲು, ನಂತರ ಅದಕ್ಕಿಂತ ಕಡಿಮೆ ಪ್ರಾಮುಖ್ಯತೆಯಿರುವುದನ್ನು ಆರಿಸಿಕೊಳ್ಳಬೇಕು. ನಿಮ್ಮ ಮನಸ್ಸು ಯಾವುದರ ಕಡೆಗೆ ಒಲವು ತೋರುತ್ತದೆಯೋ ಮತ್ತು ಯಾವುದರಲ್ಲಿ ನಿಮ್ಮ ಆಸಕ್ತಿಯು ತೀವ್ರವಾಗಿರುತ್ತದೆಯೋ ಅದನ್ನು ಗುರುತಿಸಿ. ಏಕೆಂದರೆ ಅದರ ವಿರುದ್ಧವಾದುದು ಬೇಸರ, ಆಯಾಸ ಮತ್ತು ಕಷ್ಟವನ್ನು ಉಂಟುಮಾಡುತ್ತದೆ. ಇದಕ್ಕಾಗಿ ಸರಿಯಾದ ಆಲೋಚನೆ ಮತ್ತು ಸಮಾಲೋಚನೆ ಮಾಡಿರಿ. ಸಮಾಲೋಚನೆ ಮಾಡಿದವನು ಎಂದಿಗೂ ವಿಷಾದಿಸುವುದಿಲ್ಲ. ನೀವು ಮಾಡಲು ಬಯಸುವುದನ್ನು ಆಳವಾಗಿ ಅಧ್ಯಯನ ಮಾಡಿ. ಅದರ ಪ್ರಯೋಜನವು ಖಚಿತವಾದರೆ, ದೃಢನಿಶ್ಚಯ ಮಾಡಿ, ಅಲ್ಲಾಹನ ಮೇಲೆ ಭರವಸೆ ಇಡಿ. ಖಂಡಿತವಾಗಿಯೂ ಅಲ್ಲಾಹನು ಭರವಸೆ ಇಡುವವರನ್ನು ಪ್ರೀತಿಸುತ್ತಾನೆ.
ಸರ್ವ ಸ್ತುತಿಗಳು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ.
ಅಲ್ಲಾಹನು ನಮ್ಮ ನಾಯಕರಾದ ಮುಹಮ್ಮದ್ (ﷺ) ಅವರ ಮೇಲೆ, ಅವರ ಕುಟುಂಬದವರ ಮೇಲೆ ಮತ್ತು ಅವರ ಸಹಚರರ ಮೇಲೆ ಶಾಂತಿ ಮತ್ತು ಆಶೀರ್ವಾದವನ್ನು ಕರುಣಿಸಲಿ.
ಪರಿವಿಡಿ
ಅಧ್ಯಾಯ 4
ಅಧ್ಯಾಯ 14
ಅಧ್ಯಾಯ 19
ಅಧ್ಯಾಯ 22
ಅಧ್ಯಾಯ 25
ಅಧ್ಯಾಯ 27
ಅಧ್ಯಾಯ 30
ಅಧ್ಯಾಯ 33
***